Pages

Ads 468x60px

Friday 27 November 2015

ಖರ್ಜೂರದ ದೋಸೆ





ಮುಂಜಾನೆಗೊಂದು ತಿಂಡಿ ತಿಂದಾಯ್ತು.  ಆಗಲೇ  " ನಾಳೆಗೇನು ?" ಎಂದು ತೀರ್ಮಾನ ಆಗಲೇಬೇಕು.  ಉದ್ದಿನ ದೋಸೆ ಎರೆಯಲೋ,  ಚಪಾತಿ ಲಟ್ಟಿಸಲೋ ಎಂಬ ಘನಯೋಚನೆಯಲ್ಲಿ ತೊಡಗಿದ್ದಂತೆ ನೇತಾಡುತ್ತಿದ್ದ ಬಾಳೆಗೊನೆ ಕಣ್ಣಿಗೆ ಬಿತ್ತು.

" ಹ್ಞ, ನಾಳೆಗೆ ಇದೆಲ್ಲ ಕಪ್ಪಗಾಗಿ ಹಾಳಾಗೋದೇ,  ಇವತ್ತೇ ದೋಸೆಹಿಟ್ಟಿನೊಂದಿಗೆ ಅರೆದಿಟ್ಟರೆ ನಾಳೆ ಬ್ರೆಡ್ ನಂತಹ ಬಾಳೆಹಣ್ಣು ದೋಸೆ ತಿನ್ನಬಹುದು "  ಅಂದುಕೊಳ್ಳುತ್ತಿದ್ದಂತೆ 2 ಪಾವು ಬೆಳ್ತಿಗೆ ಅಕ್ಕಿ ನೀರಿಗೆ ಬಿದ್ದಿತು.   ಒಂದು ಹಿಡಿ ಉದ್ದಿನಬೇಳೆ,  2 ಪುಟ್ಟ ಚಮಚೆ ಮೆಂತೆ ಇಲ್ಲದಿದ್ದರಾದೀತೇ,  ಸಂಜೆ ವೇಳೆ  ಅರೆದರಾಯಿತು.

ಹತ್ತು ಗಂಟೆಯ ಚಹಾದೊಂದಿಗೆ ನಮ್ಮೆಜಮಾನ್ರು  " ಬಾಳೆಹಣ್ಣು ನಾಳೆ ಹಾಳಾದೀತು ". ಅನ್ನುತ್ತಾ ಎರಡು ಹಣ್ಣು ಸುಲಿದು ತಿಂದರು.

 " ಹೌದಲ್ವೇ "  ಅನ್ನುತ್ತಾ ನಾನೂ ತಿಂದಾಯ್ತು.

ಅಂತೂ ನಾನು ಅರೆಯಲು ಹೊರಟಾಗ ಬಾಳೆಗೊನೆ ಖಾಲಿಯಾಗಿತ್ತು.  ದೋಸೆಯ ಲೆಕ್ಕಾಚಾರ ತಲೆಕೆಳಗು ಆಗ್ಹೋಯ್ತಲ್ಲ  ಎಂಬ ಚಿಂತೆ ಕಾಡಿತು.  ಬಾಳೆಹಣ್ಣು ಹಾಕೋದಿದೆ,  ಉದ್ದು ಕಾಟಾಚಾರಕ್ಕಷ್ಟೇ ಹಾಕಿದ್ದು,  ದೋಸೆ ರಣಕಲ್ಲಿನಂತಾದೀತು,  ಇದಕ್ಕೇನು ಪರಿಹಾರ ಕಲ್ಪಿಸಲಿ ಎಂಬ ಘನಚಿಂತನೆ,  ಅಡುಗೆಮನೆಯ ಡಬ್ಬಗಳು  ಬಾಯ್ಬಿಟ್ಟು  ಖರ್ಜೂರದ ಪ್ಯಾಕೆಟ್ಟು ಸಿಗುವಲ್ಲಿಗೆ ಸುಖಾಂತ್ಯಗೊಂಡಿತು.

