Pages

Ads 468x60px

Friday 31 July 2020

ಕೆಂಪ ಹಲಸು







ನಮ್ಮ ತೋಟದ ಕೆಂಪ ಬಕ್ಕೆ ಹಲಸು.

ಪಾದೆಕಲ್ಲುಗಳ ನಡುವೆ ಬೆಳೆದು ನಿಂತಿರುವ ಮರ.

 ಬಣ್ಣವೂ ಸಿಹಿಯೂ ಸುವಾಸನೆಯೂ ಕೂಡಿ ಅಪೂರ್ವ ವೃಕ್ಷ .   ಹಲಸಿನ ಮರಕ್ಕೆ ಇರಬೇಕಾದ ಸಹಜ ಬೆಳವಣಿಗೆ  ಮರಕ್ಕೆ ದೊರೆತಿಲ್ಲ ಬಂಡೆಕಲ್ಲುಗಳ ಎಡೆಯಿಂದ ಹೇಗೋ ಎದ್ದು ಬಂದಿದೆ.


ಮೊದಲೇ  ಮರ ಇದ್ದುದರಿಂದ ನೆಟ್ಟವರು ಯಾರೆಂದು ತಿಳಿದಿಲ್ಲ ಮಳೆಗಾಲದಲ್ಲಿ ಹರಿಯುವ ನೀರಿನ ಹಳ್ಳವೂ ಇಲ್ಲಿ ಇರುವುದರಿಂದ ನೀರಿನಲ್ಲಿ ಹರಿದು ಬಂದ ಹಲಸಿನ ಬೀಜದಿಂದ ಜನಿಸಿದ್ದು ಎಂದು ತೀರ್ಮಾನಿಸಿದ್ದೇವೆ





ಮನೆಯಲ್ಲಿ ಇದ್ದಂತಹ ಹಳೆಯ ಕಡತಗಳಲ್ಲಿ ದೊರೆತ ದಾಖಲೆಯಂತೆ ಹಿರಣ್ಯದ ವ್ಯಾಪ್ತಿಯೊಳಗೆ ಇದ್ದಂತಹ ಹಲವು ಹಲಸಿನಮರಗಳೂಮರಗಳಿಗೆ ಇದ್ದಂತಹ ಹೆಸರುಗಳೂ ಲಭ್ಯವಾದವು ಇಸವಿ 1924 ದಾಖಲೆ ಪತ್ರ ಇದಾಗಿದ್ದು ಹಳೆಗನ್ನಡ ಓದಲು ಬಲ್ಲವರಿಗೆ ಸುಸೂತ್ರವಾಗಿ ಓದಬಹುದಾಗಿದೆ.


ಬಿಳಿ ಬಕ್ಕೆ ಗಾಳಿ ಬಕ್ಕೆ ಅಟ್ಟೊಳಿಗೆ ಬಕ್ಕೆ ಬರೆ ತುಳುವ ಓಳಿ ತುಳುವ ಕೆಂಪ ತುಳುವ  ಹೀಗೆ ಹೆಸರುಗಳ ಪಟ್ಟಿ ದೊರೆಯಿತುಹಿಂದಿನಿಂದಲೇ ಕೆಂಪ ಎಂಬ ಹೆಸರಿನ ಹಲಸಿನ ಮರ ಇದ್ದಿತು ಎಂದು ತಿಳಿಯಿತು.



 ವರ್ಷ ಕೆಂಪ ಹಲಸು ನಮ್ಮ ಮನೆ ಉಪಯೋಗಕ್ಕೆ ಕೊರತೆ ಬರದಂತೆ ಸಾಕಷ್ಟು ಫಲ ನೀಡಿದೆ.

