Pages

Ads 468x60px

Monday 27 November 2017

ಬೀಂಬುಳಿ ಮುರಬ್ಬ



ಈಗ ನೆಲ್ಲಿಕಾಯಿಗಳ ಕಾಲ, ಪೇಟೆಗೆ ಹೋದರೆ ಘಟ್ಟದ ನೆಲ್ಲಿಕಾಯಿಗಳು ಲಭ್ಯ. ನಮ್ಮ ಮನೆಗೂ ಬಂತು, ಮುರಬ್ಬ ಮಾಡಿ ಇಟ್ಕೊಂಡೆವು, ಇರಲೀ ಎಂದು ಉಪ್ಪಿನಕಾಯಿಯನ್ನೂ ಮಾಡಿ ತಿಂದೆವು. ವರ್ಷಗಳಿಂದ ಮುರಬ್ಬ ಮಾಡಿ ಅಭ್ಯಾಸ ಆಗ್ಬಿಟ್ಟಿದೆ, ಮುರಬ್ಬಾ ಸ್ಪೆಶಲಿಸ್ಟ್ ಅಂದ್ರೂ ನಡೆದೀತು ಅನ್ನಿ.

ನಿತ್ಯದಂತೆ ಮನೆಯಂಗಳದಲ್ಲಿ ತಿರುಗಾಡುತ್ತಿದ್ದಾಗ ನಮ್ಮ ಬೀಂಬುಳಿ ವೃಕ್ಷವೂ ಫಲಭರಿತ ವೃಕ್ಷವಾಗಿ ಕಂಗೊಳಿಸುತ್ತಿದೆಯಲ್ಲ! ಒಂದು ಅಡಿಕೆಹಾಳೆ ತುಂಬ ಬೀಂಬುಳಿಗಳನ್ನು ಕೊಯ್ದು ತಂದೆ.

“ ಮಾಡೂದೆಂತಾ, ಉಪ್ಪಿನಕಾಯಿಯಾ? “

ಉಪ್ಪಿನಕಾಯಿ ದಾಸ್ತಾನು ತುಂಬಾನೇ ಇದೆ, ಮಾವಿನಕಾಯಿ ಅಂಬಟೆ ಅಂತ…. ಅದನ್ನೇ ತಿಂದು ಮುಗಿಸಲಿಕ್ಕಿಲ್ಲ, ಬೀಂಬುಳಿಯನ್ನೂ ಉಪ್ಪು ಮಸಾಲೆ ಬೆರೆಸಿಟ್ರೆ ಸಾಲದು, ತಿನ್ನುವವರೂ ಬೇಕಲ್ಲ...

“ ಈ ಬೀಂಬುಳಿಯನ್ನೂ ಯಾಕೆ ಮುರಬ್ಬ ಮಾಡಬಾರದು? “

ಆಲೋಚನೆ ಮೂಡಿದ್ದೇ ತಡ, ಬಲಿತ ಬೀಂಬುಳಿಗಳು ಕತ್ತರಿಸಲ್ಪಟ್ಟು, ಸಕ್ಕರೆ ಬೆರೆಸಲ್ಪಟ್ಟು ಜಾಡಿ ತುಂಬಿ ಕುಳಿತುವು. ಅಂಗಳದಲ್ಲಿ ಬಿಸಿಲು ಬಂದಾಗ ಜಾಡಿ ಹೊರ ಬಂದು ಬಿಸಿಲಿಗೆ ಮೈಯೊಡ್ಡಿತು. ಸಂಜೆಯಾಗುತ್ತಲೂ ಒಳ ಬಂದಿತು. ಸಕ್ಕರೆಯೆಲ್ಲ ಕರಗಿ ದ್ರಾವಣದಲ್ಲಿ ತೇಲುತ್ತಿವೆ ಬೀಂಬುಳಿ ಹೋಳುಗಳು!

“ ಇದನ್ನು ಇನ್ನೇನ್ಮಾಡೋದೂ? “

ಹತ್ತು ಗಂಟೆಯ ಚಹಾ ಸಮಯ, ಚಮಚಾ ತಟ್ಟೆಯೊಂದಿಗೆ ನಮ್ಮೆಜಮಾನ್ರ ಮುಂದೆ ಬೀಂಬುಳಿ ಮುರಬ್ಬ ಬಂದಿತು. “ ಹುಳಿಯೆಲ್ಲ ಬಿಟ್ಕೊಂಡಿದೆ, ತಿನ್ನಬಹುದು. “ ಎಂಬ ಸಮಾಧಾನಕರ ಉತ್ತರ ದೊರೆಯಿತು.

ನಾನೂ “ ವಾರೆವ್ಹಾ… ಹುಳಿ ಸಿಹಿ ಕೂಡಿದ ರುಚಿ ಕಣ್ರೀ…. “ ಗುಳುಂಕ್, ಗುಳುಂಕ್ ಎಂದು ತಿಂದಿದ್ದಾಯ್ತು.

ಬೀಂಬುಳಿ ಹೋಳುಗಳನ್ನು ತಿಂದು ಮುಗಿಸಿದ ನಂತರ ಉಳಿದ ಹುಳಿ ಮಿಶ್ರಿತ ಸಕ್ಕರೆ ರಸವನ್ನು ಜಾಡಿಯಲ್ಲಿ ಶೇಖರಿಸಿಟ್ಟು ಶರಬತ್ ಮಾಡಿ ಕುಡಿಯೋಣಾ, ಏನಂತೀರ? ಎರಡು ಏಲಕ್ಕಿ ಗುದ್ದಿ ಹಾಕಿ ಸುವಾಸನೆಯನ್ನೂ ಕೊಟ್ಟರಾಯಿತು. ಇನ್ನೊಂದು ಆಯ್ಕೆ ಏನಪ್ಪಾ ಅಂದ್ರೆ ಹುಣಸೆರಸದ ಬದಲು ಇದನ್ನೇ ಅಡುಗೆಗೆ ಬಳಸಿ ಮುಗಿಸಬಹುದು.

“ ಬೀಂಬುಳಿಯನ್ನು ಏನು ಬೇಕಾದ್ರೂ ಮಾಡ್ಕೊಳ್ಳಿ, ಸ್ಟೀಲು ಪಾತ್ರೆ, ತಟ್ಟೆ ಚಮಚ ಉಪಯೋಗಿಸುವಂತಿಲ್ಲ, ಪಾತ್ರೆಯ ಹೊಳಪು ಹೋಗ್ಬಿಟ್ಟು ಕಪ್ಪಾಗುವ ಸಾಧ್ಯತೆ ಇದೆ. ಪಿಂಗಾಣಿ ಯಾ ಗಾಜಿನ ಪಾತ್ರೆಗಳು ಉತ್ತಮ. “ ಎಂದರು ಗೌರತ್ತೆ.
“ ಹೌದೂ… “ ಅನ್ನುತ್ತ ನಾನು ಫೋಟೋ ತೆಗೆದಿದ್ದ ಸ್ಟೀಲು ತಟ್ಟೆಯನ್ನು ಕೂಡಲೇ ತೊಳೆದೂ ಇಟ್ಬಿಟ್ಟೆ.

