Pages

Ads 468x60px

Wednesday 26 August 2020

ಕೆಸುವಿನೆಲೆಯ ಚಟ್ಣಿ



 



ನಿನ್ನೆ ಸಂಜೆ ಮನೆಯ ಹಿಂದೆ ಚಿಕ್ಕದೊಂದು ಕತ್ತಿ ಹಿಡಿದು ಅಡ್ಡಾಡುತ್ತಿದ್ದಾಗ ಕರಿ ಕೆಸುವಿನ ಬುಡದಲ್ಲಿ ಇನ್ಯಾವುದೋ ಸಸ್ಯ ಎತ್ತರವಾಗಿ ಬೆಳೆಯುವ ಹವಣಿಕೆಯಲ್ಲಿ ಇದ್ದುದು ಗಮನಕ್ಕೆ ಬಂತು.  ಕತ್ತಿಯಾಡಿಸಿ ಅದರ ಕಾಂಡ ಮುರಿದು ತೆಗೆದಾಗ ನನ್ನ ಮುದ್ದಿನ ಕರಿ ಕೆಸುವಿನ ಎಲೆಯೊಂದು ದಂಟಿನೊಂದಿಗೆ ಮುರಿದು ಹೋಯಿತಲ್ಲ.   


ಚಿಂತೆಯಿಲ್ಲ ನಾಳೆ ಕೆಸುವಿನ ಎಲೆಯ ಚಟ್ಣಿ ಮಾಡಿದರಾಯಿತು ಒಂದೆಲೆ ಸಾಲದು ಇದು ಬರೇ ಪುಟ್ಟದು ಇಂತಹ ಕಿರುಗಾತ್ರದ ಕಾಡು ಕೆಸು ಅಲ್ಲಲ್ಲಿ ಪೊದರಿನಂತೆ ಹಬ್ಬಿಕೊಂಡಿವೆ ಐದಾರು ಕಾಡು ಕೆಸು ಎಲೆಗಳನ್ನು ಚಿವುಟಿ ನಲ್ಲಿ ನೀರಿನಲ್ಲಿ ಕಾಲು ತೊಳೆದು ಒಳ ಬಂದು ಕೆಸುವಿನ ಸೊಪ್ಪುಗಳನ್ನು ತರಕಾರಿ ಬುಟ್ಟಿಯೊಳಗಿಟ್ಟು ಚಟ್ಣಿ ಅಡುಗೆಯ ವಿಧಾನಕ್ಕಾಗಿ ಜಯಾ ಶೆಣೈ ಬರೆದ ಅಡುಗೆ ಪುಸ್ತಕದ ಅವಲೋಕನ..


ಕೆಸುವಿನೆಲೆಗಳನ್ನು ತೊಳೆದು ಒರೆಸಿ ಇಡುವುದು.

ಪುಟ್ಟದಾದ ಐದಾರು ಎಲೆಗಳು ನಮ್ಮದು.

ಚಿಕ್ಕದಾಗಿ ಹೆಚ್ಚಿ ತುಸು ನೀರೆರೆದು ಉಪ್ಪು ಹಾಗೂ ಹುಣಸೆ ಹಣ್ಣಿನ ರಸ ಎರೆದು ಬೇಯಿಸುವುದು.

ಹಣಸೆ ಹಣ್ಣು ನೆಲ್ಲಿಕಾಯಿ ಗಾತ್ರದಲ್ಲಿರಲಿ.

ಎಂದಿನಂತೆ ಕುಕ್ಕರ್ ಒಳಗೆ ತುಂಬಿ ಒಂದು ಸೀಟಿ ಹಾಕಿಸಿದ್ದಾಯ್ತು.


ಅರ್ಧ ತೆಂಗಿನಕಾಯಿಯ ಅರ್ಧದಷ್ಟು ಕಾಯಿತುರಿ ಇರಲಿ.

ಒಣ ಕೊಬ್ಬರಿ ಬೇಡ.


ಐದಾರು ಒಣಮೆಣಸು,

ಒಂದು ದೊಡ್ಡ ಚಮಚ ಕೊತ್ತಂಬರಿ ಹಾಗೂ ಅಷ್ಟೇ ಉದ್ದಿನಬೇಳೆ,

ತುಸು ಎಣ್ಣೆಪಸೆಯಲ್ಲಿ ಹುರಿಯಿರಿ ಉದ್ದಿನಬೇಳೆ ಹೊಂಬಣ್ಣ ಬರಬೇಕು.


