Pages

Ads 468x60px

Thursday 27 March 2014

ತಾಪವೇಕೆ, ಆಹಾ! ಸೆಕೆ ಸೆಕೆ......







ಹಣ್ಣುಹಂಪಲು,  ಹಸಿ ತರಕಾರಿ,  ಮಜ್ಜಿಗೆನೀರು ಇತ್ಯಾದಿಗಳನ್ನು ಧಾರಾಳವಾಗಿ ಸೇವಿಸುವುದರಿಂದ ಸೆಕೆಯ ತಾಪ ಕಡಿಮೆ ಮಾಡಿಕೊಳ್ಳಬಹುದು.
ಊಟದ ಮೊದಲು ಗಂಜಿನೀರಿಗೆ ಉಪ್ಪು ಸೇರಿಸಿ,  ಮಜ್ಜಿಗೆ ಎರೆದು ಕುಡಿಯಿರಿ.
ಬಚ್ಚಂಗಾಯಿ ಜ್ಯೂಸ್ ಕುಡಿಯಿರಿ.   ಬಿಸಿಲಿಗೆ ಚರ್ಮದ ಕಾಂತಿ ಕುಂದದಂತೆ ತಡೆಗಟ್ಟಿರಿ.   ದೇಹ ನಿರ್ಜಲೀಕೃತವಾಗದಿರಲು ತಾಜಾ ಹಣ್ಣುಗಳ ರಸ ಅತ್ಯುತ್ತಮ,  ರಕ್ತದೊತ್ತಡ ನಿಯಂತ್ರಣ,  ಕಿಡ್ನಿಯ ರಕ್ಷಣೆ ಇತ್ಯಾದಿ ಆರೋಗ್ಯ ಸಂಬಂಧಿ ಪ್ರಯೋಜನಗಳ ಲಾಭ ಪಡೆಯಿರಿ.
ಕಾಫಿ,  ಚಹಾಗಳನ್ನು ಬೇಸಗೆಯಲ್ಲಿ ದೂರವಿರಿಸುವುದು ಉತ್ತಮ.
ಕಬ್ಬಿನ ಹಾಲು ಕುಡಿಯಿರಿ,  ಲಿಂಬೆ ಹಾಗೂ ಶುಂಠಿ ಸೇರಿಸಿದ್ದು ಅತ್ಯುತ್ತಮ.   ಉರಿಉಷ್ಣದಿಂದ ಮೂತ್ರ ವಿಸರ್ಜಿಸಲೂ ಪ್ರಯಾಸವಾಗುತ್ತಿದ್ದರೆ ಈ ಕಬ್ಬಿನ ಹಾಲು ಕೂಡಲೇ ಪರಿಣಾಮಕಾರೀ ಗುಣ ಕೊಡುವುದು.  
ಅನಾನಸ್ ರಸಭರಿತ ಹಣ್ಣು,  ಧಾರಾಳವಾಗಿ ತಿನ್ನಿ.
 ಎಳನೀರು ಅಂದರೆ ಬೊಂಡ ಕುಡಿಯಿರಿ,   ದಿನವೂ ಕುಡಿದರೂ ಒಳ್ಳೆಯದೇ.
ತಾಜಾ ಹಣ್ಣುಗಳನ್ನು ಕೊಂಡು ತಂದು ಮನೆಯಲ್ಲೇ ಜ್ಯೂಸ್ ತಯಾರಿಸಿ ಕುಡಿಯಿರಿ.   ಸಕ್ಕರೆ ಹೆಚ್ಚು ಹಾಕುವ ಅಗತ್ಯವಿಲ್ಲ.   
ತಾಜಾ ತರಿಕಾರಿಗಳು,   ಹಸಿಯಾಗಿ ಸೇವಿಸಲು ಯೋಗ್ಯವಾದಂತಹ ಟೊಮ್ಯಾಟೋ,  ಜ್ಯೂಸ್ ಚೆನ್ನಾಗಿರುತ್ತದೆ. 
ಮುಳ್ಳುಸೌತೆಯನ್ನು ಊಟದೊಂದಿಗೆ ಸಲಾಡ್ ಮಾಡಿಟ್ಟು ತಿನ್ನಿ.
ಮೊಳಕೆ ಕಾಳುಗಳು,  ಪಚ್ಚೆಹಸ್ರು ತುಂಬಾ ತಂಪು. ಮೊಳಕೆ ಬರಿಸಿ ಬೇಯಿಸಿ ತಿನ್ನಬಹುದು,   ಹಸಿಯೂ ಆದೀತು.   ಆದರೆ ಹಸಿಕಾಳುಗಳನ್ನು ಹೆಚ್ಚು ತಿನ್ನಲಾಗುವುದಿಲ್ಲ.
ಹಸಿರು ಸೊಪ್ಪು ತರಕಾರಿಗಳಾದ ಹರಿವೆ, ಬಸಳೆಗಳನ್ನು ಮರೆಯದಿರಿ.
ರಾಗಿ ಅಂಬಲಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.  
ಕೃತಕ ರಾಸಾಯನಿಕಗಳಿಂದ ತುಂಬಿದ ಲಘು ಪಾನೀಯಗಳಿಂದ ದೂರವಿರಿ.

ದಿನದಲ್ಲಿ ಕನಿಷ್ಠ ಒದು ತಂಬಿಗೆ ನೀರು ಅಂದರೆ ಏಳೆಂಟು ಲೋಟಾ ನೀರು ಕುಡಿಯಲೇಬೇಕು.   ದೇಹದಿಂದ ಸತತವಾಗಿ ಬೆವರು,  ಮೂತ್ರಗಳೆಂದು ನೀರು ನಷ್ಟವಾಗುತ್ತಿರುತ್ತದೆ.   ಯಾವಾಗ ನೀರು ಸಾಕಷ್ಟು ಪ್ರಮಾಣದಲ್ಲಿ ಉದರವನ್ನು ಸೇರುವುದಿಲ್ಲವೋ ಆಗಲೇ ಶರೀರದಲ್ಲಿ ಡಿಹೈಡ್ರೇಶನ್ ಪ್ರಾರಂಭ ಎಂಬುದನ್ನು ತಿಳಿಯಿರಿ.   ನೀರಿನ ಕೊರತೆ ಬಂದಾಗ ಅಂಗೋಪಾಂಗಗಳಲ್ಲಿ ತೊಂದರೆ ಕಾಣಿಸುವುದು ನಿಶ್ಚಿತ.   ಶುದ್ಧವಾದ ನೀರು ಕುಡಿಯುತ್ತಾ ಇರುವುದು ಅತ್ಯಾವಶ್ಯಕ.   ನೀರು ಕುಡಿಯುವ ಕ್ರಿಯೆಯನ್ನೂ ಆನಂದಿಸುತ್ತಾ ಕುಡಿಯಿರಿ.

ತಾಮ್ರದ ಬಿಂದಿಗೆಯಲ್ಲಿ ನೀರು ತುಂಬಿಸಿಟ್ಟು 7 -8 ಗಂಟೆ ಬಿಟ್ಟು ಕುಡಿಯಿರಿ.  ಇದು ನಮ್ಮ ಪರಂಪರಾಗತ ಮಿನರಲ್ ವಾಟರ್ ಎಂಬುದು ತಿಳಿದಿರಲಿ.   

ಬೇಸಿಗೆಯ ದೈಹಿಕ ತೊಂದರೆಗಳಾದ ಬೆವರುಸಾಲೆ,   ಮೈ ತುರಿಕೆ ಬಾಧೆಗೊಳಗಾಗಲು ಆಸ್ಪದ ಕೊಡಬೇಡಿ,   ನಿಯಮಿತವಾಗಿ ದಿನಕ್ಕೆರಡು ಬಾರಿ ತಣ್ಣೀರ ಸ್ನಾನ ತಪ್ಪಿಸದಿರಿ.  ಹತ್ತಿಯ ಬಟ್ಟೆಗಳನ್ನೇ ಧರಿಸಿರಿ.

ಸೆಕೆಯನ್ನು ಓಡಿಸಲು ಆಧುನಿಕ ಸವಲತ್ತುಗಳು ಏನೇನೋ ಇವೆ.   ವಿಜ್ಞಾನ ಬಹಳ ಮುಂದುವರಿದಿದೆ ದಿಟ,   ಆದರೆ ನಮ್ಮ ಪರಿಸರದ ರಕ್ಷಣೆಯೂ ನಮ್ಮ ಕೈಯಲ್ಲೇ ಇರುತ್ತದೆ ಎಂಬುದನ್ನೂ ಕಡೆಗಣಿಸದಿರಿ.   ಸುತ್ತಮುತ್ತ ಹಸಿರು ಸಸ್ಯಗಳನ್ನು ಉಳಿಸಿ ಹಾಗೂ ಬೆಳೆಸಿ.   ಮನೆಯ ಮುಂದೆ ಪುಟ್ಟ ಉದ್ಯಾನವಿರಲಿ,   ದಿನವೂ ಗಿಡಸಸ್ಯಗಳಿಗೆ ನೀರುಣಿಸುವ ಆನಂದದಲ್ಲಿ ಭಾಗಿಯಾಗಿ ಸಂತಸ ಪಡೆಯಿರಿ.


