Pages

Ads 468x60px

Monday 26 December 2016

ಕ್ರಿಸ್ಮಸ್ ತಿನಿಸು



ರಜೆಯೊಂದಿಗೆ ಮಗಳು ಬಂದಳು.   " ಬೆಂಗಳೂರಿನ ಚಿತ್ರಾನ್ನ ತಿಂದೂ ಸಾಕಾಯ್ತು. "   ಅವಳಿಗಿಷ್ಟವಾದ ತೆಳ್ಳವು ತಯಾರಾಯಿತು.


ಮಾರನೇ ದಿನ ಇನ್ನೊಂದು ವಿಧವಾದ ತೆಳ್ಳವು,  ಮುಳ್ಳುಸೌತೆಯದ್ದು.

" ಹೇಗೇ ಮಾಡಿದ್ದೂ? "


2ಪಾವು ಬೆಳ್ತಿಗೆ ಅಕ್ಕಿ,  ನೀರಿನಲ್ಲಿ ನೆನೆಯಲಿ.

ಒಂದು ಹದಗಾತ್ರದ ಮುಳ್ಳುಸೌತೆ,  ಚಿಕ್ಕದಾದ್ರೆ ಎರಡು ಇರಲಿ.

ಒಂದು ಕಡಿ ತೆಂಗಿನಕಾಯಿ.


ಅಕ್ಕಿಯನ್ನು ಚೆನ್ನಾಗಿ ತೊಳೆದು,

ಮುಳ್ಳುಸೌತೆ ತುರಿ ಮಾಡಿಟ್ಟು,

ತೆಂಗಿನಕಾಯಿ ತುರಿದಿಟ್ಟು

ಎಲ್ಲವನ್ನೂ ಒಟ್ಟಿಗೆ ಅರೆಯಿರಿ.   

ಮುಳ್ಳುಸೌತೆ ಇರುವುದರಿಂದ ಅರೆಯಲಿಕ್ಕೆ ನೀರು ಬೇಕಾಗುವುದಿಲ್ಲ.

ಹಿಟ್ಟು ಹುಳಿ ಬರಬಾರದು,  ಆ ಕೂಡಲೇ ಎರೆಯಿರಿ.   ಈಗ ವಿಪರೀತ ಚಳಿ ಅಲ್ವೇ,   ರಾತ್ರಿ ಮಲಗುವ ಮೊದಲು ಅರೆದಿಟ್ಟರೂ ನಡೆದೀತು.


ತವಾ ಬಿಸಿಯೇರಿದ ಕೂಡಲೇ ತುಪ್ಪ ಸವರಿ,  ದೋಸೆಹಿಟ್ಟನ್ನು ಹಾರಿಸಿ ಎರೆಯಿರಿ,  ಮುಚ್ಚಿ ಬೇಯಿಸಿ.   ಹಿಟ್ಟಿಗೆ ನೀರು ಸಾಲದಿದ್ದರೆ ತುಸು ಎರೆಯಿರಿ.


ಬೆಂದ ದೋಸೆಯ ಮೇಲೆ ಇನ್ನೊಮ್ಮೆ ತುಪ್ಪ ಸವರಿ ಕವುಚಿ ಹಾಕಿ ತೆಗೆದಾಗ ದೋಸೆ ಸಿದ್ಧವಾಗಿದೆ.

ಹೌದಲ್ಲ,  ತೆಂಗಿನಕಾಯಿ ಚಟ್ನಿ  ಆಗಬೇಕಿದೆ.


ತೆಂಗಿನ ತುರಿ

ಹಸಿಮೆಣಸು

ಎರಡೆಸಳು ಬೆಳ್ಳುಳ್ಳಿ 

ರುಚಿಗೆ ಉಪ್ಪು

ಅರೆಯಿರಿ,  ಚಟ್ಣಿ ಆಯ್ತು.

ಬೆಲ್ಲದ ಪಾಕವೂ,  ದಪ್ಪ ಮೊಸರೂ ಇದ್ದಲ್ಲಿ ಮುಂಜಾನೆಯ ಈ ತಿನಿಸು ಇನ್ನೂ ಸೊಗಸು.



ಮಧ್ಯಾಹ್ನದ ಸುಖನಿದ್ರೆ ತೆಗೆದು ಏಳಬೇಕಾದ್ರೆ,  " ಅಮ್ಮ,  ಗೋಳಿಬಜೆ.... " ರಾಗ ತೇಲಿ ಬಂದಿತು.

" ಆಯ್ತು,  ಮಾಡೋಣ. "  ದೋಸೆ ಎರೆದ್ರಾಯ್ತು ಅಂದ್ಕೊಂಡಿದ್ದೆ.   ಗೋಳಿಬಜೆ ಆಗ್ಬೇಕಿದೆ.   ಇದ್ದಿದ್ದೂ ಅಷ್ಟೇ,  ಮೂರು ದೋಸೆಗಾಗುವಷ್ಟು ಹಿಟ್ಟು ಇತ್ತು.


ದೋಸೆಹಿಟ್ಟಿನ ನೀರಿನಂಶವನ್ನೆಲ್ಲ ಬಗ್ಗಿಸಿ ತೆಗೆದಾಯ್ತು.

2 ಚಮಚ ಗರಂ ಮಸಾಲಾ,

ಚಿಟಿಕೆ ಉಪ್ಪು,

ಪುಟ್ಟ ಚಮಚ ಸೋಡಾ ಹುಡಿ,

ದೊಡ್ಡ ಚಮಚ ಸಕ್ಕರೆ,

ಒಂದು ಸೌಟು ಕಡ್ಲೆ ಹುಡಿ

ಎರಡು ಚೆನ್ನಾಗಿ ನುರಿದ ಬಾಳೆಹಣ್ಣು

ಕಲಸುವುದು,  ನೀರು ಬೇಡ.  ಮುದ್ದೆಯಾದ ಹಿಟ್ಟು ಕೈಯಲ್ಲಿ ತೆಗೆದು ಹಾಕುವಂತಿರಬೇಕು.  ಚಪಾತಿ ಹಿಟ್ಟಿನ ಹಾಗೆ ಆದರೂ ಆಗದು.


ಬಾಣಲೆಯಲ್ಲಿ ಎಣ್ಣೆ ಕಾದಿದೆ.  ಕೈಯಲ್ಲಿ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ಸ್ವಲ್ಪವೇ ಎಣ್ಣೆಗೆ ಇಳಿಸುತ್ತಾ ಬನ್ನಿ.  ಎಣ್ಣೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಬಹುದು.


ರುಚಿಕರವಾದ ಹಾಗೂ ಮನೆಯಲ್ಲೇ ಮಾಡಿದ ಈ ಗೋಳಿಬಜೆ ನಮ್ಮ ಇಂದಿನ ಕ್ರಿಸ್ಮಸ್ ತಿನಿಸು.





Saturday 17 December 2016

ಹಿತ್ತಲ ತರಕಾರಿ







ಬದನೆಕಾಯಿ ತಿಂದೂ ತಿಂದೂ ಸಾಕಾಗಿತ್ತು.   ಮನೆಯಲ್ಲೇ ತರಕಾರಿ ಬೆಳೆ ಇದ್ರೆ ಹೀಗೇನೇ,   ಬಸಳೆ ಚಪ್ಪರ ಇದೆಯಾ,  ಅದನ್ನೇ ಕೊಯ್ಯಿರಿ,  ಇನ್ನು ತೊಂಡೆಯಂತೂ ಕೇಳೋರಿಲ್ಲ ಅನ್ನೋ ಹಾಗಾಗುತ್ತೆ.

ಬದನೆ ಗಿಡಗಳ ಸಾಲಿನ ಪಕ್ಕದಲ್ಲೇ ಅಲಸಂಡೆ ಬೀಜಗಳನ್ನು ಬಿತ್ತಿದ ಚೆನ್ನಪ್ಪ.   ಬೀಜ ಬಿತ್ತಿದ ಎರಡೇ ದಿನದಲ್ಲಿ ಮೊಳಕೆಯೊಡೆದು ಹೊರ ಬಂದ ಸಸಿಗಳು.

" ಅಕ್ಕ,  ಈ ಅಲಸಂಡೆಯಾದ್ರೆ ಇನ್ನು ಇಪ್ಪತೈದು ದಿನದಲ್ಲಿ ಕೊಯ್ಯಬಹುದು...  ದಿನಾ ನೀರು ಹಾಕ್ತಾ ಇರಿ,  ಎರಡು ಸರ್ತಿ ನೀರು ಹಾಕಿದ್ರೆ ಇನ್ನೂ ಒಳ್ಳೆಯದು. "  ಅಂದ ಚೆನ್ನಪ್ಪ.

ಸಂಜೆಯ ಚಹಾ ಕುಡಿದ ನಂತರ ಗಿಡಗಳಿಗೆ ನೀರೆರೆಯುವ ಹವ್ಯಾಸ ನನ್ನದು.  ಬದನೆಯೊಂದಿಗೆ ಇದೊಂದು ಹೆಚ್ಚುವರಿ ಸೇರ್ಪಡೆ.

ಬಳ್ಳಿಗಳು  ಮೇಲೇರುತ್ತಿದ್ದ  ಹಾಗೆ ಆಧಾರಕ್ಕಾಗಿ ಮರದ ಅಡರುಗಳನ್ನು ನೀಡಿ,  ಅಡಿಕೆ ಮರದ ಸಲಕೆಯ ಸಂಪುಟವನ್ನು ಕಟ್ಟಿಯೂ ಆಯ್ತು.    ಬುಡಕ್ಕೆ ಹಸಿರೆಲೆ ಗೊಬ್ಬರವೂ ಬಿದ್ದಿತು.   

" ಸ್ವಲ್ಪ ಗವರ್ಮೆಂಟ್ ಈಟು ( ರಸಗೊಬ್ಬರ )  ತಂದರಾಗುತ್ತಿತ್ತು. "  ಚೆನ್ನಪ್ಪನ ಗೊಣಗಾಟವನ್ನು ಕೇಳುವವರಿಲ್ಲ.
 " ಅಡಿಕೆ ಮರದ ಬುಡಕ್ಕೇ ಇಲ್ಲ,  ಈ ನೆಟ್ಟಿಕಾಯಿಗೆ ಯಾಕೆ? "  ಇದು ನಮ್ಮೆಜಮಾನ್ರ ಕಟ್ಟುನಿಟ್ಟು.

ಏನೇ ಆಗಲಿ,  ಅಲಸಂಡೆ ಕೊಯ್ಯುವ ಕಾಲ ಬಂದಿತು.   ಮೊದಲ ಫಸಲು ಮುಂದಿನ ಬೆಳೆಯ ಬೀಜಗಳಿಗೆ ಮೀಸಲು,  ನಂತರ ಬಿಡುವಿಲ್ಲದ ಹಾಗೆ ಎರಡು ದಿನಗಳ ಅಂತರದಲ್ಲಿ ಕೊಯ್ಯುವ ಕಾಯಕ.   ಸಂಜೆ ನೀರು ಹನಿಸುತ್ತಾ ಕೊಯ್ದು ಇಡುವುದು,   " ನಾಳೆಯ ಅಡುಗೆಗೇನು ಎಂಬ ಚಿಂತೆಯಿಲ್ಲ.  ಅಲಸಂಡೆ ಪಲ್ಯ ಊಟದ ಸೊಗಸು.


                     



ಆಯ್ತು,  ಒಂದೆರಡು ದಿನ ಪಲ್ಯ ಮಾಡಬಹುದು,   " ದಿನಾ ಒಂದೇ ತೆರನಾದ ಪಲ್ಯವೇ... " ಗೊಣಗಾಟ ಕೇಳಬೇಕಾದೀತು,   ಹೇಗೂ ಕುಂಬ್ಳೆಯಲ್ಲಿರುವ ತಂಗಿಗೆ ಆಗಾಗ ಫೋನ್ ಮಾಡುವುದಿದೆ.   ಅವಳೂ  " ಮಜ್ಜಿಗೆಹುಳಿ,  ಜೀರಿಗೆ ಕೂಟು,  ಅವಿಲ್ ಇತ್ಯಾದಿಗಳನ್ನು ಜ್ಞಾಪಕ ಮಾಡಿಕೊಟ್ಟಳು.   ಇವೆಲ್ಲ ಸಾಂಪ್ರದಾಯಿಕ ಖಾದ್ಯಗಳು,  ನಮ್ಮದು ಹೊಸರುಚಿ ಆಗಬೇಡ್ವೇ...

ಬದನೆಯ ಗಿಡಗಳ ಸಾಲಿನಲ್ಲಿ ಹೇರಳವಾಗಿ ಬೆಳೆದು ಇದ್ದಬದ್ದ ಜಾಗವನ್ನೆಲ್ಲ ಆಕ್ರಮಿಸಿ ನಿಂತಿದೆ ಪೊನ್ನಂಗಣೆ ಸೊಪ್ಪು.   ' ಪೊನ್ನಂಗನ್ನಿ ಕೀರೈ ' ಎಂದು ಮಲಯಾಳ ಹಾಗೂ ತಮಿಳಿನಲ್ಲಿ ಹೆಸರಾಗಿರುವ ಈ ಸೊಪ್ಪನ್ನು ನಮ್ಮ ಕನ್ನಡಿಗರು  ' ಹೊನಗನೆ ಸೊಪ್ಪು ಅನ್ನುತ್ತಾರಾದರೆ,  ಇಂಗ್ಲೀಷ್ ನಲ್ಲಿ wild spinach ಎಂದೂ,  ಸಸ್ಯಶಾಸ್ತ್ರಜ್ಞರ ಪ್ರಕಾರ alternanthera sessilis ಎಂದಾಗಿರುತ್ತದೆ.   ವಿಟಮಿನ್ ಗಳ ಗಣಿಯಾಗಿರುವುದಾದರೂ ಪೊನ್ನಂಗಣೆಯು ಸಸ್ಯ ಪ್ರವರ್ಗದಲ್ಲಿ ಒಂದು ಕಳೆಸಸ್ಯವೆಂದು ಪರಿಗಣಿಸಲ್ಪಟ್ಟಿದೆ,  ನಮ್ಮ ಊರಿನಲ್ಲಿ ಇದನ್ನು ಆಹಾರ ಪದಾರ್ಥವೆಂದು ಪರಿಗಣಿಸಿದವರಿಲ್ಲ.   " ಏನೋ ಎಣ್ಣೆ ಮಾಡ್ತಾರೆಂದು ಕೇಳಿ ಗೊತ್ತು.. " ಅಂದಿದ್ದರು ಗೌರತ್ತೆ.

ಪೊನ್ನಂಗಣೆಯ ಹಸಿರು ಎಲೆಗಳೂ,  ಕುಡಿಗಳೂ,  ಅಲಸಂಡೆಯೂ ಸೇರಿದ ಖಾದ್ಯ ಮಾಡೋಣ.

