Pages

Ads 468x60px

Saturday 28 September 2013

ಬಾಂಬೇ ಟೋಸ್ಟ್







ಬ್ರೆಡ್ ಇದೆ,  ಹಾಲು ಇದೆ,  ಸಕ್ಕರೆ ಇದೆ.
ಕಾವಲಿಗೆ ತುಪ್ಪ ಸವರಿ ಒಲೆ ಮೇಲೆ ಇಟ್ಟಾಯ್ತೇ,
ಒಂದು ಲೋಟ ಹಾಲಿಗೆ ಎರಡು ಚಮಚಾ ಸಕ್ಕರೆ ಕರಗಿಸಿ ಒಂದು ತಪಲೆಗೆರೆದು ಇಟ್ಟು ಕೊಳ್ಳಿ.
ಕಾವಲಿ ಬಿಸಿಯಾಗಿದೆ,  ಒಂದೊಂದೇ ಬ್ರೆಡ್ ಸ್ಲೈಸನ್ನು ಹಾಲಿಗೆ ಇಳಿಸಿ ಕೂಡಲೇ ತೆಗೆದು ಕಾದ ತವಾ ಮೇಲೆ ಹಾಕಿ.  ಒಂದೇ ಬಾರಿ 3-4 ಬ್ರೆಡ್ ತುಂಡುಗಳನ್ನು ಹಾಕಬಹುದು.  ಕವುಚಿ ಹಾಕಿ ತೆಗೆಯಿರಿ.
ಬಿಸಿ ಬಿಸಿಯಾಗಿ ತಿನ್ನಿ,   ಬಾಂಬೇ ಟೋಸ್ಟ್ ಅನ್ನಿ.

ಚಿಕ್ಕಮಕ್ಕಳು ಅನ್ನ, ತಿಂಡಿ ತಿನ್ನಲು ರಂಪಾಟ ಮಾಡುವುದು ಸಹಜ,   ಬಿಸಿ ಬಿಸಿಯಾದ ಈ ಬಾಂಬೇ ಟೋಸ್ಟ್ ಮಕ್ಕಳ ಮನ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ.
ಹಾಲು ಹಾಗೇನೇ ಕುಡಿಯಲು ಇಷ್ಟಪಡದ ಮಕ್ಕಳಿಗೆ ಹೀಗಾದರೂ ಹಾಲು ದಕ್ಕೀತು.
ಮನೆಯಲ್ಲಿ ದೋಸೆ, ಇಡ್ಲಿ ಮಾಡಿಕೊಡಲು ಯಾರೂ ಇಲ್ಲದಿದ್ದಾಗ ಹೀಗೆ ಬ್ರೇಕ್ ಫಾಸ್ಟ್ ಮಾಡಿಕೊಳ್ಳಬಹುದು,  ಹೋಟಲ್ ಖರ್ಚು ಉಳಿತಾಯ.
ಸಂಜೆಯ ವೇಳೆ ಟೀ ಜತೆ ಇನ್ನೂ ಚೆನ್ನಾಗಿರುತ್ತದೆ.

Posted via DraftCraft app

Saturday 21 September 2013

ಅಡುಗೆ ~~~ ಒಗ್ಗರಣೆ




ಮನೆಯ ಮುಂದೆ ತುಳಸೀ ಇರಬೇಕು, ಹಿತ್ತಿಲಲ್ಲಿ ಕರಿಬೇವು ಇರಬೇಕು, ಹೌದು ತಾನೇ. ಅಡುಗೆ ಆಗಿ ಒಗ್ಗರಣೆ ಕೊಡುವ ಹೊತ್ತಿಗೆ ಕರಿಬೇವಿನೆಲೆ ನೆನಪಾಗಿ, ಹಿತ್ತಿಲಿಗೆ ಹೋಗಿ ಎರಡೆಸಳು ಕೊಯ್ದು, ಮಾಡಿಟ್ಟ ಅಡುಗೆ ಘಮಘಮಾ ಮಾಡುತ್ತಲ್ಲ, ಅದು ಕರಿಬೇವು.

ನಮ್ಮ ಪಕ್ಕದ ಮನೆಯಾಕೆ ದಿನ ಬಿಟ್ಟು ದಿನ ಬೇವಿನೆಲೆಗಾಗಿ ನಮ್ಮ ಮನೆಗೇ ಬರೋರು. ಗಿಡವೇನೋ ಅವರಲ್ಲೂ ಇದೆ, ಅದರ ಎಸಳು ಕೀಳಲು ಏನೋ ಆಸೆ. ನಾನೂ ಒಂದಿನಾ ಹೋಗಿ ನೋಡ್ದೆ. ಎಲೆಗಳನ್ನು ಚಿವುಟದೇ ಇಟ್ಟಿದ್ರಿಂದಾಂತ ಕಾಣ್ಸುತ್ತೆ, ಎಲೆಗಳು ನಮ್ಮನ್ಯಾರೂ ಕೇಳೋರಿಲ್ಲ ಅನ್ನುವಂತೆ ಕಳಾವಿಹೀನವಾಗಿದ್ದುವು.