Posted via DraftCraft app

Saturday 22 March 2014

ಮುರಬ್ಬಾ ಹಬ್ಬ







ದೀಪಾವಳಿ ಬರುತ್ತಿದ್ದ ಹಾಗೇ ನೆಲ್ಲಿಕಾಯಿಯೂ ಮಾರುಕಟ್ಟೆಗೆ ಹಾಜರು.   ತುಳಸೀಪೂಜೆಯ ಸಂಭ್ರಮದಲ್ಲಿ ನೆಲ್ಲಿಕಾಯಿಗಳದ್ದೇ ತೋರಣ.   ಗೋಪೂಜೆ,  ಬಲೀಂದ್ರಪೂಜೆ,  ಅಂಗಡಿಪೂಜೆ ( ಲಕ್ಷ್ಮೀಪೂಜೆ ),  ಎಲ್ಲವೂ ಬದುಕು ಸಂಪತ್ಭರಿತವಾಗಿರಲಿ ಎಂದೇ ಹಾರೈಸುವ ಕ್ರಿಯೆಗಳಾಗಿವೆ.   ದೀಪಗಳ ಹಬ್ಬ ಐಶ್ವರ್ಯದ ಸಂಕೇತ.   ಐಶ್ವರ್ಯದ ಅಧಿದೇವತೆ ಲಕ್ಷ್ಮಿಯೊಂದಿಗೆ ನೆಲ್ಲಿಮರವನ್ನೂ ನಮ್ಮ ಹಿರಿಯರು ಸಮೀಕರಿಸಿ ಇಟ್ಟಿದ್ದಾರೆ, ಯಾಕೋ ತಿಳಿಯದು.

ದೀಪಾವಳಿ ಬಂದಿತೇ,  ನಮ್ಮನೆಗೂ ನೆಲ್ಲಿಕಾಯಿ ಬಂದಿತು.   ಮಗಳೂ ಮನೆಯಲ್ಲಿದ್ದಳು.   ಅವಳಿಗಾಗಿ ತಂದಿದ್ದ ನೆಲ್ಲಿಕಾಯಿಯನ್ನು ತಿನ್ನದೇ ಹಾಗೇ ಇಟ್ಟಿದ್ದಳು.

   " ಯಾಕೇ ತಿನ್ಲಿಲ್ಲ?  ತುಂಬಾ ಒಳ್ಳೇದು,  ವಿಟಮಿನ್ ಸಿ ಕಂಡಾಬಟ್ಟೆ ಇದ್ಯಂತೆ "

" ಹೋಗಮ್ಮ,  ಅದನ್ನೇ ತಿಂತಾ ಇರಲು ನಾನೇನು ಪುಟ್ಟು ಮಗುವಾ "  ಅಂದಳು.   " ಬೇಕಿದ್ರೆ ಉಪ್ಪಿನಕಾಯಿ ಹಾಕಿಕೋ "

ಉಪ್ಪಿನಕಾಯಿ ಹಾಕಬಹುದಿತ್ತು,   ಸೌತೆಕಾಯೀದು ಉಪ್ಪಿನಕಾಯಿ ಜಾಡಿ ತುಂಬಾ ಇತ್ತು.   ಒಂದು ಪ್ರತಿ ಮುಗಿಯದೆ ಮತ್ತೊಂದು ಜಾಡಿ ಉಪ್ಪಿನಕಾಯಿ ವ್ಯರ್ಥ ಶ್ರಮ ಅಂದ್ಕೊಂಡು ಸುಮ್ಮನಾಗಬೇಕಾಯಿತು.   ಮಗಳ ಅಪ್ಪನೂ ನೆಲ್ಲಿಕಾಯಿ ತಿನ್ನುವ ಸುದ್ದಿಗೇ ಬರಲಿಲ್ಲ.   ಹಾಗೇ ಟೇಬಲ್ ಮೇಲೆ ಕಂಗಾಲಾಗಿ ಕೂತಿದ್ದ ನೆಲ್ಲಿಕಾಯಿಗಳಿಗೆ ಒಂದು ಗತಿ ಕಾಣಿಸದಿದ್ದರೆ ಹೇಗೆ?   ಮುರಬ್ಬಾ ನೆನಪಿಗೆ ಬಂದಿತು.   ಸಕ್ಕರೆಪಾಕದಲ್ಲಿ ಹಾಕಿಟ್ಟು ತಿನ್ನುವಂತಹದು,  ಮಾಡಿ ನೋಡಿದ್ರೆ ಏನಾದೀತು ?   

ಇದ್ದಿದ್ದು ಒಂದ್ ಹದಿನೈದು ನೆಲ್ಲಿಕಾಯಿಗಳು.   ನೆಲ್ಲಿಕಾಯಿ ಬೇಯಿಸಲು ನೀರು ಕುದಿಯಲಿಟ್ಟಾಯ್ತು,  ನೀರು ಗಳಗಳನೆ ಕುದಿಯಿತೇ,  ಪೇಟೆಯಿಂದ ತಂದ ಆ ನೆಲ್ಲಿಕಾಯಿಗಳನ್ನು ತೊಳೆದು ಕುದಿನೀರಿಗೆ ಹಾಕಿದ್ದಾಯ್ತು.   ಒಂದು ತಪಲೆಯಲ್ಲಿ ಒಂದು ಕಪ್ ಸಕ್ಕರೆಗೆ ನೀರೆರೆದು ಕುದಿಸಿದ್ದರಲ್ಲಿ ಸಕ್ಕರೆಪಾಕ ಆಗ್ಹೋಯ್ತು.   ಬೆಂದ ನೆಲ್ಲಿಕಾಯಿಗಳನ್ನು ಪುನಃ ಈ ದ್ರಾವಣಕ್ಕೆ ಹಾಕಿ ಕುದಿಸುತ್ತಿರಬೇಕಾದರೆ ನಮ್ಮೆಜಮಾನ್ರು ಅಡುಗೆಮನೆಗೆ ಆಗಮಿಸಿದರು.  " ಇದೇನ್ಮಾಡ್ತಾ ಇದ್ದೀ,  ಓ,  ನೆಲ್ಲಿಕಾಯಿ ಹೀಗೂ ಆಗುತ್ತಾ..." ರಾಗ ಎಳೆದರು.

" ಇದು ತಣಿಯಲಿ,  ಆಮೇಲೆ ತಿಂದು ಹೇಳಿ "  ಅನ್ನುತ್ತಾ ಒಲೆಯಲ್ಲಿದ್ದ ತಪಲೆಯನ್ನು ಕೆಳಗಿರಿಸಿ  " ಅದೇನೋ ಚ್ಯವನಪ್ರಾಶ ಅಂತ ತಂದಿಟ್ಕೊಂಡಿದೀರಲ್ಲ,  ಅದ್ರಲ್ಲಿರೂದು ಇದೇ ನೆಲ್ಲಿಕ್ಕಾಯ್ "  ಅಂತಂದು ನಾನೊಂದು ನೆಲ್ಲಿಕಾಯಿಯನ್ನು ತೆಗೆದು ಬಾಯಿಗೆ ಹಾಕ್ಕೊಂಡೆ.

" " ಓ ಹೌದ,  ಹಾಗಿದ್ರೆ ಇನ್ನೂ ಸ್ವಲ್ಪ ಮಾಡಿಡು... ಒಳಗಿನ ಕಾಯಿ ತೆಗೆದಿದ್ದರೆ ಚೆನ್ನಾಗಿತ್ತು "

" ಇದ್ರೆ ತೊಂದರೆ ಎಂಥದು,  ಆಚೆ ಎಸೆದ್ರಾಯ್ತು "

ಸಂಜೆ ಪೇಟೆಯಿಂದ ಬರಬೇಕಾದರೆ ಪುನಃ ನೆಲ್ಲಿಕಾಯಿಗಳು ಆಗಮಿಸಿದುವು.   ಭರ್ತಿ ಎರಡು ಕಿಲೊ ಇದ್ಹಾಂಗಿತ್ತು.   " ಇಷ್ಟು ನೆಲ್ಲಿಕಾಯಿ ಯಾತಕ್ಕೆ ತಂದ್ರಿ,  ಏನು ಮಾಡ್ಲೀ ?"

