Pages

Ads 468x60px

Saturday 30 April 2016

ತೋಟದಲ್ಲಿ ಮಾವಿನಕಾಯಿ




                                   
                                   
 


ಮಾವಿನ ಋತು ಆರಂಭದಲ್ಲೇ ಈ ಬಾರಿಯೂ ಮಗಳು ಬಂದಳು.   ತೋಟದಲ್ಲಿ ಮಾವಿನಕಾಯಿ ಆಗಿತ್ತೋ ಗೊತ್ತಿಲ್ಲ,   " ದೊಡ್ಡಮ್ಮ ಕೊಟ್ಟಿದ್ದೂ ..."  ಅನ್ನುತ್ತಾ ಎರಡು ತೋತಾಪುರಿ ಮಾವಿನಕಾಯಿಗಳನ್ನು ಹಿಡಿದುಕೊಂಡು ಬಂದಳು.

ಹೇಗೂ ಹೊರಡುವಾಗ ಉಪ್ಪಿನಕಾಯಿ ರಾಗ ಎಳೆದೇ ಎಳೆಯುತ್ತಾಳೆ,  " ಬೇಕಿದ್ರೆ ಉಪ್ಪಿನಕಾಯಿ ಹಾಕಿ ಕೊಡ್ತೇನೆ,  ಅಜ್ಜಿ ಹೇಳಿಕೊಟ್ಟ ಕ್ರಮದ್ದೂ..." ಅನ್ನುತ್ತಿದ್ದ ಹಾಗೆ  " ಏನೂ ಬೇಡ,  ಹಾಗೇ ತಿಂತೇನೆ..." ಅಂದಳು.

ಬೇಡದಿದ್ದರೆ ನನ್ನದೇನೂ ಅಭ್ಯಂತರವಿಲ್ಲ.   ಅವಳು ಬೆಂಗಳೂರಿಗೆ ಹೋಗುತ್ತಲೇ ಮಗನ ಸವಾರಿ ಬಂದಿತು.  ಬರುವಾಗ ಸ್ನೇಹಿತರ ಪಟಾಲಂ ಕೂಡಾ ಬಂದಿತ್ತು.   

" ಮಧು ನಾಳೆ ಹೋಗ್ತಾನಲ್ಲ,  ಅವನಿಗೆ ಈ ಮಾವಿನಕಾಯಿ... "  ಎಂದು ನಮ್ಮಕ್ಕ ತೋತಾಪುರಿ ಕೊಯ್ದು ಇಟ್ಟಿದ್ದಳು.   " ಯಾಕೇ ಸುಮ್ಮನೆ,  ಅವನೀಗ ಮಾವಿನ್ಕಾಯಿ ತಿಂದ..." ಅನ್ನುತ್ತಿದ್ದ ಹಾಗೇ ಈ ಹಿಂದೆ ದೆಹಲಿಯಲ್ಲಿ ಕೆಲಸಕ್ಕೆ ಸೇರಿದಾಗ ಭರಣಿಗಟ್ಟಳೆ ಮಾವಿನಮಿಡಿ ಉಪ್ಪಿನಕಾಯಿ ಕಟ್ಟಿಕೊಂಡು ಹೋಗಿದ್ದೂ,   ಅಲ್ಲಿನ ಹವೆಗೆ ನಮ್ಮ ಉಪ್ಪಿನಕಾಯಿಗಳು ತಿನ್ನಲು ಹಿಡಿಸದೇ ಹೋಗಿದ್ದೂ ನೆನಪಾಗಿ ಮಾವಿನಕಾಯಿಗಳನ್ನು ಟೇಬಲ್ ಮೇಲಿಟ್ಟು   " ನಿಂಗೆ ಮಾವಿನಕಾಯ್ ಬೇಡಾ ತಾನೇ..."

" ಇದ್ರೆ ಆದೀತು,   ತುಪ್ಪ ಇಲ್ವಾ...?" 
ತುಪ್ಪದ ಬಾಟಲ್ ಸಿದ್ಧವಾಯ್ತು.
ಮಧು ಹಾಗೂ ಸ್ನೇಹಿತರ ಬಳಗ ಬೆಂಗಳೂರಿಗೆ ತೆರಳುತ್ತಿದ್ದಂತೆ ಬಿಡುವಿನ ವೇಳೆ ಎದುರಾಯಿತು.

