Pages

Ads 468x60px

Saturday 28 December 2013

ಮಗನ ಮನೆಗೆ, ಬೆಂಗಳೂರಿಗೆ ಹೊರಟ ಘಳಿಗೆ....







" ಅಮ್ಮ, ಅಪ್ಪನೂ ಗಿರೀಶ್ ಮಾವನೂ ಬೆಂಗಳೂರಿಗೆ ಹೋಗೋ ಪ್ಲಾನ್ ಹಾಕ್ತಾ ಇದಾರೆ, ನೀನೂ ಈ ಚಾನ್ಸ್ ಬಿಡ ಬೇಡ, ಹೊರಟು ಬಾ " ಅಂದ ಮಗ.

ನೋಡುವಾ, ಅಪ್ಪ ಇನ್ನೂ ಹೇಳಿಲ್ಲ "

" ಹೇಳೂದೆಂಥದು, ನೀನು ಬಾ, ನನ್ನ ಆಫೀಸ್, ಮನೆ ನೋಡ್ಬೇಡ್ವಾ, ಚಿಕ್ಕಮ್ಮನ ಮನೆಗೆ ಹೋಗದೇ ವರ್ಷ ಎಷ್ಟಾಯ್ತು? ಲೆಕ್ಕ ಹಾಕೂ....."

ಹೌದು, ಅವನಂದಂತೆ ನಾನು ತಂಗಿ ಮನೆಗೆ ಹೋಗದೇ ಕೆಲವು ವರ್ಷಗಳೇ ಆಯ್ತು. ನಾಗರಬಾವಿಯಲ್ಲಿ ಹೊಸ ಮನೆ ಆದಾಗ ಹೋಗಿದ್ದು.

ಗಿರೀಶ್ ಜೊತೆ ಸಂಪರ್ಕಿಸಿದಾಗ ಅವನೂ ಪ್ರವಾಸದ ದೃಢೀಕರಣ ನೀಡಿದ. ಶೀಲಾ ಕೂಡಾ ಬರುತ್ತಿದ್ದಾಳೆ ಎಂಬ ಸುಳಿವನ್ನೂ ಬಿಟ್ಟು ಕೊಟ್ಟ.

ನಿಮ್ಮ ಜೊತೆ ನಾನೂ ಬರಲಿದ್ದೇನೆ ಎಂಬ ಬಾಂಬ್ ಸಿಡಿಸದಿದ್ದರಾಗುತ್ತಾ, " ಸರಿ, ನೀನೂ ಹೊರಡು "
ಹೊರಡುವ ಸಿದ್ಧತೆ ನಡೆಯಿತು. " ನೋಡೂ, ಇಲ್ಲಿಂದ ಮಂಗಳೂರು ತನಕ ನಮ್ಮ ಬೈಕು ಗೊತ್ತಾಯ್ತಾ..."

ನಮ್ದು ಹೊಸ ಬೈಕು ಬಂದಿತ್ತು, ಇವರಿಗೋ ಬೈಕಿನಲ್ಲೇ ಲೋಕಸಂಚಾರದ ಹುಮ್ಮಸ್ಸು. " ಓ, ಹಾಗೋ, ಸಂಗ್ತಿ..." ನಮ್ಮ ಲಗ್ಗೇಜ್, ಅದೂ ಇದೂ ಹ್ಯಾಗೆ ಬೈಕ್ ನಲ್ಲಿ....!!

ಬೈಕಿನಲ್ಲೇ ಮಂಗಳೂರು ವರೆಗೆ ಹೋಗೂದಂದ್ರೇನು ಹುಡುಗಾಟವೇ, ಮನೆಯಿಂದ ಪೈವಳಿಕೆ ತನಕ ಹೋಗಬಹುದು, ಕೆಟ್ಟು ಹೊಂಡ ಬಿದ್ದಿರುವ ರಸ್ತೆಯಲ್ಲಿ ಉಪ್ಪಳದ ವರೆಗೆ ಹೇಗೋ ಸುಧರಿಸಿಕೊಂಡು ಹೋಗಬಹುದು. ಈ ಸುದ್ದಿ ಮಗನ ಕಿವಿಗೆ ಬಿತ್ತು.