ಒಂದು ಹಿಡಿ ಹಸಿರು ಎಲೆಗಳು ಹಾಗೂ ಕುಡಿಗಳು.  ಎಳೆಯ ದಂಟುಗಳನ್ನೂ ಬಳಸಬಹುದು.   
ಅಲಸಂಡೆಯನ್ನೂ ಕತ್ತರಿಸಿಕೊಳ್ಳಿ.
ಉಪ್ಪು ಹಾಕಿ ಒಟ್ಟಿಗೆ ಬೇಯಿಸಿ.
ತೆಂಗಿನತುರಿ,  ಗಾಂಧಾರಿ ಮೆಣಸು ಕೂಡಿ ಅರೆಯಿರಿ.
ತೆಂಗಿನ ಅರಪ್ಪನ್ನು ಬೆಂದ ತರಕಾರಿಗೆ ಕೂಡಿಸಿ.
ಸಿಹಿಗೆ ಬೆಲ್ಲ,  ಹುಳಿಗೆ ಮಜ್ಜಿಗೆ.   ನಿಮ್ಮ ಆಯ್ಕೆಗನುಸಾರ ಹಾಕಿರಿ.
ಸಾಸಿವೆ,  ಒಣಮೆಣಸಿನಕಾಯಿ ಒಗ್ಗರಣೆ ಇರಲಿ.   " ಸೊಪ್ಪು ತರಕಾರಿಗಳ ಅಡುಗೆಯ ಒಗ್ಗರಣೆಗೆ ಕರಿಬೇವು ಹಾಕೂದೇನೂ ಬೇಡ. "  ಇದು ಗೌರತ್ತೆಯ ಹಿತವಚನ.
ಕುದಿಸಬೇಕೆಂದೇನೂ ಇಲ್ಲ.
ಒಂದು ನಳಪಾಕ ಸಿದ್ಧವಾಯಿತು.
ತಂಪುತಂಪಾದ ಈ ಸವಿರುಚಿಯಂತೂ ರಣಬೇಸಿಗೆಯ ಊಟಕ್ಕೆ ನಮ್ಮಿಬ್ಬರಿಗೂ ಹಿತವಾಯಿತು. 





" ಅದ್ಯಾವುದೂ ಪೊನ್ನಂಗಣೇ...." ರಾಗ ಎಳೆದಳು ಗಾಯತ್ರಿ.   ಅವಳ ಸಮಾಧಾನಕ್ಕಾಗಿ ವಾಟ್ಸಪ್ಪಿನಲ್ಲಿ ಪೊನ್ನಂಗಣೆಯ ಫೊಟೋ ಕಳುಹಿಸಬೇಕಾಯ್ತು.    " ಓ,  ಇದಾ... ಗಂಟು ಗಂಟಿನಲ್ಲಿ ಬಿಳಿ ಬಿಳಿ ಹೂ ... ಗೊತ್ತಾಯ್ತು ಬಿಡು. " ಅಂದಳು.  "ಆದ್ರೂ ಸೊಪ್ಪು ಸಂಗ್ರಹ ಆಗ್ಬೇಕೂ..."
" ಹ್ಞು ಮತ್ತೆ,  ನನ್ನ ಸೊಪ್ಪು,  ಬದನೆ ಹಾಗೂ ಬಸಳೆ ಬುಡದಲ್ಲಿ ವಿಪರೀತ ಸೊಕ್ಕಿವೆ,  ಸ್ವಲ್ಪ ಕುಯಿದ್ರೂ ಸಾಕಾಗುತ್ತೆ " 


ಮಾರನೇ ದಿನ ತೆಂಗಿನತುರಿಯೊಂದಿಗೆ ಈರುಳ್ಳಿ,  ಬೆಳ್ಳುಳ್ಳಿ,  ಕೊತ್ತಂಬ್ರಿ, ಜೀರಿಗೆ,  ಗಾಂಧಾರಿ ಮೆಣಸು,  ಕಾಳುಮೆಣಸು ಕೂಡಿ ಅರೆದಿಟ್ಟು,
ಬಾಣಲೆಯಲ್ಲಿ ಒಗ್ಗರಣೆಗಿಟ್ಟು,
ಅರೆದಿಟ್ಟ ತೆಂಗಿನಕಾಯಿ ಅರಪ್ಪನ್ನು ಒಗ್ಗರಣೆ ಸಿಡಿದಾಗ ಹಾಕಿ, 
ಮಸಾಲೆಯ ಹಸಿವಾಸನೆ ಹೋಗುವ ತನಕ ಹುರಿಯಿರಿ.
ನಂತರ ಬೇಯಿಸಿಟ್ಟ ತರಕಾರಿ ಹಾಗೂ ಸೊಪ್ಪು ಹಾಕಿ ಕುದಿಸಿ.
ನೀರು ಸಾಲದಿದ್ದರೆ ಎರೆಯಿರಿ.
ರುಚಿಗೆ ಬೇಕಿದ್ದಂತೆ ಉಪ್ಪು,  ಬೆಲ್ಲ ಹಾಕುವುದು.
ಈ ನಳಪಾಕವಂತೂ ಅನ್ನ ಹಾಗೂ ಚಪಾತಿಗಳಿಗೆ ಹೇಳಿ ಮಾಡಿಸಿದ ಹಾಗಾಯ್ತು.

ಇಂದಿನ ಅಡುಗೆಯ ರಿಪೋರ್ಟು ಎಂದಿನಂತೆ ತಂಗಿಗೆ ತಲುಪಿತು.
" ಹೌದೂ... ಇದಕ್ಕೇನು ಹೆಸರು ಇಡೋಣಾಂತೀಯ ? "  ನನ್ನ ಪೆದ್ದು ಪ್ರಶ್ನೆ.
" ನೀರುಳ್ಳಿ,  ಬೆಳ್ಳುಳ್ಳಿ ಹುರಿದ ಮಸಾಲೆ...  ಅದೇ ಕೂರ್ಮಾ ಅಂತಾರಲ್ಲ,  ಹಾಗೇ ಅಲಸಂಡೆ ಕೂರ್ಮಾ...  ಅಂದ್ಬಿಡು "  ಅಂದಳು ಗಾಯತ್ರಿ.

ಹೊಸರುಚಿಗಳನ್ನು ಸವಿದಾಯಿತು,   ಈಗ ನಮ್ಮ ಸಾಂಪ್ರದಾಯಿಕ ಶೈಲಿಯ ಅಡುಗೆಯತ್ತ ಕಣ್ಣು ಹಾಯಿಸೋಣ.   ಅಲಸಂಡೆಯನ್ನು ಖಾರದ ಅಡುಗೆಯಲ್ಲಿ ಬಳಸುವುದು ಕಡಿಮೆಯೇ,  ಏನಿದ್ದರೂ ಮಜ್ಜಿಗೆಹುಳಿ,  ಜೀರಿಗೆ ಬೆಂದಿ, ಅವಿಲ್,  ಪಲ್ಯ...ಇತ್ಯಾದಿ ಊಟದೊಂದಿಗೆ ಸವಿಯುವ ರೂಢಿ.

ಹೌದಲ್ಲ,  ಮಜ್ಜಿಗೆಹುಳಿಯಲ್ಲಿ ಮಜ್ಜಿಗೆ ಹಾಗೂ ಹಸಿ ತೆಂಗಿನಕಾಯಿ ಅರಪ್ಪು ಪ್ರಾಮುಖ್ಯತೆ ಪಡೆದಿದ್ದರೆ ಅವಿಲು ಮಜ್ಜಿಗೆಯನ್ನು ಬಯಸದು,  ಜೀರಿಗೆ ಬೆಂದಿಗೂ ಮಜ್ಜಿಗೆ ಬೇಡ.

ಅವಿಲು ಹತ್ತು ಹಲವಾರು ತರಕಾರಿಗಳ ಮಿಶ್ರಣದ ಖಾದ್ಯ.   ವಿದೇಶೀ ತರಕಾರಿಗಳನ್ನು ಉಪಯೋಗಿಸುವಂತಿಲ್ಲ.    ನಮ್ಮ ಮಣ್ಣಿನ ನೆಲದಲ್ಲಿ ಬೆಳೆದಂತಹ ತರಕಾರಿಗಳು,  ಹುಳಿ, ಸಿಹಿ, ಒಗರು, ಕಹಿ ಎಲ್ಲವೂ ಇರುವಂತಹ ತರಕಾರಿಗಳನ್ನು ಆಯ್ದು,  ಬೇಯಿಸಿ.  ಧಾರಾಳವಾಗಿ ತೆಂಗಿನತುರಿ ಬಳಸಿ ಅರೆಯಿರಿ.   ಚಿಟಿಕೆ ಅರಸಿಣ,  ಪುಟ್ಟ ಚಮಚದಲ್ಲಿ ಜೀರಿಗೆ ಅರೆಯುವಾಗ ಹಾಕಿಕೊಳ್ಳಿ.  ಬೇಯಿಸಿಟ್ಟ ತರಕಾರಿಗಳಿಗೆ ಕೂಡಿ ಕುದಿಸಿ,  ಒಗ್ಗರಣೆಗೆ ಕರಿಬೇವು ಮರೆಯದಿರಿ.

 ಜೀರಿಗೆ ಬೆಂದಿ ಹಾಗೂ ಅವಿಲು,  ಏನು ವ್ಯತ್ಯಾಸ?

ಅವಿಲು ಮಾಡೋ ವಿಧಾನ ತಿಳಿದಾಯ್ತು.   ಜೀರಿಗೆ ಬೆಂದಿ ಒಂದೇ ತರಕಾರಿ ಬಳಸಿ ಮಾಡುವಂತಹದು,  ಅದೂ ಎಳೆಯ ತರಕಾರಿಯಾಗಿರಬೇಕು.   ಅಲಸಂಡೆ ಅಂಗಳದಲ್ಲಿ ಇರುವಾಗ ನನ್ನದೂ ಒಂದು ಜೀರಿಗೆಬೆಂದಿ ಆಯಿತು.   ವಿಧಾನ ಎಲ್ಲವೂ ಅವಿಲು ಮಾಡಿದ ಹಾಗೇನೇ ಮತ್ತೇನಿಲ್ಲ.


 
                          


  
    ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  ' ಉತ್ಥಾನ ' ದಲ್ಲಿ ಪ್ರಕಟಿತ ಬರಹ.   ಒಕ್ಟೋಬರ್, 2016.

Saturday 3 December 2016

ಟೊಮ್ಯಾಟೋ ಕಾಯಿರಸ




               




" ₹2,000 ನೋಟು ಚಿಲ್ರೆ ಮಾಡ್ಸೋಣಾಂತ ಬ್ಯಾಂಕಿಗೆ ಹೋದ್ರೆ ಅಲ್ಲಿ ಚಿಲ್ರೇನೇ ಇಲ್ವಂತೆ,  ಜಗ್ಗಣ್ಣನ ಅಂಗಡಿಯಲ್ಲೂ ಇಲ್ಲ...  ಕೊನೆಗೆ ರಸ್ತೆಬದಿ ತರಕಾರಿ ಸಂತೆ ಇಟ್ಕಂಡು ಕೂತಿರ್ತಾರಲ್ಲ,  ಅವರ ಹತ್ತಿರ ನೂರರ ನೋಟು ಸಿಕ್ತು.. "  ನಮ್ಮವರು ಹೇಳ್ತಾ ಇದ್ದಿದ್ದು ಗಿರೀಶ್ ಬಳಿ,  ಅದೂ ಫೇಸ್ ಬುಕ್ ನ ಮೆಸೆಂಜರ್ ಕಾಲ್ ಮೂಲಕ.


" ಹೆಹೆ.. ಏನು ಕಾಲ ಬಂತು,  ಇದು ಎಲ್ಲಿಗೆ ಮುಟ್ಟುತ್ತೋ... "  ಇತ್ಯಾದಿ ಅರ್ಥಶಾಸ್ತ್ರ ಪುರಾಣವೇನೂ ನಮಗೆ ಬೇಡ,  ತರಕಾರಿ ಸಂತೆಯಿಂದ ರುಪಾಯಿ 120ರ ಮಾಲು ಬಂದಿದೆ,  ಅದನ್ನು ವಿಚಾರಿಸಿಕೊಳ್ಳೋಣ.


ಟೊಮ್ಯಾಟೋ,  ಬಜ್ಜೀ ಮೆಣಸು,  ಕ್ಯಾಪ್ಸಿಕಂ, ನೀರುಳ್ಳಿ,  ಹಸಿಮೆಣಸು,  ಗುಳ್ಳ ಬದನೆ, ಬೀಟ್ರೂಟು,  ಶುಂಠಿ ಮಾತ್ರವಲ್ಲದೆ ದೊಡ್ಡ ಕಟ್ಟು ಕೊತ್ತಂಬರಿ ಸೊಪ್ಪು ಕೂಡಾ ಬಂದಿತ್ತು.   ಎಲ್ಲವನ್ನೂ ತೆಗೆದಿರಿಸಿ,  ತೊಳೆದು ಗೋಣಿತಾಟಿನ ಮೇಲೆ ಹರಡಿ ಇಟ್ಟಾಯ್ತು.    ಕಾಯಿ ಟೊಮ್ಯಾಟೋಗಳನ್ನು ಕಂಡಾಗ ಒಂದು ರಸರುಚಿಯ ನೆನಪಾಯ್ತು.


' ಸುಧಾ '  ವಾರಪತ್ರಿಕಯಲ್ಲಿ ಬಂದಿತ್ತು,  ಮಹಿಳೆಯರಿಗಾಗಿ ಮೀಸಲಾದ  ' ಕಾಮಧೇನು '  ಅಂಕಣದಲ್ಲಿ ಹೊಸರುಚಿಗಳೂ ಇರುತ್ತಿದ್ದುವು.   ನನ್ನಮ್ಮ ಈ ಪುಟವನ್ನು ಜಾಗ್ರತೆಯಾಗಿ ತೆಗೆದಿರಿಸಿಕೊಳ್ಳುತ್ತಿದ್ದರು.   ' ಟೊಮ್ಯಾಟೋ ಕಾಯಿರಸ '  ಎಂದು ಬಂದಿದ್ದ ಒಂದು ಪದಾರ್ಥವನ್ನು ಅಮ್ಮ ಮಾಡಿದ್ದು ರುಚಿಕರವಾಗಿತ್ತು.   ಮುಂದೆ ನಾನೂ ಅಡುಗೆಮನೆಯ ಒಡತಿಯಾದ ನಂತರ ಅಮ್ಮನ ಬಳಿ ವಿಚಾರಿಸ್ಕೊಂಡು ಈ ಅಡುಗೆಯನ್ನು ಮಾಡಿದ್ದಿದೆ.


ಎಲ್ಲೋ ಓದಿದ,  ಎಲ್ಲೋ ನೋಡಿದ ಅಡುಗೆಯನ್ನು ಒಂದೆರಡು ಬಾರಿಯಾದರೂ ಮಾಡಿ ಬಳಕೆಯಾದರೆ ಮಾತ್ರ ಇನ್ನೊಮ್ಮೆ ಮಾಡಲು ತ್ರಾಸವೇನಿಲ್ಲ.   ಈಗ ನಾವು ಟೊಮ್ಯಾಟೋ ಕಾಯಿರಸ ಮಾಡೋಣ.