" ಮಾಡು ಅದನ್ನೇ,  ಸಕ್ಕರೆ ಹಾಕಿದ್ದು ಚೆನ್ನಾಗಿತ್ತು "

" ಹೀಗೋ ಸಂಗತಿ,  ಆದ್ರೆ ಸಕ್ಕರೆ ತರಬೇಕಾಗಿತ್ತು "

" ಈಗ ಇರುವ ಸಕ್ಕರೆಯಲ್ಲಿ ಮಾಡು "

ಡಬ್ಬದಲ್ಲಿರುವ ಸಕ್ಕರೆಯನ್ನೆಲ್ಲ ಸುರುವಿ ಮಾಡಬಹುದಾಗಿತ್ತು,   ಹೀಗೆ ಸುಮ್ ಸುಮ್ನೆ ಸಕ್ಕರೆಪಾಕದಲ್ಲಿ ಹಾಕಿಟ್ಟ ನೆಲ್ಲಿಕಾಯಿಗಳು ಎಷ್ಟು ದಿನಾಂತ ಚೆನ್ನಾಗಿರ್ತವೋ ಅದೂ ಗೊತ್ತಿಲ್ಲ.   ಈ ಮುರಬ್ಬ ಎಷ್ಟಾದರೂ ಉತ್ತರಭಾರತೀಯರ ತಿನಿಸು.   ನಾವು ಮಾಡೋದೇನಿದ್ರೂ ಉಪ್ಪಿನಕಾಯಿ,  ನೆಲ್ಲಿಂಡಿ,  ನೆಲ್ಲಿಸಟ್ಟು,   ನೆಲ್ಲಿಪುಡಿ,  ಹಾಗೇನೇ ಒಣಗಿಸಿ ಇಟ್ಟುಕೊಳ್ಳೂದು.  ಈ ಥರ ಬಿಟ್ರೆ ಬೇರೆ ಪಂಚಾಯ್ತಿ ಇಲ್ಲ.
ಅಂತರಜಾಲಾಟದಲ್ಲಿ ಒಂದು ಹಿಂದಿ ಬ್ಲಾಗ್ ಸಿಕ್ಕಿತು.   ನಾನು ಮಾಡಿದ ವಿಧಾನ ತಪ್ಪಿಲ್ಲ,  ಆರು ತಿಂಗಳು ಇಟ್ಟುಕೊಳ್ಳಬಹುದೆಂದೂ ತಿಳಿಯಿತು.

ಈಗ ಎರಡು ಕಿಲೊ ನೆಲ್ಲಿಕಾಯಿಗಳ ಮುರಬ್ಬ ಮಾಡೋಣ.

ತೊಳೆದ ನೆಲ್ಲಿಕಾಯಿಗಳನ್ನು ಚೂರಿಯಲ್ಲಿ ಗೀರು ಹಾಕಿ ಇಟ್ಟುಕೊಳ್ಳಿ.
ಮುಳುಗುವಷ್ಟು ನೀರೆರೆದು ಕುದಿಸಿ,  ಆರಲು ಬಿಡಿ.
ನೀರು ಬಸಿಯಿರಿ,  ತೂತಿನ ಪಾತ್ರೆಗೆ ಹಾಕಿದರೆ ಉತ್ತಮ.
ಆರು ಕಪ್ ಸಕ್ಕರೆಗೆ ಮುಳುಗುವಷ್ಟು ನೀರೆರೆದು ಕುದಿಸಿ,  ಒಂದೆಳೆ ಪಾಕ ಬರಲಿ.
ಬೆಂದ ನೆಲ್ಲಿಕಾಯಿಗಳನ್ನು ಪಾಕಕ್ಕೆ ಹಾಕಿ ಪುನಃ ಕುದಿಸಿ.
ಸಿಹಿಯೊಂದಿಗೆ ಉಪ್ಪು ಅವಶ್ಯವಿದೆ,  ಒಂದು ಚಮಚ ಉಪ್ಪು ಬೀಳಲಿ.
ಚಿಕ್ಕ ಉರಿಯಲ್ಲಿ 20 - 30 ನಿಮಿಷ ಬೇಯುತ್ತಿರಲಿ.
ಏಲಕ್ಕಿ,  ಇನ್ನಿತರ ಸುವಾಸನಾ ದ್ರವ್ಯಗಳನ್ನೂ ಹಾಕಬಹುದು,  ನಾನು ಹಾಕಿಲ್ಲ.
ಚೆನ್ನಾಗಿ ಆರಿದ ನಂತರ ಶುದ್ಧವಾದ ಒಣ ಜಾಡಿಯಲ್ಲಿ ತುಂಬಿಸಿ.

ಹೀಗೆ ಗಳಗಳನೆ ಕುದಿದ ನೆಲ್ಲಿಕಾಯಿಗಳು ಸಕ್ಕರೆಯನ್ನೂ ಹೀರಿ ಮೃದುವಾಗಿರುತ್ತವೆ, ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದವರಿಗೆ ತಿನ್ನಬಹುದು.   ಬೆಳಗೆದ್ದು ತಿಂಡಿಗೆ ಮೊದಲು ಒಂದು ನೆಲ್ಲಿಕಾಯಿ,  ಊಟದ ಮೊದಲು ಇನ್ನೊಂದು,  ರಾತ್ರಿ ಮಲಗುವ ಮೊದಲು ಮತ್ತೊಂದು.   ಹೀಗೆ ತಿನ್ನುತ್ತಾ ಇರಿ,  ನವತಾರುಣ್ಯ ಗಳಿಸಿರಿ.

                                             
       


ಸಂಸ್ಕೃತದಲ್ಲಿ ಅಮಲಕವಾಗಿರುವ ನೆಲ್ಲಿಕಾಯಿ, ದೇವದಾನವರು ಸಮುದ್ರಮಥನ ಮಾಡುತ್ತಿದ್ದಾಗ  ಅಕಸ್ಮಿಕವಾಗಿ ಭೂಮಿಗೆ ಬಿದ್ದಂತಹ ಅಮೃತಬಿಂದುಗಳಿಂದ ಉಗಮವಾದ ಸಸ್ಯವೆಂದು ಪುರಾಣದಲ್ಲಿನ ಪುರಾಣ ಹೇಳುತ್ತದೆ.   ಅಮೃತ ತುಲ್ಯವಾದ ನೆಲ್ಲಿಕಾಯಿ ಸರ್ವರೋಗ ಪರಿಹಾರಕ,  ಧೀರ್ಘಾಯುಸ್ಸಿನ ಧಾತುಶಕ್ತಿ ಹೊಂದಿರುವಂತಹದೂ ಆಗಿದೆಯೆಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ.   ನೆಲ್ಲಿಕಾಯಿ ಮಾತ್ರವಲ್ಲ,  ಇದರ ಹೂ,  ಬೀಜ,  ಎಲೆ,  ಕಾಂಡದ ತೊಗಟೆ, ಬೇರು ಕೂಡಾ ಆಯುರ್ವೇದ ಹಾಗೂ ಯುನಾನೀ ವೈದ್ಯಕೀಯ ಪದ್ಧತಿಯಲ್ಲಿ ಔಷಧಿಯಾಗಿ ಬಳಕೆಯಲ್ಲಿವೆ.   ವಾತ, ಕಫ, ಪಿತ್ತ ಎಂಬಂತಹ ತ್ರಿದೋಷಗಳನ್ನು ಶರೀರದಲ್ಲಿ ಸಮಪ್ರಮಾಣದ ನಿಯಂತ್ರಣ ಮಾಡಬಲ್ಲ ಶಕ್ತಿ ಇದರಲ್ಲಿದೆ.

 ಇತಿಹಾಸ ಕೆದಕಿದಾಗ ಆದಿ ಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರವನ್ನು ಗಮನಿಸಿ.   ದ್ವಾದಶಿಯ ದಿನ ಬಿಕ್ಷೆಗೆಂದು ಬಂದ ಯತಿಗಳಿಗೆ ನೀಡಲು ಮನೆಯೊಳಗೆ ಏನೂ ಇಲ್ಲದ ಬ್ರಾಹ್ಮಣ ಸ್ತ್ರೀ ತನ್ನ ಬಳಿಯಿದ್ದ ಒಣ ನೆಲ್ಲಿಕಾಯಿಯೊಂದನ್ನು ಕೊಟ್ಟಳಂತೆ.   ಆಕೆಯ ಬಡತನ ಕಂಡು ಮಮ್ಮಲ ಮರುಗಿದ ಶಂಕರಾಚಾರ್ಯರು ದೇವಿ ಮಹಾಲಕ್ಷ್ಮಿಯನ್ನು ಕನಕಧಾರಾ ಸ್ತೋತ್ರ ಮುಖೇನ ಪ್ರಾರ್ಥಿಸಿದರು,  ಲಕ್ಷ್ಮಿ ಒಲಿದಳು.   ಈಗಲೂ ಕೇರಳದಲ್ಲಿ ಶಂಕರಾಚಾರ್ಯರಿಗೆ ನೆಲ್ಲಿಕಾಯಿಯ ಬಿಕ್ಷೆ ನೀಡಿದ ಆ ಮನೆತನ ಇದೆ.

