Pages

Ads 468x60px

Saturday 20 July 2013

ಪಕ್ಷಿ ನೋಟ







ಹೊತ್ತ ಕಳೆಯುವ ಉದ್ಯೋಗವಾಗಿ,   ಅಂತರ್ಜಾಲ ಮಾಧ್ಯಮದ ತಿಳುವಳಿಕೆಯ ಸಲುವಾಗಿ,   ನನ್ನ ಪಾಡಿಗೆ ನಾನು ಬರೆಯಲು ಹಾಗೂ ಫೋಟೋ ಎಡಿಟಿಂಗ್ ಕಲಿಯಲು ಸಾಧ್ಯವಾಗಿದ್ದು iPad ಹಾಗೂ iPhone ಸಾಧನಗಳಿಂದ.   ಫೇಸ್ ಬುಕ್ ಮಾಧ್ಯಮ ಸ್ನೇಹಿತರ ಬಳಗವೇ ನನ್ನ ಸ್ಪೂರ್ತಿಚೇತನ.   ಹತ್ತು ಹಲವಾರು ಗ್ರೂಪುಗಳಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದ ಸ್ನೇಹಿತರ ಬಳಗ ದೊಡ್ಡದಿದೆ.

ಮಿಂಚುಬ್ಲಾಗ್ ಪುಟ ವೀಕ್ಷಣೆ 20,000 ದಾಟಿ ಮುನ್ನಡೆಯುತ್ತಿದೆ.   ಅಂತರ್ಜಾಲದ ಕನ್ನಡ ಓದುಗರಿಗೆ ಹೃತ್ಪೂರ್ವಕ ಕೃತಜ್ಞತೆಗಳು.   

Posted via DraftCraft app

Monday 15 July 2013

ಚಿಗುರೆಲೆಗಳ ತಂಬುಳಿ







ಮಳೆ ಬಿಟ್ಟಿತ್ತು,   ಬಿಸಿಲು ಬಂದಿತ್ತು.    ಅಡುಗೆಮನೆಯಿಂದ ಹೊರಗಿಣುಕದಿದ್ದರೆ ಹೇಗೆ ?    ಹಾಗೇ ತೋಟದೆಡೆಗೆ ನನ್ನ ಪಯಣ.   ತೋಟವೆಲ್ಲ ಹಚ್ಚ ಹಸಿರು,   ಎಲ್ಲಿ ಅಡಗಿದ್ದವು ಈ ಸಸ್ಯರಾಶಿ ?    ಚಿಗುರೊಡೆದ ಸಸ್ಯಗಳು,  ಅಂಬಟೆ ಮರದ ಅಕ್ಕಪಕ್ಕ ಹಲವು ಅಂಬಟೆ ಸಸಿಗಳು ಮೇಲೆದ್ದಿವೆ.   ಓ,  ಅಲ್ಲೋಂದು ಗೇರು ಸಸಿಯೂ ನಗುನಗುತ್ತಿದೆಯಲ್ಲ !  ನೆಟ್ಟು ನಾಲ್ಕಾರು ವರ್ಷವಾದರೂ ಫಲ ಕೊಡದ ರಾಜನೆಲ್ಲಿಕಾಯಿ ಗಿಡ ತುಂಬಾ ಗೆಜ್ಜೆ ಕಟ್ಟಿದಂತೆ ನೆಲ್ಲಿಕಾಯಿಗಳೂ...    ನೋಡುತ್ತ,  ನೋಡುತ್ತ ಕೈ ತಾನಾಗಿಯೇ ಗಿಡಗಳ ಚಿಗುರುಗಳನ್ನು ಚಿವುಟಿ ಮುಷ್ಠಿ ತುಂಬಾ ಹಿಡಿದುಕೊಂಡು,  ರಾಜನೆಲ್ಲಿಕಾಯಿ ಉಪ್ಪಿನಕಾಯಿ ಹಾಕುವ ಪಾಕವಿಧಾನ ಯಾವ ಅಡುಗೆ ಪುಸ್ತಕದಲ್ಲಿರಬಹುದೆಂಬ ಚಿಂತನೆಯೊಂದಿಗೆ ಮನೆಯೊಳಗೆ ಬಂದೆ. 






ಈ ಕುಡಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ,  ಒಂದು ಮೆಣಸು ಹಾಗೂ ಜೀರಿಗೆಯೊಂದಿಗೆ ಮೆತ್ತಗೆ ಬೇಯಿಸಿ ಆಯಿತು.   ಒಂದು ಕಡಿ ತೆಂಗಿನ ತುರಿಯೊಂದಿಗೆ ನುಣ್ಣಗೆ ಅರೆದು, ಸಿಹಿ ಮಜ್ಜಿಗೆ ಎರೆದು,  ಬೇಯಿಸಲು ಉಪಯೋಗಿಸಿದ ನೀರನ್ನೂ  ಎರೆದು ಒಗ್ಗರಣೆ ಕೊಡುವಲ್ಲಿಗೆ ತಂಬುಳಿ ಸಿದ್ಧವಾಯಿತು.   ಸಿಹಿ ಬೇಕಿದ್ದರೆ ಬೆಲ್ಲವನ್ನೂ ಹಾಕಿದರಾಯಿತು.   ಇದು ಒಂದು ಹೊತ್ತು ಮಾತ್ರ ಉಪಯೋಗಿಸಿ ಉಳಿದದ್ದನ್ನು ಚೆಲ್ಲುವಂತಹ ತಂಬುಳಿಯಲ್ಲ.   ಕುದಿಸಿಟ್ಟುಕೊಂಡು 2 -3  ದಿನ ಉಪಯೋಗಿಸುವಂತಹುದು.