" ಅಷ್ಟೇ ತಾನೇ, ನೀನು ಬೈಕಿನಲ್ಲೇ ಕೂತಿರು, ಲಗ್ಗೇಜ್ ಯಾವ್ದೂ ನೀನು ಹಿಡ್ಕೋ ಬೇಡ ತಿಳೀತಾ "

ನನಗೋ ಉಪ್ಪಿನಕಾಯಿ, ತುಪ್ಪ, ಕರಿದ ತಿಂಡಿಗಳನ್ನು ಒಯ್ಯಬೇಕೆಂದಿತ್ತು. ಈಗ ಆ ಉತ್ಸಾಹವನ್ನು ಅದುಮಿಟ್ಟುಕೊಂಡು ಕೇವಲ ನನ್ನ ಬಟ್ಟೆಬರೆಗಳನ್ನು ಜೋಡಿಸಲು ತೊಡಗಿದೆ. ಗಿರೀಶನ ವೈಬರ್ ಫೋನ್ ಕರೆ ಹೆಚ್ಚಾಗಿ, ಆಗಾಗ ಗಂಟೆ ಬಾರಿಸಿದಂತೆ ಕಿವಿಗೆ ಬಡಿಯುತ್ತಿರುತ್ತದೆ. ಆ ಹೊತ್ತಿಗೆ " ಸೀರೆ ಎಷ್ಟು ಹಿಡ್ಕೊಳ್ಳಲೀ ಗಿರೀಶಾ..." ಕೇಳದಿದ್ರಾಗುತ್ತಾ.

" ತಗೊಳ್ಳಿ ಒಂದೈದಾರು " ಅಂದ್ಬಿಟ್ಟ. ಅಲ್ಲಿಗೆ ಇದು ದೀರ್ಘ ಪ್ರಯಾಣವೆಂದು ಖಾತ್ರಿ.

" ಈಗ ಚಳಿ ಶುರುವಾಗಿದೆ, ಸ್ವೆಟ್ಟರು, ಕೋಟು ಇರಲೀ " ಫೋನು ತಂಗಿಯದ್ದು. ಮಧು ಡೆಲ್ಲಿಯಿಂದ ತಂದಿದ್ದ ತರಹೇವಾರಿ ಕೋಟುಗಳು ಹೊರ ಬಂದವು.

" ಮುಗ್ಗುಲು ವಾಸನೆ ಬರ್ತಿದೆ, ತೊಳೆಯುವುದೊಳ್ಳೆದು "

ವಾರದ ಹಿಂದೆ ಬಂದಿದ್ದ ಅಟೋಮ್ಯಾಟಿಕ್ ವಾಶಿಂಗ್ ಮೆಶೀನ್ ತೊಳೆದು, ಒಣಗಿಸಿಯೇ ಕೊಟ್ಟಿತು. ನಮ್ಮ ಸಿದ್ಧತೆಯ ಸುದ್ದಿ ಆಗ್ಗಿಂದಾಗ್ಗೆ ಗಿರೀಶನನ್ನೂ ತಲಪುತಿತ್ತು. " ಹಾಗಿದ್ರೆ ನಂಗೂ ಕೋಟು ತೆಕ್ಕೊಳ್ಳಿ " ಅಂದ.

" ಇನ್ನೂ ಒಂದು ಕೋಟು ಆಗ್ಬೇಕಲ್ಲ "

" ಇದ್ದೀತು ಕಪಾಟಿನಲ್ಲಿ " ಅನ್ನುತ್ತಾ ಹುಡುಕಿದಾಗ ಭರ್ಜರಿ ಕೋಟು ಸಿಕ್ಕಿತು.

" ಇದನ್ನೂ ತೊಳೆಯುವುದುತ್ತಮ, ಇಷ್ಟು ಚೆನ್ನಾಗಿ ಹಳೇ ಮೆಶೀನು ತೊಳೆದದ್ದು ನಾನು ಕಂಡಿಲ್ಲ " ಅಂದರು ನಮ್ಮವರು.

" ನಾಳೆ ಬೆಳ್ಳಂಬೆಳಗ್ಗೆ ಹೊರಡೂದಂತೆ, ಈ ರಾತ್ರಿ ತೊಳೆಯುವ ಕೆಲಸವೇ ಆಯ್ತು " ಗೊಣಗುಟ್ಟುತ್ತಾ ವಾಶಿಂಗ್ ಮೆಶೀನ್ ಒಳಗೆ ಹಾಕಿ, ತೆಗೆದು ಮಾಡಿದ್ದೂ ಆಯಿತು.

