Pages

Ads 468x60px

Sunday 30 June 2019

ಕುಟಜಾ ಸಾರು











" ಮಳೆಗಾಲದ ಮಾವಿನಹಣ್ಣು ತಿನ್ನಲು ಇನ್ನೊಂದು ಉಪಾಯ ಉಂಟು.. " ಎಂದರು ಗೌರತ್ತೆ.

 ಮಳೆಗಾಲದ ಮಾವಿನಹಣ್ಣು ಅಂದರೆ ಅದೂ ಮರದಿಂದ ನೆಲಕ್ಕೆ ಉದುರಿ ಬಿದ್ದುದನ್ನು ಹೆಚ್ಚಿನವರು ತಿನ್ನಲು ಹಿಂಜರಿಯುತ್ತಾರೆ. ಹುಳಹುಪ್ಪಟಿಗಳ ಕಾಟ, ಕ್ರಿಮಿಕೀಟಗಳ ಬಾಧೆ, ಕಾಡುಪ್ರಾಣಿಗಳ ಧಾಳಿ... ಇವೆಲ್ಲ ಹಳ್ಳಿಯಲ್ಲಿ ವಾಸವಾಗಿರುವವರಿಗೆ ಮಾತ್ರ ಗೊತ್ತು. ಅನಾರೋಗ್ಯಕರ ಎಂದು ತಿನ್ನದಿರಲು ಆದೀತೇ.. ಅದಕ್ಕಾಗಿ ಗೌರತ್ತೆಯ ಮಾರ್ಗದರ್ಶನ ಇಲ್ಲಿ ಬಂದಿದೆ.

ಹಿರಣ್ಯದ ನಾಗಬನದ ಸಮೀಪ ಶ್ರೀದೇವಿ ಆಲಯದ ನಿರ್ಮಾಣ ಇತ್ತೀಚೆಗೆ ಆಯಿತು. ಕಾಡು ಗಿಡಗಂಟಿಗಳೂ, ಪೊದರುಗಳಿಂದಲೂ ಆವೃತವಾಗಿದ್ದ ಪ್ರದೇಶ ಸಮತಟ್ಟಾಗಿ ಮನುಷ್ಯ ಸಂಚಾರ ಯೋಗ್ಯವಾಗಿ ಪರಿವರ್ತಿತವಾಗಿದೆ. ಇಲ್ಲಿಯೇ ನಮ್ಮ ಸೊನೆ ಮಿಡಿಯ ಮಾವಿನ ಮರ ಇದೆ.        

" ದೇವರ ದರ್ಶನವೂ ಆಯ್ತು, ಮಾವಿನಹಣ್ಣು ಹೆಕ್ಕಿದ ಹಾಗೂ ಆಯ್ತು " ಎಂದು ಭಕ್ತ ಮಹನೀಯರೆಲ್ಲ ಮಾವಿನಹಣ್ಣು ಹೆಕ್ಕುವವರು. ಈ ವರ್ಷ ಮಾವಿನ ಮರದ ಬುಡದಲ್ಲಿ ಹುಳಕೀಟಗಳ ಬಾಧೆಯಿಲ್ಲ,. ಒಂದೇ ಒಂದು ಮಾವಿನ ವಾಟೆಯೂ ಮರದ ಬುಡದಲ್ಲಿ ಸಿಗಬೇಕಲ್ಲ!

" ಯಾರ ಕಣ್ಣಿಗೂ ಗೋಚರವಾಗದ ಈ ಮರ ದೈವಸಾನ್ನಿಧ್ಯದಿಂದ ಕೃತಾರ್ಥವಾಯಿತು.. " ಇದು ದೇವಾಲಯದ ರೂವಾರಿಯಾದ ನಮ್ಮೆಜಮಾನ್ರ ಅಂಬೋಣ.

 "...ಉಪಾಯ ಉಂಟು. " ಎನ್ನುತ್ತ ಬಂದ ಗೌರತ್ತೆ ಸೀರೆಯ ಸೆರಗಿನ ಕಟ್ಟು ಬಿಡಿಸಿ ಬೆಳ್ಳಗಿನ ಹೂವುಗಳನ್ನು ಟೇಬಲ್ ಮೇಲೆ ಹರವಿದರು.