ಹಲವು ಕುಡಿಗಳಿಂದ ತಯಾರಿಸಲ್ಪಡುವ ಈ ತಂಬುಳಿ ನಮ್ಮ ಆಡುನುಡಿಯಲ್ಲಿ ಹೊಲಕ್ಕೊಡಿ ತಂಬುಳಿ ಎಂದೇ ಹೆಸರಿಸಿಕೊಂಡಿದೆ. 






ಹೂಲಗದ್ದೆ,  ಗುಡ್ಡಗಾಡುಗಳು ಅಧಿಕವಾಗಿದ್ದಲ್ಲಿ ಇಂತಹ ಚಿಗುರೆಲೆಗಳನ್ನು ಸಂಗ್ರಹಿಸುವುದು ಸುಲಭ.   ಹಟ್ಟಿಯಲ್ಲಿ ಜಾನುವಾರುಗಳು ಇರುವಲ್ಲಿ,   ' ದನ ಮೇಯ್ದು ಬರಲೀ '  ಎಂದು ಮುಂಜಾನೆಯೇ ಹಾಲು ಕರೆದು,  ಅಕ್ಕಚ್ಚು ಕೊಟ್ಟು,   ' ಸಂಜೆ ಮನೆಗೆ ಬಾರಮ್ಮ ' ಎಂದು ಹೊರ ಬಿಟ್ಟರಾಯಿತು.   ಹಸುಗಳು ಮೇಯ್ದು ಬರುವಂತಹ ಗುಡ್ಡದ ಸಸ್ಯಗಳು ಔಷಧದ ಗಣಿಗಳಾಗಿರುತ್ತವೆ.   ಇಂತಹ ಹಸುವಿನ ಹಾಲು ಕೂಡಾ ಶ್ರೇಷ್ಠ ಗುಣವುಳ್ಳದ್ದಾಗಿದೆ ಎಂದೇ ತಿಳಿಯಿರಿ.    ' ಆಡು ಮುಟ್ಟದ ಸೊಪ್ಪಿಲ್ಲ '   ಎಂಬ ಮಾತು ಈಗ ಸಹಜವಾಗಿ ನೆನಪಿಗೆ  ಬಂದೀತು.   ಗಾಂಧೀ ತಾತ ಆಡಿನ ಹಾಲನ್ನೇ ಬಳಸುತ್ತಿದ್ದರೆಂಬುದನ್ನು ಮರೆಯದಿರೋಣ.    ಕೃತಕವಾಗಿ ಮೊಳಕೆ ಬರಿಸಿ ದವಸಧಾನ್ಯಗಳನ್ನು ಅಡುಗೆಯಲ್ಲಿ ಬಳಸುವುದಿಲ್ಲವೇ,  ಹಾಗೇನೇ ನೆಲದಲ್ಲಿ ಸಹಜವಾಗಿ ಚಿಗುರೊಡೆದ ಸಸ್ಯಗಳ ಕುಡಿ ಆರೋಗ್ಯಕ್ಕೆ ಅತ್ಯುತ್ತಮ ಸಂಜೀವಿನಿ.

ಪೇರಳೆ,  ಸೀತಾಫಲ,  ಮಾವು,  ಬೇವು,  ಗೇರು,  ಹಲಸು, ನೇರಳೆ,  ಪುನರ್ಪುಳಿ,  ದಾರೆಹುಳಿ, ಕುಂಟಲ, ಕುಟಜ, ಅಂಟುವಾಳ, ಶೀಗೆ   ದಡ್ಡಾಲ,  ನೆಕ್ಕರಿಕ,  ಚೇರೆ,  ತಗ್ಗಿ,  ಎಂಜಿರ  ಹೀಗೆ ಪರಿಚಿತ ಸಸ್ಯಗಳ ಪಟ್ಟಿ ಮಾಡಿಟ್ಟುಕೊಂಡಲ್ಲಿ ಸಂಗ್ರಹಣೆ ಸಾಧ್ಯ.
ಕಾಟ್ ಕಿಸ್ಕಾರ,  ತಗತೆ, ಚಕ್ರಮುನಿ,  ತುಳಸಿ,  ಲಿಂಬೆ ಜಾತಿಯ ಗಿಡಗಳು.
ಸಾಂಬ್ರಾಣಿ,  ಭೃಂಗರಾಜ,  ನೆಲನೆಲ್ಲಿಯಂತಹ ಚಿಕ್ಕಪುಟ್ಟ ಸಸ್ಯಗಳು.