3 ಕಾಯಿ ಟೊಮ್ಯಾಟೋ,  ಒಂದು ಟೊಮ್ಯಾಟೋ ನಾಲ್ಕು ಹೋಳು ಆದರಾಯಿತು.

2 ಬಜ್ಜಿ ಮೆಣಸು,   ಟೊಮ್ಯಾಟೋ ಹೋಳುಗಳ ಗಾತ್ರಕ್ಕೆ ಹೊಂದಿಕೆಯಾಗುವಂತೆ ಕತ್ತರಿಸುವುದು.

ಒಂದು ಹಿಡಿ ತೊಗರಿಬೇಳೆ ಬೇಯಿಸಿದ್ರಾ,

ಬೆಂದ ಬೇಳೆಗೆ ತರಕಾರಿಗಳನ್ನು ಹಾಕಿ,  ರುಚಿಗೆ ಉಪ್ಪು ಹಾಕಿ ಹದವಾಗಿ ಬೇಯಿಸಿ.


ಅರ್ಧ ಕಡಿ ತೆಂಗಿನ ತುರಿ,  ಕೊತ್ತಂಬರಿಸೊಪ್ಪು,  ಜೀರಿಗೆ ಕೂಡಿ ಅರೆಯಿರಿ.  ಖಾರ ಬೇಕಿದ್ದರೆ ಹಸಿಮೆಣಸು ಹಾಕ್ಕೊಂಡು ಅರೆಯಿರಿ,  ಈಗ ಬೇಯಿಸಲ್ಪಟ್ಟ ಬಜ್ಜಿ ಮೆಣಸು ಖಾರ ಸಾಕಾಗದು.


ತೆಂಗಿನ ತುರಿಯ ಅರಪ್ಪನ್ನು ಬೇಯಿಸಿದ ಸಾಮಗ್ರಿಗಳಿಗೆ ಕೂಡಿಸಿ.  ರುಚಿಗೆ ಉಪ್ಪು,   ಅಗತ್ಯದ ನೀರು ಕೂಡಿಸಿ ಕುದಿಸಿ,  ಒಗ್ಗರಣೆಯ ಅಲಂಕರಣ ಮಾಡುವಲ್ಲಿಗೆ ಟೊಮ್ಯಾಟೋ ಕಾಯಿ ರಸ ಸಿದ್ಧ.  ಅನ್ನಕ್ಕೂ ಸೈ,  ಚಪಾತಿಗೂ ಜೈ.



  
  

      

Tuesday 22 November 2016

ಆ್ಯಕ್ಸಿಡೆಂಟು ತಂದ ನೋಟು!




ಸುಮ್ನೇ ಫೇಸ್ ಬುಕ್ ನೋಡ್ತಿದ್ದಾಗ ಗಿರೀಶನ ಮೆಸೆಂಜರ್ ಕಾಲ್ ಬಂದಿತು.   " ಮನೆಯಲ್ಲಿ ಇವ್ರಿಲ್ಲ,  ಹೊರಗೆ ಹೋಗಿದ್ದಾರಲ್ಲ. "


" ಚಿಂತಿಲ್ಲ,  ನಾವೀಗ ಉಪ್ಪಳ ಪೇಟೆಯಲ್ಲಿದ್ದೇವೆ,  ಸೀದಾ ಊರಿಗೆ ಹೋಗೂದು...  ನಾಡಿದ್ದು ಮನೆಯಲ್ಲಿ ಒಂದು ಪೂಜೆ, ಹೋಮ ಇಟ್ಕೊಂಡಿದ್ದೇವೆ,  ಎಲ್ರೂ ಬನ್ನಿ. "


" ಹೌದಾ,  ನಾಡಿದ್ದು ತಾರೀಕು ಎಷ್ಟೂ?  17ಕ್ಕೆ ಎರಡು ಕಡೆ ಜೆಂಬ್ರಕ್ಕೆ ಹೋಗ್ಲಿಕ್ಕಿದೆ. "

" ಇದು 18 ಆಗ್ತದೆ,  ಗುರುವಾರ.   ಬನ್ನಿ ಮರೆಯದೆ.."

" ಹ್ಞೂ,  ಈಗಲೇ ಬರೆದು ಇಡ್ತೇನೆ.. " ಅನ್ನುವಲ್ಲಿಗೆ ನಮ್ಮ ಫೇಸ್ ಬುಕ್ ಟಾಕಿಂಗ್ ಮುಗಿಯಿತು.


17ನೇ ತಾರೀಕು ಅಂದ್ರೆ ನಾಳೆ,  ಗಿರೀಶ್ ಹೇಳಿದ್ದು ಒಳ್ಳೆಯದಾಯ್ತು.   ತಾರೀಕು,  ವಾರ ನೆನಪಿಟ್ಟು ಹೋಗಬೇಕಾದ ಕಡೆ ಹೋಗುವುದೇ ಸಮಸ್ಯೆ ಆಗ್ಬಿಟ್ಟಿದೆ.


ನಮ್ಮವರು ಮನೆಗೆ ಬಂದ ಕೂಡಲೇ,   " ನಿಮ್ಮ ಗಿರೀಶಂದು.... " ಎಂದು ಪುನಃ ವರದಿ ಒಪ್ಪಿಸಲಾಯ್ತು.   " ಹಂಗಿದ್ರೆ ನಾಳೆ ಎರಡು ಮನೆ ಸುಧರಿಕೆ ಆಗಿ,  ನಾಡಿದ್ದು ಪುನಃ  ಹೋಗುವ ತಯ್ಯಾರಿ ಆಗ್ಬೇಕೂ... "


ಮಾರನೇ ದಿನ ನಾನು ಪಕ್ಕದ ಮನೆಯಲ್ಲಿರುವ ನಮ್ಮಕ್ಕ ಹಾಗೂ ಭಾವ ಜೊತೆ ತಿಥಿಯೂಟಕ್ಕೆ ಹೋದ್ರೆ ನಮ್ಮೆಜಮಾನ್ರು ಬೈಕ್ ಹತ್ತಿ  ಇನ್ನೊಂದ್ಕಡೆ ಗಣಹೋಮದ ಪೂಜೆಗೆ ಹೋದರು.


ಹೊರಡುವ ಮೊದಲು ಚೆನ್ನಪ್ಪನ ಆತಿಥ್ಯವೂ ಆಗಬೇಕಿತ್ತಲ್ಲ,  ಅವನ ಚಹಾ - ದೋಸೆ,  ಅನ್ನ ಸಾಂಬಾರು,  ಮಜ್ಜಿಗೆ ಉಪ್ಪಿನಕಾಯಿ ಎಲ್ಲವನ್ನೂ ರೂಢಿಗೆ ಮಾಡಿಟ್ಟು,   " ಅಕ್ಕ,  ಎಲ್ಲ ಕಡೆ ಬೀಗ ಸರಿಯಾಗಿ ಹಾಕ್ಕೊಳ್ಳೀ... "  ಹಿತವಚನಕ್ಕೂ ತಲೆದೂಗಿದ್ದಾಯ್ತು.


ನಾಳೆ ಗಿರೀಶ್ ಮನೆಗೆ ಹೋಗುವುದಿದೆ,   ಸುಮಾರು ಇಪ್ಪತ್ತು ವರ್ಷಗಳ ಸ್ನೇಹಿತ ಗಿರೀಶ್,   ಅವನ ಮನೆಗೆ ನಾನು ಈ ತನಕ ಹೋಗಿಯೇ ಇಲ್ಲ,   " ಈ ಬಾರಿ ಹೋಗೋಣ. " ನಮ್ಮವರ ಅಪ್ಪಣೆಯೂ ಆಯ್ತು.


ಸರಿಯಾಗಿ ಹನ್ನೊಂದು ಗಂಟೆಗೆ ಹೊರಟು,  ಚೆನ್ನಪ್ಪನನ್ನು ಮನೆ ನೋಡಿಕೊಳ್ಳಲು ಬಿಟ್ಟು ನಾವು ಹೊರಟೆವು.


" ಎರಡು ಬಾಳೆಗೊನೆ ಇತ್ತೂ,  ಕಾರಿನಲ್ಲಿ ಹಾಕ್ಕೊಂಡ್ರೆ ತರಕಾರಿ ಅಂಗಡಿಗೆ ಕೊಡಬಹುದಿತ್ತು... "


" ಅದೆಲ್ಲ ಈಗ ಬೇಡ,  ಅಂಗಡಿ ವ್ಯವಹಾರ ಚೆನ್ನಪ್ಪನೇ ಮಾಡಲಿ,  ಕಾರಿಗೆ ಬಾಳೆಕಾೖ ಕಲೆ ಆಗುತ್ತೆ..."


ಬರಬೇಕಾದ ದಾರಿಯ ನಕ್ಷೆಯನ್ನು  ಗಿರೀಶ್ ಮೊದಲೇ ಹೇಳಿದ್ದ,   " ಪೆರ್ಲ ರೋಡಿನಲ್ಲಿ ಬನ್ನಿ,  ರಸ್ತೆ ಚೆನ್ನಾಗಿದೆ. "  ಅಲ್ಲಲ್ಲಿ ಸಿಗುವ ಒಳದಾರಿಗಳನ್ನೂ ಸ್ಟಡೀ ಮಾಡಿಟ್ಕೊಂಡಿದ್ದೆವು.   ಯಥಾಪ್ರಕಾರ ಪೊಸಡಿಗುಂಪೆಯ ರಸ್ತೆ,   ಹಿಂದುರುಗಿ ಬರುವಾಗ ಸಂಜೆಯಾದೀತು,   ಸೂರ್ಯಾಸ್ತಮಾನದ ರಸಘಳಿಗೆ... ಕಣ್ತುಂಬ ನೋಡುತ್ತ ಬರಬಹುದು.


ಪೆರ್ಮುದೆ ಜಂಕ್ಷನ್ ಬಂದಿತು,  ಒಂದು ಪುಟ್ಟ ಪೇಟೆ...  ನಾಲ್ಕಾರು ಓಬೀರಾಯನ ಕಾಲದ ಅಂಗಡಿಗಳ ಒಂದು ಸರ್ಕಲ್.   ಎದುರುಗಡೆಯಿಂದ ಒಂದು ಸ್ಕೂಟರ್ ಬಂದು ಕಾರಿಗೆ ಡಿಕ್ಕಿ ಹೊಡೆಯಿತು.  ಢಬಾರ್ ಶಬ್ದದೊಂದಿಗೆ ಕಾರಿನ ಮಿರರ್ ಪ್ಲೇಟ್ ಕಳಚಿತು.   ಬಾಗಿಲು ತೆರೆದು ನಮ್ಮವರು ಹೊರಗಿಳಿದರು.


" ಅದ್ಯಾಕೆ ಹೀಗೆ ಗಾಡಿ ಓಡಿಸ್ತೀಯ,   ಜೀವದ ಮೇಲೆ ಆಸೆ ಇಲ್ವಾ... "  ತರಾಟೆ.  ಐದಾರು ಜನ ಸೇರಿದರು.


ಅವನು   " ನನ್ನನ್ನು ಬಿಟ್ಬಿಡಿ,   ತಪ್ಪಾಯ್ತು... "  ಕಿಸೆಯಿಂದ  ₹2,000 ದ ನೋಟು ತೆಗೆದು ಇವರ ಕೈಲಿಟ್ಟ!


ನಾವು ಕಂಡಿರದ ನೋಟು,  ಒಬ್ಬ ಕೂಲಿ ಕಾರ್ಮಿಕನ ಬಳಿ ಇದೆ...  ನಮ್ಮೆಜಮಾನ್ರು ಅವನಿಗೆ ಸ್ವಲ್ಪ ಬುದ್ದಿ ಹೇಳಿ ಗಾಡಿ ಹತ್ತಿದರು.  


ಸರಾ್ಕರ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿತಷ್ಟೆ,  ನಮ್ಮ ತಿಜೋರಿಯಲ್ಲಿ ಐನೂರು ಸಾವಿರದ ನೋಟುಗಳೇ ಇರಲಿಲ್ಲವಾಗಿ ಚಿಂತಾರಹಿತರಾಗಿದ್ದೆವು.   


ಚೆನ್ನಪ್ಪನೂ ಹಿಂದಿನಂತೆ ರುಪಾಯಿ ಐನೂರು ಕೇಳುವುದನ್ನೇ ಬಿಟ್ಟಿದ್ದಾನೆ,   " ಈಗ ನೂರಕ್ಕಿಂತ ಹೆಚ್ಚು ಕೊಡುವ ಹಾಗಿಲ್ಲ. "  ಅವನೂ ಆಯ್ತೆಂದಿದ್ದ.


ಆದರೂ ಖರ್ಚಿಗೆ ದುಡ್ಡು ಬೇಡ್ವೇ,   ಬ್ಯಾಂಕಿಗೆ ಹೋದಾಗ   ₹2,000 ರ ನೋಟನ್ನು ತಿರಸ್ಕರಿಸಿ,  ₹1,900 ಡ್ರಾ ಮಾಡ್ಕೊಂಡು ಬಂದಿದ್ದರು.


ಇಂತಹ ಪರಿಸ್ಥಿತಿ ಇರುವಾಗ ಅಚಾನಕ್ಕಾಗಿ ದಕ್ಕಿದ ರುಪಾಯಿ ನೋಟು,  ಈ ಬರಹಕ್ಕೆ ಪ್ರೇರಣೆ.


ಅಂತೂ ಒಂದು ತಾಸು ವ್ಯರ್ಥವಾದರೂ ಗಿರೀಶ್ ಮನೆಗೆ ಸಕಾಲಕ್ಕೆ ತಲಪಿದೆವು ಅನ್ನಿ.   ಲಾಯರ್ ಗಿರೀಶ,  "  ಕಾರು ಆ್ಯಕ್ಸಿಡೆಂಟಲ್ಲಿ ಡ್ಯಾಮೇಜ್ ಆಗಿದ್ದಕ್ಕೆ ಇನ್ಶೂರೆನ್ಸ್ ಇದೆಯಲ್ಲ. "  ಅಂದು ಮನ ಹಗುರಾಗಿಸಿದ.


ಒಂದುವೇಳೆ ಬೈಕ್ ಸವಾರನಿಗೆ ಏಟಾಗಿ ನಾವೇ ಅವನನ್ನು ಆಸ್ಪತ್ರೆಗೆ ಒಯ್ಯುವ ಸ್ಥಿತಿ ಬಂದಿದ್ರೆ...