ಬೇಸಿಗೆಯಲ್ಲೇ ಹಣ್ಣು ದೊರೆತಿದ್ದರಿಂದ ತಿಂದು ಹೆಚ್ಚಾದ ಹಣ್ಣನ್ನು ಒಣಗಿಸಿ ಇಡಲಾಗಿದೆಒಣಹಣ್ಣು ರುಚಿಯಾಗಿ ಇದೆ.  




ನಾವು  ಕೆಂಪು ಹಲಸನ್ನು ನಮ್ಮ ಬಳಿ ಇರುವ ಇನ್ನಿತರ ಹಲಸಿನ ಹಣ್ಣುಗಳಂತೆ ಉಪಯೋಗಿಸುತ್ತ ಬಂದಿದ್ದೇವೆ ಇದೂ ಒಂದು ವಿಶೇಷವಾದ ಹಲಸಿನ ಜಾತಿ ಎಂದು ಕಳೆದ ಕೆಲ ವರ್ಷಗಳಿಂದ ಮಾಧ್ಯಮಗಳ ಹಲಸು ಪ್ರಚಾರದಿಂದಾಗಿ ತಿಳಿದು ಬಂದಿತು.





ಒಂದಷ್ಟು ಗಿಡಗಳನ್ನೂ ಮಾಡಿ ಇರಿಸಲಾಗಿದೆಯಾದರೂ ಮಾರಾಟದ ಉದ್ಧೇಶ ನಮ್ಮದಲ್ಲ.





Wednesday 29 July 2020

ಅರಸಿಣ ಎಲೆ ಕಡುಬು






ನಾಗಪಂಚಮಿಗೆ ತಿಂಡಿಯೇನು ಎಂದು ಚಿಂತಿಸುವುದಕ್ಕಿಲ್ಲ,  ಅರಸಿಣದ ಎಲೆಯ ಕಡುಬು ಮಾಡುವ ರೂಢಿಯಾಗ್ಬಿಟ್ಟಿದೆ.   ಮನೆಹಿತ್ತಲಲ್ಲಿ ಸಾಕಷ್ಟು ಅರಸಿಣ ಗಿಡಗಳನ್ನು ಕಡುಬು ಮಾಡಲಿಕ್ಕೆಂದೇ ನೆಟ್ಟು ಸಲಹಿರುವಾಗ,  ಯಾವುದೋ ಸಂತೆಯಿಂದ ಸೊಪ್ಪುತಂದು ತಿಕ್ಕಿ ತಿಕ್ಕಿ ತೊಳೆಯುವ ಕೆಲಸ ನಮ್ಮಲ್ಲಿಲ್ಲ.


ಮಧ್ಯಾಹ್ನದ ಊಟ ಆಗುತ್ತಲೇ 2 ಲೋಟ ಬೆಳ್ತಿಗೆ ಅಕ್ಕಿ ತೊಳೆದು ನೀರು ಎರೆದು ಇಡುವುದು.

ಸಂಜೆಯ ಚಹಾ ಆದ ನಂತರ ಕೈಲೊಂದು ಪುಟ್ಟ ಕತ್ತಿ ಹಿಡಿದು ಹಿತ್ತಲಿಗೆ ಹೋಗಿ ಬೇಕಿದ್ದಷ್ಟು ಅರಸಿಣ ಎಲೆಗಳನ್ನು ಕುಯ್ದು ತರುವುದು. 

ಹತ್ತರಿಂದ ಹನ್ನೆರಡು ಎಲೆಗಳು ಇದ್ದರೆ ಸಾಕು.

ಒಂದು ಉದ್ದವಾದ ಎಲೆಯಿಂದ ಎರಡು ಕಡುಬು ಮಾಡಬಹುದು.


ಒಂದು ಹಸಿ ತೆಂಗಿನಕಾಯಿ ತುರಿಯುವುದು ಕಾಯಿತುರಿಯಲ್ಲಿ ದೊಡ್ಡ ಹೋಳುಗಳಿದ್ದರೆ ಮಿಕ್ಸಿಯಲ್ಲಿ ತಿರುಗಿಸಿ ತೆಗೆಯಿರಿ.