" ಆಹಾ...!"   ಖರ್ಜೂರದ ಪ್ಯಾಕೆಟ್ಟು ಬಿಡಿಸಲ್ಪಟ್ಟಿತು.  ಬೀಜಗಳನ್ನು ಹೊರದಬ್ಬಿ,  ಲೋಟ ತುಂಬಿತೇ,   ಇನ್ನೇಕೆ ತಡ,  ಅಕ್ಕಿ,  ಉದ್ದು,  ಮೆಂತೆಗಳೊಡಗೂಡಿ ಖರ್ಜೂರವೂ ನುಣ್ಣಗೆ ಅರೆಯಲ್ಪಟ್ಟಿತು.   ಹಿಟ್ಟಿಗೆ ಉಪ್ಪು ಬೆರೆಸಿ ಸುಖವಾಗಿ ಮಲಗುವಂತಾಯಿತು. 

ಬೆಳಗು ಆಯಿತು, ದೋಸೆ ಎರೆಯುವ ಮೊದಲಾಗಿ ಚಟ್ಣಿ ಆಗ್ಬೇಕಾಗಿದೆ.  ಮಾಮೂಲಿ ನೀರುಳ್ಳಿ ಚಟ್ಣಿ ಒಂದು ಕಡಿ ಕಾಯಿತುರಿಯಲ್ಲಿ ತಯಾರಾಯಿತು.
ದೋಸೆಯೂ ಸಿದ್ಧವಾಯಿತು.
ಫಿಲ್ಟರ್ ಕಾಫಿಯೊಂದಿಗೆ ದೋಸೆ ಉದರಕ್ಕಿಳಿಯಿತು.

ಹ್ಞಾ,  " ಖರ್ಜೂರದ ಪಾಯಸ ಮಾಡಮ್ಮ..."  ಖರ್ಜೂರದ ಪ್ಯಾಕೆಟ್ ಬರೋ ಹಾಗೆ ಮಾಡಿದ್ದು ನನ್ಮಗಳು.   ಈಗ ದೋಸೆ ಆಯ್ತು.






ಚಿಪ್ಪಣಿ:  28/11/2015 ರಂದು ಸೇರಿಸಿದ್ದು.

ಖರ್ಜೂರದ ದೋಸೆಯನ್ನು ಬರೆದು,  ಚಿತ್ರವನ್ನೂ ಕಡತದಲ್ಲಿ ಹಡುಕಿ ತೆಗೆದು,  ಸಿದ್ಧಪಡಿಸಿ ಬ್ಲಾಗ್ ಗೇರಿಸಿದ್ದು ನಿನ್ನೆ ಸಂಜೆ.   ಈಗಲೂ ಬಾಳೆ ಹಣ್ಣು ಇದೆ,   " ಮಾಡೋಣ "  ಅಂದ್ಬಿಟ್ಟು ಮೇಲೆ ಬರೆದ ಅಳತೆಯಲ್ಲಿ ಬಾಳೆ ಹಣ್ಣು ದೋಸೆ ಸಿದ್ಧವಾಯಿತು.  ಉದ್ದು ಕಡಿಮೆ ಹಾಕಿದರೂ ದೋಸೆಯ ರುಚಿಗೇನೂ ಕೊರತೆಯಿಲ್ಲ.   ಬಾಳೆ ಹಣ್ಣಿನಿಂದಾಗಿ ಸೊಗಸಾದ ಹೊಂಬಣ್ಣವೂ ಬಂದಿತು.   ಇದೆಯೆಂದು ವಿಪರೀತ ಹಣ್ಣುಗಳನ್ನು ಹಾಕದಿರಿ,  ದೋಸೆಯನ್ನು ಮೇಲೆಬ್ಬಿಸಲು ಕಷ್ಟವಾದೀತು.   " ಬಾಳೆ ಹಣ್ಣು ಹಾಕಿದ್ದೀಯಾ..."  ಕೇಳುವಂತಿರಬಾರದು.

ಶುಂಠಿಯೂ ಸೇರಿದ ತೆಂಗಿನ ಚಟ್ಣಿ ಸಿದ್ಧವಾಗಲಿ.
ದಪ್ಪ ಮೊಸರು ಇರಲೇಬೇಕು.





Friday 20 November 2015

ತೊಂಡೆ ಚಪ್ಪರದಿ ಅರಳಿದ ಹೂವ ಕಂಡಿರೇ...






