Pages

Ads 468x60px

Sunday 22 March 2020

ನೆರುಗಳ ಸೊಪ್ಪಿನ ರಸಂ







ಈಗ ಕೊರೋನಾ ಹಾವಳಿಯ ಗದ್ದಲ. ನಾವು ಅಡುಗೆ ಮನೆಯಿಂದಾನೆ ಶರೀರದ ರೋಗನಿರೋಧಕ ಶಕ್ತಿ ವರ್ಧನೆ ಹೇಗಪ್ಪಾ ಎಂದು ಚಿಂತಿಸುವಂತಾಗಿದೆ.

" ಮಾರುಕಟ್ಟೆಗೆ ಹೋಗಿ ತರಕಾರಿ ತನ್ರೀ " ಎಂದು ಹೇಳುವಂತಿಲ್ಲ.

" ಇರುವುದರಲ್ಲೇ ನಿಭಾಯಿಸು.. "

 ಹಿತ್ತಲ ಗಿಡಬಳ್ಳಿಗಳ ಅವಲೋಕನೆ... ಯಾವುದಾದೀತು?

" ಏನೂ ಇಲ್ವೇ.. ನೆರುಗಳ ಸೊಪ್ಪು ತಾ... ಅದೇ ಸಾಕು, ಆರೋಗ್ಯಕ್ಕೂ ಒಳ್ಳೆಯದು. " ಗೌರತ್ತೆ ಅಂದರು.

" ನೀವೇ ತನ್ನಿ, ನಾನು ತೆಂಗಿನಕಾಯಿ ಸುಲಿದು ಒಡೆದು ತುರಿದು ಇಡ್ತೇನೆ. "

ಗೌರತ್ತೆ ನೆರುಗಳದ ಎರಡು ಕೊಂಬೆ ಮುರಿದು ತಂದರು. " ಒಳ್ಳೆಯ ಸೊಪ್ಪು ನಾನೇ ಆಯ್ದು ಕೊಡ್ತೇನೆ.." ಎಂದು ಕನ್ನಡಕ ಮೂಗಿಗೇರಿಸಿ " ಏನು ಪರೀಮಳ.. ದಶಮುಲಾರಿಷ್ಠಕ್ಕೂ ಇದರ ಬೇರು ಹಾಕಲಿಕ್ಕುಂಟು.." ಬಿಡಿ ಎಲೆಗಳನ್ನು ಒಂದು ಲೋಟದಲ್ಲಿ ತುಂಬಿಸಿ ಇಟ್ಟರು ಗೌರತ್ತೆ.

ತನ್ನದೇ ತಾಜಾ ಪರಿಮಳ ಹೊಂದಿರುವ ನೆರುಗಳ ಸೊಪ್ಪಿನ ಅಡುಗೆಗೆ ಇನ್ಯಾವುದೇ ಮಸಾಲಾ ಸಾಮಗ್ರಿಗಳ ಅವಶ್ಯಕತೆಯಿಲ್ಲ.

ಹೇಗೆ ಮಾಡಿದ್ದು?

ಅರ್ಧ ಕಡಿ ತೆಂಗಿನತುರಿ
ನೆನೆಸಿಟ್ಟ ಒಣಮೆಣಸು
ಹಸಿ ಅರಸಿಣ ಅಥವಾ ಅರಸಿಣ ಹುಡಿ
ಹುಣಸೆಯ ಹುಳಿ
ರುಚಿಗೆ ತಕ್ಕಂತೆ ಉಪ್ಪು
ನುಣ್ಣಗೆ ಅರೆಯಿರಿ.

ಒಂದು ಲೋಟ ನೀರು ಕುದಿಸಿ.
ನೀರು ಕುದಿಯುವಾಗ ನೆರುಗಳ ಸೊಪ್ಪು ಹಾಕಿ.
ಅರೆದಿಟ್ಟ ತೆಂಗಿನ ಅರಪ್ಪು ಬೀಳಲಿ.
ಸಾರಿನಂತೆ ತೆಳುವಾಗಲು ನೀರು ಎರೆಯಿರಿ.
ರುಚಿಕರವಾಗಲು ಬೆಲ್ಲವನ್ನೂ ಹೊಂದಿಕೆಯಾಗುವಂತೆ ಹಾಕಬಹುದಾಗಿದೆ.
ಚಿನ್ನಾಗಿ ಕುದಿಯಲಿ, ನೆರುಗಳ ಸೊಪ್ಪಿನ ಸಾರ ನಮ್ಮ ರಸಂ ಯಾ ಸಾರು ಎನ್ನುವಂತಿರಬೇಕು.
ಒಂದು ಪುಟ್ಟ ಒಗ್ಗರಣೆ ಇರಲಿ.