ಅಳತೆ ಹೀಗಿರಲಿ,
ಒಂದು ಲೋಟ ತುಂಬ ಬೀಂಬುಳಿ ಹೋಳುಗಳು
ಅರ್ಧ ಲೋಟ ಸಕ್ಕರೆ
ಒಂದು ದಿನದ ಬಿಸಿಲು
ಅಡುಗೆಯ ಆಟವನ್ನಾಡುವ ಪುಟ್ಟ ಮಗು ಕೂಡಾ ಈ ನಳಪಾಕವನ್ನು ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.






Monday 20 November 2017

ತಂಪಿನ ಪೇಯ




ಮಳೆಗಾಲದಲ್ಲಿ ಟಿಸಿಲೊಡೆಯುವ ಚಿಗುರು ಕುಡಿಗಳನ್ನು ಧಾರಾಕಾರ ಮಳೆ ಬೀಳುತ್ತಿರುವ ಕಾಲದಲ್ಲಿ ಹುಡುಕುತ್ತ ತೋಟ ಗುಡ್ಡ ತಿರುಗಾಟ ಸಾಧ್ಯವಾಗುವುದಿಲ್ಲ. ಏನಿದ್ದರೂ ಬಿಸಿಲು ಬರಬೇಕು. ನಾನು ಕಾಯುತ್ತಿದ್ದ ಬಿಸಿಲು ನಿನ್ನೆ ಬಂದಿತು. ಸಂಜೆಯಾಗುತ್ತಲೂ ಚಪ್ಪಲಿ ಮೆಟ್ಟಿ ಹೊರಟೆ. ಮನೆಯಿಂದ ಮುಂದಕ್ಕೆ ಡಾಮರು ರಸ್ತೆವರೆಗೆ ನಡೆದಾಡಿ ಬರೋಣ ಅಂದ್ಕೊಂಡಿದ್ದೆ. ಹೇಮಕ್ಕನ ಮನೆ ಗೇಟಿನವರೆಗೆ ತಲಪಿದಾಗ, ಹೇಮಕ್ಕ ಖುದ್ದು ಎದುರಾಗಿ ಗೇಟಿನ ಬಾಗಿಲು ತೆರೆದರು.

“ ನೋಡೀ ಇಲ್ಲಿ… ನಿಮ್ಮ ಕಂಪೌಂಡ್ ಪಕ್ಕದಲ್ಲಿ ತಗತೇ ಗಿಡ!  ಹೇಗೆ ಚಿಗುರಿಕೊಂಡಿದೆ… “
“ ಹೌದಲ್ಲವೇ, ನಿಮಗೆ ಬೇಕಿದ್ದರೆ ಚಿವುಟಿಕೊಳ್ಳಿ.”
“ ನೀವೂ ತಂಬುಳಿ ಮಾಡಿರಲ್ಲ… “
“ ಅಯ್ಯೋ, ತಂಬುಳಿ ಮಾಡಿದ್ರೆ ನಾನೊಬ್ಳೇ ತಿನ್ಬೇಕು...”
“ ಒಳ್ಳೆಯದಲ್ವಾ, ಮಳೆಗಾಲದಲ್ಲಿ ಒಂದ್ಸಾರಿಯಾದ್ರೂ ತಿನ್ನಬೇಕಂತೆ… “
ನಾನು ಒಂದು ಹಿಡಿ ಕುಡಿ ಚಿಗುರುಗಳನ್ನು ಕಿತ್ತು , “ಕತ್ತಲೂ ಆಯ್ತು... “ ಅನ್ನುತ್ತ ಮನೆಗೆ ಬಂದೆ.

ಮಾರನೇ ದಿನ ನನ್ನದೂ ತಂಬುಳಿಯ ಅಡುಗೆ.
ಹೇಗೆ ಮಾಡಿದ್ದೂ?
 ಕುಡಿ ಚಿಗುರುಗಳನ್ನು ತುಪ್ಪದಲ್ಲಿ ಹುರಿದು,
ಅರ್ಧ ಕಡಿ ತೆಂಗಿನತುರಿ,
ತುಸು ಜೀರಿಗೆ,
ನಾಲ್ಕಾರು ಕಾಳುಮೆಣಸು,
ರುಚಿಗೆ ಉಪ್ಪು,
ನುಣ್ಣಗೆ ಅರೆದು,
ಸಿಹಿ ಮಜ್ಜಿಗೆ ಎರೆದು,
ತೆಳ್ಳಗಾಗಲು ಇನ್ನಷ್ಟು ನೀರು ಎರೆದು,
ತಗತೆಯ ತಂಪು ಹುಳಿ ಸಿದ್ಧ.

ಹೇಮಕ್ಕ ಅಂದಂತೆ ತಂಬುಳಿ ಮುಗಿಯದೆ ಹೋಯಿತು. ರಾತ್ರಿ ಉಣ್ಣಬೇಕಾದರೆ ಕುದಿಸಬೇಕು. “ ಯಾರಿಗೆ ಬೇಕು ಈ ರಗಳೆ… “ ಅಂದ್ಬಿಟ್ಟು, ಟೇಬಲ್ ಮೇಲೆ ನನ್ನನ್ನೇ ಮಿಕಿ ಮಿಕಿ ನೋಡುತ್ತಿದ್ದ ತಂಪು ಹುಳಿಯು, ಜಾಲರಿಯಲ್ಲಿ ಶೋಧಿಸಲ್ಪಟ್ಟು ತಂಪು ಪೇಯವಾಗಿ ಪರಿವರ್ತನೆ ಹೊಂದಿತು.  

ಆಹ!  
ತೆಂಗಿನಕಾಯಿ ಹಾಲು,
ಸಿಹಿಮಜ್ಜಿಗೆ,
 ಚಿಗುರೆಲೆಗಳ ಸಾರ,  
ಮಸಾಲೆಗಳ ಖಾರ,
ಎಲ್ಲವೂ ಸೇರಿ,
ಸ್ವಾದಿಷ್ಟ ಪಾನೀಯ ದೊರೆಯಿತು.

