Pages

Ads 468x60px

Sunday 17 December 2017

ಬಾಳೆಹಣ್ಜಿನ ಗೊಜ್ಜು




ಬಾಳೆಗೊನೆ ಹಣ್ಣಾಗುವ ಲಕ್ಷಣ ಕಾಣುತ್ತಿಲ್ಲ, ತೋಟದಿಂದ ಬರುವಾಗಲೇ ಬೆಳೆದು ಪಕ್ವವಾದ ಬಾಳೆಗೊನೆ, ದಿನ ಹದಿನೈದಾಯ್ತು... ಕೆಲವೊಮ್ಮೆ ನಮಗೆ ಗೋಚರವಾಗದೆ ಕೊಳೆತು ಹೋಗುವುದಿದೆ. ಏನೇ ಆಗಲಿ, ಅಗತ್ಯದ ಪರಿಕರಗಳನ್ನು ಮೆಟ್ಟುಕತ್ತಿ ಎದುರಿಗಿಟ್ಟು ಬಾಳೆಗೊನೆ ಅಡುಗೆಮನೆಯ ಲ್ಯಾಬೋರೇಟರಿಯಲ್ಲಿ ಡಿಸೆಕ್ಷನ್ ಮಾಡಲ್ಪಟ್ಟಿತು. ಕೊಳೆತೂ ಇಲ್ಲ, ಹಣ್ಣೂ ಆಗಿಲ್ಲ. ಕೆಲವು ಕಾಯಿಗಳು ಬೆಳೆದದ್ದು ಜಾಸ್ತಿಯಾಗಿ ಬಿರಿದಿವೆ. ಇಂತಹ ಕಾಯಿಗಳನ್ನು ಮಾರಾಟ ಮಾಡುವಾಗಲೂ ತೆಗೆದಿಟ್ಟೇ ಕೊಡಬೇಕು, ಅದಕ್ಕೆ ಬೆಲೆಯಿಲ್ಲ. ಈ ಅರೆಗಾಯಿ ನನ್ನ ಮಾಮೂಲಿ ಬಾಳೆಹಣ್ಣು ಹಲ್ವಾ ಕಾಯಿಸುವ ಯೋಗ್ಯತೆ ಪಡೆದಿಲ್ಲ. ಆದರೂ ನಾಲ್ಕಾರು ಅರೆಗಾಯಿ ಯಾ ಅರೆಹಣ್ಣುಗಳನ್ನು ಸುಲಿದು ಹೆಚ್ಚಿಟ್ಟು ಆಯ್ತು.

“ ಏನು ಮಾಡುವ ಅಂದಾಜೂ... “
“ ಬಟಾಟೆ ಗೊಜ್ಜು ಮಾಡ್ತೀವಲ್ಲ, ಅದೇ ಥರ ಮಾಡೋಣ, ಸಿಹಿ ಹುಳಿ ರುಚಿ ಕೂಡಿ ಚೆನ್ನಾಗಿದ್ದೀತು ನೋಡೋಣ, ಊಟದ ತಟ್ಟೆ ತುಂಬ ಬಡಿಸಲು ಒಂದು ವ್ಯಂಜನವೂ ಆಯ್ತು. “

ಹೆಚ್ಚಿಟ್ಟ ಹೋಳುಗಳನ್ನು ರುಚಿಗೆ ಬೇಕಾದ ಉಪ್ಪು ಹಾಕಿ ಬೇಯಿಸಿ, ಅರೆಹಣ್ಣಲ್ಲವೇ, ಬೇಗನೆ ಬೇಯುವ ವಸ್ತು.
ಬೆಂದ ನಂತರ ನೀರು ಬಸಿದು, ತುಸು ನುರಿದು, ಒಂದು ಲೋಟ ಮೊಸರು ಅಥವಾ ದಪ್ಪ ಮಜ್ಜಿಗೆ ಎರೆದು ಒಗ್ಗರಣೆ ಕೊಡುವಲ್ಲಿಗೆ ಬಾಳೆಹಣ್ಣಿನ ಮೊಸರುಗೊಜ್ಜು ಸಿದ್ಧವಾಗಿದೆ. ರುಚಿಕರವಾಗಲು ಚಿಕ್ಕ ಮಾವಿನಶುಂಠಿ ಚೂರುಚೂರಾಗಿ ಬಿದ್ದಿತು. ಹಸಿಮೆಣಸನ್ನೂ ಹಾಕಬಹುದು.



ತರಕಾರಿ ಗೊಜ್ಜು
ಮನೆಹಿತ್ತಲ ತರಕಾರಿ ಬೆಳೆಗಳ ಮೇಲೆ ಕಣ್ಣಾಡಿಸುತ್ತ ಬಂದಾಗ ಈ ದಿನ ಮೂರು ತೊಂಡೆಕಾಯಿಗಳೂ, ಎರಡು ಅಲಸಂದೆಯೂ ಕೊಯ್ಯಲು ಸಿಕ್ಕಿತು. ಕೊಯ್ದು ಇಟ್ಟು, ದಿನವೆರಡು ಕಳೆದಾಗ ಆಚೆ ಎಸೆಯುವುದು ಅಂತೀರಾ, ಛೇ, ಅದಾಗುವಂತಿಲ್ಲ.  

 ನಮ್ಮ ಹಿತ್ತಲ ತಾಜಾ ತರಕಾರಿಯಲ್ವೇ, ಅಲಸಂದೆ ಹಾಗೂ ತೊಂಡೆಕಾಯಿಗಳನ್ನು ಚಿಕ್ಕದಾಗಿ ಹೆಚ್ಚಿಟ್ಟು, ಸ್ವಲ್ಪ ನೀರು ಎರೆದು, ಉಪ್ಪು ಸಹಿತವಾಗಿ ಬೇಯಿಸಿ.

ಬೆಂದ ತರಕಾರಿ, ಚೆನ್ನಾಗಿ ಆರಿದ ನಂತರ ಎರಡು ಸೌಟು ಮೊಸರು ಎರೆದು, ಒಂದು ಗಾಂಧಾರಿ ನುರಿದು ಇಡುವಲ್ಲಿಗೆ ಇಂದಿನ ನಮ್ಮ ಭೋಜನಕ್ಕೆ ದೊರೆಯಿತು ರುಚಿಕರವಾದ ಒಂದು ಸಹವ್ಯಂಜನ.




Sunday 10 December 2017

ಉಪ್ಪು ಸೊಳೆ ಸಾಂಬಾರ್



ನೀರುಳ್ಳಿ, ಹಸಿಮೆಣಸು, ಶುಂಠಿ, ಟೊಮ್ಯಾಟೋ ಬಿಟ್ರೆ ಬೇರೇನೂ ಇರಲಿಲ್ಲ, ನಿನ್ನೆಯೂ ನೀರುಳ್ಳಿ ಸಾಂಬಾರ್, ಇವತ್ತೂ ಅದೇನಾ…. ಅಡುಗೆ ಮಾಡುವವರಿಗೂ ಉಮೇದು ಬರಬೇಡವೇ?

ಮೂಲೆಯಲ್ಲಿಟ್ಟಿದ್ದ ಉಪ್ಪು ಸೊಳೆಯ ಜಾಡಿ ನಕ್ಕು ಬಿಟ್ಟಿತು!

ಹೌದಲ್ಲವೇ, ಜಾಡಿಯಿಂದ ಎರಡು ಹಿಡಿ ಸೊಳೆಗಳನ್ನು ತೆಗೆದು ನೀರಿನಲ್ಲಿ ಹಾಕಲಾಯಿತು. ಆಟಿ ತಿಂಗಳಲ್ಲಿ ಒಮ್ಮೆ ಹೇಮಕ್ಕ ಬಂದು, “ ನನಗೊಂದು ಸ್ವಲ್ಪ ಉಪ್ಪು ಸೊಳೆ ಕೊಡ್ರೀ… “ ಅಂದಾಗ ಜಾಡಿ ಬಿಡಿಸಿ ಕೊಟ್ಟಿದ್ದಲ್ಲದೆ ನಾನು ಇದುವರೆಗೆ ಅಡುಗೆ ಮಾಡಿದ್ದಿಲ್ಲ, ಇನ್ನೇನು ಹೊಸ ಹಲಸಿನ ಗುಜ್ಜೆಗಳು ಬರಲಿಕ್ಕಾಯಿತು, ಇದನ್ನು ಹೇಗಾದರೂ ಮುಗಿಸಬೇಕು.

ನೀರಿನಲ್ಲಿ ತೊಳೆದ ಉಪ್ಪು ಸೊಳೆ ಉಪ್ಪು ಬಿಟ್ಕೊಂಡು ಮಡಿ ಮಡಿಯಾಗಿ, ಉದ್ದಕ್ಕೂ ಅಡ್ಡಕ್ಕೂ ತುಂಡರಿಸಲ್ಪಟ್ಟು ಕುಕ್ಕರಿನಲ್ಲಿ ತುಂಬಿಕೊಂಡಿತು.

2 ನೀರುಳ್ಳಿ, 3 ಟೊಮ್ಯಾಟೋ, 2 ಹಸಿಮೆಣಸೂ ಜೊತೆಗೂಡಿ ಬೆಂದುವು. ಒಂದು ಸೀಟಿ ಸಾಕು. ಉಪ್ಪು ಸೊಳೆಗೆ ಕುಕ್ಕರ್ ಬೇಕೆಂದೇನೂ ಇಲ್ಲ. ತುಸು ಮೆತ್ತಗಿರುವ ಸೊಳೆ ಒಂದು ಕುದಿ ಬಂದೊಡನೆ ಬೆಂದಿರುತ್ತದೆ. ಅಂತಹ ಸೊಳೆಗಳು ರೊಟ್ಟಿ, ಉಂಡ್ಳಕಾಳು ತಯಾರಿಕೆಗೆ ಯೋಗ್ಯವಾಗಿರುತ್ತವೆ. ನನ್ನ ಉಪ್ಪು ಸೊಳೆಯ ಸಂಗ್ರಹ ಸ್ವಲ್ಪವೂ ಮೆತ್ತಗಾಗಿಲ್ಲ, ಗಟ್ಟಿ ಸೊಳೆಗಳು.

ಇದಕ್ಕೆ ನಾನು ಸಾಂಬಾರು ಎಂದು ಹೆಸರು ನೀಡಿದರೂ ತೊಗರಿಬೇಳೆ ಹಾಕಿಲ್ಲ. ಬೆಂದಂತಹ ಹಲಸಿನ ಸೊಳೆ ದಪ್ಪ ರಸ ಪದಾರ್ಥವೇ ಆಗಿರುತ್ತದೆ. ಯಾಕೆ ಸುಮ್ಮನೇ ತೊಗರಿಬೇಳೆ ಹಾಕಲಿ?

ಅರ್ಧ ಕಡಿ ತೆಂಗಿನ ತುರಿ
4 ಒಣಮೆಣಸು
2 ಚಮಚ ಕೊತ್ತಂಬರಿ
1 ಚಮಚ ಜೀರಿಗೆ
ತುಸು ಎಣ್ಣೆಪಸೆಯಲ್ಲಿ ಮೇಲಿನ ಮಸಾಲೆಗಳನ್ನು ಹುರಿದು,
ತೆಂಗಿನ ತುರಿಯೊಂದಿಗೆ ಅರೆದು,
ಬೇಯಿಸಿದ ತರಕಾರಿಗಳಿಗೆ ಕೂಡಿಸಿ,
ಅವಶ್ಯವಿದ್ದಂತೆ ನೀರು ಎರೆದು,
ರುಚಿಗೆ ಹಿತವಾಗುವಂತೆ ಬೆಲ್ಲ ಇರಲಿ,
ಉಪ್ಪು ಬೇಕಿದ್ದರೆ ಮಾತ್ರ,
ಕುದಿಸಿ,
ಬೆಳ್ಳುಳ್ಳಿ ಹಾಗೂ ಕರಿಬೇವು ಒಗ್ಗರಣೆ ಕಡ್ಡಾಯ.
ಸಾಂಬಾರು ಯಾ ಸಾರು ಆಯ್ತು ಅನ್ನಿ.






Monday 4 December 2017

ಬಸಳೆಯ ಪಲ್ಯ




ಈ ಬಾರಿ ಗಿರೀಶ್ ಮನೆಗೆ ಬಂದಾಗ, " ಮನೆಯಲ್ಲೇ ಆಗಿದ್ದು. " ಎಂದು ಕೆಂಪು ದಂಟಿನ ಬಸಳೆ ತಂದು ಕೊಟ್ಟ. ಕೆಂಪು ಬಣ್ದ ದಪ್ಪ ದಪ್ಪ ದಂಟಿನ ತಾಜಾ ಹಸಿರು ಎಲೆಗಳ ಈ ಬಸಳೆ ನನ್ನ ಹಿತ್ತಲಲ್ಲಿ ಈ ಮೊದಲೊಮ್ಮೆ ಇತ್ತು. ಪ್ರತಿ ವರ್ಷವೂ ನಿರ್ವಹಣೆ ಚೆನ್ನಾಗಿದ್ದಲ್ಲಿ ಮಾತ್ರ ಬಸಳೆಯಂತಹ ಸೊಪ್ಪು ತರಕಾರಿಗಳನ್ನು ಉಳಿಸಿಕೊಳ್ಳಬಹುದು. ಹೇಗೆ?

ವರ್ಷಕ್ಕೊಮ್ಮೆ ಬುಡ ಬದಲಾಯಿಸುತ್ತಿರಬೇಕು, ಹೊಸ ಜಾಗದಲ್ಲಿ ನೆಟ್ಟರೆ ಉತ್ತಮ. ಜಾಗ ಇಲ್ವೇ, ಅದೇ ಜಾಗದಲ್ಲಿ ಹೊಸ ಮಣ್ಣು ತುಂಬಿಸಿ, ಬಸಳೆಯ ಬಳ್ಳಿಗಳನ್ನು ನೆಟ್ಟು, ಸೊಪ್ಪು, ಗೊಬ್ಬರ, ಬೂದಿ, ನೀರು ಹಾಗೂ ಹಬ್ಬಿ ಹರಡಲು ಸೂಕ್ತವಾದ ಚಪ್ಪರದ ಹೊದಿಕೆಯನ್ನೂ ಹೊಂದಿಸಿ ಬಿಟ್ಟಲ್ಲಿ ಬಸಳೆ, ಬಲು ಸೊಗಸಾದ ಮನೆ ಹಿತ್ತಲ ಬೆಳೆ.

 ಕಡುಬೇಸಿಗೆಯಲ್ಲಿ ಸಿಕ್ಕಿದ ಈ ಕೆಂಪು ಬಸಳೆಯನ್ನು ಬಿಡಬಾರದು, ನೆರಳಿನಾಸರೆಯಲ್ಲಿ ಪ್ರತ್ಯೇಕವಾಗಿ ಒಂದು ಬಕೆಟ್ ತುಂಬ ಮಣ್ಣು ತುಂಬಿ ಎರಡು ಕುಡಿಗಳನ್ನು ಊರಿದ್ದೂ ಆಯಿತು.

  ಒಂದು ವಾರ ಬಿಟ್ಟು ಚೆನ್ನಪ್ಪ ಬಂದ, " ಇದೆಲ್ಲಿಂದ ಕೆಂಪು ಬಸಳೆ? "
" ಇದು ಜೀವ ಕೂಡೀತೋ ಹೇಗೆ? "
" ಓಹೋ.. ಕೂಡೀತು. ಈಗ ಇಲ್ಲೇ ಇರಲಿ, ನಂತರ ಚಪ್ಪರದಲ್ಲಿ ನೆಟ್ಟು ಬಿಡುವ... " ಎಂದ ಚೆನ್ನಪ್ಪ.
" ಈಗ ಚಪ್ಪರದಲ್ಲಿರುವ ಬಸಳೆಯೂ ಹಳತಾಯ್ತು, ಕೆಂಪು, ಹಸಿರು ಅಂತ ಎರಡೂ ಬಣ್ಣದ್ದು ಒಂದೇ ಚಪ್ಪರದಲ್ಲಿ ಆದೀತಲ್ಲ. "
" ಆದೀತು, ಅದೇನೂ ತೊಂದರೆಯಿಲ್ಲ. "

ಮುಂದಿನ ಹತ್ತಾರು ದಿನಗಳಲ್ಲಿ ನನ್ನ ಹಳೆಯ ಬಸಳೆ ಚಪ್ಪರ ನಿರ್ನಾಮವಾಗಿ ಆ ಸ್ಥಾನದಲ್ಲಿ ಹೊಸ ಕೆಂಪು ಮಣ್ಣು ಬಿದ್ದು, ಎರಡು ಗೂಟ ಊರಿ ಹೊಸದಾದ ಬಸಳೆ ಕುಡಿಗಳನ್ನು ನೆಟ್ಟಿದ್ದಾಯ್ತು. ದಿನವೂ ಧಾರಾಳ ನೀರು ಬೀಳುತ್ತಿದ್ದಂತೆ ಬಸಳೆ ಮೇಲೇರಿತು.

------------- ------------------ ------------------


" ಅಮ್ಮ, ನಾವು ಮುಂದಿನ ವಾರ ಊರಿಗೆ ಬರುವವರಿದ್ದೇವೆ... " ಮಗನ ಕರೆ ಬಂದಿತು.
" ಆಯ್ತೂ, ಗೇರುಹಣ್ಣು, ಹಲಸಿನಹಣ್ಣು, ಮಾವಿನಹಣ್ಣು, ಚಿಕ್ಕೂ, ಪೇರಳೆ, ಬಪ್ಪಂಗಾಯಿ... "
" ಪೈನಾಪಲ್ ಇಲ್ವಾ? "
" ಕೊಯ್ದು ಇಟ್ಟಿದ್ದು ಹಣ್ಣಾಗಿದೆಯಲ್ಲ, ನೀನು ಬರುವ ತನಕ ಉಳಿಯುತ್ತೋ ಇಲ್ವೋ... "
" ಅದೆಲ್ಲ ನಂಗೊತ್ತಿಲ್ಲ, ತಿನ್ನಲಿಕ್ಕೆ ಬೇಕಲ್ಲ. "
" ಆಯ್ತಪ್ಪಾ ಆಯ್ತು, ಅದನ್ನು ಹಾಗೇ ಜಾಗ್ರತೆಯಲ್ಲಿ ಇಡೋಣ... "

ಮಗ ಸೊಸೆ ಬಂದಿದ್ದಾಯ್ತು. ಪಟ್ಟಣದ ಸೊಸೆ ಬರ್ತಾಳೇಂತ ಪೇಟೆಯಿಂದ ತರಕಾರಿ ಸಂತೆಯೇ ಮನೆಗೆ ಬಂದಿತ್ತು. ಎಲ್ಲ ಮಾಮೂಲಿನ ತರಕಾರಿಗಳು. ಟೊಮೆಟೋ, ಕೊತ್ತಂಬರಿಸೊಪ್ಪು, ಕ್ಯಾರೆಟ್ಟು, ಬೀನ್ಸು..... ಇವೆಲ್ಲ ನಗರವಾಸಿಗಳು ದಿನವೂ ತಿನ್ನುವ ತರಕಾರಿಗಳು. ಊಟದಲ್ಲಿ ನಮ್ಮ ಊರಿನ ರುಚಿ ಬರಬೇಡವೇ, ಹಾಗಾಗಿ ಒಂದು ದಿನ ಬಸಳೇ ಸೊಪ್ಪಿನ ಪಲ್ಯ ಹಾಗೂ ಮಾವಿನಹಣ್ಣಿನ ಸಾರು ಸಿದ್ಧವಾಯಿತು.

ಬಸಳೆ ಪಲ್ಯ ತಿನ್ನುತ್ತ ಮಾಡುವ ವಿಧಾನವನ್ನೂ ಕಲಿತಳು ಮೈತ್ರಿ. ಬಸಳೆ ಪಲ್ಯ ಮಾಡಿದ್ದು ಹೇಗೆಂದು ನೋಡೋಣ.

25 ರಿಂದ 30 ಬಸಳೆ ಎಲೆಗಳು,
3 - 4 ನೀರುಳ್ಳಿ
2 ಎಸಳು ಬೆಳ್ಳುಳ್ಳಿ
ಎಲ್ಲವನ್ವೂ ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಿ.

