ನಿನ್ನೆ ಮನೆಯಿಂದ ಹೊರಡುವಂತಾಯಿತು, ಮಗಳು ಸೀರೆ ತಂದ್ಕೊಟ್ಟಿದ್ದಳು, ಅದಕ್ಕೊಂದು ಬ್ಲೌಸ್ ಹೊಲಿಸಬೇಕಾಗಿತ್ತು, ಈಗ ಹೇಗೂ ಅಂಗಡಿ ಬಾಗಿಲುಗಳು ತೆರೆದಿವೆ, ಟೈಲರಂಗಡಿಯೂ ತೆರೆದಿದ್ದೀತು. ಮಗನೊಂದಿಗೆ ಮುಂಜಾನೆಯ ತಿಂಡಿತೀರ್ಥ ಆಗುತ್ತಲೇ ಹೊರಟೆ, ಮಧ್ಯಾಹ್ನದ ಊಟವಾದ ನಂತರ ಅವನೂ ಬೆಂಗಳೂರಿಗೆ ಹೊರಡುವವನಿದ್ದಾನೆ.
ಅರ್ಧ ಫರ್ಲಾಂಗು ದೂರ ಕ್ರಮಿಸುತ್ತಲೇ ಇವತ್ತು ಯಾವುದೋ ಹಬ್ಬ ನಿಮಿತ್ತ ರಜೆ, ಉಫ್.. ಟೈಲರ್ ಬಾಗಿಲೇ ತೆರೆದಿಲ್ಲ.
ಚಿಂತೆ ಮಾಡುವುದಕ್ಕಿಲ್ಲ, ಇನ್ನೊಮ್ಮೆ ನೋಡೋಣ. " ಮಧೂ.. ನಾನು ಬಂದಿದ್ದು ಒಳ್ಳೆಯದೇ ಆಯ್ತು... ಹೊರಗೆ ನೋಡು, ರಸ್ತೆಯುದ್ದಕ್ಕೂ ತಗತೆಯ ಹಸಿರು... "
" ಥೂ, ರಸ್ತೆ ಬದಿಯಿಂದಲೋ.. ಈ ಜಾಗ ಏನೂ ಚೆನ್ನಾಗಿಲ್ಲ.."
" ಹಂಗಿದ್ರೆ ಒಳ್ಳೇ ಜಾಗ ತೋರಿಸು, ಅಲ್ಲಿಂದಲೇ ಸ್ವಲ್ಪ ಚಿವುಟಿದ್ರಾಯ್ತು.."
ಅಂತೂ ಒಂದು ಕಡೆ ಕಾರು ನಿಂತಿತು. ಮಾಸ್ಕ್ ಧಾರಿಯಾಗಿಯೇ ಒಂದು ಹಿಡಿ ಆಗುವಷ್ಟು ಸೊಪ್ಪನ್ನು ಚಿವುಟಿದ್ದಾಯ್ತು.
" ಹೌದಾ, ತಗತೆಯಿಂದ ಏನು ಅಡುಗೆ? "
ಮನೆಗೆ ವಾಪಸ್ ಬಂದ ಕೂಡಲೇ ತಗತೆ ಸೊಪ್ಪಿನ ಚಿಗುರೆಲೆಗಳನ್ನು ಸಾಂಬಾರಿಗೆ ಹಾಕಲು ತೆಗೆದಿರಿಸಿದ್ದಾಯ್ತು.
" ಅಮ್ಮ, ಚೆನ್ನಾಗಿ ತೊಳೆದಿದ್ದೀಯಲ್ಲ.. "
" ಹ್ಞೂ, ತೊಳೆಯದೆ ಹೇಗಾದೀತು? "
ಸಾಂಬಾರ್ ಮಾಡಿದ್ದು ಹೇಗೆ?
ಮೊದಲು 10ರಿಂದ 12 ಹಲಸಿನ ಬೇಳೆಗಳನ್ನು ಜಜ್ಜಿ ಇಡುವುದು. ಜಜ್ಜುವಾಗಲೇ ಹೊರಸಿಪ್ಪೆಗಳು ಬಿಡಿಸಲ್ಪಡುತ್ತವೆ. ಕುಕ್ಕರಿನಲ್ಲಿ 7 -8 ಸೀಟಿ ಕೂಗಿಸಿ. ಹಲಸಿನ ಬೇಳೆ ಇನ್ನಿತರ ಬೇಳೆಕಾಳುಗಳಂತಲ್ಲ, ಬೇಯದಿದ್ದರೆ ಅಜೀರ್ಣ ವ್ಯಾಧಿ ಯಾ ವಾಯುಪ್ರಕೋಪ ಶುರುವಾದೀತು.
ಬೆಂದ ನಂತರ ತರಕಾರಿ ಹೋಳುಗಳನ್ನು ಹಾಕಿ ಬೇಯಿಸಿ. ನಾನು ಹಾಕಿದ್ದು ಸೌತೆ. ಜತೆಗೇ ತಗತೆ ಚಿಗುರುಗಳನ್ನೂ ಹಾಕುವುದು.
ಉಪ್ಪಿನಲ್ಲಿ ಇಟ್ಟ ಅಂಬಟೆ ಇರುವುದರಿಂದ 3 ಅಂಬಟೆಗಳನ್ನು ಹೋಳು ಮಾಡಿ ಹಾಕಲಾಯಿತು. ಇನ್ನು ಹುಣಸೆ ಹಣ್ಣು, ಟೊಮ್ಯಾಟೋ ಹಾಕಬೇಕಾಗಿಯೇ ಇಲ್ಲ.