ಸೊಪ್ಪಿನೂಟದೊಂದಿಗೆ ನಮ್ಮ ಈ ಭಾನುವಾರದೂಟ ಸಂಪನ್ನವಾಯಿತು.

" ತುಪ್ಪದಲ್ಲಿ ಉಂಡಷ್ಟೇ ಶಕ್ತಿ ಕೊಡುತ್ತಂತೆ ಈ ನೆರುಗಳ.." ಗೌರತ್ತೆಯ ರಿಮಾರ್ಕು.

ಹಣ್ಣು ಸೌತೆ ಇದ್ದರೆ ಹಾಕಬಹುದಾಗಿತ್ತು. ಆಗ ಇದು ಸೌತೆಯ ಹುಳಿಮೆಣಸು ಎಂದೆನ್ನಿಸಿಕೊಂಡೀತು.

ಏನೇ ಆಗಲಿ ಕೊರೋನಾ ಗದ್ದಲದಿಂದಾಗಿ ನಾವು ಪ್ರಕೃತಿ ಸಹಜ ಜೀವನದತ್ತ ಮರಳೋಣ.
ಮನೆಯೊಳಗಿನ ಗಂಜಿಯೂಟವೇ ಹಿತವೆಂದು ತಿಳಿಯುವ ಕಾಲ ಬಂದಿದೆ.

ಪುಟ್ಟ ಮರದಂತೆ ಬೆಳೆಯುವ ಈ ಸಸ್ಯ ಸಂಕುಲದ ತವರು ನಮ್ಮ ಭಾರತ, ಆಯುರ್ವೇದ ಔಷಧಿ ಸಸ್ಯವಾದ ಇದು ಅಗ್ನಿಮಂಥ ಎಂಬ ಹೆಸರನ್ನು ಹೊಂದಿದೆ. ಬಾಟನಿ ತಜ್ಞರು ಪ್ರಮ್ನಾ ಇಂಟಗ್ರಿಫೋಲಿಯಾ - premnaintegrifolia ಎಂದಿದ್ದಾರೆ.

ಬೇರು ಕಸಿಯಿಂದ ಹೊಸ ಗಿಡ ಉತ್ಪಾದಿಸಬಹುದು. ನರ್ಸರಿಗಳಲ್ಲಿ ಸಿಗುವ ಸಾಧ್ಯತೆಯಿದೆ. ಕುಂಡಗಳಲ್ಲಿ ನೆಟ್ಟು ಸಲಹಬಹುದು.

" ತುಪ್ಪದಲ್ಲಿ ಹುರಿದು,  ತೆಂಗಿನ ತುರಿಯೊಂದಿಗೆ ಅರೆದು,ಮಜ್ಜಿಗೆ ಎರೆದು ತಂಬುಳಿ ಮಾಡಲಿಕ್ಕೂ ಆಗುತ್ತದೆ. " ಗೌರತ್ತೆ ಅಂದರು.

"ಇನ್ನೇನೇನು ಮಾಡಬಹುದು? ಹೇಳಿರಲ್ಲ.. "

" ಬೇರೆಂತದು, ಕೊತ್ತಂಬರಿ ಸೊಪ್ಪಿನ ಹಾಗೆ ಎಲ್ಲ ಅಡುಗೆಗೂ ಹಾಕಿಕೊಳ್ಳಿ.."




Wednesday 18 March 2020

ಶ್ಯಾವಿಗೆ ಪಾಯಸ







ಸಂಕ್ರಾಂತಿ ಬಂತೆಂದರೆ ಹಬ್ಬದಡುಗೆ, ಪಾಯಸವೊಂದು ಇರಲೇಬೇಕು.

ಹಿರಣ್ಯದ ದುರ್ಗಾಪರಮೇಶ್ವರಿ ದೇಗುಲದಲ್ಲಿ ಮುಂಜಾನೆಯೇ ಪೂಜಾದಿಗಳು ಆರಂಭ, ನನ್ನದು ಮದ್ಯಾಹ್ನದ ಅಡುಗೆಯ ಸುವ್ಯವಸ್ಥೆಯ ಕಾರುಭಾರು.