" ನೀವು ಹೀಗೆ ಮಾಡಿ ಹೇಮಕ್ಕ, ಈ ಗಿಡದ ಎಲೆ ಎಲ್ಲಾ ಚಿವುಟುತ್ತಾ ಬನ್ನಿ, ಹೇಗೂ ಮಳೆ ಬರ್ತಾ ಇದೆ, ಚಿಗುರು ಬಂದು ಪೊದೆ ಥರ ಆಗಲು ಏನೂ ತೊಂದರೆಯಿಲ್ಲ " ಅಂದೆ.

" ಹೌದೇ, ಹಾಗೇ ಮಾಡ್ತೇನೆ " ಅಂದ ಹೇಮಕ್ಕ ಏನು ಮಾಡಿದ್ರು ಅಂತ ಪುನಃ ತನಿಖೆಗೆ ನಾನು ಹೋಗಿಲ್ಲ.

ಬೇವಿನೆಲೆಯಲ್ಲಿ ದೊಡ್ಡ ಎಲೇದು, ಪುಟ್ಟ ಎಲೇದು ಅಂತ ವೈವಿಧ್ಯಗಳೇನೋ ಇವೆ. ಆದರೂ ಸಸ್ಯಶಾಸ್ತ್ರೀಯ ವರ್ಗೀಕರಣವೇನೂ ಇಲ್ಲ. ಆಂಗ್ಲ ಭಾಷೆಯಲ್ಲಿ curry leaf plant ಅನ್ನಿಸಿಕೊಂಡಿರುವ ಈ ಸಸ್ಯ Rutaceae ಕುಟುಂಬದಲ್ಲಿದೆ. ಭಾರತ ಹಾಗೂ ಶ್ರೀಲಂಕಾಗಳಲ್ಲಿ ಒಂದು ಸಾಮಾನ್ಯ ಸಸ್ಯವಾಗಿರುವ ಕರಿಬೇವಿನ ಗಿಡವನ್ನು ಸಸ್ಯವಿಜ್ಞಾನಿಗಳು Murraya koenigii ಎಂದು ಹೆಸರಿಸಿದ್ದಾರೆ. ಪುಟ್ಟ ಎಲೆಯ ಕರಿಬೇವು ತುಂಬಾ ಪರಿಮಳ ಎಂದು ನನ್ನಮ್ಮ ಹೇಳೋರು. ಅಮ್ಮ ಸಾಕಿದ ಪುಟ್ಟ ಎಲೆಯ ಕರಿಬೇವಿನ ಗಿಡ ಮರವಾಗಿ ಬೆಳೆದಿದೆ. ಊರಿನ ಹತ್ತೂ ಮಂದಿ ಕೀಳಲು ಬರುತ್ತಿರುತ್ತಾರೆ. ನಮ್ಮ ತೋಟದಲ್ಲಿ ಹೆಜ್ಜೆಗೊಂದರಂತೆ ಕರಿಬೇವಿನ ಗಿಡಗಳಿದ್ದರೂ ಅಮ್ಮನ ಮನೆಯ ಕರಿಬೇವಿನ ಮರದ ಬೇರಿನಿಂದ ಮೇಲೆದ್ದು ಬಂದ ಸಸಿಯನ್ನು ಕಿತ್ತು ತಂದು ನಮ್ಮ ಹಿರಣ್ಯದಲ್ಲೂ ನೆಟ್ಟು ಬೆಳೆಸುವ ಪ್ರಯತ್ನ ಮಾಡಿದ್ದೇನೆ.





ಬೇವಿನಸೊಪ್ಪಿನ ಚಟ್ನಿಹುಡಿ ಮಾಡಿಯೇ ಬಿಡೋಣ. ಇದನ್ನು ಈ ಆಧುನಿಕ ಯುಗದಲ್ಲಿ ಪರಿಶ್ರಮವಿಲ್ಲದೆ ಮಾಡಿಕೊಳ್ಳಬಹುದು. ಯಾಕೆ ಹೀಗೆ ಅನ್ನುತ್ತಿದ್ದೇನೆಂದರೆ ನನ್ನಜ್ಜಿ ಹಾಗೂ ನನ್ನಮ್ಮ ಮಕ್ಕಳಿಗಾಗಿ ಶ್ರಮ ಪಟ್ಟು ಮಾಡುತ್ತಿದ್ದ ಖಾದ್ಯಗಳಲ್ಲಿ ಚಟ್ನೀಪುಡಿಯೂ ಒಂದಾಗಿತ್ತು. ಒರಳು ಕಲ್ಲನ್ನು ಸ್ವಚ್ಛಗೊಳಿಸಿ, ಒಣಗಿಸಿ, ಹುರಿದ ಮಸಾಲೆಗಳನ್ನು ಹುಡಿ ಮಾಡಿಕೊಡಲು ಕೆಲಸಗಿತ್ತಿಯ ಸಹಕಾರವೂ ಅನಿವಾರ್ಯವಾಗಿತ್ತು.