ನನ್ನ ಪರಿಸರದಲ್ಲಿ ಲಭ್ಯವಿರುವ, ತಿಳಿದಿರುವ ಕೆಲವೊಂದು ಸಸ್ಯಗಳ ಹೆಸರುಗಳನ್ನು ಬರೆದಿರುತ್ತೇನೆ.    ಇನ್ನಷ್ಟು ಸಸ್ಯಪ್ರಕಾರಗಳನ್ನು ತಿಳಿದವರಿಂದ ಕೇಳಿ ತಿಳಿದುಕೊಳ್ಳುವುದು ಉತ್ತಮ. ಪ್ರಕೃತಿಯಲ್ಲಿ ಸಸ್ಯವೈವಿಧ್ಯಕ್ಕೆ ಕೊರತೆಯಿಲ್ಲ.   ನಮಗೆ ಚಿರಪರಿಚಿತವಿರುವ ಸಸ್ಯಗಳ ಕುಡಿಗಳನ್ನು ಆಯ್ದು ತರುವುದಷ್ಟೇ ಕೆಲಸ.  ನಾಲ್ಕು ಅಥವಾ ಐದು ಸಸ್ಯಗಳ ಕುಡಿಗಳಿದ್ದರೂ ಸಾಕು,   ತಂಬುಳಿ ಮಾಡುವ ರೂಢಿ ಇಟ್ಟುಕೊಳ್ಳೋಣ.

ಮರೆತ ಮಾತು:  ಒಂದೆಲಗವನ್ನು ಈ ತಂಬುಳಿಯಲ್ಲಿ ಸೇರಿಸುವಂತಿಲ್ಲ,   ಸೊಪ್ಪುಗಳನ್ನು ಬೇಯಿಸುವ ವರ್ಗದಲ್ಲಿ ಒಂದೆಲಗ ಇಲ್ಲ.

ಸಸ್ಯವರ್ಗಗಳ ಸಚಿತ್ರ ಮಾಹಿತಿಗಿಂತ ಸಸ್ಯಶಾಸ್ತ್ರೀಯ ಹೆಸರುಗಳನ್ನು ಬರೆಯುವುದೇ ಓದುಗರಿಗೆ ಉಪಯುಕ್ತವಾದೀತು ಎಂಬ ಅನಿಸಿಕೆಯಿಂದ ಒಂದು ಕಿರುಪಟ್ಟಿ ಇಲ್ಲಿ  ಬರೆದಿದ್ದೇನೆ.

ಅಂಬಟೆ,  ಅಮಟೆ    Indian Hog plum     Spondias pinnatam
ಅತ್ತಿ,  Ficus glomerata,  Ficus racemosa  ಔದುಂಬರ ವೃಕ್ಷ  ( ಸಂಸ್ಕೃತ )
ಅಂಟುವಾಳ,  Sapindus Trifoliatus
ಕಿಸ್ಕಾರ,  Ixora coccinea
ಕುಟಜ,   Hollarhena antidysenterica
ಭೃಂಗರಾಜ,   Eclipta alba
ಗೇರು,  cashew plant,   Anacardium occidentale
ಪೇರಳೆ,   Psidium guava
ತಗತೆ,   Cassia tora
ತಗ್ಗಿ,   cleodendrum viscosum/c infortunatum.
ದಡ್ಡಾಲ,   Careya arborea
 ದಾರೆಹುಳಿ,   Averrhoa carambola
ನೆಲನೆಲ್ಲಿ,   Phyllanthus Niruri 
ತುಳಸಿ,   Ocimum tenuiflorum
ಮಾವು,   Mangifera indica
ಶೀಗೆ,   Acacia concinna
ಪುನರ್ಪುಳಿ,   Garcinia indica
ಸಾಂಬ್ರಾಣಿ,    Plectranthus amboinicus
ಹೊನಗೊನ ಸೊಪ್ಪು,  Alternanthera sessilis
ಕಾಚಿಸೊಪ್ಪು,   Solanum nigrum
ಚಕ್ರಮುನಿ,    sauropus androgynus
ಆಡುಸೋಗೆ,   Adhatoda Vasica
ಸೀತಾಫಲ,  sugar apple,    Annona squamosa