ಒಂದು ಅಚ್ಚು ಬೆಲ್ಲ ಚೂರಿಯಲ್ಲಿ ಹೆರೆದು ಇರಿಸುವುದು.

ಬೆಲ್ಲ ತೆಂಗಿನತುರಿಗಳಿಗೆ ನಿರ್ದಿಷ್ಟ ಅಳತೆಯೇನೂ ಬೇಡ ಎರಡನ್ನೂ ಬೆರೆಸಿ ನಾನ್ ಸ್ಟಿಕ್ ಬಾಣಲೆಯಲ್ಲಿ ಬೆಚ್ಚಗೆ ಮಾಡಿ ಇರಿಸುವುದು ಪಾಕ ಮಾಡಲಿಕ್ಕೇನೂ ಇಲ್ಲ.

ರುಚಿಗೆ ತಕ್ಕಷ್ಟು ಉಪ್ಪು ಸಹಿತವಾಗಿ ಅಕ್ಕಿಯನ್ನು ಅರೆಯಿರಿ ನೀರು ಮಿತವಾಗಿ ಹಾಕಿರಿ ಅರೆದ ಹಿಟ್ಟು ನುಣ್ಣಗಾಗಬೇಕು ತರಿ ತರಿ ಆದರೆ ಸಾಲದು.


ಅರಸಿಣ ಎಲೆಗಳನ್ನು ಬಟ್ಟೆಯಲ್ಲಿ ಒರೆಸಿ ಇಡುವುದು.

ಎಲೆಯ ಎರಡು ತುದಿಗಳನ್ನು ಕತ್ತರಿಸಿ.

ಉದ್ದವಾದ ಎಲೆಗಳನ್ನು 2 ರಿಂದ 3 ತುಂಡು ಮಾಡುವುದು ಇಡ್ಲಿ ಪಾತ್ರೆಯೊಳಗೆ ಇಡಲು ಸಾಧ್ಯವಾಗುವಂತಿರಬೇಕು.

ಬಾಳೆ ಎಲೆಯಂತೆ ಅರಸಿಣ ಎಲೆಯನ್ನು ಬಾಡಿಸುವುದಕ್ಕಿಲ್ಲ

ಬಾಡಿಸಿದ ಬಾಳೆಯಂತೆ ಇದನ್ನು ಬೇಕಿದ್ದಂತೆ ಮಡಚಿ ಇಡಲಿಕ್ಕೆ ಆಗುವುದಿಲ್ಲ ಅಂತಹ ಪ್ರಯತ್ನ ಮಾಡಿದ್ದೇ ಆದಲ್ಲಿ ಕೋಮಲವಾದ ಎಲೆ ಹರಿದು ಹೋದೀತು.


ಚಿಕ್ಕದಾದ ಸೌಟಿನಲ್ಲಿ ಅಕ್ಕಿ ಹಿಟ್ಟನ್ನು ಅರಸಿಣ ಎಲೆಯ ಮೇಲೆ ಎರೆದುತೆಳ್ಳಗಾಗಿ ಉಜ್ಜಿದಾಗ ಎಲೆ ತುಂಬ ಹರಡಿಕೊಳ್ಳಬೇಕು.

ಚಮಚದಲ್ಲಿ ಬೆಲ್ಲ ತೆಂಗಿನ ಮಿಶ್ರಣವನ್ನು ಮಧ್ಯದಲ್ಲಿ ಉದ್ದವಾಗಿ ಇರಿಸಿಎಲೆಯನ್ನು ಮಡಚಿಹಗುರಾಗಿ ಒತ್ತಿ..

 ಹೊತ್ತಿನಲ್ಲಿ ಅಟ್ಟಿನಳಗೆ ( ಇಡ್ಲಿಪಾತ್ರೆ ) ಯಲ್ಲಿ ನೀರು ಕುದಿಯುತ್ತಿರಬೇಕು.