ಒಂದು ತೆಂಗಿನಕಾಯಿ, ನೀರು ಆರಿದ ಗೋಟುಕಾಯಿಯಾಗಿರಬೇಕು. ತುರಿದು ಇಟ್ಟುಕೊಳ್ಳಿ.
ಬೇವಿನ ಸೊಪ್ಪು, 25 ಎಸಳು
ಕೊತ್ತಂಬರಿ, 3 ಚಮಚ
ಜೀರಿಗೆ, ಒಂದು ಚಮಚ
ಇಂಗು, ಕಡ್ಲೇ ಕಾಳಿನಷ್ಟು
ರುಚಿಗೆ ಉಪ್ಪು, ಹುಳಿ, ಬೆಲ್ಲ

ತೆಂಗಿನಕಾಯಿ ತುರಿಯನ್ನು ಬಾಣಲೆಯಲ್ಲಿ ಪರಿಮಳ ಬರುವತೆ ಹುರಿಯಿರಿ, ತಣಿಯಲು ತೆಗೆದಿರಿಸಿ.
ಅದೇ ಬಾಣಲೆಯಲ್ಲಿ ಉಳಿದ ಮಸಾಲಾ ಸಾಮಗ್ರಿಗಳನ್ನು ಘಮ್ ಘಮಾ ಎಂಬಂತೆ ಹುರಿದು ಕೆಳಗಿಳಿಸಿ.
ಬೇವಿನಸೊಪ್ಪನ್ನೂ ಬಾಣಲೆಗೆ ಹಾಕಿ ಕೈಯಲ್ಲಿ ಮುಟ್ಟುವಾಗ ಪುಡಿಯಾಗುವಷ್ಟು ಬಾಡಿಸಿ.
ಈ ಹುರಿಯುವ ಕ್ರಿಯೆಗಳನ್ನು ಮೈಕ್ರೋವೇವ್ ಒವನ್ ನಲ್ಲೂ ಮಾಡಿಕೊಳ್ಳಬಹುದು, ಎಣ್ಣೆ ಪಸೆ ಮಾಡುವ ಅವಶ್ಯಕತೆಯಿಲ್ಲ, ಸೊಪ್ಪು ತನ್ನ ತಾಜಾ ಹಸಿರು ಬಣ್ಣವನ್ನು ಸ್ವಲ್ಪವೂ ಕಳೆದುಕೊಳ್ಳುವುದಿಲ್ಲ.
ಇಷ್ಟೂ ಸಿದ್ಧತೆ ಆಯಿತೇ, ಮಿಕ್ಸಿಯ ಜಾರ್ ಸ್ವಚ್ಛಗೊಳಿಸಿ, ನೀರಪಸೆ ಇದ್ದಲ್ಲಿ ಒಣಗಿಸಿ.
ಒಂದೊಂದಾಗಿ ಹುಡಿ ಮಾಡಿ. ಕೊನೆಗೆ ಎಲ್ಲವನ್ನೂ ಜತೆಯಾಗಿ ಉಪ್ಪು, ಹುಳಿ, ಬೆಲ್ಲ ಸೇರಿಸಿ ಎರಡು ಸುತ್ತು ತಿರುಡಿಸಿ ತೆಗೆಯುವಲ್ಲಿಗೆ ಚಟ್ನಿಪುಡಿ ಸಿದ್ಧ.





ಎಲ್ಲರಿಗೂ ತಾಜಾ ಬೇವಿನೆಲೆ ಸಿಗುವುದಿಲ್ಲ. ಸಿಕ್ಕ ಮೇಲೆ ಕೆಲವು ದಿನ ಇಟ್ಟುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಬರುತ್ತದೆ. ಎಲೆಗಳನ್ನು ಇದ್ದ ಹಾಗೆ ಜಾಡಿಯಲ್ಲಿ ತುಂಬಿಡುವುದಕ್ಕಿಂತ ಸ್ವಲ್ಪ ಹುರಿದು ಜಾಡಿಯಲ್ಲಿ ತುಂಬಿಟ್ಟುಕೊಂಡಲ್ಲಿ ಉಪಯೋಗಕ್ಕೆ ಅನುಕೂಲ, ಹೆಚ್ಚು ದಿನ ಉಪಯೋಗಿಸಬಹುದು.

" ಮನೆಯ ಹಿಂದೆ ಹಿತ್ತಿಲೇ ಇಲ್ಲ, ನೆಡೋದೆಲ್ಲಿಂದ " ಎಂದು ಪೇಚಾಡಬೇಕಾಗಿಲ್ಲ. ಕುಂಡದಲ್ಲಿ ನೆಟ್ಟು ಬೆಳೆಸಿ, ಬಾಲ್ಕನಿಯ ಸೊಬಗನ್ನು ಹೆಚ್ಚಿಸಿ, ಶುದ್ಧವಾದ ಗಾಳಿಯನ್ನು ಪಡೆಯಿರಿ.


ಬೇವಿನೆಲೆಯ ಹಸಿ ಚಟ್ನಿ:

ಒಂದು ಕಡಿ ತೆಂಗಿನ ತುರಿ
2 ಹಸಿ ಮೆಣಸು
4 ಎಳೆಯ ಬೇವಿನೆಸಳು
ಉಪ್ಪು
ಎಲ್ಲವನ್ನೂ ರುಬ್ಬಿಕೊಂಡು ಒಗ್ಗರಣೆ ಕೊಟ್ಟರಾಯಿತು.
ಈ ಚಟ್ನಿಗೆ ಎರಡು ಸೌಟು ಮೊಸರು ಅಥವಾ ದಪ್ಪ ಮಜ್ಜಿಗೆ ಎರೆದು ಗೊಜ್ಜು ಅನ್ನಿ.