ಶಿರಾಡಿಘಾಟ್ ರಸ್ತೆ ಏನೂ ಚೆನ್ನಾಗಿಲ್ಲ, ನಾವು ಮಡಿಕೇರಿ, ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವುದುತ್ತಮ ಎಂಬ ಸಲಹೆ ಬಂದಿತು. ಮೈಸೂರಿನಲ್ಲಿ ನಮ್ಮತ್ತಿಗೆ ಮನೆಯೂ ಇದೆ. ನಮ್ಮವರು ಅವರಕ್ಕನಿಗೂಂದು ಫೋನಾಯಿಸಿ ಬರುವ ಸೂಚನೆ ಕೊಟ್ಟೂ ಆಯಿತು.

" ಹಾಗಿದ್ರೆ ನಾವು ಹಿರಣ್ಯಕ್ಕೆ ಬರ್ತೇವೆ.." ಇಲ್ಲಿಂದಾನೇ ಪುತ್ತೂರು ರಸ್ತೆಯಿಂದ ಹೋಗುವ ತೀರ್ಮಾನಕ್ಕೆ ಬಂದ ಗೆಳೆಯರ ವ್ಯವಹಾರದಿಂದ ನನ್ನ ಬೈಕ್ ಪ್ರಯಾಣ ಉಳಿಯಿತು, ಆದರೆ ಮಗನಿಗಾಗಿ, ತಂಗಿಗಾಗಿ ಇನ್ನು ಏನನ್ನೂ ಅಡುಗೆಮನೆಯ ಪ್ರಯೋಗಶಾಲೆಯಲ್ಲಿ ತಯಾರಿಸಿ ಒಯ್ಯಲು ಸಮಯವಿಲ್ಲ. ಚಕೋತಾ ಕಿತ್ತದ್ದು ಇದ್ದಿತು. ಅದನ್ನೇ ಚೀಲಕ್ಕೇರಿಸಿದ್ದು ನನ್ನ ತೃಪ್ತಿ ....

ಸುದೀರ್ಘ ಪ್ರಯಾಣದ ಇನ್ನಷ್ಟು ವಿವರ ಹಾಗೂ ಪ್ರೇಕ್ಷಣೀಯ ತಾಣಗಳ ಚಿತ್ರಣ ಬರಲಿದೆ.... ನಿರೀಕ್ಷಿಸಿ!



Posted via DraftCraft app

Wednesday 18 December 2013

ಪುಷ್ಪ ಸಾಂಗತ್ಯ







ಬೆಳಕಿನ ಬೆಳಗಾಯಿತು
ಹಸಿರಿನ ಉಸಿರು ಹೊರ ಹೊಮ್ಮಿತು
ಪ್ರಭಾತ ಕಿರಣ ತೂರಿ ಬಂದಿತು
ಹೂವು ಬಿರಿದು ಅರಳಿತು
ಗಿಡದಲಡಗಿದ ಮೊಗ್ಗೆ ಏನೆಂದಿತು
ಮುಸ್ಸಂಜೆಯೊಂದು ಬರಲಿದೆ
ಚಿಂತಿಸದಿರು ಅಕ್ಕಾ,  
ಇದೇ ಮೊಗ್ಗೆ ನಾಳೆ ಬಿರಿಯಲಿದೆ
ಮುಗಿಯದ ವರ್ತಮಾನ ಇಲ್ಲಿದೆ |

ಹೂವಿನೊಳಗೆ ಕುಸುಮವೂ
ಕುಸುಮದೊಳಗೆ ಗಂಧವೂ
ತುಂಬಿದದವರಾರೇ ಅಕ್ಕಾ,  
ಹೂವಿನಿಂದ ಚೆಲುವು ಬಂದಿತೇ
ಈ ಚೆಲುವು ಮೊದಲೇನಾಗಿತ್ತೇ
ಕೇಳಿದರೆ ಉತ್ತರಿಸುವವರಿಲ್ಲ
ತಿಳಿದವರು ಇಲ್ಲವೇ ಇಲ್ಲ |