ಬೇಯಿಸಿದ ಸೊಪ್ಪುಕಾಯಿತುರಿ ಹಾಗೂ ಹುರಿದ ಸಾಮಗ್ರಿಗಳನ್ನೆಲ್ಲ ನುಣ್ಣಗೆ ಅರೆಯಿರಿ ಸೊಪ್ಪು ಬೇಯಲು ಎರೆದ ನೀರಿನಿಂದಲೇ ಅರೆಯಿರಿ ನೀರು ಜಾಸ್ತಿ ಹಾಕದಿರಿ ರುಚಿಗೆ ಬೇಕಾದ ಉಪ್ಪು ಹಾಗೂ ಸಿಹಿ ಬೇಕಿದ್ದರೆ ಬೆಲ್ಲವನ್ನೂ ಅರೆಯುವಾಗಲೇ ಹಾಕಿರಿ.


ಬಾಣಲೆಯಲ್ಲಿ ನಾಲ್ಕು ಚಮಚ ತೆಂಗಿನೆಣ್ಣೆ ಎರೆದು ಒಗ್ಗರಣೆ ತಯಾರಿ ಆಗಬೇಕಿದೆ.  

ಉದ್ದಿನಬೇಳೆ ಸಾಸಿವೆ ಹಾಗೂ ಒಣಮೆಣಸಿನ ಚೂರುಗಳು.


ಸಾಸಿವೆಯ ಸಿಡಿ ಸಿಡಿ ಸದ್ದು ನಿಂತಾಗ ಅರೆದ ಅರಪ್ಪನ್ನು ಹಾಕುವುದು ನೀರಿನಂಶ ಆರುವ ತನಕ ಸೌಟಾಡಿಸಿ.

ಗಟ್ಟಿ ಮುದ್ದೆ ಆದರೆ ಸಾಕು ಕೆಳಗಿಳಿಸಿ ಅನ್ನದೊಂದಿಗೆ ಕೂಡಿ ತಿನ್ನಲು ರುಚಿಯಾದ ವ್ಯಂಜನ ನಮ್ಮದಾಯಿತು.


ಆದರೇನಂತೆ ನಮ್ಮ ಊಟದ ವ್ಯವಹಾರದಲ್ಲಿ  ಕೆಸುವಿನೆಲೆಯ ಚಟ್ಣಿ ಮುಗಿಯಲಿಲ್ಲ.  

ನಾಳೆಗೂ ಇಡಬಹುದು ಆದರೆ   ನಿನ್ನೆಯ ಚಟ್ಣಿ ಬೇಡ.."  ಎಂಬ ಮಾತು ಕೇಳಬೇಕಾದೀತು.


ಮುಂಜಾನೆಯ ಚಪಾತಿಗಾಗಿ ಹಿಟ್ಟು ರಾತ್ರಿಯೇ ಕಲಸಿಟ್ಟು ರೂಢಿ,   ರಾತ್ರಿಯೂಟಕ್ಕಾಗಿ ಚಟ್ಣಿಯ ಹೂರಣದ ಪರೋಟಾ ಸಿದ್ಧವಾಗಿಬಿಟ್ಟಿತು!

 ಪರೋಟಾ ತಿಂದು ಮುಗಿಯಿತುಚಟ್ಣಿಯೂ ಖಾಲಿ ಆಯ್ತೆಂದು ಬೇರೆ ಹೇಳಬೇಕಿಲ್ಲ.








Saturday 22 August 2020

ಜೀಗುಜ್ಜೆ ಉಪ್ಪೇರಿ

 



ತೀರ್ಥ ಅಮಾವಾಸ್ಯೆಯ ಪವಿತ್ರಸ್ನಾನಕ್ಕಾಗಿ ಹಿರಣ್ಯದ ಪವಿತ್ರ ಜಲಧಾರೆಗೆ ತಲೆಯೊಡ್ಡಿ ಮೀಯಲು  ಕೋವಿಡ್ ಮುನ್ನೆಚ್ಚರಿಕೆಯಿದ್ದರೂ ಜನ ನೆರೆದು ಮಿಂದು ಪುನೀತರಾದರು ಎಲ್ಲರೂ ಹೋದ ನಂತರ ನನ್ನದೂ ನೀರ ಪುಳಕ ಸ್ನಾನ ಆಯಿತು ಇರಲಿ ಬಂದಂತಹ ಭಕ್ತ ಮಹನೀಯರಿಂದ ನನಗೆ ಬಸಳೆಜೀಗುಜ್ಜೆಗಳ ಗಿಫ್ಟ್ ಸಿಕ್ಕಿತು.