ಎಲ್ಲ ಅರಸಿಣ ಎಲೆಗಳನ್ನೂ ಮೇಲೆ ಹೇಳಿದ ಪ್ರಕಾರವಾಗಿ ಅಟ್ಟಿನಳಗೆಯೊಳಗೆ ಇಟ್ಟುಭದ್ರವಾಗಿ ಮುಚ್ಚಿ ಹದಿನೈದರಿಂದ ಇಪ್ಪತ್ತು ನಿಮಿಷ ಬೇಯಿಸಿ.


ಸಂಜೆಯ ವೇಳೆ ಮಾಡಿಟ್ಟು ಮಾರನೇ ದಿನ ನಾಗಪಂಚಮಿಯ ಲೆಕ್ಕದಲ್ಲಿ ಸ್ವಾಹಾ ಮಾಡುವುದು ಇದರೊಂದಿಗೆ ಕೂಡಿ ತಿನ್ನಲು ಚಟ್ಣಿ ಸಾಂಬಾರು ಗೊಜ್ಜು ಇತ್ಯಾದಿ ಏನೂ ಬೇಡ.   ತುಪ್ಪ ಎರೆದು ಸವಿಯಿರಿ.

ಇದೀಗ ಹಬ್ಬಗಳು ಸಾಲಾಗಿ ಬರಲಿವೆ ಗಿಡದಲ್ಲಿ ಅರಸಿಣ ಎಲೆಗಳು ಒಣಗುವ ತನಕ  ಕಡುಬು ಮಾಡಲಡ್ಡಿಯಿಲ್ಲ.

ಕಡುಬು ಬೇಯಿಸುವ ಪಾತ್ರೆ ಇಲ್ಲದಿದ್ದರೆ ಕುಕ್ಕರಿನಲ್ಲಿ ಮಾಡಲೂ ತೊಂದರೆಯಿಲ್ಲ ವೆಯಿಟ್ ಹಾಕದಿದ್ದರಾಯಿತು.

ಅರಸಿಣ ಎಲೆಗಳು ಸಿಗದಿದ್ದರೆ ಬಾಳೆ ಎಲೆಯಲ್ಲಿ ಮಾಡಬಹುದು ಸುವಾಸನೆಗಾಗಿ ಒಂದು ಅರಸಿಣ ಎಲೆಯನ್ನು ಇಟ್ಟರೂ ಸಾಕಾಗುತ್ತದೆ.

ಬೆಲ್ಲತೆಂಗಿನ ಮಿಶ್ರಣ ಮುಗಿಯಿತು ಅಕ್ಕಿ ಹಿಟ್ಟು ಉಳಿದಿದೆ..  ಚಿಂತೆ ಬೇಡ,   ಕೇವಲ ಅಕ್ಕಿ ಹಿಟ್ಟನ್ನು ಬಾಳೆ ಎಲೆಯಲ್ಲಿ ತೆಳ್ಳಗೆ ಸವರಿಚಾಪೆಯಂತೆ ಸುರುಳಿ ಸುತ್ತಿ ಬೇಯಿಸಿಪಜೆಮಡಿಕೆ ಎಂದು ತಿನ್ನುವುದು.


ಪಕ್ಕದ ಮನೆಯಲ್ಲಿ ನಮ್ಮವರ ಅಣ್ಣ ಅತ್ತಿಗೆ ಇದ್ದಾರೆ ಮುಂಜಾನೆಯೇ ಅಲ್ಲಿಗೂ ಕೊಟ್ಟಿದ್ದಾಯ್ತು.