Posted via DraftCraft app

Monday 8 July 2013

ರಾಗೀ ಚಪಾತಿಯೂ, ಸಾಂಬಾರ್ ಚಟ್ನಿಯೂ







ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ರಾಗಿ ಒಂದು ಸಿದ್ಧ ವಸ್ತು,   ಯಾವುದೇ ಹೊಸರುಚಿಗೆ ಸವಾಲ್ ಎಸೆಯುವಂತೆ ಓಡಿ ಓಡಿ ಬರುವಂತಹದು.   ಮೊನ್ನೆ ಏನಾಯ್ತು,  ಚಪಾತಿಗೆ ಹಿಟ್ಟು ಕಲಸೋಣ ಅಂದ್ಕೊಂಡು ಸಿದ್ಧತೆಗೆ ತೊಡಗಿದೆ.   ಒಂದು ಕಪ್ ನೀರು,  ರುಚಿಗೆ ಉಪ್ಪು, ಎರಡು ಕಪ್ ಗೋಧಿ ಹುಡಿ.   ಇನ್ನು ಕಲಸುವುದೊಂದೇ ಬಾಕಿ,   " ಹಾಕೋಣ ರಾಗಿ " ಅನ್ನಿಸ್ತು.   ಅಳೆದೂ ಸುರಿದೂ  ನಾಲ್ಕು ಚಮಚಾ ರಾಗಿ ಹುಡಿ ಸೇರಿಸಿ ಹಿಟ್ಟು ಕಲಸಿಟ್ಟು,  ಮತ್ತೊಂದರ್ಧ ಗಂಟೆ ಬಿಟ್ಟು ಚಪಾತಿ ಲಟ್ಟಿಸಿ ಆಯ್ತು.   

 ಚಪಾತಿಗೊಂದು ಕೂಟು ಆಗ್ಬೇಡ್ವೇ,   ಅತಿ ವೇಗವಾಗಿ ಮಾಡಬಹುದಾದ ಈ ರಸಂ ನನ್ನಮ್ಮ ಹೇಳಿಕೊಟ್ಟಿದ್ದು.   ಅಮ್ಮಂಗೆ ಹೇಳಿಕೊಟ್ಟಿದ್ದು ಪಕ್ಕದ ಮನೆಯಾಕೆ,  ಆಕೆ ಗೌಡ ಸಾರಸ್ವತ ಮಹಿಳೆ.    ಹಾಗಾಗಿ ಇದನ್ನು ಗೋವಾ ಕೊಂಕಣಿಗರ ಸ್ಪೆಶಲ್ ಎಂದು ಕರೆಯಲಡ್ಡಿಯಿಲ್ಲ.

ಕತ್ತರಿಸಿದ ಟೊಮ್ಯಾಟೋ,  ಈರುಳ್ಳಿ.   ಎರಡೆರಡು ಸಾಕು,  ಚಿಕ್ಕದಾಗಿ ಕತ್ತರಿಸಿ.
2 -3 ಚಮಚಾ ಕಡ್ಲೇ ಹುಡಿ.
2  ಚಮಚಾ ಸಾಂಬಾರು ಹುಡಿ. 
2  ಚಮಚಾ ಸಕ್ಕರೆ.
ರುಚಿಗೆ ಉಪ್ಪು.
ಒಗ್ಗರಣೆ ಸಾಮಗ್ರಿಗಳು:   ಸಾಸಿವೆ,  ಉದ್ದಿನಬೇಳೆ,  ಕಡ್ಲೆ ಬೇಳೆ,  ಒಣಮೆಣಸು,  ಕರಿಬೇವು.
2 ಚಮಚ ಎಣ್ಣೆ ಅಥವಾ ತುಪ್ಪ.

ಮೊದಲು ಕಡ್ಲೆಹಿಟ್ಟನ್ನು ಒಂದು ಕಪ್ ನೀರಿನಲ್ಲಿ ಗಂಟುಕಟ್ಟದಂತೆ ಕಲಸಿ ಇಡಬೇಕು.
ಬಾಣಲೆಯಲ್ಲಿ ಒಗ್ಗರಣೆ ಸಿಡಿಯುತ್ತಿದ್ದಂತೆ,  ಕರಿಬೇವು,  ಈರುಳ್ಳಿ,  ಟೊಮ್ಯಾಟೋ ಸೇರಿಸಿ,  ಬಾಡಿಸಿಕೊಳ್ಳಿ.  ಉಪ್ಪು ಹಾಕಿದ್ರೆ ಬೇಗನೆ ಬೆಂದೀತು. 
ಬೆಂದ ನಂತರ ಕಡ್ಲೆಹಿಟ್ಟಿನ ನೀರನ್ನು ಎರೆದು ಬಿಡಿ.

ಕುದಿಯುತ್ತಿದ್ದಂತೆ ಹಿಟ್ಟು ದಪ್ಪಗಾಯಿತೇ... ವಿಪರೀತ ದಪ್ಪ ಆಗಬಾರದು,   ಅನ್ನದ ಗಂಜಿಯ ಸಾಂದ್ರತೆ ಇದ್ದರೆ ಸಾಕು.   ನೀರು ಬೇಕಿದ್ದರೆ ಎರೆದು,   ಸಾಂಬಾರು ಹುಡಿ,  ಸಕ್ಕರೆ ಹಾಕಿ,  ಕುದಿಸಿ.  ನಮ್ಮ ಸಾಂಬಾರ್ ಚಟ್ನಿ ಸಿದ್ಧ.   ಬೇಕಿದ್ದರೆ ಕೊತ್ತಂಬರಿ ಸೊಪ್ಪು ಉದುರಿಸಿ.

ಇದನ್ನು ಚಪಾತಿಗೆ ಮಾತ್ರವಲ್ಲದೆ ದೋಸೆ,  ಇಡ್ಲಿ,  ಅನ್ನದೊಂದಿಗೂ ಬಳಸಬಹುದು.