ನಾಲ್ಕಾರು ಮಂದಿಗೆ ಬಡಿಸಲು ಸಾಕಾಗುವಷ್ಟು ಪಾಯಸ ಮಾಡಬೇಕಿದೆ. ಅನ್ನಸಂತರ್ಪಣೆಯ ಭೂರಿಭೋಜನ ರಾತ್ರಿ ಆಗಮಿಸುವ ಭಕ್ತಾದಿಗಳಿಗೆ, ಅಮ್ಮನ ದರ್ಶನಕ್ಕೆ ಬಂದವರು ಹಾಗೇನೇ ಉಪವಾಸ ತೆರಳಬಾರದೆಂದು ಈ ಕ್ರಮ ನಡೆದುಕೊಂಡು ಬಂದಿದೆ. ಗಣಪಣ್ಣನ ಉಸ್ತುವಾರಿಯಲ್ಲಿ ಅನ್ನದಾನದ ದೊಡ್ಡ ಅಡುಗೆ.

ಪಾಯಸಕ್ಕಾಗಿ ಒಂದು ತೆಂಗಿನಕಾಯಿ, ತುರಿದು, ಅರೆದು ಹಾಲು ತೆಗೆದಿರಿಸುವುದು. ನೀರು ಕಾಯಿಹಾಲು ಕೂಡಾ ತೆಗೆದಿರಿಸುವುದು.

ಒಂದು ಲೋಟ ಶ್ಯಾವಿಗೆ, ನಾನ್ ಸ್ಟಿಕ್ ಬಾಣಲೆಯಲ್ಲಿ ನಸು ಬಣ್ಣ ಬರುವಂತೆ ಹುರಿಯಿರಿ, ತುಪ್ಪ ಹಾಕಿ ಹುರಿಯುವ ಅಗತ್ಯವಿಲ್ಲ, ಕರಟಬಾರದು ಅಷ್ಟೇ. ಶ್ಯಾವಿಗೆಗೆ ತನ್ನದೇ ಸುವಾಸನೆ ಏನೂ ಇಲ್ಲ. ಏಲಕ್ಕಿಯಂತಹ ಸುವಾಸನಾ ದ್ರವ್ಯಗಳನ್ನು ಹಾಕಿದ್ರೇನೇ ಘಮಘಮಿಸುವ ಪಾಯಸ ನಮ್ಮದು.

ಅದೇನೇ ಪದಾರ್ಥ ಮಾಡುವುದಿದ್ದರೂ ಕುಕ್ಕರ್ ನನ್ನ ಆಯ್ಕೆ, ರಗಳೆಯಿಲ್ಲದೆ ಬೇಯಿಸಿ ಕೊಡುತ್ತೆ.

ನೀರು ಕಾಯಿಹಾಲು ಎರೆದು ಕುಕ್ಕರ್ ಒಲೆಗೇರಿತೇ, ಹುರಿದ ಶ್ಯಾವಿಗೆ ಸುರಿಯಿರಿ, ಕುದಿಯುವ ತನಕ ಬಿಡದೆ ಸೌಟಾಡಿಸಿ, ನಂತರ ಕುಕ್ಕರ್ ಮುಚ್ಚಿ ಒಂದು ಸೀಟಿ ಕೂಗಿಸಿ.

ಒತ್ತಡ ಇಳಿದ ನಂತರ ಮುಚ್ಚಳ ತೆರೆಯಿರಿ, ಬೆಂದಿದೆ.

ಒಂದೂವರೆ ಲೋಟ ಸಕ್ಕರೆ ಅಳೆದು ಹಾಕಿರಿ, ಸಕ್ಕರೆ ಕರಗುತ್ತಿರಲಿ.

ಗೋಡಂಬಿ ದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿಯಿರಿ.
ಏಲಕ್ಕಿ ಪುಡಿ ಮಾಡಿಟ್ಟಾಯ್ತೇ,
ಆಯಿತು.