ಬಾಣಲೆಗೆ 2 ಚಮಚ ತುಪ್ಪ ಯಾ ಅಡುಗೆಯ ಎಣ್ಣೆ ಎರೆದು ಸಾಸಿವೆ, ಉದ್ದಿನಬೇಳೆ, ಒಣಮೆಣಸುಗಳ ಒಗ್ಗರಣೆ ಸಿಡಿಯುತ್ತಿದ್ದಾಗ ಪಕ್ಕದಲ್ಲೇ ಒಂದು ಪೊಟ್ಟಣ ಕಂಡಿತು, ಇದೇನಿದೆಂದು ಬಿಡಿಸಿದಾಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎಂದು ತಿಳಿಯಿತು. ಮೈತ್ರಿ ನಿನ್ನೆ ಪುಲಾವ್ ಎಂಬ ಸವಿರುಚಿಯನ್ನು ನಮಗೆ ಉಣಬಡಿಸಿದ್ದಳು. " ಹೌದಲ್ಲ, ಈ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎಲ್ಲಿಂದ ತಂದಿದ್ದೂ... "

" ಅದೂ ಇಲ್ಲೇ ಪಕ್ಕದ ಅಂಗಡೀದು. " ಅಂದಳು ಮೈತ್ರಿ.

ನಾನು ಎಂತಹ ಹಳ್ಳೀಮುಕ್ಕಿ ಎಂದು ಈಗ ತಿಳಿಯಿತು. ಸುಮ್ನೇ ಬೆಳ್ಳುಳ್ಳಿ ಕಟ್ ಮಾಡಿಟ್ಕೊಂಡಿದ್ದು...
ಇರಲಿ, ಪ್ಯಾಕೆಟ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡಾ ನಮ್ಮ ಪಲ್ಯಕ್ಕೆ ಬಿದ್ದಿತು.
ನಂತರ ಕತ್ತರಿಸಿದ ನೀರುಳ್ಳಿ ಹಾಕಿ ಬಾಡಿಸಿ.
ರುಚಿಗೆ ಉಪ್ಪು, ಚಿಟಿಕೆ ಅರಸಿಣ ಕೂಡಿಸಿ ಬಸಳೆ ಸೊಪ್ಪನ್ನೂ ಹಾಕಿ ಮುಚ್ಚಿ ಬೇಯಿಸಿ, ನೀರು ಕೂಡಿಸದಿರಿ.
ಒಂದೆರಡು ನಿಮಿಷಗಳ ನಂತರ ಸೌಟಾಡಿಸಿ, ಕಾಯಿತುರಿ ಉದುರಿಸಿ ಮುಚ್ಚಿ ಬೇಯಿಸಿ. ಚಿಕ್ಕ ಉರಿಯಲ್ಲಿರಲಿ. ಸೊಪ್ಪು ಬೆಂದಿದೆಯೋ ಎಂದು ನೋಡಿ ಸ್ಟವ್ ಆರಿಸಿ. ಬಹು ಬೇಗನೆ ಮಾಡಬಹುದಾದ ಬಸಳೆಯ ಪಲ್ಯ ಆರೋಗ್ಯಕ್ಕೂ ಉತ್ತಮ.

ಸಾಮಾನ್ಯವಾಗಿ ಬಸಳೆಯಂತಹ ಸೊಪ್ಪುತರಕಾರಿಗಳು ಆ್ಯಂಟಿ ಓಕ್ಸಿಡೆಂಟ್ ಗುಣಧರ್ಮವನ್ನು ಹೊಂದಿರುತ್ತವೆ.
ತಲೆನೋವು, ಜ್ವರ, ಅತಿಸಾರ, ರಕ್ತಹೀನತೆ, ಅಧಿಕ ರಕ್ತದೊತ್ತಡ ಇವೇ ಮೊದಲಾದ ಶಾರೀರಕ ತೊಂದರೆಗಳನ್ನು ತಡೆಗಟ್ಟುವಲ್ಲಿ ನಾವು ಸೇವಿಸುವ ಸೊಪ್ಪುಗಳ ಪಾತ್ರ ಮುಖ್ಯವಾಗಿದೆ.
ಮನೆ ಹಿತ್ತಲ ಬೆಳೆಯಾದ ಬಸಳೆಗೆ ಕೀಟನಾಶಕ ಯಾ ರಸಗೊಬ್ಬರಗಳ ಹಂಗು ಇಲ್ಲ.
ಆಗ ತಾನೇ ಕೊಯ್ದ ಸೊಪ್ಪಿನಲ್ಲಿ ಜೀವಸತ್ವಗಳು ಅಧಿಕವಾಗಿರುತ್ತವೆ.
ರುಚಿಕರವಾದ ಕೆಂಪು ಬಸಳೆ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಸ್ತ್ರೀ ಬಂಜೆತನ ನಿವಾರಕ.
ಖನಿಜಾಂಶಗಳಿಂದ ಕೂಡಿದ ಬಸಳೆ ದೈಹಿಕ ದುರ್ಬಲತೆಯನ್ನೂ ಹೋಗಲಾಡಿಸುವುದು.
Basella rubra ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಕೆಂಪು ಬಸಳೆಯನ್ನು ಮೂತ್ರನಾಳದ ಸೋಂಕು ರೋಗ, ಅದರಲ್ಲೂ ಲೈಂಗಿಕ ರೋಗಗಳಿಗೆ ಪಾರಂಪರಿಕ ಔಷಧಿಯಾಗಿ ಬಾಂಗ್ಲಾದೇಶೀಯರು ಬಳಸುತ್ತಾರಂತೆ.
ಆಧುನಿಕ ವೈದ್ಯಕೀಯ ವಿಜ್ಞಾನವೂ ಬಸಳೆಯಲ್ಲಿ ಹುಣ್ಣು ಪ್ರತಿಬಂಧಕ ಶಕ್ತಿ ಇರುವುದನ್ನು ಕಂಡು ಹಿಡಿದಿದೆ.
ಬಸಳೆಯ ಸೇವನೆ, ಆರೋಗ್ಯಕರ ಜೀವನ ನಮ್ಮದಾಗಲಿ.



ಟಿಪ್ಪಣಿ: ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟವಾಗಿರುವ ಬರಹ, ಅಕ್ಟೋಬರ್, 2017.


Monday 27 November 2017

ಬೀಂಬುಳಿ ಮುರಬ್ಬ



ಈಗ ನೆಲ್ಲಿಕಾಯಿಗಳ ಕಾಲ, ಪೇಟೆಗೆ ಹೋದರೆ ಘಟ್ಟದ ನೆಲ್ಲಿಕಾಯಿಗಳು ಲಭ್ಯ. ನಮ್ಮ ಮನೆಗೂ ಬಂತು, ಮುರಬ್ಬ ಮಾಡಿ ಇಟ್ಕೊಂಡೆವು, ಇರಲೀ ಎಂದು ಉಪ್ಪಿನಕಾಯಿಯನ್ನೂ ಮಾಡಿ ತಿಂದೆವು. ವರ್ಷಗಳಿಂದ ಮುರಬ್ಬ ಮಾಡಿ ಅಭ್ಯಾಸ ಆಗ್ಬಿಟ್ಟಿದೆ, ಮುರಬ್ಬಾ ಸ್ಪೆಶಲಿಸ್ಟ್ ಅಂದ್ರೂ ನಡೆದೀತು ಅನ್ನಿ.

ನಿತ್ಯದಂತೆ ಮನೆಯಂಗಳದಲ್ಲಿ ತಿರುಗಾಡುತ್ತಿದ್ದಾಗ ನಮ್ಮ ಬೀಂಬುಳಿ ವೃಕ್ಷವೂ ಫಲಭರಿತ ವೃಕ್ಷವಾಗಿ ಕಂಗೊಳಿಸುತ್ತಿದೆಯಲ್ಲ! ಒಂದು ಅಡಿಕೆಹಾಳೆ ತುಂಬ ಬೀಂಬುಳಿಗಳನ್ನು ಕೊಯ್ದು ತಂದೆ.

“ ಮಾಡೂದೆಂತಾ, ಉಪ್ಪಿನಕಾಯಿಯಾ? “

ಉಪ್ಪಿನಕಾಯಿ ದಾಸ್ತಾನು ತುಂಬಾನೇ ಇದೆ, ಮಾವಿನಕಾಯಿ ಅಂಬಟೆ ಅಂತ…. ಅದನ್ನೇ ತಿಂದು ಮುಗಿಸಲಿಕ್ಕಿಲ್ಲ, ಬೀಂಬುಳಿಯನ್ನೂ ಉಪ್ಪು ಮಸಾಲೆ ಬೆರೆಸಿಟ್ರೆ ಸಾಲದು, ತಿನ್ನುವವರೂ ಬೇಕಲ್ಲ...

“ ಈ ಬೀಂಬುಳಿಯನ್ನೂ ಯಾಕೆ ಮುರಬ್ಬ ಮಾಡಬಾರದು? “

ಆಲೋಚನೆ ಮೂಡಿದ್ದೇ ತಡ, ಬಲಿತ ಬೀಂಬುಳಿಗಳು ಕತ್ತರಿಸಲ್ಪಟ್ಟು, ಸಕ್ಕರೆ ಬೆರೆಸಲ್ಪಟ್ಟು ಜಾಡಿ ತುಂಬಿ ಕುಳಿತುವು. ಅಂಗಳದಲ್ಲಿ ಬಿಸಿಲು ಬಂದಾಗ ಜಾಡಿ ಹೊರ ಬಂದು ಬಿಸಿಲಿಗೆ ಮೈಯೊಡ್ಡಿತು. ಸಂಜೆಯಾಗುತ್ತಲೂ ಒಳ ಬಂದಿತು. ಸಕ್ಕರೆಯೆಲ್ಲ ಕರಗಿ ದ್ರಾವಣದಲ್ಲಿ ತೇಲುತ್ತಿವೆ ಬೀಂಬುಳಿ ಹೋಳುಗಳು!

“ ಇದನ್ನು ಇನ್ನೇನ್ಮಾಡೋದೂ? “

ಹತ್ತು ಗಂಟೆಯ ಚಹಾ ಸಮಯ, ಚಮಚಾ ತಟ್ಟೆಯೊಂದಿಗೆ ನಮ್ಮೆಜಮಾನ್ರ ಮುಂದೆ ಬೀಂಬುಳಿ ಮುರಬ್ಬ ಬಂದಿತು. “ ಹುಳಿಯೆಲ್ಲ ಬಿಟ್ಕೊಂಡಿದೆ, ತಿನ್ನಬಹುದು. “ ಎಂಬ ಸಮಾಧಾನಕರ ಉತ್ತರ ದೊರೆಯಿತು.

ನಾನೂ “ ವಾರೆವ್ಹಾ… ಹುಳಿ ಸಿಹಿ ಕೂಡಿದ ರುಚಿ ಕಣ್ರೀ…. “ ಗುಳುಂಕ್, ಗುಳುಂಕ್ ಎಂದು ತಿಂದಿದ್ದಾಯ್ತು.

ಬೀಂಬುಳಿ ಹೋಳುಗಳನ್ನು ತಿಂದು ಮುಗಿಸಿದ ನಂತರ ಉಳಿದ ಹುಳಿ ಮಿಶ್ರಿತ ಸಕ್ಕರೆ ರಸವನ್ನು ಜಾಡಿಯಲ್ಲಿ ಶೇಖರಿಸಿಟ್ಟು ಶರಬತ್ ಮಾಡಿ ಕುಡಿಯೋಣಾ, ಏನಂತೀರ? ಎರಡು ಏಲಕ್ಕಿ ಗುದ್ದಿ ಹಾಕಿ ಸುವಾಸನೆಯನ್ನೂ ಕೊಟ್ಟರಾಯಿತು. ಇನ್ನೊಂದು ಆಯ್ಕೆ ಏನಪ್ಪಾ ಅಂದ್ರೆ ಹುಣಸೆರಸದ ಬದಲು ಇದನ್ನೇ ಅಡುಗೆಗೆ ಬಳಸಿ ಮುಗಿಸಬಹುದು.

“ ಬೀಂಬುಳಿಯನ್ನು ಏನು ಬೇಕಾದ್ರೂ ಮಾಡ್ಕೊಳ್ಳಿ, ಸ್ಟೀಲು ಪಾತ್ರೆ, ತಟ್ಟೆ ಚಮಚ ಉಪಯೋಗಿಸುವಂತಿಲ್ಲ, ಪಾತ್ರೆಯ ಹೊಳಪು ಹೋಗ್ಬಿಟ್ಟು ಕಪ್ಪಾಗುವ ಸಾಧ್ಯತೆ ಇದೆ. ಪಿಂಗಾಣಿ ಯಾ ಗಾಜಿನ ಪಾತ್ರೆಗಳು ಉತ್ತಮ. “ ಎಂದರು ಗೌರತ್ತೆ.
“ ಹೌದೂ… “ ಅನ್ನುತ್ತ ನಾನು ಫೋಟೋ ತೆಗೆದಿದ್ದ ಸ್ಟೀಲು ತಟ್ಟೆಯನ್ನು ಕೂಡಲೇ ತೊಳೆದೂ ಇಟ್ಬಿಟ್ಟೆ.

ಅಳತೆ ಹೀಗಿರಲಿ,
ಒಂದು ಲೋಟ ತುಂಬ ಬೀಂಬುಳಿ ಹೋಳುಗಳು
ಅರ್ಧ ಲೋಟ ಸಕ್ಕರೆ
ಒಂದು ದಿನದ ಬಿಸಿಲು
ಅಡುಗೆಯ ಆಟವನ್ನಾಡುವ ಪುಟ್ಟ ಮಗು ಕೂಡಾ ಈ ನಳಪಾಕವನ್ನು ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.






Monday 20 November 2017

ತಂಪಿನ ಪೇಯ




ಮಳೆಗಾಲದಲ್ಲಿ ಟಿಸಿಲೊಡೆಯುವ ಚಿಗುರು ಕುಡಿಗಳನ್ನು ಧಾರಾಕಾರ ಮಳೆ ಬೀಳುತ್ತಿರುವ ಕಾಲದಲ್ಲಿ ಹುಡುಕುತ್ತ ತೋಟ ಗುಡ್ಡ ತಿರುಗಾಟ ಸಾಧ್ಯವಾಗುವುದಿಲ್ಲ. ಏನಿದ್ದರೂ ಬಿಸಿಲು ಬರಬೇಕು. ನಾನು ಕಾಯುತ್ತಿದ್ದ ಬಿಸಿಲು ನಿನ್ನೆ ಬಂದಿತು. ಸಂಜೆಯಾಗುತ್ತಲೂ ಚಪ್ಪಲಿ ಮೆಟ್ಟಿ ಹೊರಟೆ. ಮನೆಯಿಂದ ಮುಂದಕ್ಕೆ ಡಾಮರು ರಸ್ತೆವರೆಗೆ ನಡೆದಾಡಿ ಬರೋಣ ಅಂದ್ಕೊಂಡಿದ್ದೆ. ಹೇಮಕ್ಕನ ಮನೆ ಗೇಟಿನವರೆಗೆ ತಲಪಿದಾಗ, ಹೇಮಕ್ಕ ಖುದ್ದು ಎದುರಾಗಿ ಗೇಟಿನ ಬಾಗಿಲು ತೆರೆದರು.

“ ನೋಡೀ ಇಲ್ಲಿ… ನಿಮ್ಮ ಕಂಪೌಂಡ್ ಪಕ್ಕದಲ್ಲಿ ತಗತೇ ಗಿಡ!  ಹೇಗೆ ಚಿಗುರಿಕೊಂಡಿದೆ… “
“ ಹೌದಲ್ಲವೇ, ನಿಮಗೆ ಬೇಕಿದ್ದರೆ ಚಿವುಟಿಕೊಳ್ಳಿ.”
“ ನೀವೂ ತಂಬುಳಿ ಮಾಡಿರಲ್ಲ… “
“ ಅಯ್ಯೋ, ತಂಬುಳಿ ಮಾಡಿದ್ರೆ ನಾನೊಬ್ಳೇ ತಿನ್ಬೇಕು...”
“ ಒಳ್ಳೆಯದಲ್ವಾ, ಮಳೆಗಾಲದಲ್ಲಿ ಒಂದ್ಸಾರಿಯಾದ್ರೂ ತಿನ್ನಬೇಕಂತೆ… “
ನಾನು ಒಂದು ಹಿಡಿ ಕುಡಿ ಚಿಗುರುಗಳನ್ನು ಕಿತ್ತು , “ಕತ್ತಲೂ ಆಯ್ತು... “ ಅನ್ನುತ್ತ ಮನೆಗೆ ಬಂದೆ.

ಮಾರನೇ ದಿನ ನನ್ನದೂ ತಂಬುಳಿಯ ಅಡುಗೆ.
ಹೇಗೆ ಮಾಡಿದ್ದೂ?
 ಕುಡಿ ಚಿಗುರುಗಳನ್ನು ತುಪ್ಪದಲ್ಲಿ ಹುರಿದು,
ಅರ್ಧ ಕಡಿ ತೆಂಗಿನತುರಿ,
ತುಸು ಜೀರಿಗೆ,
ನಾಲ್ಕಾರು ಕಾಳುಮೆಣಸು,
ರುಚಿಗೆ ಉಪ್ಪು,
ನುಣ್ಣಗೆ ಅರೆದು,
ಸಿಹಿ ಮಜ್ಜಿಗೆ ಎರೆದು,
ತೆಳ್ಳಗಾಗಲು ಇನ್ನಷ್ಟು ನೀರು ಎರೆದು,
ತಗತೆಯ ತಂಪು ಹುಳಿ ಸಿದ್ಧ.

ಹೇಮಕ್ಕ ಅಂದಂತೆ ತಂಬುಳಿ ಮುಗಿಯದೆ ಹೋಯಿತು. ರಾತ್ರಿ ಉಣ್ಣಬೇಕಾದರೆ ಕುದಿಸಬೇಕು. “ ಯಾರಿಗೆ ಬೇಕು ಈ ರಗಳೆ… “ ಅಂದ್ಬಿಟ್ಟು, ಟೇಬಲ್ ಮೇಲೆ ನನ್ನನ್ನೇ ಮಿಕಿ ಮಿಕಿ ನೋಡುತ್ತಿದ್ದ ತಂಪು ಹುಳಿಯು, ಜಾಲರಿಯಲ್ಲಿ ಶೋಧಿಸಲ್ಪಟ್ಟು ತಂಪು ಪೇಯವಾಗಿ ಪರಿವರ್ತನೆ ಹೊಂದಿತು.  

ಆಹ!  
ತೆಂಗಿನಕಾಯಿ ಹಾಲು,
ಸಿಹಿಮಜ್ಜಿಗೆ,
 ಚಿಗುರೆಲೆಗಳ ಸಾರ,  
ಮಸಾಲೆಗಳ ಖಾರ,
ಎಲ್ಲವೂ ಸೇರಿ,
ಸ್ವಾದಿಷ್ಟ ಪಾನೀಯ ದೊರೆಯಿತು.