ಈ ರಾಗಿ ಚಪಾತಿ ಹಿಟ್ಟು ಕಲಸುವಾಗ ನಾನು ಎಣ್ಣೆ ಅಥವಾ ತುಪ್ಪ,  ಬಾಳೆಹಣ್ಣು ಅಥವಾ ಇನ್ಯಾವುದೇ ಮೃದುತ್ವ ಕೊಡುವಂತಹ ಸಾಮಗ್ರಿಗಳನ್ನು ಹಾಕಿಲ್ಲ,  ರಾತ್ರಿಯೇ ಕಲಸಿ ಇಡಲೂ ಇಲ್ಲ.   ಆದರೂ ಚಪಾತಿ ಮೃದುವಾಗಿ ಬಂದಿದೆ.   ಚೆನ್ನಾಗಿದೆ ಅಂದ್ಕೂಂಡ್ಬಿಟ್ಟು ಹೆಚ್ಚು ರಾಗಿ ಹಾಕಬೇಡಿ,  ಚಪಾತಿ ಕಪ್ಪಗಾದೀತು.



Posted via DraftCraft app

Monday 1 July 2013

ಅಜ್ಜನ ಮೇಲೆ ಶಾಯಿಯ ಕಲೆ...ಛೆ, ಛೆ, ಏನಾಗ್ಹೋಯ್ತು...








ನಾವು ಮಕ್ಕಳೆಲ್ಲ ಮನೆಯ ಗೇಟಿನೆದುರು ಕಾದು ನಿಂತಿದ್ದೆವು. ಬಲಗಡೆಯ ರಸ್ತೆಯತ್ತಲೇ ನೋಟ. ಮನೆಯ ಎದುರು ಗಜದೂರದಲ್ಲಿ ಸರ್ಕಾರೀ ಆಸ್ಪತ್ರೆ. ಅದರ ಮುಂದುಗಡೆ ಎಲ್ಲಾ ಬಸ್ಸುಗಳೂ ನಿಲ್ಲೂದು. ಇನ್ನೇನು ಶಂಕರವಿಠ್ಠಲ್ ಬಸ್ಸು ವಿಟ್ಲದಿಂದ ಕಾಸರಗೋಡು ತಲಪಲಿದೆ, ನಮ್ಮಜ್ಜ ಬಸ್ಸಿನಿಂದ ಇಳಿಯಲಿದ್ದಾರೆ. ಶಾಲೆಯಿಂದ ಬಂದು, ಕಾಫೀ ತಿಂಡಿ ಮುಗಿಸ್ಕೊಂಡು ಶಿಸ್ತಿನ ಸಿಪಾಯಿಗಳಂತೆ, ದ್ವಾರಪಾಲಕರಂತೆ ನಿಂತ ನಮ್ಮ ನಿರೀಕ್ಷೆಯಂತೆ ಬಸ್ಸು ಬಂದಿತು. ಆಸ್ಪತ್ರೆ ಎದುರುಗಡೆ ನಿಂತಿತು. ಅಜ್ಜ ಇಳಿದರು. " ಹೋ.... ಅಜ್ಜ ಬಂದ್ರು " ಕಿರಿಯ ತಮ್ಮ ರಂಗನಾಥ್ ಒಳಗೋಡಿದ, ಸುದ್ದಿವಾಹಕನಾಗಿ ಅಮ್ಮನ ಬಳಿಗೆ.

ನಾಲ್ಕು ದಿನಗಳ ಹಿಂದೆ ಬಂದಿದ್ದ ಪೋಸ್ಟ್ ಕಾರ್ಡ್, ಅದನ್ನು ಅಪ್ಪನೇ ಓದಬೇಕಾಗಿತ್ತು. ಕುಕ್ಕಿಲ ಕೃಷ್ಣ ಭಟ್ಟರ ಮೋಡಿ ಅಕ್ಷರಗಳನ್ನು ಓದುತ್ತಿದ್ದದ್ದು ಅಪ್ಪನೇ. ಅಮ್ಮನೂ ಸಂಭ್ರಮದಿಂದ ಓಡಾಡಿಕೊಂಡಿದ್ದಳು. ಪತ್ರದಲ್ಲಿ ಬರೆದಿದ್ದೂ ಅಷ್ಟೇ, ' ಇಂಥಾ ದಿನ, ಇಂತಹುದೇ ಬಸ್ಸಿನಲ್ಲಿ ಬರಲಿದ್ದೇನೆ '......ಆಗ ಇದ್ದಿದ್ದು ಒಂದೇ ಬಸ್ಸು.

ಶ್ವೇತ ವಸನಧಾರಿ, ತಲೆಯಲ್ಲಿ ಗಾಂಧೀ ಟೋಪಿ, ಹೆಗಲಲ್ಲಿ ಚೀಲ, ತುಂಡುತೋಳಿನ ಕರಿಕೋಟು ಧರಿಸಿದ ಅಜ್ಜ ಬಸ್ಸಿನಿಂದಿಳಿಯುತ್ತಿದ್ದ ಹಾಗೆ ಮನೆ ಗೇಟಿನೆದುರು ಮಕ್ಕಳ ಸಂತೆ ನೆರೆದಿದ್ದು ಕಂಡು ಹಸನ್ಮುಖರಾಗಿ ಹೆಜ್ಜೆ ಹಾಕಿದರು.