ನೆಲ್ಲಿಮರದ ಮೂಲ ನೆಲೆ ಭಾರತವೇ ಆಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.   ಕನ್ನಡ,  ತುಳು ಹಾಗೂ ತಮಿಳು ಭಾಷೆಗಳಲ್ಲಿ ನೆಲ್ಲಿಕಾಯಿ ಎಂದಾದರೆ ಮಲಯಾಳಂನಲ್ಲಿ ನೆಲ್ಲಿಕ್ಕ (നെല്ലിക്ക). ಸಸ್ಯಶಾಸ್ತ್ರೀಯವಾಗಿ phyllanthus emblica ಎಂದಾದರೆ ಆಂಗ್ಲ ಭಾಷೆಯಲ್ಲಿ Indian gooseberry ಆಗಿರುತ್ತದೆ.

ವಾಣಿಜ್ಯ ಉದ್ದೇಶದಿಂದ ನೆಲ್ಲಿಯನ್ನು ಬೆಳೆಸುವುದು ಕಡಿಮೆ.   ತೋಟಗಳಲ್ಲಿ ಅಲ್ಲೊಂದು ಇಲ್ಲೊಂದು ನೆಟ್ಟುಕೊಳ್ಳುವವರಿದ್ದಾರೆ.   ಇದರ ಸಾಕುವಿಕೆಗೆ ಅಂತಹ ಕಟ್ಟುಪಾಡುಗಳೇನೂ ಇಲ್ಲ.   ಕಸಿ ಕಟ್ಟಿದ ಗಿಡ ಬೇಗನೆ ಫಲ ನೀಡುವುದು.   ಹಾಗೇ ಸುಮ್ಮನೆ ಹುಟ್ಟಿದ ಗಿಡ ಫಲಭರಿತವಾಗಲು ವರ್ಷಾನುಗಟ್ಟಳೆ ಕಾಯಬೇಕಾದೀತು.   ವಿಟಮಿನ್ ಸಿ ಅಧಿಕವಾಗಿರುವ ಫಲ,   ಹಸಿ ನೆಲ್ಲಿಕಾಯಿ ತಿನ್ನುವುದಕ್ಕಿಂತ ಬೇಯಿಸಿದ್ದು ಉತ್ತಮ,  ಬೇಯಿಸಿದರೂ,  ಒಣಗಿಸಿ ಪುಡಿ ಮಾಡಿದರೂ ವಿಟಮಿನ್ ನಷ್ಟವಾಗದಿರುವುದೇ ಇದರ ವಿಶೇಷ ಗುಣ.   ಉಪ್ಪಿನಕಾಯಿ,  ಮುರಬ್ಬಗಳಂತೆ ಹಣ್ಣಿನ ಪಾಕದ ಜೆಲ್ಲಿ ಮಾಡಿದರೂ ಚೆನ್ನಾಗಿರುತ್ತದೆ.    ಜೆಲ್ಲಿ ಮಾಡಬೇಕಿದ್ದಲ್ಲಿ ಬೇಯಿಸಿದ ನೆಲ್ಲಿಕಾಯಿಗಳ ಬೀಜ ತೆಗೆದು ಸಕ್ಕರೆ ಪಾಕದಲ್ಲಿ ಕುದಿಸಿ ಇಡುವುದು,  ಹೆಚ್ಚುಕಮ್ಮಿ ಮುರಬ್ಬ ತಯಾರಿಸಿದ ವಿಧಾನವನ್ನೇ ಬಳಸಿದರಾಯಿತು.   ನೆಲ್ಲಿಂಡಿ ಮಾಡಬೇಕಾದಲ್ಲಿ ಬೇಯಿಸಿದ ನೆಲ್ಲಿಕಾಯಿಗಳ ಬೀಜ ತೆಗೆದು ಉಪ್ಪಿನ ದ್ರಾವಣದಲ್ಲಿ ಕುದಿಸಿ ಮುದ್ದೆಗಟ್ಟಿ ಭರಣಿಯಲ್ಲಿ ತುಂಬಿಸಿ ಇಟ್ಟುಕೊಳ್ಳುವುದು,  ಇದರ ಉಪಯೋಗ ಅಜೀರ್ಣವಾದಾಗ ತಂಬುಳಿ ಮಾಡಿ ಉಣ್ಣುವುದು ಅಷ್ಟೇ ಮತ್ತೇನಿಲ್ಲ.  ಹಿಂದಿನ ಕಾಲದವರು ಅಂದರೆ ನನ್ನತ್ತೆ,  ಅಜ್ಜಿ ಈ ಥರ ಮಾಡಿ ಹೊಗೆ ತಾಗುವ ಅಟ್ಟದಲ್ಲಿ ಕೆಡದಂತೆ ಇಟ್ಟುಕೊಳ್ಳುವ ವಾಡಿಕೆ ಇತ್ತು.  

  ಒಣಗಿಸಿದ ನೆಲ್ಲಿ ಪುಡಿಯನ್ನು ತಲೆಗೆ ಪೇಸ್ಟ್ ತರಹ ಸವರಿಕೊಂಡು ಸ್ನಾನ ಮಾಡಿ,   ಹೊಳೆಯುವ ಕಾಂತಿಯುಕ್ತ ಕೂದಲನ್ನು ಪಡೆಯಿರಿ.   ಕೂದಲುದುರುವಿಕೆಯನ್ನೂ ತಡೆಗಟ್ಟಿರಿ.   ಕೇಶವರ್ಧಿನೀ ತೈಲಗಳಲ್ಲಿ ನೆಲ್ಲಿಕಾಯಿಯ ಸಾರವನ್ನೂ ಬಳಸಲಾಗುತ್ತದೆಂಬುದನ್ನೂ ಮರೆಯದಿರಿ.

Posted via DraftCraft app

Friday 14 March 2014

ಮಹಿಳಾವಾದವೂ, ಮಾವಿನಕಾಯಿ ಸ್ವಾದವೂ....