ಈಗ ದಪ್ಪ ಕಾಯಿಹಾಲು ಎರೆದು ಕುದಿಸಿ.
ಏಲಕ್ಕಿ ಹಾಕುವ ಸಮಯ,
ಕೆಳಗಿಳಿಸಿ, ದ್ರಾಕ್ಷಿ ಗೋಡಂಬಿಗಳನ್ನು ಹಾಕುವುದು, ಇಷ್ಟೇ ಹಾಕಬೇಕೆಂಬ ಅಳತೆ ಪ್ರಮಾಣ ಇದಕ್ಕಿಲ್ಲ, ಅಡುಗೆಮನೆಯ ಡಬ್ಬದಲ್ಲಿ ಇದ್ದಂತೆ ಬಳಸಿರಿ.

ಊಟದ ಹೊತ್ತಿಗೆ ಪಾಯಸ ತಣಿಯಿತೇ, ದಪ್ಪ ಹಲ್ವದಂತಾಯ್ತೇ,
ಚಿಂತಿಸದಿರಿ...
ಡೈರಿ ಹಾಲು ಇದೆಯಲ್ಲ,
ಬಿಸಿ ಹಾಲು ಎರೆದು ಪಾಯಸದ ಹದಕ್ಕೆ ತರುವುದು.

ತೆಂಗಿನ ಹಾಲು, ಡೈರಿ ಹಾಲು ಕೂಡಿದ ಪಾಯಸದ ರುಚಿ ಕುಡಿದವರಿಗೇ ಗೊತ್ತು ಕಣ್ರೀ...


Monday 9 March 2020

ಖರ್ಜೂರದ ಬನ್ಸ್




ಹಿರಣ್ಯದ ದೇಗುಲದ ಕಾಮಗಾರಿ ಕೆಲಸದ ಆರಂಭಕ್ಕೆ ಮುಂಚಿತವಾಗಿ ಕಾರ್ಯನಿಮಿತ್ತ ಕೊಲ್ಲೂರಿಗೆ ಹೋಗಬೇಕಾಗಿ ಬಂದಿತ್ತು.

" ಐದು ಗಂಟೆಗೇ ಹೊರಡಬೇಕು, ತಿಂಡಿತೀರ್ಥ ದಾರಿಮಧ್ಯೆ ಹೋಟಲ್ ಸಿಕ್ಕಾಗ, ತಿಳಿಯಿತಲ್ಲ. "

ಪ್ರಶ್ನಿಸುವಂತಿಲ್ಲ, ದೇವರ ಕೆಲಸ ಅಲ್ವೇ, ಕೊಲ್ಲೂರಿಗೆ ಹೋಗಿ ಬಂದು ಅಭ್ಯಾಸ ಆಗ್ಬಿಟ್ಟಿದೆ ಅನ್ನಿ.

ಹೋಗುತ್ತಾ ವಿಟ್ಲದಲ್ಲಿ ಬಾಲಕೃಷ್ಣ ಶೆಟ್ಟಿ ಸೇರಿಕೊಂಡ. ಸಾರಥಿ ಸೀಟು ಅವನದಾಯಿತು. ಮಂಗಳೂರು ಸಮೀಪ ಸತ್ಯನಾರಾಯಣ ಭಟ್ರೂ ಹತ್ತಿದಾಗ ಕಾರು ಹೌಸ್ ಫುಲ್ ಆಯ್ತು.

ಮುಂಜಾನೆಯ ತಿಂಡಿಗಾಗಿ ಪಡುಬಿದ್ರಿಯಲ್ಲಿ ಕಾರು ನಿಂತಿತು, ಆಗಲೇ ಗಂಟೆ ಹತ್ತು ದಾಟಿತ್ತು.

ಹೋಟಲ್ ಒಳಗೆ ಟೇಬಲ್ ಮುಂದೆ ಆಸೀನರಾದಾಗ, " ನಂಗೆ ಮನೇಲಿ ದಿನಾ ಮಾಡುವ ದೋಸೆ ಇಡ್ಲಿ ಬೇಡ..."

ನನಗಾಗಿ ಎರಡು ಪ್ಲೇಟು ಬನ್ಸ್ ಹಾಗೂ ಗರಿಗರಿ ಉದ್ದಿನ ವಡೆ ಬಂದಿತು.