ಅಜ್ಜನ ಕೈಚೀಲವೂ ಸಾಕಷ್ಟು ತೂಕಭರಿತವಾಗಿದ್ದನ್ನು ಕಂಡು ನಮಗೂ ಆನಂದ, ಏನಿರಬಹುದೆಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಾ, ಮೌನವಾಗಿಯೇ ಹಿಂಬಾಲಿಸಿ ಎಲ್ಲರೂ ಮನೆಯೊಳಗೆ ಬಂದೆವು. ಚೀಲದಿಂದ ನೀಲಂ ಮಾವಿನಹಣ್ಣಗಳು ಹೊರಬಿದ್ದವು.

" ನಾನೇ ತುಂಡು ಮಾಡಿ ಕೊಡ್ತೇನೆ, ಅಲ್ಲಿರ್ಲಿ " ಅಜ್ಜನ ಅರ್ಡ.

" ಈಗಲೇ ಅಜ್ಜಂಗೆ ಉಪದ್ರ ಕೊಡ್ಬೇಡಿ, ಕಾಫೀ ತಿಂಡಿ ಆಗ್ಲೀ " ಅಮ್ಮನ ಮಿಂಚುವಾಣಿ ಅಡುಗೆಮನೆಯಿಂದ ತೇಲಿ ಬಂದಿತು.

" ಮಿಂಚೂ, ರಾತ್ರೀಗೆ ಏನಡಿಗೆ ಮಾಡ್ತೀಯ " ಅಜ್ಜನ ಧ್ವನಿ.

ಕುಕ್ಕಿಲದ ಮನೆಸುದ್ದಿ, ಅತ್ತೆಸೊಸೆಯರ ತಾಕಲಾಟ, ನೆರೆಕರೆಯವರ ಹಕೀಕತ್ತು, ಗೇಣಿಗಿದ್ದವರ ಡೌಲು, ಇತ್ಯಾದಿ ಸಮಾಚಾರಗಳೆಲ್ಲ ಅಮ್ಮನ ಮುಂದೆ.

ಅಜ್ಜ ಕುಕ್ಕಿಲ ಕೃಷ್ಣ ಭಟ್ಟರು ಬಹು ಶ್ರುತ ವಿದ್ವಾಂಸರು ಮಾತ್ರವಲ್ಲದೆ ದೊಡ್ಡ ಜಮೀನ್ದಾರರಾಗಿದ್ದುಕೊಂಡು, ಸ್ವತಃ ಕೃಷಿ ಪಂಡಿತರು. ಅವರೇ ನೆಟ್ಟ ಮಾವಿನ ಮರದ ಹಣ್ಣುಗಳನ್ನು ನಾವೆಲ್ಲ ತಿನ್ನದಿದ್ದರೆ ಹೇಗೆ ?

ಕತ್ತಲಾಗುತ್ತಿದ್ದಂತೆ ಅಜ್ಜ " ಚೆಸ್ ಬೋರ್ಡ್ ತಾ " ಎಂದರು. ರಂಗನಾಥ ಅದಕ್ಕಾಗಿಯೇ ಕಾದಿದ್ದವನಂತೆ ಬೋರ್ಡ್ ಬಿಡಿಸಿ, ಕಾಯಿಗಳನ್ನು ಜೋಡಿಸಿ ಅಜ್ಜನ ಮುಂದೆ ಕುಳಿತ. ಆಯ್ತು, ಇನ್ನು ಇಹಲೋಕದ ಪರಿವೆಯೇ ಇಲ್ಲದೆ ಅಜ್ಜ ಮೊಮ್ಮಗ ಆಡುತ್ತಿರುತ್ತಾರೆ. ನಾನೂ ಮೆಲ್ಲನೆದ್ದು ಬಂದು ಡ್ರಾಯಿಂಗ್ ಶೀಟ್ ಹರಿದು ತಂದು ಪೆನ್ಸಿಲ್ ಹಿಡಿದು ಅಲ್ಲೇ ಒಂದು ಕುರ್ಚಿ ಎಳೆದು ಕುಳಿತೆ. ಅಜ್ಜನೂ ಗಮನಿಸಿದರು. ನನ್ನ ಪಾಡಿಗೆ ಸುಮ್ಮನೆ ಗೆರೆಗಳನ್ನು ಎಳೆಯುತ್ತಾ ಬಂದೆ. ಸೊಳ್ಳೆ ಕಚ್ಚುತ್ತೇಂತ ಅಜ್ಜ ಒಂದು ಬೈರಾಸನ್ನು ತಲೆಗೆ ಎಳೆದು ಮುಸುಕು ಹಾಕಿಕೊಂಡಿದ್ದರು. ಒಂದೇ ಭಂಗಿಯಲ್ಲಿ ಚೆಸ್ ಬೋರ್ಡ್ ಕಡೆ ದೃಷ್ಟಿ ನೆಟ್ಟಿದ್ದ ಚಿತ್ರಣ ನನ್ನ ಪೆನ್ಸಿಲ್ ಸ್ಕೆಚ್ ನಲ್ಲಿ ದಾಖಲಾಯಿತು. ಇವೆಲ್ಲ ನಡೆದು ಸುಮಾರು ನಲ್ವತ್ತು ವರ್ಷಗಳೇ ಕಳೆದಿವೆ. ಆ ಚಿತ್ರ ಬಿಡಿಸಿದ ಕಾಗದದ ತುಂಡು ಈಗಲೂ ಇದೆ.