ತೊಂಡೇ ಚಪ್ಪರ ಮನೆಯ ಹಿತ್ತಲಿಗೆ ಅಲಂಕಾರ ಅಥವಾ ಭೂಷಣ ಅಂದ್ರೂ ಸರಿ.   ನನ್ನ ಅತ್ತೆ ಮರತೊಂಡೆ ಬಳ್ಳಿಯನ್ನು ಸಾಕಿ ಸಲಹಿದ್ದರು,  ಅದಕ್ಕೊಂದು ವಿಶಾಲವಾದ ಚಪ್ಪರ.  ಮನೆಕೆಲಸಕ್ಕೆ ನಾಲ್ಕಾರು ಹೆಣ್ಣಾಳುಗಳು ಇದ್ರೂನೂ,  ದಿನಾ ತೊಂಡೆ ಬುಡಕ್ಕೆ ನೀರು ಹರಿದು ಹೋಗುವಂತೆ ಪಾತ್ರೆಗಳನ್ನು ತೊಳೆಯುವುದೇನು,   ಕಟ್ಟಿಗೆಯ ಒಲೆಯಲ್ಲಿ ಮಸಿ ಹಿಡಿದ ಹಿತ್ತಾಳೆಯ ಪಾತ್ರೆಗಳು,  ತಿಕ್ಕಿ ತೊಳೆಯಲಿಕ್ಕೆ ಒಲೆಯ ಬೂದಿ ಹಾಗೂ ತೆಂಗಿನಕಾಯಿ ಸಿಪ್ಪೆ.    " ಅಕ್ಕಿ ತೊಳೆದ ನೀರು ಭಾರೀ ಒಳ್ಳೇದೂ "  ಅನ್ನುತ್ತಾ ಅಕ್ಕಿ ತೊಳೆಯುವುದೇನು,  ಆಗೆಲ್ಲಾ ನಮ್ಮ ಮನೆ ಖರ್ಚಿಗೆ ಮೂರು ಸೇರಕ್ಕಿ ಬೇಕಾಗುತ್ತಾ ಇತ್ತು.
ಇಂತಹ ತೊಂಡೇ ಚಪ್ಪರವನ್ನು ನಾನೂ ಉಳಿಸಿಕೊಂಡು ಸಾಕುತ್ತಾ ಬಂದಿದ್ದೆ.   ಆದರೂ ಈಗ ಕೆಲವು ವರ್ಷಗಳಿಂದ ತೊಂಡೆಗೆ ಚಪ್ಪರ ಹಾಕುವವರಿಲ್ಲದೆ ತೊಂಡೇಕಾಯಿಗೂ ಪೇಟೆಗೆ ಹೋಗುವ ಪರಿಸ್ಥಿತಿ ಬಂದಿತ್ತು.

ಈ ಬಾರಿ ಮಳೆಗಾಲದ ಅವತರಣ ಬಹು ಬೇಗನೆ ಆಗಿರುವುದರಿಂದ,  ಬಿಡಬಾರದೆಂಬ ಹಟದಿಂದ ಚೆನ್ನಪ್ಪ ಬಂದಿದ್ದಾಗ,  ತೊಂಡೆಕಾಯಿಗೂ ಗತಿಯಿಲ್ಲದ ಕಾಲ ಬಂದಿದ್ದನ್ನು ವರ್ಣಿಸಿದಾಗ,  ಮಾರನೇ ದಿನವೇ ತೊಂಡೆಬಳ್ಳಿಗಳೊಂದಿಗೆ ಚೆನ್ನಪ್ಪ ಪ್ರತ್ಯಕ್ಷನಾದ.

 ತೊಂಡೆ ನಾಟಿ ಹೇಗೆ?
ಚಚ್ಚೌಕನೆಯ ಗುಂಡಿ ತೋಡುವುದು,  ನೀರು ಸರಾಗವಾಗಿ ಹರಿದು ಬರುವ ಸ್ಥಳಕ್ಕೆ ಆದ್ಯತೆ.
ಬಲಿಷ್ಠವಾದ ತೊಂಡೆಬಳ್ಳಿಗಳು,  2ಅಡಿ ಉದ್ದದ ನಾಲ್ಕು ಬಳ್ಳಿಗಳು ಬೇಕಾಗುತ್ತವೆ.
ತೊಂಡೆಬಳ್ಳಿಗಳನ್ನು ಗುಳಿಯಲ್ಲಿ ಓರೆಯಾಗಿ ಮಲಗಿಸುವುದು,  ಮೇಲಿಂದ ಮಣ್ಣು ಮುಚ್ಚುವುದು.
ಬಿದಿರಿನ ಕಡ್ಡಿಗಳನ್ನು ಆಧಾರ ಕೊಡುವುದು.
ಬುಡಕ್ಕೆ ಹಸಿರೆಲೆಗಳನ್ನು ಹರಡುವುದು.