ಇನ್ನೀಗ ಪೂಜೆಗೆ ಭಟ್ರು ಬರಲಿಕ್ಕಾಯಿತು ಅವರಿಗೂ ಉಂಟಲ್ಲ.. " 

ಉಂಟು ಮಂಜೇಶ್ವರದಿಂದ ನಮ್ಮ ನೆಂಟ್ರೂ ಬರುವವರಿದ್ದಾರೆ ಎಲ್ಲರಿಗೂ ಉಂಟು.. "


ಭಾರತದ ಸಾಂಬಾರ ಪದಾರ್ಥಗಳಲ್ಲಿ ಪ್ರಸಿದ್ಧವಾದ ಅರಸಿಣವು ಸಂಸ್ಕೃತದಲ್ಲಿ ಹರಿದ್ರಾ ಎಂದೂವೈಜ್ಞಾನಿಕ ಪರಿಭಾಷೆಯಲ್ಲಿ curcuma longa ಆಗಿರುತ್ತದೆ.


ನಮ್ಮ ದಿನಬಳಕೆಯ ಅಡುಗೆಯನ್ನು ಅರಸಿಣ ಹುಡಿ  ಹಾಕದೇ  ಮಾಡಲಿಕ್ಕಿಲ್ಲ.  

ದೈವಾರಾಧನೆಯಲ್ಲಿ ಕೂಡಾ ಅರಸಿಣ ಹುಡಿ ಇದ್ದೇ ತೀರಬೇಕು.

ಅರಸಿಣ ಎಲೆಯ ವಿಶೇಷತೆಯೇನು?

ಪ್ರಭಾವಶಾಲಿ ಆ್ಯಂಟಿ ಓಕ್ಸಿಡೆಂಟ್,  

ಜೀರ್ಣಶಕ್ತಿ ವೃದ್ಧಿ,  

ವಾಯುಪ್ರಕೋಪ ನಿವಾರಕ,

ಗಂಟುಗಳ ಉರಿಯೂತ ಶಾಮಕ,

ಸಂಧಿವಾತದ ಬಳಲಿಕೆಗೂ ಉತ್ತಮ.

ಒಳ್ಳೆಯದೆಂದು ಅತಿ ಬಳಕೆ ತರವಲ್ಲ.






Monday 20 July 2020

ನೆಲನೆಲ್ಲಿ





ಹಲವು ಕುಡಿಗಳ ತಂಬುಳಿಯೂಟದಿಂದ ದೇಹಾರೋಗ್ಯ ಹೆಚ್ಚಿಸಿಕೊಳ್ಳಿ ಎಂಬ ಸಲಹೆ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.   ಮಳೆಗಾಲದಲ್ಲಿ ದೊರೆಯುವ ಚಿಗುರೆಲೆಗಳನ್ನು ಹುರಿದು ಯಾ ಬೇಯಿಸಿ,  ತೆಂಗಿನೊಂದಿಗೆ ಅರೆದು,  ಜೀರಿಗೆ,  ಕಾಳುಮೆಣಸುಕೂಡಿಸಿಮಜ್ಜಿಗೆ ಎರೆದು,  ಒಗ್ಗರಣೆ ಕೊಡದಿದ್ದರೂ ಸಿದ್ಧವಾಗುವಂತಹ ವ್ಯಂಜನ ತಂಬುಳಿ.


ನಮ್ಮ ಮನೆಯಂಗಳ  ದಿನ ಬಿಸಿಲು ಕಂಡಿತು ಹೊರಗಿಣುಕಿದರೆ ಹಸಿರೋ ಹಸಿರು ಹಸಿರು ಕಾನನದೊಳಗೆ ದೊರೆಯುವ ಎಲ್ಲಸೊಪ್ಪುಗಳೂ ವನಸ್ಪತಿ ಸಸ್ಯಗಳೇ ಆಗಿವೆ ನಮಗೆ ಅದರ ಹಿಂದು ಮುಂದು ತಿಳಿದಿರುವುದಿಲ್ಲ ಅಷ್ಟೇ.