"ಕೊಡಗಸನ ಹೂ ತಂದ್ರಾ.. ತಂಬುಳಿ ಮಾಡೂದ ಹೇಗೆ? "

" ಹೇಗೂ ಮಾವಿನಹಣ್ಣಿನ ಗೊಜ್ಜು ಮಾಡ್ತೀಯಲ್ಲ, ಈ ಅರಳಿದ ಹೂ, ಒಗ್ಗರಣೆ ಸಟ್ಟುಗದಲ್ಲಿ ಬಾಡಿಸಿ, ಬರೇ ಬಾಡಿಸಿದ್ರೆ ಸಾಲದು, ಹುರಿಯಬೇಕು... ಆ ಮೇಲೆ ನಿನ್ನ ಗೊಜ್ಜಿಗೆ ಹಾಕಿ ಅಲಂಕರಿಸುವುದು. "
" ಓ, ಸಾರು ಮಾಡೂದಾ, ತಂಬ್ಳಿ ಬೇಡ ಹಂಗಿದ್ರೆ.. "
" ಹೀಗೂ ಆಗುತ್ತೆ, ಕೊಡಗಸನ ಸಾರು ಅಂತ ಹೆಸರಿಟ್ಟರಾಯ್ತು. "

ಅಂತೂ ನನ್ನ ಬರವಣಿಗೆಯ ಥೀಮ್, ಡಯಲಾಗ್ ಎಲ್ಲವನ್ನೂ ಗೌರತ್ತೆಯೇ ಹೊಸೆದು ಕೊಟ್ಟರು.

ಮದ್ಯಾಹ್ನ ಉಣ್ಣುವ ಮೊದಲು ಗೊಜ್ಜು ಫೋಟೋ ತೆಗೆದೂ ಆಯಿತು.

ಗೊಜ್ಜು ಮಾಡಿದ್ದು ಹೇಗೆ?

ಎರಡು ಮಾವಿನಹಣ್ಣುಗಳನ್ನು ತೊಳೆದು,
ತೊಟ್ಟು ಸಿಪ್ಪೆ ತೆಗೆದು,
ಸಿಪ್ಪೆ ಹಾಗೂ ಗೊರಟು ಸಹಿತವಾಗಿ,
ಎರಡು ಲೋಟ ನೀರೆರೆದು,
ಗಿವುಚುವುದೇನೂ ಬೇಡ,
ರುಚಿಗೆ ಉಪ್ಪು ಮತ್ತು ಒಂದು ಅಚ್ಚು ಬೆಲ್ಲ ಇರಲಿ,
ಕುದಿಸಿ ಕೆಳಗಿಳಿಸುವುದು.

ಸಿಪ್ಪೆಯೂ ಆರೋಗ್ಯಕರ ಹಾಗೂ ಬೇಯಿಸಿದ ಕಾಟ್ ಮಾವಿನ ಸಿಪ್ಪೆಯೂ ರುಚಿಕರ.

ಒಗ್ಗರಣೆಗೆ ತುಪ್ಪ, ಸಾಸಿವೆ, ಒಣಮೆಣಸು.
ಸಾಸಿವೆ ಸಿಡಿಯಲುಆರಂಭವಾದಾಗ ಕೊಡಗಸನ ಹೂಗಳನ್ನು ಹಾಕಿ, ಚೆನ್ನಾಗಿ ಕಂದು ಬಣ್ಣ ಬರುವ ತನಕ ಹುರಿದು ಹಾಕುವುದು.

ಈ ಸಾರು/ಗೊಜ್ಜು ರಾತ್ರಿಯೂಟಕ್ಕೆ ಉಳಿಯಲಿಲ್ಲವೆಂದು ಬೇರೆ ಹೇಳಬೇಕಾಗಿಲ್ಲ.