ತೊಂಡೆಬಳ್ಳಿ ಚಿಗುರಿತು.  ಈಗ ಚೆನ್ನಪ್ಪ ನೆಟ್ಟಿದ್ದು ಎಲ್ಲ ಕಡೆಯೂ ಅಂದರೆ ಮಾರುಕಟ್ಟೆಯಲ್ಲಿಯೂ ಸಿಗುವಂತಹ ಊರತೊಂಡೆಯಾಗಿತ್ತು.  ಇದು ಹೆಚ್ಚಿನ ಆರೈಕೆಯನ್ನೂ,  ನಿರ್ವಹಣೆಯನ್ನೂ ಬಯಸುವಂತಾದ್ದು.   ಮರತೊಂಡೆಗೆ  ಸಮಸ್ಯೆಗಳಿಲ್ಲ,  ರೋಗಬಾಧೆಯೂ ಇಲ್ಲ,  ಬಹುಶಃ ಕಾಡು ಜಾತಿಯಿರಬೇಕು.  ರುಚಿಗೇನೂ ಮೋಸವಿಲ್ಲದ ಮರತೊಂಡೆ ಬಳ್ಳಿಯ ಬುಡ ಇದೆಯೋ ಎಂದು ಈ ಮೊದಲು ಇದ್ದಲ್ಲಿ ಹುಡುಕಾಡಿದಾಗ ಸಿಕ್ಕಿಯೇಬಿಟ್ಟಿತು,  ಮಳೆ ಬಂದು ಹಸನಾದ ನೆಲದಲ್ಲಿ,  ಯಾರೂ ಕೇಳುವವರಿಲ್ಲದಿದ್ದರೂ ಮರತೊಂಡೆಯ ಬಳ್ಳಿ ಚಿಗುರಿ ಸುತ್ತಮುತ್ತ ಇದ್ದ ರಥಹೂಗಳ ಪೊದರನ್ನು ಹಬ್ಬಲು ಹವಣಿಸುತ್ತಾ ಇದ್ದಿತು.




" ನೋಡೂ,  ಮರತೊಂಡೆಯ ಬಳ್ಳಿ ಇಲ್ಲಿದೇ,  ಇದನ್ನೇನು ಮಾಡೂದಂತೀಯ?"
" ಅದಕ್ಕೂ ಒಂದು ಚಪ್ಪರ ಹಾಕುವಾ "
" ಹೌದಾ,  ಮನೆಯಲ್ಲಿ ಎರಡೆರಡು ಚಪ್ಪರ ಹಾಕ್ಬಾರದೂಂತ ಶಾಸ್ತ್ರ ಇದೆಯಲ್ಲ "
 " ಹಂಗೇನಿಲ್ಲ,  ನಂದೂ ನಾಲಕ್ಕು ಚಪ್ಪರ ಮನೇಲಿ ಉಂಟಲ್ಲ "
" ತೊಂಡೆಕಾೖ ಮಾರಾಟವೂ ಉಂಟು ಹಾಗಾದ್ರೆ "
" ಹೂಂ, ಆಚೀಚೆ ಮನೆಯವ್ರು ಕೊಯ್ದುಕೊಡ್ತಾರೆ "
" ಸರಿ. ಹಾಗಿದ್ರೆ ಈ ಮರತೊಂಡೆಗೂ ಒಂದು ಚಪ್ಪರ ಹೊದೆಸಿ ಬಿಡು "

ಮರತೊಂಡೆಯೂ ಚಪ್ಪರದಲ್ಲಿ ಹಬ್ಬಿ ಹೂವರಳಿಸಿಯೇ ಬಿಟ್ಟಿತು.   ತೊಂಡೆಬಳ್ಳಿಯಲ್ಲಿ ಅರಳಿದ ಹೂ, ಕಾಯಿ ಆದ ಹಾಗೇ ಲೆಕ್ಕ,   ಹಲಕೆಲವು ತರಕಾರಿ ಸಸ್ಯಗಳು ಮೊದಲು ಫಲ ನೀಡದ ಹೂಗಳನ್ನು ತೋರಿಸಿ ನಮ್ಮನ್ನು ಮರುಳು ಮಾಡುವವುಗಳಾಗಿರುತ್ತವೆ,  ಇಂತಹ ಹೂವುಗಳನ್ನು  ' ಮರುಳು ಹೂವು '  ಎಂದೇ ಹೇಳುವ ವಾಡಿಕೆ.   " ತೊಂಡೆ ಚಪ್ಪರದಿ ಅರಳಿದ ಹೂವ ಕಂಡಿರೇ.... " ಗುಣುಗುಣಿಸುತ್ತ ಫೋಟೋ ತೆಗೆದೂ ಆಯಿತು.