ಮಕ್ಕಳೆಲ್ಲ ಬೆಂಗಳೂರು ಸೇರಿದ ನಂತರ ಎಣ್ಣೆಯಲ್ಲಿ ಕರಿದ ತಿಂಡಿ ಮನೆಯಲ್ಲಿ ಮಾಡುವ ರೂಢಿ ತಪ್ಪಿ ಹೋಗಿದೆ. ಬನ್ಸ್ ತಿನ್ನುವಾಗ ಮನೆಯ ಪುಟ್ಟ ನಾಯಿಮರಿಯ ನೆನಪಾಗಿ, ನಾಯಿಗಾಗಿ ಬನ್ಸ್ ಮಾಡಬೇಕೆಂಬ ವಾಂಛಲ್ಯ ಹುಟ್ಟಿತು. ಅನ್ನ ತಿನ್ನಲೊಲ್ಲದ ನಾಯಿಗಾಗಿ ಮೂರು ಹೊತ್ತೂ ದೋಸೆ ತೆಳ್ಳವು ಎರೆಯಬೇಕಾದ ಪಾಡು ನನ್ನದು. ಒಂದು ಡಬ್ಬ ತುಂಬ ಬನ್ಸ್ ಮಾಡಿಟ್ಟುಕೊಳ್ಳೋಣ.

ಹೋಟಲ್ ಬನ್ಸ್ ಚೆನ್ನಾಗಿತ್ತು, ಬಾಳೆಹಣ್ಣಿನ ಪರಿಮಳ ಬರುತ್ತಲೂ ಇತ್ತು.





ಬಿಡುವು ದೊರೆತಾಗ ಬನ್ಸ್ ನೆನಪಾಯ್ತು, ಆದ್ರೆ ಬಾಳೆಹಣ್ಣು ಇರಲಿಲ್ಲ. ಖರ್ಜೂರ ಇದೆ, ಅದನ್ನೇ ಪ್ರಯೋಗ ಮಾಡೋಣ. ಹೊಸರುಚಿ ಸಿಕ್ಕಿದ ಹಾಗೂ ಆಯ್ತು.

ಖರ್ಜೂರದ ಬನ್ಸ್ ಮಾಡಿದ್ದು ಹೇಗೆ?

15 ಖರ್ಜೂರಗಳ ಬೀಜ ಬಿಡಿಸಿ, ಮುಳುಗುವಷ್ಟು ಕುದಿ ನೀರು ಎರೆದು ಮುಚ್ಚಿ ಇರಿಸುವುದು.
ಅರ್ಧ ಗಂಟಿಯ ನಂತರ ಕೈಯಲ್ಲೇ ಹಿಸುಕಿ ಮೆತ್ತಗಾಗಿಸಿ.
2 - 3 ಚಮಚದಷ್ಟು ಹುಡಿ ಮಾಡಿದ ಬೆಲ್ಲ,
ರುಚಿಗೆ ಸೂಕ್ತವಾಗುವಷ್ಟು ಉಪ್ಪು,
ಸುವಾಸನೆಗೆ ಜೀರಿಗೆ,
ಅಲಂಕರಣಕ್ಕಾಗಿ ಎಳ್ಳು,
ಅರ್ಧ ಲೋಟ ಮೊಸರು
ಎಲ್ಲವೂ ಖರ್ಜೂರದೊಂದಿಗೆ ಸೇರಲಿ.

ಈಗ 3 ಲೋಟ ಗೋಧಿಹುಡಿ ಅಳೆಯಿರಿ.
1 ಲೋಟ ತಣ್ಣೀರು ಪಕ್ಕದಲ್ಲಿರಲಿ.

ಖರ್ಜೂರದ ಮಿಶ್ರಣವನ್ನು ಗೋಧಿಹುಡಿಗೆ ಬೆರೆಸಿಕೊಳ್ಳಿ.
ಕಲಸಿ, ನೀರು ತುಸು ತುಸುವೇ ಹಾಕುತ್ತ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ತನ್ನಿ. ಚೆನ್ನಾಗಿ ನಾದಿ, ಮುಚ್ಚಿ ಇರಿಸಿ.

ಸಂಜೆಯ ತಿನಿಸು ಆಗಬೇಕಿದ್ದರೆ ಮುಂಜಾನೆ ಕಲಸಿ ಇಟ್ಟರಾಯಿತು. ಮುಂಜಾನೆಗೊಂದು ತಿಂಡಿ ನಿಮ್ಮದಾಗಬೇಕಿದ್ದರೆ ರಾತ್ರಿ ಕಲಸಿ ಇಟ್ಟರೆ ಸರಿ ಹೋದೀತು.
ನಾನು ಸೋಡಾ ಹುಡಿ ಯಾ ಬೇಕಿಗ್ ಪೌಡರ್ ಬಳಸಿಲ್ಲ.

