Pages

Ads 468x60px

Friday 26 October 2018

ಮಾದಲ ಹಣ್ಣು

             


                

ಲಿಂಬೆ ಜಾತಿಗೆ ಸೇರಿದ ಹಣ್ಣುಗಳಲ್ಲಿ ಬೃಹತ್ ಗಾತ್ರದ ಮಾದಲ ಹುಳಿ, ಸಂಸ್ಕೃತದಲ್ಲಿ ಮಹಾಫಲವೆನಿಸಿದೆ, ನಮ್ಮ ಆಡುನುಡಿಯಲ್ಲಿ ಮಾಪಲ, ಮಾಬಲ, ಮಾದಲ ಹಣ್ಣು. ಆಯುರ್ವೇದವು ಔಷಧೀಯ ಸಸ್ಯವೆಂದಿದೆ, ಹಾಗಾಗಿ ಇದು ವೈಜ್ಞಾನಿಕ ಪರಿಭಾಷೆಯಲ್ಲಿ citrus medica ಎಂದೆನಿಸಿದೆ. ಆಂಗ್ಲ ಭಾಷೆಯಲ್ಲಿ citron ಎನ್ನಲಾಗುವ ಈ ಹಣ್ಣಿನ ಮೂಲ ನಮ್ಮ ಭರತ ಖಂಡ. ಲಿಂಬೆ ಪ್ರಬೇಧಕ್ಕೆ ಸೇರಿದ ಬಹುತೇಕ ಎಲ್ಲ ಸಸ್ಯಗಳ ತವರು ಭಾರತವೇ ಆಗಿದೆ.

ಮುಸುಂಬಿ ಕಿತ್ತಳೆಗಳ ಸಿಪ್ಪೆ ಸುಲಿದು ರಸಭರಿತ ಹಣ್ಣನ್ನು ತಿನ್ನಲಾಗುವಂತೆ ಇದನ್ನು ತಿನ್ನಲಾಗದು. ಅಂತಹ ರಸಸಾರವು ಇದರಲ್ಲಿ ಇಲ್ಲ. ಸಿಪ್ಪೆಗೆ ಅಂಟಿಕೊಂಡಂತಿರುವ ಬಿಳಿ ಬಣ್ಣದ ತಿರುಳು ಮಾತ್ರ ತಿನ್ನಲು ಯೋಗ್ಯ. ಅದೂ ಸೌತೆಕಾಯಿಯ ಹೋಳು ಮಾಡುವಂತೆ, ಸಿಪ್ಪೆಯನ್ನು ತೆಳ್ಳಗೆ ಹೆರೆದು ತೆಗೆದು, ಒಂದೇ ಗಾತ್ರದ ತುಂಡು ಮಾಡಿಟ್ಟು ತಿನ್ನಬಹುದು, ಸಕ್ಕರೆ ಬೆರೆಸಿ ತಿನ್ನಲು ಇನ್ನೂ ರುಚಿಕರ.

ಸತ್ಯನಾರಾಯಣ ಪೂಜಾ ವಿಧಿಯಲ್ಲಿ ಈ ಹಣ್ಣಿಗೆ ಬಲು ಬೇಡಿಕೆ. ಬೃಹತ್ ಗಾತ್ರದ ಒಂದು ಹಣ್ಣು ಇದ್ದರೆ ಸಾಕು, ಪ್ರಸಾದ ರೂಪದಲ್ಲಿ ವಿನಿಯೋಗಿಸಲು ಅನುಕೂಲ. ಪ್ರಕೃತಿಯ ಶುದ್ಧ ವಾತಾವರಣದಲ್ಲಿ ಸಿಗುವ ಏಕೈಕ ಫಲ ಇದೊಂದೇ ಆಗಿದೆ.