ಕೊಡಸಿಗೆ, ಕೊಡಗಸನ, ಎಂದು ರೂಢಿಯಾಗಿ ಕರೆಯಲ್ಪಡುವ ಈ ಸಸ್ಯ ವರ್ಗ ನಂದಿಬಟ್ಟಲು ಹೂವಿನ ಕುಟುಂಬಕ್ಕೆ ಸೇರಿದುದಾಗಿದೆ. ಬೆಟ್ಟಗುಡ್ಡಗಳಲ್ಲಿ ಕಾಣಸಿಗುವ ಕುಟಜ ವೃಕ್ಷವನ್ನು ಸಂಸ್ಕೃತದ ಕಾವ್ಯಭಾಷೆ ಗಿರಿಮಲ್ಲಿಕಾ ಎಂದಿದೆ. ನಮ್ಮೂರಿನ ಆಡುಮಾತು ತುಳುವಿನಲ್ಲಿ ಕೊಡಂಚಿ. ಕುಟಜವನ್ನು ಆಯುರ್ವೇದವು ಔಷಧೀಯ ಸಸ್ಯವೆಂದು ಪರಿಗಣಿಸಿದೆ, ಕುಟಜಾ ತಂಬುಳಿ ಎಂಬ ಬ್ಲಾಗ್ ಬರಹದಲ್ಲಿ ಸಾಕಷ್ಟು ವಿವರಣೆಗಳನ್ನು ಬರೆದಿದ್ದೇನೆ.
 ಹೊಟ್ಟೆಯುಬ್ಬರಿಸುವಿಕೆ, ಹುಳಿತೇಗು, ಜೀರ್ಣಕ್ರಿಯೆ ಸರಿಯಿಲ್ಲದಿರುವಿಕೆ ಇತ್ಯಾದಿ ಜಠರ ಸಂಬಂಧಿ ತೊಂದರೆಗಳಿಗೆ ಕುಟಜಾರಿಷ್ಠವನ್ನು ಮನೆಯಲ್ಲಿ ತಂದಿಟ್ಟುಕೊಳ್ಳದವರಿಲ್ಲ.

ಸಸ್ಯವಿಜ್ಞಾನವೂ ಕುಟಜ ವೃಕ್ಷವನ್ನು ಆ್ಯಂಟಿಡೀಸೆಂಟ್ರಿಕಾ ಎಂದು ಕೊಂಡಾಡುತ್ತ Holarrhena antidysenterica ಎಂಬ ಹೆಸರನ್ನೂ ಕೊಟ್ಟಿರುತ್ತದೆ.



Sunday 23 June 2019

ಮಾವಿನ ಹಣ್ಣಿನ ದಪ್ಪ ದೋಸೆ  









ಮಾವಿನ ಹಣ್ಣಿನ ತೆಳ್ಳವು ತಿನ್ನುತ್ತ, " ನಾಳೆಯೂ ಇದೇ ದೋಸೆ ಆದೀತು.. " ಅಂದರು ಗೌರತ್ತೆ.

" ದಿನಾ ನೀರ್ ತೆಳ್ಳವು ಬೇಡ.. "

" ಬೇಡಾಂದ್ರೆ ಬೇಡ, ಮಾವಿನ ಹಣ್ಣು ಹಾಕಿಯೇ ಮೆಂತೆ ದೋಸೆ ಮಾಡಿ ನೋಡಿದ್ರಾಯ್ತು.. " ನನ್ನ ಸಮಜಾಯಿಷಿ ಬಂದಿತು.

ಅಡುಗೆಯ ಈ ಹೊಸ ಪ್ರಯೋಗದಲ್ಲಿ 2 ಚಮಚ ಮೆಂತೆ ಮುಂಜಾನೆಯೇ ನೆನೆ ಹಾಕಲ್ಪಟ್ಟಿತು.
2 ಲೋಟ ಬೆಳ್ತಿಗೆ ಅಕ್ಕಿಯೂ ನೀರಿನಲ್ಲಿ ನೆನೆದು ಮೈ ತೊಳೆದುಕೊಂಡಿತು.
ಅರ್ಧ ಕಡಿ ತೆಂಗಿನತುರಿ ಎದುರಾಯಿತು.
ಸಂಜೆಯ ಹೊತ್ತು ಇನ್ನಷ್ಟು ಮಾವಿನಹಣ್ಣುಗಳು ತೋಟದಿಂದ ಆಗಮಿಸಿದುವು.
ಏಳೆಂಟು ಪುಟ್ಟ ಪುಟ್ಟ ಹಣ್ಣುಗಳನ್ನು ತೊಳೆದು ತೊಟ್ಟು ತೆಗೆದು, ಸಿಪ್ಪೆ ಬಿಡಿಸಿ, ರಸ ತೆಗೆದಿಟ್ಟಾಯ್ತು.