Posted via DraftCraft app

Saturday 7 December 2013

ಬಸಳೇ ಹುರುಳೀ ಬೆಂದಿ




ನಮ್ಮ ಪ್ರಾದೇಶಿಕ ವೈವಿಧ್ಯತೆಗನುಸಾರವಾಗಿ ಈ ವ್ಯಂಜನ ಬಸಳೇ ಕೂಟು, ಗಸಿ, ಬೆಂದಿ ಇತ್ಯಾದಿ ಹೆಸರುಗಳನ್ನು ಹೊಂದಿದೆ.   ಹುರುಳೀಕಾಳು,  ಪಪ್ಪಾಯಿ ಹಾಗೂ ಬಸಳೆಗಳ ಸಮರಸದ ಮಿಶ್ರಣ,  ಅನ್ನದೊಂದಿಗೆ, ಚಪಾತೀ,  ಅಕ್ಕಿ ರೊಟ್ಟಿ ಅಥವಾ ಇನ್ಯಾವುದೇ ರೊಟ್ಟಿಯಿರಲಿ, ಸವಿಯಬಹುದಾದ ಗ್ರಾಮೀಣ ಜನಜೀವನದ ಒಂದು ನಳಪಾಕ.  ಬಸಳೆ ಶೀತಗುಣ ಹೊಂದಿರುವ ಸೊಪ್ಪು ತರಕಾರಿಯಾಗಿದ್ದು,  ಪಪ್ಪಾಯಿ ಉಷ್ಣಗುಣವುಳ್ಳದ್ದು.   ಹಾಗಾಗಿಯೇ ಇವೆರಡನ್ನೂ ಜತೆಯಾಗಿ ತಿಂದರೆ ಸಮಶೀತೋಷ್ಣದಿಂದ ಕೂಡಿ ಶರೀರಕ್ಕೆ ಹಿತ.   ಇದು ಹಿರಿಯರ ಅಭಿಮತ.   ಶಕ್ತಿವರ್ಧಕವಾಗಿರುವ ಹುರುಳಿ ಸೇರಿದ ಬಸಳೆ ಬೆಂದಿಯ ರುಚಿಯನ್ನು ಸವಿದವರೇ ಬಲ್ಲರು.   ಬಸಳೆ ಚಪ್ಪರ,  ಪಪ್ಪಾಯದ ಮರ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಇದ್ದೇ ಇರುವಂತಹದು.

ದಿನವಿಡೀ ಹೊಲಗದ್ದೆಗಳಲ್ಲಿ ದುಡಿಯುವ ರೈತಾಪಿ ಮಂದಿ ತಮ್ಮ ಶರೀರದ ಕಸುವನ್ನು ಸಮತೋಲನದಲ್ಲಿರಿಸಿಕೊಳ್ಳಲು ಹುರುಳಿಯಿಂದಲೇ ವಿಧವಿಧವಾದ ವ್ಯಂಜನಗಳನ್ನು ತಯಾರಿಸಿ ಉಣ್ಣುವ ವಾಡಿಕೆ.   ಹುರುಳೀ ಸಾರು,  ಹುರುಳಿ ಚಟ್ನಿ,  ಗಸಿ ಇತ್ಯಾದಿಗಳು ಗ್ರಾಮೀಣ ಜನತೆಯ ದೈನಂದಿನ ಖಾದ್ಯಗಳಲ್ಲಿ ಹಾಸುಹೊಕ್ಕಾಗಿವೆ.   ಇವನ್ನೆಲ್ಲ ಅಂಗಡಿಯಿಂದ ಕೊಂಡು ತರುವ ಪ್ರಮೇಯವೇ ಇರಲಿಲ್ಲ.     ಅಧಿಕ ಕಬ್ಬಿಣಾಂಶ ಹೊಂದಿರುವ ಹುರುಳಿ,  ಒಣಭೂಮಿ ಬೆಳೆಯಾಗಿದ್ದು,  ಹಿಂದಿನಕಾಲದಿಂದಲೇ ರೈತರು ಗದ್ದೆ ಕಟಾವು ಆದ ಬೆನ್ನಿಗೇ ಹುರುಳಿ ಬಿತ್ತನೆ ಮಾಡುವ ವಾಡಿಕೆ.  ಕೇವಲ ಹುರುಳಿ ಮಾತ್ರವಲ್ಲ,  ಉದ್ದು,  ಹಸರು,  ತೊಗರಿಗಳೂ ಹೀಗೆ ಒಣಭೂಮಿ ಬೆಳೆಗಳಾಗಿವೆ.    ಹಿಂದೆ ಈಗಿನಂತೆ ಪಶು ಆಹಾರ ಎಂಬ ಸಿದ್ಧ ವಸ್ತು ಇರಲಿಲ್ಲ.   ಗದ್ದೆ ಉಳಲು ಯಂತ್ರಗಳೂ ಇಲ್ಲವಾಗಿದ್ದುದರಿಂದ ಕೃಷಿಕರು ತಮ್ಮ ಜಾನುವಾರುಗಳನ್ನೇ ಗಟ್ಟಿಮುಟ್ಟಾಗಿ ಸಾಕಿಕೊಳ್ಳುತ್ತಿದ್ದರು.   ಹುರುಳಿ ಅಂದಿಗೂ ಇಂದಿಗೂ ಅತ್ಯುತ್ತಮ ಪಶು ಆಹಾರವಾಗಿದೆ,   ಆಂಗ್ಲ ಭಾಷೆಯಲ್ಲಿ ಈ ಕಾರಣದಿಂದಲೇ horse gram ಎಂಬ ಹೆಸರು ಬಂದಿದೆ.

