Pages

Ads 468x60px

Thursday 23 April 2020

ಬೇಸಿಗೆಯ ಪಾನಕ





ಈಗ ಏನೇನೋ ಹಣ್ಣುಗಳ ಕಾಲ, ಗೇರು, ಮಾವು, ಹಲಸು ಮೊದಲಿನಿಂದಲೂ ಇದ್ದಿದ್ದೇ.. ಎಲ್ಲೆಂದರಲ್ಲಿ ಕಾಣ ಸಿಗುವ ಹಲಕೆಲವು ಹಣ್ಣುಗಳ ಹೆಸರೇ ಗೊತ್ತಿರುವುದಿಲ್ಲ.

ಟೇಬಲ್ ಮೇಲೆ ನಕ್ಷತ್ರ ಹಣ್ಣು.
 " ಹಾಗೇ ಇಟ್ಟು ಹಾಳು ಮಾಡಬೇಡ. "
" ಆಯ್ತು, ಏನೋ ಒಂದು ಮಾಡ್ತೇನೆ..."
" ಏನೋ ಒಂದೂಂತ ಮಾಡ್ಬೇಡ, ಚಂದಕೆ ಶರಬತ್ತು ಮಾಡು.. " ಗೌರತ್ತೆಯ ತೀರ್ಮಾನ ಬಂದಿತು. " ಸ್ವಲ್ಪ ಕಾಳುಮೆಣಸಿನ ಹುಡಿ ಹಾಕಿದ್ರೆ ಒಳ್ಳೇದು."

"ಆಯ್ತು, ಕಾಳುಮೆಣಸು ಹಾಕಿದ್ರೆ ಅದು ಪಾನಕ ಎಂದಾಗುತ್ತೆ.. ಬೆಲ್ಲ ಹಾಕ್ಬೇಕು. "
" ಬೆಲ್ಲವೋ ಸಕ್ಕರೆಯೋ ಏನೋ ಒಂದು ಮಾಡು. "

ಈಗ ಹಣ್ಣಿನ ಪಾನಕ ಮಾಡೋಣ.
ಅಂದಾಜು 25 ನಕ್ಷತ್ರ ಹಣ್ಣುಗಳನ್ನು ತೊಳೆಯಿರಿ.
ನಾಲ್ಕು ತುಂಡು ಮಾಡಿ ಬೀಜ ಇದ್ದರೆ ತೆಗೆಯಿರಿ.
ಹುಳ, ಕ್ರಿಮಿ ಇದೆಯೋ ಎಂದು ಪರಿಶೀಲಿಸುವುದೂ ಅಗತ್ಯ.
ಮಿಕ್ಸಿಯಲ್ಲಿ  ತಿರುಗಿಸಿ.
ಸುಸೂತ್ರವಾಗಿ ತಿರುಗಲು ಅವಶ್ಯವಿರುವ ನೀರು ಎರೆಯಿರಿ.
ಕುದಿಸಿ ತಣಿಸಿದ ನೀರು ಉತ್ತಮ, ನನ್ನ ಬಳಿ ಲಾವಂಚ, ಸೊಗದೇ ಬೇರಿನ ಕೆಂಬಣ್ಣದ ಸುವಾಸನಾಯುಕ್ತ ನೀರು ಇದ್ದಿತು, ಅದನ್ನೇ ಹಾಕಿದ್ದು.

ನಂತರ ತೆಂಗಿನಕಾಯಿ ಹಾಲು ಹಿಂಡುವಂತೆ ಇದನ್ನೂ ಸೋಸಿಕೊಳ್ಳಿ, ಗುಲಾಬಿ ವರ್ಣದ ರಸ ದೊರೆಯಿತು., ಚರಟ ಎಸೆಯಿರಿ.

ಒಂದು ಲಿಂಬೆಯ ರಸ ಯಾ ಪುನರ್ಪುಳಿಯ ದ್ರಾವಣ ಇದ್ದರೆ ಒಂದು ಸೌಟು, ನಕ್ಷತ್ರ ಹಣ್ಣಿನ ಹುಳಿ ಏನೂ ಸಾಲದು. ಹುಣಸೇ ಹಣ್ಣಿನ ರಸವೂ ಆದೀತು.