ತೋತಾಪುರಿಯಂತಹ ಹುಳಿ ಇಲ್ಲದ ಮಾವಿನಕಾಯಿಗಳು ಎಣ್ಣೆ ಉಪ್ಪಿನಕಾಯಿಗೆ ಚೆನ್ನ.   ಅಗತ್ಯಕ್ಕೆ ಒಂದು ನಿಂಬೆಹಣ್ಣು ಚಿಕ್ಕದಾಗಿ ಹಚ್ಚಿ ಹಾಕಿದ್ರೆ ಹುಳಿ ರುಚಿಯೂ ಆಯ್ತು.   ಎರಡು ಅಥವಾ ಮೂರು ಮಾವಿನ ಕಾಯಿಗಳ ಹೋಳು ಮಾಡಿಕೊಳ್ಳುವುದು 

ಹೋಳುಗಳಿಗೆ ತಕ್ಕಂತೆ ಉಪ್ಪಿನಹುಡಿ ಬೆರೆಸಿಡುವುದು,  3 - 4 ದೊಡ್ಡ ಚಮಚ ಉಪ್ಪು ಅಳೆದು ಹಾಕುವುದು.

ಪ್ಯಾಕೆಟ್ ಉಪ್ಪಿನಕಾಯಿ ಹುಡಿ ತಂದಿಟ್ಕೊಂಡಿದ್ದು ಇದೆ,  ಇದನ್ನೂ ಉಪ್ಪು ಅಳೆದ ಚಮಚಾದಲ್ಲಿ ಮೂರು ಅಥವಾ ನಾಲ್ಕು ಚಮಚ ಹಾಕುವುದು.  
ಇನ್ನೀಗ ಎಳ್ಳೆಣ್ಣೆಯ ಒಗ್ಗರಣೆ ಆಗ್ಬೇಕಾಗಿದೆ,   2 ಚಮಚ ಎಣ್ಣೆ ಸಾಕು,  ಸಾಸಿವೆ ಚಟಚಟ ಅಂದಾಗ ಒಗ್ಗರಣೆ  ಬೀಳಲಿ.   ಉಪ್ಪು ಕಡಿಮೆಯಾಗಬಾರದು,  ನೋಡಿಕೊಂಡು ಒಂದೆರಡು ಚಮಚಾ ಉಪ್ಪು ಮೇಲಿಂದ ಹಾಕಿಟ್ಟು,  ಭದ್ರವಾಗಿ ಉಪ್ಪಿನಕಾಯಿ ಜಾಡಿ ಮುಚ್ಚಿಟ್ಟು ಮಾರನೇ ದಿನವೇ ಉಪಯೋಗಿಸಲು ಪ್ರಾರಂಭಿಸಬಹುದಾಗಿದೆ.

ಎಳ್ಳೆಣ್ಣೆ ಹಿಡಿಸದವರು ಆಯ್ಕೆಗನುಗುಣವಾಗಿ ಇನ್ಯಾವುದೇ ಎಣ್ಣೆ ಹಾಕಿಕೊಳ್ಳಿ.   ಬೆಡೇಕರ್ ಮಸಾಲಾ ಉಪ್ಪಿನಕಾಯಿಯ ಸ್ವಾದ ಇರುವುದೇ ಎಳ್ಳೆಣ್ಣೆಯ ಒಗ್ಗರಣೆಯಲ್ಲಿ ಎಂದು ನನ್ನ ಅನಿಸಿಕೆಯಾಗಿದೆ.

ಉಪ್ಪಿನಕಾಯಿಯ ಜಾಡಿ ಖಾಲಿಯಾಗುತ್ತಿದಂತೆ ನೆನಪಾಯಿತು.   " ಫೊಟೋ ತೆಗೆದಿಟ್ಟಿಲ್ಲ..."  ಲಗುಬಗೆಯಿಂದ ಉಳಿದಿದ್ದ ಎರಡು ಮಾವಿನ ಹೋಳುಗಳನ್ನು ತಟ್ಟೆಯಲ್ಲಿಟ್ಟು ಕ್ಲಿಕ್ಕಿಸಿದ್ದಾಯಿತು.   ಯಾವುದೇ ಬರಹವಿರಲಿ ಅದಕ್ಕೊಂದು ಸೂಕ್ತವಾದ ಚಿತ್ರವಿರದಿದ್ದರೆ ಓದುಗರ ಹಾಜರಾತಿ ಕಡಿಮೆಯೇ...