ಮೆಂತೆ ನುಣ್ಣಗಾದಷ್ಟೂ ಒಳ್ಳೆಯದು, ಮೊದಲು ಮೆಂತೆಯನ್ನು ತೆಂಗಿನತುರಿಯೊಂದಿಗೆ ತುಸು ನೀರೆರೆದು ಅರೆಯುವುದು.
ಸಾಕಷ್ಟು ನುಣ್ಣಗಾದ ನಂತರ ಅಕ್ಕಿ ಹಾಗೂ ಮಾವಿನಹಣ್ಣಿನ ರಸ ಹಾಕಿಕೊಂಡು ಅರೆಯುವುದು.
ಬೇಕೆನಿಸಿದರೆ ನೀರು ಎರೆಯಬಹುದಾಗಿದೆ.
ಹುದುಗು ಬರಲಿಕ್ಕಾಗಿ 7 - 8 ಗಂಟೆಗಳ ಕಾಲ ಮುಚ್ಚಿ ಇರಿಸುವುದು.
ರುಚಿಗೆ ತಕ್ಕಷ್ಟು ಉಪ್ಪು ಹಾಕುವುದು.
ಸಿಹಿಪ್ರಿಯರು ಒಂದು ತುಂಡು ಬೆಲ್ಲವ್ನೂ ಹಾಕಬಹುದು, ಬೆಲ್ಲ ಹಾಕಿದ ದೋಸೆ ಕಪ್ಪು ಕಪ್ಪಾಗಿ ಬರುವುದರಿಂದ ನಾನು ಹಾಕಿಲ್ಲ.
ಮಾರನೇ ಮುಂಜಾನೆ ಮಾವಿನ ಹಣ್ಣಿನ ದೋಸೆ ಬ್ರೆಡ್ ನಂತೆ ಉಬ್ಬಿ ಬಂದಿತು.
ಎಣ್ಣೆ ಸವರಿದ ತವಾ ಬಿಸಿಯೇರಿದ ನಂತರ ಒರೆಸಿ ತೆಗೆಯಿರಿ, ಒಂದು ಸೌಟು ಹಿಟ್ಟು ಎರೆದು, ಸೌಟಿನಲ್ಲಿ ತುಸು ಹರಡಿ, ಮುಚ್ಚಿ ಬೇಯಿಸಿ, ತುಪ್ಪ ಎರೆದು ಕವುಚಿ ಹಾಕಿ.
ಪುನಃ ದೋಸೆ ಎರೆಯುವಾಗ ತವಾ ಒರೆಸಿಕೊಳ್ಳತಕ್ಕದ್ದು.

ತೆಂಗಿನಕಾಯಿ ಚಟ್ಣಿ ಹಾಗೂ ಫಿಲ್ಟರ್ ಕಾಫಿಯೊಂದಿಗೆ ಈ ವಿಶೇಷವಾದ ಮ್ಯಾಂಗೋ ದೋಸೆ ಸವಿಯುವ ಭಾಗ್ಯ ನಮ್ಮದಾಗಿದೆ.



Thursday 20 June 2019

ಮಾವಿನಹಣ್ಣಿನ ತೆಳ್ಳವು







ಈ ಬಾರಿ ತೋಟದಲ್ಲಿ ಮಾವಿನಕಾಯಿಗಳು ಇದ್ದರೂ ಸಕಾಲಕ್ಕೆ ಕೊಯ್ಯಲು ಸಾಧ್ಯವಾಗದೆ ಮಿಡಿ ಉಪ್ಪಿನಕಾಯಿ ಹಾಕಲಾಗಲಿಲ್ಲ, ಮಗಳ ಮದುವೆಯ ಭರಾಟೆಯಲ್ಲಿ ನಾವೆಲ್ಲ ಬ್ಯುಸಿ ಆಗಿದ್ದುದೂ ಒಂದು ಕಾರಣ ಅನ್ನಿ. ಒಳ್ಳೆಯ ಸೊನೆ ಮಿಡಿ ಮಾವಿನಕಾಯಿ ಈಗ ಮಳೆಗಾಲ ಬಂದ ಮೇಲೆ ಹಣ್ಣಾಗಿ ಬೀಳಲು ಪ್ರಾರಂಭವಾಗಿದೆ. ಹುಳಿಸಿಹಿ ರುಚಿ, ಪುಟ್ಟ ಪುಟ್ಟ ಹಣ್ಣುಗಳು, ತೊಟ್ಟಿನಲ್ಲಿ ಒಸರುವ ಸೊನೆಯೂ ಸೇರಿ ಮನೆ ತುಂಬ ಹಣ್ಣಿನ ಘಮಲು. " ಸೊನೆ ಹೋಗುವಷ್ಟೂ ತೊಳೆದು ತಿನ್ನಬಹುದು.. " ಗೌರತ್ತೆಯ ಡಿಕ್ಲೇರೇಶನ್ ಬಂದಿತು.