ಬೇವಿನ ಹೂ ಗೊಜ್ಜು:

ಬೇವಿನ ಹೂಗಳನ್ನು ತುಪ್ಪದಲ್ಲಿ ಹುರಿದು ಕೊಳ್ಳಿ.
ಉಪ್ಪು, ಹುಳಿ, ಬೆಲ್ಲ ಹಾಗೂ ನೀರು ಕುದಿಸಿ.
ಬೇವಿನ ಹೂ ಹಾಕಿಕೊಳ್ಳಿ, ಬೇಕಿದ್ದರೆ ಈರುಳ್ಳಿ ಚಿಕ್ಕದಾಗಿ ಹಚ್ಚಿ ಹಾಕಿ.
ಬೆಳ್ಳುಳ್ಳಿ ಒಗ್ಗರಣೆ ಕೊಡಿ.

ಮಹಾನಗರಗಳಲ್ಲಿ ವಾಸಿಸುವ ಮಂದಿಗೆ ತಲೆಕೂದಲನ್ನು ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ ಆಗ್ಬಿಟ್ಟಿದೆ. ಅದಕ್ಕೆ ಕಾರಣಗಳೇನೇ ಇರಲಿ, ನಿಯಮಿತವಾಗಿ ಕರಿಬೇವಿನೆಲೆಯ ಖಾದ್ಯಗಳನ್ನು ತಿನ್ನಿ, ಕೂದಲನ್ನು ಉಳಿಸಿಕೊಳ್ಳಿ. ಒಗ್ಗರಣೆಯ ಕರಿಬೇವನ್ನೂ ಪಕ್ಕಕ್ಕೆ ತಳ್ಳಬೇಡಿ.

ಕರಿಬೇವಿನ ಚಟ್ನಿಹುಡಿ ಮಾಡಿಕೊಳ್ಳಲು ಔದಾಸೀನ್ಯವೇ, ಹೀಗೆ ಮಾಡಿ. ಮೈಕ್ರೋವೇವ್ ಒವನ್ ನಲ್ಲಿ ಬೇವಿನೆಲೆಗಳನ್ನು ಪರಪರ ಆಗುವಷ್ಟು ಬಾಡಿಸಿ. ಉಪ್ಪು ಹಾಕಿಕೊಂಡು ಕೈಯಲ್ಲೇ ಪುಡಿಪುಡಿ ಮಾಡಿಟ್ಟು ಜಾಡಿಯಲ್ಲಿ ತುಂಬಿಸಿ. ಅನ್ನದೊಂದಿಗೆ ಕಲಸಿ ತಿನ್ನಿ. ಮೊಸರಿನೊಂದಿಗೂ ಆದೀತು.





ವಸಂತಕಾಲದಲ್ಲಿ ಕರಿಬೇವಿನ ಮರವೂ ಬಿಳಿ ಹೂಗೊಂಚಲುಗಳಿಂದ ಶೋಭಿಸುವುದು. ಈ ಹೂಗಳನ್ನು ಸಲಾಡ್, ಕೋಸಂಬರಿಗಳಿಗೆ ಅಲಂಕಾರಿಕವಾಗಿ ಬಳಸಬಹುದು. ಹೂಗಳನ್ನು ತಂಬುಳಿ ಕೂಡಾ ಮಾಡಬಹುದು. ಹೂಗಳು ಕೊನೆಗೆ ಕಪ್ಪನೆಯ ಹಣ್ಣಾಗಿ ಪರಿವರ್ತಿತವಾಗುತ್ತವೆ. ಈ ಹಣ್ಣುಗಳಿಂದ ಹೊಸ ಗಿಡಗಳನ್ನು ಪಡೆಯಬಹುದಾಗಿದೆ.

ಬೇವು ಎಂದು ಖ್ಯಾತಿ ಪಡೆದಿರುವುದು ಔಷಧೀಯ ವೃಕ್ಷವಾಗಿರುವ ಕಹಿಬೇವು. ಕರಿ ಎಂಬ ಶಬ್ದವು ಸಾಮಾನ್ಯವಾಗಿ ಅಡುಗೆಯ ಯಾವುದೇ ರಸಭರಿತ ವ್ಯಂಜನಕ್ಕೆ ಅನ್ವಯವಾಗುವಂತಹುದು. ಅಡುಗೆಯಲ್ಲಿ ಒಗ್ಗರಣೆಗೆ ಬಳಕೆಯಾಗುವ ಇದರ ಎಲೆಗಳಿಂದಾಗಿ ಇದು ಕರಿಬೇವು. ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಇದು ಕರಿವೆಪ್ಪಿಲೈ ಆಗಿದೆ, ಇಲೈ ಎಂದರೆ ಎಲೆ. ಅಡುಗೆಯಲ್ಲಿ ಉಪಯೋಗಿಸಲ್ಪಡುವ ಸಿಹಿಬೇವು ಎಂದೇ ಹೇಳಬೇಕಾಗುತ್ತದೆ.