ಬಲಿತ ಜೀಗುಜ್ಜೆಯಿಂದ ಮಾಡುವಂತಹ ಸಾಂಬಾರ್ ಅತಿ ರುಚಿಕರ ಬೇಗನೇ ಬೇಯುವ ತರಕಾರಿ ಕುಕ್ಕರ್ ಬೇಡವೇ ಬೇಡ.

ಅರ್ಧ ಜೀಗುಜ್ಜೆಯ ಹೋಳುಗಳನ್ನೆಲ್ಲ ಸಾಂಬಾರಿಗೆ ಹಾಕಿದರೆ ತಿಂದು ಮುಗಿಯದು ಚಿಪ್ಸ್ ಮಾಡೋಣ ಕೊರೋನಾ ಸಂತ್ರಸ್ತರಿಗ ಸರಕಾರದ ರೇಷನ್ ಕಿಟ್ ಮೂಲಕ ಕೊಟ್ಟಂತಹ ತೆಂಗಿನೆಣ್ಣೆ, ಸನ್ ಫ್ಲವರ್ ಎಣ್ಣೆಗಳು ಸುಮ್ಮನೇ ಡಬ್ಬದಲ್ಲಿ ಇವೆ ಅದಕ್ಕೂ ದಾರಿ ಕಾಣಿಸದಿದ್ದರೆ ನಮ್ಮ ಅಡುಗೆಮನೆ ವ್ಯವಹಾರ ನಿರರ್ಥಕ.


ಒಂದರ್ಧವನ್ನು ಫ್ರಿಜ್ ಒಳಗೆ ನಾಳೆಗಾಗಿ ತೆಗೆದಿರಿಸಲಾಯಿತು.

ಉಳಿದರ್ಧದ ಅರ್ಧ ಈಗ ಚಿಪ್ಸ್ ಆಗಲಿದೆ.


ಸಿಪ್ಪೆಯನ್ನು ತೆಳ್ಳಗೆ ಹೆರೆದುಗೂಂಜು ಎಂಬ ಮಯಣ ಒಸರುವ ಭಾಗವನ್ನೂ ತೆಗೆದುಎಷ್ಟಾದರೂ ಜೀಗುಜ್ಜೆಯು ಹಲಸಿನಕಾಯಿಯ ತಮ್ಮನಲ್ಲವೇ..  ಮಯಣ ನಿವಾರಣೆಗಾಗಿ ನೀರಿನಲ್ಲಿ ಹಾಕಿ ಇಡುವುದು.


ಚಿಪ್ಸ್ ಅಥವಾ ಉಪ್ಪೇರಿಗಾಗಿ ಇರುವ ಸಾಧನದಲ್ಲಿ ತೆಳ್ಳಗೆ ಕತ್ತರಿಸಿ ಒಂದು ತಟ್ಟೆಯಲ್ಲಿ ಹಾಕಿ ಇರಿಸುವುದು.  


ಬಾಣಲೆಯಲ್ಲಿ ಎಣ್ಣೆಯಿಟ್ಟು ಬಿಸಿಯೇರಿದಾಗ ,

ಎಣ್ಣೆಯಲ್ಲಿ ಹಿಡಿಸುವಷ್ಟೂ ಹಾಕುವುದು.

ನುರಿತ ಪಾಕತಜ್ಞರು ನೇರವಾಗಿ ಎಣ್ಣೆಗೇ ಕತ್ತರಿಸಿ ಹಾಕಬಲ್ಲರು ಅಂತಹ ಸಾಹಸಕ್ಕೆ ನಾನು ಇದುವರೆಗೆ ಕೈ ಹಾಕಿಲ್ಲ.


ಎಣ್ಣೆಗೆ ಹಾಕಿದ ಕೂಡಲೇ ಸೌಟಿನಲ್ಲಿ ಕೆದಕಬಾರದು ಬೇಯಲು ಸ್ವಲ್ಪ ಸಮಯ ಕೊಟ್ಟು ನಂತರ ಕವುಚಿ ಮಗುಚಿ ಹಾಕುತ್ತ ಇದ್ದಂತೆ ಗರಿ ಗರಿಯಾಗಿ ಎದ್ದು ಬಂದಿತೇ,

ಈಗ ಒಂದು ಚಮಚ ಪುಡಿಯುಪ್ಪು ಹಾಗೂ ತುಸು ಇಂಗು ಸ್ವಲ್ಪವೇ ನೀರಿನಲ್ಲಿ ಕರಗಿಸಿ,

 

ಒಂದು ಚಮಚದಷ್ಟು ಉಪ್ಪು ನೀರನ್ನು ಎರೆಯಿರಿ.