ರುಚಿಗೆ ಉಪ್ಪು ಹಾಕಿಯೇ ತರಕಾರಿಗಳನ್ನು ಬೇಯಿಸಿ ಆಯಿತು.
ಇದೀಗ ಮಸಾಲೆ ಆಗಬೇಕಿದೆ,
ಅರ್ಧ ತೆಂಗಿನ ತುರಿ
4 ಒಣಮೆಣಸು
ದೊಡ್ಡ ಚಮಚ ಉದ್ದಿನಬೇಳೆ
2 ಚಮಚ ಕೊತ್ತಂಬರಿ
ಜೀರಿಗೆ ಹಾಗೂ ಮೆಂತೆ ಒಂದು ಪುಟ್ಟ ಚಮಚದಲ್ಲಿ ಸಾಕು,
ಕಡ್ಲೆ ಕಾಳಿನಷ್ಟು ಇಂಗು
ಕರಿಬೇವು
ಇಷ್ಟನ್ನೂ ತುಸು ಎಣ್ಣೆಪಸೆಯಲ್ಲಿ ಹುರಿಯಿರಿ
ತೆಂಗಿನತುರಿಯೊಂದಿಗೆ ಅರೆಯಿರಿ.
ತೆಂಗಿನ ಅರಪ್ಪನ್ನು ಬೆಂದ ತರಕಾರಿಗೆ ಕೂಡಿ,
ಸೌಟಿನಲ್ಲಿ ತಿರುಗಿಸಿ,
ಉಪ್ಪು ಸಾಕಾಗದಿದ್ದರೆ ಹಾಕುವುದು,
ನೀರು ಸಾಲದಿದ್ದರೆ ಎರೆಯುವುದು,
ಮರೆಯದೆ ಒಂದು ತುಂಡು ಬೆಲ್ಲ ಹಾಕುವುದು,
ನಂತರ ಕುದಿಸಿ, ಕೆಳಗಿಳಿಸಿ, ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡುವುದು.
ಒಗ್ಗರಣೆಗೆ ಬೆಳ್ಳುಳ್ಳಿ ಹಾಕಿದರೆ ಚೆನ್ನಾಗಿರುತ್ತದೆ.
ಇದೀಗ ತಗತೆ ಬೇಳೆ ಗಸಿ ತಯಾರಾಗಿದೆ.
" ಮಧೂ, ಊಟಕ್ಕೆ ಬಾ.. "
ಇನ್ನೀಗ ಬೆಂಗಳೂರಿಗೆ ಬೇಕಾದ ಸಾಮಗ್ರಿಗಳನ್ನು ಕಟ್ಟಿ ಕೊಡುವ ಸಮಯ.
ಉಳಿದ ತಗತೆ ಸೊಪ್ಪನ್ನು ಜೋಪಾನವಾಗಿ ತೆಗೆದಿರಿಸಿಯೂ ಆಯ್ತು. ನಾಳೆ ಇನ್ನೊಂದು ಅಡುಗೆ ಆಗಲಿದೆ. ಹೇಗೂ ಈಗ ಆಟಿ ತಿಂಗಳು, ತಗತೆ ಸೊಪ್ಪು ಸರಿಯಾದ ಸಮಯಕ್ಕೆ ದೊರೆತಿದ್ದು ಕೂಡಾ ಸಂತಸದ ವಿಷಯ.
ನೀವೂ ತಿನ್ನಿ, ಮಳೆಗಾಲದ ರೋಗರುಜಿನಗಳಿಂದ ಮುಕ್ತರಾಗಿ ನೆಮ್ಮದಿಯಿಂದಿರಿ.
ಸಂಸ್ಕೃತದಲ್ಲಿ ಚಕ್ರಮರ್ದ ಎನ್ನಲಾಗುವ ತಗತೆ ಆಯುರ್ವೇದ ರೀತ್ಯಾ ಒಂದು ಔಷಧೀಯ ಸಸ್ಯ.
ಅಂದ ಹಾಗೆ ಮಹಿಳೆಯರನ್ನೇ ಕಾಡುವ ಮಂಡಿನೋವು ಇದೆಯಲ್ಲ, ಅದಕ್ಕೂ ನಿವಾರಣೆ ಈ ತಗತೆಯಿಂದ ಸಾಧ್ಯವಂತೆ. ಏನಿದ್ರೂ ತಜ್ಞರ ಸಲಹೆ ಉತ್ತಮ.
ಒಳ್ಳೆಯದೆಂದು ಅತಿ ಬಳಕೆ ಸಲ್ಲದು.
ಮಿತ ಪ್ರಮಾಣದಲ್ಲಿ ಆಡುಗೆಯಲ್ಲಿ ಬಳಸಿರಿ.
ಈ ಹಿಂದೆಯೂ ತಗತೆಯ ಹಲವು ಅಡುಗೆಗಳನ್ನು ಬರೆದಿದ್ದೇನೆ. ಸಸ್ಯ ವಿಶೇಷತೆಯನ್ನೂ ವರ್ಣಿಸಿದ್ದೇನೆ. ಸಾಧ್ಯವಾದರೆ ಹುಡುಕಿ ಓದಿರಿ.