ಕರಿಬೇವಿನೆಲೆ ಒಗ್ಗರಣೆಯೊಂದಿಗೆ " ಅಡುಗೆ ಆಯ್ತು " ಎಂಬ ಸಂದೇಶ. ಆಹ್ಲಾದಕರ ಸುವಾಸನೆಯೊಂದಿಗೆ ಊಟದ ಮನೆಗೆ ಸ್ವಾಗತ ನೀಡುವ ಈ ಎಲೆಯ ಜೀವದ್ರವ್ಯಗಳೇನೇನಿವೆ ಎಂಬುದನ್ನೂ ತಿಳಿಯೋಣ. ವಿಟಮಿನ್ ಎ ಹಾಗೂ ಖನಿಜಾಂಶಗಳು ಹೇರಳವಾಗಿವೆ, ಕ್ಯಾಲ್ಸಿಯಂ ಹಾಗೂ ವಿಟಮಿನ್ ಸಿ ಕೂಡಾ ಎಲೆಗಳಲ್ಲಿವೆ. ನೈಸರ್ಗಿಕವಾಗಿ ಲಭಿಸುವ ಈ ಸಂಪತ್ತನ್ನು ತುತ್ತು ಅನ್ನದೊಂದಿಗೆ ಕಲಸಿ ತಿನ್ನುವ ಭಾಗ್ಯ ನಮ್ಮದಾಗಿದೆ.

Posted via DraftCraft app

Saturday 14 September 2013

ಪುಳಿಂಜಿಯ ರಸಪಾಕ!




ಪ್ರತಿವರ್ಷವೂ ಓಣಂ ಬರುತ್ತದೆ.  ಹಾಗೇ ಆ ವರ್ಷವೂ ಬಂದಿತು.   ಶಾಲೆ ಹಾಗೂ ಸರಕಾರೀ ಸಂಸ್ಥೆಗಳಿಗೆ ಫುಲ್ ರಜೆ,   ಕರ್ನಾಟಕದ ದಸರಾ ಇದ್ದ ಹಾಗೆ.   ನನ್ನಮ್ಮ ಚಿಕ್ಕಮಕ್ಕಳೊಂದಿಗೆ ಕಾಸರಗೋಡಿನಿಂದ ವಿಟ್ಲದ ಸಮೀಪವಿರುವ ಕುಕ್ಕಿಲದ ತಾಯಿಮನೆಗೆ ಹೋದರು.   ಮನೆಯಲ್ಲಿದ್ದ ಬಾಣಸಿಗನೂ ರಜಾ ತೆಗೆದುಕೊಂಡು ಅವನೂರಿಗೆ ಹೋದ.  ಅಪ್ಪನ ಕೋರ್ಟುಕಛೇರಿಗಳಿಗೆ ರಜಾ ಇರಲಿಲ್ಲ,  ತಿರುವೋಣಂ ದಿನ ಮಾತ್ರ ಒಂದು ದಿನದ ರಜೆ.  ನಾನು ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದುದರಿಂದ,  ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕಾಗಿದ್ದುದರಿಂದ,  ಅಪ್ಪನ ಊಟತಿಂಡಿಗಳ ಮೇಲ್ವಿಚಾರಕಿಯಾಗಿ ಮನೆಯಲ್ಲಿ ಇರಬೇಕಾಗಿತ್ತು.   ಆಗ ಇಂದಿನಂತೆ ಗ್ಯಾಸ್,  ಓವನ್,  ಹೀಟರ್,  ಗ್ರೈಂಡರ್ ಯಾವುದೂ ಇರಲಿಲ್ಲ ಕಣ್ರೀ,  ಒಂದು ಚಿಮಿಣೀ ಸ್ಟವ್ ಇತ್ತು.

ನೀರು ಸೇದಲು ಬಾವಿಕಟ್ಟೆಗೆ ಬಂದಾಗ ಅಕ್ಕಪಕ್ಕದ ಹೆಂಗಳೆಯರಿಗೆ ನನ್ನಮ್ಮ ಊರಿಗೆ ಹೋಗಿದ್ದಾರೆಂಬ ವಾಸ್ತವ ಅರಿವಿಗೆ ಬಂದು,  ನನಗೆ ತಮ್ಮ ಕೈಲಾದ ಅಡುಗೆಕೋಣೆ ವ್ಯವಹಾರಗಳನ್ನು ಹೇಳಿ ಕೊಡಲು ಮುಂದಾದರು.   ಆದರೆ ನನಗೆ ಆಸಕ್ತಿ ಇದ್ದರಲ್ಲವೇ?  ತಕ್ಕಮಟ್ಟಿಗೆ ಅಡುಗೆಯ ಒಳಗುಟ್ಟುಗಳನ್ನು ನನ್ನಪ್ಪ ತಿಳಿದಿದ್ದರು.   ಕಟ್ಟಿಗೆಯ ಒಲೆ ಹೊತ್ತಿಸುವ ವಿಧಾನ ಅಪ್ಪನೇ ಹೇಳಿಕೊಟ್ಟರು.   ತೆಂಗಿನ ಗೆರಟೆಗೆ ಹಿಡಿಬೂದಿ ತುಂಬಿಸಿ,  ಅದಕ್ಕೆ ಚಿಮಿಣಿ ಎಣ್ಣೆ ಎರೆದು ಒಲೆಯೊಳಗಿಟ್ಟು,  ಬೆಂಕಿಕಡ್ಡಿ ಗೀರಿ ಹೊತ್ತಿಸಿ,  ಮೇಲಿನಿಂದ ಸೌದೆ ತುಂಡುಗಳನ್ನು ಒಂದರಮೇಲೊಂದರಂತೆ ಇಟ್ಟುಬಿಟ್ಟರೆ ಮುಗೀತು.   ಅನ್ನದ ತಪಲೆಗೆ ನೀರು ತುಂಬಿಸಿ ಒಲೆ ಮೇಲೆ ಇಟ್ಟರಾಯಿತು.   