    

Saturday 9 April 2016

ಯುಗಾದಿಯ ಸಿಹಿ





ಯುಗಾದಿ ಬಂದಿದೆ,  ಈ ಬಾರಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಗಳೆರಡೂ ಒಂದೇ ವಾರದ ಅಂತರದಲ್ಲಿ ಬಂದಿವೆ.  ಎರಡು ಬಾರಿ ಸಿಹಿಯೂಟ ತಿನ್ನುವ ಭಾಗ್ಯ ನಮ್ಮದು.  ಎಲ್ಲ ದವಸಧಾನ್ಯಗಳ ಬೆಲೆಯೇರಿಕೆಯಾಗಿದ್ದರೂ,  ಮನೆಯೊಳಗೆ ಹಿಂದಿನಂತೆ ಜನಸಂದಣಿಯಿಲ್ಲದಿದ್ದರೂ,  ರೇಷನ್ ಶಾಪ್ ಸಕ್ಕರೆ ವಿತರಿಸದಿದ್ದರೂ ಸಿಹಿ ತಿನ್ನಬೇಡವೇ.   ಸಿಹಿತಿನಿಸುಗಳಲ್ಲಿ ಪಾಯಸ ಅತಿ ಕಡಿಮೆ ಖರ್ಚಿನಲ್ಲಿ ಆಗುವಂತಹುದು.   ಮನೆಯೊಳಗೆ ಏನೇನಿದೆ ಎಂದು ನೋಡಿಕೊಂಡು ಎಷ್ಟು ಬೇಕೋ ಅಷ್ಟೇ ಮಾಡಿ ತಿನ್ನೋಣ.

ಮುಂಜಾನೆ ಎಂದಿನಂತೆ ಒಂದು ತೆಂಗಿನಕಾಯಿ ಒಡೆದಿದ್ದಾಯ್ತು.  ದೋಸೆಗೊಂದು ಚಟ್ಣಿ,  ಬದನೇ ಸಾಂಬಾರ್,   ಪಲ್ಯಕ್ಕೊಂದಿಷ್ಟು ಕಾಯಿತುರಿ ಬಳಸಿ ಉಳಿದ ಕಾಯಿತುರಿಯಿಂದ ಕಾಯಿಹಾಲು ತೆಗೆದಿರಿಸಿ.  ಅಲ್ಲಿಗೆ ಒಂದು ತೆಂಗಿನಕಾಯಿ ಖರ್ಚು ಆದ ಹಾಗಾಯಿತು.

ತಂದ ತರಕಾರಿಗಳಲ್ಲಿ ಬೀಟ್ರೂಟ್ ಗೆಡ್ಡೆ ಉಪಯೋಗವಾಗದೆ ಹಾಗೇ ಬಿದ್ದಿವೆ.   ಒಂದು ಬೀಟ್ರೂಟ್ ಗೆಡ್ಡೆಯನ್ನು ಸಿಪ್ಪೆ ತೆಗೆದು ತುರಿದೂ ಆಯಿತು.

ಡಬ್ಬಾದಲ್ಲಿ ಶಾವಿಗೆ ಅಥವಾ ಚಿರೋಟಿ ರವೆ ಇದೆಯಾ?  ಇದೆ,  ಎರಡೂ ಇವೆ.   ಚಿರೋಟಿ ರವೆಯಾದರೂ ಮುಂಜಾನೆಯ ತಿಂಡಿಗಾದೀತು.   ಸರಿ,  ಅಗತ್ಯವಿದ್ದ ಅರ್ಧ ಕುಡ್ತೆ ಶಾವಿಗೆಯನ್ನು ತುಪ್ಪದ ಪಸೆಯಲ್ಲಿ ಹುರಿದಿಟ್ಟೂ ಆಯ್ತು,   ಹುರಿಯದಿದ್ದರೂ ನಡೆಯುತ್ತದೆ.

ತೆಂಗಿನಕಾಯಿ ಹಾಲು ಆಗಿದೆ,  ದಪ್ಪ ಹಾಲು ಪ್ರತ್ಯೇಕ ಇರಲಿ.  ಎರಡನೇ ಹಾಗೂ ಮೂರನೇ ಹಾಲನ್ನು ಬೀಟ್ರೂಟ್ ಹಾಗೂ ಶಾವಿಗೆ ಬೇಯಲು ಬಳಸಿ.  ಕುಕರ್ ಒಂದು ವಿಸಿಲ್ ಹಾಕುತ್ತಲೂ ಬೆಂದಿತೆಂದು ತಿಳಿಯಿರಿ.

