ಮಗಳು ಸುಬ್ರಹ್ಮಣ್ಯಕ್ಕೆ ಹೋಗಿ ಬಂದಳು, "ಅಮ್ಮ, ವೆಂಕ್ಟೇಶ ಭಾವನ ತೋಟದ ಕಸಿ ಮಾವಿನಕಾಯಿ ತಂದಿದ್ದೇನೆ, ಚಟ್ಣಿಮಾಡೂ.."
"ಚಟ್ಣಿಯಾ, ಚಟ್ಣಿ ಮಾಡಿ ಇಡೂದಾ.. ತಿಂದು ಮುಗಿಯಲಿಕ್ಕಿಲ್ಲ, ಸಣ್ಣ ಮಾವಿನಕಾಯಿ ಚಟ್ಣಿಗಿರಲಿ, ದೊಡ್ಡದನ್ನು ತೊಕ್ಕು ಮಾಡಿತಿನ್ನೋಣ. "
ಚಟ್ಣಿ ರಾತ್ರಿಯೂಟಕ್ಕೆ ಮಾಡಿ ತಿಂದೆವು. "ಅತ್ತೇ, ಉಳಿದ ಚಟ್ಣಿ ಪ್ರಿಜ್ ಒಳಗಿಡಿ, ಬೆಳಗ್ಗಿನ ತಿಂಡಿಗಾದೀತು. " ಎಂದ ಅಳಿಯ.
" ಸರಿ, ಹಾಗೇ ಮಾಡೋಣ. "
ಚಟ್ಣಿ ಮಾಡುವ ವಿಧಾನ ಬರೆಯುವುದಕ್ಕಿಲ್ಲ, ಹಿಂದೆ ಬರೆದಿದ್ದೇನೆಂದು ಜ್ಞಾಪಕ, ಹುಡುಕಿ ಓದಿರಿ.
ನಿನ್ನೆ ತಾನೇ ಮಾವಿನಕಾಯಿ ತೊಕ್ಕು ಮಾಡುವ ವೀಡಿಯೋ ಯೂ ಟ್ಯೂಬಲ್ಲಿ ನೋಡಿದ ನೆನಪು, ಪುನರಪಿ ಹುಡುಕಿ ನೋಡಿದ್ದಾಯ್ತು.
ಎರಡು ಮಾವಿನಕಾಯಿ ಸಿಪ್ಪೆ ತೆಗೆದು ತುರಿಯಿರಿ. ತೋತಾಪುರಿ ಆದರೆ ಒಳ್ಳೆಯದು, ಮಾರುಕಟ್ಟೆಯಲ್ಲಿ ಯಾವಾಗಲೂ ಸಿಗುವಂತದು.
ಬಾಣಲೆಯಲ್ಲಿ ತುಸು ತೆಂಗಿನೆಣ್ಣೆ ಯಾ ಎಳ್ಳೆಣ್ಣೆ ಎರೆದು ಸಾಸಿವೆ ಸಿಡಿಸಿರಿ, ತುರಿದ ಮಾವಿನಕಾಯಿಗಳನ್ನು ಹಾಕುವುದು. ನನ್ನ ಮಾವಿನಕಾಯಿಗಳು ಬಾಡಿಯೇ ಹೋಗಿದ್ದುವು, ಒಂದಂತೂ ಅರೆಹಣ್ಣಿನಂತಾಗಿತ್ತು. ಅಂತೂ ಹೇಗೋ ತುರಿದಾಯ್ತು ಅನ್ನಿ.
ಮಾವಿನಕಾಯಿ ತುರಿ ಚೆನ್ನಾಗಿ ಬಾಡಲಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸಿಹಿಯ ಬಾಬ್ತು ಬೆಲ್ಲ ಹಾಕುವುದು. ಬೆಲ್ಲ ತುಸು ಜಾಸ್ತಿ ಹಾಕಿದರೆ ರುಚಿಯಾಗಿರುತ್ತದೆ. ಸಿಹಿ ಆಗದವರು ಹಾಕಲೇಬೇಡಿ.
ಬೆಲ್ಲ ಕರಗುತ್ತಿರಲಿ.
ಈ ನಡುವೆ ನಾವು ತೊಕ್ಕಿನ ಮಸಾಲೆ ಮಾಡಬೇಕಾಗಿದೆ.
ಬಾಣಲೆಗೆ ಎಣ್ಣೆಪಸೆ ಮಾಡಿ, ಕಡಲೆ ಗಾತ್ರದ ಇಂಗು, ಮೂರು ಚಮಚ ಮೆಂತೆ ಹುರಿದು ತೆಗೆಯಿರಿ.
ಆರಿದ ನಂತರ ನೀರ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿಕೊಳ್ಳಿ.