ನೆಲನೆಲ್ಲಿಯ ಕುಡಿಗಳನ್ನು ಚಿವುಟಿ ತಂದಿದ್ದಾಯ್ತು ಇದು ತಂಬುಳಿಯಾಗಿ ರೂಪಾಂತರ ಹೊಂದಲಿದೆ.

ತಂಬುಳಿ ಯಾಕೆ ಸುಮ್ಮನೆ ಮಜ್ಜಿಗೆ ಕುಡಿದ್ರೆ ಶೀತ.."  ಗೌರತ್ತೆಯ ನುಡಿ ಹಾಗೇ ಒಂದು ಚಟ್ಣಿ ಮಾಡು ಊಟಕ್ಕಾಗುತ್ತೆ. "  ಒಳ್ಳೆಯ ಸಲಹೆ ಸಿಕ್ಕಿತು.


ಚಟ್ಣಿಗಾಗಿ ತೋಟಕ್ಕಿಳಿದು ಗಾಂಧಾರಿ ಮೆಣಸನ್ನು ಹುಡುಕಿದಾಗ ಚೆನ್ನಾಗಿ ಬಲಿತ ಮೆಣಸುಗಳು ಸಿಕ್ಕಿದವು ನಾಲ್ಕಾರು ದಿನಗಳಿಗೆ ಸಾಕಷ್ಟು ಕುಯ್ದು ಎಳೆಯ ಕರಿಬೇವಿನೆಸಳುಗಳೂ..


ಒಂದು ಹಿಡಿ ಕಾಯಿತುರಿ

ಒಂದೆರಡು ಗಾಂಧಾರಿ ಮೆಣಸು

ಹುಣಸೆ ಬೀಜದ ಗಾತ್ರದ ಹುಳಿ

ರುಚಿಗೆ ಉಪ್ಪು

ಹ್ಞಾ..  ನೆಲನೆಲ್ಲಿಯನ್ನು ತೊಳೆದು ಹೆಚ್ಚಿಕೊಂಡು ತುಸು ನೀರೆರೆದು ಬೇಯಿಸುವುದು.

ಎಲ್ಲವನ್ನೂ ಹೊಂದಿಸಿಕೊಂಡು ಅರೆಯುವುದು.

ನೆಲನಲ್ಲಿ ಬೇಯಿಸಿದ ನೀರನ್ನೇ ಅರೆಯುವಾಗ ಹಾಕುವುದು ಬೇರೆ ನೀರು ಬೇಕಿಲ್ಲ.

ಪುಟ್ಟದೊಂದು ಒಗ್ಗರಣೆ ಇರಲಿ.


ವ್ಹಾ..  ನೆಲ್ಲಿಕಾಯಿಯದೇ ರುಚಿ ಕಣ್ರೀ..  ನೆಲನೆಲ್ಲಿ ಇರುವಾಗ ಮಳೆಗಾಲದ ಅಗತ್ಯಕ್ಕಾಗಿ ನೆಲ್ಲಿಕಾಯಿ ಒಣಗಿಸಿ ಇಡೂದು ಸುಮ್ಮನೆ ಎಂದು ಈಗ ತಿಳಿಯಿತು.


ಊಟಕ್ಕೊಂದು ಚಟ್ಣಿ ಆದ್ರೆ ಸಾಕೇ..

ಲಿಂಬೆಯ ಸಾರು ಮಾಡೋಣ.


ಲೋಟ ನೀರು ರುಚಿಗೆ ಉಪ್ಪು ಬೆಲ್ಲ

ಜಜ್ಜಿದ ಶುಂಠಿ ಹಾಗೂ ಹಸಿಮೆಣಸು

ಕುದಿಸಿ.

ತುಪ್ಪದ ಒಗ್ಗರಣೆ ಹಾಕಿ ಸ್ಟವ್ ನಂದಿಸಿ ಹೋಳು ಮಾಡಿಟ್ಟ ಲಿಂಬೆಯ ರಸ ಹಿಂಡಿರಿ ಲಿಂಬೆಯ ಹೋಳುಗಳೂ ಸಾರಿನಲ್ಲಿ ತೇಲಲಿ.