ಮೊದಲ ಬಾರಿ ಕೊಯ್ಯಲು ಸಿಕ್ಕಿದ್ದು ಹತ್ತು - ಹನ್ನೆರಡು ಕಾಯಿಗಳಾದರೂ,  ಬೀಟ್ರೂಟ್ ಗೆಡ್ಡೆಯ ಜೊತೆಗೂಡಿ ಪಲ್ಯ ಸಿದ್ಧವಾಯಿತು.

ಅನ್ನದೊಂದಿಗೆ ಪಲ್ಯದ ಅವಶ್ಯಕತೆ ಇದೆ.  ಹಸಿರು ತರಕಾರಿಗಳನ್ನು ರುಚಿಗೆ ಉಪ್ಪು ಹಾಗೂ ಒಗ್ಗರಣೆಯೊಂದಿಗೆ ಬೇಯಿಸಿ,  ಕಾಯಿತುರಿಯ ಅಲಂಕರಣ,  ಹ್ಞಾ.. ತೆಂಗಿನತುರಿಯೂ ತರಕಾರಿ ಹೌದೆಂದು ತಿಳಿಯಿರಿ.   ನಾರುಯುಕ್ತವಾದ ತೆಂಗಿನತುರಿಯನ್ನು ಪಲ್ಯಗಳಿಗೆ ಧಾರಾಳವಾಗಿ ಬಳಸಿರಿ,  ಒಗ್ಗರಿಸಲೂ ತೆಂಗಿನೆಣ್ಣೆ ಅತ್ಯುತ್ತಮ.   ಪಲ್ಯಗಳನ್ನು ದೇಹಕ್ಕೆ ಬೇಕಾದ ಶಕ್ತಿ,  ವಿಟಮಿನ್,  ಖನಿಜಾಂಶಗಳಿಂದ ಕೂಡಿದ ತರಕಾರಿ,  ಸೊಪ್ಪು,  ಗೆಡ್ಡೆಗೆಣಸು,  ಬೇಳೆಕಾಳುಗಳನ್ನು ಬಳಸಿ ಮಾಡಬಹುದಾಗಿದೆ.   ನಮ್ಮ ಊಟದ ಅವಿಭಾಜ್ಯ ಅಂಗವಾಗಿರುವ ತರಕಾರಿಗಳನ್ನು ಅಧಿಕವಾಗಿ ಸೇವಿಸಬೇಕೆಂದೇ ವೈದ್ಯರು ಹೇಳುತ್ತಿರುತ್ತಾರೆ,  ಅದು ಪಲ್ಯದ ರೂಪದಲ್ಲಿದ್ದರೆ ಉತ್ತಮ.

ಆಂಗ್ಲಭಾಷೆಯಲ್ಲಿ ivy gourd ಎಂದು ಕರೆಯಲ್ಪಡುವ ತೊಂಡೆಕಾೖ,  ನಿಸ್ಸಂಶಯವಾಗಿ ಭಾರತದ ವಿಸ್ಮಯಕಾರಿ ಸಸ್ಯ.   ಮಧುಮೇಹ ನಿಯಂತ್ರಕ,  ಅಥವಾ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹತೋಟಿಗೆ ತರಬಲ್ಲ ತೊಂಡೆಯ ರಸಸಾರವನ್ನು ಹೋಮಿಯೋಪತಿ ಚಿಕಿತ್ಸೆಯಲ್ಲಿ ಬಳಸಲಾಗುವುದು.   ಬಹುಶಃ ಆಯುರ್ವೇದ ವೈದ್ಯ ಪದ್ಧತಿ ಇದರ ಮೂಲವಾಗಿರಬಹುದು.