“ ನಾಳೆ ಯಾವ ತಂಬುಳಿ ಮಾಡ್ತೀರಾ? “
“ ಕೊತ್ತಂಬರಿ ಸೊಪ್ಪು ಬಂದಿದೆ ಕಣ್ರೀ…. ಅದನ್ನೂ ತಂಬುಳಿ ಮಾಡ್ಬಿಟ್ಟು, ಹೀಗೇ ಗಟಗಟ ಕುಡಿಯೋದು… “





Wednesday 15 November 2017

ಮೊಸರಿನ ರಸ



ಮಧು ಮುಂದಿನವಾರ ಮನೆಗೆ ಬರಲಿದ್ದೇನೆ ಅಂದಿದ್ದ. ಶನಿವಾರ ಮುಂಜಾನೆ ಫೋನ್ ಬಂದಿತು, “ ಅಮ್ಮ, ನಾನೂ ಪ್ರಕಾಶಣ್ಣನೂ ಹೊರಟು ಬರುತ್ತಾ ಇದ್ದೇವೆ... ಮನೆ ತಲಪುವಾಗ ರಾತ್ರಿ ಗಂಟೆ ಏಳಾದೀತು, ನನ್ನ ಊಟಕ್ಕೆ ಏನು ಮಾಡಿ ಇಡುತ್ತೀ … “
“ ರಾತ್ರಿ ನೀನು ಉಣ್ಣುವುದು ಕುಚ್ಚುಲಕ್ಕಿ ಗಂಜಿ, ಮೊಸರು ಅಲ್ವಾ ? ಫ್ರೆಶ್ ಆಗಿ ಸಿಹಿ ಮೊಸರು ಮಾಡಿ ಇಡ್ತೇನೆ…. ಮಾವಿನಕಾಯಿ ಉಪ್ಪಿನಕಾಯಿ ಉಂಟು. “
“ ಆಯಿತು, ಅಷ್ಟು ಮಾಡು… “



“ ಅದು ಹೇಗ್ರೀ ಮೊಸರು ಮಾಡುವ ಕತೆ ಹೇಳಿರಲ್ಲ, ನಮ್ಮದು ಪ್ಯಾಕೆಟ್ ಮೊಸರು ಮುಂಜಾನೆ ಮನೆ ಬಾಗಿಲಿಗೆ ಬರುತ್ತೆ. “
ಮಧ್ಯಾಹ್ನ ಊಟವಾಗುತ್ತಲೇ ರಾತ್ರಿಯ ಮೊಸರೂಟದ ತಯಾರಿ ಮಾಡಲೇ ಬೇಕು. ಒಂದು ಪುಟ್ಟ ತಟ್ಟೆಯಲ್ಲಿ ಹಾಲು ತುಂಬಿಸಿ ಒಂದು ಚಮಚ ಮಜ್ಜಿಗೆ ಯಾ ಮೊಸರು ಎರೆದು, ಚಮಚದಲ್ಲಿ ಕಲಕಿ ಬೆಚ್ಚಗಿನ ಜಾಗದಲ್ಲಿ ಇರಿಸಿ ಮುಚ್ಚಿ ಇಡಬೇಕು. ಹಾಲು ಮೊಸರಾಗಿ ಪರಿವರ್ತಿತವಾಗಲು ಕನಿಷ್ಟಪಕ್ಷ ಆರು ಗಂಟೆಯ ಅವಧಿ ಬೇಕು. ಚಳಿಗಾಲದಲ್ಲಿ ಹೆಪ್ಪುಗಟ್ಟುವುದು ನಿಧಾನ, ಬೇಸಿಗೆಯಲ್ಲಿ ಬೇಗನೆ ಹುಳಿ ಮೊಸರಾದೀತು. ಹವಾಮಾನವನ್ನೂ ನೋಡಿಕೊಂಡು ಹೆಪ್ಪು ಎರೆಯುವ ಹೊತ್ತು ಹಾಗೂ ಎಷ್ಟು ಚಮಚ ಮೊಸರು ಹಾಕಬೇಕೆಂದು ನಿರ್ಧರಿಸುವುದು ನಮ್ಮ ಕೈಯಲ್ಲಿದೆ.  

ಈ ಹೊತ್ತಿಗೆ ಗೌರತ್ತೆ ನನ್ನ ಬರೆಯುವ ಟೇಬಲ್ ಬಳಿ ಬಂದರು, “ ಮೊಸರು ಚೆನ್ನಾಗಿ ಬರಬೇಕಾದರೆ ಒಂದು ತುಂಡು ಬಾಳೆ ಎಲೆ ಇಡಬೇಕು. “
 ಹ್ಞಾ, ಹೌದು…. ಹಾಲಿನ ಮೇಲೆ ಚಿಕ್ಕ ತುಂಡು ಬಾಳೆ ಎಲೆ ಇಟ್ಟು ಬಿಡಿ, ಹಲ್ವ ತುಂಡಿನಂತಹ ಮೊಸರನ್ನು ಚಮಚದಲ್ಲಿ ತೆಗೆದು ಸವಿಯಿರಿ.

Friday 10 November 2017

ಪುಸ್ತಕ ಪ್ರೀತಿ

                                                                   
                                                         



ನಿನ್ನೆ ಮುಂಜಾನೆ ಹೊರಚಾವಡಿಯಲ್ಲಿ ಕುಳಿತಿದ್ದ ಹಾಗೆ, ಅಪರಿಚಿತರೊಬ್ಬರು ಮನೆಯೊಳಗೆ ನುಗ್ಗಿದರು. ಬಗಲಲ್ಲಿ ಒಂದು ಚೀಲ, ಚೀಲ ತುಂಬ ಪುಸ್ತಕಗಳು.

ನನಗೆ ಮಹದಾನಂದ, ಐ ಪ್ಯಾಡ್ ಪಕ್ಕಕ್ಕಿರಿಸಿ, ಅವರು ಚೀಲದೊಳಗಿನಿಂದ ಒಂದೊಂದೇ ಪುಸ್ತಕಗಳನ್ನು ಹೊರ ತೆಗೆಯುತ್ತಿದ್ದಂತೆ ಐ ಫೋನ್ ಕ್ಲಿಕ್ ಕ್ಲಿಕ್ಕೆಂದಿತು.

“ ನಿನಗೆ ಯಾವ ಪುಸ್ತಕ ಬೇಕೆಂದು ನೋಡಿಕೋ… “ ಎಂದ ನನ್ನವರು, ಬಂದ ಮಹನೀಯರೊಡನೆ ಹಿರಣ್ಯದ ನಾಗಬನದ ಅಭಿವೃದ್ಧಿಯ ವಿಚಾರವಾಗಿ ಪಟ್ಟಾಂಗಕ್ಕಿಳಿದರು.

“ ಯಾವ ಪುಸ್ತಕ ಇಟ್ಕೊಳ್ಳಲಿ… “ ನನ್ನ ಪರದಾಟವನ್ನು ಕಂಡು ಶ್ರೀಯುತ ಶಂಕರ ಕುಳಮರ್ವರು ನಾಲ್ಕು ಪುಸ್ತಕಗಳನ್ನು ಆಯ್ದು ಕೊಟ್ಟರು. ಅಂತೂ ಎರಡು ಪುಸ್ತಕಗಳು ನನ್ನ ಬಿಡುವಿನ ವೇಳೆಯ ಓದಿಗಾಗಿ ಕಪಾಟು ಸೇರಿದುವು.

ಈ ಹೊತ್ತು, ಪುಸ್ತಕಗಳ ಹೊತ್ತಗೆಯನ್ನು ಹೊತ್ತು ತಂದ ಮಹನೀಯರನ್ನು ಕಂಡಾಗ, ಬಾಲ್ಯದ ದಿನಗಳ ನೆನಪು ಸಹಜವಾಗಿ ನುಗ್ಗಿ ಬಂದಿತು. ಕಾಸರಗೋಡಿನ ವಿದ್ವಾಂಸರು ಮೌನವಾಗಿಯೇ ಸಾಹಿತ್ಯಕೃಷಿ ನಡೆಸಿದವರಾಗಿದ್ದಾರೆ. ಪುಸ್ತಕ ಪ್ರೀತಿಯನ್ನು ಬಾಲ್ಯದಿಂದಲೇ ಕಲಿಸಿಕೊಟ್ಟವರು ನನ್ನ ಅಪ್ಪ. ಮನೆಗೆ ಪುಸ್ತಕ ಮಾರಾಟಗಾರರು ಬಂದಾಗ ಕೊಂಡುಕೊಳ್ಳುವ ಔದಾರ್ಯತೆ ಅವರಲ್ಲಿತ್ತು. ಮದುವೆಯಾಗಿ ಹಿರಣ್ಯಕ್ಕೆ ಬಂದಾಗಲೂ ಇಲ್ಲಿಯೂ ಅದೇ ತೆರನಾದ ಪುಸ್ತಕ ಪ್ರೀತಿಯನ್ನು ಕಂಡು ಬೆರಗೂ ಆಯಿತು. ನನ್ನ ಮಾವನವರ ಬಳಿ ಸುಮಾರು ಐದು ಸಾವಿರಕ್ಕೂ ಮೀರಿ ಪುಸ್ತಕಗಳಿದ್ದುವು.  

ಇದೇ ಹೊತ್ತಿನಲ್ಲಿ ನಾನು ಉತ್ಥಾನ ಮಾಸಪತ್ರಿಕೆಯಲ್ಲಿ ಬರೆಯುತ್ತಿರುವ ಅಡುಗೆ ಬರಹಗಳು “ ಸರಳ ಅಡುಗೆಗಳು “ ಎಂಬ ಶಿರೋನಾಮೆಯಲ್ಲಿ ಪ್ರಕಟಿತವಾಗುತ್ತಲಿದೆ.



Tuesday 7 November 2017

ಮಾವಿನಕಾಯಿ ಸಾರು



                                           


ನಾಗಬನದಲ್ಲಿ ತಂಬಿಲ ಸೇವೆಗೆಂದು ಬಂದಿದ್ದ ಉಷಕ್ಕ, ಮನೆ ಹಿತ್ತಲಲ್ಲಿ ಬಿದ್ದು ಹಾಳಾಗುತ್ತಿದ್ದ ಮಾವಿನಕಾಯಿಗಳನ್ನೂ ತಂದಿದ್ದರು. " ಒಳ್ಳೆಯ ಕಸಿ ಮಾವಿನಕಾಯಿ, ಈ ರಣಬಿಸಿಲಿಗೆ ಬಿದ್ದು ಹಾಳಾಗುತ್ತ ಇದೆ... ಒಂದು ಸಾರು ಮಾಡಿ ನೋಡೂ. "
" ಆಯ್ತು, ಅಪ್ಪೆಸಾರು ಅಂತೇನೋ ಮಾಡ್ತಾರಲ್ಲ, ಅದು ಹೇಗೆ ಗೊತ್ತಾ? "
" ಮಾವಿನಕಾಯಿ ಬೇಯಿಸಿ, ಚೆನ್ನಾಗಿ ಗಿವುಚಿ, ಉಪ್ಪೂ ಬೆಲ್ಲ ಹಾಕಿ, ಬೆಳ್ಳುಳ್ಳಿ ಒಗ್ಗರಣೆ ಕೊಟ್ರಾಯ್ತು. "
" ಅಷ್ಟೇನಾ, ನಾನು ಏನೋ ಅಂದ್ಕೊಂಡಿದ್ದೆ… ನಾಳೆ ಮಾಡೂದು. "
" ಇದು ಕಸಿ ಮಾವು, ಮಾವಿನಕಾಯಿದು ಸಿಪ್ಪೆ ತೆಗೆದೇ ಬೇಯಿಸು, ಇಲ್ಲಾಂದ್ರೆ ಕಹಿಯಾದೀತು. "
" ಓ, ಹಾಗೂ ಉಂಟೋ… "
" ಹ್ಞಾ ಮತ್ತೇ, ನಮ್ಮ ಊರಿನ ಕಾಟ್ ಮಾವಿನಕಾಯಿದು ಆದ್ರೆ ಸಿಪ್ಪೆ ಕೂಡಾ ಬೇಯಿಸಬಹುದು, ಬೆಲ್ಲ ಹಾಕದೇ ಮಾಡ್ಬೇಡಾ. "

ಅಂತೂ ಎರಡು ಮಾವಿನಕಾಯಿಗಳ ಸಿಪ್ಪೆ ತೆಗೆದು, ಒಳಗಿನ ಎಳೆಯ ವಾಟೆಯನ್ನೂ ತೆಗೆದು ನೀರೆರೆದು ಬೇಯಿಸಿ, ಆರಿದ ನಂತರ ಕೈಯಲ್ಲಿ ಗಿವುಚಿ, ಉಪ್ಪೂ ಬೆಲ್ಲ ಕೂಡಿಸಿ, ಅಗತ್ಯದ ನೀರೆರೆದು ಕುದಿಸಿದಾಗ, ಬೆಳ್ಳುಳ್ಳಿ ಕರಿಬೇವಿನ ಒಗ್ಗರಣೆಯಲ್ಲಿ ಸಾರು ಸಂಭ್ರಮ ಪಟ್ಟಿತು.

ಸಾರಿನೂಟ ಸವಿಯುತ್ತಿದ್ದಾಗ ನಮ್ಮ ಅಂಬಟೆ, ಬೀಂಬುಳಿ, ನಕ್ಷತ್ರ ಹಣ್ಣು, ರಾಜನೆಲ್ಲಿಕಾಯಿ, ಚೆರಿ ಇತ್ಯಾದಿ ಕಾಟಂಗೋಟಿ ಹಣ್ಣುಗಳಿಂದಲೂ ಈ ವಿಧದ ಸಾರು ಮಾಡಬಹುದೆಂದು ಟ್ಯೂಬ್ ಲೈಟ್ ಹೊತ್ತಿ ಉರಿಯಿತು.

ಬೀಂಬುಳಿ ಸಾರು ಮಾಡೋಣ, ಕೇವಲ ಬೀಂಬುಳಿ ಚೆನ್ನಾಗಿರದು, ಒಂದು ಟೊಮ್ಯಾಟೋ, ಕ್ಯಾರೆಟ್ ತುಂಡು ಹಾಗೂ ನಾಲ್ಕು ಬೀಂಬುಳಿಗಳನ್ನು ಕತ್ತರಿಸಿ ಬೇಯಿಸಿದ್ದಾಯ್ತು, ಬೆಂದ ನಂತರ ಮಿಕ್ಸಿಯಲ್ಲಿ ತಿರುಗಿಸಲಾಗಿ ಒಂದು ಬಣ್ಣದ ದ್ರಾವಣ ದೊರೆಯಿತು. ರುಚಿಕರವಾಗಿ ತಿನ್ನಲು ಉಪ್ಪು ಹಾಗೂ ಬೆಲ್ಲ ಕೂಡಿಸಿ, ಅಂದಾಜಿನ ನೀರೆರೆದು ಕುದಿಸಿ, ಬೆಳ್ಳುಳ್ಳಿ, ಕರಿಬೇವು ಒಗ್ಗರಣೆ ಕೊಡುವಲ್ಲಿಗೆ ಬೀಂಬುಳಿ ಸಾರು ಬಂದೆನೆಂದಿತು.

ಎಪ್ರಿಲ್, ಮೇ ತಿಂಗಳ ಅಂತ್ಯವಾಗುತ್ತಿದ್ದಂತೆ ತಾಜಾ ಪುನರ್ಪುಳಿ ಹಣ್ಣುಗಳ ಕಾಲ, ಕೆಂಪು ಕೆಂಪಾದ ಪುನರ್ಪುಳಿ ಸಾರು ಕೂಡಾ ಮೇಲಿನ ಮಾದರಿಯಲ್ಲೇ ಸಿದ್ಧಪಡಿಸುವುದು, ಬೇಸಿಗೆಯ ರಣರಣ ಸೆಕೆಯಲ್ಲೂ ಪುನರ್ಪುಳಿ ಸಾರು ಒಂದಿದ್ದರೆ ಸಾಕು, ಸುಖವಾಗಿ ಊಟ ಮುಗಿಸಿ ಮೇಲೇಳಬಹುದು.

ಈ ಮೇಲೆ ಹೇಳಿದ ಸಾರುಗಳಿಗೆ ತೆಂಗಿನಕಾಯಿಹಾಲು ಸೇರಿಸಿದರಂತೂ ಇನ್ನಷ್ಟು ರುಚಿಕರ, ಊಟದ ಶ್ರೀಮಂತಿಕೆಯನ್ನೂ ಹಚ್ಚಿಸುವಂತಹುದು ಕಾಯಿಹಾಲು, ದೇಹಕ್ಕೂ ತಂಪು.

ಅಂದ ಹಾಗೆ, ಅಪ್ಪೆಸಾರು ಎಂಬ ಪದದ ಬಳಕೆ ನಮ್ಮ ದಕ್ಷಿಣಕನ್ನಡಿಗರಲ್ಲಿ ಇಲ್ಲ. ಏನಿದ್ದರೂ ಮಾವಿನಕಾಯಿ ಸಾರು, ಬೀಂಬುಳಿ ಗೊಜ್ಜು ... ಈ ಥರ ಆಯಾ ತರಕಾರಿಗಳ ಹೆಸರಿನಲ್ಲಿ ನಾಮಕರಣ. ನಮ್ಮ ಕಡೆ ತುಳು ಪದಗಳ ಬಳಕೆ ಜಾಸ್ತಿ. ಒಂದು ವೇಳೆ ನಾನು, " ಚೆನ್ನಪ್ಪಾ, ಅಪ್ಪೆಸಾರು ಬಡಿಸಲೋ..? " ಎಂದು ಕೇಳಿದ್ರೆ ಅವನ ಉತ್ತರ ಹೆಂಗಿರುತ್ತೆ?

" ಅವು ಎಂಚಿನ, ಅಪ್ಪೆನ ಸಾರು! ಎಡ್ಡೆ ಇಪ್ಪು, ಬಳಸುಲೇ... " ಅನ್ತಿದ್ದ. ( ಅದ್ಯಾವುದು ಅಮ್ಮನ ಸಾರು! ಚೆನ್ನಾಗಿದ್ದೀತು, ಬಡಿಸಿರಿ... )

ಹಿತ್ತಲಲ್ಲಿ ದಾರೆಹುಳಿ ಇದೆಯಾ, ಇದು ಹುಳಿಯೊಂದಿಗೆ ಸಿಹಿಮಿಶ್ರಿತ ಹಣ್ಣು. ಇದನ್ನೂ ಸಾರು ಮಾಡಿ ಉಣ್ಣಬಹುದು. ಒಗ್ಗರಣೆಯಲ್ಲಿ ಬೆಳ್ಳುಳ್ಳಿ ಇಷ್ಟ ಪಡದವರೂ ಇರುತ್ತಾರೆ, ಇಂಗು, ಕರಿಬೇವು ಇತ್ಯಾದಿ ಇದೆಯಲ್ಲ.

ಮಾವಿನ ವಾಟೆ ಅಂದಾಗ ನೆನಪಾಯ್ತು, ಮಾವಿನಲ್ಲಿ ಗೊರಟು ಕಟ್ಟಬೇಕಾದರೆ ಮಾವಿನಕಾಯಿ ಬೆಳೆದಿರಬೇಕು, ಅದಕ್ಕೂ ಮೊದಲ ಹಂತದಲ್ಲಿ ಇರುವ ಎಳೆಯ ತಿರುಳು, ಯಾಕೋ ತಿಳಿಯದು, ನಮ್ಮ ಕಡೆ ಇಂತಹ ಎಳೆಯ ತಿರುಳನ್ನು ' ಕೋಗಿಲೆ ' ಅನ್ನುವ ವಾಡಿಕೆ, ಇದು ಕೂಡಾ ಅಡುಗೆಯಲ್ಲಿ ಬಳಸಲ್ಪಡುತ್ತದೆಂದು ಒಂದು ಸಮಯದಲ್ಲಿ ತಿಳಿದು ಬಂತು. ಆಗ ನಾನು ಕಾಲೇಜು ವಿದ್ಯಾರ್ಥಿನಿಯಾಗಿದ್ದೆ, ಒಂದು ಭಾನುವಾರ ಹೀಗೇ ಸುಮ್ಮನೆ ಸ್ನೇಹಿತೆ ಹೇಮಾ ಮನೆಗೆ ಹೋಗಿದ್ದೆ. " ಊಟ ಮಾಡ್ಬಿಟ್ಟು ಹೋಗು. " ಅವಳ ಅಜ್ಜಿ ಹಾಗೂ ಅಮ್ಮಂದು ಒತ್ತಾಯ, ನಿರಾಕರಿಸಲಾಗುತ್ತದೆಯೇ. ಅಂತೂ ಅವರ ಮನೆಯವರಲ್ಲೊಬ್ಬಳಂತೆ ಉಂಡಾಯಿತು. ಮನೆಯಲ್ಲಿ ಅಜ್ಜಿಯಂದಿರಿದ್ದರೆ ಅಡುಗೆಯ ರುಚಿಯೇ ಬೇರೆ, ನನಗಂತೂ ತಂಬುಳಿಯ ಹಾಗೇ ಇದ್ದ ಒಂದು ವ್ಯಂಜನ ತುಂಬಾ ಇಷ್ಟವಾಗಿ ಬಿಟ್ಟಿತು. ಯಾವುದು, ಏನು, ಹೇಗೆ ಎಂದು ವಿವರ ತಿಳಿಯಲಾಗಿ ಅದು ಕೇವಲ ಮಾವಿನ ವಾಟೆಯ ತಂಬುಳಿ!