ಮಾದಲ ಹಣ್ಣಿನಲ್ಲಿ ಬೀಜಗಳು ಇರುವುದಾದರೂ ಪುನರುತ್ಪಾದನೆ ಬೇರಿನಿಂದಲೇ ಆಗುವಂತಹುದು, ಸಸ್ಯ ಬೆಳೆದಂತೆ ಬೇರು ನೆಲದಾಳದಿಂದಲೇ ಹೊಸ ಸಸ್ಯವನ್ನು ಧರೆಗೆ ತರುತ್ತದೆ. ತಂಪು ವಾತಾವರಣ, ನೀರಿನ ಆಸರೆ, ವಿಶಾಲವಾಗಿ ಹಬ್ಬಿ ಹರಡಲು ಸಾಕಷ್ಟು ಜಾಗವೂ ಈ ಸಸ್ಯಕ್ಕೆ ಅತೀ ಅಗತ್ಯ. ಮಾದಲ ಗಿಡದ ಸುತ್ತಮುತ್ತ ತಿರುಗಾಡಲೂ ಖುಷಿ, ಎಲೆಗಳ ಕಂಪಿನ ಪರಿಮಳವೂ ಉಲ್ಲಾಸದಾಯಕ. ಸದಾಕಾಲವೂ ಹಚ್ಚಹಸಿರಾದ ಎಲೆಗಳಿಂದ ತುಂಬಿರುವ ಮಾದಲದ ಪೊದರುಗಳೆಂಡೆಯಿಂದ ತೂರಿ ಬರುವ ಗಾಳಿಯೂ ಆರೋಗ್ಯವರ್ಧಕ.

ಸುವಾಸನೆಯ ಎಲೆಗಳನ್ನು ಕುದಿಸಿ ಹರ್ಬಲ್ ಟೀ ಕುಡಿಯಿರಿ, ಗಂಟಲ ಕಿರಿಕಿರಿ ಹಾಗೂ ಚಳಿಗಾಲದ ಶೀತಹವೆಯನ್ನು ಎದುರಿಸಲು ಸಜ್ಜಾಗಿರಿ.
ವಿಟಮಿನ್ ಸಿ ಹೊಂದಿರುವ ಹಣ್ಣು ಮಾದಲ, ಪಿತ್ತಶಾಮಕ, ಬಾಯಿರುಚಿ ಹೆಚ್ಚಿಸುವಂತಾದ್ದೂ ಆಗಿರುತ್ತದೆ.

ಊಟವಾದ ನಂತರ ಮಜ್ಜಿಗೆ ನೀರು ಕುಡಿಯುತ್ತೀರಾ, ಮಾದಲದ ಎಲೆಯೊಂದನ್ನು ಗಿವುಚಿ ಹಾಕಿಕೊಳ್ಳಿ, ಮಜ್ಜಿಗೆ ಕುಡಿಯುವ ಸುಖ ತಿಳಿಯಿರಿ, ಭೂರಿಭೋಜನ ಉಂಡ ನಂತರ ಜೀರ್ಣಕ್ಕೂ ಈ ಮಜ್ಜಿಗೆ ಉತ್ತಮ.
ಕೆಮ್ಮು, ಸಂಧಿವಾತ, ಮೂಲವ್ಯಾಧಿ, ಚರ್ಮರೋಗಗಳು ಹಾಗೂ ದೃಷ್ಟಿಮಾಂದ್ಯತೆಯಂತಹ ಶರೀರವ್ಯಾಧಿಗಳಿಗೆ ಆಯುರ್ವೇದವು ಮಾದಲವನ್ನು ಔಷಧಿಯಾಗಿಸಿದೆ.


               




Friday 19 October 2018

ಹುರಿಗಡಲೆ ಲಡ್ಡು




2 ಲೋಟ ನುಣ್ಣಗೆ ಪುಡಿ ಮಾಡಿದ ಹುರಿಗಡಲೆ.
ಒಂದು ಲೋಟ ಪುಡಿ ಮಾಡಿದ ಸಕ್ಕರೆ.
ಒಂದು ಲೋಟ ಹುರಿದು ಹುಡಿ ಮಾಡಿದಂತಹ ತೆಂಗಿನಕಾಯಿ ತುರಿ.
ಈ ಮೂರು ಪ್ರತಿಗಳನ್ನು ಬೆರೆಸಿಕೊಳ್ಳಿ.
ಮುಕ್ಕಾಲು ಲೋಟ ಸುವಾಸನೆಯ ತುಪ್ಪ.
ಏಲಕ್ಕಿ, ದ್ರಾಕ್ಷಿ, ಗೇರುಬೀಜ, ಅವಶ್ಯಕತೆಗೆ ತಕ್ಕಷ್ಟು.
ಏಲಕ್ಕಿ ಗುದ್ದಿ ಇಟ್ಟಿರಿ.
ದ್ರಾಕ್ಷಿ ಗೇರುಬೀಜಗಳನ್ನು ತುಪ್ಪದಲ್ಲಿ ಹುರಿದು ತೆಗೆದಿರಿಸಿ, ಗೇರುಬೀಜಗಳನ್ನು ಮುರಿದು ಇಟ್ಟರೆ ಉತ್ತಮ.