ಏಲಕ್ಕಿ ಪುಡಿ ಮಾಡದಿದ್ದರಾದೀತೇ,  ದ್ರಾಕ್ಷಿ ಗೋಡಂಬಿ ಇದ್ದ ಹಾಗೆ ಹುರಿದುಕೊಳ್ಳುವುದು.

ಕುಕರ್ ಒಳಗೆ ಬೆಂದಂತಹ ಶಾವಿಗೆ, ಬೀಟ್ರೂಟು ತುರಿಗಳಿಗೆ ಸಕ್ಕರೆ ಹಾಕಿ ಕುದಿಯಲು ಇಟ್ಟಾಯಿತು,  ಒಂದು ಕುಡ್ತೆ ಸಕ್ಕರೆ ಸಾಕಾದೀತು.   ಕುಕರ್ ಹೇಗೂ ದಪ್ಪ ತಳದ ಪಾತ್ರೆಯಲ್ವೇ,  ಬೇರೆ ತಪಲೆಗೆ ವರ್ಗಾಯಿಸಬೇಕೆಂದಿಲ್ಲ.

ಈಗ ನಾವು ಕೊನೆಯ ಹಂತಕ್ಕೆ ಬಂದೆವು.  ದಪ್ಪ ಕಾಯಿಹಾಲು, ಪ್ರತ್ಯೇಕವಾಗಿ ಇಟ್ಟುಕೊಂಡಿದ್ದನ್ನು ಈಗ ಎರೆಯಿರಿ.   ಏಲಕ್ಕಿ ಪುಡಿ ಉದುರಿಸಿ.   ದ್ರಾಕ್ಷಿ ಗೋಡಂಬಿಗಳೂ ಬೀಳಲಿ.  ಒಂದು ಕುದಿ ಬಂದಾಗ ಕೆಳಗಿಳಿಸಿ.   ಆಗಿಯೇ ಹೋಯ್ತು ಯುಗಾದಿಯ ಸಿಹಿ!

ಎಷ್ಟೇ ಲೆಕ್ಕಾಚಾರ ಹಾಕಿ ಮಾಡಿದ್ರೂನೂ ಪಾಯಸದೂಟ,  ಅದೂ ನಾವಿಬ್ಬರು ಇರೋದು,  ಉಳಿದೀತು ಅಂದ್ಬಿಟ್ಟು  ಪಕ್ಕದಲ್ಲೇ ಇರುವ ನಮ್ಮ ಮನೆಯಕ್ಕನಿಗೆ ಕೊಟ್ಟೆ,  ಅವಳೂ ತನ್ನ ಕಡ್ಲೆಬೇಳೆ ಪಾಯಸ ಕೊಟ್ಟಿದ್ರಲ್ಲಿ ಯುಗಾದಿ ಡಬಲ್ ಧಮಾಕಾ ಆಗ್ಹೋಯ್ತು! 



Saturday 2 April 2016

ಸಂಜೆಯ ಸತ್ಕಾರ




" ನೋಡೂ,  ನಾಡಿದ್ದು ಸಂಜೆ ನಾಲ್ಕಾರು ಪ್ರೆಂಡ್ಸ್ ಬರ್ತಿದಾರೆ,  ಏನಾದ್ರೂ ಆಗ್ಬೇಕಲ್ಲ..."
" ಅಯ್ಯೋ ಬಿಡಿ, ಅವಲಕ್ಕಿ ಸಜ್ಜಿಗೆ ಮಾಡಿದ್ರಾಯ್ತು,  ಬಾಳೆಹಣ್ಣು ಇದೆ.."
"ಹಾಗಂತೀಯಾ,  ಬೇಕರಿಯಿಂದ ಏನಾದ್ರೂ ತರಲಾ ?"
" ಬೇಕಿದ್ರೆ ತಂದಿಟ್ಕೊಳ್ಳಿ "
ಬೇಕರಿಯಿಂದ ನಮ್ಮೆಜಮಾನ್ರು ತಂದ ತಿಂಡಿಗಳೇನೇನಿವೆ ಎಂದು ತಪಾಸಿಸುವ ಉಸಾಬರಿಗೇ ನಾನು ಹೋಗಲಿಲ್ಲ.   ಪಟ್ಟಣದಿಂದ ಬರುವ ಅತಿಥಿಗಳಿಗೆ ನಮ್ಮ ಊರಿನ ಸಾಂಪ್ರದಾಯಿಕ ತಿಂಡಿಗಳೇ ಇಷ್ಟವಾದೀತು ಎಂಬ ಅನಿಸಿಕೆ ನನ್ನದಾಗಿತ್ತು.