ಕೋಗಿಲೆಯ ತಂಬುಳಿ, ಮಾಡಿದ್ದು ಹೇಗೆ?

ಎರಡು ಮಾವಿನ ವಾಟೆಯ ತಿರುಳು.
ಚಿಕ್ಕದಾಗಿ ಕತ್ತರಿಸಿಕೊಂಡು ತುಪ್ಪದ ಪಸೆಯಲ್ಲಿ ಹುರಿಯಿರಿ.
ಒಂದು ಹಸಿಮೆಣಸು, ತುಸು ಜೀರಿಗೆ, ಒಂದು ಹಿಡಿ ಕಾಯಿತುರಿ.
ರುಚಿಗೆ ತಕ್ಕಷ್ಟು ಉಪ್ಪು.
ಎಲ್ಲವನ್ನೂ ಅರೆಯಿರಿ.
ಒಂದು ಸೌಟು ಸಿಹಿ ಮಜ್ಜಿಗೆ ಕೂಡಿಸಿ, ನೀರನ್ನೂ ಎರೆದು ತೆಳ್ಳಗಾಗಿಸಿ, ಒಗ್ಗರಣೆ ಕೊಡುವುದು.
ಅರೆಯುವಾಗ ಮೆಣಸು ಇಲ್ಲದಿದ್ದರೂ ನಡೆಯುತ್ತದೆ, ಖಾರಕ್ಕೆ ಒಗ್ಗರಣೆ ಮೆಣಸೂ ಸಾಕು.
ಮಳೆಗಾಲದ ಅಡುಗೆಗೆಂದು ಉಪ್ಪಿನಲ್ಲಿ ಮಾವಿನಕಾಯಿ ಹಾಕಿಡುವುದಿದೆಯಲ್ಲ, ಅದರ ವಾಟೆಯನ್ನೇ ಅಡುಗೆಗೆ ಉಪಯೋಗಿಸುವುದು, ಹೀಗೇ ಸುಮ್ಮನೆ ತಿಂದೆಸೆದ ವಾಟೆ ಆಗದು. ವಾಟೆಯನ್ನು ಜಜ್ಜಿ ಒಳತಿರುಳನ್ನು ಬೇರ್ಪಡಿಸಲು ಪ್ರಯಾಸವೇನೂ ಇಲ್ಲ.

ಮಾವಿನಮಿಡಿ ಉಪ್ಪಿನಕಾಯಿ ಇದೆಯಲ್ಲ, ಎರಡು ಮೂರು ವರ್ಷಗಳ ಕಾಲ ಉಳಿಯುವಂತಹ ಮಿಡಿ ಉಪ್ಪಿನಕಾಯಿಗಳನ್ನು ತಿಂದು ತಿಂದು ಹಳೆಯದಾಯಿತು ಅಂತಾದರೂ ಮಿಡಿಯ ಒಳಗಿನ ' ಕೋಗಿಲೆ ' ತಂಬುಳಿ ಮಾಡಿ ಸವಿಯಬಹುದಾಗಿದೆ. ಉಪ್ಪು, ಮಸಾಲೆಯ ಖಾರ, ಮಾವಿನ ಸೊನೆ ಪರಿಮಳ ಹೊಂದಿರುವ ಈ ಕೋಗಿಲೆಯನ್ನು ಹುರಿಯಬೇಕೆಂದಿಲ್ಲ, ನೀರಿನಲ್ಲಿ ತೊಳೆದರೆ ಸಾಕು.

ಮಳೆಗಾಲ ಬಂದೊಡನೆ ತಿಂದು ಬಿಸುಟ ಮಾವಿನ ವಾಟೆ ಮೊಳಕೆಯೊಡೆದು ಎಳೆ ಚಿಗುರೆಲೆಗಳು ಮೂಡಿದಾಗ ಇಂತಹ ಚಿಗುರುಗಳ ತಂಬುಳಿಯೂ ರುಚಿಕರ. ಆಗ ತಾನೇ ಕುಡಿಯೊಡೆದ ಮಾವಿನ ವಾಟೆಯ ಒಳ ತಿರುಳು ಹೆಚ್ಚು ಸತ್ವಭರಿತವಾಗಿದ್ದು, ಕುಡಿಯೊಡೆದ ಕೋಗಿಲೆಯ ತಂಬುಳಿ ಈ ಮಳೆಗಾಲದಲ್ಲಿ ಮಾಡಿ ನೋಡಬೇಕೆಂದಿದೆ. ಮಳೆಗಾಲ ಬಂದರೆ ಸಾಕು, ನಮ್ಮ ಮಕ್ಕಳು ಗೇರುಮರಗಳ ಬುಡದಲ್ಲಿ ಅಡ್ಡಾಡಿ ಮೊಳಕೆಯೊಡೆದ ಗೇರುಬೀಜಗಳನ್ನು ಕೂಡಾ ಹುಡುಕಿ ತಿನ್ನುವ ಜಾಯಮಾನದವರು. " ಮಾವಿನ ಕೋಗಿಲೆಯೇನು ಮಹಾ... ಗೇರುಬೀಜದ ಮೊಳಕೆ ( ಮುಂಙೆ ) ತಿಂದು ಗೊತ್ತಾ.. " ಅನ್ನುವಂತಹ ಪ್ರಚಂಡರು ಹಳ್ಳಿಯಲ್ಲೇ ಹುಟ್ಟಿ ಬಳೆದ ಮಕ್ಕಳು.. ಹೌದೂ ಅನ್ನಿ.

ಟಿಪ್ಪಣಿ:   ಉತ್ಥಾನ ಮಾಸಪತ್ರಿಕೆಯ ಸಪ್ಟಂಬರ್, 2017ರ ಸಂಚಿಕೆಯಲ್ಲಿ ಪ್ರಕಟಿತ ಬರಹ.

Thursday 2 November 2017

ಸುರಂಗದತ್ತ ಪಯಣ



ಚೆನ್ನಪ್ಪನ ಎರಡು ತಿಂಗಳ ಸಂಬಳ ಎಣಿಸಿ ಕೊಟ್ಟಾಗಿತ್ತು. “ ನಾಳೆ ಬರ್ತಾನೋ ಇಲ್ಲವೋ... ಕೇಳಿ ಬಿಡು. “

“ ಗಂಟುನೋವಿನ ಮದ್ದು ತರಲಿಕ್ಕೆ ಸುಳ್ಯಕ್ಕೆ ಹೋಗುವುದಿದೆಯಂತೆ… “

“ ಅವನಿಗಿಷ್ಟವಾದ ಕೆಲಸ ನೆನಪಿಸಿ ಬಿಡು, ಬೇಗ ಬರುತ್ತಾನೆ. “

“ ತೋಟದಲ್ಲಿ ಸುರಂಗದ ಕೆರೆ ರಿಪೇರಿ ಆಗಲಿಕ್ಕುಂಟಲ್ಲ… “ ಎಂದು ಅವನತ್ತ ಬಾಣ ಎಸೆದಿದ್ದೂ ಆಯ್ತು.

ಚೆನ್ನಪ್ಪ ಸುಳ್ಯಕ್ಕೆ ಹೋದನೋ ಬಿಟ್ಟನೋ…. ಮಾರನೇ ದಿನ ನಾವು ತಿಂಡಿ ತಿನ್ನುತ್ತಿರಬೇಕಾದ್ರೆ ಹಾಜರಾದ.

ಇವತ್ತು ನಾವು ಅಡಿಕೆ ತೋಟದ ಅಭಿವೃದ್ಧಿಗೆ ಅವಶ್ಯವಿರುವ ನೀರಿನ ಸೆಲೆ ಇರುವಲ್ಲಿಗೆ ಪಯಣ ಬೆಳೆಸುವವರಿದ್ದೇವೆ. ಇದುವರೆಗೆ ಮಳೆಗಾಲವೆಂದು ತೋಟಕ್ಕೆ ಕಾಲಿಟ್ಟಿಲ್ಲ. ಹೋಗಬೇಕಾದ ದಾರಿಯುದ್ದಕ್ಕೂ ಮುಳ್ಳುಕಂಟಿ ಗಿಡಗಳನ್ನು ಸವರಬೇಕಾದ ಅನಿವಾರ್ಯತೆ ಇದೆ.

                                 

ಅಡಿಕೆ ತೋಟವೆಂದರೆ ಬಯಲು ಪ್ರದೇಶವಲ್ಲ. ನಮ್ಮ ಹಿಂದಿನವರು ಗುಡ್ಡಗಳನ್ನು ಕಡಿದು ತೋಟ ನಿರ್ಮಾಣ ಮಾಡಿದವರಾಗಿದ್ದಾರೆ. ಅಂತೆಯೇ ನಮ್ಮ ತೋಟವೂ ಮೂರು ಅಂತಸ್ತುಗಳ ಕಟ್ಟಡದಂತೆ ಮೂರು ತಟ್ಟುಗಳಲ್ಲಿದೆ. ಆ ಮೂರನೇ ತಟ್ಟಿನಲ್ಲಿದೆ ಸುರಂಗದ ಕೆರೆ ಹಾಗೂ ಝಳಝಳ ನಿನಾದದಿಂದ ಹರಿದು ಬರುತ್ತಿರುವ ನೀರು…

ಇಂತಹ ಸುರಂಗದ ನೀರಿನಿಂದಾಗಿ ಕಾಸರಗೋಡು ಜಿಲ್ಲೆ ಪ್ರಸಿದ್ಧಿಯನ್ನೂ ಪಡೆದಿದೆ. ಹೆಚ್ಚಿನ ಭೂಮಾಲಿಕರಲ್ಲಿ ಬದುಕಿನ ಸೆಲೆಯಾದ ಸುರಂಗದ ನೀರು ಇದ್ದೇ ಇದೆ.

ಸುರಂಗವೆಂದರೇನು ಎಂಬ ಪ್ರಶ್ನೆಗೂ ಚಿತ್ರಸಹಿತ ವಿವರಣೆ ಇಲ್ಲಿದೆ. ಅದು ಕೊಳವೆ ಬಾವಿಯಲ್ಲ, ಕೆರೆಕಲ್ಯಾಣಿ ಕಟ್ಟೆಯೂ ಅಲ್ಲ, ಬಾವಿಯಂತೂ ಅಲ್ಲ. ಗೋಡೆಯಂತಹ ಕಲ್ಲಿನ ದರೆಯನ್ನು ನೇರವಾಗಿ ಕಡಿಯುತ್ತ, ಗುಹಾದ್ವಾರದ ಪಯಣದಂತೆ ಮುಂದಕ್ಕೆ ಸಾಗುತ್ತ, ನೀರಿನ ಒಸರು ಸಿಗುವ ತನಕ ಮುಂದುವರಿಯುವ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ನೀರು ಸಿಗದಿದ್ದರೆ ಅಥವಾ ಆಮ್ಲಜನಕದ ಕೊರತೆ ಕಂಡು ಬಂದರೆ ಸುರಂಗದ ಮುಂದುವರಿಕೆ ಇಲ್ಲ. ಬೇರೊಂದು ನಿಟ್ಟಿನಲ್ಲಿ ಮುಂದುವರಿಸುವ ರೂಢಿ. ಇಂತಹ ಹಲವು ಸುರಂಗಗಳು ನಮ್ಮ ತೋಟದೊಳಗೆ ಇವೆ, ಮನೆಯ ದಿನಬಳಕೆಗೆ ಕೂಡಾ ಸುರಂಗದ ನೀರು ಹರಿದು ಬರುವ ವ್ಯವಸ್ಥೆ ನಮ್ಮದಾಗಿದೆ.

                         

Wednesday 1 November 2017

ಅಮೃತಫಲ

   
                 
                  

ಹಾಲು ತಂದಿದ್ದು ಅತಿಯಾಗಿ ಉಳಿದರೆ ಈ ಸ್ವೀಟು ಮಾಡುವ ಹವ್ಯಾಸ ನನ್ನದು. ಮನೆಗೆ ಬಂದ ಅತಿಥಿಗಳೇ ತಿಂದೂ, ಕೊಂಡೂ ಹೋದರು...

ಹಿರಣ್ಯದ ನಾಗಬನದಲ್ಲಿ ಧಾರ್ಮಿಕ ಚಿಂತನಾಸಭೆ ನಡೆಯುವುದಿತ್ತು. ಬರಲಿರುವ ಊರ ಪರವೂರ ಮಹನೀಯರಿಗೆ ಅತಿಥಿಸತ್ಕಾರದ ವ್ಯವಸ್ಥೆ ಆಗಬೇಕಾಗಿದೆ. ಕಾಫಿ ಚಹಾ ವಿತರಣೆಗಾಗಿ ದೊಡ್ಡ ಕ್ಯಾನ್ ತುಂಬ ಪಕ್ಕದ ಮಿಲ್ಮಾ ಡೈರಿಯಿಂದ ಹಾಲು ಬಂದಿತು.

ತಂದ ಹಾಲನ್ನು ಮುಗಿಸಲು ಕಾಫಿ ಚಹಾ ಪಾನೀಯಗಳಿಂದ ಸಾಧ್ಯವಾಗದೇ ಹೋಯಿತು, ಅಂದಾಜು ನಾಲ್ಕೂಐದೂ ಲೀಟರು ಹಾಲು ಉಳಿಯಿತು. ಕುದಿಸಿದ ಹಾಲಿನಲ್ಲಿ ಶೇಖರಿತವಾಗಿದ್ದ ಕೆನೆಯನ್ನು ನಾಳೆಯ ಬೆಣ್ಣೆಗಾಗಿ ತೆಗೆದಿರಿಸಿ, ನಾಳೆಯ ಖರ್ಚಿಗಾಗಿ ಉಳಿದ ಹಾಲನ್ನು ಕುದಿಸಿಟ್ಟುಕೊಂಡರೂ ಇದು ಮುಗಿಯದ ಹಾಲು. ಪಕ್ಕದ ಮನೆಯಲ್ಲೇ ಇರುವ ನಮ್ಮಕ್ಕನನ್ನೂ ಕೂಗಿ ಕರೆದು, “ ಈ ಹಾಲು ನಿನಗೂ ಇರಲಿ... “ ಅಂದ್ಬಿಟ್ಟು ಅವಳೂ ಹಾಲು ಕೊಂಡೊಯ್ದರೂ ಎರಡು ಲೋಟಾ ಹಾಲು ಮಿಕ್ಕಿತು!

ಇಲ್ಲ, ಹಾಗೇ ಸುಮ್ಮನೆ ಬಿಡುವಂತಿಲ್ಲ. ಮುಂಜಾನೆ ಚಟ್ಣಿಗಾಗಿ ಒಂದು ತೆಂಗಿನಕಾಯಿ ಒಡೆದಿದ್ರಲ್ಲಿ ಅರ್ಧ ದೊಡ್ಡ ಕಡಿ ಇದೆ. ಆ ಕಾಯಿಯನ್ನು ತುರಿದು, ಮಿಕ್ಸಿಯಲ್ಲಿ ತಿರುಗಿಸಿ ತೆಂಗಿನಕಾಯಿ ಹಾಲನ್ನು ತೆಗೆದು,
 ಎರಡು ಪ್ರತಿ ಹಾಲುಗಳನ್ನು ದಪ್ಪ ತಳದ ತಪಲೆಗೆ ಸುರಿದು,
ಎರಡು ಲೋಟ ಸಕ್ಕರೆಯನ್ನು ಅಳೆದು,
ಹಾಲೂ ಸಕ್ಕರೆ ಬೆರೆತು, ಕುದಿಕುದಿದು,
ಕೈ ಬಿಡದೆ ಮಗುಚುತ್ತಾ ಇರಲು,
ಕೊತಕೊತನೆ ಕುದಿಯುತ್ತ ಉಕ್ಕಿ ಉಕ್ಕಿ ಬರುತ್ತಿರಲು,
ಮರದ ಸಟ್ಟುಗ ತಿರುತಿರುಗುತ್ತಿರಲು,
ಎರಡು ಏಲಕ್ಕಿ ಗುದ್ದಿ,
ಒಂದು ತಟ್ಟೆಗೆ ತುಪ್ಪದ ಪಸೆಯುದ್ದಿ,
ಹಾಲು ಸಕ್ಕರೆಯ ಪಾಕ ಘನವಾಗುತ್ತ ಬಂದು,

ಈ ಸಿಹಿ ತಿಂಡಿಗೆ ತುಪ್ಪ ಹಾಕಬೇಕಾಗಿಲ್ಲ.
ಮೈದಾ, ಕಡಲೆ ಯಾ ಅಕ್ಕಿ ಹಿಟ್ಟು ಇದಕ್ಕೆ ಬೇಡ.
ಹಾಲಿನ ಖೋವಾ, ಘನೀಕೃತ ಹಾಲಿನ ಪುಡಿಯಂತಹ ಪ್ಯಾಕೇಟುಗಳ ಬಳಕೆಯನ್ನೂ ನಾನು ಮಾಡಿಲ್ಲ.

ಇನ್ನೇನು ಗಟ್ಟಿಯಾಗುತ್ತ ಬಂದಿದೆ... ಕೆಳಗಿಳಿಸಿ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ ಆರಲು ಬಿಡಿ.
ಅರ್ಧ ಗಂಟೆ ಬಿಟ್ಟು ಚೂರಿಯಲ್ಲಿ ಗೆರೆ ಹಾಕಿ.

ಸಿಹಿತಿಂಡಿಗೆ ಸೊಗಸಿನ ನೋಟವೂ ಇರಬೇಕು, ಅದಕ್ಕಾಗಿ ಚಿತ್ರದಲ್ಲಿರುವಂತೆ ಕಾಣಲು ಅಂಗೈಯಲ್ಲಿ ತಟ್ಟಿ ಪೇಢಾದಂತೆ ಮಾಡಿಟ್ಟೆ, ಬಿಸಿಯಿರುವಾಗ ಸಾಧ್ಯವಾಗದು, ಬಿಸಿ ಆರಿದ ನಂತರ ಮಾಡಿದ್ದು ಕಣ್ರೀ...

ಹೊರಚಾವಡಿಯಲ್ಲಿ ಆ ದಿನದ ಸಭಾ ಕಾರ್ಯಕ್ರಮದ ಆಯವ್ಯಯದ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದ ನಮ್ಮೆಜಮಾನ್ರು ಹಾಗೂ ಪಡಾರು ಬಾಲಕೃಷ್ಣ ಶೆಟ್ಟಿ ನನ್ನ ರಸರುಚೆಯ ಮೊದಲ ಗ್ರಾಹಕರು.
“ ದೂಧ್ ಪೇಢಾ ತಿಂದ ಹಾಗೆ ಆಯ್ತ.. ? “ ಪ್ರಶ್ನೆ ಹಾಕದಿದ್ದರೆ ಹೇಗೆ?
“ ಮಗಳಿಗೆ ತಿನ್ನಲಿಕ್ಕೆ ಕೊಂಡು ಹೋಗುತ್ತೇನೆ... “ ಎಂದ ಬಾಲಕೃಷ್ಣ. ಪ್ರೈಮರಿ ಸ್ಕೂಲ್ ಬಾಲೆಗಾಗಿ ನಾಲ್ಕು ಪೇಢಾಗಳನ್ನು ಕಟ್ಟಿ ಕೊಟ್ಟೆ.

ನಮ್ಮ ಊರಿನ ಸಾಂಪ್ರದಾಯಿಕ ಸಿಹಿಭಕ್ಷ್ಯವಾದ ಈ ತಿನಿಸು ಅಮೃತಘಲವೆಂದು ಕರೆಯಲ್ಪಟ್ಟಿದೆ. ತೆಂಗಿನಕಾಯಿ ಹಾಲು ಇದನ್ನು ಘನೀಕರಿಸುವ ಸಾಧನ. ಹಸುವಿನ ಹಾಲು ಹಾಗೂ ತೆಂಗಿನಕಾಯಿ ಹಾಲು, ಅಬಾಲವೃದ್ಧರಿಗೂ ಎಲ್ಲ ವಯೋಮಾನದವರಿಗೂ ಶರೀರಕ್ಕೆ ಪುಷ್ಟಿದಾಯಕ ಆಹಾರ. ಜೀರ್ಣಕ್ಕೇನೂ ಬಾಧಕವಿಲ್ಲ. ಕೃತಕ ಸುವಾಸನಾದ್ರವ್ಯಗಳನ್ನು, ಬಣ್ಣಗಳನ್ನು, ಬೆಳ್ಳಿಯ ರೇಕುಗಳನ್ನೂ ನಾವು ಮನೆಯಲ್ಲೇ ತಯಾರಿಸುವ ತಿನಿಸುಗಳಿಗೆ ಹಾಕಲೇ ಬಾರದು. ಅಂತಹುದೇನಿದ್ದರೂ ಬೇಕರಿ ತಿಂಡಿಗಳಿಗೆ ಬಿಟ್ಟು ಬಿಡೋಣ.