ಬಾಯಿಹುಣ್ಣು ಆದಾಗ ಹಸಿ ತೊಂಡೆಕಾಯಿಗಳನ್ನು ಅಗಿದು ತಿನ್ನುವುದೂ ಒಂದು ಮನೆಮದ್ದು.
ಎಲೆಗಳನ್ನು ಜಜ್ಜಿ ತಯಾರಿಸಿದ ಮುಲಾಮು ಚರ್ಮದ ಬೊಕ್ಕೆ, ಉರಿಯೂತ, ತುರಿಗಜ್ಜಿ, ಸಾಮಾನ್ಯವಾಗಿ ಸೆಕೆಗಾಲದ ಪೀಡೆಗಳಿಗೆ ಔಷಧಿಯಾಗಿದೆ.
ಇದು ನಿಮಗೆ ಗೊತ್ತೇ,  ತೊಂಡೆಕಾಯಿ ಕಫನಿವಾರಕ,  ಅಲ್ಪಪ್ರಮಾಣದ ಸಂಧಿವಾತ ಪರಿಹಾರಕ.
ತೊಂಡೆಕಾಯಿ ಎಲೆಗಳ ರಸ ಸೇವನೆಯಿಂದ ಕಿಡ್ನಿ ಸಮಸ್ಯೆ ಬಲುದೂರಕ್ಕೆ ಹೋದೀತು.
ಕೆಲವಾರು ಲೈಂಗಿಕ ರೋಗಗಳಿಗೂ ರಾಮಬಾಣ ಈ ತೊಂಡೆ.
ಊಟವಾದ ಮೇಲೆ ಎಳೆಯ ತೊಂಡೆಕಾಯಿಗಳನ್ನು ಅಗಿದು ತಿನ್ನಿ,  ಜೀರ್ಣಾಂಗಗಳು ಚುರುಕಾಗಿರುವುದು ಹಾಗೂ ಮಲಬದ್ಧತೆಯ ಸಮಸ್ಯೆ ಕಾಡದು.     ಸಸ್ಯ ವಿಜ್ಞಾನಿಗಳು ಇದರಲ್ಲಿ ಎರಡು ಜಾತಿಗಳನ್ನು ಗುರುತಿಸಿದ್ದಾರೆ.    Cephalandra Indica,  Coccinia indica ಎಂಬ ಈ ಸಸ್ಯ ಭಾರತದ ವಿಸ್ಮಯವೆಂದಿದ್ದಾರೆ.

" ಹೌದಲ್ಲ,  ಹಸೀ ತೊಂಡೇಕಾಯಿ ತಿನ್ನೂದು ಹೇಗೇಂತ ಬೇಕಲ್ಲ !"
ಎಳೆಯ ತೊಂಡೇಕಾಯಿಗಳ ಸಲಾಡ್ ಮಾಡಿ ತಿನ್ನಬಹುದು.   ಇನ್ನಿತರ ತರಕಾರಿಗಳ ಒಟ್ಟಿಗೆ ಸೇರಿಸಿ ಉಪ್ಪಿನಕಾಯಿ  ಕೂಡಾ ಚೆನ್ನಾಗಿರುತ್ತದೆ.

" ಆಯ್ತೂ,  ಸೊಪ್ಪು ತಿನ್ನೂದು ಹೇಗೆ ?"
ಎಳೆಯ ಕುಡಿಗಳ ತಂಬುಳಿ ಮಾಡಿದ್ರಾಯ್ತು.   ತೆಂಗಿನತುರಿ,  ದಪ್ಪ ಮಜ್ಜಿಗೆ,  ಎಳೇ ಕುಡಿಗಳು,  ಜೀರಿಗೆ ಹಾಗೂ ತಕ್ಕಷ್ಟು ಉಪ್ಪು,  ನುಣ್ಣಗೆ ಅರೆದು ಅವಶ್ಯಕವಾದ ನೀರು ಕೂಡಿಸುವಲ್ಲಿಗೆ ತಂಬುಳಿ ಸಿದ್ಧವಾದಂತೆ.

ತೊಂಡೆಕಾಯಿ ಮಜ್ಜಿಗೆಹುಳಿ:
ಸಾಕಷ್ಟು ತೊಂಡೆಕಾಯಿ ಹೋಳುಗಳು
ಒಂದು ತೆಂಗಿನಕಾಯಿಯಿಂದ  ನುಣ್ಣಗೆ ಅರೆದ ಅರಪ್ಪು
ದಪ್ಪ ಸಿಹಿ ಮಜ್ಜಿಗೆ 
ರುಚಿಗೆ ಸಾಕಷ್ಟು ಉಪ್ಪು
ಚಿಟಿಕೆ ಅರಸಿಣ
ಒಗ್ಗರಣೆ ಸಾಹಿತ್ಯ:  ಕರಿಬೇವು, ಎಣ್ಣೆ ಇತ್ಯಾದಿ...