ದೊಡ್ಡ ಲಿಂಬೆಗಾತ್ರದ ಉಂಡೆ ಮಾಡಿ ಇಟ್ಕೊಳ್ಳಿ,
ಗೋಧಿಹುಡಿಯಲ್ಲಿ ಹೊರಳಿಸಿ,
ಲಟ್ಟಣಿಗೆಯಲ್ಲಿ ಮೆತ್ತಗೆ ಆಡಿಸಿ,
ತೆಳ್ಳಗೆ ಮಾಡೇಕಿಲ್ಲ,
ಅಂಗೈಯಲ್ಲಿ ತಟ್ಟಿದರೂ ಸಾಕು.


ಈ ಹೊತ್ತಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿಯಾಗುತ್ತಲಿರಬೇಕು.
ಒಂದೊಂದೇ ಬನ್ಸ್ ಕರಿದು ತೆಗೆಯಿರಿ.

ಸೂಕ್ತವಾಗುವಂತಹ ಚಟ್ಣಯಲ್ಲಿ ಹೊರಳಿಸಿ ತಿನ್ನಿ.
ಮಕ್ಕಳಿಗೆ ಪ್ರಿಯವಾದ ತಿಂಡಿ ಇದು, ತುಸು ಜಾಸ್ತಿ ಮಾಡಿದ್ರೂ ತೊಂದರೆಯಿಲ್ಲ. ನಮ್ಮ ನಾಯಿಮರಿಯಂತೂ ಕುಣಿಕುಣಿದು ತಿಂದಿತು.

ಇನ್ನೂ ನಾಲ್ಕು ಉಂಡೆಗಳ ಹಿಟ್ಟು ಇದೆ, ತೆಳ್ಳಗೆ ಲಟ್ಟಿಸಿ ಚಪಾತಿಯಂತೆ ಬೇಯಿಸೋಣ. ಎಣ್ಣೆಯಲ್ಲಿ ಕರಿದ ತಿಂಡಿ ಬೇಕಿಲ್ಲದವರಿಗೆ ಖರ್ಜೂರದ ಪರೋಟಾ ಎಂದು ತಿನ್ನಲಡ್ಡಿಯಿಲ್ಲ.




Monday 2 March 2020

ಸಿಪ್ಪೆಯ ಸೂಪ್





" ಯಾವ ಸಿಪ್ಪೇರೀ...? "
" ಕಿತ್ತಳೆ ಸಿಪ್ಪೇದು ಕಣ್ರೀ... "
" ಓ.. ಅದಾ.. ನಮಗೂ ಗೊತ್ತು.."

ಸಂಕ್ರಾಂತಿಯ ಪೂಜಾದಿಗಳ ನಂತರ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆಯೂ ಆದ ತರುವಾಯ ಪ್ರಸಾದವೆಂದು ಬಂದಿದ್ದ ಹಣ್ಣುಹಂಪಲುಗಳ ಪ್ಯಾಕೇಟ್ ಬಿಡಿಸಿ ಟೇಬಲ್ ಮೇಲೆ ಇಟ್ಟರು ಗೌರತ್ತೆ. ದಾಳಿಂಬೆ, ಆ್ಯಪಲ್, ಕಿತ್ತಳೆ, ಮೂಸಂಬಿ, ಬಾಳೆಯಹಣ್ಣು, ಕುಂಕುಮ, ಮಲ್ಲಿಗೆಯಮಾಲೆ, ಸೇವಂತಿಗೆ, ಕಿಸ್ಕಾರ, ಸಿಂಗಾರ..

" ಈ ಮಲ್ಲಿಗೆಯ ಮಾಲೆ ಮುಡಿದುಕೋ... ಕುಂಕುಮದ ಕರಡಿಗೆ ಎಲ್ಲಿದೆ? ನಾನೇ ತುಂಬಿಸಿ ಇಡ್ತೇನೆ.."
" ಅಲ್ಲೇ ಕನ್ನಡಿ ಎದುರುಗಡೆ ನೋಡಿ.. ಕುಂಕುಮದ ಕರಡಿಗೆ ಇದೆ. ಇಲ್ಲಾಂದ್ರೆ ದೇವರ ಕೋಣೆಯಲ್ಲಿ ಇಟ್ಕಳ್ಳಿ. "