ಇಲ್ಲಿ ನಾನ್ ಸ್ಟಿಕ್ ತಪಲೆಯ ಬಳಕೆ ಉತ್ತಮ, ತಳ ಹಿಡಿಯುವುದಿಲ್ಲ ಹಾಗೂ ತೊಳೆದಿರಿಸಲೂ ಚೆನ್ನಾಗಿರುತ್ತದೆ.

ತುಪ್ಪ ಬಿಸಿಯಾಗಲಿ,
ಬೆರೆಸಿಟ್ಟ ಹುಡಿಗಳನ್ನು ಹಾಕಿ ಕಲಸಿ,
ಏಲಕ್ಕಿಹುಡಿ ಇತ್ಯಾದಿಗಳನ್ನು ಸೇರಿಸಿ,
ತುಸು ಬಿಸಿ ಆರಿದ ನಂತರ ಉಂಡೆ ಕಟ್ಟಿ ಇಡಬೇಕು.
ಆರಿದ ನಂತರವೇ ತಿನ್ನಲು ರುಚಿ.

ಉಂಡೆ ಕಟ್ಟಲು ಕಷ್ಟ ಅನ್ನಿಸುವುದಾದರೆ ಇನ್ನೂ ಅರ್ಧ ಲೋಟ ಹುರಿಗಡಲೆ ಪುಡಿ ತಟ್ಟೆಯಲ್ಲಿ ಇರಿಸಿಕೊಳ್ಳಿ. ಚಪಾತಿ ಉಂಡೆಯನ್ನು ಗೋಧಿ ಹುಡಿಯಲ್ಲಿ ಹೊರಳಾಡಿಸುವ ಹಾಗೆ ಹುರಿಗಡಲೆ ಉಂಡೆಯನ್ನು ಹುರಿಗಡಲೆ ಹಿಟ್ಟಿನಲ್ಲಿ ಹೊರಳಾಡಿಸಿ ಉಂಡೆ ಕಟ್ಟಿ, ರಗಳೆಯಿಲ್ಲದೆ ಲಡ್ಡು ಆಗಿ ಬಿಡುತ್ತದೆ, ಅಲಂಕರಣಕ್ಕಾಗಿ ದ್ರಾಕ್ಷಿ ಯಾ ಗೋಢಂಬಿಯನ್ನು ಅಂಟಿಸಲೂ ಬರುತ್ತದೆ, ಇದೆಲ್ಲವೂ ಬಿಸಿ ಇರುವಾಗಲೇ ಆಗಬೇಕು.

ಮೊದಲ ಬಾರಿ ಲಡ್ಡು ಮಾಡಲು ಪ್ರಯತ್ನಿಸುವವರಿಗೆ ಇದು ಉತ್ತಮ ಮಾರ್ಗದರ್ಶಿ, ತುಸು ಹೆಚ್ಚು ಕಮ್ಮಿಯಾದರೂ ಹಾಳಾಯ್ತು ಎಂಬ ಗೋಳು ಇಲ್ಲಿ ಬಾರದು.

               



Saturday 6 October 2018

ಅನಾನಸ್ ಹಣ್ಣುತುಪ್ಪ




ಹಣ್ಣುತುಪ್ಪ ಅಂದ್ರೇನಪಾ ಅಂತ ತಲೆ ಕೆಡಿಸ್ಕೋಬೇಡಿ, ನಾನು ಮಾಡಿದಂತಹ ಪೈನಾಪಲ್ ಸ್ಕ್ವಾಶ್ ಗೆ ಸೂಕ್ತ ಕನ್ನಡ ಪದಕ್ಕಾಗಿ ನಿಘಂಟುಗಳನ್ನು ಜಾಲಾಡಿದಾಗ ಒಂದು ಆನ್ ಲೈನ್ ಡಿಕ್ಷನರಿ ಹಣ್ಣುತುಪ್ಪವನ್ನು ಕೊಟ್ಟಿತು.