ಮಧ್ಯಾಹ್ನದ ಅಡುಗೆಗೆ ತೆಂಗಿನಕಾಯಿ ತುರಿಯುತ್ತಿದ್ದಂತೆ ಅವಲಕ್ಕಿಗೂ, ಸಜ್ಜಿಗೆಗೂ ಕಾಯಿತುರಿ ತೆಗೆದಿಸಿದ್ದೂ ಆಯಿತು.
ಸಾಂಬಾರಿಗೆ ಅರೆಯುವ ಮೊದಲೇ ಅವಲಕ್ಕಿ ಅರಪ್ಪು (ಮಸಾಲೆ ) ಮಾಡಿಟ್ಕೊಳ್ಳೋಣ.
ಒಂದು ಹಿಡಿ ಕಾಯಿತುರಿ
2 ಚಮಚ ಮೆಣಸಿನ ಹುಡಿ
ಚಿಟಿಕೆ ಅರಸಿಣ
ಒಂದು ಚಮಚಾ ಕೊತ್ತಂಬ್ರಿ
ಕಾಲು ಚಮಚ ಜೀರಿಗೆ
ರುಚಿಗೆ ಉಪ್ಪು
ಇಷ್ಟೂ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ತಿರುವಿ ತೆಗೆದಿಟ್ಟೂ ಆಯ್ತು,  ನೀರು ಹಾಕುವಂತಿಲ್ಲ.
ಸಾಂಬಾರ್ ವಗ್ಗರಣೆ ಅವಲಕ್ಕಿ ಮಸಾಲೆಗೂ ಬಿದ್ದಿತು.
ಈ ಮಸಾಲೆಯನ್ನು ಸಂಜೆಯ ಚಹಾ ಹೊತ್ತಿನಲ್ಲಿ ಅವಲಕ್ಕಿಯೊಂದಿಗೆ ಮೊರೆಸುವುದು.


   


ಊಟವಾಗಿ ತುಸು ವಿರಾಮದ ವೇಳೆ,  ಹ್ಞಾ... ಚಹಾ ಮಾಡಲಿಕ್ಕೂ ಹಾಲು ಬೇಕಲ್ಲ !
" ಮಧೂ,  ಒಂದು ಲೀಟರು ಹಾಲು ತಂದಿಟ್ಟಿರು ತಿಳೀತಾ,  ಪ್ಯಾಕೆಟ್ ಹಾಲು ಬೇಡ,  ಮೂರು ಗಂಟೆಗೆ ಡೈರಿ ಬಾಗಿಲು ತೆಗಿಯುತ್ತೆ,  ಒಳ್ಳೆಯ ಊರ ಹಾಲು ಹಿಡ್ಕಂಡು ಬಾ.. "
ಅವನ ಹ್ಞೂಗುಟ್ಟುವಿಕೆಯಿಂದ ನಿಶ್ಚಿಂತೆ,  ಮಧ್ಯಾಹ್ನದ ಲಘು ನಿದ್ರೆ ತೆಗೆದು ಎದ್ದಾಯಿತು.

ಈಗ ಸಜ್ಜಿಗೆ ಮಾಡುವ ಸಮಯ.   ನೆಂಟರಿಷ್ಟರು ಬರ್ತಾರೆ ಅಂದ್ಬಿಟ್ಟು ಸಿಕ್ಕಾಪಟ್ಟೆ ಮಾಡಿಟ್ರೂ ಆಗದು,   ಯವುದಕ್ಕೂ ಒಂದು ಹದ ಹಾಳಿತ ಇದ್ರೇನೇ ಚೆನ್ನ.
ಎಂಟು ಜನರ ಅಂದಾಜು ಇಟ್ಕೊಂಡು ಒಂದು ಪಾವು ಸಜ್ಜಿಗೆ ಅಳೆಯಿರಿ.  ಚಿರೋಟಿ ರವೆ ಉತ್ತಮ,  ಬೇಗನೆ ಆಗುವಂಥದು.   ಚೆನ್ನಾಗಿ ಹುರಿಯುವ ಅಗತ್ಯ ಇಲ್ಲಿದೆ,  ಹುರಿಯದೇ ಹಾಗೇನೇ ಬಿಸಿ ನೀರು ಎರೆದಿರಾ,  ಅಂಟುಮುದ್ದೆಯಂತಾದೀತು.