" ನನ್ನ ಬಳಿ ಒಂದು ಮುಕ್ಕಾಲೂ ಇರಲಿಲ್ಲ,  ಏನೋ ಅದೃಷ್ಟ ಒಳ್ಳೆಯದಿತ್ತು,  ದುಡ್ಡು ಬಂತು. "


ಪೂಜೆಗೆ ಹೋಗ್ತಿರೋದ್ರಿಂದ ಬಿಳಿ ಪಂಚೆ,  ಸಿಲ್ಕು ಶರ್ಟ್ ಹಾಕ್ಕೊಂಡಿದ್ರು,  ದುಡ್ಡು ಇಟ್ಟುಕೊಳ್ಳಬಹುದಾದ ವ್ಯವಸ್ಥೆ ಈ ಉಡುಪಿನಲ್ಲಿ ಇಲ್ಲ.   ಅದೂ ಅಲ್ಲದೆ ಪ್ರಯಾಣಿಸುವ ದಾರಿಯೂ ಅಂತಹುದು,  ದುಡ್ಡು ಖರ್ಚಿನ ಸಬ್ಜೆಕ್ಟು ಇಲ್ಲಿಲ್ಲ,   ಹಸಿರು ಮರಗಳು,  ಮುಳಿಹುಲ್ಲಿನ ಬಯಲುಗಳು,  ಮೇಲೆ ನೀಲ ಆಗಸ,  ಡಾಮರು ರಸ್ತೆ.  ಗಾಡಿಯಲ್ಲಿ ಸಾಕಷ್ಟು ಇಂಧನವೂ ಇರುವಾಗ,  ರುಪಾಯಿರಹಿತ ಪಯಣ ನಮ್ಮದಾಗಿತ್ತು!


ಹಿಂದುರುಗಿ ಬರುವಾಗ ಪೊಸಡಿಗುಂಪೆ ಪುನಃ ಎದುರಾಯಿತು,   ಗಂಟೆ ಐದಾಗಿತ್ತಷ್ಟೇ,   ಹಲವು ಸೂರ್ಯಾಸ್ತದ ದೃಶ್ಯಗಳು ಬ್ಲಾಗ್ ಓದುಗರಿಗಾಗಿ... ಚಲಿಸುತ್ತಿರುವ ಕಾರಿನೊಳಗಿಂದ ಸೆರೆ ಹಿಡಿದ ಚಿತ್ರಗಳು,  ಇನ್ನೂ ಅರ್ಧ ಗಂಟೆ ಕಳೆದಿರುತ್ತಿದ್ದರೆ ಇನ್ನೂ ಸೊಗಸಿನ ಚಿತ್ರಗಳು ಲಭ್ಯವಾಗುತ್ತಿತ್ತು.



                                      
 

Monday 14 November 2016

ಪೊಸಡಿಗುಂಪೆಯ ಪ್ರವಾಸ



" ಅಹ!  ಏನು ಟೈಟಲ್ ಇಟ್ಕಂಡಿದೀಯ,  ಪೊಸಡಿಗುಂಪೆಯ ಬುಡದಲ್ಲೇ ಇದ್ರೂ.. "  ಎಂದ ಮಧು.


" ಇರಲಿ ಬಿಡು,  ಎಲ್ಲರಿಗೂ ಎಲ್ಲಿ ಗೊತ್ತಾಗುತ್ತೇ,  ನಮ್ಮ ಮುಳಿಗದ್ದೆಯಿಂದ ಪೊಸಡಿಗುಂಪೆಯ ದೂರಾ... "


ಅದು ಒಂದು ರಜಾದಿನ,  ಮನೆಯಲ್ಲಿ ಎಲ್ಲರೂ ಇದ್ದೆವು,  ನಾವಿಬ್ಬರೇ ಅಲ್ಲ,  ಮಕ್ಕಳ ಸೇನೆಯೂ ಬೆಂಗಳೂರಿನಿಂದ ಬಂದಿತ್ತು.


ಸಂಜೆಯಾಗುತ್ತಲೂ,  " ಅಮ್ಮ,  ಪೊಸಡಿಗುಂಪೆಗೆ ಹೋಗ್ತಾ ಇದೀವಿ,   ನಿಂಗೇನು ಕೆಲ್ಸ ಮನೆಯಲ್ಲಿ?  ಬಾ... "


" ಸರಿ,  ಬಂದೇ..  ಈ ಸೀರೆ ಬದಲಾಯಿಸಿ... " ಅನ್ನುವಷ್ಟರಲ್ಲಿ,


" ಬ್ಯಾಡಾ ಅತ್ತೆ,  ಈಗಿರೋದೇ ಚೆನ್ನಾಗಿದೆ. "  ಅಂದಳು ಮೈತ್ರಿ.


" ಅಷ್ಟೇ ಈಗ,  ಕಾರಿನಲ್ಲಿ ಕೂತಿದ್ದು ತಿರುಗಾ ಕಾರಿನಲ್ಲೇ ಮನೆಗೆ ಬರೂದು... "  ಅಂದು ಚಪ್ಪಲಿ ಮೆಟ್ಟಿ ಹೊರಟಿದ್ದಾಯ್ತು.


ಬಾಯಾರುಪದವಿನಲ್ಲಿ ಕಾರು ನಿಂತಿತು.   " ಸ್ವಲ್ಪ ಕೆಲ್ಸ ಇದೆ ಬ್ಯಾಂಕಿನಲ್ಲಿ...  ಸಾವಿರ ಐನೂರರ ನೋಟು ಬದಲಾಯಿಸಿ.... " ಅನ್ನುತ್ತ ಅಪ್ಪ ಮಗ ಇಳಿದು ಹೋದರು.


ಸುಮ್ಮನೇ ಹೊರಗೆ ನೋಡುತ್ತಿದ್ದಾಗ,   ನಮ್ಮ ಎದುರುಗಡೆ ಮೂರು ಜನಾ ನಿಂತ್ಕೊಂಡು ಕೈಲಿದ್ದ ವಸ್ತುವನ್ನು ಬಂಗಾರದ ಒಡವೆಯೋಪಾದಿಯಲ್ಲಿ ನಿರುಕಿಸುತ್ತ ಸಂಭ್ರಮಿಸುತ್ತಿದ್ದುದು ಕಂಡು ಬಂತು.


" ಅತ್ತೇ,  ಅವರ ಕೈಲಿ  ₹2000 ನೋಟು! "


" ಹ್ಞಾ, "   ನಾನೂ ಕಣ್ ಕಣ್ ಬಿಟ್ಟು ಅಂದೆ,  " ತೂಕೋ,  ಒರ ತೂದು ಕೊರ್ಪೆ... "   ( ನೋಡುವಾ,  ಒಮ್ಮೆ ನೋಡಿ ಕೊಡುತ್ತೇನೆ )


ನನ್ನ ಕೈಗೆ ಹೊಸ ನೋಟು ಬಂತು.   ಅತ್ತ ಇತ್ತ ತಿರುಗಿಸಿ,  ಬಣ್ಣ, ಗಾತ್ರಗಳ ಅಧ್ಯಯನ ಮಾಡ್ಬಿಟ್ಟು ಪುನಃ ವಾರಸುದಾರರಿಗೆ ಹಿಂದಿರುಗಿಸಿದೆವು.


ಮಗನ ರುಪಾಯಿ ನೋಟು ವಿನಿಮಯ ಆಯ್ತೋ ಗೊತ್ತಿಲ್ಲ,  ನಾವಂತೂ ನೋಟು ಕಂಡಿದ್ದಾಯ್ತು.




                              


ಕೇರಳ ಪ್ರವಾಸೋದ್ಯಮ ಇಲಾಖೆ ಪೊಸಡಿಗುಂಪೆಯನ್ನು ಪ್ರವಾಸೀತಾಣವೆಂದು ಘೋಷಿಸಿ ವರ್ಷಗಳೇ ಕಳೆದಿವೆ.      ಪ್ರಶಾಂತ ವಾತಾವರಣವೂ, ಸ್ವಚ್ಛ ಗಾಳಿಯೂ ಕೂಡಿದ  " ಸ್ವಚ್ಛ ಭಾರತ " ವನ್ನು ಕಾಣಬೇಕಾದರೆ ಪೊಸಡಿಗುಂಪೆಗೆ ಬನ್ನಿ.  ಒಂದು ನಿರ್ದಿಷ್ಟ ಜಾಗದಲ್ಲಿ ಕಾರು ನಿಲ್ಲಿಸಿ ಇಳಿದೆವು.


ನನಗೇನೂ ತಿರುಗಾಟ ಬೇಕಿಲ್ಲ,  ಅಪ್ಪನ ಮನೆಗೆ ಹೋಗಬೇಕಾದರೂ ಇದೇ ದಾರಿ.   ನನ್ನಪ್ಪನೂ ಕಿಲೋಮೀಟರ್ ಲೆಕ್ಕದಲ್ಲಿ ಡೀಸಲ್ ತುಂಬ ಉಳಿತಾಯ ಆಗುತ್ತೇಂತ ಈ ರಸ್ತೆಯಲ್ಲೇ ಹಿರಣ್ಯಕ್ಕೆ ಬರುತ್ತಿದ್ದರು,  ಅಪ್ಪ ಹಿಂದಿರುಗುವಾಗ ನನ್ನದೂ ಒಂದು ತವರುಮನೆಯ ಪಯಣ ಇದ್ದೇ ಇರುತ್ತಿತ್ತು.


ನಿರ್ಜನ ದಾರಿ,   ಸೂರ್ಯಾಸ್ತದ ವೇಳೆ,  ಮಂಜು ಮುಸುಕಿದ ಆಗಸ,  ಪಶ್ಚಿಮದ ಅರಬೀಸಮುದ್ರದಾಳಕ್ಕೆ ಇಳಿಯುತ್ತಿರುವ ಸೂರ್ಯ,  ಕೆಂಪು ಬೆಳಕಿನ ಚೆಂಡಿನಂತೆ,  ಕಿತ್ತಳೆ ಹಣ್ಣಿನಂತೆ... ಛೆಛೇ,  ವರ್ಣಿಸಲು ನಮ್ಮಿಂದಾಗದು.   ಚಂದದ ಸೂರ್ಯನನ್ನು ನೋಡಲು ಆಗುಂಬೆಗೆ ಹೋಗಬೇಕೆಂದೇನೂ ಇಲ್ಲ,  ಪೊಸಡಿಗುಂಪೆಗೆ ಬಂದರಾಯಿತು.   ಒಂದು ಬದಿಯಲ್ಲಿ ಸಮುದ್ರದ ಭೋರ್ಗರೆತ,  ಮತ್ತೊಂದೆಡೆ ಬೆಟ್ಟಗಳ ಸಾಲು.  ನೆಲ ತುಂಬ ಮುಳಿಹುಲ್ಲು.  ಕುಳಿತಿರಲು ಕಪ್ಪನೆಯ ಬಂಡೆಕಲ್ಲುಗಳು.   ಕಲ್ಲ ಮೇಲೆ ಅರಳಿರುವ  ಹೂ!    ಪೊಸಡಿಗುಂಪೆಗೆ ಬಂದ ಲೆಕ್ಕದಲ್ಲಿ ನನ್ನ ಕೈಗೆ ಒಂದು ಹೂ ಗೊಂಚಲು ಬಂದಿತು,  ಕಪ್ಪಗಿನ ಪಾರೆ ಕಲ್ಲುಗಳ ಮೇಲೆ ಅರಳುವ ಇದು ಪಾರೆ ಹೂ ಎಂದೇ ಖ್ಯಾತಿ ಪಡೆದಿದೆ.


ದೀಪಾವಳಿಯ ಸಮಯದಲ್ಲೇ ಈ ಹೂ ಪಾರೆಕಲ್ಲುಗಳ ಮೇಲೆ ಅರಳಿರುತ್ತದೆ,  ಬಣ್ಣವಿಲ್ಲ,  ಸುವಾಸನೆಯೂ ಇಲ್ಲ,  ನೀರೆರೆದು ಸಲಹಿದವರೂ ಇಲ್ಲ.   ದೀಪಾವಳಿಯ ಹಬ್ಬಕ್ಕೆ ಈ ಹೂವು ಪ್ರಕೃತಿಯ ವಿಶೇಷ ಕೊಡುಗೆ.


 



ಟಿಪ್ಪಣಿ 17/9/2020 ರಂದು ಸೇರಿಸಿದ್ದು.


ಇದರ ಸಸ್ಯಶಾಸ್ತ್ರೀಯ ಹೆಸರು Polycarpaea corymbosa ಎಂದಾಗಿದ್ದು ಕಪ್ಪು ಕಲ್ಲು ಬಂಡೆಗಳ ಮೇಲೆ ಅಂಟಿಕೊಂಡಂತೆಇರುವಂತದು ಫೇಸ್ಬುಕ್ ಮಿತ್ರರೂ ಕುಟುಂಬ ಬಂಧುವರ್ಗದವರೂ ಆದ ಡಾಶ್ರೀನಿವಾಸ ಶೇಂತಾರ್ ವೈಜ್ಞಾನಿಕ ಹೆಸರನ್ನುತೋರಿಸಿಕೊಟ್ಟರು.

ಎಲ್ಲ ಭಾರತೀಯ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಶೋಭಿಸುತ್ತಿರುವ  ಸಸ್ಯ ಕನ್ನಡದಲ್ಲಿ ಪಾದೆ ಮುಳ್ಳಿನ ಗಿಡ ದೀಪಾವಳಿಯ ಜನಪದ ಆಚರಣೆಯಲ್ಲಿ ಬಳಸುವ ವಾಡಿಕೆ ಇದೆ ಅಪ್ಟಟ ಭಾರತದ ಸಸ್ಯ ಇದಾಗಿದ್ದು ಆಂಗ್ಲಬಾಷಾಶಾಸ್ತ್ರ oldman’s cap ಅಂದಿದೆ.


  







Thursday 10 November 2016

Friday 4 November 2016

ಬಿಂಕದ ಸಿಂಗಾರೀ...




                            






                                                         




 


Sunday 23 October 2016

ಅವಲಕ್ಕಿ ಹಲ್ವಾ




" ಅವಲಕ್ಕೀದು ಹಲ್ವನಾ,  ಬಾಳೆಹಣ್ಣಿನ ಹಾಗೆ ಕಾಣುತ್ತಪ್ಪ.. "
" ಅಲ್ಲೇ ಇರೂದು ಒಳಗುಟ್ಟು.. "
" ಹೌದಾ,  ಹೇಗೆ ಮಾಡಿದ್ದೂ? "
" ಹೇಗೆ ಅಂತ ಕೇಳ್ತೀರಾ,  ಯಾಕೆ ಮಾಡಿದ್ದೂ ಅನ್ನಿ. "

 ಅದೇನಾಗಿತ್ತೂಂದ್ರೆ ಪತ್ತನಾಜೆ ಬಂದಿತ್ತಲ್ಲ,  ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ  ಪತ್ತನಾಜೆ ಸೇವೆ  ಇದ್ದಿದ್ದರಿಂದ ಹೋಗಿದ್ದೆವು.   ಪೂಜಾದಿಗಳೆಲ್ಲ ಮುಗಿದು ನಮಗೆ ಪ್ರಸಾದರೂಪವಾಗಿ ಕಲಸಿದ ಅವಲಕ್ಕಿ,  ಸೀಯಾಳ,  ಹಣ್ಣುಕಾಯಿ, ಹೂವು, ಗಂಧ ಎಲ್ಲ ದೊರೆಯಿತು.  ಸಮಾರಾಧನೆ ಊಟವಾಗಿ ಮನೆಗೆ ಬಂದೆವು.