  Basella alba ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಬಸಳೆಯಲ್ಲಿರುವ ಶರೀರ ಪೋಷಕ ಗುಣಗಳು ಈ ರೀತಿಯಾಗಿವೆ.   ಆಂಂಟಿ ಓಕ್ಸಿಡೆಂಟ್ ಗುಣದ ಬಸಳೆ ನಾರು ಪದಾರ್ಥವಾಗಿದ್ದು ಕ್ಯಾಲ್ಸಿಯಂ,  ಕಾರ್ಬೋಹೈಡ್ರೇಟ್ ಗಳಿಂದ ಸಮೃದ್ಧವಾಗಿದೆ.   ವಿಟಮಿನ್ ಎ, ಸಿ,  ಖನಿಜಾಂಶಗಳೂ ಅಡಕವಾಗಿರುವ ಬಳ್ಳಿ ಸಸ್ಯ. ದಕ್ಷಿಣ ಕನ್ನಡಿಗರ ಆಡುನುಡಿಯಲ್ಲಿ ಬಪ್ಪಂಗಾಯಿ ಎಂದು ಕರೆಯಲ್ಪಡುವ ಪಪ್ಪಾಯಿ,  Carica papaya ಎಂಬ ಸಸ್ಯಶಾಸ್ತ್ರೀಯ ಹೆಸರೂ ಇದಕ್ಕಿದೆ,  ಪೌಷ್ಟಿಕ ಆಹಾರವೂ ಹೌದು.




ಬಸಳೇ ಬೆಂದಿ ಮಾಡುವ ವಿಧಾನ:

ಒಂದು ಕಪ್ ಹುರುಳೀ ಕಾಳು,  ನೆನೆಸಿಡಿ.
ಅವಶ್ಯವಿರುವಷ್ಟು ಬಸಳೆ ಕತ್ತರಿಸಿಡಿ.
ಪಪ್ಪಾಯ ಹೋಳುಗಳು.
ರುಚಿಗೆ ಉಪ್ಪು ಹಾಕಿ ಬೇಯಿಸಿ.

ಒಂದು ಕಪ್ ಕಾಯಿತುರಿ
ಒಂದು ಚಮಚ ಉದ್ದಿನಬೇಳೆ
3 ಚಮಚ ಕೊತ್ತಂಬರಿ
ಚಿಕ್ಕ ಚಮಚ ಜೀರಿಗೆ
ಚಿಕ್ಕ ಚಮಚ ಮೆಂತೆ
ಸ್ವಲ್ಪ ಇಂಗು
ಎಣ್ಣೆ ಪಸೆಯಲ್ಲಿ ಹುರಿದುಕೊಳ್ಳಿ.
ಕಾಯಿತುರಿಯೊಂದಿಗೆ ಅರೆಯಿರಿ.

ಅರೆದ ಮಸಾಲೆಗೆ ನೆಲ್ಲಿಗಾತ್ರದ ಹುಣಸೇಹಣ್ಣಿನ ರಸ,  ಬೇಕಿದ್ದರೆ ಬೆಲ್ಲವನ್ನೂ ಹಾಕಿಕೊಳ್ಳಿ.   ಬೇಯಿಸಿಟ್ಟ ಬಸಳೆ ಮಿಶ್ರಣಕ್ಕೆ ಎರೆದು,  ರುಚಿಗೆ ಉಪ್ಪು ,  ಅವಶ್ಯವಾದ ನೀರು ಎರೆದು ಕುದಿಸಿ.   ತಂಗಿನೆಣ್ಣೆಯಲ್ಲಿ  ಬೆಳ್ಳುಳ್ಳಿ ಹುರಿದು ಒಗ್ಗರಣೆ ಕೊಡುವಲ್ಲಿಗೆ ಬಸಳೆ ಬೆಂದಿ ಆದಂತೆ.