ನಮ್ಮ ತಿಳಿಸಾರು ಆಯ್ತು.

ಇನ್ನೂ ಬೇಕಿದ್ರೆ ಹಲಸಿನ ಹಪ್ಪಳಸೊಳೆ ಉಂಡ್ಲುಕಉಪ್ಪಿನಕಾಯಿ ಮೊಸರು...




ಜಾಂಡೀಸ್ ಚರ್ಮರೋಗ ಗಾಯಕಜ್ಜಿ ಹುಳಬಾಧೆಗಳಿಗೆ ನೆಲನೆಲ್ಲಿ ಪರಮೌಷಧ.

ಅತಿಸಾರಭೇದಿಯಾಗುತ್ತಿದ್ದಲ್ಲಿ ಹಸಿ ನೆಲನೆಲ್ಲಿಯನ್ನೇ ಅಗಿದು ತಿನ್ನುವುದು ಶೀಘ್ರ ಉಪಶಮನ.

ಗಾಯಗಳಿಗೆ ಸಮೂಲ ಸಸ್ಯವನ್ನು ಅರೆದು ಲೇಪಿಸುವುದು.

ಕೆಮ್ಮು ದಮ್ಮು ಅಸ್ತಮಾ ವ್ಯಾಧಿಗೂ ನೆಲನೆಲ್ಲಿ ಔಷಧ.

ಅಜೀರ್ಣವಾದರೆ ಕಷಾಯ ಗುಣಕಾರಿ.

ಸಾಂಕ್ರಾಮಿಕ ರೋಗ ಹಾವಳಿ ಕಾಲರಾ ಡೆಂಗ್ಯೂಚಿಕುನ್ ಗುನ್ಯ ಇದ್ದರೆ ನೆಲನೆಲ್ಲಿಯ ರಸ ಸೇವನೆಯಿಂದ ರೋಗನಿರೋಧಕ ಶಕ್ತಿಹೆಚ್ಚಳ.


ನೆಲನೆಲ್ಲಿಯ ಕಷಾಯ ಹೇಗೆ?


ನೆಲನೆಲ್ಲಿಯ ಗಿಡಗಳನ್ನು ಬೇರು ಸಹಿತ ಕಿತ್ತು ತೊಳೆದು ಕತ್ತರಿಸಿ ಲೋಟ ಭರ್ತಿ ಆಗಲಿ.

ಲೋಟ ನೀರು ಕುದಿಯಲು ಇಡುವುದು.

ನೆಲನೆಲ್ಲಿ ಹಾಕಿ ಕುದಿಸಿ,

ಜೀರಿಗೆ ಹಾಕಬೇಕುಎಣಿಸಿ ಹಾಕಿ ಐದುಏಳುಒಂಭತ್ತು  ಥರ..  ಒಟ್ರಾಸಿ ಕೈಗೆ ಬಂದಷ್ಟು ಹಾಕುವುದಕ್ಕಿಲ್ಲ.

ರುಚಿಗೆ ಕಲ್ಲುಸಕ್ಕರೆ

ಲೋಟದ ಪ್ರಮಾಣ ಒಂದು ಲೋಟದಷ್ಟು ಆದಾಗ ಸ್ಟವ್ ಆರಿಸಿಬೇಗನೇ ಆಗಲಿ ಎಂದು ಗಳಗಳ ಕುದಿಸಬಾರದು ಮಂದಾಗ್ನಿಯಲ್ಲಿ ಬತ್ತಿಸಬೇಕು.

ಆರಿದ ನಂತರ ಶೋಧಿಸಿ ಕುಡಿಯುವುದು.