ಈ ಪ್ರಕಾರವಾಗಿ ಮಾವಿನ ಹಣ್ಣುಗಳ ರಸರುಚಿಯ ಯೋಗ.
ದಿನವೂ ಗೊಜ್ಜು ಸಾಸಮೆ ತಿಂದು ತಿಂದೂ, ದೋಸೆ ಮಾಡುವ ಸ್ಪೂರ್ತಿ ಬಂದಿತು.

2 ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ನೆನೆಸಿ, ತೊಳೆದು ಇಡುವುದು.
7 - 8 ಮಾವಿನಹಣ್ಣುಗಳ ರಸ ತೆಗೆದಿರಿಸುವುದು.
ಅರ್ಧ ತೆಂಗಿನಕಾಯಿ ತುರಿದು,
ಎಲ್ಲವನ್ನೂ ನುಣ್ಣಗೆ ಅರೆಯುವುದು.
ರುಚಿಗೆ ತಕ್ಕಷ್ಟು ಉಪ್ಪು ಹಾಕುವುದು.

 ತೆಳ್ಳವು ಹಿಟ್ಟು ಹುಳಿ ಬರುವಂತಿಲ್ಲ, ಕೂಡಲೇ ಎರೆಯಬೇಕು, ಇಲ್ಲವೇ ತಂಪು ಜಾಗದಲ್ಲಿರಿಸುವುದು ಸೂಕ್ತ.
ದೋಸೆಯ ಹಿಟ್ಟು ಹೇಗಿರಬೇಕು?
ನೀರು ನೀರಾಗಿರಬೇಕು.
ನಾವು 2 ಲೋಟ ಅಕ್ಕಿ ಹಾಕಿರೋದ್ರಿಂದ 4 ಲೋಟ ನೀರು ಅವಶ್ಯ, ( ಮಾವಿನ ಹಣ್ಣಿನ ರಸವೂ ಸೇರಿ )

ಯಾವುದೇ ತವಾ ಉಪಯೋಗಿಸಿದರೂ ನೀರುದೋಸೆ ಎರೆಯುವಾಗ ತವಾ ಎಣ್ಣೆಣ್ಣೆಯಾಗಿದ್ದರೆ ದೋಸೆ ಚೆನ್ನಾಗಿ ಎದ್ದು ಬರುವುದು, ಇಲ್ಲದಿದ್ದರೆ ದೋಸೆ ಒಣಕಲಾಗಿ ಸತ್ವಹೀನವಾಗಿರುತ್ತದೆ ಎಂದು ತಿಳಿದಿರಲಿ.

ಬಿಸಿಯೇರಿದ ಕಾವಲಿಯ ಮೇಲೆ ಹಾರಿಸಿ ದೋಸೆ ಎರೆಯಿರಿ. ಅದು ಸಾಧ್ಯವಾಗದಿದ್ದರೆ ಲೋಟದಲ್ಲಿ ವೃತ್ತಾಕಾರವಾಗಿ ಎರೆದು ಕಾವಲಿ ಹಂಚನ್ನು ಅತ್ತಿತ್ತ ಆಡಿಸಿ ಹಿಟ್ಟು ಎಲ್ಲ ಕಡೆಯೂ ಹರಡಿಕೊಳ್ಳುವಂತೆ ಮಾಡಿದರಾಯಿತು. ಮುಚ್ಚಿ ಬೇಯಿಸಿ. ತುಪ್ಪ ಎರೆದು ಸಟ್ಟುಗದಲ್ಲಿ ಏಳಿಸಿ ತಟ್ಟೆಗೆ ಹಾಕಿ ಮಡಚಿ ಇಡುವುದು. ಹಾಗೇನೇ ಒಂದರ ಮೇಲೊಂದು ಮಡಚಿಟ್ಟಲ್ಲಿ ದೋಸೆಗಳು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ತಪಲೆಯ ಹಿಟ್ಟು ಒಂದೇ ಪ್ರಕಾರವಾಗಿರಲು ಆಗಾಗ ಸೌಟಿನಲ್ಲಿ ಕೆದಕುತ್ತ ಇರಬೇಕು. ಇಲ್ಲವಾದರೆ ಹಿಟ್ಟೆಲ್ಲವೂ ತಳ ಸೇರಿ ನೀವು ಕೇವಲ ನೀರನ್ನು ಎರೆಯುವಂತಾದೀತು. ಇದು ತೆಳ್ಳವು ಎಂಬ ನೀರುದೋಸೆಯ ಗುಟ್ಟು, ತಿಳಿಯಿತಲ್ಲ.