Saturday 21 October 2017

ಮನೆಯ ಬೆಳಕು



“ ಅಮ್ಮ, ದೀಪಾವಳಿಗೆ ನಾವೆಲ್ಲರೂ ಊರಿಗೆ… “ ಮಗನ ಮೆಸೇಜ್ ಬಂದಿತು.

“ ಅಮ್ಮ, ನಿನಗೇನು ತರಲೀ… “ ಮಗಳ ಪ್ರಶ್ನೆ.

“ ಏನೂ ಬೇಡ ಬಿಡು, ಎಲ್ಲರೂ ಬರುತ್ತೀರಲ್ಲ, ಅದೇ ಸಾಕು. “

“ ನಿನಗೇಂತ ಕೈಯಲ್ಲೇ ಹೊಲಿಯುವ ಮೆಶೀನ್ ಕೊಂಡುಕೊಡಿದ್ದೇನೆ. “ ಎಂದಳು ಶ್ರೀದೇವಿ.

“ ಹೌದ! ನಿನಗೆ ಮಾತ್ರ ನನ್ನ ಲೈಕುಗಳು ಅರ್ಥವಾಗೋದು… “

ದಿನ ನಿಗದಿಯಾಗಿದ್ದಂತೆ ಬೆಳ್ಳಂಬೆಳಗ್ಗೆ ಮನೆ ತಲುಪಿದ ಮಕ್ಕಳು, “ ಅತ್ತೇ, ಹೊಲಿಗೆ ಮೆಶೀನು ಬಂದಿದೆ. “ ಮೈತ್ರಿಯ ಕೈಯಲ್ಲಿ ಪುಟ್ಟ ಬಾಕ್ಸ್.

“ ಅಮ್ಮ, ಇದರಲ್ಲಿ ಹೊಲಿಗೆ ಹಾಕಲಿಕ್ಕೆ ಎರಡು ಬ್ಯಾಟರಿ ಹಾಕ್ಬೇಕು, ಅದು ನಮ್ಮೂರಲ್ಲೇ ಸಿಗುತ್ತೆ... “ ಎಂದ ಮಗಳು.

“ ಸರಿ ಬಿಡು, ಅದನ್ನೆಲ್ಲ ನಿಧಾನವಾಗಿ ನೋಡಿಕೊಳ್ಳೋಣ, ಈಗ ಎಲ್ಲರೂ ತಿಂಡಿ ತಿಂದು ಮಲಗಿಕೊಳ್ಳಿ. “

ಸಂಜೆ ಆಯ್ತು, ನನ್ನ ಮುಸ್ಸಂಜೆಯ ರೂಢಿಯಂತೆ ಪುಟ್ಟ ದೀಪ ಹೊತ್ತಿಸಿ ಇಟ್ಟೆ. ಮೈತ್ರಿ ದೇವರ ಕೋಣೆಯಿಂದ ಹೂಬತ್ತಿಗಳನ್ನು ತೆಗೆದುಕೊಂಡು ಹೊರ ಬಂದಳು. ಅವಳೇನು ಮಾಡ ಹೊರಟಿದ್ದಾಳೆ ಎಂದು ನೋಡುವ ವ್ಯವಧಾನ ಇಲ್ಲದ ನಾನು ರಾತ್ರಿಯ ಅಡುಗೆಯ ತಯಾರಿಗಾಗಿ ಒಳಗೆ ಹೋದೆ.

ಹೊರಗಿನಿಂದ ಗದ್ದಲ ಕೇಳಿಸುತ್ತ ಇದೆ, “ ಅಮ್ಮ, ಬಾ ಇಲ್ಲಿ... ಒಳಗೆ ಏನು ಮಾಡ್ತಾ ಇದ್ದೀಯಾ? “
ಹೊರ ಬಂದಾಗ,



“ ಅತ್ತೇ ಈ ಫೋಟೋ ನಿಮ್ಮ ಬ್ಲಾಗ್ ನಲ್ಲಿ ಹಾಕಿ...” ಎಂದಳು ಸೊಸೆ.

ಹೌದಲ್ಲವೇ, ಶ್ರೀದೇವಿ ಕ್ಲಿಕ್ಕಿಸಿದ ಐಫೋನ್7ಪ್ಲಸ್ ಕೆಮರಾದ ಕಾರ್ಯಕ್ಷಮತೆ ಯಾವುದೇ ವೃತ್ತಿಪರ ಛಾಯಾಗ್ರಹಣವನ್ನೂ ನಾಚಿಸುವಂತಿದೆ!


Thursday 19 October 2017

 ಚಿಲ್ಲರೆಯ ವಿಷಯ!



 ಉಪ್ಪಳ ಪೇಟೆವರೆಗೆ ಹೋಗಿ ಬರುತ್ತೇನೆ. " ಬೈಕ್ ಏರಿ ಹೋಗಿದ್ದ ನಮ್ಮೆಜಮಾನ್ರು ಸಂಜೆಯಾಗುತ್ತಲೂ ಮನೆ ತಲುಪಿ ಮೊದಲು ಹೇಳಿದ್ದು ಹೀಗೆ, " ನಿನ್ನ ಫೇಸ್ ಬುಕ್ ವ್ಯವಹಾರಕ್ಕೆ ಫೋಟೋ... "

" ಏನೂ... "
" ನಾನು ವೈದ್ಯರಲ್ಲಿಗೆ ಹೋಗಿದ್ದು... " ಉಪ್ಪಳದ ಆಯುರ್ವೇದ ಪಂಡಿತರೂ ನಮ್ಮವರೂ ಸ್ನೇಹಿತರು.
" ಹ್ಞಾ, ಅಂತಹ ವಿಶೇಷದ ಫೋಟೋ ತೆಗೆಯಲಿಕ್ಕೆ ಏನು ಇತ್ತು ಅಲ್ಲಿ? "
" ಎಷ್ಟೊಂದು ಹಳೇ ಕಾಯಿನ್ ಕಲೆಕ್ಷನ್ ಇದೆ ಅವರ ಹತ್ತಿರ... ಅಂತಾದ್ದು ನನ್ನ ಬಳಿ ಒಂದೂ ಇಲ್ವೇ..." ಮಮ್ಮಲ ಮರುಗಿದರು ನಮ್ಮವರು.

“ ನನ್ನ ಕುತ್ತಿಗೆಯ ಪವನಿನ ಸರ… “ ಸಮಾಧಾನಿಸುತ್ತ, " ಇದೆಯಲ್ಲ ಓಬೀರಾಯನ ಕಾಲದ ಬೆಳ್ಳಿ ನಾಣ್ಯಗಳು... " ಐಫೋನ್ ಕೈಗೆತ್ತಿಕೊಂಡು ನಮ್ಮವರು ಕ್ಲಿಕ್ಕಿಸಿದ ಚಿತ್ರಗಳನ್ನು ಗಮನಿಸುತ್ತ, " ಇಂತಹ ಚಿಲ್ಲರೆ ನಾಣ್ಯಗಳು ನಮ್ಮಲ್ಲೂ ಉಂಟಲ್ಲ! "
" ಹೌದ, ಎಲ್ಲಿದೇ? ನಿನ್ನ ಬಳಿ ಹೇಗೆ ಬಂತು? " ನಮ್ಮವರ ಅಡ್ಡಪ್ರಶ್ನೆ.

"ಅದೂ ಅಪ್ಪನ ಕಪಾಟು ಉಂಟಲ್ಲ... "
" ಅಪ್ಪನ ಪೈಸ ನೀನು ಯಾಕೆ ತೆಗೆದಿಟ್ಟಿದ್ದು? "
" ಛೆ.. ಹಾಗೇನೂ ಅಲ್ಲ. ಆ ಕಪಾಟಿನಲ್ಲಿ ಇದೆ. ಒಂದು ಹಿತ್ತಾಳೆ ಲೋಟದಲ್ಲಿ ಇಟ್ಟಿದ್ದೇನೆ. ಕಪಾಟು ಬಾಗಿಲು ತೆಗೆದಾಗ ಬಲ ಮೂಲೆಯ ಮೇಲಿನ ಶೆಲ್ಫ್... ಬೇಕಿದ್ರೆ ನೋಡ್ಕೊಳ್ಳಿ. "

ನನಗೂ ಚಿಂತೆಗಿಟ್ಟುಕೊಂಡಿತು. ಮಾವ ಇದ್ದಾಗ ಅವರ ಬೇಕುಬೇಡಗಳನ್ನು ನೋಡಿಕೊಳ್ಳುತ್ತಿದ್ದೆನಲ್ಲದೆ ಕಪಾಟಿನಲ್ಲಿ ಇದ್ದಿರಬಹುದಾದ ಹಳೆ ಚಿಲ್ಲರೆ ನಾಣ್ಯಗಳನ್ನು ಹುಡುಕಿ ತೆಗೆದಿರಿಸುವಷ್ಟು ವ್ಯವಧಾನ ಇದ್ದರಲ್ಲವೇ... ಮಾವನವರೂ ಇಂತಹ ಕಿಲುಬುಕಾಸೂ ಬೆಲೆಯಿಲ್ಲದ ನಾಣ್ಯಗಳನ್ನು ಇಟ್ಟುಕೊಂಡಂತಿಲ್ಲ. ಹಳೆಯ ಪುಸ್ತಕಗಳೂ, ಹಳೆಯ ಕಾಲದ ಪಾತ್ರೆಪರಡಿಗಳೂ, ಮಣ್ಣಿನ ಒಟ್ಟೆ ಕುಡಿಕೆಗಳೂ ಎಲ್ಲೆಂದರೆ ಅಲ್ಲಿ ಮನೆಯ ಉಪ್ಪರಿಗೆ ಅಟ್ಟದಲ್ಲಿ ಬಿದ್ದುಕೊಂಡಿದ್ದ ಕಾಲವೊಂದಿತ್ತು.

ವಿದ್ಯಾರ್ಥಿ ದಿನಗಳಲ್ಲಿ ಸ್ಟಾಂಪ್ ಸಂಗ್ರಹ, ನಾಣ್ಯ ಸಂಗ್ರಹ ನನ್ನ ಹವ್ಯಾಸಗಳಲ್ಲಿ ಸೇರಿದ್ದವು, ಹೀಗೇ ಮನೆಯ ಯಾವುದೋ ಮೂಲೆಯಲ್ಲಿ ಸಿಕ್ಕಿದಂತಹ ನಾಣ್ಯಗಳನ್ನು ನಾನೇ ಒಂದೆಡೆ ಇರಿಸಿರುವ ಸಾಧ್ಯತೆ ಇದೆ.

" ಈ ನಾಣ್ಯಗಳೆಲ್ಲ ಕಪ್ಪುಕಪ್ಪಾಗಿವೆ, ಇದನ್ನು ಮಡಿ ಮಾಡುವುದು ಹೇಗೆ? "
" ಬಿಡಿ, ಹುಳಿಮಜ್ಜಿಗೆ ಇದೆ. ಅದರಲ್ಲಿ ಅರ್ಧ ಗಂಟೆ ಮುಳುಗಿಸಿಟ್ಟರೆ ಫಳಫಳ ಆದೀತು... "
ಆ ನಾಣ್ಯಗಳನ್ನು ಚೆಲ್ಲಲು ಇಟ್ಟಿದ್ದ ಹುಳಿಮಜ್ಜಿಗೆಯಲ್ಲಿ ಹಾಕಿಟ್ಟು, ತೊಳೆದೂ ಕೊಟ್ಟೆ.

" ಇದು ಸಾಲದು, ಹುಣಸೇಹುಳಿ ಇಲ್ಲವೇ... ಕೊಡು, ನಾನೇ ತೊಳೆದು ತರುತ್ತೇನೆ. " ಅಂತೂ ಹುಣಸೇಹುಳಿಯಲ್ಲಿ ಮಿಂದ ನಾಣ್ಯಗಳು ಮಡಿಮಡಿಯಾಗಿ ಟೇಬಲ್ ಮೇಲೆ ಕುಳಿತವು.
ಈ ಒಟ್ಟೇಮುಕ್ಕಾಲು ಉಂಟಲ್ಲ, ಹಣೆಗೆ ಕುಂಕುಮ ಇಟ್ಟುಕೊಳ್ಳಲಿಕ್ಕೆ ನಮ್ಮ ಉಪಯೋಗ.. ಕುಂಕುಮ ಕರಡಿಗೆಯೊಟ್ಟಿಗೆ ಇಟ್ಟಿದ್ದ ಒಂದು ಒಟ್ಟೇಮುಕ್ಕಾಲು ಮನೆ ಕ್ಲೀನು ಮಾಡುವಾಗ ಬಿಸಾಡಿಯೇ ಹೋಯ್ತು... "

"ಅದಕ್ಕೆಲ್ಲ ಯಾಕೆ ತಲೆ ಕಡಿಸ್ಕೋತೀಯ, ಈಗ ಇರುವುದನ್ನು ನೋಡಿ ಆನಂದ ಪಡು. "



Saturday 14 October 2017

ಚಿತ್ರಲಹರಿ

                             


                                                           

                                                     

                                                      

 


                                                  

Sunday 8 October 2017

ನೀರುಳ್ಳಿ ಉಪ್ಪಿನಕಾಯಿ


                    


ಉದ್ಯೋಗ ನಿಮಿತ್ತ ನಗರದಲ್ಲಿ ವಾಸವಾಗಿರುವ ನನ್ನ ಮಗಳೂ, ಸೊಸೆಯಂತಹವರಿಗಾಗಿ ಈ ಉಪ್ಪಿನಕಾಯಿ ಬಂದಿದೆ.

ತಾಯಿಮನೆಯಿಂದ ಯಾ ಅತ್ತೆಯ ಕೈಯಿಂದ ಇಸ್ಕೊಂಡು ಮಾವಿನಮಿಡಿ ಉಪ್ಪಿನಕಾಯಿ ತಂದಿದ್ದೀರಿ, ಮಿಡಿ ತಿಂದು ಮುಗಿಯಿತು, ತಳದಲ್ಲಿ ಉಳಿದಿರುವ ಮಸಾಲೆಯನ್ನು ಹಾಗೇ ಬಿಸಾಡುವುದಕ್ಕುಂಟೇ…. ಅದೂ ಘಮಘಮಿಸುತ್ತಿರುವಾಗ, ಜಾಡಿಯಲ್ಲಿ ಉಳಿದಿರುವ ಉಪ್ಪಿನಕಾಯಿ ಹೊರಡಿಯನ್ನು ( ಮಸಾಲೆಯನ್ನು ) ಹೀಗೆ ಸದುಪಯೋಗ ಮಾಡಬಹುದು.

ಅಡುಗೆಗಾಗಿ ತರಕಾರಿ ಹೆಚ್ಚುತ್ತಿರುವಾಗ ಒಂದು ನೀರುಳ್ಲಿಯನ್ನೂ ಚಕಚಕನೆ ಕೊಚ್ಚಿ, ಒಂದೆರಡು ಚಮಚಾ ಉಪ್ಪಿನಕಾಯಿ ಮಸಾಲೆಯನ್ನು ಬೆರೆಸಿ, ತತ್ಷಣ ಸಿದ್ಧ ನೀರುಳ್ಳಿ ಉಪ್ಪಿನಕಾಯಿ.

ಈ ಐಡಿಯಾ ಹೇಳಿಕೊಟ್ಟಿದ್ದು ನನ್ನ ತಂಗಿ ಗಾಯತ್ರಿ. ಸಿವಿಲ್ ಇಂಜಿನಿಯರ್ ಆಗಿರುವ ಅವಳು ಕಟ್ಟಡ ನಿರ್ಮಾಣದ ಕೆಲಸಕಾರ್ಯಗಳಿಂದ ಕಣ್ಣೂರು, ಮಂಗಳೂರು ತನಕ ತಿರುಗಾಡುತ್ತಿರುತ್ತಾಳೆ. ಅಂತಹ ಒಂದು ಸಂದರ್ಭದಲ್ಲಿ , ಯಾವುದೋ ಒಂದು ಮನೆಯಲ್ಲಿ ಇಂತಹ ವಿಶಿಷ್ಟ ಉಪ್ಪಿನಕಾಯಿ ತಿನ್ನುವ ಯೋಗ ಸಿಕ್ಕಿದೆ ಅಷ್ಟೇ.

ಚೆನ್ನಾಗಿರುತ್ತೆ ಅಂದ್ಬಿಟ್ಟು ಅತಿಯಾಗಿ ಮಾಡಿಟ್ಟುಕೊಳ್ಳದಿರಿ. ಆಯಾ ದಿನದ ಅಗತ್ಯಕ್ಕೆ ತಕ್ಕಷ್ಟು ಮಾಡಿದರೆ ಸಾಕು, ನೀರುಳ್ಳಿಯೇನೂ ದೀರ್ಘಕಾಲ ಉಳಿಯುವಂತಹುದಲ್ಲ.

Thursday 21 September 2017

ಬೆರಟಿ ಹಲ್ವಾ



ನವರಾತ್ರಿ ಬಂದಿದೆ, ಹಬ್ಬದೂಟ ಎಂದು ಪಾಯಸ ಆಗಬೇಕಿದೆ. ಆಗಬೇಕು ಆದರೆ ಪಾಯಸವನ್ನು ಉಣ್ಣಲು ಮನೆಯೊಳಗೆ ಏಳೆಂಟು ಜನರ ಉಪಸ್ಥಿತಿ ಇರಬೇಕು, ಮಾಡಿದ್ದು ಮುಗಿದೀತು. ಸಕ್ಕರೆ ಬೆಲ್ಲ ಕಾಯಿಹಾಲು ಎರೆದು ವ್ಯರ್ಥ ಮಾಡಲೇಕೆ... ಹೀಗೆಲ್ಲ ಚಿಂತನಮಂಥನ ಆಗುತ್ತಿದ್ದಂತೆ ಹಲಸಿನಹಣ್ಣಿನ ಬೆರಟಿಯ ಜಾಡಿ ಕೆಳಗಿಳಿಯಿತು.
ಒಂದು ಒಣ ಸೌಟಿನಲ್ಲಿ ಮೂರು ಮುದ್ದೆ ಬೆರಟಿ ತೆಗೆದು ಪಾತ್ರೆಗೆ ಹಾಕಲಾಗಿ, “ ಬೆರಟಿ ಪಾಯಸವೇನೋ ಆದೀತು, ತಿಂದು ಮುಗಿದೀತೇ... “ ಚಿಂತೆಗಿಟ್ಟುಕೊಂಡಿತು.
ಬೆರಟಿಗೆ ತುಸು ನೀರೆರೆದು ಕೈಯಲ್ಲಿ ಹಿಸುಕಿ ದ್ರವರೂಪಕ್ಕೆ ತರುವ ಸಾಹಸ, ಹಲಸಿನಹಣ್ಣಿನ ನಾರು ಎಳೆ ಎಳೆಯಾಗಿ ಎದ್ದು ಬಂದಾಗ, ಅದನ್ನೂ ತಿಕ್ಕಿ ತಿಕ್ಕಿ ತೆಗೆದಾಯಿತು.
“ ನಾರು ಬಂದಿದ್ದು ಹೇಗೆ? “

“ ತುಳುವೆ ಹಲಸಿನ ಹಣ್ಣಿನಲ್ಲಿ ನಾರು ಜಾಸ್ತಿ, ಎಲ್ಲೋ ಈ ಬೆರಟಿ ತುಳುವ ಹಣ್ಣಿನದ್ದು. “

“ ನಾರು ತೆಗೆಯದಿದ್ದರೆ ಏನಾಗುತ್ತದೆ? “

“ ಪಾಯಸ ಕುಡಿಯುವಾಗ ಗಂಟಲಲ್ಲಿ ನೂಲಿನೆಳೆ ಅಥವಾ ಕಸ ಸಿಕ್ಕಂತೆ ಆದೀತು ಅಷ್ಟೇ. “
ಒಂದು ಅಚ್ಚು ಬೆಲ್ಲ ಹಾಕಿ, ಒಲೆಯ ಮೇಲಿಟ್ಟು ಸೌಟು ಆಡಿಸುತ್ತ ಇದ್ದಾಗ, “ ತುಪ್ಪ ಹಾಕಿದ್ರೆ ಹಲ್ವಾ ಆಯ್ತು ಅಲ್ವ... “ ಐಡಿಯಾ ಬಂದಿತು.
ಹೊರಚಾವಡಿಯಲ್ಲಿ ಇಂಟರ್ ನೆಟ್ ವ್ಯಾಸಂಗದಲ್ಲಿ ತೊಡಗಿರುವ ನಮ್ಮೆಜಮಾನ್ರ ಬಳಿ ಒಂದು ಮಾತು ಕೇಳದಿದ್ದರೆ ಹೇಗಾದೀತು?
“ ನೋಡ್ರೀ... ಬೆರಟಿ ಪಾಯಸ ಮಾಡಲೋ, ಹಲ್ವಾ ಆದೀತೊ? “

ನಮ್ಮವರು ಒಳ ಬಂದಾಗ ಬೆರಟಿಯೊಂದಿಗೆ ಬೆಲ್ಲ ಕರಗಿ ಮಿಳಿತವಾಗಿ ಹಲ್ವದ ಹದಕ್ಕೆ ಬಂದಿತ್ತು.