“ ನಾಳೆ ಯಾವ ತಂಬುಳಿ ಮಾಡ್ತೀರಾ? “
“ ಕೊತ್ತಂಬರಿ ಸೊಪ್ಪು ಬಂದಿದೆ ಕಣ್ರೀ…. ಅದನ್ನೂ ತಂಬುಳಿ ಮಾಡ್ಬಿಟ್ಟು, ಹೀಗೇ ಗಟಗಟ ಕುಡಿಯೋದು… “





Wednesday 15 November 2017

ಮೊಸರಿನ ರಸ



ಮಧು ಮುಂದಿನವಾರ ಮನೆಗೆ ಬರಲಿದ್ದೇನೆ ಅಂದಿದ್ದ. ಶನಿವಾರ ಮುಂಜಾನೆ ಫೋನ್ ಬಂದಿತು, “ ಅಮ್ಮ, ನಾನೂ ಪ್ರಕಾಶಣ್ಣನೂ ಹೊರಟು ಬರುತ್ತಾ ಇದ್ದೇವೆ... ಮನೆ ತಲಪುವಾಗ ರಾತ್ರಿ ಗಂಟೆ ಏಳಾದೀತು, ನನ್ನ ಊಟಕ್ಕೆ ಏನು ಮಾಡಿ ಇಡುತ್ತೀ … “
“ ರಾತ್ರಿ ನೀನು ಉಣ್ಣುವುದು ಕುಚ್ಚುಲಕ್ಕಿ ಗಂಜಿ, ಮೊಸರು ಅಲ್ವಾ ? ಫ್ರೆಶ್ ಆಗಿ ಸಿಹಿ ಮೊಸರು ಮಾಡಿ ಇಡ್ತೇನೆ…. ಮಾವಿನಕಾಯಿ ಉಪ್ಪಿನಕಾಯಿ ಉಂಟು. “
“ ಆಯಿತು, ಅಷ್ಟು ಮಾಡು… “



“ ಅದು ಹೇಗ್ರೀ ಮೊಸರು ಮಾಡುವ ಕತೆ ಹೇಳಿರಲ್ಲ, ನಮ್ಮದು ಪ್ಯಾಕೆಟ್ ಮೊಸರು ಮುಂಜಾನೆ ಮನೆ ಬಾಗಿಲಿಗೆ ಬರುತ್ತೆ. “
ಮಧ್ಯಾಹ್ನ ಊಟವಾಗುತ್ತಲೇ ರಾತ್ರಿಯ ಮೊಸರೂಟದ ತಯಾರಿ ಮಾಡಲೇ ಬೇಕು. ಒಂದು ಪುಟ್ಟ ತಟ್ಟೆಯಲ್ಲಿ ಹಾಲು ತುಂಬಿಸಿ ಒಂದು ಚಮಚ ಮಜ್ಜಿಗೆ ಯಾ ಮೊಸರು ಎರೆದು, ಚಮಚದಲ್ಲಿ ಕಲಕಿ ಬೆಚ್ಚಗಿನ ಜಾಗದಲ್ಲಿ ಇರಿಸಿ ಮುಚ್ಚಿ ಇಡಬೇಕು. ಹಾಲು ಮೊಸರಾಗಿ ಪರಿವರ್ತಿತವಾಗಲು ಕನಿಷ್ಟಪಕ್ಷ ಆರು ಗಂಟೆಯ ಅವಧಿ ಬೇಕು. ಚಳಿಗಾಲದಲ್ಲಿ ಹೆಪ್ಪುಗಟ್ಟುವುದು ನಿಧಾನ, ಬೇಸಿಗೆಯಲ್ಲಿ ಬೇಗನೆ ಹುಳಿ ಮೊಸರಾದೀತು. ಹವಾಮಾನವನ್ನೂ ನೋಡಿಕೊಂಡು ಹೆಪ್ಪು ಎರೆಯುವ ಹೊತ್ತು ಹಾಗೂ ಎಷ್ಟು ಚಮಚ ಮೊಸರು ಹಾಕಬೇಕೆಂದು ನಿರ್ಧರಿಸುವುದು ನಮ್ಮ ಕೈಯಲ್ಲಿದೆ.  

ಈ ಹೊತ್ತಿಗೆ ಗೌರತ್ತೆ ನನ್ನ ಬರೆಯುವ ಟೇಬಲ್ ಬಳಿ ಬಂದರು, “ ಮೊಸರು ಚೆನ್ನಾಗಿ ಬರಬೇಕಾದರೆ ಒಂದು ತುಂಡು ಬಾಳೆ ಎಲೆ ಇಡಬೇಕು. “
 ಹ್ಞಾ, ಹೌದು…. ಹಾಲಿನ ಮೇಲೆ ಚಿಕ್ಕ ತುಂಡು ಬಾಳೆ ಎಲೆ ಇಟ್ಟು ಬಿಡಿ, ಹಲ್ವ ತುಂಡಿನಂತಹ ಮೊಸರನ್ನು ಚಮಚದಲ್ಲಿ ತೆಗೆದು ಸವಿಯಿರಿ.

Friday 10 November 2017

ಪುಸ್ತಕ ಪ್ರೀತಿ

                                                                   
                                                         



ನಿನ್ನೆ ಮುಂಜಾನೆ ಹೊರಚಾವಡಿಯಲ್ಲಿ ಕುಳಿತಿದ್ದ ಹಾಗೆ, ಅಪರಿಚಿತರೊಬ್ಬರು ಮನೆಯೊಳಗೆ ನುಗ್ಗಿದರು. ಬಗಲಲ್ಲಿ ಒಂದು ಚೀಲ, ಚೀಲ ತುಂಬ ಪುಸ್ತಕಗಳು.

ನನಗೆ ಮಹದಾನಂದ, ಐ ಪ್ಯಾಡ್ ಪಕ್ಕಕ್ಕಿರಿಸಿ, ಅವರು ಚೀಲದೊಳಗಿನಿಂದ ಒಂದೊಂದೇ ಪುಸ್ತಕಗಳನ್ನು ಹೊರ ತೆಗೆಯುತ್ತಿದ್ದಂತೆ ಐ ಫೋನ್ ಕ್ಲಿಕ್ ಕ್ಲಿಕ್ಕೆಂದಿತು.

“ ನಿನಗೆ ಯಾವ ಪುಸ್ತಕ ಬೇಕೆಂದು ನೋಡಿಕೋ… “ ಎಂದ ನನ್ನವರು, ಬಂದ ಮಹನೀಯರೊಡನೆ ಹಿರಣ್ಯದ ನಾಗಬನದ ಅಭಿವೃದ್ಧಿಯ ವಿಚಾರವಾಗಿ ಪಟ್ಟಾಂಗಕ್ಕಿಳಿದರು.

“ ಯಾವ ಪುಸ್ತಕ ಇಟ್ಕೊಳ್ಳಲಿ… “ ನನ್ನ ಪರದಾಟವನ್ನು ಕಂಡು ಶ್ರೀಯುತ ಶಂಕರ ಕುಳಮರ್ವರು ನಾಲ್ಕು ಪುಸ್ತಕಗಳನ್ನು ಆಯ್ದು ಕೊಟ್ಟರು. ಅಂತೂ ಎರಡು ಪುಸ್ತಕಗಳು ನನ್ನ ಬಿಡುವಿನ ವೇಳೆಯ ಓದಿಗಾಗಿ ಕಪಾಟು ಸೇರಿದುವು.

ಈ ಹೊತ್ತು, ಪುಸ್ತಕಗಳ ಹೊತ್ತಗೆಯನ್ನು ಹೊತ್ತು ತಂದ ಮಹನೀಯರನ್ನು ಕಂಡಾಗ, ಬಾಲ್ಯದ ದಿನಗಳ ನೆನಪು ಸಹಜವಾಗಿ ನುಗ್ಗಿ ಬಂದಿತು. ಕಾಸರಗೋಡಿನ ವಿದ್ವಾಂಸರು ಮೌನವಾಗಿಯೇ ಸಾಹಿತ್ಯಕೃಷಿ ನಡೆಸಿದವರಾಗಿದ್ದಾರೆ. ಪುಸ್ತಕ ಪ್ರೀತಿಯನ್ನು ಬಾಲ್ಯದಿಂದಲೇ ಕಲಿಸಿಕೊಟ್ಟವರು ನನ್ನ ಅಪ್ಪ. ಮನೆಗೆ ಪುಸ್ತಕ ಮಾರಾಟಗಾರರು ಬಂದಾಗ ಕೊಂಡುಕೊಳ್ಳುವ ಔದಾರ್ಯತೆ ಅವರಲ್ಲಿತ್ತು. ಮದುವೆಯಾಗಿ ಹಿರಣ್ಯಕ್ಕೆ ಬಂದಾಗಲೂ ಇಲ್ಲಿಯೂ ಅದೇ ತೆರನಾದ ಪುಸ್ತಕ ಪ್ರೀತಿಯನ್ನು ಕಂಡು ಬೆರಗೂ ಆಯಿತು. ನನ್ನ ಮಾವನವರ ಬಳಿ ಸುಮಾರು ಐದು ಸಾವಿರಕ್ಕೂ ಮೀರಿ ಪುಸ್ತಕಗಳಿದ್ದುವು.  

ಇದೇ ಹೊತ್ತಿನಲ್ಲಿ ನಾನು ಉತ್ಥಾನ ಮಾಸಪತ್ರಿಕೆಯಲ್ಲಿ ಬರೆಯುತ್ತಿರುವ ಅಡುಗೆ ಬರಹಗಳು “ ಸರಳ ಅಡುಗೆಗಳು “ ಎಂಬ ಶಿರೋನಾಮೆಯಲ್ಲಿ ಪ್ರಕಟಿತವಾಗುತ್ತಲಿದೆ.



Tuesday 7 November 2017

ಮಾವಿನಕಾಯಿ ಸಾರು



                                           


ನಾಗಬನದಲ್ಲಿ ತಂಬಿಲ ಸೇವೆಗೆಂದು ಬಂದಿದ್ದ ಉಷಕ್ಕ, ಮನೆ ಹಿತ್ತಲಲ್ಲಿ ಬಿದ್ದು ಹಾಳಾಗುತ್ತಿದ್ದ ಮಾವಿನಕಾಯಿಗಳನ್ನೂ ತಂದಿದ್ದರು. " ಒಳ್ಳೆಯ ಕಸಿ ಮಾವಿನಕಾಯಿ, ಈ ರಣಬಿಸಿಲಿಗೆ ಬಿದ್ದು ಹಾಳಾಗುತ್ತ ಇದೆ... ಒಂದು ಸಾರು ಮಾಡಿ ನೋಡೂ. "
" ಆಯ್ತು, ಅಪ್ಪೆಸಾರು ಅಂತೇನೋ ಮಾಡ್ತಾರಲ್ಲ, ಅದು ಹೇಗೆ ಗೊತ್ತಾ? "
" ಮಾವಿನಕಾಯಿ ಬೇಯಿಸಿ, ಚೆನ್ನಾಗಿ ಗಿವುಚಿ, ಉಪ್ಪೂ ಬೆಲ್ಲ ಹಾಕಿ, ಬೆಳ್ಳುಳ್ಳಿ ಒಗ್ಗರಣೆ ಕೊಟ್ರಾಯ್ತು. "
" ಅಷ್ಟೇನಾ, ನಾನು ಏನೋ ಅಂದ್ಕೊಂಡಿದ್ದೆ… ನಾಳೆ ಮಾಡೂದು. "
" ಇದು ಕಸಿ ಮಾವು, ಮಾವಿನಕಾಯಿದು ಸಿಪ್ಪೆ ತೆಗೆದೇ ಬೇಯಿಸು, ಇಲ್ಲಾಂದ್ರೆ ಕಹಿಯಾದೀತು. "
" ಓ, ಹಾಗೂ ಉಂಟೋ… "
" ಹ್ಞಾ ಮತ್ತೇ, ನಮ್ಮ ಊರಿನ ಕಾಟ್ ಮಾವಿನಕಾಯಿದು ಆದ್ರೆ ಸಿಪ್ಪೆ ಕೂಡಾ ಬೇಯಿಸಬಹುದು, ಬೆಲ್ಲ ಹಾಕದೇ ಮಾಡ್ಬೇಡಾ. "

ಅಂತೂ ಎರಡು ಮಾವಿನಕಾಯಿಗಳ ಸಿಪ್ಪೆ ತೆಗೆದು, ಒಳಗಿನ ಎಳೆಯ ವಾಟೆಯನ್ನೂ ತೆಗೆದು ನೀರೆರೆದು ಬೇಯಿಸಿ, ಆರಿದ ನಂತರ ಕೈಯಲ್ಲಿ ಗಿವುಚಿ, ಉಪ್ಪೂ ಬೆಲ್ಲ ಕೂಡಿಸಿ, ಅಗತ್ಯದ ನೀರೆರೆದು ಕುದಿಸಿದಾಗ, ಬೆಳ್ಳುಳ್ಳಿ ಕರಿಬೇವಿನ ಒಗ್ಗರಣೆಯಲ್ಲಿ ಸಾರು ಸಂಭ್ರಮ ಪಟ್ಟಿತು.

ಸಾರಿನೂಟ ಸವಿಯುತ್ತಿದ್ದಾಗ ನಮ್ಮ ಅಂಬಟೆ, ಬೀಂಬುಳಿ, ನಕ್ಷತ್ರ ಹಣ್ಣು, ರಾಜನೆಲ್ಲಿಕಾಯಿ, ಚೆರಿ ಇತ್ಯಾದಿ ಕಾಟಂಗೋಟಿ ಹಣ್ಣುಗಳಿಂದಲೂ ಈ ವಿಧದ ಸಾರು ಮಾಡಬಹುದೆಂದು ಟ್ಯೂಬ್ ಲೈಟ್ ಹೊತ್ತಿ ಉರಿಯಿತು.

ಬೀಂಬುಳಿ ಸಾರು ಮಾಡೋಣ, ಕೇವಲ ಬೀಂಬುಳಿ ಚೆನ್ನಾಗಿರದು, ಒಂದು ಟೊಮ್ಯಾಟೋ, ಕ್ಯಾರೆಟ್ ತುಂಡು ಹಾಗೂ ನಾಲ್ಕು ಬೀಂಬುಳಿಗಳನ್ನು ಕತ್ತರಿಸಿ ಬೇಯಿಸಿದ್ದಾಯ್ತು, ಬೆಂದ ನಂತರ ಮಿಕ್ಸಿಯಲ್ಲಿ ತಿರುಗಿಸಲಾಗಿ ಒಂದು ಬಣ್ಣದ ದ್ರಾವಣ ದೊರೆಯಿತು. ರುಚಿಕರವಾಗಿ ತಿನ್ನಲು ಉಪ್ಪು ಹಾಗೂ ಬೆಲ್ಲ ಕೂಡಿಸಿ, ಅಂದಾಜಿನ ನೀರೆರೆದು ಕುದಿಸಿ, ಬೆಳ್ಳುಳ್ಳಿ, ಕರಿಬೇವು ಒಗ್ಗರಣೆ ಕೊಡುವಲ್ಲಿಗೆ ಬೀಂಬುಳಿ ಸಾರು ಬಂದೆನೆಂದಿತು.

ಎಪ್ರಿಲ್, ಮೇ ತಿಂಗಳ ಅಂತ್ಯವಾಗುತ್ತಿದ್ದಂತೆ ತಾಜಾ ಪುನರ್ಪುಳಿ ಹಣ್ಣುಗಳ ಕಾಲ, ಕೆಂಪು ಕೆಂಪಾದ ಪುನರ್ಪುಳಿ ಸಾರು ಕೂಡಾ ಮೇಲಿನ ಮಾದರಿಯಲ್ಲೇ ಸಿದ್ಧಪಡಿಸುವುದು, ಬೇಸಿಗೆಯ ರಣರಣ ಸೆಕೆಯಲ್ಲೂ ಪುನರ್ಪುಳಿ ಸಾರು ಒಂದಿದ್ದರೆ ಸಾಕು, ಸುಖವಾಗಿ ಊಟ ಮುಗಿಸಿ ಮೇಲೇಳಬಹುದು.

ಈ ಮೇಲೆ ಹೇಳಿದ ಸಾರುಗಳಿಗೆ ತೆಂಗಿನಕಾಯಿಹಾಲು ಸೇರಿಸಿದರಂತೂ ಇನ್ನಷ್ಟು ರುಚಿಕರ, ಊಟದ ಶ್ರೀಮಂತಿಕೆಯನ್ನೂ ಹಚ್ಚಿಸುವಂತಹುದು ಕಾಯಿಹಾಲು, ದೇಹಕ್ಕೂ ತಂಪು.

ಅಂದ ಹಾಗೆ, ಅಪ್ಪೆಸಾರು ಎಂಬ ಪದದ ಬಳಕೆ ನಮ್ಮ ದಕ್ಷಿಣಕನ್ನಡಿಗರಲ್ಲಿ ಇಲ್ಲ. ಏನಿದ್ದರೂ ಮಾವಿನಕಾಯಿ ಸಾರು, ಬೀಂಬುಳಿ ಗೊಜ್ಜು ... ಈ ಥರ ಆಯಾ ತರಕಾರಿಗಳ ಹೆಸರಿನಲ್ಲಿ ನಾಮಕರಣ. ನಮ್ಮ ಕಡೆ ತುಳು ಪದಗಳ ಬಳಕೆ ಜಾಸ್ತಿ. ಒಂದು ವೇಳೆ ನಾನು, " ಚೆನ್ನಪ್ಪಾ, ಅಪ್ಪೆಸಾರು ಬಡಿಸಲೋ..? " ಎಂದು ಕೇಳಿದ್ರೆ ಅವನ ಉತ್ತರ ಹೆಂಗಿರುತ್ತೆ?

" ಅವು ಎಂಚಿನ, ಅಪ್ಪೆನ ಸಾರು! ಎಡ್ಡೆ ಇಪ್ಪು, ಬಳಸುಲೇ... " ಅನ್ತಿದ್ದ. ( ಅದ್ಯಾವುದು ಅಮ್ಮನ ಸಾರು! ಚೆನ್ನಾಗಿದ್ದೀತು, ಬಡಿಸಿರಿ... )

ಹಿತ್ತಲಲ್ಲಿ ದಾರೆಹುಳಿ ಇದೆಯಾ, ಇದು ಹುಳಿಯೊಂದಿಗೆ ಸಿಹಿಮಿಶ್ರಿತ ಹಣ್ಣು. ಇದನ್ನೂ ಸಾರು ಮಾಡಿ ಉಣ್ಣಬಹುದು. ಒಗ್ಗರಣೆಯಲ್ಲಿ ಬೆಳ್ಳುಳ್ಳಿ ಇಷ್ಟ ಪಡದವರೂ ಇರುತ್ತಾರೆ, ಇಂಗು, ಕರಿಬೇವು ಇತ್ಯಾದಿ ಇದೆಯಲ್ಲ.

ಮಾವಿನ ವಾಟೆ ಅಂದಾಗ ನೆನಪಾಯ್ತು, ಮಾವಿನಲ್ಲಿ ಗೊರಟು ಕಟ್ಟಬೇಕಾದರೆ ಮಾವಿನಕಾಯಿ ಬೆಳೆದಿರಬೇಕು, ಅದಕ್ಕೂ ಮೊದಲ ಹಂತದಲ್ಲಿ ಇರುವ ಎಳೆಯ ತಿರುಳು, ಯಾಕೋ ತಿಳಿಯದು, ನಮ್ಮ ಕಡೆ ಇಂತಹ ಎಳೆಯ ತಿರುಳನ್ನು ' ಕೋಗಿಲೆ ' ಅನ್ನುವ ವಾಡಿಕೆ, ಇದು ಕೂಡಾ ಅಡುಗೆಯಲ್ಲಿ ಬಳಸಲ್ಪಡುತ್ತದೆಂದು ಒಂದು ಸಮಯದಲ್ಲಿ ತಿಳಿದು ಬಂತು. ಆಗ ನಾನು ಕಾಲೇಜು ವಿದ್ಯಾರ್ಥಿನಿಯಾಗಿದ್ದೆ, ಒಂದು ಭಾನುವಾರ ಹೀಗೇ ಸುಮ್ಮನೆ ಸ್ನೇಹಿತೆ ಹೇಮಾ ಮನೆಗೆ ಹೋಗಿದ್ದೆ. " ಊಟ ಮಾಡ್ಬಿಟ್ಟು ಹೋಗು. " ಅವಳ ಅಜ್ಜಿ ಹಾಗೂ ಅಮ್ಮಂದು ಒತ್ತಾಯ, ನಿರಾಕರಿಸಲಾಗುತ್ತದೆಯೇ. ಅಂತೂ ಅವರ ಮನೆಯವರಲ್ಲೊಬ್ಬಳಂತೆ ಉಂಡಾಯಿತು. ಮನೆಯಲ್ಲಿ ಅಜ್ಜಿಯಂದಿರಿದ್ದರೆ ಅಡುಗೆಯ ರುಚಿಯೇ ಬೇರೆ, ನನಗಂತೂ ತಂಬುಳಿಯ ಹಾಗೇ ಇದ್ದ ಒಂದು ವ್ಯಂಜನ ತುಂಬಾ ಇಷ್ಟವಾಗಿ ಬಿಟ್ಟಿತು. ಯಾವುದು, ಏನು, ಹೇಗೆ ಎಂದು ವಿವರ ತಿಳಿಯಲಾಗಿ ಅದು ಕೇವಲ ಮಾವಿನ ವಾಟೆಯ ತಂಬುಳಿ!

ಕೋಗಿಲೆಯ ತಂಬುಳಿ, ಮಾಡಿದ್ದು ಹೇಗೆ?

ಎರಡು ಮಾವಿನ ವಾಟೆಯ ತಿರುಳು.
ಚಿಕ್ಕದಾಗಿ ಕತ್ತರಿಸಿಕೊಂಡು ತುಪ್ಪದ ಪಸೆಯಲ್ಲಿ ಹುರಿಯಿರಿ.
ಒಂದು ಹಸಿಮೆಣಸು, ತುಸು ಜೀರಿಗೆ, ಒಂದು ಹಿಡಿ ಕಾಯಿತುರಿ.
ರುಚಿಗೆ ತಕ್ಕಷ್ಟು ಉಪ್ಪು.
ಎಲ್ಲವನ್ನೂ ಅರೆಯಿರಿ.
ಒಂದು ಸೌಟು ಸಿಹಿ ಮಜ್ಜಿಗೆ ಕೂಡಿಸಿ, ನೀರನ್ನೂ ಎರೆದು ತೆಳ್ಳಗಾಗಿಸಿ, ಒಗ್ಗರಣೆ ಕೊಡುವುದು.
ಅರೆಯುವಾಗ ಮೆಣಸು ಇಲ್ಲದಿದ್ದರೂ ನಡೆಯುತ್ತದೆ, ಖಾರಕ್ಕೆ ಒಗ್ಗರಣೆ ಮೆಣಸೂ ಸಾಕು.
ಮಳೆಗಾಲದ ಅಡುಗೆಗೆಂದು ಉಪ್ಪಿನಲ್ಲಿ ಮಾವಿನಕಾಯಿ ಹಾಕಿಡುವುದಿದೆಯಲ್ಲ, ಅದರ ವಾಟೆಯನ್ನೇ ಅಡುಗೆಗೆ ಉಪಯೋಗಿಸುವುದು, ಹೀಗೇ ಸುಮ್ಮನೆ ತಿಂದೆಸೆದ ವಾಟೆ ಆಗದು. ವಾಟೆಯನ್ನು ಜಜ್ಜಿ ಒಳತಿರುಳನ್ನು ಬೇರ್ಪಡಿಸಲು ಪ್ರಯಾಸವೇನೂ ಇಲ್ಲ.

ಮಾವಿನಮಿಡಿ ಉಪ್ಪಿನಕಾಯಿ ಇದೆಯಲ್ಲ, ಎರಡು ಮೂರು ವರ್ಷಗಳ ಕಾಲ ಉಳಿಯುವಂತಹ ಮಿಡಿ ಉಪ್ಪಿನಕಾಯಿಗಳನ್ನು ತಿಂದು ತಿಂದು ಹಳೆಯದಾಯಿತು ಅಂತಾದರೂ ಮಿಡಿಯ ಒಳಗಿನ ' ಕೋಗಿಲೆ ' ತಂಬುಳಿ ಮಾಡಿ ಸವಿಯಬಹುದಾಗಿದೆ. ಉಪ್ಪು, ಮಸಾಲೆಯ ಖಾರ, ಮಾವಿನ ಸೊನೆ ಪರಿಮಳ ಹೊಂದಿರುವ ಈ ಕೋಗಿಲೆಯನ್ನು ಹುರಿಯಬೇಕೆಂದಿಲ್ಲ, ನೀರಿನಲ್ಲಿ ತೊಳೆದರೆ ಸಾಕು.

ಮಳೆಗಾಲ ಬಂದೊಡನೆ ತಿಂದು ಬಿಸುಟ ಮಾವಿನ ವಾಟೆ ಮೊಳಕೆಯೊಡೆದು ಎಳೆ ಚಿಗುರೆಲೆಗಳು ಮೂಡಿದಾಗ ಇಂತಹ ಚಿಗುರುಗಳ ತಂಬುಳಿಯೂ ರುಚಿಕರ. ಆಗ ತಾನೇ ಕುಡಿಯೊಡೆದ ಮಾವಿನ ವಾಟೆಯ ಒಳ ತಿರುಳು ಹೆಚ್ಚು ಸತ್ವಭರಿತವಾಗಿದ್ದು, ಕುಡಿಯೊಡೆದ ಕೋಗಿಲೆಯ ತಂಬುಳಿ ಈ ಮಳೆಗಾಲದಲ್ಲಿ ಮಾಡಿ ನೋಡಬೇಕೆಂದಿದೆ. ಮಳೆಗಾಲ ಬಂದರೆ ಸಾಕು, ನಮ್ಮ ಮಕ್ಕಳು ಗೇರುಮರಗಳ ಬುಡದಲ್ಲಿ ಅಡ್ಡಾಡಿ ಮೊಳಕೆಯೊಡೆದ ಗೇರುಬೀಜಗಳನ್ನು ಕೂಡಾ ಹುಡುಕಿ ತಿನ್ನುವ ಜಾಯಮಾನದವರು. " ಮಾವಿನ ಕೋಗಿಲೆಯೇನು ಮಹಾ... ಗೇರುಬೀಜದ ಮೊಳಕೆ ( ಮುಂಙೆ ) ತಿಂದು ಗೊತ್ತಾ.. " ಅನ್ನುವಂತಹ ಪ್ರಚಂಡರು ಹಳ್ಳಿಯಲ್ಲೇ ಹುಟ್ಟಿ ಬಳೆದ ಮಕ್ಕಳು.. ಹೌದೂ ಅನ್ನಿ.

ಟಿಪ್ಪಣಿ:   ಉತ್ಥಾನ ಮಾಸಪತ್ರಿಕೆಯ ಸಪ್ಟಂಬರ್, 2017ರ ಸಂಚಿಕೆಯಲ್ಲಿ ಪ್ರಕಟಿತ ಬರಹ.

Thursday 2 November 2017

ಸುರಂಗದತ್ತ ಪಯಣ



ಚೆನ್ನಪ್ಪನ ಎರಡು ತಿಂಗಳ ಸಂಬಳ ಎಣಿಸಿ ಕೊಟ್ಟಾಗಿತ್ತು. “ ನಾಳೆ ಬರ್ತಾನೋ ಇಲ್ಲವೋ... ಕೇಳಿ ಬಿಡು. “

“ ಗಂಟುನೋವಿನ ಮದ್ದು ತರಲಿಕ್ಕೆ ಸುಳ್ಯಕ್ಕೆ ಹೋಗುವುದಿದೆಯಂತೆ… “

“ ಅವನಿಗಿಷ್ಟವಾದ ಕೆಲಸ ನೆನಪಿಸಿ ಬಿಡು, ಬೇಗ ಬರುತ್ತಾನೆ. “

“ ತೋಟದಲ್ಲಿ ಸುರಂಗದ ಕೆರೆ ರಿಪೇರಿ ಆಗಲಿಕ್ಕುಂಟಲ್ಲ… “ ಎಂದು ಅವನತ್ತ ಬಾಣ ಎಸೆದಿದ್ದೂ ಆಯ್ತು.

ಚೆನ್ನಪ್ಪ ಸುಳ್ಯಕ್ಕೆ ಹೋದನೋ ಬಿಟ್ಟನೋ…. ಮಾರನೇ ದಿನ ನಾವು ತಿಂಡಿ ತಿನ್ನುತ್ತಿರಬೇಕಾದ್ರೆ ಹಾಜರಾದ.

ಇವತ್ತು ನಾವು ಅಡಿಕೆ ತೋಟದ ಅಭಿವೃದ್ಧಿಗೆ ಅವಶ್ಯವಿರುವ ನೀರಿನ ಸೆಲೆ ಇರುವಲ್ಲಿಗೆ ಪಯಣ ಬೆಳೆಸುವವರಿದ್ದೇವೆ. ಇದುವರೆಗೆ ಮಳೆಗಾಲವೆಂದು ತೋಟಕ್ಕೆ ಕಾಲಿಟ್ಟಿಲ್ಲ. ಹೋಗಬೇಕಾದ ದಾರಿಯುದ್ದಕ್ಕೂ ಮುಳ್ಳುಕಂಟಿ ಗಿಡಗಳನ್ನು ಸವರಬೇಕಾದ ಅನಿವಾರ್ಯತೆ ಇದೆ.

                                 

ಅಡಿಕೆ ತೋಟವೆಂದರೆ ಬಯಲು ಪ್ರದೇಶವಲ್ಲ. ನಮ್ಮ ಹಿಂದಿನವರು ಗುಡ್ಡಗಳನ್ನು ಕಡಿದು ತೋಟ ನಿರ್ಮಾಣ ಮಾಡಿದವರಾಗಿದ್ದಾರೆ. ಅಂತೆಯೇ ನಮ್ಮ ತೋಟವೂ ಮೂರು ಅಂತಸ್ತುಗಳ ಕಟ್ಟಡದಂತೆ ಮೂರು ತಟ್ಟುಗಳಲ್ಲಿದೆ. ಆ ಮೂರನೇ ತಟ್ಟಿನಲ್ಲಿದೆ ಸುರಂಗದ ಕೆರೆ ಹಾಗೂ ಝಳಝಳ ನಿನಾದದಿಂದ ಹರಿದು ಬರುತ್ತಿರುವ ನೀರು…

ಇಂತಹ ಸುರಂಗದ ನೀರಿನಿಂದಾಗಿ ಕಾಸರಗೋಡು ಜಿಲ್ಲೆ ಪ್ರಸಿದ್ಧಿಯನ್ನೂ ಪಡೆದಿದೆ. ಹೆಚ್ಚಿನ ಭೂಮಾಲಿಕರಲ್ಲಿ ಬದುಕಿನ ಸೆಲೆಯಾದ ಸುರಂಗದ ನೀರು ಇದ್ದೇ ಇದೆ.

ಸುರಂಗವೆಂದರೇನು ಎಂಬ ಪ್ರಶ್ನೆಗೂ ಚಿತ್ರಸಹಿತ ವಿವರಣೆ ಇಲ್ಲಿದೆ. ಅದು ಕೊಳವೆ ಬಾವಿಯಲ್ಲ, ಕೆರೆಕಲ್ಯಾಣಿ ಕಟ್ಟೆಯೂ ಅಲ್ಲ, ಬಾವಿಯಂತೂ ಅಲ್ಲ. ಗೋಡೆಯಂತಹ ಕಲ್ಲಿನ ದರೆಯನ್ನು ನೇರವಾಗಿ ಕಡಿಯುತ್ತ, ಗುಹಾದ್ವಾರದ ಪಯಣದಂತೆ ಮುಂದಕ್ಕೆ ಸಾಗುತ್ತ, ನೀರಿನ ಒಸರು ಸಿಗುವ ತನಕ ಮುಂದುವರಿಯುವ ವ್ಯವಸ್ಥೆಯನ್ನು ಇಲ್ಲಿ ಕಾಣಬಹುದಾಗಿದೆ. ನೀರು ಸಿಗದಿದ್ದರೆ ಅಥವಾ ಆಮ್ಲಜನಕದ ಕೊರತೆ ಕಂಡು ಬಂದರೆ ಸುರಂಗದ ಮುಂದುವರಿಕೆ ಇಲ್ಲ. ಬೇರೊಂದು ನಿಟ್ಟಿನಲ್ಲಿ ಮುಂದುವರಿಸುವ ರೂಢಿ. ಇಂತಹ ಹಲವು ಸುರಂಗಗಳು ನಮ್ಮ ತೋಟದೊಳಗೆ ಇವೆ, ಮನೆಯ ದಿನಬಳಕೆಗೆ ಕೂಡಾ ಸುರಂಗದ ನೀರು ಹರಿದು ಬರುವ ವ್ಯವಸ್ಥೆ ನಮ್ಮದಾಗಿದೆ.

                         

Wednesday 1 November 2017

ಅಮೃತಫಲ

   
                 
                  

ಹಾಲು ತಂದಿದ್ದು ಅತಿಯಾಗಿ ಉಳಿದರೆ ಈ ಸ್ವೀಟು ಮಾಡುವ ಹವ್ಯಾಸ ನನ್ನದು. ಮನೆಗೆ ಬಂದ ಅತಿಥಿಗಳೇ ತಿಂದೂ, ಕೊಂಡೂ ಹೋದರು...

ಹಿರಣ್ಯದ ನಾಗಬನದಲ್ಲಿ ಧಾರ್ಮಿಕ ಚಿಂತನಾಸಭೆ ನಡೆಯುವುದಿತ್ತು. ಬರಲಿರುವ ಊರ ಪರವೂರ ಮಹನೀಯರಿಗೆ ಅತಿಥಿಸತ್ಕಾರದ ವ್ಯವಸ್ಥೆ ಆಗಬೇಕಾಗಿದೆ. ಕಾಫಿ ಚಹಾ ವಿತರಣೆಗಾಗಿ ದೊಡ್ಡ ಕ್ಯಾನ್ ತುಂಬ ಪಕ್ಕದ ಮಿಲ್ಮಾ ಡೈರಿಯಿಂದ ಹಾಲು ಬಂದಿತು.

ತಂದ ಹಾಲನ್ನು ಮುಗಿಸಲು ಕಾಫಿ ಚಹಾ ಪಾನೀಯಗಳಿಂದ ಸಾಧ್ಯವಾಗದೇ ಹೋಯಿತು, ಅಂದಾಜು ನಾಲ್ಕೂಐದೂ ಲೀಟರು ಹಾಲು ಉಳಿಯಿತು. ಕುದಿಸಿದ ಹಾಲಿನಲ್ಲಿ ಶೇಖರಿತವಾಗಿದ್ದ ಕೆನೆಯನ್ನು ನಾಳೆಯ ಬೆಣ್ಣೆಗಾಗಿ ತೆಗೆದಿರಿಸಿ, ನಾಳೆಯ ಖರ್ಚಿಗಾಗಿ ಉಳಿದ ಹಾಲನ್ನು ಕುದಿಸಿಟ್ಟುಕೊಂಡರೂ ಇದು ಮುಗಿಯದ ಹಾಲು. ಪಕ್ಕದ ಮನೆಯಲ್ಲೇ ಇರುವ ನಮ್ಮಕ್ಕನನ್ನೂ ಕೂಗಿ ಕರೆದು, “ ಈ ಹಾಲು ನಿನಗೂ ಇರಲಿ... “ ಅಂದ್ಬಿಟ್ಟು ಅವಳೂ ಹಾಲು ಕೊಂಡೊಯ್ದರೂ ಎರಡು ಲೋಟಾ ಹಾಲು ಮಿಕ್ಕಿತು!

ಇಲ್ಲ, ಹಾಗೇ ಸುಮ್ಮನೆ ಬಿಡುವಂತಿಲ್ಲ. ಮುಂಜಾನೆ ಚಟ್ಣಿಗಾಗಿ ಒಂದು ತೆಂಗಿನಕಾಯಿ ಒಡೆದಿದ್ರಲ್ಲಿ ಅರ್ಧ ದೊಡ್ಡ ಕಡಿ ಇದೆ. ಆ ಕಾಯಿಯನ್ನು ತುರಿದು, ಮಿಕ್ಸಿಯಲ್ಲಿ ತಿರುಗಿಸಿ ತೆಂಗಿನಕಾಯಿ ಹಾಲನ್ನು ತೆಗೆದು,
 ಎರಡು ಪ್ರತಿ ಹಾಲುಗಳನ್ನು ದಪ್ಪ ತಳದ ತಪಲೆಗೆ ಸುರಿದು,
ಎರಡು ಲೋಟ ಸಕ್ಕರೆಯನ್ನು ಅಳೆದು,
ಹಾಲೂ ಸಕ್ಕರೆ ಬೆರೆತು, ಕುದಿಕುದಿದು,
ಕೈ ಬಿಡದೆ ಮಗುಚುತ್ತಾ ಇರಲು,
ಕೊತಕೊತನೆ ಕುದಿಯುತ್ತ ಉಕ್ಕಿ ಉಕ್ಕಿ ಬರುತ್ತಿರಲು,
ಮರದ ಸಟ್ಟುಗ ತಿರುತಿರುಗುತ್ತಿರಲು,
ಎರಡು ಏಲಕ್ಕಿ ಗುದ್ದಿ,
ಒಂದು ತಟ್ಟೆಗೆ ತುಪ್ಪದ ಪಸೆಯುದ್ದಿ,
ಹಾಲು ಸಕ್ಕರೆಯ ಪಾಕ ಘನವಾಗುತ್ತ ಬಂದು,

ಈ ಸಿಹಿ ತಿಂಡಿಗೆ ತುಪ್ಪ ಹಾಕಬೇಕಾಗಿಲ್ಲ.
ಮೈದಾ, ಕಡಲೆ ಯಾ ಅಕ್ಕಿ ಹಿಟ್ಟು ಇದಕ್ಕೆ ಬೇಡ.
ಹಾಲಿನ ಖೋವಾ, ಘನೀಕೃತ ಹಾಲಿನ ಪುಡಿಯಂತಹ ಪ್ಯಾಕೇಟುಗಳ ಬಳಕೆಯನ್ನೂ ನಾನು ಮಾಡಿಲ್ಲ.

ಇನ್ನೇನು ಗಟ್ಟಿಯಾಗುತ್ತ ಬಂದಿದೆ... ಕೆಳಗಿಳಿಸಿ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ ಆರಲು ಬಿಡಿ.
ಅರ್ಧ ಗಂಟೆ ಬಿಟ್ಟು ಚೂರಿಯಲ್ಲಿ ಗೆರೆ ಹಾಕಿ.

ಸಿಹಿತಿಂಡಿಗೆ ಸೊಗಸಿನ ನೋಟವೂ ಇರಬೇಕು, ಅದಕ್ಕಾಗಿ ಚಿತ್ರದಲ್ಲಿರುವಂತೆ ಕಾಣಲು ಅಂಗೈಯಲ್ಲಿ ತಟ್ಟಿ ಪೇಢಾದಂತೆ ಮಾಡಿಟ್ಟೆ, ಬಿಸಿಯಿರುವಾಗ ಸಾಧ್ಯವಾಗದು, ಬಿಸಿ ಆರಿದ ನಂತರ ಮಾಡಿದ್ದು ಕಣ್ರೀ...

ಹೊರಚಾವಡಿಯಲ್ಲಿ ಆ ದಿನದ ಸಭಾ ಕಾರ್ಯಕ್ರಮದ ಆಯವ್ಯಯದ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದ ನಮ್ಮೆಜಮಾನ್ರು ಹಾಗೂ ಪಡಾರು ಬಾಲಕೃಷ್ಣ ಶೆಟ್ಟಿ ನನ್ನ ರಸರುಚೆಯ ಮೊದಲ ಗ್ರಾಹಕರು.
“ ದೂಧ್ ಪೇಢಾ ತಿಂದ ಹಾಗೆ ಆಯ್ತ.. ? “ ಪ್ರಶ್ನೆ ಹಾಕದಿದ್ದರೆ ಹೇಗೆ?
“ ಮಗಳಿಗೆ ತಿನ್ನಲಿಕ್ಕೆ ಕೊಂಡು ಹೋಗುತ್ತೇನೆ... “ ಎಂದ ಬಾಲಕೃಷ್ಣ. ಪ್ರೈಮರಿ ಸ್ಕೂಲ್ ಬಾಲೆಗಾಗಿ ನಾಲ್ಕು ಪೇಢಾಗಳನ್ನು ಕಟ್ಟಿ ಕೊಟ್ಟೆ.

ನಮ್ಮ ಊರಿನ ಸಾಂಪ್ರದಾಯಿಕ ಸಿಹಿಭಕ್ಷ್ಯವಾದ ಈ ತಿನಿಸು ಅಮೃತಘಲವೆಂದು ಕರೆಯಲ್ಪಟ್ಟಿದೆ. ತೆಂಗಿನಕಾಯಿ ಹಾಲು ಇದನ್ನು ಘನೀಕರಿಸುವ ಸಾಧನ. ಹಸುವಿನ ಹಾಲು ಹಾಗೂ ತೆಂಗಿನಕಾಯಿ ಹಾಲು, ಅಬಾಲವೃದ್ಧರಿಗೂ ಎಲ್ಲ ವಯೋಮಾನದವರಿಗೂ ಶರೀರಕ್ಕೆ ಪುಷ್ಟಿದಾಯಕ ಆಹಾರ. ಜೀರ್ಣಕ್ಕೇನೂ ಬಾಧಕವಿಲ್ಲ. ಕೃತಕ ಸುವಾಸನಾದ್ರವ್ಯಗಳನ್ನು, ಬಣ್ಣಗಳನ್ನು, ಬೆಳ್ಳಿಯ ರೇಕುಗಳನ್ನೂ ನಾವು ಮನೆಯಲ್ಲೇ ತಯಾರಿಸುವ ತಿನಿಸುಗಳಿಗೆ ಹಾಕಲೇ ಬಾರದು. ಅಂತಹುದೇನಿದ್ದರೂ ಬೇಕರಿ ತಿಂಡಿಗಳಿಗೆ ಬಿಟ್ಟು ಬಿಡೋಣ.