" ಮಹಿಳೆಯರ ದಿನ ಬಂದಾಯ್ತು "
" ಅಯ್ಯೊ ಬಿಡು,  ಮುದುಕರ ದಿನಾನೂ ಬರುತ್ತೆ "
" ಒಂದಲ್ಲ ಒಂದು ದಿನ ಬರ್ತದೆ,  ನಿಮ್ದು ಉಪ್ಪಿನಕಾಯಿ ಹಾಕಿ ಆಯ್ತಾ ಅತ್ತೇ ?"
" ಅದನ್ನೇನು ಕೇಳ್ತೀಯ,  ಹಾಕದಿದ್ರೆ ಆಗುತ್ತಾ,  ಒಂದ್ ಸಾವಿರ ಮಿಡಿ ಉಪ್ಪು ಬೆರೆಸಿ ಇಟ್ಟಿದ್ದೇನೆ "
" ಮಾವಿನ ಮಿಡಿ ಸಿಕ್ತು ಹಂಗಿದ್ರೆ... ಪುಡಿ ಉಪ್ಪು ಹಾಕಿದ್ದಾ ?"
" ಛೆ, ಅದಾಗಲಿಕ್ಕಿಲ್ಲ,   ಕಲ್ಲುಪ್ಪು...ಎರಡು ಕೇಜಿ ಬೇಕು ನೋಡು,  ಇನ್ನು ಮಿಡಿ ಚಿರುಟಿದ ಮೇಲೆ ಬಾಕಿ ಕೆಲ್ಸ "
" ಮೆಣಸು, ಸಾಸಿವೆ ಎಲ್ಲಾ ರೂಢಿಗೆ ಮಾಡಿಟ್ಟಾಯ್ತಾ ಅತ್ತೇ ?"
" ಹೂಂ,  ಮೂಡಿತ್ತಾಯರ ಮಿಲ್ಲು ಇದೆಯಲ್ಲ,  ಪೈವಳಿಕೆಯಿಂದ ಸ್ವಲ್ಪ ಮುಂದೆ.."
" ಗೊತ್ತಾಯ್ತು,  ನಾವೂ ಅಲ್ಲಿಂದಾನೇ ತಂದಿದ್ದು "
" ಹಾಗ್ಹೇಳು ಮತ್ತೆ,  ಒಂದ್ಕೇಜಿ ಮೆಣಸಿನ ಹುಡಿ,  ಸಾಸಿವೆ,  ಕಾಲು ಕಿಲೊ ಅರಸಿನ ಪುಡಿ ತಂದಿದೆ "
" ಅದನ್ನೇನು ಹಾಗೇ ಬೆರೆಸಿಡೂದಾ "
" ಐದಾರು ದಿನ ಆಗೂವಾಗ ಮಾವಿನ ಮಿಡಿಯಲ್ಲಿ ಉಪ್ಪು ನೀರು ಏಳ್ತದೆ,   ಆ ನೀರಿನಲ್ಲಿ ಸಾಸಿವೆ ಪುಡಿ ಅರೆಯಬೇಕು "
" ಓ,  ಸಾಸಿವೆ ಹುಡಿ ಅರೆಯಬೇಕಾ ?"
" ಹೂಂ ಮತ್ತೆ,  ಹುಡಿ ತರಿ ತರೀ ಇರ್ತದೆ,  ನುಣ್ಣಗೆ ನೊಂಪಣ್ಣನ ಥರ ಆಗ್ಬೇಕಲ್ಲ,  ಮಿಕ್ಸೀಯಲ್ಲೇ ಕಡೆಯಬಹುದು "
" ಸರಿ,  ಮಿಕ್ಸಿ ಚೆನ್ನಾಗಿ ತೊಳೆದು ಬಿಸಿಲಿಗಿಟ್ಟು ಒಣಗಿಸಿಟ್ರಾಯ್ತಲ್ಲ "
" ಹ್ಹ..ಹ್ಹ...ಮಿಕ್ಸೀ ಹಾಳಾದೀತು, ಜಾರ್ ತೊಳೆದಿಡು .....ಒಂದು ಗ್ಲಾಸು ಸಾಸಿವೆ ಉಪ್ಪು ನೀರಿನಲ್ಲಿ ಅರೆದು,  ಅಷ್ಟೇ ಮೆಣಸಿನ ಹುಡಿ ಹಾಕಿ ಎರಡು ಸುತ್ತು ತಿರುಗಿಸಿದರಾಯ್ತು... ಅರೆಯುವಾಗ ಹರಳುಪ್ಪು ಸ್ವಲ್ಪ ಸೇರಿಸಿಕೊಂಡ್ರೆ ಒಳ್ಳೇದು,  ಉಪ್ಪು ಕಮ್ಮಿಯಾಗಬಾರದು...."
" ಅರಸಿನ ಹುಡಿ ಎಷ್ಟು ?"
" ಒಂದು ದೊಡ್ಡ ಚಮಚ ಸಾಕು "
" ನೋಡೂ ಸಾವಿರ ಮಿಡಿ ಹಾಕಿದ್ರಲ್ಲಿ ಎಲ್ಲವೂ ಚೆನ್ನಾಗಿರುವುದಿಲ್ಲ,  ಕೆಟ್ಟು ಹೋದದ್ದು,  ಮೆತ್ತಗಾಗಿದ್ದು,  ಕಪ್ಪಗಾಗಿದ್ದು ಯಾವುದೂ ಬೇಡ,  ಚಿಕ್ಕ ಚಿಕ್ಕ ಮಿಡಿ ಆದ್ರೆ ಒಳ್ಳೇದು "
" ಸಾವಿರ ಮಿಡಿ ಅಂದ್ರೆ ಭರಣಿ ಎಷ್ಟಾದೀತು ?"
" ಅದೂ ಮಿಡಿ ಸೈಜಿನಲ್ಲಿದೆ,   ಚಿರುಟಿದ ಮಾವಿನಕಾಯಿ ಚಿಕ್ಕದಾಗುತ್ತದಲ್ಲ,  ಅದನ್ನು ನೋಡಿಕೊಂಡು ಭರಣಿ ಲೆಕ್ಕಾಚಾರ.....  ಮಾವಿನ ಕಾಯಿಯ ಪರಿಮಳ ಇರೂದೆಲ್ಲಾ ಅದರ ಸೊನೆಯಲ್ಲಿ "
" ಸೊನೆ ಅಂದ್ರೆ ತೊಟ್ಟಿನ ಬುಡದಲ್ಲಿ ಮೇಣದ ಹಾಗೆ ಜಿನುಗುತ್ತದಲ್ಲ ಅದಲ್ವ ?"
" ಹಾಂ ಅದೇ,  ತೊಟ್ಟು ಮುರಿಯುವಾಗಲೂ ಜಾಗ್ರತೆ ಬೇಕೂ...  ಸುಮ್ಮನೇ ತಟಪಟ ತೊಟ್ಟು ಮುರಿಯುವುದಲ್ಲ  "
" ಸರಿ,  ಗೊತ್ತಾಯ್ತು..."
" ಮಿಡಿಗೆ ಅರೆದ ಮಸಾಲೆ ದಪ್ಪಗಿರಬೇಕು,  ಇಡ್ಲಿ ಹಿಟ್ಟಿನ ಹಾಗೆ, ಉಪ್ಪಿನಕಾಯಿ ಹಸಿ ಹಿಟ್ಟು ತುಂಬಾ ಖಾರ .... ಕೈಗೆ ಗ್ಲೌಸ್ ಹಾಕಿಕೊಂಡರೆ ಉತ್ತಮ "
" ಅತ್ತೇ,  ಮಾವಿನಕಾಯೀದು ಉಪ್ಪುನೀರು ಉಂಟಲ್ಲ,  ಅದ್ರಲ್ಲಿ ಕೈ ಅದ್ದಿ ತೆಗೆದ್ರೆ ಕೈ ಏನೂ ಹೊಗೆಯುವುದಿಲ್ಲ "
" ಹೌದಾ,  ಅದು ನಂಗೂ ಗೊತ್ತಿರಲಿಲ್ಲ,  ನೀ ಹೇಳಿದ್ದು ಒಳ್ಳೇದಾಯ್ತು "






ಮಾವಿನ ಮಿಡಿ ಉಪ್ಪಿನಕಾಯಿ ಹಾಕುವ ವಿಧಾನ ಪ್ರಾದೇಶಿಕ ವೈವಿಧ್ಯತೆಯ ಅನುಸಾರ ವಿವಿಧವಾಗಿರುತ್ತವೆ.   ಇಲ್ಲಿ ಹೇಳಿದ್ದು ದಕ್ಷಿಣ ಕನ್ನಡಿಗರ ಸಾಂಪ್ರದಾಯಿಕ ವಿಧಾನ.  ಕಡಂಬಿಲ ಸರಸ್ವತಿ ಬರೆದಿರುವ  ' ಅಡಿಗೆ '  ಎಂಬ ಪಾಕಪುಸ್ತಕದಲ್ಲಿ ಇದನ್ನು ಸವಿವರವಾಗಿ ಬರೆದಿರುತ್ತಾರೆ.   ಉಪ್ಪಿನಕಾಯಿ ಹಾಕುವ ಮೊದಲು ಅದರಲ್ಲಿ ಬರೆದಿರುವ ಲೆಕ್ಕಾಚಾರ ಓದಿಕೊಂಡೇ ನನ್ನಂತಹ ಗೃಹಿಣಿಯರು ಮುಂದುವರಿಯುವುದು.   ಮೊದಲ ಬಾರಿ ಪ್ರಯತ್ನಿಸುವಾಗ ಹಿರಿಯರ ಮಾರ್ಗದರ್ಶನ ಪಡೆದೇ ಮಾಡಿದರೆ ಉತ್ತಮ.

ಮಿಡಿ ಉಪ್ಪಿನಕಾಯಿಯನ್ನು ಹಾಕಿದ ಕೂಡಲೇ ತಿನ್ನುವುದಕ್ಕಿಲ್ಲ,   2 -3 ತಿಂಗಳು ಕಟ್ಟಿಟ್ಟು ನಂತರ ತೆಗೆದು ತಿನ್ನಬಹುದು,  ಆ ಹೊತ್ತಿಗೆ ಮಳೆಗಾಲವೂ ಬಂದಿರುತ್ತದೆ.   ಗಾಳಿ ಸೋಕದಂತೆ,  ಬೆಚ್ಚಗೆ ಇಟ್ಟುಕೊಳ್ಳಬೇಕಾದ ಅಗತ್ಯವೂ ಇದೆ.

ಶುದ್ಧವಾದ ಇಂಗು,  ಪುಡಿಯುಪ್ಪು ಕೊನೆಯದಾಗಿ ಭರಣಿಯ ಬಾಯಿ ಬಿಗಿದು ಕಟ್ಟುವ ಮೊದಲು ಹಾಕಿ ಇಡವುದೂ ಇದೆ.   ಎರಡು ವರ್ಷಕ್ಕೂ ಮೇಲ್ಪಟ್ಟು ಇಡಬಹುದಾದ ಮಿಡಿಯಾಗಿದ್ದಲ್ಲಿ ಪಚ್ಚ ಕರ್ಪೂರವನ್ನೂ ಹಾಕಿಟ್ಟುಕೊಳ್ಳುವವರಿದ್ದಾರೆ, ಮಾವಿನ ಮಿಡಿಯನ್ನು ಹೆಚ್ಚು ಕಾಲ ಕಾಪಿಡಬೇಕಾದರೆ ಉಪ್ಪಿನಕಾಯಿ ಮಸಾಲೆ ಅರೆಯುವಾಗ ಹೊಸದಾಗಿ ತಯಾರಿಸಿದಂತಹ ಕಾದಾರಿದ ಉಪ್ಪು ನೀರನ್ನು ಬಳಸಬೇಕು.  ಇದೆಲ್ಲ ದೊಡ್ಡ ಪ್ರಮಾಣದಲ್ಲಿ ಮಾಡುವುದಿದ್ದರೆ ಮಾತ್ರ.





                                    
                 

Saturday 8 March 2014

ಕಳೆದು ಹೋದ ಕೀಲಿ ಕೈ ?