ನೀರು ಸಿಡಿಯುವ ಸದ್ದು ನಿಂತಾಗ ತೂತಿನ ಸಟ್ಟುಗದಲ್ಲಿ ತೆಗೆದುಇನ್ನೊಂದು ತೂತಿನ ಡಬರಿಗೆ ಹಾಕುವುದು.


ನನ್ನ ಚಿಪ್ಸ್  ಥರ ಎರಡು ಬಾರಿ ಹಾಕುವಲ್ಲಿಗೆ ಆಯಿತು ರೇಷನ್ ಕಿಟ್ ಸಾಮಗ್ರಿಯಲ್ಲಿ ಬಂದಮತಹ ಮೆಣಸಿನ ಹುಡಿ ಚಿಮುಕಿಸಿ ಡಬ್ಬದಲ್ಲಿ ತುಂಬಿ ಇಟ್ಟಾಯ್ತು.


ಸಂಜೆಯ ಚಹಾ ರುಚಿಕರವಾಗಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.   ನಮ್ಮ ನಾಯಿಯೂ ಹಾರಿ ಹಾರಿ ತಿಂದಿತು ಇನ್ನೂ ಉಳಿದ ಅರ್ಧ ಜೀಗುಜ್ಜೆಯನ್ನೂ ಹೀಗೇ ಚಿಪ್ಸ್ ಮಾಡಿ ಇಟ್ಟುಕೊಳ್ಳತಕ್ಕದ್ದು ಎಂದು ಸರ್ವಾನುಮತದ ನಿರ್ಣಯ ಆಗಿ ಹೋಯಿತು.


ಉಪ್ಪೇರಿ ಅಚ್ಚ ಕನ್ನಡ ಪದ.  ಇಂತಹ ಉಪ್ಪೇರಿಗಳನ್ನು ನೇಂದ್ರ ಬಾಳೆಕಾಯಿ, ಸಿಹಿಗೆಣಸು, ಬಟಾಟೆ, ಇತ್ಯಾದಿಗಳಿಂದ ಮಾಡಿಕೊಳ್ಳಬಹುದಾಗಿದೆ.  ನಮ್ಮ ಊರ ಕದಳಿ ಬಾಳೆಕಾಯಿ ಕೂಡಾ ಆಗುತ್ತದೆ.






Sunday 9 August 2020

ಪತ್ರೊಡೆ ಸುರುಳಿ

 


ಕೆಸುವಿನ ಪತ್ರೊಡೆ ಮಾಡಲೇ ಬೇಕು,  ಹಿಂದಿನ ವರ್ಷ ಬೆಂಗಳೂರಿಗೆ ಹೋಗಿ ಬರುವಷ್ಟರಲ್ಲಿ ಕರಿ ಕೆಸು ಹಂದಿ ಧಾಳಿಗೆ ತುತ್ತಾಗಿ ನೆಲಕಚ್ಚಿತ್ತು.


ಈಗ ಹೇಗೂ ಎಲ್ಲಿಗೂ ಹೋಗುವುದಕ್ಕೂ ಇಲ್ಲ ಮನೆಗೆ ಯಾರೂ ಬರುವುದಕ್ಕೂ ಇಲ್ಲ ತೋಟದ ಕೆಲಸಕ್ಕೆ ಬರುತ್ತಿದ್ದವರೆಲ್ಲ ಗತಿಗೋತ್ರವಿಲ್ಲದವರಂತೆ ಎಲ್ಲೋ ಮರೆಯಾಗಿದ್ದಾರೆ.

ಅಂಗಳವೆಂದರೆ ಹಸಿರು ಗಿಡಗಳ ತಾಣ ನನಗೆ ಬೇಕಾದಂತಹ ಕೆಸುವಿನ ಎಲೆಗಳನ್ನು ಕೊಯ್ದಾಯ್ತುಅದೂ ದಂಟು ಸಹಿತವಾಗಿ ಕೊಯ್ದರೆ ಉತ್ತಮ ಕೆಸುವಿನ ದಂಟನ್ನು ಪದಾರ್ಥಕ್ಕೆ ಬಳಸಬಹುದು ಅಷ್ಟರಲ್ಲಿ ಜಡಿ ಮಳೆ ಶುರು ಮನೆಯೊಳಗೆ ಓಡಿ ಬಂದಿದ್ದಾಯ್ತು.   ತೋಟದಿಂದ ಬಾಳೆ ಎಲೆ ತರಲಿಕ್ಕೂ ಸಮಸ್ಯೆ.  


ತೊಂದರೆಯಿಲ್ಲ ಪತ್ರೊಡೆಯನ್ನು ಬಾಳೆ ಎಲೆ ಇಲ್ಲದಿದ್ದರೂ ಮಾಡಲಿಕ್ಕಾಗುತ್ತದೆ.  


