ಲಿಂಬೆ ಜಾತಿಗೆ ಸೇರಿದ ಹಣ್ಣುಗಳಲ್ಲಿ ಬೃಹತ್ ಗಾತ್ರದ ಮಾದಲ ಹುಳಿ, ಸಂಸ್ಕೃತದಲ್ಲಿ ಮಹಾಫಲವೆನಿಸಿದೆ, ನಮ್ಮ ಆಡುನುಡಿಯಲ್ಲಿ ಮಾಪಲ, ಮಾಬಲ, ಮಾದಲ ಹಣ್ಣು. ಆಯುರ್ವೇದವು ಔಷಧೀಯ ಸಸ್ಯವೆಂದಿದೆ, ಹಾಗಾಗಿ ಇದು ವೈಜ್ಞಾನಿಕ ಪರಿಭಾಷೆಯಲ್ಲಿ citrus medica ಎಂದೆನಿಸಿದೆ. ಆಂಗ್ಲ ಭಾಷೆಯಲ್ಲಿ citron ಎನ್ನಲಾಗುವ ಈ ಹಣ್ಣಿನ ಮೂಲ ನಮ್ಮ ಭರತ ಖಂಡ. ಲಿಂಬೆ ಪ್ರಬೇಧಕ್ಕೆ ಸೇರಿದ ಬಹುತೇಕ ಎಲ್ಲ ಸಸ್ಯಗಳ ತವರು ಭಾರತವೇ ಆಗಿದೆ.
ಮುಸುಂಬಿ ಕಿತ್ತಳೆಗಳ ಸಿಪ್ಪೆ ಸುಲಿದು ರಸಭರಿತ ಹಣ್ಣನ್ನು ತಿನ್ನಲಾಗುವಂತೆ ಇದನ್ನು ತಿನ್ನಲಾಗದು. ಅಂತಹ ರಸಸಾರವು ಇದರಲ್ಲಿ ಇಲ್ಲ. ಸಿಪ್ಪೆಗೆ ಅಂಟಿಕೊಂಡಂತಿರುವ ಬಿಳಿ ಬಣ್ಣದ ತಿರುಳು ಮಾತ್ರ ತಿನ್ನಲು ಯೋಗ್ಯ. ಅದೂ ಸೌತೆಕಾಯಿಯ ಹೋಳು ಮಾಡುವಂತೆ, ಸಿಪ್ಪೆಯನ್ನು ತೆಳ್ಳಗೆ ಹೆರೆದು ತೆಗೆದು, ಒಂದೇ ಗಾತ್ರದ ತುಂಡು ಮಾಡಿಟ್ಟು ತಿನ್ನಬಹುದು, ಸಕ್ಕರೆ ಬೆರೆಸಿ ತಿನ್ನಲು ಇನ್ನೂ ರುಚಿಕರ.
ಸತ್ಯನಾರಾಯಣ ಪೂಜಾ ವಿಧಿಯಲ್ಲಿ ಈ ಹಣ್ಣಿಗೆ ಬಲು ಬೇಡಿಕೆ. ಬೃಹತ್ ಗಾತ್ರದ ಒಂದು ಹಣ್ಣು ಇದ್ದರೆ ಸಾಕು, ಪ್ರಸಾದ ರೂಪದಲ್ಲಿ ವಿನಿಯೋಗಿಸಲು ಅನುಕೂಲ. ಪ್ರಕೃತಿಯ ಶುದ್ಧ ವಾತಾವರಣದಲ್ಲಿ ಸಿಗುವ ಏಕೈಕ ಫಲ ಇದೊಂದೇ ಆಗಿದೆ.
ಮಾದಲ ಹಣ್ಣಿನಲ್ಲಿ ಬೀಜಗಳು ಇರುವುದಾದರೂ ಪುನರುತ್ಪಾದನೆ ಬೇರಿನಿಂದಲೇ ಆಗುವಂತಹುದು, ಸಸ್ಯ ಬೆಳೆದಂತೆ ಬೇರು ನೆಲದಾಳದಿಂದಲೇ ಹೊಸ ಸಸ್ಯವನ್ನು ಧರೆಗೆ ತರುತ್ತದೆ. ತಂಪು ವಾತಾವರಣ, ನೀರಿನ ಆಸರೆ, ವಿಶಾಲವಾಗಿ ಹಬ್ಬಿ ಹರಡಲು ಸಾಕಷ್ಟು ಜಾಗವೂ ಈ ಸಸ್ಯಕ್ಕೆ ಅತೀ ಅಗತ್ಯ. ಮಾದಲ ಗಿಡದ ಸುತ್ತಮುತ್ತ ತಿರುಗಾಡಲೂ ಖುಷಿ, ಎಲೆಗಳ ಕಂಪಿನ ಪರಿಮಳವೂ ಉಲ್ಲಾಸದಾಯಕ. ಸದಾಕಾಲವೂ ಹಚ್ಚಹಸಿರಾದ ಎಲೆಗಳಿಂದ ತುಂಬಿರುವ ಮಾದಲದ ಪೊದರುಗಳೆಂಡೆಯಿಂದ ತೂರಿ ಬರುವ ಗಾಳಿಯೂ ಆರೋಗ್ಯವರ್ಧಕ.
ಸುವಾಸನೆಯ ಎಲೆಗಳನ್ನು ಕುದಿಸಿ ಹರ್ಬಲ್ ಟೀ ಕುಡಿಯಿರಿ, ಗಂಟಲ ಕಿರಿಕಿರಿ ಹಾಗೂ ಚಳಿಗಾಲದ ಶೀತಹವೆಯನ್ನು ಎದುರಿಸಲು ಸಜ್ಜಾಗಿರಿ.
ವಿಟಮಿನ್ ಸಿ ಹೊಂದಿರುವ ಹಣ್ಣು ಮಾದಲ, ಪಿತ್ತಶಾಮಕ, ಬಾಯಿರುಚಿ ಹೆಚ್ಚಿಸುವಂತಾದ್ದೂ ಆಗಿರುತ್ತದೆ.
ಊಟವಾದ ನಂತರ ಮಜ್ಜಿಗೆ ನೀರು ಕುಡಿಯುತ್ತೀರಾ, ಮಾದಲದ ಎಲೆಯೊಂದನ್ನು ಗಿವುಚಿ ಹಾಕಿಕೊಳ್ಳಿ, ಮಜ್ಜಿಗೆ ಕುಡಿಯುವ ಸುಖ ತಿಳಿಯಿರಿ, ಭೂರಿಭೋಜನ ಉಂಡ ನಂತರ ಜೀರ್ಣಕ್ಕೂ ಈ ಮಜ್ಜಿಗೆ ಉತ್ತಮ.
ಕೆಮ್ಮು, ಸಂಧಿವಾತ, ಮೂಲವ್ಯಾಧಿ, ಚರ್ಮರೋಗಗಳು ಹಾಗೂ ದೃಷ್ಟಿಮಾಂದ್ಯತೆಯಂತಹ ಶರೀರವ್ಯಾಧಿಗಳಿಗೆ ಆಯುರ್ವೇದವು ಮಾದಲವನ್ನು ಔಷಧಿಯಾಗಿಸಿದೆ.