ಸಾಮಾನ್ಯವಾಗಿ ಹಲಸಿನ ಹಣ್ಣಿನಿಂದ ತಯಾರಿಸುವ ಜೇನಿನಂತಹ ರಸವನ್ನು ಹಣ್ಣುತುಪ್ಪ ಎಂದೆನ್ನುವ ವಾಡಿಕೆ ನಮ್ಮದು. ಹಲಸಿನಹಣ್ಣು ಸ್ವಾಭಾವಿಕವಾಗಿ ಸಿಹಿ ರುಚಿಯನ್ನೇ ಹೊಂದಿರುವುದರಿಂದ ಅದಕ್ಕೆ ಸಕ್ಕರೆ ಯಾ ಬೆಲ್ಲ ಹಾಕಬೇಕಾಗಿಯೇ ಇಲ್ಲ.

ಅನಾನಸ್ ಸಿಹಿ ಇರುವುದಾದರೂ ಕುದಿಸಿ ಯಾ ಬೇಯಿಸಿದಾಗ ಹುಳಿ ಹುಳಿ, ಸಕ್ಕರೆ ಅನಿವಾರ್ಯ.
ನಮ್ಮ ಹಿತ್ತಲ ಬೆಳೆಯಾದ ಅನಾನಸ್ ಹಣ್ಣು ಬೇಸಿಗೆಯಲ್ಲಿ ಹಾಗೇನೇ ತಿನ್ನಲು ರುಚಿಕರ, ಎರಡು ಹೋಳು ತಿಂದರೂ ಸಾಕು, ಶರೀರವೇ ಉಲ್ಲಸಿತವಾದಂತೆ ಹಿತಾನುಭವ.

ಇದೀಗ ಮಳೆಗಾಲ ಬಂದಿದೆ, ಮಳೆ ಏಆರಂಭವಾದ ನಂತರ ಅಂಗಳಕ್ಕೆ ಇಳಿಯುವಂತಿಲ್ಲ. ಬೆಳೆದ ಹಣ್ಣುಗಳನ್ನು ಮಕ್ಕಳು ಬೆಂಗಳೂರಿನಿಂದ ಬಂದಾಗ ತಿನ್ನುವುದಕ್ಕಿರಲಿ ಎಂದು ಕೊಯ್ದು ಇಟ್ಟಿದ್ದೆ. ಮಕ್ಕಳು ಬಂದಾಗ ಕತ್ತರಿಸಿ ಕೊಟ್ಟಿದ್ದನ್ನು ತಿಂದು ಹೋದರಲ್ಲದೆ ಕೊಂಡು ಹೋಗಲಿಲ್ಲ, “ ಇದನ್ನು ಒಯ್ಯುವುದು ಹೇಗೆ? ಚೀಲ ಭಾರ... “

ಅಂತೂ ಅನಾನಸ್ ಮಳೆಗಾಲದಲ್ಲೂ ಉಳಿಯಿತು, ಅನಾನಸ್ ಸಾಮ್ರಾಜ್ಯವನ್ನು ಒಂದು ದಿನ ತಪಾಸಣೆ ಮಾಡಿದಾಗ, ಒಂದು ಹಣ್ಣು ಅತಿಯಾಗಿ ಹಣ್ಣಾಗ್ಬಿಟ್ಟಿದೆ! ನಿನ್ನೆ ಚೆನ್ನಾಗಿತ್ತು, ಈ ಥರ ಹಣ್ಣಾದ್ರೆ ಕತ್ತರಿಸಲಿಕ್ಕೂ ಕಷ್ಟವೇ, ಆಕರ್ಷಕವಾಗಿ ಕತ್ತರಿಸಿಟ್ಟರೆ, ಟೇಬಲ್ ಮೇಲೆ ಇಟ್ಟಿದ್ದರೆ ಮಾತ್ರ ತಿನ್ನುವ ಜನ ನಾವಲ್ಲವೇ…