ನೀರು ಕುದಿಯಬೇಕಾದರೆ ಕುಚ್ಚುಲಕ್ಕಿ ತೊಳೆದು ಹಾಕಿ,  ನಿಧಾನಗತಿಯಲ್ಲಿ ಬೇಯುವ ಈ ಅಕ್ಕಿ ಕುದಿಯುತ್ತಾ ಇರಬೇಕು,  ಊಟದ ಹೊತ್ತಿಗೆ ಬೆಂದಿರುತ್ತದೆ.   ನಂತರ ಗಂಜಿನೀರು ಬಸಿಯಲು ಅದಕ್ಕಾಗಿಯೇ ಮೀಸಲಾದ ಮರದ ತಟ್ಟೆ ಮುಚ್ಚಿ ಬಗ್ಗಿಸುವುದು,  ಗಂಜಿನೀರು ಶೇಖರಿಸಲು ಇನ್ನೊಂದು ಅಗಲ ಬಾಯಿಯ ಪಾತ್ರೆ.  ಈ ಪಾತ್ರೆ ಕೇವಲ ಗಂಜಿನೀರು ಶೇಖರಣೆಗೆ ಮೀಸಲು,  ಅಡಿಮಂಡಗೆ ಅಥವಾ ಓಡಮರಿಗೆ ಎಂದು ಆಡುನುಡಿಯಲ್ಲಿ ಹೇಳುವ ವಾಡಿಕೆ.  ಹಾಗೇನೇ ಮರದ ತಟ್ಟೆಗೆ ಚರ್ಂಬುತ್ತಿ ಅಥವಾ ಎಸಿಮುಚ್ಚಲು ಅಂತಾನೂ ಹೆಸರಿದೆ,  ಇರಲಿ.   ಅನ್ನ ಆಯಿತು,  ಅನ್ನದೊಂದಿಗೆ ಯಾವ ವ್ಯಂಜನ?   ತೆಂಗಿನಕಾಯಿ ತುರಿದು,  ಅರೆದು,  ಮಸಾಲೆ ಹುರಿದು ಕೊಡಲು ನನಗೆಲ್ಲಿ ತಿಳಿದಿತ್ತು?   " ಪುಳಿಂಜಿ ಮಾಡುವಾ "  ಅಂದರು ಅಪ್ಪ.   ಉಪ್ಪು,  ಹುಳಿ,  ಬೆಲ್ಲಗಳನ್ನು ಒಂದು ತಪಲೆಯಲ್ಲಿ ಹಾಕಿಟ್ಟು,  ನೀರು ಎರೆದು ಗಿವುಚಿ,  ಎರಡು ನೀರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿದ್ರೆ ನಮ್ಮ ಪುಳಿಂಜಿ ಆಯ್ತು,  ಹಸಿಮೆಣಸೂ ಹಾಕ್ತಿದ್ದರು ನಮ್ಮಪ್ಪ.

                                               <><><>    <><><>

ಮದುವೆಯಾದ ಮೇಲೆ,  ಎರಡು ಮಕ್ಕಳೂ ಆದ ಮೇಲೆ ನನ್ನಮ್ಮ ಹಿರಣ್ಯಕ್ಕೆ ಬಿಡುವು ಮಾಡಿಕೊಂಡು ಆಗಾಗ್ಗೆ ಬರುವ ರೂಢಿ,  ಅಪ್ಪನೇ ಕಳಿಸ್ತಾ ಇದ್ದರು.   ದೂರವೇನಿಲ್ಲ,  ಜೀಪಿನಲ್ಲಿ ಬರಬೇಕಾದರೆ ಇಪ್ಪತ್ತು ನಿಮಿಷದ ಹಾದಿ.   " ಪೊಸಡಿಗುಂಪೆ ಗುಡ್ಡದಿಂದಾಗಿ ತುಸು ದೂರ ಹೆಚ್ಚು ನೋಡು...ನೇರ ಹಾದಿ ಇರುತ್ತಿದ್ದರೆ ಕೇವಲ ಏಳು ಮೈಲು ದೂರದೊಳಗೆ ಹೋಗಿ ಬಂದು ಮಾಡ ಬಹುದಾಗಿತ್ತು "  ಇದು ಅಪ್ಪನ ಲೆಕ್ಕಾಚಾರ.

ಅಮ್ಮ ಬಂದಿದ್ದಾಗ  " ನೀನು ಏನೇ ಹೇಳು ಅಮ್ಮಾ,  ನಂಗೆ ಅಡುಗೆ ಕಲಿಸಿದ್ದು ಅಪ್ಪನೇ .."