<><><> <><><> <><><>


ಕಂಪ್ಯೂಟರ್ ಹಾಗೂ ಟೀವಿ ತಾಂತ್ರಿಕತೆಯಲ್ಲಿ ಏನೇ ಹೊಸ ಆವಿಷ್ಕಾರ ಬಂದರೂ ನಮ್ಮ ಮನೆಗೆ ಬಂದೇ ಬರುತ್ತದೆ ಎಂದು ಈ ಹಿಂದೆಯೇ ಬರೆದಿದ್ದೇನೆ. ಹಾಗೇನೇ ಐಫೋನ್ ಕೂಡಾ ಬಂದಿತು. ಆ ನಂತರದ್ದು ಆಪಲ್ ಟಿವಿ. ಇದೂಂದು ಪುಟ್ಟ ಪೆಟ್ಟಿಗೆ. ಆ್ಯಪಲ್ ಟಿವಿಯ ವಿಶೇಷತೆಯೆಂದರೆ ಐಫೋನ್, ಐಪ್ಯಾಡ್ ನಿಂದ ವಿಡಿಯೋವನ್ನು ಟಿವಿಯಲ್ಲಿ ಕಾಣುವಂತೆ ಮಾಡಬಹುದು. ಕಂಪ್ಯೂಟರ್ ಇದ್ದರೆ ಅದರಲ್ಲಿ ಪ್ಲೇ ಮಾಡಿದ ವಿಡಿಯೋ ಅಥವಾ ಚಲನಚಿತ್ರವನ್ನು ಟಿವಿಯಲ್ಲಿ ನೋಡಬಹುದು. ಇದು ಕೂಡಾ ಭಾರತೀಯ ಮಾರುಕಟ್ಟೆಗೆ ಬರುವ ಮೊದಲೇ ನಮ್ಮ ಹಿರಣ್ಯಕ್ಕೆ ಬಂದಾಗಿದೆ. ಆ ಸಮಯದಲ್ಲಿ ನಮ್ಮ ಸೋದರಳಿಯ ಕೃಷ್ಣಕುಮಾರ್ ಕೆನಡಾದಲ್ಲಿದ್ದ, ಅವನು ಊರಿಗೆ ಬರಬೇಕಾದರೆ ಈ ಬಾಕ್ಸ್ ಕೂಡಾ ನಮ್ಮವರ ಅಣತಿಯಂತೆ ಬಂದಿದೆ.

ಐಫೋನ್ ಯಾವಾಗ ಮನೆಗೆ ಬಂದಿತೋ, ಆಗಲೇ ನಮ್ಮವರು ಹೇಳಿದ್ದು,

" ನೋಡು, ನಿನ್ನ ಹಳೇ ಚಿತ್ರ ಎಲ್ಲ ತಂದ್ಕೊಡು, ಫೋಟೋ ತಗೆದಿಟ್ಕೊಂಡ್ರೆ ಯಾವತ್ತಿಗೂ ಉಳಿಯುತ್ತೆ, ಇಲ್ಲಾಂದ್ರೆ ಹಾಳಾಗೋದೇ..."

ಇರಬಹುದೇನೋ, ಚಿತ್ರಗಳ ಫೈಲ್ ಬಿಡಿಸಿ, ಒಂದೊಂದಾಗಿ ಇವರೆದುರು ಇಡುತ್ತಾ ಬಂದೆ. ಇವರೂ ಕ್ಲಿಕ್ಕಿಸುತ್ತಾ ಹೋದರು....

" ಅರೆ, ಇದೇನಿದು ನನ್ನಜ್ಜನ ಚಿತ್ರ, ಯಾರು ಶಾಯಿ ಚೆಲ್ಲಿದ್ದು.." ಬೇಜಾರಾಗಿ ಬಿಟ್ಟಿತು.

ಇದನ್ನು ಅಳಿಸಲು ಸಾಧ್ಯವೇ, ಅದೂ ಈ ಹರುಕುಮುರುಕು ಕಾಗದದಿಂದ.

" ಛಿ, ಏನಾಗ್ಹೋಯ್ತು....ಎಲ್ಲ ಮಕ್ಕಳ ಕೆಲಸ, ಆಗಾಗ ತೆಗ್ದು ನೋಡೂದು, ಹಾಳು ಮಾಡೂದು ..."