ಯಾವುದೇ ವನಸ್ಪತಿ ಕಷಾಯ ಮಾಡುವುದಿದ್ದರೂ ವಿಧಾನ ಒಂದೇ.


ಸಂಸ್ಕೃತದಲ್ಲಿ ಭೂಮ್ಯಾಮಲಕಿ ಎಂದು ಹೆಸರಿಸಲ್ಪಟ್ಟಿದೆ  ನೆಲನೆಲ್ಲಿ.

ಸಸ್ಯವಿಜ್ಞಾನವು Phyllanthus niruri ಎಂದಿದೆ.

ಆಂಗ್ಲ ಭಾಷಾಶಾಸ್ತ್ರ seed-under-leaf ಎಂದು ಅರ್ಥಪೂರ್ಣ ನಾಮಕರಣ ನೀಡಿದೆ.


ಚ್ಯವನಪ್ರಾಶ ಲೇಹ್ಯ ಹಾಗೂ ಇನ್ನೂ ಹಲವು ಆಯುರ್ವೇದಿಕ್ ಉತ್ಪನ್ನಗಳು ನೆಲನೆಲ್ಲಿಯನ್ನು ಒಳಗೊಂಡಿದ್ದಾಗಿರುತ್ತವೆ.

ಕೆಮ್ಮು ಹಾಗೂ ದಮ್ಮು ಚಿಕಿತ್ಸೆಯಲ್ಲಿ ನೆಲನೆಲ್ಲಿಯ ರಸವನ್ನು ಕಲ್ಲುಸಕ್ಕರೆಯೊಂದಿಗೆ ಸೇವಿಸಬೇಕು.

ನೆಲನೆಲ್ಲಿಯ ಕಷಾಯ ರಕ್ತಶುದ್ಧಿಕಾರಕ ಚರ್ಮವ್ಯಾಧಿಗೂ ಗುಣಕಾರಿ.

ಸ್ತ್ರೀಯರಿಗೆ ಮಾಸಿಕ ರಕ್ತಸ್ರಾವ ಅಧಿಕವಾಗಿದ್ದಲ್ಲಿ ಚಟ್ನಿ ಯಾ ಕಷಾಯ ಸೇವಿಸುವುದು ಪರಿಣಾಮಕಾರಿ.

ಕೆಂಪು ರಕ್ತಕಣಗಳ ವೃದ್ಧಿ ಅನೀಮಿಯಾ ದೂರ

ರಕ್ತಸ್ರಾವ ನಿರೋಧಕ.

ಚರ್ಮರೋಗ ನಿರೋಧಕ ದಾಹಶಾಮಕವಿಷಹರ,

ಡಯಾಬಿಟೀಸ್ ರೋಗಿಗಳಿಗೂ ಉತ್ತಮ.

ಕಿಡ್ನಿ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯ ಲಿವರ್ ಹಾಗೂ ಗಾಲ್ ಬ್ಲಾಡರ್ ಕಾರ್ಯಕ್ಷಮತೆ ಸುದೃಢವಾಗುವುದು.

ತಲೆಗೆ ಹಚ್ಚುವ ಎಣ್ಣೆಗೂ ನೆಲನೆಲ್ಲಿ ಅಗತ್ಯದ ಕಚ್ಚಾವಸ್ತು.

ಬೃಂಗರಾಜ ತೈಲದಲ್ಲಿ ನೆಲನೆಲ್ಲಿ ಇರಲೇ ಬೇಕು.


ಪುಟ್ಟದೊಂದು ಸಸ್ಯಪ್ರಕೃತಿಯಲ್ಲಿ ಇದೊಂದು ಕಳೆ ಸಸ್ಯ.  

ಪ್ರಕೃತಿ ನಮಗೆ ಎಲ್ಲವನ್ನೂ ನೀಡುತ್ತ ಬಂದಿದೆ ಸ್ವೀಕರಿಸಿ ಮುನ್ನಡೆಯೋಣ.