ನಮ್ಮ ಪಯಣ ಹಳೇಬೀಡಿಗೆ ಮುಂದುವರಿಯಿತು.   ಬೇಲೂರಿನಿಂದ ಇಲ್ಲಿಗೆ ಹೆಚ್ಚು ದೂರವೇನಿಲ್ಲ.   ಬೇಲೂರಿನ ಕುಶಲಕರ್ಮಿಗಳು ಇಲ್ಲಿಗೆ ಮುಂದುವರಿದರೆಂದು ಹೇಳಿದರೂ ತಪ್ಪಾಗಲಾರದು.   ಶಿಲ್ಪ ಸೌಂದರ್ಯ,   ಕೆತ್ತನೆ ಕೆಲಸಗಳು ಬೇಲೂರಿಗಿಂತಲೂ ಅದ್ಭುತವಾಗಿವೆ.   ಕಲೆ ಎಂಬುದು ನಿಂತ ನೀರಿನಂತಲ್ಲ,   ಅದೊಂದು ನಿರಂತರ ಪ್ರವಾಹ.   ಚೆಲುವಿನ ಹೊಸ ಬೀಡನ್ನು ಕಟ್ಟಿದರೂ ಶಿಲ್ಪಿಯ ಕನಸೆಲ್ಲವನ್ನೂ ಭಗ್ನಗೊಳಿಸುವಂತಹ ದುರಾಕ್ರಮಣ ಇಲ್ಲಿ ನಡೆದಿದೆ.   ಕೈ ಮುರಿದ ದ್ವಾರಪಾಲಕರ ವಿಗ್ರಹಗಳ ಸ್ವಾಗತದೊಂದಿಗೆ ಎದುರಾಗುವ ದೇಗುಲ,   ಚರಿತ್ರೆಯ ಪುಟಗಳನ್ನು ಓದಿ ತಿಳಿದವರಿಗೆ ಕಣ್ಣಂಚು ತೇವವಾಗದಿರದು.

ಹಳೇಬೀಡಿನಲ್ಲಿ ಸುತ್ತಾಡುತ್ತಾ ಇರಬೇಕಾದರೆ ಮದ್ಯಾಹ್ನ ಆಗಿತ್ತು.   ಮಟಮಟ ಬಿಸಿಲು,   ಚಳಿಯೊಂದಿಗೆ ಬಿಸಿಲೂ ಹಿತವಾಗಿದ್ದರೂ ಬಿಸಿಲು ಬಿಸಿಲೇ ಅಲ್ಲವೇ?    " ಶೀಲಾ,  ನಂಗೇನೋ ಹಿತವಾಗ್ತಾ ಇಲ್ಲ,  ಮನೆ ತಲಪಿದ್ರೆ ಸಾಕು,  ಈಗ ಊಟಾನೂ ಬೇಡ "  ಅನ್ನುತ್ತಾ ಮುಂದುವರಿಸಿದೆ,   " ಇಲ್ಲೆಲ್ಲಾದ್ರೂ ಕುಟಜಾರಿಷ್ಟ ಸಿಗುತ್ತೋ ಇಲ್ವೋ "

ಹಳೇಬೀಡಿನಿಂದ ಮೂವರೂ ಹೋಟಲ್ ಊಟಕ್ಕೆ ತೆರಳಿದರು.   ನಾನು ಮಾತ್ರ ಕಾರಿನೊಳಗೆ ಉಪವಾಸ ವ್ರತಧಾರಿಯಾಗಿ ಕುಳಿತಿರಬೇಕಾಯಿತು.    ಹೋಟಲಿನಿಂದ ಬರುತ್ತಿದ್ದಂತೆ ಗಿರೀಶ್ ಸೋಡಾ ಬಾಟಲ್ ತಂದ.   ಅದನ್ನು ಎರಡು ಗುಟುಕು ಕುಡಿದಾಗ ಡರ್ರನೆ ತೇಗು ಬಂದು ಶರೀರ ಹಗುರಾಗಿ ಮನ ಹಕ್ಕಿಯಂತಾಯಿತು.   ದಾರಿಗುಂಟ ಹೋಗುವಾಗ ಅಲ್ಲಲ್ಲಿ ಮೆಡಿಕಲ್ ಶಾಪ್ ಕಂಡಾಗ ಇಳಿದು ಕುಟಜಾರಿಷ್ಟ ಇದೆಯೋ ಅಂತ ಕೇಳೂದೂ,  ಇಲ್ಲಾಂತ ವಾಪಸ್ಸಾಗುವುದೂ ನಡೆಯಿತು.    ಚಿಕ್ಕಮಗಳೂರಿಂದ ಮುಂದೆ ಹೋದಂತೆ ಮೂಡಿಗೆರೆ,  ಅರಣ್ಯ ವಲಯ ಎದುರಾಯಿತು.   ನಿರ್ಜನ ಪ್ರದೇಶ,   ದಾರಿಯುದ್ದಕ್ಕೂ ಮಂಗಗಳು ಸ್ವಾಗತ ಕೋರಿದವು,  ಶೀಲಾ ಮಂಗಗಳ ವಿಧ ವಿಧವಾದ ಫೋಟೋ ಕಾರಿನೊಳಗಿಂದಲೇ ಕ್ಲಿಕ್ಕಿಸಿದಳು.




" ಈಗ ಹೀಗೇ ಧರ್ಮಸ್ಥಳ ರೂಟಿನಲ್ಲಿ ಹೋದ್ರೆ ಐದಕ್ಕೆಲ್ಲಾ ಮನೆಯಲ್ಲಿರ್ತೀವಿ ತಿಳೀತಾ ..."

" ಹ್ಞೂ,  ಸರಿ.   ಆದ್ರೆ ನಮ್ಮ ಸೀರೆ ಪರ್ಚೇಸ್ ಬಿಟ್ ಬಿಡೂದಾ "

" ಇಲ್ಲಿಂದ ಸೀರೇನಾ...."

" ಬೇಡ ಬಿಡಿ,  ಹಾಗಿದ್ರೆ ಮನೆಗೆ ಹೋದ್ಮೇಲೆ ದುಬೈ ಸೀರೆ ತರಿಸ್ತೇನೆ,  ನಂಗೊಂದು,  ಶೀಲಾಗೊಂದು "

" ದಾರಿಯಲ್ಲಿ ಮಡಂತ್ಯಾರ್ ಬರ್ತದೆ,  ಅಲ್ಲಿ ದೊಡ್ಡ ಜವುಳಿ ಅಂಗಡಿ ಇದೆಯಂತೆ,  ನನ್ನ ಫ್ರೆಂಡ್ ಹೇಳಿದ್ದು,   ಅಲ್ಲಿಂದ ಸೀರೆ...." ಅಂದ ಗಿರೀಶ್.

ಸೀರೆ ಸಮಸ್ಯೆ ಬಗೆಹರಿಯಿತು.   ಒಂದು ಪುಸ್ತಕ ಬೇಲೂರಿನಿಂದ ಖರೀದಿಸಿ ಆಗಿತ್ತು.   ಅದೇನೂ ವಿಶೇಷವಾದದ್ದಲ್ಲ,  ಹೀಗೇ ಸುಮ್ಮನೆ ಪ್ರವಾಸಿಗರ ಕೈಪಿಡಿ.   ಬೇಲೂರು,  ಹಳೇಬೀಡು ಹಾಗೂ ಇನ್ನಿತರ ಚಾರಿತ್ರಿಕ ಸ್ಮಾರಕಗಳ ಬಗ್ಗೆ ಅಲ್ಪಸ್ವಲ್ಪ ವಿವರಣೆ ಅದರಲ್ಲಿತ್ತು.

ಐದಾರು ದಿನಗಳಿಂದ ಡ್ರೈವಿಂಗ್ ಸೀಟಿನಲ್ಲಿ ವಿರಾಜಮಾನನಾಗಿದ್ದ ಗಿರೀಶ್ ನಿಜವಾಗಿಯೂ ಆಯಾಸಗೊಂಡಿದ್ದ.  ಕಾರು ಸಾವಧಾನವಾಗಿ ಚಲಿಸಿತು.   ಸಂಜೆ ಹೊತ್ತಿಗೆ ಮಡಂತ್ಯಾರ್ ತಲಪಿದೆವು,   ಮೊದಲೇ ನಮ್ಮೆಜಮಾನ್ರು ಅಂದಂತೆ ಈ ಹೊತ್ತಿಗೆ ನಾವು ಮನೆ ತಲಪಬೇಕಾಗಿತ್ತು.   ಜವುಳಿ ಅಂಗಡಿಯೆದುರು ಕಾರು ನಿಂತಿತು.   ಬಹುಶಃ ಮೂರು ಮಹಡಿಗಳ ದೊಡ್ಡ ಕಟ್ಟಡ,   ಲಿಫ್ಟ್ ಸೌಕರ್ಯ ಕೂಡಾ ಇದೆ.   ಬೆಂಗಳೂರನ್ನೂ ಮೀರಿಸುವ ಅತ್ಯಾಧುನಿಕತೆ ಈ ಹಳ್ಳಿಯಂತಹ ಪರಿಸರದಲ್ಲೂ ಇದೆ!