ಸಂಜೆವೇಳೆಗೆ ಹಿರಣ್ಯದ ಮಹಿಷಂದಾಯ ದೈವಗುಡಿಯಲ್ಲಿ ಪತ್ತನಾಜೆ ಬಾಬ್ತು ವಿಶೇಷ ಪೂಜೆ, ತಂಬಿಲಸೇವೆ,  ಪ್ರಾರ್ಥನೆ ಇತ್ಯಾದಿ ಆದ ನಂತರ ಬಂದಂತಹ ಭಕ್ತಾದಿಗಳಿಗೆ ಪುನರ್ಪುಳಿ ಶರಬತ್ತು,   ಕಲಸಿದ ಅವಲಕ್ಕಿ....

ದೈವಸನ್ನಿಧಿಯಲ್ಲೇ ತಿಂದು ಕಸ ಮಾಡಲಿಕ್ಕುಂಟೇ,  ಪ್ರಸಾದ ಮನೆಗೆ ಬಂದಿತು.

" ನಮ್ಮ ಮನೆಯಲ್ಲಿ ಗಣಹೋಮ ಇತ್ತು. "  ಅಂದ್ಬಿಟ್ಟು ಹೇಮಕ್ಕ ಬಾಳೆಲೆ ತುಂಬ ಅವಲಕ್ಕಿ ಪ್ರಸಾದ ತಂದಿಟ್ಟಿದ್ರು.  ಅಷ್ಟದ್ರವ್ಯ ಎಂಬ ವಿಶೇಷಣದ ಇದನ್ನು ಅವಲಕ್ಕಿ ಕಲಸಿದ್ದು ಅನ್ನುವಂತಿಲ್ಲ,  ಅಷ್ಟದ್ರವ್ಯದಲ್ಲಿ ಬೆಲ್ಲ ತೆಂಗಿನಕಾಯಿ ಅವಲಕ್ಕಿ ಮಾತ್ರವಲ್ಲ, ಒಟ್ಟಾರೆಯಾಗಿ ಎಂಟು ವಿಧ ಫಲವಸ್ತುಗಳು ಇರುತ್ತವೆ,   ಅರಳು,  ಎಳ್ಳು ,  ತುಪ್ಪ, ಕಬ್ಬು, ಬಾಳೆಹಣ್ಣು ....

ಮನೆಯಲ್ಲಿ ಮಕ್ಕಳಿದ್ದಿದ್ರೆ ಕ್ಷಣ ಮಾತ್ರದಲ್ಲಿ ತಿಂದು ಮುಗಿಸ್ತಿದ್ರು,   ಈ ಅವಲಕ್ಕಿ ವೈವಿಧ್ಯಗಳನ್ನು ನಾವಿಬ್ಬರು ಎಷ್ಟು ತಿನ್ನಲಾದೀತು?

ಅದೂ ಅಲ್ಲದೆ ಸೆಕೆಗಾಲದ ಬಾಳೆಗೊನೆ ಕೂಡಾ ಹಣ್ಣಾಗಿ ಕಳಿತು,  ಕುಳಿತಿದೆ.   ಕೊಳೆತು ಹೋಗುವ ಮೊದಲೇ ಹಲ್ವ ಮಾಡಿ ತಿನ್ನಬೇಕಾಗಿದೆ.

ಎಂದಿನಂತೆ ಸಿಪ್ಪೆ ತೆಗೆದು ಹಣ್ಣಿನ ಒಳ್ಳೆಯ ಭಾಗ ಕಟ್ ಕಟ್ ಆಗಿ ಒಲೆಯ ಮೇಲೇರಿತು.  ದಪ್ಪ ಬಾಣಲೆಗೆ ಎಳ್ಳೆಣ್ಣೆ ಸವರಿ ಒಲೆಯ ಮೇಲಿಟ್ಟರೆ ಅಡಿ ಹಿಡಿಯುವುದಿಲ್ಲ (ತಳ ಹತ್ತುವುದಿಲ್ಲ).

ಚಿಕ್ಕ ಉರಿಯಲ್ಲಿ ಆಗಾಗ ಸೌಟಾಡಿಸುತ್ತಿದ್ದ ಹಾಗೆ ತುಪ್ಪ 2 - 3 ಚಮಚ ಬಿದ್ದಿತು.   ತುಪ್ಪದ ಸುವಾಸನೆಯೊಂದಿಗೆ ಬೆಂದ ಪರಿಮಳ ಬಂದಿತೇ,  ಹಣ್ಣಿನ ಗಾತ್ರದಷ್ಟೇ ಬೆಲ್ಲ ಪುಡಿಪುಡಿಯಾಗಿ ಬಾಣಲೆಗೆ ಇಳಿಯಿತು.

ಬೆಲ್ಲ ಕರಗಿ ಕರಗಿ ರಸಪಾಕವಾಗುತ್ತಿದ್ದಾಗ ತಲೆಯಲ್ಲಿ ಸೂಪರ್ ಐಡಿಯಾ ಬಂದಿತು,   ಮೂರು ಪ್ರತಿ ಅವಲಕ್ಕಿಗಳಿದ್ದುವಲ್ಲ,  ಒಂದು ಪ್ರತಿ ಹೇಗೋ ತಿಂದು ಮುಗಿಸಿದ್ದಾಗಿತ್ತು,  ಮತ್ತೊಂದು ಹಳಸಲು ಪರಿಮಳ ಬಂದಿದೆಯೆಂದು ಹೊರಗೆ ಹೋಗಿತ್ತು.  ಇನ್ನೊಂದು ಉಳಿದ ಅವಲಕ್ಕಿ ಪ್ರತಿ ಚೆನ್ನಾಗಿಯೇ ಇದ್ದಿತು.   ಅದನ್ನು ತಂದು ಬಾಂಡ್ಲಿಗೆ ಸುರುವಿ ಸೌಟಾಡಿಸುತ್ತಾ ಇದ್ದ ಹಾಗೆ ಗಟ್ಟಿಪಾಕ ಬಂದೇ ಬಿಟ್ಟಿತು!   ಸಂಜೆಯ ಚಹಾ ಜೊತೆ ತಿನ್ನಲು ಬೇಕಾದಷ್ಟಾಯಿತು....  ನಾಲ್ಕಾರು ದಿನ ಇಟ್ಟುಕೊಳ್ಳಲೂ ತೊಂದರೆಯಿಲ್ಲ.

ಹಾಗೇ ಸುಮ್ಮನೆ ತಿನ್ನಲು ಅವಲಕ್ಕಿ ಹಾಗೂ ಬಾಳೆಹಣ್ಣು ಸೊಗಸಾಗಿಯೇ ಇರುತ್ತದೆ,  ಈ ಸಂಯೋಜನೆಯ ರಸಪಾಕ ಕೂಡಾ ಚೆನ್ನಾಗಿ ಬಂದಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.  ನನ್ನದಂತೂ ಹೊಸ ಪ್ರಯೋಗ,  ನೀವೂ ಮಾಡಿ ನೋಡಿ.  ಹ್ಞಾಂ,  ಸುಮ್ ಸುಮ್ಮನೇ ಅವಲಕ್ಕಿಗೆ ಬೆಲ್ಲ ಕಾಯಿತುರಿ ಹಾಕಿ ಕಲಸದಿರಿ.   ಒಂದು ಪಾವು ಅವಲಕ್ಕಿಯನ್ನು ಹುರಿದು ಪುಡಿ ಮಾಡ್ಬಿಟ್ಟು ಬಾಳೆಹಣ್ಣಿನ ಪಾಕಕ್ಕೆ ಸೇರಿಸಿ.  ದ್ರಾಕ್ಷಿ , ಗೋಡಂಬಿ, ಏಲಕ್ಕಿ ಹಾಕಿದ್ರೆ ಇನ್ನೂ ಚೆನ್ನ.



                                    



   ಅಡಿಕೆ ತೋಟ ಇರುವಲ್ಲಿ ಬಾಳೆ ಇದ್ದೇ ಇರುತ್ತದೆ.   ಬಾಳೆಗೊನೆ ಹಣ್ಣಾಗಿ ದೊರೆತಾಗ ಇನ್ನಮ್ಮೆ ಕೇವಲ ಅವಲಕ್ಕಿ ಮಾತ್ರ ಉಪಯೋಗಿಸಿ ಮಾಡಿದ್ದೂ ಆಯ್ತು.
ಸಾಮಾನ್ಯ ಅಳತೆಯ ಪ್ರಮಾಣ ಹೀಗಿರಲಿ,

ಹತ್ತರಿಂದ ಹದಿನೈದು ಬಾಳೆಹಣ್ಣುಗಳು,   ತೆಳ್ಳಗೆ ಕತ್ತರಿಸಿ.
ದೊಡ್ಡ ಅಚ್ಚು ಬೆಲ್ಲ,  ಪುಡಿ ಮಾಡಿದ್ರಾ,  ಎರಡು ಲೋಟ ತುಂಬ ಇರಲಿ.
ಎರಡರಿಂದ ಮೂರು ಚಮಚ ಸುವಾಸನೆಯುಳ್ಳ ತುಪ್ಪ.
ಒಂದು ಲೋಟ ಅವಲಕ್ಕಿ,  ನಾನ್ ಸ್ಟಿಕ್ ತವಾದಲ್ಲಿ ಹುರಿದು, ಮಿಕ್ಸಿಯಲ್ಲಿ ಬೀಸಿದ್ದು.
ಮಾಡುವ ವಿಧಾನ:  ಪುನಃ ಮೊದಲು ಬರೆದಿದ್ದನ್ನು ಓದಿಕೊಳ್ಳುವುದು... 


                       


ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  ' ಉತ್ಥಾನ ' ದಲ್ಲಿ ಪ್ರಕಟಿತ ಬರಹ.  ಸಪ್ಟಂಬರ್, 2016.


Saturday 8 October 2016

ಸೌತೇ ಕಾೖ ದೋಸೆ




    


" ಅಬ್ಬಾ ಏನು ಸೆಕೇ...  ನೀರು ಕುಡಿದೂ ಕುಡಿದೂ ಸಾಕಾಯ್ತು."
" ಬರೇ ನೀರು ಕುಡಿದ್ರೇನು ಬಂತು,  ತಂಪು ಆಹಾರ ತಿನ್ಬೇಕು..." ಅಂದ್ರು ಗೌರತ್ತೆ.
" ಬೆಳಗಾದ್ರೆ ಎದ್ದು ಐಸ್ ಕ್ರೀಂ ತಿನ್ನೂ ಅಂತೀರಾ? "
" ಹಹ... ಹಾಗಲ್ಲ ಮಾರಾಯ್ತಿ... ತಿನ್ನುವ ತರಕಾರಿ ಉಂಟಲ್ಲ,  ಬದನೇಕಾಯಿ ನಂಜು,  ಹಾಗಲ ಪಿತ್ತ,  ಬಾಳೆಕ್ಕಾಯಿ ವಾತ ಹೀಗೆಲ್ಲ ಹೇಳ್ತಾರಲ್ಲ... ಸೌತೆಗೆ ಅಂತಹ ದೋಷ ಯಾವುದೂ ಇಲ್ಲ.   ಉಷ್ಣವೂ ಅಲ್ಲ,  ಶೀತವೂ ಇಲ್ಲ,  ಶರೀರಕ್ಕೂ ತಂಪು ಗೊತ್ತಾ. "  ಲೆಕ್ಚರ್ ಬಿಗಿದರು ಗೌರತ್ತೆ,  ಮೂಲೆಯಲ್ಲಿ ಸಾಲಾಗಿ ಪೇರಿಸಿಟ್ಟಿದ್ದ ಸೌತೆಕಾಯಿಗಳನ್ನು ನೋಡುತ್ತಾ.

ಸೌತೆಕಾಯಿಗಳನ್ನು ನೆರೆಮನೆಯ ರವೀಂದ್ರನ್ ತಂದ್ಕೊಟ್ಟಿದ್ದ,  ನಮ್ಮ ತೋಟದ ಕೆರೆಯಿಂದ ನೀರು ಅವನ ತರಕಾರಿ ಹಿತ್ತಿಲಿಗೆ ಹೋಗುತ್ತೆ,  ಅವನೂ ಆಗಾಗ ಏನೇನೋ ತರಕಾರಿ ತಂದಿಟ್ಟಿರುತ್ತಾನೆ.   ನನ್ನ ತರಕಾರಿ ಬೆಳೆ ಅಷ್ಟಕ್ಕಷ್ಟೇ,  ಬದನೆಕಾಯಿ ಒಂದು ಸಾಲು ಬಿಟ್ರೆ ಮತ್ತೇನಿಲ್ಲ.

" ಹೌದೂ,  ಸೌತೇದು ಹುಳಿಮೆಣಸು ಮಾಡೂ ಅಂತೀರಾ? "
" ಅಯ್ಯೋ,  ಅದೆಲ್ಲ ಬೇಡ...  ಪದಾರ್ಥಕ್ಕೆ ಬದನೆ ಉಂಟಲ್ಲ,  ನಾಳೆ ಸೌತೆಕಾಯಿ ದೋಸೆ ಮಾಡಬಹುದಲ್ಲ. " 
" ಇವತ್ತು ಉದ್ದಿನ ಕೊಟ್ಟಿಗೆ ತಿಂದಾಯ್ತು,  ನಾಳೆ ಪುನಃ ಉದ್ದು ಹಾಕಿ ಸೌತೆಕಾಯಿ ದೋಸೆಯಾ...  "
"ಉದ್ದು ಹಾಕ್ಬೇಡ,  ಬರೇ ಅಕ್ಕಿ ಮತ್ತು ಸೌತೆ ಹಾಕಿ ಅರೆದಿಡು,  ತಿಳೀತಾ... "

ಗೌರತ್ತೆ ಅಂದಂತೆ ಮೂರು ಪಾವು ಅಕ್ಕಿ ನೀರಿನಲ್ಲಿ ನೆನೆ ಹಾಕಿದ್ದಾಯ್ತು.
ಸಂಜೆಯಾಗುತ್ತಲೂ ಸೌತೆಕಾಯಿ ಸಿಪ್ಪೆ ಹಾಗೂ ಬೀಜಗಳನ್ನು ಹೊರಗೆಸೆದು ತುರಿದು ಇಟ್ಕೊಂಡಿದ್ದಾಯ್ತು.
ಬೇಸಿಗೆಯಲ್ವೇ,  ಸಂಜೆಯ ವೇಳೆ ಇನ್ನೇನೋ ಕೆಲಸಗಳಿರುತ್ತವೆ.   ಮುಖ್ಯವಾಗಿ ಕೈದೋಟದ ಗಿಡಗಳಿಗೆ ನೀರು ಹಾಕೋದು.   ಈ ಹೊರಕೆಲಸಗಳನ್ನು ಮುಗಿಸಿ,  ಒಳ ಬಂದು ಹಾಲು ಕಾಯಿಸಲಿಟ್ಟು,  ಅನ್ನ ಬಿಸಿ ಮಾಡಿ,  ದೇವರಿಗೊಂದು ದೀಪ ಹಚ್ಚಿಟ್ಟು,   ಸ್ವಲ್ಪ ಹೊತ್ತು ಫೇಸ್ ಬುಕ್ಕು ಓದಿ,   ಊಟದ ಟೇಬಲ್ ರಾತ್ರಿಯೂಟಕ್ಕೆ ತಯಾರಾಗಿ ನಿಂತಾಗ ನನ್ನ ದೋಸೆ ಅರೆಯುವ ವೇಳೆ ಬಂದಿತು.