“ ಹಲ್ವವೇ ಚೆನ್ನ... “ ಉತ್ತರ ದೊರೆಯಿತು.

“ ಸರಿ ಹಾಗಿದ್ದರೆ. “ ಎರಡು ದೊಡ್ಡ ಚಮಚ ತುಪ್ಪ ಎರೆದು ಕಾಯಿಸುತ್ತ ಇದ್ದ ಹಾಗೆ ಗೋಡಂಬಿಯೂ ತುಪ್ಪದಲ್ಲಿ ಹುರಿಯಲ್ಪಟ್ಟು ಬಿದ್ದಿತು.

ಗೋಡಂಬಿ ಹುರಿದ ತುಪ್ಪದಲ್ಲಿ ಎರಡು ಚಮಚ ಗೋಧಿಹುಡಿಯನ್ನು ಘಮಘಮಿಸುವಂತೆ ಹುರಿದು ಹಾಕುವಲ್ಲಿಗೆ ಹಲ್ವದ ಸಾಂದ್ರತೆ ಇನ್ನಷ್ಟು ಗಾಢವಾಗಿ ಬೆರಟಿ ಹಲ್ವಾ, ನಮ್ಮ ನವರಾತ್ರಿಯ ಸಿಹಿತಿನಿಸು ಆಗಿಹೋಯಿತು.


          

Sunday 17 September 2017

ಕಾಲಿಫ್ಲವರ್ ಪತ್ರೊಡೆ




" ಅತ್ತೇ,  ರಾತ್ರಿಯೂಟಕ್ಕೆ ಪರೋಟಾ... "

" ಮಾಡ್ತೀಯಾ...  ಗೋಧಿಹಿಟ್ಟು ಇಲ್ಲಿದೆ,  ಬಟಾಟೆ ಅಲ್ಲಿದೆ... "  ಸಾಮಗ್ರಿಗಳನ್ನು ತೋರಿಸಿಕೊಟ್ಟು ನಾನು ಫೇಸ್ ಬುಕ್ಕು ಬಿಡಿಸಿದೆ.


ನನಗಂತೂ ಪರೋಟಾ ಬಗ್ಗೆ ಏನೂ ತಿಳಿಯದು,   ಮೈತ್ರಿಯ ಪರೋಟಾ ತಯಾರಿಯನ್ನೂ ಗಮನಿಸುತ್ತ ಇದ್ದಂತೆ ಬಿಸಿಬಿಸಿಯಾದ ಪರೋಟಾ ತಟ್ಟೆಗೆ ಬಂದು ಬಿತ್ತು,  ಪುದಿನಾ ಚಟ್ನಿಯೂ ಬಂದಿತು.   ಅದೂ ಅಂತಿಂಥ ಪುದಿನ ಅಲ್ಲ,   ಇಟಾಲಿಯನ್ ಮಿಂಟ್ ಎಂಬಂತಹ ಹೆಸರಿನ ಈ ಕುರುಚಲು ಗಿಡವನ್ನು ಮೈತ್ರಿಯೇ ನೆಟ್ಟು ಸಲಹಿ ಈಗ ಚಟ್ಣಿಯಾಗಿ ಬಂದಿದೆ.


" ಅತ್ತೇ,  ಈ ಕಾಲಿಫ್ಲವರ್ ಇಷ್ಟು ಉಳಿದಿದೆ,  ನಾಳೆಯ ಅಡುಗೆಗೆ ಸಾಕಾದೀತು. "  ಬಟಾಟೆಯ ಹೂರಣಕ್ಕೆ ತುರಿದ ಕಾಲಿಫ್ಲವರ್ ಕೂಡಾ ಬಿದ್ದಿತ್ತು.


ಬೇಗನೇ ಬೆಂಗಳೂರು ತಲಪಬೇಕಾಗಿದ್ದ ಒತ್ತಡದಿಂದ ಮುಂಜಾನೆ ನಾಲ್ಕಕ್ಕೇ ಎದ್ದು ಹೊರಟು ನಿಂತ ಮಕ್ಕಳು. 

  " ಕಾಲಿಫ್ಲವರ್ ಪತ್ರೊಡೆ ಮಾಡಿಟ್ಟಿದ್ದೇನೆ,   ಬೆಂಗಳೂರಿನಲ್ಲಿ ತಿನ್ನಿ... "


" ಬ್ಯಾಡಾ ಅಮ್ಮ,  ಕಾರಿನಲ್ಲಿ ಪತ್ರೊಡೆಗೆ ಜಾಗಾ ಇಲ್ಲ. "



                             



ಕಾಲಿಫ್ಲವರ್ ಪತ್ರೊಡೆಯಾ?  ಹೇಗೆ ಮಾಡಿದ್ದೂ? 


ಕೇಳಿಯೇ ಕೇಳ್ತೀರಾ,  ನಾನೂ ವಿವರವಾಗಿ ಹೇಳದಿದ್ದರೆ ಹೇಗೆ?


ಹಿತ್ತಲ ಕಡೆ ತೋಟಕ್ಕಿಳಿದಾಗ ಪುಟ್ಟಪುಟ್ಟ ಕೆಸುವಿನೆಲೆಗಳ ಸ್ವಾಗತ ದೊರೆಯಿತು.   ಮಳೆಗಾಲದ ಆರಂಭ ಆಗುತ್ತಾ ಇದೆ...  ಇನ್ನೂ ಹತ್ತು ದಿನ ಹೋದರೆ ಸಾಕಷ್ಟು ಎಲೆ ಕೀಳಬಹುದು.   ಈಗ ಹತ್ತಿಪ್ಪತ್ತು ಎಳಸು ಕೆಸುವಿನೆಲೆಗಳು ಸಿಕ್ಕವು.   ಬಾಳೆ ಎಲೆ ಮನೆಯೊಳಗೆ ಇದೆ,  ಕೊಯ್ಯಬೇಕಾಗಿಲ್ಲ.   ಆದರೆ ಇಷ್ಟು ಸ್ವಲ್ಪ ಎಲೆಗಳ ಪತ್ರೊಡೆ ಮಾಡಲೆಂತು ಎಂದು ಚಿಂತೆಗಿಟ್ಟುಕೊಂಡಿತು.


ಕೆಸುವಿನೆಲೆಗಳೊಂದಿಗೆ ಒಳ ಬಂದಾಗ ತರಕಾರಿ ಬುಟ್ಟಿಯಲ್ಲಿದ್ದ ಕಾಲಿಫ್ಲವರ್ ಮಿಸುಕಾಡಿತು.   ಹೌದಲ್ಲವೇ,  ಕಾಲಿಫ್ಲವರ್ ಹೇಗೂ ಸೊಪ್ಪು ತರಕಾರಿ,  ಕೆಸುವಿನೊಂದಿಗೆ ಹೊಂದಿಕೆಯಾದೀತು,   ಹುಳಿಯೂ ಜಾಸ್ತಿ ಬೇಕಾಗದು,  ನಾಲ್ಕು ಅಂಬಟೆಮಿಡಿ ಹಿಟ್ಟು ರುಬ್ಬುವಾಗ ಹಾಕಿದರೆ ಸಾಕು.   


ಮುಂದಿನ ಸಿದ್ಧತೆ  ಏನೇನು?


ಕಾಲಿಫ್ಲವರ್ ತುರಿಯುವುದು

ಕೆಸುವಿನೆಲೆ ಚಿಕ್ಕದಾಗಿ ಕತ್ತರಿಸುವುದು

2 ಪಾವು ಬೆಳ್ತಿಗೆ (ಇಡ್ಲಿ ಅಕ್ಕಿ ) ತೊಳೆದಿರಿಸುವುದು

ಒಂದು ಕಡಿ ತೆಂಗಿನಕಾಯಿ ತುರಿಯುವುದು


 ಸೊಸೆಗೆ ಖಾರ ಆಗದು,  ಹಿತ್ತಲ ಗಿಡದಿಂದ ನಾಲ್ಕು ಬಜ್ಜಿ ಮೆಣಸು ಕೊಯ್ದು ತರುವುದು

2 ಚಮಚ ಕೊತ್ತಂಬರಿ

ಒಂದು ಚಮಚ ಜೀರಿಗೆ

ಕಡ್ಲೇ ಕಾಳಿನಷ್ಟು ಇಂಗು

3 ಅಂಬಟೆಮಿಡಿಗಳು

ರುಚಿಗೆ ಉಪ್ಪು

ಸಿಹಿಗೆ ಬೆಲ್ಲ 


ಕಾಯಿತುರಿ ಹಾಗೂ ಮಸಾಲಾ ಸಾಮಗ್ರಿಗಳನ್ನು ಮೊದಲು ಅರೆಯಿರಿ,   ತೊಳೆದ ಅಕ್ಕಿಯನ್ನೂ ಹಾಕಿ ಇನ್ನೊಂದಾವರ್ತಿ ಅರೆದು,  ತರಿತರಿಯಾಗಿ ಅರೆದಿರಾ,  ಸಾಕು.


ಈ ಹಿಟ್ಟಿಗೆ ಕೆಸುವಿನೆಲೆ ಹಾಗೂ ತುರಿದ ಕಾಲಿಫ್ಲವರನ್ನೂ ಬೆರೆಸಿ,

ಬಾಡಿಸಿರುವ ಬಾಳೆ ಎಲೆಯೊಳಗಿಟ್ಟು,

ಅಚ್ಚುಕಟ್ಟಾಗಿ ಮಡಚಿ,

ಅಟ್ಟಿನಳಗೆ ( ಇಡ್ಲಿಪಾತ್ರೆ ) ಒಳಗಿಟ್ಟು,

ಉಗಿಯ ಶಾಖದಲ್ಲಿ ಅರ್ಧ ಗಂಟೆ ಬೆಂದಾಗ ಪತ್ರೊಡೆ ಆಗಿ ಹೋಯಿತು.


ಬಿಸಿಬಿಸಿಯಾದ ಪತ್ರೊಡೆ,  ಹಾಗೇನೇ ತುಪ್ಪ ಸವರಿ ತಿನ್ನಲು ರುಚಿ.







 


Wednesday 13 September 2017

ಮಸಾಲಾ ಅವಲಕ್ಕಿ




           



ತೆಂಗಿನಕಾಯಿ ತುರಿದದ್ದು ಹೆಚ್ಚಾಗಿದೆ,  ಈ ಮಿಕ್ಕಿದ ಕಾಯಿತುರಿಯನ್ನು ನಾಳೆಯ ಅವಲಕ್ಕಿ ಮಸಾಲೆಗಾಗಿ ಈಗಲೇ ಸಿದ್ಧಪಡಿಸಿಟ್ಟರೆ ಹೇಗೆ?


ಐಡಿಯಾ ಚೆನ್ನಾಗಿದೆ,  ಕೆಲವೊಮ್ಮೆ ಬೆಳಗ್ಗೆ ಏಳುತ್ತಲೂ ವಿದ್ಯುತ್ ಇರುವುದೂ ಇಲ್ಲ.   ನಾನ್ ಸ್ಟಿಕ್ ಬಾಣಲೆಯಲ್ಲಿ ಮೂರು ಒಣಮೆಣಸು,   ಎರಡು ಚಮಚ ಕೊತ್ತಂಬ್ರಿ,  ಒಂದು ಚಮಚ ಜೀರಿಗೆ ಹುರಿದು ತೆಂಗಿನ ತುರಿಯನ್ನು ಹಾಕಿ ಬಾಡಿಸಿದ್ದೂ ಆಯಿತು.


ಆರಿದ ನಂತರ ಮಿಕ್ಸಿಯಲ್ಲಿ ತಿರುಗಿಸಿ ಪುಡಿ ಮಾಡಿದ್ದೂ ಆಯ್ತು.  ಮಸಾಲೆ ಪುಡಿಯನ್ನು ಭದ್ರವಾಗಿ ತೆಗೆದಿರಿಸಿ,  ಹಿಂದಿನಂತೆ ಈಗ ತೆಂಗಿನಕಾಯಿ ಖರ್ಚು ಆಗುವುದೇ ಇಲ್ಲ,  ಎಷ್ಟೇ ಚಿಕ್ಕ ಕಾಯಿ ಸುಲಿದರೂ ಉಳಿಕೆಯಾಗುವ ಕಾಯಿತುರಿಗೆ ಇನ್ನು ಇದೇ ಮಾದರಿಯ ಗತಿಗಾಣಿಸಬೇಕೆಂದು ನಿರ್ಧಾರ ಮಾಡಿದ್ದೂ ಆಯಿತು.


ಮಸಾಲಾ ಅವಲಕ್ಕಿ ಮಾಡಿದ್ದು ಹೇಗೆ?


ನಮ್ಮ ಅಗತ್ಯಕ್ಕೆ ಬೇಕಾಗಿರುವುದು ಮೂರು ಯಾ ನಾಲ್ಕು ಹಿಡಿ ಅವಲಕ್ಕಿ.  ( ತೆಳ್ಳಗಿನ ಪೇಪರ್ ಅವಲಕ್ಕಿ )

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಇಟ್ಟು,  

10 - 12 ನೆಲಕಡಲೆ ಬೀಜ, 

ಸಾಸಿವೆ,  ಒಂದು ಒಣಮೆಣಸನ್ನು ನಾಲ್ಕು ಚೂರು ಮಾಡಿ ಹಾಕಿ ಹುರಿದು,  

ಕೊನೆಗೆ ಕರಿಬೇವಿನೆಸಳು ಹಾಕಿ ಸ್ಟವ್ ನಂದಿಸಿ.


ಮಾಡಿಟ್ಟ ಮಸಾಲೆ ಹೊರ ಬಂತು.   ರುಚಿಗೆ ತಕ್ಕಷ್ಟು ಉಪ್ಪು,  ಸಿಹಿಗೆ ಸಕ್ಕರೆ ಕೂಡಿಕೊಂಡು ಒಗ್ಗರಣೆಯ ಬಾಣಲೆಗೆ ಎಲ್ಲವನ್ನೂ ಹಾಕಿ ಬೆರೆಸಿ,  ಅವಲಕ್ಕಿಯನ್ನೂ ಹಾಕಿ ಬೆರೆಸಿದಾಗ ಮಸಾಲಾ ಅವಲಕ್ಕಿ ಸಿದ್ಧ.   ಗರಿಗರಿಯಾದ ಈ ಅವಲಕ್ಕಿ ನಾಲ್ಕಾರು ದಿನ ಇಟ್ಟರೂ ಕೆಡದು.   ಸಂಜೆಯ ಚಹಾ ಸಮಯದಲ್ಲಿ ಸ್ನೇಹಿತರು ಬಂದರೇ,  ಚಹಾ - ಅವಲಕ್ಕಿಯ ಸತ್ಕಾರ ನೀಡಿ.   ಬೇಕರಿಯ ಹಾಳುಮೂಳು ತಿನಿಸುಗಳಿಗಿಂತ ಇದೇ ಉತ್ತಮ ಎಂದು ತಿಳಿಯಿರಿ.




Sunday 10 September 2017

ಬುಟ್ಟಿ ತುಂಬ ಬದನೆ








ಬುಟ್ಟಿ ತುಂಬ ಬದನೆ ಇದೆ.   ಬದನೆಯ ಖಾದ್ಯಗಳಲ್ಲಿ ಪಲ್ಯ ಹುಳಿ ಗೊಜ್ಜು ಬಜ್ಜಿ ಎಂದು ಪಟ್ಟಿ ಮಾಡಿದಷ್ಟೂ ಮುಗಿಯದು.   ಭೋಜನಕೂಟಗಳಲ್ಲಿ ಹುಳಿ ಎಂಬ ವ್ಯಂಜನವನ್ನು ಬಡಿಸುತ್ತಾರಲ್ಲ,  ಅದೂ ಬದನೆಕಾಯಿಗಳದ್ದು,  ಇದರ ತಯಾರಿ ಬಹು ಸುಲಭ ಹಾಗೂ ಸರಳ,  ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿಟ್ಟು   " ಅಡುಗೆ ಆಯ್ತು "  ಅನ್ನಬಹುದು.


ಹೇಗೂ ಬೆಂಗಳೂರಿನಿಂದ ಮಕ್ಕಳು  " ಆ ಅಡುಗೆ ಹೇಗಮ್ಮ... ಈ ಅಡುಗೆ ಹೇಗಮ್ಮ? "  ಎಂದು ವಿಚಾರಿಸುತ್ತಿರುತ್ತಾರೆ,  ನಾನೂ ಹೇಳಿಕೊಡುವುದು ಇದ್ದೇ ಇದೆ.   ಮನೆಯಿಂದ ದೂರ ಇರುವ ಉದ್ಯೋಗಸ್ಥ ಮಕ್ಕಳಿಗೆ ಈ ಅಡುಗೆ ಉಪಯೋಗವಾದೀತು.


ತೊಗರಿಬೇಳೆ ಧಾರಣೆ ತುಂಬ ಇಳಿದಿದೆ.   ತೊಗರಿಬೇಳೆಯನ್ನು ಅರ್ಧ ಲೋಟ ಅಳೆದು ತೊಳೆಯಿರಿ,  ಕುಕ್ಕರಿನಲ್ಲಿ ಬೇಯಲಿ.


ಎರಡು ಬದನೆಗಳನ್ನು ತೊಟ್ಟು ತೆಗೆದು,  ದೊಡ್ಡ ಗಾತ್ರದ ಹೋಳುಗಳನ್ನು ಮಾಡಿ ನೀರಿನಲ್ಲಿ ಹಾಕಿರಿಸಿ.   ಬದನೆ ಬಲಿತದ್ದಾಗಿದ್ದರೆ ಬೀಜಗಳು ಎದ್ದು ಕಾಣಿಸುತ್ತವೆ,  ಒಗರು ಹಾಗೂ ಕಹಿ ಇದ್ದೀತು.  ಹಾಗಾಗಿ ನೀರಿನಲ್ಲಿ ತೇಲುತ್ತಿರುವ ಬದನೆ ಹೋಳುಗಳಿಗೆ ಒಂದು ಚಿಟಿಕೆ ಸುಣ್ಣ  ( ವೀಳ್ಯದೆಲೆ ತಿನ್ನಲು ಬಳಸುವ ಸುಣ್ಣ ) ಹಾಕಬೇಕು ಹಾಗೂ ಸೌಟಿನಲ್ಲಿ ಕಲಕಿದಾಗ ಬದನೆಕಾಯಿ ಬೇಯಿಸಲು ಯೋಗ್ಯತೆ ಪಡೆದಿದೆ.   ಪೇಟೆಯಿಂದ ತಂದ ಬದನೆ ಬಾಡಿದ್ದರೂ ಇದೇ ವಿಧಾನ ಅನುಸರಿಸಿ.