ತೊಂಡೆಕಾಯಿ ಹೋಳುಗಳು ರುಚಿಗೆ ಉಪ್ಪು ಕೂಡಿ ಬೇಯಲಿ.  ತೊಂಡೆಕಾಯಿಗಳು ಹೆಚ್ಚು ಬೇಯಬಾರದು,  ಸತ್ವಹೀನವಾಗುತ್ತವೆ ಹಾಗೂ ರುಚಿಯೂ ಇರುವುದಿಲ್ಲ.  ತೆಂಗಿನಕಾಯಿ ಅರಪ್ಪು ಕೂಡಿಸಿ ಮಜ್ಜೆಗೆ ಎರೆದು ಕುದಿಸಿ ಒಗ್ಗರಣೆ ಕೊಟ್ಟರಾಯಿತು.  ಸಿಹಿ ಬೇಕಿದ್ದರೆ ಬೆಲ್ಲ,  ಖಾರ ಬೇಕೂಂತಿದ್ರೆ ಎರಡು ಹಸಿ ಮೆಣಸು ಸಿಗಿದು ಹಾಕಬೇಕು.  

ತೊಂಡೆಕಾಯಿ ಹುಳಿಮೆಣಸು:

ಚಪ್ಪರದಿಂದ ಕೊಯ್ದ ಕಾಯಿಗಳು ಹಣ್ಣೂ ಆಗಿರುವುದಿದೆ.   ಹಿಂದೆಲ್ಲ ಕೊಯ್ದು ಕೊಡುವಾಕೆ ನನ್ನ ಕೆಲಸಗಿತ್ತಿ ಕಲ್ಯಾಣಿ,  ಹಣ್ಣಾದ ತೊಂಡೆಗಳನ್ನು ಆಯ್ದಿಟ್ಟು ತನ್ನ ಮನೆಖರ್ಚಿಗೆ ಒಯ್ಯತ್ತಿದ್ದಳು.  ವಿಪರೀತ ಹಣ್ಣಾದದ್ದು ಬೇಡ,  ಗುಂಡುಕಲ್ಲಿನಲ್ಲಿ ತುಸು ಜಜ್ಜಿ ಅಥವಾ ಚೂರಿಯಲ್ಲಿ ಗೀರು ಹಾಕಿ, ರುಚಿಗೆ ಉಪ್ಪು ಕೂಡಿಸಿ,  ಅಗತ್ಯದ ನೀರೆರೆದು ಬೇಯಿಸಿ.

ತೊಗರೀಬೇಳೆಯ ಅವಶ್ಯಕತೆ ಇಲ್ಲಿಲ್ಲ.   ಮಸಾಲಾ ಸಾಮಗ್ರಿಗಳು ಕೂಡಾ ಬೇಡ.
"ಮತ್ತೇನನ್ನು ಹಾಕೋದೂ...?"
ತೆಂಗಿನತುರಿ,  ನಾಲ್ಕಾರು ಒಣಮೆಣಸು,  ಹುಳಿ,  ಚಿಟಿಕೆ ಅರಸಿಣದೊಂದಿಗೆ ನುಣ್ಣಗೆ ಅರೆಯಿರಿ.  ಅರೆದ ತೆಂಗಿನ ಅರಪ್ಪು,  ಬೆಂದ ತರಕಾರಿಯೊಂದಿಗೆ ಕೂಡಿ ಕುದಿಯಲಿ,  ಬೆಳ್ಳುಳ್ಳಿ ಒಗ್ಗರಣೆ ಮರೆಯದಿರಲಿ.    ಬೆಳ್ಳುಳ್ಳಿ ಹಿತವಾಗದವರಿಗೆ ತೆಂಗಿನಕಾಯಿ ಅರೆಯುವಾಗ ತುಸು ಕೊತ್ತಂಬ್ರಿ ಹಾಕಿಕೊಳ್ಳುವುದು.  ಒಣಮೆಣಸು ಕೂಡಾ  ಹುರಿಯಬೇಕಾಗಿಲ್ಲ,  ಹ್ಞಾ, ಅರೆಯುವ ಮೊದಲು ನೀರಲ್ಲಿ ಹಾಕಿಟ್ಟೀರಾದರೆ ಅರೆಯುವ ಕಾಯಕ ಸುಲಭವಾದೀತು.