ಅಕ್ಕಿ,  ಅಂದ್ರೆ ಬೆಳ್ತಿಗೆ ಅಕ್ಕಿಯನ್ನು ಈಗ ದೋಸೆ ಅಕ್ಕಿ, ಇಡ್ಲಿ ಅಕ್ಕಿ ಎಂದು ವರ್ಗೀಕರಿಸಿ ಹೇಳುತ್ತಿರುವುದು ನನಗೂ ವಿಸ್ಮಯ ತಂದಿದೆ.   ಇದೇನು ವಿಚಿತ್ರ ಅಂತಿದ್ದ ಈ ಹೊಸ ಸಬ್ಜೆಕ್ಟು,  ಬೆಂಗಳೂರಿಗೆ ಹೋಗಿದ್ದಾಗ ನಿವಾರಣೆ ಆಯ್ತು.   ಬೆಂಗಳೂರಿನ ನಮ್ಮದೇ ಮನೆಗೆ ಹೋಗಿದ್ದೆವು,  ಪ್ರಕಾಶನ ಹೆಂಡ್ತಿ ಗೀತಾ,  ಎರಡೂ ಪ್ರತಿ ಅಕ್ಕಿ ಡಬ್ಬಗಳನ್ನು ಬಿಡಿಸಿ  " ಅತ್ತೇ,  ಇದು ದೋಸೆ ಅಕ್ಕಿ,  ಅರೆಯುವಾಗ ನೊಂಪು ನೊಂಪಾಗಿ ನುಣ್ಣಗಾಗುತ್ತೆ,   ಇಡ್ಲಿ ಅಕ್ಕಿ ಉಂಟಲ್ಲ,  ಎಷ್ಟೇ ಅರೆದ್ರೂ ತರಿ ತರಿ... " ಅಂದಳು.
" ಅಷ್ಟೇನಾ,  ಎರಡೂ ಬೆಳ್ತಿಗೆ ಅಕ್ಕೀನೇ.... "

ಈಗ ನೆನೆ ಹಾಕಿಟ್ಟಿರುವ ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು,   ಸೌತೆಕಾಯಿ ತುರಿಯೊಂದಿಗೆ ಅರೆಯಿರಿ.   ಬೇರೆ ನೀರು ಕೂಡಿಸದಿರಿ,  ಸೌತೆಯಲ್ಲಿ ಶೇಕಡಾವಾರು 80 ಕ್ಕೂ ಅಧಿಕ ನೀರು ಇದೆ.   ನುಣ್ಣಗಾದ ಹಿಟ್ಟನ್ನು ರುಚಿಗೆ ಉಪ್ಪು ಕೂಡಿಸಿ ಮುಚ್ಚಿಟ್ಟಿರಿ.  ಹುದುಗು ಬಂದ ಹಿಟ್ಟನ್ನು ಮಾರನೇ ದಿನ ದೋಸೆ ಎರೆಯಿರಿ.  ತೆಂಗಿನಕಾಯಿ ಚಟ್ಣಿ,  ಮೊಸರು,  ಬೆಲ್ಲದ ಜೇನುಪಾಕ ಕೂಡಿಕೊಂಡು ದೋಸೆ ಸವಿಯಿರಿ.   ಹಿಟ್ಟನ್ನು ಅರೆದ ಕೂಡಲೇ  ದೋಸೆ ಎರೆಯಬೇಕಿದ್ದರೆ ನೀರು ದೋಸೆ ಥರ ಹಾರಿಸಿ ಎರೆದರಾಯಿತು.  

ಸಸ್ಯಶಾಸ್ತ್ರೀಯವಾಗಿ Cucumis sativus ಎಂದಿರುವ ನಮ್ಮ ಊರ ಸೌತೆಗೆ ಎಷ್ಟೊಂದು ನಾಮಧೇಯಗಳಿವೆ ಎಂಬ ವಿಷಯ ಗೂಗಲ್ ರಿಸರ್ಚ್ ಮಾಡಿದಾಗಲೇ ತಿಳಿದದ್ದು.

ಬೆಂಗಳೂರಿಗರು ಇದನ್ನು ಮಂಗಳೂರು ಸೌತೆ ಅಂತಾರೇ,  ಬಣ್ಣದ ಸೌತೆಯೂ ಹೌದು.    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌತೆಯ ಬೆಳೆ ಕರಾವಳಿಯುದ್ದಕ್ಕೂ ಇರುವುದರಿಂದ ಇದು ಮಲಬಾರ್ ಸೌತೆಯೂ ಹೌದು.  ಕೊಂಕಣಿಗರು ಈ ಸೌತೆಯಿಂದ ವಿಧ ವಿಧವಾದ ಖಾದ್ಯಗಳನ್ನೂ ತಯಾರಿಸುತ್ತಾರೆ.

ದೋಸೆ ಮಾಡಿದ ವಿಧಾನ ನೋಡಿದ್ರಲ್ಲ,  ಕಡುಬು ಕೂಡಾ ಮಾಡಿಕೊಳ್ಳಬಹುದು.   ಈಗ ಇಡ್ಲಿ ಅಕ್ಕಿ ಉಪಯೋಗಿಸಿದ್ರಾಯ್ತು.    ಇಲ್ಲಿ ಹಿಟ್ಟನ್ನು ಹುಳಿ ಬರಿಸಬೇಕಾಗಿಲ್ಲ.   ತೆಂಗಿನ ತುರಿ ಹಾಗೂ ಬೆಲ್ಲ ಕೂಡಿ ಅರೆದು,  ಬಾಡಿಸಿದ ಬಾಳೆ ಎಲೆಯಲ್ಲಿ ಸುತ್ತಿಟ್ಟು,  ಅಟ್ಟಿನಳಗೆ ಯಾ ಇಡ್ಲಿ ಪಾತ್ರೆ ಅಥವಾ ಪ್ರೆಶರ್ ಕುಕ್ಕರ್ ಒಳಗೆ ಹಬೆಯಲ್ಲಿ ಬೆಂದಂತಹ ಕಡುಬು ರುಚಿಕರ ತಿನಿಸು.   

ಈ ಸೌತೆಯ ಇನ್ನೊಂದು ವಿಶೇಷ ಗುಣ ಏನಪ್ಪಾಂದ್ರೆ ಚೆನ್ನಾಗಿ ಬೆಳೆದ ಸೌತೆಕಾಯಿಗಳನ್ನು ದೀರ್ಘಕಾಲ ಇಟ್ಟುಕೊಳ್ಳಬಹುದು.   ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಕಟಾವ್ ಆಗುವಂತೆ ಬೆಳೆದರೆ ಮಳೆಗಾಲಕ್ಕೆ ತರಕಾರಿಯ ಕೊರತೆ ಬಾರದಂತೆ ಕಾಪಿಟ್ಟುಕೊಳ್ಳಬಹುದಾಗಿದೆ.   

  ಅಧಿಕ ನೀರಿನಂಶ ಹೊಂದಿರುವ ಈ ತರಕಾರಿ ಮೂತ್ರವರ್ಧಕ,   ಮಲಬದ್ಧತೆಯನ್ನು ಹೋಗಲಾಡಿಸುತ್ತ ಜೀರ್ಣಾಂಗಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು.   ತರಕಾರಿ ತಿನ್ನಲೊಪ್ಪದ ಮಕ್ಕಳಿಗೆ ಈ ತೆರನಾದ ತಿಂಡಿಗಳ ಮೂಲಕ ತರಕಾರಿ ತಿನ್ನಿಸಿದ ಹಾಗೂ ಆಯಿತು.


                         



  ಟಿಪ್ಪಣಿ:  ಈ ಬರಹ ಜುಲೈ, 2016   ' ಉತ್ಥಾನ ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ.


Wednesday 28 September 2016

ಮೈತ್ರಿಯ ಮ್ಯಾಗಿ




    


 
ಸೊಸೆ ಮನೆಗೆ ಬಂದಳು,  ಇದ್ದಿದ್ದೇ ಬಿಡಿ,  ಮಗನ ಮದುವೆಯ ನಂತರ ಸೊಸೆ ಮನೆಗೆ ಬರುವುದಿದ್ದೇ ಇದೆ.   ಅತ್ತೇ ಪಟ್ಟಕ್ಕೇರಿದ ನಂತರ ಸೊಸೆಯೊಂದಿಗೆ ವ್ಯವಹರಿಸುವ ವಿಧಾನ ಹೇಗಪ್ಪಾ ಎಂದೂ ತಲೆ ಕೆಡಿಸಿಕೊಂಡಿದ್ದೂ ಇದೆ.  

" ಈಗಿನ್ಕಾಲದ ಹುಡ್ಗೀರು...  ನೀನು ಏನೂ ಹೇಳೋದು ಕೇಳೋದೂ ಮಾಡ್ಬೇಡಾ. "  ಹೀಗೆಲ್ಲ ಸಲಹೆಗಳೂ,

" ಅಮ್ಮ ನೀನು ಈ ಥರ ದೊಡ್ಡ ಸ್ವರ ಏರಿಸಿ ಮಾತಾಡಿದ್ರೆ ಮೈತ್ರಿಗೆ ಹೆದರಿಕೆ ಆದೀತು "  ಅನ್ನುವ ಮಗಳು.

ಹೌದೂ... ನಾವೂ ಒಂದಾನೊಂದು ಕಾಲದಲ್ಲಿ ಈಗಿನ್ಕಾಲದ ಹುಡ್ಗೀರಾಗಿಯೇ ಅತ್ತೆ ಮನೆಗೆ ಬಂದೋರಲ್ವೇ... ನನ್ನ ಚಿಂತನೆ.

ಏನೇ ಇರಲಿ,   ' ವಧೂಗೃಹಪ್ರವೇಶ ' ದ ಸಭಾ ಕಾರ್ಯಕ್ರಮಗಳೆಲ್ಲ  ಮುಗಿದ ನಂತರ,  ಸಂಜೆವೇಳೆಗೆ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಬಾಯಾರು ಪಂಚಲಿಂಗೇಶ್ವರ ದೇವಳದ ಸಭಾಭವನದಿಂದ ಹಿರಣ್ಯಕ್ಕೆ ವಾಪಸ್ಸಾದೆವು.

ಸುಸ್ತೋ ಸುಸ್ತು,  ನಾಳೆ ಪುನಃ ಇನ್ನೊಂದು ಔತಣಕೂಟ ಮೈತ್ರಿಯ ಅಪ್ಪನಮನೆ ಮರಕ್ಕಿಣಿಯಲ್ಲಿ ಇದ್ದಿತು.   ಅದಕ್ಕೂ ಹೊರಡುವ ಸಿದ್ಧತೆ ಆಗಬೇಕಿದೆ.   ಸೀರೆ ಉಡಲು ತಿಳಿಯದ ಈಗಿನ್ಕಾಲದ ಹುಡ್ಗೀರಾದ ಮಗಳಿಗೂ ಸೊಸೆಗೂ ಸೀರೆ ಉಡಿಸಲು ನಮ್ಮೂರ ಬ್ಯೂಟಿ ಪಾರ್ಲರು ಲೇಡಿ,  ಯೋಗೀಶನ ಹೆಂಡ್ತಿಗೆ ಫೋನ್ ಮಾಡಿ ಮುಂಜಾನೆ ಒಂಭತ್ತು ಗಂಟೆಗೆ ಬರಲು ತಿಳಿಸಿದ್ದೂ ಆಯ್ತು.   ಮದುವೆಯ ನಂತರ ತವರುಮನೆಗೆ ಮೊದಲ ಬಾರಿ ಹೋಗುವಾಗ ಅಪ್ಪ ಕೊಟ್ಟಂತಹ ಭರ್ಜರಿ ಜರತಾರಿ ಸೀರೆಯಲ್ಲೇ ಹೋಗಬೇಕಾದ ರೂಢಿ.  ಅಂತೂ ಈ ಮಕ್ಕಳ ಸೀರೆ ಉಡುವ ಆಟದಿಂದಾಗಿ ನಾನೂ ನೆಟ್ಟಗೆ ಸೀರೆ ಉಡಲು ಕಲಿತ ಹಾಗೂ ಆಯ್ತು.

ಈ ದಿನ ನಮಗೆ ಅಂತಹ ಧಾವಂತದ ಕೆಲಸವೇನೂ ಇದ್ದಿರಲಿಲ್ಲವಾದ್ದರಿಂದ ಮರಕ್ಕಿಣಿ ಮನೆಯಲ್ಲಿ ಔತಣಕೂಟದೊಂದಿಗೆ,  ಸಂಜೆಯ ತನಕ ಗಡದ್ದು ನಿದ್ದೆ ತೆಗೆದು ಹಿರಣ್ಯಕ್ಕೆ ಹಿಂತಿರುಗಿದೆವು.   ದೂರವೇನಿಲ್ಲ,  ಅರ್ಧ ಗಂಟೆಯ ದಾರಿ.

ತುಂಬ ಹಳೆಯ ಮನೆ,  ಮನೆ ತುಂಬ ಮರದ ಕೆತ್ತನೆ ಕೆಲಸದ ಶೃಂಗಾರ,  ಕಾಂಕ್ರೀಟು ಕಟ್ಟಡಗಳ ಎಡೆಯಲ್ಲಿ ವಿಭಿನ್ನವಾಗಿ ಎದ್ದು ತೋರುವ ಮನೆಯ ಒಳಾಂಗಣದ ದೃಶ್ಯಚಿತ್ರಣ ನನ್ನ ಐಫೋನ್ ಒಳಗೆ ತುಂಬಿಸಿದ್ದಾಯ್ತು.

ಮನೆಯ ಕಟ್ಟಡದ ಒಳಗೆ ಕೂಡಿದಂತಿರುವ ಸಿಹಿನೀರ ಬಾವಿ,  ಮೇಲ್ನೋಟಕ್ಕೆ ಗಿಳಿಬಾಗಿಲು... ಹ್ಞಾ,  ನಮ್ಮೂರ ಹವ್ಯಕ ಭಾಷಿಕರು ಕಿಟಿಕಿಯನ್ನು ಗಿಳಿಬಾಗಿಲು ಅಂತಲೇ ಅನ್ನುವುದಾಗಿದೆ.  ನನಗಂತೂ ಇಷ್ಟವಾಯಿತು.