ದಪ್ಪ ತಳದ ಬಾಣಲೆಗೆ ಒಂದೆರಡು ಚಮಚ ಎಣ್ಣೆ ಎರೆದು ಒಗ್ಗರಣೆ ಮಾಡಿಕೊಳ್ಳಿ.  ಕರಿಬೇವಿನೆಸಳು,  ಶುಂಠಿ,  ಹಸಿಮೆಣಸು ಚಿಕ್ಕದಾಗಿ ಹಚ್ಚಿಟ್ಟುಕೊಂಡಿದ್ದನ್ನು ಬಾಣಲೆಗೆ ಹಾಕಿ ಬಾಡಿಸಿ.  ಚಿಟಿಕೆ ಅರಸಿಣ ಬೀಳಲಿ.
ಒಂದು ಅಳತೆ ಚಿರೋಟಿ ರವೆಗೆ ಒಂದೂವರೆ ಅಳತೆ ನೀರು,  ಈ ಲೆಕ್ಕಾಚಾರದಲ್ಲಿ ನೀರು ಎರೆಯಿರಿ.   ರುಚಿಗೆ ಉಪ್ಪು,  ಸಿಹಿಗೆ ಸಕ್ಕರೆ ಈ ಹಂತದಲ್ಲಿ ಹಾಕತಕ್ಕದ್ದು.  ನೀರು ಕುದಿದಾಗ ಹುರಿದ ರವೆಯನ್ನು ಸುರುವಿ ಮುಚ್ಚಿ ಬೇಯಿಸಿ.  ಸುಮ್ಸುಮ್ನೇ ಸೌಟಾಡಿಸದಿರಿ.   ಬೇಗನೇ ಬೇಯುವ ಚಿರೋಟಿ ರವೆಗೆ ಮೇಲಿನಿಂದ ಘಮಘಮಿಸುವ ತುಪ್ಪ ಹಾಕದಿದ್ದರೆ ಹೇಗೆ ?    ಎರಡು ದೊಡ್ಡ ಚಮಚ ತುಪ್ಪ ಹಾಗೂ ಕಾಯಿತುರಿ ಹಾಕುವಲ್ಲಿಗೆ ಸಜ್ಜಿಗೆಯ ಅಲಂಕರಣ ಸಂಪೂರ್ಣವಾದಂತೆ ಎಂದು ತಿಳಿಯಿರಿ.  ಬಿಸಿ ಬಿಸಿಯಾಗಿ ತೆಗೆದಿರಿಸಿ.


                                         
  

 ಸಜ್ಜಿಗೆ ಮಾಡುವ ವಿಧಾನ ತಿಳಿದಾಯ್ತು,   ಇದೇ ಮಾದರಿಯಲ್ಲಿ ಶಿರಾ ಮಾಡ್ಬಿಡೋಣ.  ಇಲ್ಲಿ ಘಮಘಮಿಸುತ್ತಿರುವ  ತುಪ್ಪ  ಹಾಗೂ ಸಕ್ಕರೆ ಬೇಕಾಗುತ್ತವೆ.  ದ್ರಾಕ್ಷಿ,  ಗೋಡಂಬಿ, ಯಾಲಕ್ಕಿ ಇದ್ದ ಹಾಗೆ ಉಪಯೋಗಿಸುವುದು.

ಒಂದು ಪಾವು ಚಿರೋಟಿ ರವೆ ಹುರಿಯಿರಿ,  ಒಂದೂವರೆ ಪಾವು ನೀರು ಕುದಿಸಿರಿ,  ನೀರು ತುಸು ಹೆಚ್ಚಾದರೂ ಅಡ್ಡಿಯಿಲ್ಲ,  ಚೆನ್ನಾಗಿ ಬೇಯುವುದು ಅವಶ್ಯ.  ಹಾಲು ಎರೆದು ಬೇಯಿಸಿದಿರಾದರೆ ನಮ್ಮ ಈ ಸಿಹಿ ತಿನಿಸು ಕ್ಷೀರ ಎಂದು ಕರೆಯಲ್ಪಡುತ್ತದೆ,  ಅದೂ ನಮ್ಮೂರಿನ ಹವ್ಯಕ ಕನ್ನಡಿಗರಲ್ಲಿ.  ಕರ್ನಾಟಕದ ಇನ್ನಿತರ ಪ್ರದೇಶಗಳಲ್ಲಿ ಈ ಶಬ್ದ ಬಳಕೆಯಲ್ಲಿಲ್ಲ ಎಂದು ನನ್ನ ತಿಳುವಳಿಕೆ.