" ಕಿತ್ತಳೆ ಹಣ್ಣು ಚೆನ್ನಾಗಿದೆ, ಸಿಪ್ಪೆಯ ಗೊಜ್ಜು ಮಾಡ್ತೀಯಲ್ಲ, ಊಟಕ್ಕೆ ಒಂದು ಐಟಂ.. "
" ಆಯ್ತು ಮಾಡುವಾ... "

ಎಂದಿನ ಅಡುಗೆ ಮುಗಿಯಿತು, ಅನ್ನ, ಸಾಂಬಾರ್, ಪಲ್ಯ..
ಕಿತ್ತಳೆ ಹಣ್ಣು ತಿಂದು ಸಿಪ್ಪೆ ಟೇಬಲ್ ಮೇಲೆ ಇಟ್ಟಿದ್ರು ಗೌರತ್ತೆ.

ಇದ್ದ ಸಿಪ್ಪೆಯೆಲ್ಲ ಯಾತಕ್ಕೆ ಅಂದ್ಬಿಟ್ಟು, ಎರಡು ಚೂರು ಸಿಪ್ಪೆಯನ್ನು ಚೂರಿಯಲ್ಲಿ ಚೂರುಚೂರಾಗಿಸಿ,
ಹಾಗೇನೇ ಒಂದು ಹಸಿಮೆಣಸನ್ನೂ ಸಿಗಿದು,
ಮಿಕ್ಸಿಯಲ್ಲಿ ಪುಡಿ ಪುಡಿ ಆಗಿ ಬಿಟ್ಟಿತು.

ಹೊಸ ಹುಣಸೆಯಹಣ್ಣನ್ನು ಗಿವುಚಿ ರಸ ತೆಗೆದಿಟ್ಟು,
ಬೆಲ್ಲ ಪುಡಿ ಮಾಡಿಟ್ಟು,
ತಪಲೆಗೆ ಒಂದು ಲೋಟ ನೀರೆರೆದು, ಹುಣಸೇಹಣ್ಣಿನ ರಸ, ಬೆಲ್ಲ, ಉಪ್ಪು ಸೇರಿ ಕುದಿಯಲಿ.

ಒಂದು ಚಮಚದಷ್ಟು ಕಿತ್ತಳೆ ಸಿಪ್ಪೆ ಹಾಗೂ ಹಸಿಮೆಣಸಿನ ಹುಡಿಯನ್ನು ಕುದಿಯುತ್ತಿರುವ ಎಸರಿಗೆ ಹಾಕಿದಾಗ...
ಘಂ.. ಎಂದು ಸುವಾಸನೆ ಎದ್ದಿತು.
ಪುಟ್ಟ ಚಮಚ ತುಪ್ಪ ಎರೆದು,
ಊಟದ ಟೇಬಲ್ ಮೇಲೆ ಕಿತ್ತಳೆ ಸಿಪ್ಪೆಯ ಸೂಪ್ ಸಿದ್ಧವಾಗಿ ಕುಳಿತಿತು.

ನಿನ್ನೆಯ ಅನ್ನಸಂತರ್ಪಣೆಯ ಭೂರಿಭೋಜನದೂಟ ಉಂಡು, ಇವತ್ತಿನ ಸರಳ ಸೂಪ್ ಕುಡಿದು ಹೊಟ್ಟೆಗೂ ಹಿತವಾಯ್ತು ಅನ್ನಿ.

ಸೂಪ್ ಬೇಕಿಲ್ಲವೇ, ಅನ್ನದೊಂದಿಗೆ ಕಲಸಿ ಉಣಬಹುದಾದ ಸಾರು ಮಾಡೋಣ.
ಕರಿಬೇವು, ಇಂಗು ಕೂಡಿದ ಸಾಸಿವೆಯ ಒಗ್ಗರಣೆ ಬೀಳುವಲ್ಲಿಗೆ ಈಗ ತಯಾರಿಸಿದಂತಹ ಸೂಪ್ ಕಿತ್ತಳೆ ಸಿಪ್ಪೆಯ ಸಾರು ಎಂಬ ಹೆಸರನ್ನು ಹೊಂದಿತು. ಒಗ್ಗರಣೆಗೆ ತುಪ್ಪದ ಬಳಕೆಯೇ ಸೂಕ್ತ.

ಇನ್ನೂ ಎರಡು ಚಮಚ ಕಿತ್ತಳೆ ಸಿಪ್ಪೆಯ ಹುಡಿ ಉಳಿದಿದೆ.
ನಾಳೆ ಏನೋ ಒಂದು ತಿನಿಸು ಬರಲಿದೆ ಅನ್ನಿ.