ನನಗೊಂದು ಮಗ್ಗದ ಸೀರೆ ಆಯ್ಕೆ ಮಾಡಿಟ್ಟು ತೆಪ್ಪಗೆ ಒಂದು ಕಡೆ ಕುಳಿತು  ಕಾಲಹರಣ ಮಾಡಬೇಕಾಯಿತು.  ಶೀಲಾ ಸೀರೆಯೊಂದಿಗೆ ಚೂಡಿದಾರ್,  ಇನ್ನೂ ಏನೇನೋ ಖರೀದಿಸುತ್ತ ಮೇಲೆ ಹತ್ತುತ್ತ,  ಕಳಗಿಳಿದು ಬರಬೇಕಾದರೇ ಸುಮಾರು ಹೊತ್ತಾಯಿತು.    ಗಿರೀಶ್ ಬಟ್ಟೆ ಮಳಿಗೆಯೊಳಗೆ ನಾಪತ್ತೆಯಾಗಿದ್ದ.   ಹೋಟಲ್ ನಲ್ಲಿ ಗಡದ್ದಾಗಿ ತಿಂಡಿ ತಿಂದು ಶೀಲಾ ಬಂದು ಕಾರು ಹತ್ತಿ ಕುಳಿತಳು. 
 
 " ಹಾಕೂದು ಕರೀ ಪ್ಯಾಂಟು,  ಬಿಳೀ ಶರಟು,   ಅದನ್ನು ಸೆಲೆಕ್ಟ್ ಮಾಡ್ಬೇಕಾದ್ರೇ ಗಂಟೆಗಟ್ಟಳೆ ....."  ಅಂದಿದ್ದು ಶೀಲಾ.

ನಾವು ಮನೆ ತಲಪಿದ ಹಾಗೆ ಬಾಗಿಲು ತೆಗೆಯುವ ಬಗೆ ಹೇಗೆ ಎಂಬ ಚಿಂತೆಯಲ್ಲಿ ತೊಡಗಿದ್ದೆವು.   " ಕೀಲಿಕೈ ಕಳೆದುಹೋಗಿದೆ ಅಂತ ಇನ್ನು ಗಿರೀಶನ ಬಳಿ ಹೇಳಬೇಕಾಗ್ತದೆ,  ಆದ್ರೆ ಅವನೂ ಮನೆ ತನಕ ಬರೂದು ಬೇಡ,  ಅದನ್ನು ಹೇಗಾದ್ರೂ ತಪ್ಪಿಸಬೇಕು "  ಎಂದರು ನಮ್ಮವರು.   ಸುಮ್ಮನೇ ನಮ್ಮ ಪಡಿಪಾಟಲಿನಲ್ಲಿ ಅವನೂ ಭಾಗಿಯಾಗುವ ಅವಶ್ಯಕತೆ ಇಲ್ಲವಷ್ಟೆ? 

ಉಪವಾಸ ವ್ರತದಲ್ಲಿದ್ದ ನನಗೆ ಮುಸುಂಬಿ ಜ್ಯೂಸ್ ಬಂದಿತು.   ತೊಂದರೆಯಿಲ್ಲ ಅಂತ ಅದನ್ನು ಕುಡಿದಾಯ್ತು.   ಗಿರೀಶ್ ಬರಲು ಮತ್ತೂ ತಡವಾಯ್ತು.   ಕಾರಣವೇನೂ ಅಂತ ವಿಚಾರಿಸಿದಾಗ ಪ್ಯಾಂಟ್ ಹೊಲಿಯಲು ಕೊಟ್ಟಿದ್ದನೆಂದು ತಿಳಿಯಿತು.   ನಿಧಾನವೇ ಪ್ರಧಾನವಾಗಿ ಹೊರ ಬಂದ ಗಿರೀಶ್ ಕಾರು ಮುನ್ನಡೆಸಿದ.   

ಮನೆ ಸಮೀಪಿಸುತ್ತಿದ್ದಂತೆ ಗಿರೀಶನಿಗೂ ನಮ್ಮ ಸಮಸ್ಯೆ ಬಗ್ಗೆ ಹೇಳಲಾಯಿತು.   ಮನೆ ಮುಂದಿನ ರಸ್ತೆಯಲ್ಲೇ ಕಾರನ್ನು ನಿಲ್ಲ ಹೇಳಿದ ನಮ್ಮೆಜಮಾನ್ರು  " ಮೊದಲು ಮನೆಗೆ ಹೋಗಿ ನಿನ್ನ ವ್ಯಾನಿಟಿ ಬ್ಯಾಗ್ ಒಳಗೆ ಕೀಲಿ ಕೈ ಇದೆಯಾ ನೋಡು " ಅಂದರು.   ನಾನು ಇಳಿದೆ,  ರಾತ್ರಿಯಾಗಿತ್ತು.   ತಿಂಗಳ ಬೆಳಕಿನಲ್ಲಿ ಮನೆಗೆ ಬಿರಬಿರನೆ ಇಳಿದು ಬಂದು ವರಾಂಡದ ಜಗಲಿಯಲ್ಲಿ ವ್ಯಾನಿಟಿ ಬ್ಯಾಗ್ ಬಿಡಿಸಿ ಒಳಗಿದ್ದ ಸರಕುಗಳನ್ನೆಲ್ಲ ಹೊರ ಹಾಕಲಾಗಿ,  ಉಹ್ಞು.. ಕೀಲಿ ಕೈ ಇರಲಿಲ್ಲ.    ಮನೆಗೆ ಅಂಟಿಕೊಂಡಂತಿರುವ ಇನ್ನೊಂದು ಕಟ್ಟಡದಲ್ಲಿ ಸ್ನಾನಗೃಹ ಇದ್ದಿದ್ದರಿಂದ ವೆರಾಂಡದಿಂದ ಇಳಿದು ಚೆನ್ನಾಗಿ ನೀರೆರೆದು ಕೈಕಾಲು ತೊಳೆದು ಬರುವ ಹೊತ್ತಿಗೆ ಕಾರಿನಲ್ಲಿದ್ದ ಲಗ್ಗೇಜ್ ಸಹಿತವಾಗಿ ಎಲ್ಲರೂ ಮನೆಗೆ ಬಂದರು.   

" ವ್ಯಾನಿಟಿ ಬ್ಯಾಗಲ್ಲಿ ಇಲ್ಲ " ಅಂತಂದೆ ಅಂಗಳದಲ್ಲಿದ್ದ ನಾನು.   ಬಟ್ಟೆಬರೆಗಳಿದ್ದ ಚೀಲಗಳೆಲ್ಲ ತಪಾಸಣೆಗೊಳಪಟ್ಟವು.   

" ಸಿಕ್ಕಿತು..." ಅನ್ನುತ್ತಾ ಶೀಲಾ ಕೈಯೆತ್ತಿದಳು.  

" ಎಲ್ಲಿತ್ತು ?"  ಅಂಗಳದಿಂದ ಒಳ ಬಂದೆ.

" ಈ ಪರ್ಸಿನಲ್ಲಿ " ಅನ್ನುತ್ತಾ ಒಂದು ದೊಡ್ಡದಾದ ಕಪ್ಪು ಪರ್ಸನ್ನು ಎತ್ತಿ ತೋರಿಸಿದಳು ಶೀಲಾ.
ನನಗೋ ನಮ್ಮವರಿಗೆ ಎರಡೇಟು ಬಾರಿಸುವಷ್ಟು ಸಿಟ್ಟು ಬಂದಿತು.

ಅದೇನಾಗಿತ್ತೂಂದ್ರೆ ನಾವು ಹೊರಡುವ ತಯಾರಿ ನಡೆಸುತ್ತಿದ್ದಾಗ ಚಳಿಗೆ ಕೋಟೂ ಇರಲಿ ಎಂದು ಕಪಾಟು ತಡಕಾಡಿ ಇದ್ದಬದ್ದ ಕೋಟುಗಳನ್ನೆಲ್ಲ ಹೊರಹಾಕಿದ್ದೆನಲ್ಲ,  ಆವಾಗ ಒಂದು ದೊಡ್ಡ ಹ್ಯಾಂಡ್ ಪರ್ಸ್ ಹೊರ ಬಂದಿತ್ತು.   " ಇಷ್ಟು ಚೆನ್ನಾಗಿದೆ ಈ ಪರ್ಸು,  ಒಳಗೆ ಕಟ್ಟಿಟ್ಟು ಏನ್ಮಾಡ್ತೀಯಾ?  ಪ್ರವಾಸ ಹೋಗುವಾಗ ಇದೂ ಇರಲಿ "  ಅಂತಂದು ತೆಗೆದಿಟ್ಟಿದ್ರು.   ಯಾರೂ ಕೇಳುವವರಿಲ್ಲದೆ ಕಾರಿನೊಳಗೇ ಬಿದ್ದುಕೊಂಡಿದ್ದ ಪರ್ಸಿನೊಳಗೆ ಭದ್ರವಾಗಿ ಇತ್ತು ನಮ್ಮ ಮನೆ ಬಾಗಿಲಿನ ಕೀಲಿ ಕೈ. ಕೀಲಿ ಕೈ ಬಿಟ್ರೆ ಬೇರೇನೂ ಆ ಪರ್ಸಿನೊಳಗೆ ಇರಲೂ ಇಲ್ಲ.