ಮೊದಲಾಗಿ ಅಕ್ಕಿ ತೊಳೆದು ನೆನೆಯಲು ಇರಿಸುವುದು.

ಕುಚ್ಚುಲಕ್ಕಿ ಬೆಳ್ತಿಗೆ ಅಕ್ಕಿಯಾವುದೂ ಆದೀತು ಮಿಕ್ಸಿಯಲ್ಲಿ ಕುಚ್ಚುಲಕ್ಕಿ ಅರೆಯುವುದು ತುಸು ತ್ರಾಸದ ವ್ಯವಹಾರ.


ನಾವೇನು ಮಾಡೋಣಾ ಅಂದರೆ ಒಂದು ಲೋಟ ಬೆಳ್ತಿಗೆ ಅಕ್ಕಿಯನ್ನು ಕುದಿಯುವ ನೀರು ಎರೆದು ಹತ್ತು ನಿಮಿಷ ಮುಚ್ಚಿಇರಿಸುವುದು.

ಇನ್ನೊಂದು ಲೋಟ ಬೆಳ್ತಿಗೆ ಅಕ್ಕಿಯನ್ನು ತಣ್ಣೀರು ಎರೆದು ಇಡುವುದು.

ಹತ್ತು ನಿಮಿಷದ ತರುವಾಯ ಎರಡೂ ಪ್ರತಿ ಅಕ್ಕಿಗಳನ್ನು ಒಟ್ಟಿಗೆ ಹಾಕಿರಿಸುವುದು ಅಕ್ಕಿಯ ವ್ಯವಸ್ಥೆ  ರೀತಿಯಾಗಿ ಪೂರ್ಣಗೊಂಡಂತಾಯಿಕು.

2ರಿಂದ 3 ಚಮಚ ಮೆಂತೆ ಕಾಳು ಮೊಸರು ಎರೆದು ನೆನೆಯಲಿಕ್ಕೆ ಇಡುವುದು

ಅರ್ಧ ಲೋಟದಷ್ಟು ಹಸಿ ತೆಂಗಿನತುರಿ

4ರಿಂದ 5 ಒಣಮೆಣಸು ತಣ್ಣೀರಿನಲ್ಲಿ ಹಾಕಿ ಇಟ್ಟರೆ ಅರೆಯಲಿಕ್ಕೆ ಉತ್ತಮ.

ಒಂದು ಚಮಚ ಕೊತ್ತಂಬರಿ.

ಸ್ವಲ್ಪ ಜೀರಿಗೆ ಇಂಗು ಅರಸಿಣ ಹುಡಿ

ರುಚಿಗೆ ಸೂಕ್ತ ಪ್ರಮಾಣದ ಉಪ್ಪು ಬೆಲ್ಲ ಹುಣಸೆಯ ಹುಳಿ.

ಮಸಾಲೆಗಳನ್ನು ನಮ್ಮ ಬಾಯಿರುಚಿಗನುಸಾರ ಹೆಚ್ಚೂಕಮ್ಮಿ ಮಾಡಬಹುದುಮೆಣಸು ಕೊತ್ತಂಬ್ರಿಗಳನ್ನು ಹುರಿದೂ ಹಾಕಬಹುದು.


ಮೆಂತೆ ತೆಂಗಿನತುರಿ ಇತ್ಯಾದಿಯಾಗಿ ಮಸಾಲೆಗಳನ್ಮು ಮೊದಲು ಅರೆಯುವುದು.

ನಂತರ ನೆನೆದ ಅಕ್ಕಿಯನ್ನೂ ಹಾಕಿ ಅರೆಯುವುದು ನುಣ್ಣಗಾದರೆ ಉತ್ತಮ ಇಡ್ಲಿ ಹಿಟ್ಟಿನ ಸಾಂದ್ರತೆಯ ಹಿಟ್ಟು ನಮ್ಮದಾಗಿರಬೇಕು.


ಕೆಸುವಿನ ದಂಟು ಕತ್ತರಿಸಿ ನಾಳೆಯ ಅಡುಗೆಗಾಗಿ ತೆಗೆದಿರಿಸಿ,    ತಂಪು ಪೆಟ್ಟಿಗೆಯ ವ್ಯವಸ್ಥೆ ಬೇಡ ಹಾಗೇನೆ ನೆಲದಲ್ಲಿ ಇಟ್ಟರಾಯಿತು ತುಸು ಬಾಡಿದಾಗ ನಾರು ತೆಗೆಯುವುದು ಸಲೀಸು ನಾಲ್ಕೈದು ದಿನ ಬಿಟ್ಟು ಮಾಡಲೂ ತೊಂದರೆಯಿಲ್ಲ,  


ದೊಡ್ಡ ಗಾತ್ರದ ಕೆಸುವಿನ ಎಲೆಗಳನ್ನು ಒರೆಸಿ ಹಿಂಭಾಗದಲ್ಲಿರುವ ನಾರನ್ನು ಸಾಧ್ಯವಾದಷ್ಟು ಚೂರಿಯಿಂದ ಹೆರೆದು ತೆಗೆಯಿರಿ.

 

 ಹೊತ್ತಿಗೆ ಇಡ್ಲಿ ಪಾತ್ರೆಯನ್ನು ಒಲೆಗೇರಿಸುವುದು.  

ಪತ್ರೊಡೆಯ ಹಿಟ್ಟನ್ನು ಕೆಸುವಿನ ಎಲೆಯ ಹಿಂಭಾಗಕ್ಕೆ ಓಂದು ಸೌಟು ಎರೆದು ಅಂಗೈಯಲ್ಲಿ ಹಿಟ್ಟನ್ನು ಸವರುತ್ತ ಎಲೆ ತುಂಬ ತೆಳ್ಳಗಾಗಿ ಹಿಟ್ಟನ್ನು ಹಚ್ಚುತ್ತ ಬನ್ನಿ ಪತ್ರೊಡೆಯೂ ಪಜೆಮಡಿಕೆಯ ಒಂದು ವಿಧ ಎಂದು ತಿಳಿಯಿರಿ.




ದೊಡ್ಡದಾದ ಎಲೆ ತುದಿ ಹಾಗೂ ತೊಟ್ಟಿನ ಭಾಗಗಳನ್ನು ಮಡಚಿದಾಗ ಆಯತಾಕಾರ ಇಲ್ಲವೇ ಚೌಕಾಕಾರಕ್ಕೆ ಬಂದಿದೆ ಪುನಃ ಹಿಟ್ಟು ಸವರಿ ವೃತ್ತಾಕಾರದಲ್ಲಿ ಮಡಚಿ ಮಡಚುವಾಗಲೂ ಹಿಟ್ಟು ಹಚ್ಚುತ್ತ ಬರಬೇಕು.

ಎಲ್ಲ ಎಲೆಗಳನ್ನೂ ಇದೇ ಪ್ರಕಾರವಾಗಿ ಹಿಟ್ಟಿನಿಂದ ಆವೃತಗೊಳಿಸಿ ಚಾಪೆಯಂತೆ ಸುರುಳಿ ಸುತ್ತಿ ನೀರು ಕುದಿಯುತ್ತಿರುವ ಇಡ್ಲಿಪಾತ್ರೆಯೊಳಗಿರಿಸಿಭಧ್ರವಾಗಿ ಮುಚ್ಚುವುದು.


ನೀರು ಕುದಿದ ನಂತರ 25ರಿಂದ 30 ನಿಮಿಷ ಬೇಯಲು ಸಮಯ ಬೇಕು.   ಅದಕ್ಕೆ ಸೂಕ್ತ ಪ್ರಮಾಣದ ನೀರನ್ನು ನಾವು ಇಡ್ಲಿ ಪಾತ್ರೆಗೆ ಒದಗಿಸುವ ಅಗತ್ಯವೂ ಇದೆ.


ನನ್ನ ಇಡ್ಲಿಪಾತ್ರೆಯೆಂಬ ಅಟ್ಟಿನಳಗೆ ಇಂಡಕ್ಷನ್ ಸ್ಟವ್ ಜೊತೆ ಹೊಂದಿಕೊಂಡಿದೆ ಸಮಯದ ಲೆಕ್ಕಾಚಾರವೂ ಉಷ್ಣತೆಯ ನಿಯಂತ್ರಣವೂ ಅದರಲ್ಲಿ ಇರುವುದರಿಂದ ಇಂಡಕ್ಷನ್ ಸ್ಟವ್ ನನ್ನ ಅಚ್ಚುಮೆಚ್ಚಿನ ಒಲೆ ವಿದ್ಯುತ್ ಹೋಗದಿದ್ದರಾಯಿತು.


ಚಿಕ್ಕ ಚಿಕ್ಕ ಎಲೆಗಳನ್ನು ಒಂದರ ಮೇಲಿನ್ನೊಂದರಂತೆ ಮೂರು ಯಾ ನಾಲ್ಕು ಎಲೆಗಳನ್ನಿಟ್ಟು ಹಿಟ್ಟನ್ನೂ ಸವರಿ ಸುರುಳಿ ಸುತ್ತಿ ಇಡುವುದು.