ಕುಕ್ಕರಿನಲ್ಲಿ ಬೆಂದಿರುವ ತೊಗರಿಬೇಳೆಗೆ ಬದನೆ ಹೋಳುಗಳ ನೀರು ಬಸಿದು ಹಾಕಿ,  ಎರಡು ಅಥವಾ ಮೂರು ಹಸಿಮೆಣಸು ಸಿಗಿದು ಹಾಕಿ ಬೇಯಿಸಿ.    " ಕುಕ್ಕರ್ ಇನ್ನೇನು ವಿಸಿಲ್ ಹಾಕಲಿದೆ... " ಅನ್ನುವಾಗ ಸ್ಟವ್ ನಂದಿಸಿ.


ಹ್ಞಾ,  ಬದನೆಗೆ ಬೇಯುವಾಗಲೇ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.  ಹುಣಸೆಹಣ್ಣೇ ಆಗಬೇಕೆಂದಿಲ್ಲ,  ಬದನೆ ಬೇಯಿಸುವಾಗಲೇ ಎರಡು ಕಾಯಿ ಟೊಮ್ಯಾಟೋ ಚಿಕ್ಕದಾಗಿ ಹೆಚ್ಚಿ ಹಾಕಬಹುದಾಗಿದೆ.   ಸಿಹಿ ಬೇಕಿದ್ದವರು ಬೆಲ್ಲ ಹಾಕಿರಿ.


ಚಿಟಿಕೆ ಅರಸಿಣ,  ಕಡ್ಲೆಗಾತ್ರದ ಇಂಗು,  ಕರಿಬೇವಿನೆಸಳು ಕೂಡಿದ ಒಗ್ಗರಣೆ ಹಾಕುವಲ್ಲಿಗೆ ಬದನೇ ಹುಳಿಯ ಸಿಂಗಾರ ಆಯಿತು.


Sunday 3 September 2017

ಉಪ್ಪುಸೊಳೆಯ ಸೋಂಟೆ

 
              






ಜಾಡಿಯಲ್ಲಿರುವ ಹಿಂದಿನ ವರ್ಷದ ಉಪ್ಪುಸೊಳೆಯನ್ನು ಪಲ್ಯ,  ಹುಳಿಬೆಂದಿ,  ಮೇಲಾರ ಇತ್ಯಾದಿಗಳನ್ನು ಮಾಡಿ ತಿಂದರೂ ಮುಗಿಯದಾಯಿತು.   ಅಷ್ಟಕ್ಕೂ ಜಾಡಿಯಲ್ಲಿ ತುಂಬಿಸಿದ ಸೊಳೆಗಳು ಕೇವಲ ಒಂದೇ ಹಲಸಿನಕಾಯಿಯದ್ದು!   ಉಂಡ್ಳಕಾಳು,  ಸೊಳೆರೊಟ್ಟಿಗಳನ್ನು ತಿನ್ನಲು ಮಕ್ಕಳ ಸೈನ್ಯ ಮನೆಯಲ್ಲಿದ್ದರಾಗುತ್ತಿತ್ತು.


ಸೋಂಟೆ ಮಾಡಿದರೆ ಹೇಗೆ?  ಈಗ ಜಿಟಿಜಿಟಿ ಮಳೆ ಬೇರೆ,  ಕುರುಕುರು ತಿನ್ನಲು ಸೋಂಟೆ ಉತ್ತಮ ಎಂದು ಅಭಿಪ್ರಾಯ ಮೂಡಿತು.   ಜಾಡಿಯಲ್ಲಿ ಬೆಚ್ಚಗೆ ಕೂತಿದ್ದ ಸೊಳೆಗಳು ಹೊರ ಬಂದಾಗ ತಣ್ಣಗೆ ನೀರಿನಲ್ಲಿ ಹಾಕಿಟ್ಟು ಜಾಡಿಯನ್ನು ತೊಳೆದಿರಿಸಲು ಚೆನ್ನಪ್ಪನ ಸುಪರ್ದಿಗೆ ಬಿಟ್ಟೂ ಆಯಿತು.


ನೀರಿನಿಂದ ಹೊರ ತೆಗೆದ ಸೊಳೆಗಳು ಉಪ್ಪು ಬಿಟ್ಕೊಂಡಿವೆ,   ಒಂದೇ ಗಾತ್ರದಲ್ಲಿ ಸಿಗಿದಿಡುವುದು.   ಶುದ್ಧವಾದ ಹತ್ತಿಯ ಬಟ್ಟೆ ಮೇಲೆ ಹರಡಿದರೆ ಉತ್ತಮ,  ಸೊಳೆಯ ನೀರಿನಂಶವನ್ನು ಬಟ್ಟೆ ಹೀರಿಕೊಂಡು ಕರಿಯುವ ಕೆಲಸ ಬೇಗನೆ ಆದೀತು.


ಬಾಣಲೆಯಲ್ಲಿ ಎಣ್ಣೆಯಿಟ್ಟು,  ಬಿಸಿಯೇರಿದಾಗ ಎಣ್ಣೆಯಲ್ಲಿ ಹಿಡಿಸುವಷ್ಟು ಸೊಳೆಗಳನ್ನು ಹಾಕಿ ಕರಿಯಿರಿ.   ಹೊಂಬಣ್ಣ ಬಂದಾಗ,  ಎಣ್ಣೆಯ ಸದ್ದು ನಿಂತಾಗ ತೆಗೆದು ರಂಧ್ರದ ತಟ್ಟೆಗೆ ಹಾಕಿ,  ಬಿಸಿಯಾರಿದ ನಂತರ ತಿನ್ನಿ,  ಹಾಗೂ ಡಬ್ಬದಲ್ಲಿ ತುಂಬಿಸಿಟ್ಟು ಆಗಾಗ ತಿನ್ನುತ್ತ ಮಳೆಗಾಲದ ಮಜಾ ಅನುಭವಿಸಿ.  ಹ್ಞಾ,  ರುಚಿಗೆ ಉಪ್ಪು ಹಾಕುವ ಕೆಲಸ ಇಲ್ಲಿಲ್ಲ,   ಬೇಕಿದ್ದರೆ ನಿಮ್ಮ ಆಯ್ಕೆಯ ಮಸಾಲಾ ಹುಡಿಗಳನ್ನು ಉದುರಿಸಿ.



ಅಂತೂ ಇಂತೂ ಉಪ್ಪುಸೊಳೆ ಖಾಲಿ ಮಾಡಿದ್ದಾಯ್ತು.   ಈ ವರ್ಷ ನಾಲ್ಕು ಹಲಸಿನಕಾಯಿಗಳ ಉಪ್ಪುಸೊಳೆ ಹಾಕಿರಿಸಲಾಗಿದೆ! 




Saturday 19 August 2017

ಹಲಸಿನ ಹಣ್ಣಿನ ಪಲ್ಯ







" ನಾಗಬನಕ್ಕೆ ಹೋಗುವ ದಾರಿಯಲ್ಲಿ ಒಂದು ಹಲಸಿನ ಮರ ಉಂಟಲ್ಲ... "

" ಯಾವುದೂ?  ಮೂರು ನಾಲಕ್ಕು ಮರ ಉಂಟಲ್ಲ. "

" ಅದೇ..  ಅದರಲ್ಲಿ ಒಂದೇ ಹಲಸಿನಕಾಯಿ... "

" ಓ, ಅದಾ.. ಬೆಳೆದಿದ್ದರೆ ತರುತ್ತೇನೆ. "


ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕೈಗೆಟುಕುವಂತೆ ಬೆಳೆದಿದ್ದ ಹಲಸಿನಕಾಯಿಯನ್ನು ಚೆನ್ನಪ್ಪ ನಿರಾಯಾಸವಾಗಿ ತಂದಿಟ್ಟ.


" ಇದು ಆ ಹಲಸಿನ ಮರದ ಮೊದಲ ಫಲ. "

" ಹಾಗಿದ್ರೆ ತುಳುವನೋ ಬಕ್ಕೆಯೋ ಅಂತ ನೋಡ್ಬೇಕಲ್ಲ. " ನಮ್ಮವರ ಚಿಂತನೆ.

" ಕಾಯಿಸೊಳೆ ದೋಸೆ ಮಾಡೋಣಾ ಅಂತ ಕೊಯ್ಯಲು ಹೇಳಿದ್ದು ನಾನು... "

" ದೋಸೆಯೇನೂ ಬೇಡ,  ಮೊದಲು ಹಣ್ಣಾಗಲಿ,  ಆಗ ತಿಳೀತದೆ ಅದರ ಜಾತಿಗುಣ... "

ಅದೂ ಸರಿಯೇ ಎಂದು ನಾನು ಸುಮ್ಮನಾಗಬೇಕಾಯಿತು.


ದಿನವೆರಡು ಕಳೆದಾಗ,  ಹಲಸು ಸುವಾಸನೆ ಬೀರತೊಡಗಿದಾಗ,  ಚೆನ್ನಪ್ಪನೂ ಬಾರದಿದ್ದಾಗ,  ಮನೆ ಯಜಮಾನರೇ ಹಲಸನ್ನು ಬಿಡಿಸಿ ಸೊಳೆಗಳನ್ನು ಆಯ್ದು ಕೊಟ್ಟರು.   " ಇನ್ನೇನು ಬೇಕಿದ್ರೂ ಮಾಡಿಕೋ... ಇದು ಬಕ್ಕೆ ಹಲಸು,  ತುಳುವ ಅಲ್ಲ. "


ಫುಟ್ ಬಾಲ್ ಚೆಂಡಿನ ಗಾತ್ರದ ಹಲಸು,  ಒಂದು ಪುಟ್ಟ ತಪಲೆ ತುಂಬಿತು.   ಸೊಳೆಗಳಿಂದ ಬೇಳೆ ಬೇರ್ಪಡಿಸುವಾಗ ಎಲ್ಲಿಂದ ಈ ಪರಿಮಳ ಹೊಮ್ಮುವುದೆಂದೇ ತಿಳಿಯದ ಹಾಗೆ ಮಧುರ ಸುವಾಸನೆ...

ಎರಡು ಬಾರಿ ಎದ್ದು ಗ್ಯಾಸ್ ಒಲೆಯಲ್ಲಿಟ್ಟಿದ್ದ ಬೆರಟಿಯ ಪರಿಮಳವೇ ಯಾ ಈ ಹಲಸಿನಹಣ್ಣೇ ಎಂದೂ ಮೂಸಿ ನೋಡಿದರೂ ತಿಳಿಯದಾಯಿತು.   ಅಂತೂ ಇದು ಪರಿಮಳದ ಹಲಸು.   ಹೌದಲ್ಲವೇ,  ಅಪ್ಪನಮನೆಯಲ್ಲಿ ಸಂಪಿಗೆ ಬಕ್ಕೆ ಎಂಬ ಹೆಸರಿನ ಹಲಸು ಇದೇ...  ನನ್ನ ಅಪ್ಪ ಪ್ರತಿ ವರ್ಷವೂ ಸಂಪಿಗೆ ಬಕ್ಕೆ ಹಲಸನ್ನು ಪೊಸಡಿಗುಂಪೆಯ ದಾರಿಯಾಗಿ ಮಹೀಂದ್ರಾ ಜೀಪಿನಲ್ಲಿ ತಂದು ಕೊಡ್ತಿದ್ರು.   ಇದು ಅದರ ಬೀಜದಿಂದಲೇ ಹುಟ್ಟಿದ ಹೊಸ ಫಲ ಎಂದು ತೀರ್ಮಾನಿಸಿ ಊರಿನ ಮನೆಯಲ್ಲಿರುವ ತಮ್ಮನಿಗೂ,  ಕುಂಬ್ಳೆಯಲ್ಲಿರುವ ತಂಗಿಗೂ ತಿಳಿಸಿ ವಾಟ್ಸಪ್ ಮುಖೇನ ಹಲಸಿನ ಹಣ್ಣಿನ ಚಿತ್ರಗಳನ್ನು ಕಳಿಸಿ ಸಂಭ್ರಮ ಪಟ್ಟಿದ್ದೂ ಆಯಿತು.


" ಹಣ್ಣಿನ ಬಣ್ಣ ಕಾಣುವಾಗ ಅದೇ ಹಣ್ಣು ಅನ್ನಿಸ್ತದೆ..."  ಹಳದಿ ವರ್ಣದ ಈ ಹಣ್ಣನ್ನು ನಾವು ಅರಸಿನ ಬಕ್ಕೆ ಅಂತಲೂ,  ಕೆಲಸದಾಳುಗಳು ಮಂಜಾಲ್ ಬಕ್ಕೆ ಎಂದೂ ಹೇಳುವ ರೂಢಿ.


ಕುಂಬ್ಳೆಯಲ್ಲಿರುವ ತಂಗಿಗೂ ತಿಳಿಯಿತು.   " ಅಕ್ಕ,  ಹಲಸಿನಕಾಯಿ ದೊಡ್ಡದೋ ಸಣ್ಣದೋ... "

" ದೊಡ್ಡ ಚೆಂಡು ಇರುತ್ತದಲ್ಲ,  ಅಷ್ಟೇ... "

" ಸಿಹಿಯೊಟ್ಟಿಗೆ ಹುಳಿ ರುಚಿಯೂ ಉಂಟಾ? "

" ಹ್ಞಾ, ಹೌದು.   ಸೊಳೆ ಉಂಟಲ್ಲ,   ಈ ಮಳೆಗೆ ಸ್ವಲ್ಪವೂ ನೀರು ಕುಡಿದ ಹಾಗಿಲ್ಲ... ಡ್ರೈ ಸೊಳೆ. "

" ಹೌದಾ... ಹಂಗಿದ್ರೆ ಅದು ಗ್ಯಾರಂಟಿ ಅರಸಿನ ಬಕ್ಕೆ.   ಕೆಲಸದಾಳುಗಳು ಈ ಹಣ್ಣಿನ ಪಲ್ಯ ಮಾಡಿ ಸಂಜೆಯ ಚಹಾದೊಂದಿಗೆ ತಿನ್ತಿದ್ರು. "

" ಹಣ್ಣನ್ನೇ? "

" ಹೌದು,  ನೀನೂ ಪಲ್ಯ ಮಾಡು,  ಬೇಯಲಿಕ್ಕೆ ನೀರು ಹಾಕಲೇ ಬೇಡ... "

" ಸರಿ,  ತಿಳಿಯಿತು. "


ಈಗ ಪಲ್ಯ ಮಾಡೋಣ.


ಹಲಸಿನ ಹಣ್ಣಿನ ಸೊಳೆಗಳನ್ನು ಪಲ್ಯಕ್ಕಾಗಿ ಹಚ್ಚಿಟ್ಟುಕೊಳ್ಳುವುದು.

ಇದನ್ನು ಬೇಯಿಸಲು ಕುಕ್ಕರ್ ಬೇಡ,   ನೇರವಾಗಿ ಬಾಣಲೆಯಲ್ಲೇ ಮಾಡಬಹುದಾಗಿದೆ.

4 ಚಮಚ ತೆಂಗಿನೆಣ್ಣೆಯಲ್ಲಿ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ.

ಸಾಸಿವೆ ಸಿಡಿದಾಗ ಚಿಟಿಕೆ ಅರಸಿಣ,  ಒಂದು ಚಮಚ ಮೆಣಸಿನ ಹುಡಿ,  ರುಚಿಗೆ ಉಪ್ಪು ಹಾಗೂ ಹಲಸಿನ ಹಣ್ಣನ್ನು ಹಾಕಿ.   ಮಂದ ಉರಿಯಲ್ಲಿ ಆಗಾಗ ಕೈಯಾಡಿಸುತ್ತ ಮುಚ್ಚಿ ಬೇಯಿಸಿದಾಗ...


ನಿಮಿಷಗಳಲ್ಲಿ ಹಲಸಿನಹಣ್ಣು ಬೆಂದಿದೆ.  ಕಾಯಿತುರಿ ಹಾಕಿ ಚೆನ್ನಾಗಿ ಮಗುಚಿ,  ಮುಚ್ಚಿಟ್ಟು ಉರಿ ನಂದಿಸುವುದು.   ಊಟದೊಂದಿಗೂ ಚಹಾಕೂಟದೊಂದಿಗೂ ಈ ಪಲ್ಯ ಬಲು ಚೆನ್ನ.


ಹಲಸಿನ ಹಣ್ಣಿನ ಬೋಳುಹುಳಿ


ಸ್ವಲ್ಪವೇ ಹಣ್ಣು ಮಿಕ್ಕಿದ್ದಾಗ ಈ ಮಾದರಿಯ ಸಾರು ನನ್ನ ಅಡುಗೆಮನೆಯಲ್ಲಿ ಎದ್ದು ಬಂದಿತು.


ನಾಲ್ಕೈದು ಹಲಸಿನ ಹಣ್ಣಿನ ಸೊಳೆಗಳು,  ಹದ ಗಾತ್ರದಲ್ಲಿ ತುಂಡುಗಳಾಯಿತು.

ಒಂದು ಕ್ಯಾಪ್ಸಿಕಂ ಇತ್ತು,  ಅದನ್ನೂ ಹೋಳು ಮಾಡಿದ್ದಾಯಿತು,  ಹಲಸಿನ ಹಣ್ಣಿನ ಜೊತೆಗೂಡಿತು.

ಬೇಯಲು ನೀರು,  ರುಚಿಗೆ ಉಪ್ಪು ಕೂಡಿ ಬೆಂದಿತು.

ಕರಿಬೇವು, ಇಂಗು ಒಗ್ಗರಣೆಯೊಂದಿಗೆ ಬೋಳುಹುಳಿ ಆದೆನೆಂದಿತು.


ರುಚಿಕರವೂ ಸುವಾಸನಾಭರಿತವೂ ಆದ ಈ ಬೋಳುಹುಳಿಗೆ ಬೆಲ್ಲವೂ ಬೇಡ,  ಹುಣಸೆಹುಳಿಯೂ ಬೇಡ,  ಅಗತ್ಯವೇ ಇಲ್ಲ.





Wednesday 16 August 2017

ಬೇಳೆಚಕ್ಕೆ ಬೆಂದಿ







ನೀರುಳ್ಳಿ ಸಾರು,  ಹರಿವೆ ಪಲ್ಯ ಊಟದ ಟೇಬಲ್ ಮೇಲೆ ಇಟ್ಟು ನಮ್ಮವರ ಆಗಮನಕ್ಕಾಗಿ ಕಾಯುತ್ತಾ ಫೇಸ್ ಬುಕ್ ಓದು ಮುಂದುವರಿದಿತ್ತು.


ಊಟಕ್ಕೆ ಕುಳಿತವರೇ  " ಹಾಗಿದ್ರೆ ತೋಟದಲ್ಲಿ ಹಲಸಿನ ಗುಜ್ಜೆ ಉಂಟೂಂತ ಗೊತ್ತಿಲ್ವಾ.. "

" ಗುಜ್ಜೆ ಎಷ್ಟು ಬೇಕಾದರೂ ಇರಲಿ,  ತಂದು ಕೊಟ್ಟರಾಗುತ್ತಿತ್ತು.. "

" ಚೆನ್ನಪ್ಪ ಇರೂವಾಗ ಹೇಳೂದಲ್ವ.. "

" ಅವನು ಬಾರದೇ ದಿನ ಎರಡಾಯ್ತು,  ನಾಳೆ ಹೇಗೂ ಭಾನುವಾರ,  ಬಂದ ಹಾಗೇ..  ನೀವೇ ಕೊಯ್ದು ತನ್ನಿ. "


ಎರಡು ಹಲಸಿನ ಗುಜ್ಜೆಗಳು ಬಂದುವು.   ಎಳೆಯ ಕಾಯಿ ಆದರೂ ಘನ ಗಾತ್ರದ ಗುಜ್ಜೆಯನ್ನು ಎರಡು ಹೋಳು ಮಾಡಲು ಪೂರ್ವ ಸಿದ್ಧತೆಯೂ ಇರಬೇಕು.  ಮಯಣ ಒಸರುವ ಈ ಫಲಕ್ಕೆ ಇನ್ನಿತರ ತರಕಾರಿಗಳಂತೆ ಅಡುಗೆಮನೆಯೊಳಗೆ  ಬರಲವಕಾಶವಿಲ್ಲ.  ಇದರ ಕಾರ್ಯಕ್ಷೇತ್ರವೇನಿದ್ದರೂ ಮನೆಯ ಹಿತ್ತಲಿನ ಅಂಗಳ.  ನಿರುಪಯುಕ್ತ ಗೋಣಿತಾಟು ಇಲ್ಲವೇ ಪ್ಲಾಸ್ಟಿಕ್ ಚೀಲಗಳನ್ನು ನೆಲದಲ್ಲಿ ಹಾಕಿಕೊಂಡಲ್ಲಿ ಅಂಗಳದ ಕಸಕಡ್ಡಿಗಳನ್ನು ನಿವಾರಿಸಿಕೊಳ್ಳಲು ಸಾಧ್ಯ .   ಹರಿತವಾದ ಆಯುಧದಿಂದ ಹೋಳು ಆಯ್ತು.   ಒಂದು ಹೋಳು ಇಂದಿನ ಪಲ್ಯಕ್ಕಿರಲಿ,  ಇನ್ನೊಂದು ತುಂಡು ನಾಳೆಗೆ ಗುಜ್ಜೆ ಬೆಂದಿ ಆಗಲಿದೆ.