" ಹೌದು,  ಹೇಳಿ ಕೊಟ್ಟಿರ್ತಾರೆ ಪುಳಿಂಜಿ....ನಾನು ಟೀವಿ ನೋಡಿ ಬರೆದಿಟ್ಟಿರೂದು ಈ ಡೈರಿಯಲ್ಲಿದೆ,  ಒಂದು ಹೊಸಾ ಐಟಂ ಮಾಡೋಣ " ಅಂದರು ಹೊಸರುಚಿಗೆ ಸಿದ್ಧತೆ ನಡೆಸುತ್ತಾ.

ಟೀವಿ ನೋಡಿ ಹೊಸರುಚಿಗಳನ್ನು ಬರೆದಿಟ್ಟುಕೊಳ್ಳುವ ಅಮ್ಮನ ಚಾಳಿ ನನಗೂ ಅಂಟಿತು.  ಸಿಕ್ಕಾಪಟ್ಟೆ ಚಾನಲ್ಲುಗಳು ಲಭ್ಯವಿದ್ದುದರಿಂದ ಎಲ್ಲಾ ಭಾಷೆಯ ಅಡುಗೆ ನೋಡುವ ಗೀಳು ಹಿಡಿಯಿತು.   ಆಗ ಕನ್ನಡದಲ್ಲಿ ಟೀವಿ ಮಾಧ್ಯಮ ಪ್ರಾರಂಭಿಕ ಹಂತದಲ್ಲಿತ್ತು.  ಮಲಯಾಳಂನಲ್ಲಿ ಏಷಿಯಾನಟ್ ಪ್ರಭಾವಶಾಲೀ ಮಾಧ್ಯಮವಾಗಿ ಗುರುತಿಸಿಕೊಂಡಿತ್ತು.   ವೈವಿಧ್ಯಮಯ ಕಾರ್ಯಕ್ರಮಗಳೂ,   ಓಣಂ ಸಂದರ್ಭದಲ್ಲಿ ಬರುತ್ತಿದ್ದ ವಿಶೇಷ ಅಡುಗೆಗಳೂ.....ನೋಡುತ್ತಿದ್ದ ಹಾಗೆ ಒಬ್ಬ ಬಾಣಸಿಗ,  ಗೆರೆಗೆರೆಯ ಲುಂಗಿ ಉಟ್ಟಿದ್ದ,  ತಲೆಗೊಂದು ಅಂತಹುದೇ ಬೈರಾಸು ಸುತ್ತಿಕೊಂಡು ಸಾಮಾನ್ಯ ಮಲಯಾಳೀ ಉಡುಪಿನಲ್ಲಿ ಬಂದ,  ದೊಡ್ಡ ಕಟ್ಟಿಗೆಯ ಒಲೆ ಮೇಲೆ ಮತ್ತೂ ದೊಡ್ಡದಾದ ಕಂಚಿನ ಕಡಾಯಿ (ಉರುಳಿ) ಇಟ್ಟು ಮೇಲಿಂದ ಕೇಜಿಗಟ್ಲೆ ಉಪ್ಪು,  ಹುಳಿ,  ಬೆಲ್ಲಗಳನ್ನು ಸುರುವಿ,  ಧಾರಾಳವಾಗಿ ನೀರು ಎರೆದು ಕುದಿಸಿ,  ಪಾಕ ಬಂದ ದ್ರಾವಣಕ್ಕೆ ಡಬರಿಯಲ್ಲಿ ಕತ್ತರಿಸಿಟ್ಟುಕೊಂಡಿದ್ದ ಶುಂಠಿಯನ್ನೂ ಹಾಕಿದ.    ಪುನಃ ಗಳಗಳನೆ ಕುದಿಯಲಾರಂಭಿಸಿದ ಈ ರಸಪಾಕಕ್ಕೆ ಒಂದು ಒಗ್ಗರಣೆಯೂ ಬಿದ್ದಿತು,  ಅದೂ ಎಳ್ಳೆಣ್ಣೆಯೇ ಆಗಬೇಕು.   ಮರದ ಸೌಟಿನಲ್ಲಿ ಗೊಟಾಯಿಸುತ್ತಾ,  ಪಾಕವನ್ನು ಪರಿಶೀಲಿಸುತ್ತಾ  " ಇದಾಣ್ ಪುಳಿಂಜಿ..." ಅನ್ನುತ್ತಾ ಸೌಟಿನಿಂದ ತನ್ನ ಅಂಗೈಗೆ ಸುರಿದು ನೆಕ್ಕಿ ಬಾಯಿ ಚಪ್ಪರಿಸಿಯೇ ಬಿಟ್ಟ ಭೂಪ!   

" ಓ,  ನನ್ನಪ್ಪನ ಪುಳಿಂಜಿ ಇದು...."  ಟ್ಯೂಬ್ ಲೈಟ್ ಹೊತ್ತಿತು.