" ಹೌದೂ,  ಶಿರಾ ಹಾಗೂ ಕೇಸರೀಬಾತ್ ನಡುವೆ ವ್ಯತ್ಯಾಸವೇನು ?"
ಕೇಸರೀಬಾತ್ ನಲ್ಲಿ ಸಕ್ಕರೆಯು ರವೆಯ ದುಪ್ಪಟ್ಟು ಬೇಕಾಗುತ್ತದೆ,  ತುಪ್ಪವೂ ಜಾಸ್ತಿ.   ಶಿರಾ ಆದ್ರೆ ಹಂಗೇನಿಲ್ಲ,  " ಹಾಲಲ್ಲಾದರು ಹಾಕು,  ನೀರಲ್ಲಾದರೂ ಹಾಕು... ರಾಘವೇಂದ್ರ "  ಸಿನೇಮಾ ಹಾಡಿನ ಥರ.   ಸಿಹಿಯಾಗಲು ಬೇಕಾದಷ್ಟೇ ಸಕ್ಕರೆ ಸಾಕು.  1:1 ಅಳತೆಯಾದರಾಯಿತು.

ಬೆಂದಿತು,  ಬೇಕಿದ್ದ ಹಾಗೆ ಸಕ್ಕರೆ ಬೀಳಲಿ.   ಸಕ್ಕರೆ ಕರಗುತ್ತಾ ಬಂದಂತೆ,  ಸೌಟಾಡಿಸುತ್ತಾ ಇದ್ದ ಹಾಗೆ ಘಮಘಮಿಸುತ್ತಿರುವ  ತುಪ್ಪ ಎರೆದು ಬಿಡಿ,   ಗ್ಯಾಸ್ ಉರಿಯನ್ನೂ ನಿಯಂತ್ರಣದಲ್ಲಿರಿಸಿ.   ಬಾಣಲೆಯಿಂದ ಏಳುವ ಹಂತ ಬಂದೊಡನೆ ದ್ರಾಕ್ಷಿ,  ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿರಿ,  ಯಾಲಕ್ಕಿ ಪುಡಿ ಉದುರಿಸಿ.
ಅನಾನಸ್ ಇದ್ದಲ್ಲಿ ನೀರು ಹಾಲಿನ ಬದಲು ಹಣ್ಣಿನ ರಸವನ್ನೇ ಎರೆದಲ್ಲಿ ಅನಾನಸ್ ಶಿರಾ ಆಯ್ತು,  ಇದೇ ಥರ ಮಾವಿನಹಣ್ಣು  ಕೂಡಾ ಆಗುತ್ತದೆ.  ಕೃತಕ ಸುವಾಸಿತ ದ್ರವ್ಯಗಳಿಗಿಂತ ತಾಜಾತನಕ್ಕೇ ಮಹತ್ವ ನೀಡಿದರೆ ಆರೋಗ್ಯಕ್ಕೂ ಮನಸ್ಸಿಗೂ ಹಿತ.

ನಾನೂ ಅಡುಗೆ ಕಲಿಯುವ ಆರಂಭದ ಹಂತದಲ್ಲಿ ತುಪ್ಪ, ಸಕ್ರೆ ಹಾಕಿದ ಇಂತಹ ತಿಂಡಿಯನ್ನು ಮಾಡಿದ್ದಿದೆ,  ಆಗ ನನ್ನ ಮಾವ,  ಹೊಸರುಚಿಯ ಮೊದಲ ಗ್ರಾಹಕರೂ ಅವರೇ ಆಗಿದ್ದುದರಿಂದ  " ಏನೂ ಸೋಜೀ ಸ್ವೀಟು ಮಾಡಿದ್ದೀಯಾ ..." ಅನ್ನುತ್ತಾ ಅಡುಗೆ ಮನೆಗೆ ಬರುತ್ತಿದುದು ನೆನಪಾಯ್ತು ಈಗ.


ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ ಉತ್ಥಾನ, 2016, ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿತ.