ಈ ಬಾರಿ ಮಧು ಊರಿಗೆ ಬಂದಾಗ ವಿವಿಧ ಬಗೆಯ ಧಾನ್ಯಗಳ ಹಿಟ್ಟುಗಳೂ ಬಂದುವು. " ಅಮ್ಮ, ದಿನಾ ಒಂದೇ ಕ್ರಮದಲ್ಲಿ ನೀರುದೋಸೆ ತಿನ್ನುತ್ತಿದ್ದರೆ ನಮ್ಮ ದೇಹಕ್ಕೆ ಬೇಕಾದ ಪ್ರೊಟೀನ್ಸ್ ಸಿಗಬೇಕಲ್ಲ.. "
ಹೌದಲ್ವೇ.. ಉದ್ದು, ಅಕ್ಕಿ ಹಾಕಿದಲ್ಲಿ ನಮ್ಮ ಉದ್ದಿನ ದೋಸೆ ಆಗಿಬಿಡುತ್ತದೆ. ಈ ಪ್ಯಾಕೆಟ್ ಹಿಟ್ಟಿನಲ್ಲಿ ಏನೆಲ್ಲ ಧಾನ್ಯಗಳಿವೆಯೋ ತಿಳಿಯದು.
ನಾನೂ ದೋಸೆಯ ತಯಾರಿಗೆ ಹೊರಟೆ. ಒಂದು ಲೋಟ ಬೆಳ್ತಿಗೆ ಅಕ್ಕಿ,
ಒಂದು ಹಿಡಿ ಉದ್ದು
ಒಂದು ಹಿಡಿ ಹೆಸ್ರುಬೇಳೆ
ಹತ್ತಾರು ಕಾಳು ಕಡ್ಲೆಬೇಳೆ
ಒಂದು ಚಮಚ ತೊಗರಿಬೇಳೆ
ಒಂದು ಚಮಚ ಮೆಂತೆ
ಒಟ್ಟಿಗೆ ತಪಲೆಗೆ ತುಂಬಿ ನೀರೆರೆದು ಇಡುವುದು.
ಕೊನೆಯದಾಗಿ ಒಂದು ಲೋಟ ಕುಚ್ಚುಲಕ್ಕಿ ಕುದಿಯುವ ನೀರು ಎರೆದು ಇಡುವುದು.
ಅರೆಯುವ ಹೊತ್ತು, ಬೆಳ್ತಿಗೆ ಅಕ್ಕಿ ಹಾಗೂ ಬೇಳೆಕಾಳುಗಳನ್ನು ತೊಳೆದು ನುಣ್ಣಗೆ ಅರೆಯುವುದು.
ಬಿಸಿನೀರಿನಲ್ಲಿ ನೆನೆದ ಕುಚ್ಚುಲಕ್ಕಿಯನ್ನು ಕೂಡಾ ತೊಳೆದು ನುಣ್ಣಗೆ ಅರೆದು ಸೇರಿಸಿ. ಮಿಕ್ಸಿಯಲ್ಲಿ ಹೀಗೆ ಕುಚ್ಚುಲಕ್ಕಿ ಅರೆಯುವ ಕ್ರಮ ನನ್ನದು. ಕೈಯಲ್ಲೇ ತಿರುಗಿಸುವ ಅರೆಯುವ ಕಲ್ಲಿನಲ್ಲಿ ಎಲ್ಲವನ್ನೂ ಒಟ್ಟಿಗೆ ಹಾಕಿ ಅರೆಯುವ ಕಾಲವೊಂದಿತ್ತು. ಅದೆಲ್ಲ ಈಗ ನೆನಪಿನ ಕಾಲಕ್ಕೆ ಸಂದಿದೆ.
ರುಬ್ಬಿದ ಹಿಟ್ಟಿಗೆ ಮಧು ತಂದಂತಹ ಧಾನ್ಯಗಳ ಹಿಟ್ಟು ಕೂಡಾ ಸೇರಿಕೊಂಡಿತು. ಒಂದು ಲೋಟ ಧಾನ್ಯಗಳ ಹಿಟ್ಟನ್ನು ನೀರು ಬೆರೆಸಿ ಕೂಡಿಸಲಾಯಿತು. ಹುದುಗು ಬರಲು ಮುಚ್ಚಿ ಇರಿಸುವುದು. ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹಾಕಿಯೇ ಇರಿಸಬೇಕು.
ಮಾರನೇ ದಿನ ದೊಸೆ ಎರೆಯಿರಿ, ತೆಂಗಿನಕಾಯ್ ಚಟ್ಣಿ , ಬೆಲ್ಲದ ಸಿಹಿಪಾಕವೂ, ಬಿಸಿ ಕಾಫಿಯೂ ಇದ್ದರಾಯಿತು. ಮೊಸರುಪ್ರಿಯರು ಮೊಸರಿನಲ್ಲಿ ಅದ್ದಿ ತಿನ್ನಿ.