ಭರಣಿಯಲ್ಲಿ ಶೇಖರಿಸಿಟ್ಟು ಬೇಕಾದ ಹಾಗೆ ಉಪಯೋಗಿಸಿಕೊಳ್ಳಿ.   
ತಿಂಗಳುಗಟ್ಳೆ ಇಟ್ಟುಕೊಳ್ಳಿ,   ಏನೂ ಕೆಡುವುದಿಲ್ಲ.
ಒಗ್ಗರಣೆಗೆ ನಿಮಗಿಷ್ಟವಾದ ಉಪ್ಪಿನಕಾಯಿ ಮಸಾಲೆ ಹಾಕಿದ್ರೆ ಇನ್ನೂ ಚೆನ್ನಾಗಿರುತ್ತದೆ. 
ಪುಳಿಯೊಗರೆ ಥರ ದಿಢೀರ್ ರೈಸ್ ಬಾತ್ ಮಾಡಿಕೊಳ್ಳಬಹುದು.  
ಇನ್ನೂ ಏನೇನೋ ಮಾಡಬಹುದು,  ಎಲ್ಲವೂ ನಿಮ್ಮ ಕಲ್ಪನೆಯ ವ್ಯಾಪ್ತಿಗೆ ಬಿಟ್ಟಿದ್ದು.




Posted via DraftCraft app

Tuesday 10 September 2013

ವೃಕ್ಷ ಸಲ್ಲಾಪ





ನೆನಪಿನ ಭಿತ್ತಿಯಳಗೆ
ಮಲಗಿದ್ದ, ಮೆಲ್ಲಗೆದ್ದ ವೃಕ್ಷ
ವಟವೃಕ್ಷವಲ್ಲ
ಬೋಧಿವೃಕ್ಷವೂ ಅಲ್ಲ
ಕಾಸರಗೋಡಿನ ಮಹಾತ್ಮಾ ಗಾಂಧಿ ರಸ್ತೆ ಪಕ್ಕ
ನೆರಳು ನೀಡುತ್ತಿತ್ತೇನು
ವರ್ಷಕ್ಕೊಂದಾವರ್ತಿ ಭಾರೀ ಗಾತ್ರದ ಫಲ
ನೀಡುತ್ತಿತ್ತೇನು ಈ ಹಲಸು
ಆದರೇನು
ರಸ್ತೆಪಕ್ಕದ ಮರ
ವಿದ್ಯುತ್ ವಯರು, ರಸ್ತೆ ಅಗಲೀಕರಣ
ಏನೇನೋ ಕುಂಟು ನೆವನ
ಮಹಾನಗರಪಾಲಿಕೆ
ಕಡಿದು ಕೆಳಗುರುಳಿಸಿತೇನು
ಹೋಗಲಿ ಬಿಡು,
ಇರುವೆಯಲ್ಲ ಮನದಾಳದೊಳಗೆ
ಸದಾ ಹಸಿರು ಹಸಿರಾಗಿ |


ಯಾರಿಗಾಗಿ ಈ ಅರಣ್ಯರೋದನ
ಸಹಚರ ವಟವೃಕ್ಷ
ಮೊನ್ನೆ ಮೊನ್ನೆಯವರೆಗೆ
ಇದ್ದನಲ್ಲ
ಏನೇನೋ ವ್ಯಾಪಾರ ವಹಿವಾಟು
ಆಸರೆಯಾಗಿದ್ದನಲ್ಲ |

ಪತ್ರಿಕೆಗಳಲ್ಲಿ ದೀರ್ಘಲೇಖನ
ಬಂದಿತ್ತೇನು ಏನು ಕತೆ
ತಲೆಯೆತ್ತಿವೆಯಲ್ಲ ಗಗನಚುಂಬಿಗಳು
ನಾಗರೀಕ ಜಗತ್ತಿನ ಸೋಪಾನಗಳು
ಪರಿಸರ ರಕ್ಷಣೆಯ ಪ್ರಲಾಪ
ನಗರ ಸೌಂದರ್ಯದ ಆಲಾಪ
ಓ ಹಲಸೇ
ವಟವೃಕ್ಷವೇ ಬೇಡವಾಗಿರುವಲ್ಲಿ
ನೀನ್ಯಾವ ಲೆಕ್ಕ ಹೇಳು
ಮಾರ್ಜಾಲ ಹಿಡಿತದಲ್ಲಿ ನರಳಿದ
ಇಲಿಯಂತೆ
ಇರಬೇಕು ಇಲ್ಲದಿರಬೇಕು
ಆಟವಾಡಿಸಿದವರಾರ್
ನೆಲೆ - ಬೆಲೆಯಿಲ್ಲದಾಯಿತೇ ಪಶುಪಕ್ಷಿಗಳಿಗೆ
ಹೋಗಲಿ ಬಿಡು
ಇಂದು ಇದ್ದದ್ದು ನಾಳೆ ಇಲ್ಲಿಲ್ಲ
ಅದೋ ಅಲ್ಲಿ ನಮ್ಮನೆ
ಇತ್ತ ಹಾಗಿತ್ತಲ್ಲ
ಎಲ್ಲವೂ ಸುಮ್ಮನೆ |





ಟಿಪ್ಪಣಿ: ಇದು ಹೈಸ್ಕೂಲ್ ವಿದ್ಯಾಭ್ಯಾಸದ ದಿನಗಳಲ್ಲಿ ಕಾಸರಗೋಡಿನ ಮನೆಯ ಹಿತ್ತಿಲಲ್ಲಿ ಕುಳಿತು ರಸ್ತೆಪಕ್ಕದ ಮರವನ್ನು ಜಲವರ್ಣದಲ್ಲಿ ಬಿಡಿಸಿದ್ದಾಗಿದೆ. ಇಸವಿ 1972 - 73.

Posted via DraftCraft app