ಹೋಳಾದ ಗುಜ್ಜೆಯಿಂದ ಮಯಣ ಸುರಿಯುತ್ತಿದೆಯಲ್ಲ!   ಮಯಣವನ್ನು ಬಿದಿರಿನ ಪುಟ್ಟ ಕೋಲಿನಲ್ಲಿ ಒರೆಸಿ ತೆಗೆಯುವುದು,   ಹರಿಯುವ ನೀರಿನಲ್ಲಿ ತೊಳೆದೂ ಮಯಣ ತೆಗೆಯಬಹುದಾಗಿದೆ.  ನಾವು ಹಳ್ಳಿಯ ನಿವಾಸಿಗಳು ಹಲಸಿನ ಮಯಣವನ್ನೂ ಸಂಗ್ರಹಿಸಿ ಇಡುವ ರೂಢಿ ಇಟ್ಟುಕೊಂಡಿದ್ದೇವೆ.   ಹೇಗೇ?  


ಮಯಣವನ್ನು ಕೋಲಿನಲ್ಲಿ ಒರೆಸಿ ತೆಗೆದಾಯ್ತಲ್ಲ,  ಅದನ್ನು ಕಸದ ತೊಟ್ಟಿಗೆ ಬಿಸಾಡುವುದಲ್ಲ,  ' ಹಲಸಿನ ಕಾಯಿ ಕಾಳಗ ' ವೆಂದು ಮೆಟ್ಟುಕತ್ತಿ ಬುಡದಲ್ಲಿ ಕುಳ್ಳಿರುವಾಗ ಅದೇ ಕೋಲಿನಿಂದ ಮಯಣ ತೆಗೆದು ಮಯಣದ ಕೋಲನ್ನು ಜಾಗ್ರತೆಯಿಂದ ತೆಗೆದಿರಿಸುವುದು.   ಇದರ ಉಪಯೋಗ ಏನು?


ತೂತು ಬಿದ್ದ ಹಿತ್ತಾಳೆಯ ಕೊಡ ಇತ್ಯಾದಿ ದಿನಬಳಕೆಯ ಪಾತ್ರೆಪರಡಿಗಳ ತೂತನ್ನು ಈ ಮಯಣ ಸಮರ್ಥವಾಗಿ ಮುಚ್ಚಿ ಬಿಡುತ್ತದೆ.   ಮಯಣದ ಮುದ್ದೆಯನ್ನು ಕಟ್ಟಿಗೆಯ ಒಲೆಯ ಬಿಸಿ ತಾಗುವಂತೆ ಇಟ್ಟಾಗ ಮಯಣ ಕರಗಿ ಜಿನುಗಲು ಪ್ರಾರಂಭವಾದಾಗ ತೂತಿನ ಜಾಗಕ್ಕೆ ಲೇಪಿಸಿದರಾಯಿತು,  ಬಹಳ ಸುಲಭವಾದ ಈ ಕಾಯಕವನ್ನು ನನ್ನ ಕೆಲಸಗಿತ್ತಿ ಮಾಡಿ ಕೊಡುತ್ತಿದ್ದಳು.    ಆದರೆ ಒಲೆಯಲ್ಲಿ ಇಡುವ ತಪಲೆಗಳನ್ನು ಈ ಥರ ರಿಪೇರಿ ಮಾಡಿಯೂ ಪ್ರಯೋಜನವಿಲ್ಲ,  ಬಿಸಿ ತಾಕಿದಾಗ ಮಯಣ ಕರಗುವುದಿದೆಯಲ್ಲ!   ಇವೆಲ್ಲ ಹಳೆಯ ನೆನಪುಗಳು,  ಈಗಿನ ಕಾಲಕ್ಕೆ ಹೇಳಿದ್ದಲ್ಲ ಬಿಡಿ.


  ಗುಜ್ಜೆಯ ನಿರುಪಯುಕ್ತ ಭಾಗ ಅಂದ್ರೆ ಸಿಪ್ಪೆ,  ಮಯಣ ಒಸರುವ ಗೂಂಜುಗಳನ್ನು ಕತ್ತರಿಸಿ ಗೊಬ್ಬರದ ಗುಂಡಿಗೆ ಎಸೆಯಿರಿ.   ಉಳಿದ ತುಂಡುಗಳನ್ನು ತರಕಾರಿಯಂತೆ ಚಿಕ್ಕದಾಗಿ ಹಚ್ಚಿಕೊಳ್ಳಿ.  ಹ್ಞಾ,  ಕೈಗಳಿಗೆ ತೆಂಗಿನೆಣ್ಣೆ ಸವರಿಕೊಂಡಿದ್ದೀರಾ ತಾನೇ?  ನೀರು ತುಬಿದ ತಪಲೆಯೊಳಗೆ ತುಂಬಿಸಿ ಮನೆಯೊಳಗೆ ನಡೆಯಿರಿ.   ಇಷ್ಟೂ ವಿಧಿವಿಧಾನಗಳನ್ನು ನಾವು ಮನೆಯ ಹೊರಾಂಗಣದಲ್ಲಿ ಮಾಡಿರುತ್ತೇವೆ ಎಂದು ನೆನಪಿರಲಿ.


ಒಲೆಯಲ್ಲಿ ಗುಜ್ಜೆ ಬೇಯುವುದು ನಿಧಾನಗತಿಯಲ್ಲಿ,   ಪ್ರೆಶರ್ ಕುಕ್ಕರ್ ಯೋಗ್ಯ.   ರುಚಿಗೆ ಉಪ್ಪು ಹಾಗೂ ಬೇಯಲು ಅವಶ್ಯವಿರುವ ನೀರು ಕೂಡಿಕೊಂಡು ಬೇಯಲಿ.  ಬೇಯುವಾಗ ಎರಡು ಚಮಚ ತೆಂಗಿನೆಣ್ಣೆ ಎರೆದಿರಾದರೆ ಕುಕ್ಕರಿನ ಒಳಭಾಗಕ್ಕೆ ಮಯಣದ ಅಂಟು ಹಿಡಿಯುವುದಿಲ್ಲ.   ಎರಡು ಸೀಟಿ ಹಾಕಿದಾಗ ಒಲೆಯಿಂದ ಇಳಿಸಿ.


ಬೆಂದಿದೆ,  ಬಾಣಲೆಯಲ್ಲಿ ಒಗ್ಗರಣೆಗಿಡಿ.  ಏನೇನು?

ತೆಂಗಿನೆಣ್ಣೆ,  ಸಾಸಿವೆ,  ಉದ್ದಿನಬೇಳೆ,  ಒಣಮೆಣಸು,  ಚಿಟಿಕೆ ಅರಸಿಣ,  ಕರಿಬೇವಿನೆಸಳು.


 ಬೆಂದಿರುವ ಗುಜ್ಜೆಯ ನೀರು ಬಸಿದು ಸಾಸಿವೆ ಸಿಡಿದಾಗ ಹಾಕುವುದು,  ಖಾರ ಇಷ್ಟಪಡುವವರು ಮೆಣಸಿನ ಹುಡಿಯನ್ನು ಹಾಕಿಕೊಳ್ಳಿ.   ನೀರಿನಂಶವೆಲ್ಲ ಬತ್ತುವಷ್ಟು ಹೊತ್ತು ಒಲೆಯ ಮೇಲಿರಲಿ.  ಕಾಯಿತುರಿಯ ಅಲಂಕರಣವನ್ನು ಗುಜ್ಜೆ ಬಯಸದು,  ಕಾಯಿತುರಿ ಇದ್ದರೆ ಹಾಕಲಡ್ಡಿಯಿಲ್ಲ.   ಸಂಬಾರ ಮಸಾಲೆಗಳಿಂದ ಕೂಡಿದ ತೆಂಗಿನಕಾಯಿ ಅರಪ್ಪು ಮಾಡಿಕೊಂಡು ರುಚಿಯಲ್ಲಿ ವೈವಿಧ್ಯತೆಯನ್ನು ತರಲೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.   ಊಟದೊಂದಿಗೂ ಸಂಜೆಯ ಚಹಾದೊಂದಿಗೂ ಸೇವಿಸಲು ಗುಜ್ಜೆ ಪಲ್ಯ ಯೋಗ್ಯವಾಗಿದೆ.  ನಾರುಯುಕ್ತವಾದ ಗುಜ್ಜೆಪಲ್ಯ ಎಲ್ಲ ವಯೋಮಾನದವರಿಗೂ ಸೂಕ್ತ ಆಹಾರ.   ಹಸಿವಿನ ಬಾಧೆ ಗೋಚರಿಸದು,  ಪ್ರಾಯಸ್ಥರಿಗೆ ಮಲಬದ್ಧತೆಯ ಸಮಸ್ಯೆಯೂ ಇಲ್ಲವಾಗುವುದು.


ಗುಜ್ಜೆ ಮುದ್ದೆಹುಳಿ


ಹೋಳು ಮಾಡಿದ್ದಾಯಿತು,   ಚಿಕ್ಕ ಗಾತ್ರವೇನೂ ಬೇಡ,  ದೊಡ್ಡ ಹೋಳುಗಳು ಚೆನ್ನಾಗಿರುತ್ತವೆ.  ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ಬೇಯಿಸುವುದು.   ಹಲಸಿನ ಗುಜ್ಜೆಯ ಪದಾರ್ಥವು ತೊಗರಿಬೇಳೆ ಯಾ ಇನ್ನಿತರ ಬೇಳೆಗಳನ್ನು ಮತ್ತು ಮಸಾಲಾ ಸಾಮಗ್ರಿಗಳನ್ನು ಬಯಸದು,  ಅದೇ ಇದರ ಹೆಗ್ಗಳಿಕೆ.


ಹಾಗಿದ್ದರೆ ತೆಂಗಿನಕಾಯಿ ಅರಪ್ಪು ಹೇಗೆ?

ಅರ್ಧ ಕಡಿ ತೆಂಗಿನತುರಿ

ನಾಲ್ಕಾರು ಒಣಮೆಣಸು,  ಹುರಿಯಿರಿ.

ನೆಲ್ಲಿಕಾಯಿ ಗಾತ್ರದ ಹುಣಸೇ ಹಣ್ಣು

ತೆಂಗಿನತುರಿಯೊಂದಿಗೆ ಹುರಿದ ಒಣಮೆಣಸಿನಕಾಯಿಗಳನ್ನು ಅರೆಯಿರಿ.  ರುಚಿಕಟ್ಟಾಗಲು ಬೇಕಾದ ಹುಳಿ ಇದೆಯಲ್ಲ,  ಅರೆಯುವಾಗಲೇ ಹುಣಸೇ ಹಣ್ಣನ್ನು ಹಾಕಿಕೊಳ್ಳಬಹುದಾಗಿದೆ.   ಅರೆಯುವಾಗ ಸ್ವಲ್ಪ ನೀರು ಕೂಡಿಕೊಳ್ಳುವುದು ಉತ್ತಮ.   ಅರಪ್ಪು ಸಿದ್ಧವಾಯಿತು.   ಬೆಂದಂತಹ ಗುಜ್ಜೆಯ ಹೋಳುಗಳಿಗೆ ತೆಂಗಿನ ಅರಪ್ಪನ್ನು ಕೂಡಿ,  ಕುದಿಸುವುದು.  ರುಚಿಕರವಾಗಲು ಬೆಲ್ಲ ಕೂಡಾ ಹಾಕಬಹುದು.  ಜಜ್ಜಿದ ಬೆಳ್ಳುಳ್ಳಿ,  ಕರಿಬೇವು ಕೂಡಿದ ಒಗ್ಗರಣೆ ಬಿದ್ದೊಡನೆ ಗುಜ್ಜೆ ಮುದ್ದೆಹುಳಿ ಎಂಬ ಪದಾರ್ಥವು ತಯಾರಾಗಿದೆ.


ಇಂದು ಬೇಳೆಚಕ್ಕೆಯ ಬೆಂದಿ

ನಿನ್ನೆ ಗುಜ್ಜೆಯ ಮುದ್ದೆಹುಳಿ

ಮೊನ್ನೆ ಗುಜ್ಜೆಯ ಪಲ್ಯ

ಅಂತೂ ಇಂತೂ ದಿನವೂ

ಹಲಸಿನ ಭೋಜನ!


" ಅದೇನ್ರೀ ಬೇಳೆಚಕ್ಕ ಅಂದ್ರೆ? "


ನಮ್ಮೂರ ಪರಿಭಾಷೆಯಲ್ಲಿ ಚಕ್ಕ ಅಂದ್ರೆ ಹಲಸು ಎಂದರ್ಥ.  ವಿದೇಶೀಯರ ಆಗಮನವಾಗಿದ್ದು ನಮ್ಮ ಕರಾವಳಿಯ ಸಮುದ್ರಮಾರ್ಗದಲ್ಲಿ ಎಂಬುದು ಗೊತ್ತು ತಾನೇ,  ಇಲ್ಲಿನ ಜನರ ಬಾಯಲ್ಲಿ ನಲಿದಾಡುತ್ತಿದ್ದ  ' ಚಕ್ಕ ' ಪದವು ಅವರ ನಾಲಗೆಯಲ್ಲಿ ಜ್ಯಾಕ್ ಎಂದಾಗಿದೆ,  ಈಗಂತೂ ಜ್ಯಾಕ್ ಫ್ರುಟ್ ಸಾರ್ವತ್ರಿಕ ಪದವಾಗಿ ಬಿಟ್ಟಿದೆ!


ಇರಲಿ,  ಹಲಸಿನ ಬೇಳೆಗಳು ಪುಟ್ಟದಾಗಿ ಮೂಡಿದಂತಹ ಗುಜ್ಜೆಯು ಬೇಳೆಚಕ್ಕೆ ಯಾ ಬೇಳೆಚಕ್ಕ ಎಂದು ಹೆಸರಿಸಿಕೊಂಡಿದೆ ಹಾಗೂ ಸಾಂಬಾರು, ಗಸಿ, ಹುಳಿ,  ಪಲ್ಯ ಅಥವಾ ಇನ್ಯಾವುದೇ ಮಾದರಿಯ ಅಡುಗೆಗೂ ಸೈ ಎನ್ನಿಸಿಕೊಂಡಿದೆ.


ತೋಟದಲ್ಲಿ ಹಲಸಿನಕಾಯಿಗಳು ಇರುವಾಗ  " ಇವತ್ತೇನು ಬೆಂದಿ ಮಾಡಲೀ.. " ಎಂದು ಪರದಾಡುವ ಪ್ರಶ್ನೆಯೇ ಇಲ್ಲ.   " ಹಲಸಿನಕಾಯಿ ಉಂಟಲ್ಲ. "  ಎಂಬ ಉತ್ತರದೊಂದಿಗೆ ಹಲಸಿನ ಗುಜ್ಜೆ ಬಂದೇ ಬರುತ್ತದೆ.   ಒಂದೇ ಒಂದು ಗುಜ್ಜೆ ನಾಲ್ಕು ದಿನಗಳ ಅಡುಗೆಗೆ ಸಾಕು,  ಇನ್ನಿತರ ತರಕಾರಿಗಳಂತೆ ಶೀತಲಪೆಟ್ಟಿಗೆ ಯಾ ಫ್ರಿಜ್ ಇದಕ್ಕೆ ಬೇಕಾಗುವುದಿಲ್ಲ.  ಈ ದಿನ ಬೇಳೆಚಕ್ಕೆಯಾದಂತಹ ಹಲಸು ಬಂದಿತು.  ಹೇಗೂ ಬೇಳೆ ಮೂಡಿರುವಂತಹುದು,  ತೊಗರಿಬೇಳೆ ಬೇಯಿಸಬೇಕಾದ ಪ್ರಶ್ನೆಯೇ ಇಲ್ಲ.  ಹಲಸನ್ನು ಹೋಳು ಮಾಡಿಕೊಳ್ಳುವ ಕೌಶಲ್ಯವೊಂದು ತಿಳಿದಿದ್ದರೆ ಸಾಕು,  ನಿಮ್ಮಂತಹ ಜಾಣರು ಇನ್ನೊಬ್ಬರಿಲ್ಲ ಎಂದೇ ತಿಳಿಯಿರಿ.


ಈಗ ನಾವು ಈ ಮೊದಲೇ ತಿಳಿಸಿದಂತೆ ತಪಲೆ ತುಂಬ ಹೋಳು ಮಾಡಿಟ್ಕೊಳ್ಳೋಣ.   ಬೇಳೆಚಕ್ಕೆ ಹಲಸು ಬೇಗನೆ ಬೇಯುವಂತಹುದು,  ಹೋಳು ಮುಳುಗುವಷ್ಟು  ನೀರೆರೆದು,  ಉಪ್ಪು ಕೂಡಿಸಿ,  ಒಂದೆರಡು ಚಮಚ ತೆಂಗಿನೆಣ್ಣೆ ಎರೆದು ಬೇಯಿಸಿ.   ಅತಿಯಾಗಿ ಖಾರ ಇಷ್ಟಪಡುವವರು ಬೇಕಿದ್ದ ಹಾಗೆ ಮೆಣಸಿನಹುಡಿ ಹಾಗೂ ಚಿಟಿಕೆ ಅರಸಿಣವನ್ನು ತರಕಾರಿ ಬೇಯುವಾಗಲೇ ಹಾಕಿಕೊಳ್ಳತಕ್ಕದ್ದು. 



ಒಂದು ಕಡಿ ತೆಂಗಿನಕಾಯಿ ತುರಿಯಿರಿ.   ಮಸಾಲೆ ಏನೇನು?


ನಾಲ್ಕಾರು ಒಣಮೆಣಸು

ಎರಡು ಚಮಚ ಕೊತ್ತಂಬ್ರಿ

ಅರ್ಧ ಚಮಚ ಜೀರಿಗೆ

ಕಡ್ಲೆ ಗಾತ್ರದ ಇಂಗು

ಒಂದೆಸಳು ಕರಿಬೇವು


ತುಸು ಎಣ್ಣೆಪಸೆಯಲ್ಲಿ ಮೇಲಿನ ಸಾಮಗ್ರಿಗಳನ್ನು ಹುರಿಯಿರಿ,   ತೆಂಗಿನತುರಿಯೊಂದಿಗೆ ಅರೆಯಿರಿ.   ಅರೆಯುವಾಗ ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಸೆಹುಳಿಯನ್ನೂ ಕೂಡಿ ಅರೆಯಿರಿ.  ತೆಂಗಿನಕಾಯಿ ಅರಪ್ಪು ಸಿದ್ಧವಾಗಿದೆ.  ಬೆಂದಿರುವ ತರಕಾರಿಗೆ ಅರಪ್ಪು ಕೂಡಿ,  ಅಗತ್ಯದ ನೀರು,  ರುಚಿಯ ಉಪ್ಪು,  ಸಿಹಿಯ ಬೆಲ್ಲ ( ಬೇಕಿದ್ದರೆ ಮಾತ್ರ ) ಕೂಡಿಸಿ ಕುದಿಸಿರಿ.  ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಬೇಳೆಚಕ್ಕೆ ಬೆಂದಿ ಊಟಕ್ಕೆ ಬಡಿಸಲು ತಯಾರಾಗಿದೆ.







ಟಿಪ್ಪಣಿ:  ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಜೂನ್, 2017.