ಬೆಲ್ಲದ ಪಾಕ, ತೆಂಗಿನತುರಿಗೆ ಬೆಲ್ಲ ಬೆರೆಸಿದಂತಹ ಬೆಲ್ಲಸುಳಿ, ಖಾರದ ಕಾಯಿಚಟ್ನಿ ಹಾಗೂ ಮೊಸರು, ತೆಳ್ಳವು ತಿನ್ನಲು ಇರಬೇಕು.

ಮಾವಿನಹಣ್ಣು ಇಲ್ಲವೆಂದು ಬೇಸರಿಸದಿರಿ. ಕೇವಲ ಅಕ್ಕಿಯೊಂದು ಇದ್ದರೆ ಸಾಕು, ಕಾಯಿತುರಿ ಹಾಕದಿದ್ದರೂ ನಡೆಯುತ್ತದೆ, ತೆಳ್ಳವು ಎರೆಯಲು ತಿಳಿದಿದ್ದರಾಯಿತು.

Monday 10 June 2019

ರೈಸ್ ಕುಕ್ಕರ್ ಅನ್ನ









ವಿದ್ಯುತ್ ಚಾಲಿತ ರೈಸ್ ಕುಕ್ಕರ್ ಹೊಸ ಉಪಕರಣವೇನೂ ಅಲ್ಲ, ಮೈಕ್ರೋವೇವ್ ಅಡುಗೆಯ ಯಂತ್ರದಂತೆ ರೈಸ್ ಕುಕ್ಕರ್ ಕೂಡಾ ನನ್ನ ಬಳಿ ಇದ್ದಿತು. ಗದ್ದೆ ಬೇಸಾಯವೂ ಇದ್ದುದರಿಂದ ಮನೆಯಲ್ಲಿ ಎಲ್ಲರೂ ಕುಚ್ಚುಲಕ್ಕಿ ಪ್ರಿಯರು. ಹಬ್ಬ ಹರಿದಿನಗಳಂದು ಮಾತ್ರ ಮಸೂರಿ ಅಕ್ಕಿಯ ಅನ್ನ ಮಾಡುವ ರೂಢಿ ಇಟ್ಕೊಂಡಿದ್ದೆವು. ಒಂದು ಸೇರಕ್ಕಿ ಬೇಯುವಷ್ಟು ದೊಡ್ಡದಾದ ರೈಸ್ ಕುಕ್ಕರ್ ವಿಶೇಷ ಸಂದರ್ಭಗಳಲ್ಲಿ ಉಪಯೋಗಕ್ಕೆ ಸೀಮಿತವಾಗಿತ್ತು. ಇಂತಹ ರೈಸ್ ಕುಕ್ಕರ್ ನನ್ನ ಅಡುಗೆಯ ಪ್ರಯೋಗಗಳಿಗೆ ಒಳಪಟ್ಟು ಇಡ್ಲಿ, ಅಕ್ಕಿ ಪುಂಡಿ, ಕೊಟ್ಟಿಗೆ, ಸಾಂಬಾರು ಪದಾರ್ಥಗಳ ತಯಾರಿಯಲ್ಲೂ "ಭಲೇ.. ಭಲೇ.. " ಅನ್ನುವಷ್ಟರ ಮಟ್ಟಿಗೆ ಗೆದ್ದು, ಕೊನೆಗೊಂದು ದಿನ ಸೋತು ಸುಣ್ಣವಾಗಿ ಮೂಲೆ ಸೇರಿದ್ದು ಇತಿಹಾಸ. ಇಲೆಕ್ಟ್ರಿಕ್ ಅಸ್ತ್ರಗಳ ಸಂಗತಿ ಇಷ್ಟೇ, ಹೋಗ್ಲಿ ಬಿಡಿ... ಅಟ್ಟಕ್ಕೆ ಹೋಯ್ತು.