ವಿಧವಿಧವಾದ ತರಕಾರಿಗಳೊಡನೆ ತೆಂಗಿನ ಅರಪ್ಪು ಕೂಡಿದ ಅವಿಯಲ್ ಅಥವಾ ಅವಿಲು ಗೊತ್ತಲ್ಲ,  ಇದಕ್ಕೂ ತೊಂಡೆಕಾಯಿ ಇಲ್ಲದಿದ್ದರಾದೀತೇ?  ಈ ವ್ಯಂಜನ ಮಜ್ಜಿಗೆಯನ್ನು ಬಯಸದು,  ಬದಲಾಗಿ ಮಾವಿನಕಾಯಿ,  ಅಂಬಟೆಯಂತಹ ಹುಳಿ ಇರುವ ತರಕಾರಿಗಳನ್ನು ಬಳಸಬೇಕು.  ಖಾರಕ್ಕಾಗಿ ಹಸಿಮೆಣಸು ಮಾತ್ರ ಹಾಕಬೇಕು,  ಮಸಾಲೆ ಹುಡಿ ಯಾವುದೂ ಹಾಕಬೇಕಾಗಿಲ್ಲ,  ಕರಿಬೇವು ಒಗ್ಗರಣೆ ಕಡ್ಡಾಯ.

ಚಪ್ಪರದಲ್ಲಿ ತುಂಬಿ ತುಳುಕುತ್ತಿರುವ ತೊಂಡೆಕಾಯಿಗಳನ್ನು ತಿಂದು ಮುಗಿಸಲಾಗದಿದ್ದರೆ ಮಾರಾಟ ಮಾಡಿ ಹಣ ಗಳಿಸಬಹುದು.  " ಮಾರಾಟ ಮಾಡಿ ಏನಾಗ್ಬೇಕಾಗಿದೆ..." ಅಂತೀರಾ,  ಅದಕ್ಕೂ ಉಪಾಯವಿದೆ.

ತೊಂಡೆಕಾಯಿಗಳನ್ನು ಬೇಕಾದ ಆಕೃತಿಯಲ್ಲಿ ಸಿಗಿದು ಉಪ್ಪು ಬೆರೆಸಿ,  ಬಿಸಿಲಿಗೆ ಇಟ್ಟು ಒಣಗಿಸಿ.  ಚೆನ್ನಾಗಿ ಒಣಗಿದ ನಂತರ ಡಬ್ಬದಲ್ಲಿ ತುಂಬಿಸಿ ದಾಸ್ತಾನು ಇಡಬಹುದು.  ಬೇಕಿದ್ದಾಗ ಎಣ್ಣೆಯಲ್ಲಿ ಕರಿದು ತೊಂಡೆಯ ಬಾಳ್ಕ ಅನ್ನಿ,  ಸಾರೂ ಅನ್ನದೊಂದಿಗೆ ಮಳೆಗಾಲದಲ್ಲಿ ತಿನ್ನಲು ರುಚಿ.

ಟಿಪ್ಪಣಿ:  ಇದು ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತವಾಗಿರುವ ಚಿತ್ರ - ಬರಹ.




Tuesday 10 November 2015

ಪ್ರಗತಿಯ ಪದಗತಿ






ಶೀಲಕ್ಕ ಹೆಣೆದಳು ಜಂಭದ ಚೀಲ
ಹೆಗಲಿಗೆ ಏರಿತು  ಕೈಚೀಲ |

ಚೀಲವನಾಡಿಸುತಿರಲು
ರೂಪಾಯಿ ನೋಟು ಕೆಳಗೆ ಬೀಳಲು
ಶೀಲಕ್ಕ ನೋಡದೆ ಇರಲು
ಮಾಲಕ್ಕ ಓಡೋಡಿ ಬರಲು
ಬಿದ್ದ ನೋಟು ಹೆಕ್ಕೀ ಕೊಡಲು |

"ಇವಳೇ ಜಾಣೆ ಪೆಣ್ಮಣಿ
ಕನ್ನಡವೇ ನಮ್ಮ ಕಣ್ಮಣಿ "
ಕನ್ನಡ ಪದಗಳ ಉಳಿಸೋಣ
ಕನ್ನಡದಲ್ಲೇ ಉಲಿಯೋಣ
ಬರೆ ನೀ ಕವನವ ಓ ಅಕ್ಕ |


ರೂಪದರ್ಶಿ:  ಪ್ರಗತಿ ಹಿರಣ್ಯ