 ಮಾದರಿಯ ಕೆಸುವಿನ ಪತ್ರೊಡೆ ಬಾಳೆ ಎಲೆಯನ್ನು ಬಯಸದು ಕರಾವಳಿಯ ಕೊಂಕಣಿಗರ ಅಚ್ಚುಮೆಚ್ಚಿನ ಖಾದ್ಯ ಇದಾಗಿದೆ ನಾಲ್ಕೇ ನಾಲ್ಕು ಕಾಡು ಕೆಸುವಿನೆಲೆ ಸಿಕ್ಕಿದ್ರೂ ಸಾಕು ಊಟದೊಂದಿಗೆ ನಂಜಿಕೊಳ್ಳಲು ಪತ್ರೊಡೆ ಸಿದ್ಧ.  


ಮದುವೆಯಾಗುವ ತನಕ ಕಾಸರಗೋಡಿನಲ್ಲಿ ನಮ್ಮ ನೆರೆಕರೆಯ ಮನೆಗಳು ಗೌಡಸಾರಸ್ವತರದ್ದಾಗಿತ್ತು ಅವರು ಮಾಡುತ್ತಿದ್ದ ಖಾರಾಪತ್ರೊಡೆ ನನಗೂ ಸಿಗುತ್ತಿತ್ತು

ರುಚಿಯಾಗಿರುತ್ತಿದ್ದ ಪತ್ರೊಡೆಗೆ ಬೆಲ್ಲ ಹಾಕಲಿಕ್ಕಿಲ್ಲ

ಮಸಾಲೆಯ ಕೊತ್ತಂಬರಿ ಜೀರಿಗೆಮೆಣಸು ತುಸು ಜಾಸ್ತಿಅರೆಯುವಾಗ ಅಕ್ಕಿ ಮಾತ್ರವಲ್ಲದೆ ಉದ್ದಿನಬೇಳೆ ಕಡ್ಲೆಬೇಳೆಗಳನ್ನೂ ಮಿತಪ್ರಮಾಣದಲ್ಲಿ ಹಾಕಲಿಕ್ಕಿದೆ.

ನೀಟಾಗಿ ಕತ್ತರಿಸಿ ಕಾವಲಿಯಲ್ಲಿಟ್ಟು ಎಣ್ಣೆ ಎರೆದು ಎರಡೂ ಬದಿ ಕೆಂಪಗಾಗುವಂತೆ ಕರಿದು ಊಟದ ಬಟ್ಟಲಿಗೆ ಬಡಿಸುವ ಕ್ರಮ ಸಂಜೆಯ ಚಹಾ ಸಮಯಕ್ಕೂ ಸೂಕ್ತ ತಿಂಡಿ.


 ವಿಧಾನದಲ್ಲಿ ಪತ್ರೊಡೆಯ ಹಿಟ್ಟು ಹೆಚ್ಚು ಬೇಕಾಗುವುದಿಲ್ಲ ನನ್ನ ಹಿಟ್ಟು ಉಳಿಯಿತು ಬಾಳೆ ಎಲೆ ಇದ್ದಿದ್ದರೆ ತೆಳ್ಳಗೆ ಹಚ್ಚಿ ಪಜೆಮಡಿಕೆ ಮಾಡಬಹುದಾಗಿತ್ತು ಖಾರಾ ಪಜೆಮಡಿಕೆ ಎಂದು ಹೆಸರು ಇಡಬಹುದಾಗಿತ್ತು.


ಹಿಟ್ಟನ್ನು ತೆಗೆದಿರಿಸಿ ನಾಳೆ ಪತ್ರೊಡೆಯೊಂದಿಗೆ ಖಾರ ತೆಳ್ಳವು ಎರೆದು ಇಡಬಹುದುನಮ್ಮ ನಾಯಿ ಪತ್ರೊಡೆ ತಿನ್ನದೇ ಹೋದರೆ ಕಾರತೆಳ್ಳವು ತಿನ್ನಲಿ.


ಹೀಗೂ ಮಾಡಬಹುದು ಸುರುಳಿ ಸುತ್ತಿದ ಪತ್ರೊಡೆಯನ್ನು ಹಬೆಯಲ್ಲಿ ಬೇಯಿಸುವ ಬದಲು ಉರುಟುರುಟಾಗಿ ಕತ್ತರಿಸಿ ಉಳಿದ ಹಿಟ್ಟಿನಲ್ಲಿ ಅದ್ದಿ ಕಾವಲಿಯಲ್ಲಿ ದೋಸೆಯಂತೆ ಬೇಯಿಸುವುದು ಎಣ್ಣೆಯನ್ನೂ ಎರೆದು ಕೆಂಪಾಗುವಂತೆ ಎರಡೂ ಬದಿ ಬೇಯಬೇಕು ಇದು ಊಟದೊಂದಿಗೆ ಸಹವ್ಯಂಜನವಾಗಿ ತಿನ್ನಲಿಕ್ಕೆ ಚೆನ್ನಾಗಿರುತ್ತದೆ ಪತ್ರೊಡೆಯ ಪೋಡಿ ಎಂದರಾದೀತು.