ಇತ್ತೀಚೆಗೆ ಏನಾಯ್ತೂ ಅಂದರೆ, ಮಗಳು ಮದುವಣಗಿತ್ತಿಯಾಗಿ ಹೊಸಮನೆಗೆ ಪ್ರವೇಶಿಸುವ ಮೊದಲು, ಸ್ವಯಂಪಾಕ ಮಾಡುತ್ತ ಬೆಂಗಳೂರಿನಲ್ಲಿ ಉದ್ಯೋಗಸ್ಥೆಯಾಗಿದ್ದವಳು, ತನ್ನ ಬಳಿಯಿದ್ದ ಅಡುಗೆ ಉಪಕರಣಗಳನ್ನೆಲ್ಲ ತಂದಿದ್ದಾಳೆ. " ಇದನ್ನೆಲ್ಲ ನೀನೇ ಇಟ್ಕೋ... "

ಬಟ್ಟಲು ಲೋಟಗಳು, ಬಕೇಟು ಪಾಟೆಗಳು ಬಣ್ಣದ ಡಬ್ಬಿಗಳು, ಮಿಕ್ಸೀ ಯಂತ್ರ, ಕುಕ್ಕರು, ಇಲೆಕ್ಟ್ರಿಕ್ ರೈಸ್ ಕುಕ್ಕರ್, ಐರನ್ ಬಾಕ್ಸ್, ಲಟ್ಟಣಿಗೆ ಸೌಟು ಚಮಚಗಳು, ತಪಲೆ ಬಾಣಲೆ ಇತ್ಯಾದಿಯಾಗಿ ಪಾತ್ರೆಪರಡಿಗಳು ಅಡುಗೆ ಮನೆ ತುಂಬ ಹರಡಿಕೊಂಡವು.

" ಇದನ್ನೆಲ್ಲ ಏನೇ ಮಾಡ್ಲೀ.. "
" ಅಟ್ಟದಲ್ಲಿ ಇಡಬೇಡ, ಏನೇನೋ ದೇವರ ಕಾರ್ಯಕ್ರಮ ಇರುತ್ತಾವಲ್ಲ, ಆಗ ಅಡುಗೆ ಭಟ್ಟರಿಗೆ ಕೊಡಲಿಕ್ಕೆ ಬೇಕಾದೀತು. "

ಅವಳು ಅಂದಂತೆ ಮೊನ್ನೆ ಗ್ಯಾಸ್ ಮುಗಿದಿತ್ತು.
" ಯಾಕೇ ಗ್ಯಾಸ್ ಗ್ಯಾಸ್.. ಅಂತ ಹೋರಾಟ ಮಾಡ್ತೀಯ, ರೈಸ್ ಕುಕ್ಕರ್ ಬಂತಲ್ಲ, ಅದರಲ್ಲೇ ಅಡುಗೆ ಮಾಡು.. " ಅನ್ನುವುದೇ ನಮ್ಮೆಜಮಾನ್ರು!

ಮಗಳು ತಂದ ರೈಸ್ ಕುಕ್ಕರ್ ಪುಟ್ಟದು, " ಒಂದು ಪಾವು ಅಕ್ಕಿಯ ಅನ್ನ ಆದೀತು.. "
" ಸಾಕು, ರಾತ್ರಿಗೆ ಪುನಃ ಮಾಡಿದ್ರಾಯ್ತು... " ಟೀವಿ ಮುಂದೆ ಆಸೀನರಾಗಿದ್ದ ಗೌರತ್ತೆಯ ಸಮಾಧಾನದ ಮಾತು ತೇಲಿ ಬಂದಿತು.
" ಹಾಗಂತೀರಾ, ಸರಿ ಬಿಡಿ.. " ರೈಸ್ ಕುಕ್ಕರಲ್ಲೇ ಅನ್ನ ಮಾಡೋಣ.
ಈಗ ಸೋಲಾರ್ ವಾಟರ್ ಹೀಟರ್ ಮನೆಗೆ ಬಂದಿದೆ, ಅದರಿಂದ ಧುಮ್ಮಿಕ್ಕುವ ಕುದಿಯುವ ನೀರನ್ನೇ ರೈಸ್ ಕುಕ್ಕರೊಳಗೆ ಎರೆದು ಪ್ಲಗ್ ಸಿಕ್ಕಿಸಿ ಇಟ್ಟಾಯ್ತು. ತಣ್ಣಗಿನ ನೀರು ಕುದಿಯಲು ರೈಸ್ ಕುಕ್ಕರಿಗೆ ತುಂಬ ಸಮಯ ಬೇಕಾಗುವುದರಿಂದ ಈ ಉಪಾಯ ಅನುಸರಿಸಬೇಕಾಯಿತು, ಇರಲಿ.