ಈ ಹಿಂದೆ  " ಕಣ್ಣೆದುರಲ್ಲಿ ಕಾಷ್ಠಕಲೆ " ಎಂಬ ಬರಹವನ್ನು ನನ್ನ ಅಪ್ಪನ ಮನೆಯ ಕಲಾಸೊಗಸನ್ನು ಆಧರಿಸಿ ಬರೆದಿದ್ದೆ.    ಈ ಮನೆಯ ಬಾಜಾರ ಕಂಭಗಳು ಇನ್ನೂ ವೈಭವೋಪೇತವಾಗಿವೆ.



" ಸಂಜೆ ಆಯ್ತಲ್ಲ,  ಹಾಲು ಬೇಡ್ವೇನಮ್ಮಾ.. "  ಅಂದ ಮಧು.
" ತಂದಿಟ್ಟಿರು,  ನಾಳೆ ಮೊಸರು ಆಗ್ಬೇಡ್ವೇ.. "
" ಮಿಲ್ಮಾ ಡೈರಿ ಹಾಲಿನ ರುಚಿ ಮೈತ್ರಿ ನೋಡ್ಬೇಡ್ವೇ.. "
" ಹೌದಲ್ಲ,  ಅರ್ಧ ಲೀಟರು ಜಾಸ್ತಿ ತಾ... "

ಹಾಲು ಉತ್ಪಾದಕರು ಡಿಪೋಗೆ ಹಾಲು ತಂದಪ್ಪಿಸುವ ಹೊತ್ತು,  ಆ ಹೊತ್ತಿನಲ್ಲಿ ತಾಜಾ ಹಾಲನ್ನು ಡಿಪೋದಿಂದಲೇ ಕೊಂಡೊಯ್ಯಲವಕಾಶವಿದೆ.   ಹ್ಞಾ,  ಸಂಜೆಯ ಹಾಲು ದಪ್ಪ ಜಾಸ್ತಿ,  ಕೆನೆಭರಿತ ಈ ಹಾಲಿನಿಂದ ಅಧಿಕ ಬೆಣ್ಣೆ ಹಾಗೂ ತುಪ್ಪ ಲಭ್ಯ.

ಬೆಂಗಳೂರಿನ ಬೆಡಗಿ ಕೇರಳದ ಡಿಪೋ ಹಾಲು ತಂದಳು,  ಬೇಕರಿಯಿಂದ ಕುರುಕಲು ತಿಂಡಿಗಳೂ....   ಮನೆಯಲ್ಲೇ ಮಾಡಿದ ತಾಜಾತನ ನಮ್ಮೂರ ಗಾಯತ್ರಿ ಬೇಕರಿಯದ್ದು.   

" ಅಮ್ಮ,  ಇನ್ನು ಟೀ ... ಮೈತ್ರಿ ಮ್ಯಾಗಿ ಮಾಡ್ತಾಳಂತೆ. "

ಔತಣದೂಟ ತಿಂದು ತಿಂದೂ ಹಸಿವಿದ್ದಂತಿಲ್ಲ,  ಆದರೂ ಸೊಸೆ ತಿಂಡಿ ಮಾಡ್ತಾಳೆಂದರೆ...  ತಿನ್ನದಿದ್ದರಾದೀತೇ?

2 ಮಿನಿಟ್ ನೂಡಲ್ಸ್ ಕ್ಷಣಮಾತ್ರದಲ್ಲಿ ಟೇಬಲ್ ಮೇಲೇರಿತು.   " ಅಯ್ಯೋ!  ಅಲ್ಲಿ ಬೇಕಾದಷ್ಟು ತರ್ಕಾರಿ ಇತ್ತಲ್ಲ... ಹಾಕ್ಬೋದಿತ್ತು.. "  ತುಟಿ ಮೀರಿ ಬಂದಿತು.

" ಈವಾಗ ಹೀಗೇ ತಿನ್ನೋಣ... "  ತಟ್ಟೆ ಚಮಚಾ ಆಟದೊಂದಿಗೆ ಮ್ಯಾಗಿ ತಿಂದು,  ಚಹಾ ಕುಡಿದು ಎದ್ದೆವು.

" ರಾತ್ರಿಯೂಟಕ್ಕೆ ಗಂಜಿ,  ಉಪ್ಪಿನ್ಕಾಯಿ ಸಾಕಲ್ವ... "
" ಸಾಕೂ,  ನಮಗ್ಯಾರಿಗೂ ಹಸಿವಿಲ್ಲ... "

ಮಾರನೇ ದಿನ ಮಧು ಮೈತ್ರಿ ಬೆಂಗಳೂರಿಗೆ ಹೊರಟು ನಿಂತೂ ಆಯ್ತು,  ಮಗಳಂತೂ ಎರಡು ದಿನ ಮೊದಲೇ ಹೋಗಿದ್ದಳು.

ಮನೆಯೊಳಗಿನ ತೆಗೆದಿರಿಸುವ,  ಹೊರಗೆ ಬಿಸಾಡುವ,  ತೊಳೆದಿರಿಸುವ ವಸ್ತು ಸಾಮಗ್ರಿಗಳ ಒಪ್ಪಓರಣದಲ್ಲೇ ದಿನಗಳೆರಡು ಕಳೆಯಿತು.   ಅದ್ಯಾವುದೋ ಹೊತ್ತಿನಲ್ಲಿ ಸೊಸೆಯ ಮ್ಯಾಗಿ ಪ್ಯಾಕು ಸಿಕ್ಕಿತು,  ನೋಡಿದ್ರೆ ಇನ್ನೂ ಒಂದು ಬಂಡಲ್ ನೂಡಲ್ಸ್ ಹಾಗೂ ಮಸಾಲಾ ಇದೆ!

ಸರಿ,  ಇವತ್ತು ಸಂಜೆಗೆ ನನ್ನದೂ ಮ್ಯಾಗಿ....   ಅಡುಗೆಗೆ ತರಕಾರಿ ಹಚ್ಚಿಡುವಾಗ ಮ್ಯಾಗಿಗೆ ಬೇಕಾದಂತಹ ಕ್ಯಾರೆಟ್,  ಟೊಮ್ಯಾಟೋ,  ಬಟಾಟೆ,  ಕ್ಯಾಪ್ಸಿಕಂ,  ಈರುಳ್ಳಿ,  ಹಸಿಮೆಣಸು ತೆಗೆದಿಟ್ಟು,  ಹಚ್ಚಬೇಕಾದ್ದನ್ನು ಹಚ್ಚಿಟ್ಟು,   ತುರಿಯಬೇಕಾದ್ದನ್ನು ತುರಿದಿಟ್ಟು,  ಎರಡು ಹಸಿಮೆಣಸು ಸಿಗಿದಿಟ್ಟು ಆಯ್ತು.

 ಮ್ಯಾಗಿ ಈ ತನಕ ಮಾಡಿದ್ದೂಂತ ಇಲ್ಲ,  ಯಾವಾಗ್ಲೋ ತಂಗಿ ಮನೆಗೆ ಹೋಗಿದ್ದಾಗ ಅವಳ ಮ್ಯಾಗಿ ತಿಂದಿದ್ದೆ.  ಬಾಣಲೆಗೆ ತುಸು ತುಪ್ಪ ಸವರಿದ್ದಾಯಿತು.  ತರಕಾರಿಗಳನ್ನು ಬಾಡಿಸಿ,   ಮ್ಯಾಗಿಯ ಅಳತೆಗೆ ತಕ್ಕಷ್ಟು ಒಂದ್ಲೋಟ ನೀರು ಸುರಿದು,   ಮ್ಯಾಗಿ ಮಸಾಲೆಯನ್ನು ಸುರಿದಿದ್ದಾಯ್ತು.   ತರಕಾರಿಗಳೊಡನೆ ನೀರು ಕುದಿ ಕುದಿದಾಗ ಇದ್ದಬದ್ದ ಮ್ಯಾಗಿ ಗಂಟು ನೀರಿಗೆ ಬಿತ್ತು,  2 ಮಿನಿಟ್ ಅಲ್ವೇ,  ಇಂಡಕ್ಷನ್ ಸ್ಟವ್ ಎರಡು ನಿಮಿಷಗಳಲ್ಲಿ ಆಫ್ ಆಗುವಂತೆ ಸೆಟ್ ಮಾಡಿ ಮುಚ್ಚಿಟ್ಟು...

ಚಹಾ ತಯಾರಾಯ್ತು,  ಮ್ಯಾಗಿ   "ರೆಡಿ ಟು ಈಟ್... " ಅಂದಿತು.



Wednesday 7 September 2016

ಹಬ್ಬದ ಪಾಯಸ




               




 
ಹಬ್ಬಗಳು ಸಾಲು ಸಾಲಾಗಿ ಬರುತ್ತಲಿವೆ.   ಒಂದೊಂದು ಹಬ್ಬಕ್ಕೂ ಅದಕ್ಕೆಂದೇ ವಿಶೇಷ ಹಬ್ಬದಡುಗೆ ಆಗಲೇಬೇಕು,  ಹಬ್ಬದೂಟ ಉಣಲೇಬೇಕು,  ಏನಿಲ್ಲಾಂದ್ರೂ ಒಂದು ಪಾಯಸ ಮಾಡಿ ಸವಿಯಲೇ ಬೇಕು.  

ದವಸಧಾನ್ಯಗಳ ಬೆಲೆ ಗಗನಕ್ಕೇರಿದೆ.   ಬೇಳೆಕಾಳುಗಳ ಧಾರಣೆ ಕೇಳಿದ್ರೆ ಬೆಚ್ಚಿ ಬೀಳುವಂತಾಗಿದೆ.    ಚೌತಿ ಹಬ್ಬಕ್ಕೆ ನಮ್ಮ ಹಿರಿಯರ ಕಾಲದಲ್ಲಿ ಹೆಸ್ರುಬೇಳೆ ಪಾಯಸವನ್ನೇ ಮಾಡುವ ರೂಢಿ ಇಟ್ಟುಕೊಂಡಿದ್ದೆವು.   ನಮ್ಮತ್ತೆ ಹೆಸ್ರುಬೇಳೆ ತರಿಸಿ,    ಕೆಂಪಾಗಿ ಘಮ್ಮನೆ ಹುರಿದು ಡಬ್ಬದಲ್ಲಿ ಶೇಖರಿಸಿ ಇಡುತ್ತಿದ್ದರು.   ಹಾಳಾಗದಂತೆ ಕಾಪಿಡುವ ಉದ್ಧೇಶವೂ ಆಯ್ತು,  ಯಾರೇ ನೆಂಟರು ಬರಲಿ,  ಮನೆ ಅಳಿಯಂದಿರೇ ಹಾಜರಾಗಲಿ,  ಹೆಸ್ರುಬೇಳೆ ಪಾಯಸ ದಿಢೀರನೆ ಸಿದ್ಧಪಡಿಸುವುದಕ್ಕೂ ಆಯ್ತು.  ಇದೆಲ್ಲ ವರ್ಷಗಳ ಹಿಂದಿನ ಮಾತಾಯ್ತು.

ಈಗಲೂ ಪಾಯಸ ತಿನ್ನದಿದ್ದರಾದೀತೇ,   ಹಗುರಾಗಿ ಮಿತವ್ಯಯದ ಪಾಯಸ ಮಾಡುವುದು ಹೇಗೆ?
ಮೊದಲಾಗಿ ಅಡುಗೆಮನೆಯಲ್ಲಿ ಏನೇನಿದೆ ಎಂದು ನೋಡಿಟ್ಟುಕೊಳ್ಳುವುದು.

ತೆಂಗಿನಕಾಯಿ ಇದೆ.
ಬೆಲ್ಲ ಒಂದೆರಡು ಅಚ್ಚು ಇದ್ದರೆ ಸಾಕು.
ನಾಲ್ಕಾರು ಬಾಳೆಹಣ್ಣುಗಳೂ,
ಯಾರೂ ಕೇಳುವವರಿಲ್ಲದ ಕ್ಯಾರೆಟ್ಟೂ...
ಅಹಹಾ... ಪಾಯಸ ಮಾಡೇ ಬಿಡೋಣ.

ಬಾಳೆಹಣ್ಣುಗಳನ್ನು ಚೆನ್ನಾಗಿ ನುರಿದು,  ಬೆಲ್ಲ ಕೂಡಿ ಬೇಯಿಸಿ.
ತೆಂಗಿನಕಾಯಿ ಸುಲಿದು,  ಒಡೆದು,  ಕಾಯಿ ತುರಿಯಿರಿ,  ಅರೆದು ಹಾಲು ತೆಗೆದಿರಾ,
ನೀರು ಕಾಯಿಹಾಲನ್ನು ಬಾಳೆಹಣ್ಣಿನ ಪಾಕಕ್ಕೆ ಎರೆಯಿರಿ.
ಕ್ಯಾರೆಟ್ ತುರಿಯಿರಿ,  ಕ್ಯಾರೆಟ್ ತುರಿಯೂ ಕೂಡಿದ ಬಾಳೆಹಣ್ಣಿನ ರಸಪಾಕ ಬೇಯಲಿ.
ಕುಕ್ಕರ್ ಉತ್ತಮ,  ಒಂದು  ವಿಸಿಲ್ ಸಾಕು.

ಬೆಂದ ಮಿಶ್ರಣಕ್ಕೆ ರುಚಿಗೆ ಹೊಂದುವಷ್ಟು ಬೆಲ್ಲ ಪುಡಿ ಮಾಡಿ ಹಾಕಿದ್ರಾ,  ದಪ್ಪ ಕಾಯಿಹಾಲು ಎರೆದು ಕುದಿಸಿ.  ಚಿಟಿಕೆ ಏಲಕ್ಕಿ ಉದುರಿಸಿ,  ಘಮಘಮಿಸುವ ತುಪ್ಪ ಎರೆದರೂ ನಡೆದೀತು.
ದ್ರಾಕ್ಷಿ ಗೇರುಬೀಜ ಯಥಾನುಶಕ್ತಿ ಹಾಕುವುದು.

Sunday 28 August 2016

ಅಜ್ಜಿಯ ಸೀರೆ




ಮಗನ ಮದುವೆಗೆ ದಿನ ನಿಗದಿಯಾಗುತ್ತಿದ್ದಂತೆ ವೈದಿಕ ಸಾಹಿತ್ಯದ ಲಿಸ್ಟ್,  ಮದುಮಗನ ದಿಬ್ಬಣ ಕಲ್ಯಾಣಮಂಟಪಕ್ಕೆ ಆಗಮಿಸಬೇಕಾದರೆ ನಾವು ರೂಢಿಸಿ ಇಟ್ಟುಕೊಳ್ಳಬೇಕಾದ ಪರಿಕರಗಳ ಪಟ್ಟಿ  ಪುರೋಹಿತರಾದ ಪರಕ್ಕಜೆ ಅನಂತ ಭಟ್ಟರ ವಾಟ್ಸಪ್ ಮುಖೇನ ಬಂದಿತು.