ನಾವು ಮುಂಜಾನೆ ತಿಂದಿದ್ದು ಹೇಗೆ?

ಬೆಂದಂತಹ ಪತ್ರೊಡೆಗಳನ್ನು ಕತ್ತರಿಸಿ ಚಿಕ್ಕ ಚಿಕ್ಕ ಚೂರುಗಳನ್ನಾಗಿಸಿ,

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,

ಕಾಯಿತುರಿಬೆವ್ಲದ ಪುಡಿಉಪ್ಪು ಸೇರಿಸಿ ಪತ್ರೊಡೆ ಒಗ್ಗರಿಸಿ ತಿಂದದ್ದು.  


ಪತ್ರೊಡೆ ಇನ್ನೂ ಇದ್ದರೆ ಸಾಂಬಾರ್ ಗಸಿ ಜೀರಿಗೆ ಬೆಂದಿ ಮಜ್ಜಿಗೆ ಹುಳಿ ಇತ್ಯಾದಿ ವ್ಯಂಜನಗಳನ್ನೂ ಮಾಡೀ ಸವಿಯಿರಿ.


Colocasia esculenta ಇದರ ವೈಜ್ಞಾನಿಕ ಹೆಸರು.   ದಕ್ಷಿಣ ಭಾರತವೇ ಇದರ ಮೂಲ ನೆಲೆ ಒಳ್ಳೆಯ ಗೊಬ್ಬರದ ಮಣ್ಣಿನಲ್ಲಿವಿಸ್ತಾರವಾದ ಎಲೆಗಳಿಂದ ಸೊಗಸಾಗಿರುತ್ತದೆ ಆಡುಭಾಷೆಯಲ್ವಿ ಇದು ಮುಂಡಿ ಕೆಸು ಇದರಲ್ಲಿ ಹಸಿರು ಹಾಗೂ ಕಡು ಹಸಿರುಬಣ್ಣದ ವರ್ಗಗಳಿವೆ ಕಡು ಬಣ್ಣದ ಎಲೆಯ ಕಾಂಡ ನಸು ಕಪ್ಪು ಬಣ್ಣದಲ್ಲಿದ್ದು ಕರಿಕೆಸು ಎಂದು ಕರೆಯಲ್ಪಡುತ್ತದೆ ಇದಕ್ಕೆ ಏನೂತುರಿಕೆಯಿಲ್ಲ ದಂಟು ಕೂಡಾ ಹಿತವಾದ ಆಹಾರ ಗೆಡ್ಡೆಯಂತೂ ಬಲು ರುಚಿ ಹಾಗಾಗಿ ಕಾಡು ಪ್ರಾಣಿಗಳ ಉಪಟಳ ಜಾಸ್ತಿ.  

ಇದರಲ್ಲಿ ಬಣ್ಣ ಬಣ್ಣದ ಅಲಂಕಾರಿಕ ಸಸ್ಯಗಳೂ ಇವೆ ಮನೆಯಂಗಳದಲ್ಲಿ ಹೂಗಿಡಗಳೊಂದಿಗೆ ನೆಡಬಹುದು ಅಷ್ಟೇ.


ನಾರುಯುಕ್ತವಾದ ಕೆಸುವಿನೆಲೆಯಲ್ಲಿ ವಿಟಮಿನ್ ಗಳೂ ಖನಿಜಾಂಶಗಳೂ ಸಮೃದ್ಧಿಯಾಗಿ ಇವೆ ಪತ್ರೊಡೆ ಪ್ರಿಯರಿಗೆ ಮಳೆಗಾಲದಲ್ಲಿ ಕಾಡು ಕೆಸು ಧಾರಾಳವಾಗಿ ಸಿಗುವಂತಹದು.    ದೇಹಾರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳುತ್ತ ಆಯಾಋತುಮಾನದಲ್ಲಿ ಸಿಗುವಂತಹ ಪ್ರಕೃತಿಯ ಉಚಿತ ಕೊಡುಗೆಗಳನ್ನು ಸ್ವೀಕರಿಸಿ ಮುನ್ನಡೆಯೋಣ.