ಕಿತ್ತಳೆ ಸಿಪ್ಪೆಯ ದೋಸೆ

ನನ್ನದು ನೀರುದೋಸೆಯ ಹಿಟ್ಟು ತಯಾರಾಯ್ತು.
ಎರಡು ಚಮಚ ಕಾಯಿತುರಿ
ಒಂದು ಹಸಿಮೆಣಸು
ಅರ್ಧ ನೀರುಳ್ಳಿ, ಉಳಿದರ್ಧ ಚಟ್ಣಿಗಾಗಿ
3 ಎಸಳು ಕರಿಬೇವು
ತುಸು ಕೊತ್ತಂಬರಿ ಸೊಪ್ಪು
ಎಲ್ಲವನ್ನೂ ಮಿಕ್ಸಿಯಲ್ಲಿ ಜಜ್ಜಿಕೊಳ್ಳಿ
ದೋಸೆ ಹಿಟ್ಟಿಗೆ ಬೆರೆಸಿ,
ಹ್ಞಾ.. ನಿನ್ನೆಯ ಕಿತ್ತಳೆ ಸಿಪ್ಪೆ ಪುಡಿ ಎಲ್ಹಿ?
ಅದನ್ನೂ ಸೇರಿಸಿ ತೆಳ್ಳವು ಹಿಟ್ಟಿಗೆ ಬೆರೆಸಿ,
ಘಮಘಮಿಸುವ ನೀರುದೋಸೆ ಸವಿದರು ಗೌರತ್ತೆ.

" ಇನ್ನೂ ಉಂಟಾ ಸಿಪ್ಪೇ? "
" ಉಂಟಲ್ಲ.. "
" ಮದ್ಯಾಹ್ನದೂಟಕ್ಕೆ ಸಿಪ್ಪೇ ಪುಡಿ ಹಾಕಿ ಒಂದು ಬಟಾಟೆ ಗೊಜ್ಜು ಮಾಡಿದ್ರಾದೀತು..."
" ಹೆಹೇ.. ಆಯ್ತು. ನಾಳೆ ಮಾಡೋಣ."

ಬಟಾಟೆ ಗೊಜ್ಜು ಮಾಡಿದ್ದು ಹೇಗೆ?

ಒಂದು ದೊಡ್ಡ ಗಾತ್ರದ ಬಟಾಟೆಯನ್ನು ತೊಳೆದು 3 ಹೋಳು ಮಾಡಿಟ್ಟು ಕುಕ್ಕರಿನಲ್ಲಿ 3 ಸೀಟಿ ಕೂಗಿಸಿ.
ಆರಿದ ನಂತರ ಸಿಪ್ಪೆ ತೆಗೆಯಿರಿ, ಮೃದುವಾಗಿ ಕೈಯಲ್ಲಿ ಹಿಸುಕಿರಿ.
2 ಚಮಚ ಕಾಯಿತುರಿ
2 ಹಸಿಮೆಣಸು
1 ನೀರುಳ್ಳಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು
ಮಿಕ್ಸಿಯಲ್ಲಿ ನೀರು ಹಾಕದೆ ರುಬ್ಬಿಕೊಳ್ಳಿ.
ಅರೆದ ಮಿಶ್ರಣ, ಕಿತ್ತಳೆ ಸಿಪ್ಪೆಯ ಹುಡಿ, ಒಂದು ಲೋಟ ಮೊಸರು ಸಹಿತವಾಗಿ ಬೇಯಿಸಿದ ಬಟಾಟೆಗೆ ಬೆರೆಸಿ.
ಟೇಬಲ್ ಮೇಲೆ ಬಿಡಿಸಿಟ್ಟ ದಾಳಿಂಬೆ ಗೋಚರವಾಗಿ, ಅದನ್ನೂ ಹಾಕಿ ಅಲಂಕರಿಸಲಾಯಿತು.
ಒಗ್ಗರಣೆ ಬೇಕಿದ್ದರೆ ಹಾಕಬಹುದು.
ಅಂತೂ ಈ ಪ್ರಕಾರವಾಗಿ ಕಿತ್ತಳೆಸಿಪ್ಪೆಯ ಮೊಸರುಗೊಜ್ಜು ತಯಾರಿಸಲಾಯಿತು.