ಅಕ್ಕಿ  3 ಕಪ್
ಉದ್ದು 1 ಕಪ್
ಮಂತೆ  1 ಚಮಚ
ಹುರುಳಿ ಕಾಳು  ಅರ್ಧ ಕಪ್
ಎಲ್ಲವನ್ನೂ ನೆನೆಸಿಡಿ.
ಬೇಳೆಕಾಳುಗಳನ್ನು ನುಣ್ಣಗೆ ಅರೆದು ತೆಗೆಯಿರಿ.   ಅಕ್ಕಿಯನ್ನೂ ಅರೆದು,  ಹಿಟ್ಟುಗಳನ್ನು ಕೂಡಿಸಿ,  ಉಪ್ಪು ಬೆರೆಸಿ ಎಂಟು ಗಂಟೆಗಳ ಕಾಲ ಹುದುಗು ಬರಲು ಮುಚ್ಚಿಡಿ.   
ಮುಂಜಾನೆ ದೋಸೆ ಎರೆದು ತೆಂಗಿನ ಚಟ್ನಿಯೊಂದಿಗೆ ತಿನ್ನಿ.




ನೀರು ದೋಸೆ:

2 ಕಪ್ ಅಕ್ಕಿ
ಅರ್ಧ ಕಪ್ ಹುರುಳಿ
ನೆನೆಸಿಟ್ಟು,  ನುಣ್ಣಗೆ ಅರೆದು,  ರುಚಿಗೆ ಉಪ್ಪು ಬೆರೆಸಿ,  ಸಾಕಷ್ಟು ತೆಳ್ಳಗೆ ಮಾಡಿಕೊಂಡು ನೀರುದೋಸೆ ಎರೆದುಕೊಳ್ಳಿ.  



ಹುರುಳೀ ಚಟ್ನಿ :

ಒಂದು ಕಡಿ ತೆಂಗಿನ ತುರಿ
3 ಚಮಚ ಹುರುಳಿ ಕಾಳು
2 ಒಣಮೆಣಸು,  ಹಸಿಮೆಣಸೂ ಆದೀತು,  ಗಾಂಧಾರಿ ಮೆಣಸು ಇನ್ನೂ ಚೆನ್ನ.
ರುಚಿಗೆ ಉಪ್ಪು,  ಹುಳಿ

ಹುರುಳಿಯನ್ನು ಸುವಾಸನೆ ಬರುವಂತೆ ಎಣ್ಣೆ ಪಸೆ ಮಾಡಿಕೊಂಡು ಹುರಿದು,  ಇನ್ನಿತರ ಸಾಮಗ್ರಿಗಳೊಂದಿಗೆ ಅರೆದುಕೊಳ್ಳಿ.  ಕರಿಬೇವಿನೆಸಳಿನೊಂದಿಗೆ ಒಗ್ಗರಣೆ ಕೊಟ್ಟು ಬಿಡಿ.   

ಇನ್ನಿತರ ಬೇಳೆಕಾಳುಗಳ ಕೋಸಂಬರಿ ತಯಾರಿಸುವಂತೆ ಹುರುಳಿ ಕಾಳನ್ನೂ ಮೊಳಕೆ ಬರಿಸಿ ಕೋಸಂಬರಿ ತಯಾರಿಸಿ.

ಪುಷ್ಟಿದಾಯಕವಾದ ಇಂತಹ ಧಾನ್ಯಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುತ್ತಾ ಇದ್ದಲ್ಲಿ ಮಕ್ಕಳೂ ಆರೋಗ್ಯವಂತರಾಗಿ,  ದೃಢಕಾಯರಾಗಿರುವುದರಲ್ಲಿ ಸಂಶಯವಿಲ್ಲ.   " ಮಗು ಏಕೋ ನಿತ್ರಾಣಿಯಾಗಿದೆ "   ಎಂದು ವೈದ್ಯರಲ್ಲಿಗೆ ಹೋಗುವ ಅವಶ್ಯಕತೆಯೇ ಬರಲಾರದು.

Posted via DraftCraft app