" ಅದು ಇರ್ಲಿ ಹಾಗೇ, ಅದನ್ನೆಲ್ಲ ಸರಿ ಮಾಡೂದು ಸುಲಭ. Picture apps ಬೇಕಾದಷ್ಟು ಇವೆ. ನಿಧಾನವಾಗಿ ಕಲಿ. ಈ ಫೋಟೋ ಎಲ್ಲಾನೂ Dropbox ನಲ್ಲಿ ಹಾಕಿಡೂದು. ಬೇಕಾದಾಗ ನೋಡಿದ್ರಾಯ್ತು...ಎಲ್ಲಾನೂ ಕಲೀ..."







ಅಜ್ಜ ಕುಕ್ಕಿಲ ಕೃಷ್ಣ ಭಟ್ಟರ ಮಡಿಲಲ್ಲೇ ಆಡಿ ದೊಡ್ಡವಳಾದವಳಾದರೂ ಅವರ ಬಗ್ಗೆ ಬರೆಯುವ ಶಕ್ತಿ ನನಗೆ ಇಲ್ಲ. ಆದರೂ ಇಲ್ಲಿ ಸ್ವಲ್ಪವಾದರೂ ಬರೆಯಲೇ ಬೇಕಾಗಿದೆ. ಬಹು ಭಾಷಾ ಪಂಡಿತರಾದ ಅವರ ಕೊನೆಯ ಪ್ರಕಟಿತ ಕೃತಿ - ದ್ರಾವಿಡ ಛಂದಸ್ಸು, ಇದು ಅವರ ಮರಣಾನಂತರ ಶತಾವಧಾನಿ ಡಾ.ಅರ್. ಗಣೇಶರ ಸಂಪಾದಕತ್ವದಲ್ಲಿ ಪ್ರಕಟಿತವಾಯಿತು. ಸಂಗೀತ ಹಾಗೂ ನೃತ್ಯ ಶಾಸ್ತ್ರಗಳ ಆಳವಾದ ಅಧ್ಯಯನ ಹಾಗೂ ಜ್ಞಾನದಿಂದ ಯಕ್ಷಗಾನದ ಶಾಸ್ತ್ರೀಯತೆಯನ್ನು ಪ್ರಕಟಪಡಿಸಿದವರೂ, ಪಾರ್ತಿಸುಬ್ಬನ ಯಕ್ಷಗಾನಗಳು - ಕೃತಿಯ ಸಂಪಾದನೆ ಕುಕ್ಕಿಲರ ಸಂಶೋಧನಾ ಪ್ರವೃತ್ತಿಗೆ ಸಾಕ್ಷಿಯಾಗಿವೆ. ಇದಲ್ಲದೆ ಭಾರತೀಯ ಸಂಗೀತ ಶಾಸ್ತ್ರ, ಶಿಲಪ್ಪದಿಕಾರಂ ( ತಮಿಳು ಕಾವ್ಯದ ಅನುವಾದ ), ನಾಗವರ್ಮನ ಛಂದೋಂಬುಧಿ ( ಸಂಪಾದಿತ ). 1975ರಲ್ಲೇ ಅವರು ಬರವಣಿಗೆಯನ್ನು ನಿಲ್ಲಿಸಿದ್ದರು, ವಿಟ್ಲದ ಸಮೀಪವಿರುವ ಕುಕ್ಕಿಲದ ಸ್ವಗೃಹದಲ್ಲಿ ವಿಶ್ರಾಂತ ಜೀವನ ನಡೆಸಿದವರು. 1960 -70ರ ದಶಕದಲ್ಲಿ ಮೈಸೂರಿನಲ್ಲಿ ವಾಸವಾಗಿದ್ದ ಕುಕ್ಕಿಲ ಕೃಷ್ಣಭಟ್ಟರು ಮಾನಸಗಂಗೋತ್ರಿಯ ಸಂಶೋಧಕ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿದ್ದರು. ಪಂಡಿತಶ್ರೇಷ್ಠರಾದ ಸೇಡಿಯಾಪು ಕೃಷ್ಣ ಭಟ್ಟರು ಹಾಗೂ ನನ್ನಜ್ಜ ಬಾಲ್ಯ ಸ್ನೇಹಿತರು. ಇವರಿಬ್ಬರ ಅಜ್ಜನಮನೆ ಬಡೆಕ್ಕಿಲ ಆಗಿದ್ದುದರಿಂದ ಸಂಬಂಧಿಕರೂ ಆಗಿದ್ದರು.

ಶಾಯಿಕಲೆಯನ್ನು ಅಳಿಸಿದಾಗ, ಇಷ್ಟು ದಿನವೂ photo apps ಗಳೊಂದಿಗೆ ಏನೇನೋ ಬೆರಳ ತುದಿಯ ಕೈಚಳಕಗಳ ಪ್ರಯೋಗಗಳನ್ನು ಮಾಡುತ್ತಾ ಇದ್ದಿದ್ದು ಸಾರ್ಥಕವಾಯ್ತು ಅಂತ ಅನ್ನಿಸದಿರಲಿಲ್ಲ.



Posted via DraftCraft app