" ಎಷ್ಟು ನೀರು ಎರೆದದ್ಜು? ಅಕ್ಕಿಯ ಅಳತೆಯೆಷ್ಟು? "
ಒಂದು ಪಾವು ಅಕ್ಕಿ ಅಂದರೆ 250 ಗ್ರಾಂ ಎಂದು ತಿಳಿಯಿರಿ. ಒಂದು ಲೋಟ ಅಕ್ಕಿ ಬೇಯಲು ಮೂರು ಲೋಟ ನೀರು ಇರಬೇಕು.

ಈಗ ನಾವು ಒಂದು ಲೋಟ ಸೋನಾ ಮಸೂರಿ ಯಾ ಗಂಧಸಾಲೆ ಅಕ್ಕಿ ಅಳೆದು, ತೊಳೆದು, ನೀರು ಬಸಿದು ಕುದಿಯುತ್ತಿರುವ ನೀರಿಗೆ ಹಾಕುವುದು. ಒಮ್ಮೆ ಸೌಟಾಡಿಸಿ, ಮುಚ್ಚಿ. " ಇದರ ಕ್ರಮ ನಾವು ಒಲೆಯಲ್ಲಿ ಅಡುಗೆ ಮಾಡುವ ಹಾಗೇ ಇದೆಯಲ್ಲ.. " ಗೌರತ್ತೆಯ ಅಚ್ಚರಿ.
" ಹೌದು. ನೀರು ಆರಿದ ಕೂಡಲೇ ಅಟೋಮ್ಯಾಟಿಕ್ ಆಫ್ ಆಗ್ತದೆ.. "

ಇಲ್ಲಿ ನಾವು ಗಮನಿಸಬೇಕಾದ್ದು ಏನಪ್ಪಾ ಅಂದರೆ ತನ್ನ ಪಾಡಿಗೆ ಅನ್ನ ಮಾಡಿಕೊಡುತ್ತೆ ಎಂದು ಸುಮ್ಮನಿರಬಾರದು. ನೀರೆಲ್ಲವೂ ಆರಿ, ಅಕ್ಕಿಯಲ್ಲಿರುವ ಸ್ಟಾರ್ಚ್ ಕೂಡಾ ತಳ ಸೇರಿ ಪಾತ್ರೆಯು ತಳ ಹಿಡಿದಂತಾಗಬಾರದು, ನಾವು ಒಣಕಲು ಅನ್ನ ತಿಂದ ಹಾಗೆ ಆಗಕೂಡದು. ಅನ್ನ ಬೆಂದಂತೆ ಸುವಾಸನೆ ಬರಲು ಪ್ರಾರಂಭ, ಈ ಹಂತದಲ್ಲಿ ಒಮ್ಮೆ ಮುಚ್ಚಳ ತೆರೆದು ನೋಡುವ ಅವಶ್ಯಕತೆ ಇದೆ, ನೀರು ಬಹುಪಾಲು ಆರಿ ಅನ್ನ ಬೆಂದಿದೆಯಾಗಿದ್ದರೆ ನಾವೇ ಪ್ಲಗ್ ತೆಗೆದಿರಿಸುವುದು ಸೂಕ್ತ.

" ಹೌದು ಮತ್ತೇ, ಒಲೆಯ ಅಡುಗೆಯಲ್ಲೂ ಅನ್ನ ಚೆನ್ನಾಗಿ ಬೇಯಲು ಬಿಡಲಿಕ್ಕಿಲ್ಲ, ಗಂಜಿ ನೀರು ಬಗ್ಗಿಸಿ, ಪುನಃ ಅನ್ನದ ತಪಲೆಯನ್ನು ಕೆಂಡದ ಬಿಸಿ ಇರುವ ಒಲೆ ಮೇಲೆ ಬೆಚ್ಚಗೆ ಇರಿಸುವುದು, ಅಲ್ಲಿಗೇ ಬೇಯುತ್ತೆ... ಉಣ್ಣುವ ಹೊತ್ತಿಗೆ ಆನ್ನ ಆರಿ ತಂಗಳಾಗಬಾರದು. " ಗೌರತ್ತೆಯ ಅಡಿಟಿಪ್ಪಣಿ ಬಂದಿತು.