ಅತೀ ಹಣ್ಣಾದ ಅನಾನಸ್ ಅಡುಗೆಮನೆಗೆ ಬಂದಿತು. ಕೊಳೆತಿಲ್ಲ, ಕೆಟ್ಟವಾಸನೆ ಬರುತ್ತಿಲ್ಲ ಎಂದು ದೃಢ ಪಡಿಸಿತೊಂಡು ಒಂದು ತಪಲೆಯ ಒಳಗಿಟ್ಟು ಚೂರಿಯಿಂದ ಗೀರಿದಾಗ, ಝಲ್ ಝಲ್ ಎಂದು ರಸ ಒಸರಿತು. ಹಣ್ಣನ್ನು ಇದ್ದ ಹಾಗೇನೇ ಒದ್ದೆ ಬಟ್ಟೆ ಹಿಂಡಿದಂತೆ, ಹಿಂಡಿದಾಗ ತಪಲೆಯಲ್ಲಿ ರಸ ಶೇಖರವಾಯಿತು.

ನನ್ನ ಪರಾಕ್ರಮವನ್ನು ಗಮನಿಸುತ್ತ ಇದ್ದ ಗೌರತ್ತೆ, “ ಬೇಸಿಗೆ ಆಗಿದ್ದರೆ ಅನಾನಸು ಶರಬತ್ತು ಅಂತ ಕುಡಿಯಬಹುದಾಗಿತ್ತು, ಈಗ ಕೆಮ್ಮು ದಮ್ಮು ಶುರುವಾದೀತು… ನಂಗೆ ಬೇಡ. “
“ ಸಕ್ಕರೆ ಹಾಕಿ ಕುದಿಸಿ.. “
“ ಬೆಲ್ಲವೂ ಆದೀತು ನೋಡು, ಸಕ್ರೆ ಒಳ್ಳೇದಲ್ಲ ಅಂತಾರಲ್ಲ... “

ಅಂದಾಜು ಎರಡು ಲೋಟ ಅನಾನಸ್ ರಸ ಇದ್ದಿತು, ಮೊದಲು ಜಾಲರಿ ತಟ್ಟೆಯಲ್ಲಿ ಶೋಧಿಸಿ, ಒಂದು ಲೋಟ ಸಕ್ಕರೆಯೊಂದಿಗೆ ಕುದಿಸಲು ಇಟ್ಟಾಯಿತು. ನಾನ್ ಸ್ಟಿಕ್ ತಪಲೆ ಉತ್ತಮ, ಇಂಡಕ್ಷನ್ ಒಲೆಯಾದರೆ ಇನ್ನೂ ಚೆನ್ನ, ಬೇಗನೆ ಗಳಗಳ ಕುದಿದು ನಮ್ಮ ಕೆಲಸ ಹಗೂರ ಮಾಡಿ ಕೊಡುತ್ತೆ, ಅತ್ತ ಇತ್ತ ಹೋಗುವಂತಿಲ್ಲ. ಸೌಟಾಡಿಸುತ್ತ ನೂಲಿನಂತ ಪಾಕ ಬಂದಾಗ ಕೆಳಗಿಳಿಸುವುದು, ಆರಿದಾಗ ಜೇನಿನ ಪಾಕ ಬರುತ್ತೆ.

  “ ಅನಾನಸ್ ಜೇನು ಅನ್ನಬಹುದು, ಜ್ಯೂಸ್ ಮಾಡಿ ಕೊಡು “ ನಮ್ಮವರ ಹೊಗಳಿಕೆಯೂ ಸಿಕ್ಕಿತು.

ದೋಸೆ, ಚಪಾತಿ, ಸಾದಾ ಬ್ರೆಡ್ಡು ಇತ್ಯಾದಿಗಳೊಂದಿಗೆ ತಿನ್ನಲು ಚೆನ್ನಾಗಿರುತ್ತದೆ ಅಂದ್ಬಿಟ್ಟು ಜಾಡಿಯಲ್ಲಿ ತುಂಬಿಸಿ ಒಂದು ಫೋಟೋ ಹೊಡೆದೂ ಆಯ್ತು, ಬಿಡುವಾದಾಗ ಬರೆದು ಬ್ಲಾಗ್ ಗೆ ಏರಿಸಬಹುದಲ್ಲ ಎಂಬ ದೂರಾಲೋಚನೆಯೂ ಕೂಡಿ, ಇದೀಗ ವರ್ಷವೆರಡು ಕಳೆದಾಗ ಹಣ್ಣುತುಪ್ಪ ಬಂತಪ್ಪ.