ಜೊತೆಗೇ ಮೂರು ಚಮಚ ಮೆಣಸಿನಹುಡಿ, ಮೂರು ಚಮಚ ಉಪ್ಪು, ಚಿಟಿಕೆ ಅರಸಿಣ ಕೂಡಿ ಅರೆಯಿರಿ. ಮೆಂತೆ ನುಣ್ಣಗಾಯ್ತು,
ಅರೆಯುವಾಗ ಬೇಕಿದ್ದರೆ ಕಾಳುಮೆಣಸಿನಹುಡಿ, ಹುರಿದ ಜೀರಿಗೆ ಹಾಕಿಕೊಳ್ಳಬಹುದಾಗಿದೆ. ಇದೆಲ್ಲ ನಮ್ಮ ಆಯ್ಕೆ.
ಮಸಾಲೆ ಹುಡಿಯನ್ನು ಬೆರೆಸಿ, ನೀರು ಆರುವ ತನಕ ಮಂದಾಗ್ನಿಯಲ್ಲಿ ಸೌಟಾಡಿಸಿ.
ಬೇಗನೇ ಆಗಿ ಬಿಟ್ಟಿತು ಬಾಡಿ ಹೋದ ಮಾವಿನಕಾಯಿಗಳ ತೊಕ್ಕು.
ಊಟದ ಹೊತ್ತಿನಲ್ಲಿ ಬಡಿಸಿದಾಗ, "ಅಬ್ಬಬ್ಬ...ಏನು ಖಾರಾ.." ಅನ್ನುವುದೇ ನಮ್ಮೆಜಮಾನ್ರು.
" ಅಯ್ಯೋ.. ಮೆಣಸಿನಹುಡಿ ಒಂದೇ ಚಮಚ ಹಾಕಬೇಕಾಗಿತ್ತು. “ ಇನ್ನು ರಿಪೇರಿ ಮಾಡುವಂತಿಲ್ಲ.
" ಅಮ್ಮ, ನೀನು ಮಾಡಿದ್ದು ನಂಗೆ ಚೆನ್ನಾಗಿದೆ.. " ಮಗಳು ಪಟಾಕಿ ಸಿಡಿಸಿದಳು.
" ಹಂಗಿದ್ರೆ ಈ ತೊಕ್ಕು ನೀನು ಬೆಂಗಳೂರಿಗೆ ಹೋಗುವಾಗ ಹೋಗಲಿ. "
" ಹೋ.. ಆಯ್ತು. "
" ಇದೇ ತರ ಪೈನಾಪಲ್ ತೊಕ್ಕು ಮಾಡ್ಬಹುದು, ಮೆಂತೆ ಹಾಕಿದ ತೊಕ್ಕು ಆರೋಗ್ಯಕ್ಕೂ ಒಳ್ಳೆಯದು ಗೊತ್ತಾ.."
" ಮಾಡಿ ಇಡು.. "
ಅಂಬಟೆ , ನಿಂಬೆಹುಳಿ, ಬೇಕಿದ್ರೆ ಬೀಂಬುಳಿಯೂ ತೊಕ್ಕು ಆದೀತು. ನೆಲ್ಲಿಕಾಯಿಯ ತೊಕ್ಕು ಆರೋಗಕ್ಕೆ ಉತ್ತಮ. ಏನೂ ಸಿಗದಿದ್ರೆ ಟೊಮ್ಯಾಟೋ ತೊಕ್ಕು ಮಾಡಿ ತಿನ್ನಿ. ಚಪಾತಿಯೊಂದಿಗೆ ತಿನ್ನಿ.
ಹುಣಸೆ ಹಣ್ಣಿನ ಕಾಲದಲ್ಲಿ ಹುಣಸೆಯ ತೊಕ್ಕು, ಈ ತರ ಆಯಾ ಋತುಮಾನಗಳಲ್ಲಿ ದೊರೆಯುವ ಹಣ್ಣುಗಳ ಸದುಪಯೋಗ ಮಾಡುತ್ತ ಆರೋಗ್ಯಲಾಭ ಗಳಿಸೋಣ.
ಈ ಬರಹ ಸಿದ್ಧವಾಗುತ್ತಿದ್ದ ಹಾಗೇ ಕರ್ನಾಟಕದಲ್ಲಿ ಲಾಕ್ ಡೌನ್ ಎಂದು ಮಧು ಊರಿಗೆ ಬಂದಿದ್ದಾನೆ. ನಾಲ್ಕು ದಿನ ಮೊದಲುಬೆಂಗಳೂರಿಗೆ ತೆರಳಿದವನು ಪುನಃ ಬರುವಂತಾಯ್ತು. ತೋಟದ ಕಾರುಭಾರು ಎಲ್ಲ ಅವನದೇ. ತೋಟದಿಂದ ಮಾವಿನಕಾಯಿಗಳ ಫೋಟೊ ನನ್ನ ಬರಹಕ್ಕಾಗಿ ಬಂದಿದೆ.