" ಅಂತೂ ಸಿಕ್ಕಿತಲ್ಲ,  ಇನ್ನು ಊಟ ಮಾಡಿಯೇ ಹೋಗಿ..." ಎಂದರು ಮನೆ ಯಜಮಾನ್ರು.   ನಾನೂ ಬೇಗನೇ ಒಳ ಹೋಗಿ ಅನ್ನಕ್ಕೆ ನೀರಿಟ್ಟೂ ಆಯ್ತು.


ಒಟ್ಟು ಹನ್ನೊಂದು ಕಂತುಗಳಲ್ಲಿ ಬರೆದಿರುವ ಈ ಪ್ರವಾಸ ಕಥನ ಇಲ್ಲಿಗೆ ಮುಗಿಯಿತು.




Posted via DraftCraft app

Saturday 1 March 2014

ಚನ್ನಕೇಶವನ ಪ್ರಾಣಸಖೀ....









ಬೇಲೂರಿನ ಶಿಲ್ಪಕಲಾವೈಭವದ ದೃಶ್ಯಚಿತ್ರಗಳನ್ನು ಮಾತ್ರ ನೋಡಿದ್ದ ನನಗೆ ಪ್ರವಾಸದ ಸುವರ್ಣಾವಕಾಶ ಈಗ ದೊರೆಯಿತು. ಅನೇಕ ಐತಿಹಾಸಿಕ ಕಥಾನಕಗಳು ಬೇಲೂರಿನ ಶಿಲ್ಪಕಲಾವೈಭವವನ್ನು ಕೇಂದ್ರೀಕರಿಸಿ ಬರೆಯಲ್ಪಟ್ಟಿವೆ. ಕೆ.ವಿ. ಅಯ್ಯರ್ ಬರೆದಿರುವ ಐತಿಹಾಸಿಕ ಕಾದಂಬರಿ ' ಶಾಂತಲಾ ' ಅವುಗಳಲ್ಲೂಂದು. 1964ರಲ್ಲಿ ಬೇಲೂರಿನ ಹಿನ್ನಲೆಯಲ್ಲೇ ಕನ್ನಡ ಚಲನಚಿತ್ರವೂ ಬಂದಿದೆ. ' ಅಮರಶಿಲ್ಪಿ ಜಕಣಾಚಾರಿ ' ಎಂಬ ಈ ಸಿನೆಮಾ ಆ ಕಾಲದ ಮೊದಲ ವರ್ಣಚಿತ್ರವೂ ಆಗಿ ಖ್ಯಾತಿ ಪಡೆದಿದೆ, ಎಂದೂ ಮರೆಯಲಾಗದ ಮಧುರ ಗೀತೆಗಳೂ ಇದರಲ್ಲಿವೆ, ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಮಂಕುತಿಮ್ಮನ ಕಗ್ಗದಂತಹ ಆದ್ಯಾತ್ಮ ಲಹರಿಯನ್ನು ಬರೆದಿರುವ ಡಿ.ವಿ. ಗುಂಡಪ್ಪನವರೂ ಇಲ್ಲಿನ ನೃತ್ಯಶಿಲ್ಪಗಳ ಮೇಲೆ ಶೃಂಗಾರ ಕಾವ್ಯವನ್ನೇ ಬರೆದಿದ್ದಾರೆ.

ರಾಜಾಶ್ರಯವೇ ಕುಶಲಕಲೆಗಳಿಗೆ ಮೂಲ ಬಂಡವಾಳ, ಇತಿಹಾಸದ ಪುಟಗಳನ್ನು ಅವಲೋಕಿಸಿದಂತೆ ತಿಳಿದು ಬರುವ ವಾಸ್ತವ. ಇಂತಹ ಐತಿಹಾಸಿಕ ಸ್ಮಾರಕಗಳನ್ನು ಸಂದರ್ಶಿಸುವ ಮೊದಲು ಸ್ವಲ್ಪವಾದರೂ ಇತಿಹಾಸದ ಪಠ್ಯಗಳನ್ನು ಓದಿಕೊಳ್ಳುವುದು ಉತ್ತಮ. ಅಂದ ಹಾಗೆ ನಾವು ಹೋದ ದಿನ ಶಾಲಾ ವಿದ್ಯಾರ್ಥಿಗಳ ಪ್ರವಾಹವೇ ಅಲ್ಲಿತ್ತು. ಅಧ್ಯಾಪಕರ ಹಿಂದೆ ಶಿಸ್ತಿನ ಸಿಪಾಯಿಗಳಂತೆ ವಿದ್ಯಾರ್ಥಿಗಳ ಸಮೂಹ. ಬೇಲೂರಿನ ಇತಿಹಾಸವನ್ನು ಹೇಳುವಂತಹ ಪುಸ್ತಕಗಳೂ ಮಾರಾಟದ ಸರಕುಗಳಾಗಿ ಲಭ್ಯವಿದ್ದವು. ಉಳಿಯ ಪೆಟ್ಟಿನಿಂದ ಮೈದಳೆದಿರುವ ಈ ಶಿಲಾ ಕೋಮಲಾಂಗಿಯರ ವರ್ಣನೆ ಲೇಖನಿಗೆ ನಿಲುಕುವಂತಹುದಲ್ಲ, ನೋಡಿಯೇ ಆನಂದಿಸಬೇಕು. ನೋಡುತ್ತಾ, ನೋಡುತ್ತಾ ಮುಂದುವರಿದಂತೆ ನೆಲದ ಮೇಲೆ ಹಾಸಿರುವ ಕಲ್ಲುಗಳ ಮೇಲೂ ಏನೇನೋ ರೇಖೆಗಳು. ಗಮನಿಸಿದಾಗ ಪಗಡೆಯಾಟದ ಹಾಸು, ಚೆನ್ನೆಯಾಟದ ಗುಳಿಗಳು ಕಾಣಿಸಿದುವು. ಇಂತಹವೇ ರಚನೆಗಳು ಹಳೇಬೀಡಿನಲ್ಲೂ ಇವೆ, ಚದುರಂಗದಾಟದ ಕಳವೂ ಅಲ್ಲಿ ಇದ್ದಿತು. ಒಳಾಂಗಣ ಕ್ರೀಡೆಗಳ ಹಾಸುಗಳು ಇಂತಹ ಬಟಾಬಯಲಿನಲ್ಲಿ ಏಕಿವೆ ?

ನನಗೋ ಆಶ್ಚರ್ಯ, " ನೋಡಿ ಇಲ್ಲಿ, ಇದು ಚೆನ್ನೆಮಣೆ ಗುಳಿ ಅಲ್ವೇ ?"

" ಇರಬಹುದು, ಆ ಕಾಲದಲ್ಲೂ ಜನರಿಗೆ ಹೊತ್ತು ಕಳೆಯಲು ಆಟಗಳು ಬೇಕಲ್ಲ " ಅಂದರು ನಮ್ಮೆಜಮಾನ್ರು " ನಮ್ಮ ಹಾಗೆ ದಿನವಿಡೀ ಬೆಳಕು ಎಲ್ಲಿಂದ.... ಸಂಜೆಗತ್ತಲಾದ ಮೇಲೆ ಮೂಲೇಲಿ ಕೂತ್ಕೊಂಡು ಆಡ್ತಿರಬಹುದು " ನಮ್ಮೆಜಮಾನ್ರ ಕಲ್ಪನಾ ಲಹರಿ ಮುಂದುವರಿಯುತ್ತಾ " ಆಡಿ ಸಾಕಾಯ್ತು ಅನ್ಸಿದಾಗ ಹಾಸುಗಲ್ಲು ಆಗ್ಹೋಗಿದೆ ...."

" ಇರಬಹುದೇನೋ "

ಬೇಲೂರಿನ ಕೆತ್ತನೆ ಕೆಲಸಗಾರರು ಇಲ್ಲಿ ಕುಶಲಕಲೆಯನ್ನು ಅರ್ಧಕ್ಕೇ ನಿಲ್ಲಿಸಿದಂತಹ ಶಿಲೆಗಳೂ ಎದುರಾದುವು. ತೃಪ್ತಿ ಎಂಬುದು ಯಾವ ಕಲಾವಿದನಿಗೂ ಸಿಗುವಂತಹುದಲ್ಲ, ಬಹುಶಃ ಅವರ ಕೆಲಸಗಳು ಮುಂದೆಲ್ಲಿಯೋ ಮುಂದುವರಿದಿವೆ. ನಾವೂ ಮುಂದುವರಿಯೋಣ.






Posted via DraftCraft app