ಮದುವೆಯಂತಹ ಆಡಂಬರದ ಸಡಗರ ಇದೇ ಮೊದಲ ಬಾರಿ ನಾವು ಎದುರಿಸುವುದಾಗಿದ್ದರಿಂದ,  ಎಲ್ಲವನ್ನೂ ನಿಭಾಯಿಸಲು ಹಿರಿಯರಾದ ನಮ್ಮವರ ಭಾವ,  ರಾಮ ಶರ್ಮ ಸುಬ್ರಹ್ಮಣ್ಯದಿಂದ ಬಂದಿಳಿದರು.

ಕನ್ನಡಕ ಮೂಗಿಗೇರಿಸಿ ಪಟ್ಟಿ ಓದುತ್ತಾ  " ಅಡಿಕೆ... ತೆಂಗಿನಕಾಯಿ, ಸಿಂಗಾರ... "
" ಅದನ್ನೆಲ್ಲ ಚೆನ್ನಪ್ಪ ರೂಢಿಸಿ ಇಟ್ಟಿದ್ದಾನೇ..."
" ಇಟ್ಟರಾಯಿತೇ,  ಎಲ್ಲಿದೇ ಅಂತ ಹುಡುಕುವಂತಾಗಬಾರದು..  ಈಗಲೇ ಪ್ಯಾಕ್ ಮಾಡಬೇಕು. "

" ಸಿಂಗಾರ ಯಾತಕ್ಕೇ ಗೊತ್ತಾ.. ಮದುಮಗನ ಬಾಸಿಗ ಕಟ್ಟಲಿಕ್ಕೆ... ಈಗಲೇ ಕಟ್ಟಿ ಇಡುವುದು ಉತ್ತಮ.. "
" ಯಾಕೆ ಸುಮ್ನೇ,  ಪುರೋಹಿತರೇ ಮೊನ್ನೆ ನಾಂದಿ ದಿನ ಕಟ್ಟಿದ್ಹಂಗಿತ್ತು..."
" ನಾಳೆ ಎಲ್ಲ ಕೆಲ್ಸ ಜಲ್ದಿ ಆಗ್ಬೇಕು,  ಬಾಳೆಬಳ್ಳಿ ಎಲ್ಲುಂಟು?  ತಂದಿಡು. " ಆ ಹೊತ್ತಿಗೆ ನಮ್ಮಕ್ಕ ಒಳ ಬಂದಳು.
" ಬಾಸಿಗ ನೀನೇ ಕಟ್ಟಿಡ್ತೀಯಾ,  ಬಾಳೆಬಳ್ಳಿ ತಂದ್ಕೊಡ್ತೇನೆ. "
" ಬಾಳೆಬಳ್ಳಿ ನೀರಿನಲ್ಲಿ ನೆನೆಸಿಯೇ ತಂದ್ಕೊಡು,  ಕಟ್ಟಿದ ಮಾಲೆ ತುಂಡಾಗಬಾರದು. "
ಬಾಸಿಗ ಕಟ್ಟುವ ವಿಧಾನ ಹೇಳಿಕೊಡಲು ಭಾವಯ್ಯ ಮುಂದಾದರು.  " ನನಗ್ಗೊತ್ತಿದೆ,  ಸಿಂಗಾರದ ಐದು ಎಸಳು ತಪ್ಪಿದ್ರೆ ಏಳು ಎಸಳು, ಮಲ್ಲಿಗೆ ನೆಯ್ದ ಹಾಗೆ ಕಟ್ಟಿದರಾಯಿತು. " ಅಂದಳು ನಮ್ಮ ಹಿರಿಯಕ್ಕ.
"ಅದೂ ಹೂವಿನೆಸಳು ಮೇಲ್ಮುಖವಾಗಿರಬೇಕು. " 
ಬಾಸಿಗದ ಕೆಲಸ ಆಯ್ತು.

" ಕೆಂಪು ತೆರೆ ಸೀರೆ... " ಅನ್ನುತ್ತಾ,  " ಇದೆಯಾ,  ಪಟ್ಟೆ ಸೀರೆ ಕೆಂಪು ಕಲರಿಂದೂ? "  ಎಂದು ನನ್ನನ್ನು ಕೂಗಿ ಕರೆದರು.
" ಓ,  ಸೀರೆಯಾ,  ಇದೆ ಇದೆ ನನ್ನಜ್ಜಿ ಕೊಟ್ಟಿದ್ದು. "
" ಅಜ್ಜಿಯಾ,  ಯಾವಾಗ ಕೊಟ್ಟಿದ್ದೂ?  ಚೆನ್ನಾಗಿದೆಯಾ,  ಹರಿದದ್ದು,  ತೂತು ಬಿದ್ದದ್ದು ಆಗಲಿಕ್ಕಿಲ್ಲ ನೋಡು.. "
" ಚೆನ್ನಾಗಿಯೇ ಇದೆ.  ನಾನು ಕಾಲೇಜು ಓದುತ್ತಿದ್ದಾಗ ಕೊಟ್ಟಿದ್ದು,  ಅದನ್ನು ಉಟ್ಕೊಂಡು ಒಂದು ಫೋಟೋ ಕೂಡಾ ತೆಗೆಸಿಟ್ಕೊಂಡಿದ್ದೇನೆ ಗೊತ್ತಾ... "


                                                           


ಆ ಕಾಲದ ನಮ್ಮ ಕಾಸರಗೋಡಿನ ಸ್ಟುಡಿಯೋ ಕಲರ್ ಫೋಟೋಗ್ರಾಫಿ ಹೊಂದಿರಲಿಲ್ಲ,  ಮನೆ ಪಕ್ಕದಲ್ಲೇ ಇದ್ದ ಸುಂದರರಾಯರ ಪ್ರಕಾಶ್ ಸ್ಟುಡಿಯೋ ಹಾಗೂ ಬ್ಯಾಂಕ್ ರಸ್ತೆಯಲ್ಲಿದ್ದ ಶೆಟ್ಟೀಸ್ ಸ್ಟುಡಿಯೋಗಳೆರಡರಲ್ಲೂ ಕಪ್ಪು ಬಿಳುಪಿನ ಛಾಯಾಗ್ರಹಣ ಲಭ್ಯವಿದ್ದಿತು.  ಹೀಗೇ ಸುಮ್ಮನೆ ಸೀರೆ ಉಟ್ಕೊಂಡು ಕಪ್ಪು ಬಿಳುಪಿನಲ್ಲಿ ಸಮಾಧಾನ ಪಟ್ಟುಕೊಂಡಿದ್ದಷ್ಟೇ ಲಾಭ.

ಕಪಾಟಿನ ಬಾಗಿಲು ತೆರೆಯಿತು.   ನಿತ್ಯೋಪಯೋಗಿ ಉಡುಪು ಅಲ್ಲವಾದ್ದರಿಂದ ಕೈಗೆಟುಕದಷ್ಟು ಎತ್ತರದಲ್ಲಿತ್ತು.  ಎತ್ತರದ ಮಣೆಯಿಟ್ಟು ಹತ್ತಿದಾಗ ಸೀರೆ ಕೆಳಗಿಳಿದು ಬಂದಿತು.   ಅದರೊಂದಿಗೆ ಇನ್ನೂ ಎರಡು ಕೆಂಪು ಪಟ್ಟೇವಸ್ತ್ರಗಳೂ ಇದ್ದವು.
" ಎಲ್ಲವನ್ನೂ ಬಿಡಿಸು ನೋಡೋಣಾ.. "
" ಲುಂಗಿ ಗಾತ್ರದ ಈಯೆರಡು ಬಟ್ಟೆ ಮಧೂ ಉಪನಯನದ್ದು. "
" ಇದಾಗಲಿಕ್ಕಿಲ್ಲ,  ಅಂತರಪಟ ಹಿಡಿಯುವಾಗ ವರನಿಗೆ ಹುಡುಗಿ ಮುಖ ಕಾಣಿಸಬಾರದು,  ಮಂಟಪದ ಅಗಲಕ್ಕೆ ಹೊಂದುವಷ್ಟು ಉದ್ದವೂ ಇರಬೇಕು. "  ಅಂದರು ಭಾವಯ್ಯ.
" ಈ ಅಜ್ಜಿಯ ಸೀರೆ ಉಂಟಲ್ಲ,  ನೀವು ಹೇಳಿದಂತೆ ಅಂತರಪಟ ಹಿಡಿಯಲಿಕ್ಕೆ ಹೇಳಿ ಮಾಡಿಸಿದ ಹಾಗಿದೆ. "
"ಬಿಡಿಸು ಅದನ್ನೂ..."
ಸೀರೆಯನ್ನು ಬಿಡಿಸಲಾಯಿತು,  ಹತ್ತಿಯಂತೆ ಹಗುರಾದ ಕಾಶಿಪಟ್ಟೆ,   ತನ್ನ ಹಳೆಯ ಸೀರೆಯನ್ನು ಮುದ್ದಿನ ಮೊಮ್ಮಗಳಿಗೆ ಅಜ್ಜಿ ಕೊಟ್ಟಿದ್ದು.
" ಹೌದೂ,  ಕಾಲೇಜಿಗೆ ಹೋಗ್ತಿದ್ದಾಗ ಸಿಕ್ಕಿದ ಈ ಸೀರೆಗೆ ಈಗ ಮೂವತ್ತೇಳು ವರ್ಷ ಆಯಿತು,  ಅಜ್ಜಿಗೆ ಅವರಪ್ಪ ಕೊಟ್ಟಿದ್ದಾಗಿರಬಹುದು,  ಏನಿಲ್ಲಾಂದ್ರೂ ಇವತ್ತಿಗೆ ಈ ಸೀರೆ ಎಪ್ಪತೈದು ವರ್ಷ ದಾಟಿದೆ. "  ಇದು ನನ್ನ ಲೆಕ್ಕಾಚಾರ.

ಕಾಶಿಪಟ್ಟೆ ಸೀರೆ ಮದುವೆಮಂಟಪದಲ್ಲಿ ಅಂತರಪಟವಾಗಿ ಮೆರೆಯಿತು.   " ಅಜ್ಜಿಯ ಸೀರೆ ಮರಿಮಗನ ಮದುವೆಗೂ ಬಂತು... "   ತಂಗಿ ಗಾಯತ್ರಿಯಂತೂ ಎಲ್ಲರೊಂದಿಗೂ ಹೇಳಿಕೊಂಡು ಬಂದಳು.

" ಸುಲಗ್ನಾ ಸಾವಧಾನ... ಸುಮುಹೂರ್ತೇ ... "  ನಂತರ ಪೆಟ್ಟಿಗೆ ಸೇರಿದ ಸೀರೆ, ಸಂಜೆ ಮನೆ ತಲುಪಿತು.  ಮೊದಲಾಗಿ ಅಜ್ಜಿಯ ಸೀರೆಗೆ ಗಾಳಿಯಾಡಲಿ ಎಂದು ನೇತು ಹಾಕಿದ್ದೂ ಆಯ್ತು.

ಎರಡು ದಿನಗಳ ಮದುವೆಯ ಸಭಾ ಕಾರ್ಯಕ್ರಮಗಳೆಲ್ಲ ಮುಗಿದುವು.  ಮಧು-ಮೈತ್ರಿ ಜೋಡಿಯನ್ನು  ಬೆಂಗಳೂರಿಗೆ ಕಳುಹಿಸಿ,  ಮನೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆ ಬರೆ, ವಸ್ತು ಸಾಮಗ್ರಿಗಳನ್ನು ಒತ್ತರೆಯಾಗಿ ಇಡುತ್ತಿದ್ದ ಹಾಗೆ ಅಜ್ಜಿಯ ಪಟ್ಟೆ ಸೀರೆ ನೆನಪಾಯ್ತು. 

ಮುಂದಿನ ತಿಂಗಳು ತಂಗಿ ಮಗಂದೂ ಮದುವೆ ಇದೆ,  ಆಗಲೂ ಅಂತರಪಟವಾಗಿ ಈ ಸೀರೆಯನ್ನೇ ಬಳಸಬಹುದೆಂಬ ತೀರ್ಮಾನಕ್ಕೆ ಬಂದಿದ್ದೆವು.  ಸೀರೆಯನ್ನು ಮೊದಲು ಒಳಗಿಡೋಣ,  ವರಲಕ್ಷ್ಮಿ ಬಂದಾಗ ಕೊಟ್ಟರಾಯ್ತು,  ಮದುವೆ ಹಾಲ್ ಗೆ ಹಿಡಿದುಕೊಂಡು ಹೋದರೂ ಸಾಕಾದೀತು... ಅಂದ್ಕೊಂಡು ನೋಡಿದ್ರೆ ಸೀರೆ ಕಾಣಿಸಲಿಲ್ಲ.   ಬಟ್ಟೆಬರೆಗಳ ರಾಶಿಯಲ್ಲಿ ಅಜ್ಜಿಯ ಸೀರೆ ಎಲ್ಹೋಯ್ತು ಎಂದು ಹುಡುಕಾಡಿ ಸಾಕಾಯ್ತು.  ಕುಂಬ್ಳೆಯಲ್ಲಿರುವ ತಂಗಿಗೂ ದೂರವಾಣಿ ಕರೆ ಹೋಯಿತು.  " ಸೀರೆ ಏನಾದ್ರೂ ವರಲಕ್ಷ್ಮಿ ಕೈಗೆ ಕೊಟ್ಟಿದೀಯಾ.. "
" ಇಲ್ವಲ್ಲ,  ನಿನ್ನ ಸೀರೆ ಇದ್ದ ಬ್ಯಾಗ್ ಒಳಗೆ ತುರುಕಿದ್ದು ನೆನಪಿದೆ. "
" ಹೌದಾ,  ಇನ್ನೊಮ್ಮೆ ನೋಡ್ತೀನಿ.."  ಬಟ್ಟೆಗಳನ್ನು ಅತ್ತ ಇತ್ತ ಎಳೆದಾಡಿ,  ಕಪಾಟಿನೊಳಗೆ ಇಟ್ಟು ಬಿಟ್ಟಿದ್ದೀನೋ ಎಂದೂ ಹುಡುಕಾಡಿದ್ದೂ ಆಯ್ತು.
" ಅದ್ಯಾಕೆ ಹುಡುಕ್ತೀಯ,  ನಾಳೆ ಬೆಳಗ್ಗೆ ನೋಡಿದ್ರಾಯ್ತು..." ಅಂದರು ನಮ್ಮೆಜಮಾನ್ರು.

" ಹ್ಞೂ, ದೇವರ ದೀಪ ಹಚ್ಚಿಟ್ಟು ಊಟಕ್ಕೆ ಅಣಿ ಮಾಡಲು ಹೊರಟೆ, ಟೇಬಲ್ ಮೇಲೆ ಊಟದ ಸಾಹಿತ್ಯಗಳನ್ನು ಇರಿಸಿ,  ದೇವರಿಗೆ ಅಡ್ಡ ಬಿದ್ದು,  ದೀಪವಾರಿಸಿ,  ಎದ್ದಾಗ ದೇವರಮನೆಯಲ್ಲೇ ತೂಗಹಾಕಿದ್ದ ಅಜ್ಜಿಯ ಕೆಂಪು ಪಟ್ಟೆ ಸೀರೆ ಕಣ್ಣಿಗೆ ಬಿತ್ತು!


      .