ಒಂದು ಅಚ್ಚು ಬೆಲ್ಲ ಅಂದರೆ ಕಿತ್ತಳೆ ಗಾತ್ರದ್ದು ಇರಬೇಕು.
ನೀರೆರೆದು ಕುದಿಸಿ, ಕರಗಿಸಿ, ಒಂದು ಚಮಚ ಕಾಳುಮೆಣಸಿನ ಹುಡಿ ಹಾಕಿ.

ಬೆಲ್ಲದ ನೀರನ್ನು ಶೋಧಿಸಿ ಆರಲು ಬಿಡಿ, ತುಸು ಉಪ್ಪು ಹಾಕಿದರೆ ಒಳ್ಳೆಯ ರುಚಿ.

ಬೆಲ್ಲದ ನೀರು, ಹಣ್ಣಿನ ರಸ, ಲಿಂಬೆ ರಸ ಸೇರಿಸಿ.
ಬೇಕಿದ್ದರೆ ತುಸು ನೀರು ಸೇರಿಸಬಹುದು, ನಾನು ಹಾಕಿಲ್ಲ.
ನಾಲ್ಕು ದೊಡ್ಡ ಲೋಟ ಪಾನಕ ಆಯ್ತು, ಬೆಲ್ಲದ ಬಣ್ಣ, ನಾರುಬೇರುಗಳ ಬಣ್ಣವೆಲ್ಲ ಸೇರಿ ಕಡು ಬಣ್ಣ ಬಂದಿತು.
ತಣ್ಣಗಾಗಲು ತಂಪುಪೆಟ್ಟಿಗೆಯಲ್ಲಿಟ್ಟು ಸಂಜೆಯ ಹೊತ್ತು ಕುಡಿಯಿರಿ.


ಸಸ್ಯಶಾಸ್ತ್ರದಲ್ಲಿ Syzygium samarangense ಎಂದಿರುವ ಇದು ಮರವಾಗಿ ಬೆಳೆಯುವ ಸಸ್ಯವಾಗಿದೆ. ಮರ ತುಂಬ ಹಣ್ಣು ತುಂಬಿ ತೊನೆದಾಡುವ ದೃಶ್ಯವೇ ನಯನಾಕರ್ಷಕ. ನೋಟದಿಂದಲೇ ದಾಹ ದೂರ.

ಬೇಸಿಗೆಯ ಹಣ್ಣು, ನೀರು ಅಧಿಕವಾಗಿರುವ ನಕ್ಷತ್ರ ಹಣ್ಣಿನಲ್ಲಿ ಜೀವ ಪೋಷಕ ದ್ರವ್ಯಗಳೂ ಹೇರಳವಾಗಿ ಲಭ್ಯ. ನೀರು ಕುಡಿಯಲು ಇಷ್ಟವಿಲ್ಲದಿದ್ದರೆ ಇಂತಹ ಹಣ್ಣುಗಳನ್ನು ತಿಂದು ಬೇಸಿಗೆಯ ದಾಹವನ್ನು ತಡೆಯಬಹುದು, ತನ್ಮೂಲಕ ಡಿಹೃಡ್ರೇಶನ್ ಯಾ ನಿರ್ಜಲೀಕರಣ ನಿವಾರಕ ಹಣ್ಣು ಇದೆಂದು ತಿಳಿದಿರಲಿ.
ಕ್ಯಾಲ್ಸಿಯಂ, ಕಬ್ಬಿಣ, ಪೊಟಾಶಿಯಂ ಇತ್ಯಾದಿ ಇರುವುದರಿಂದ ವಯಸ್ಸಾದವರಿಗೆ ಸ್ನಾಯುಗಳ ಬಲವರ್ಧನೆಯಿಂದ ನರಗಳ ನಿಶ್ಶಕ್ತಿ ದೂರವಾದೀತು.
ವಿಟಮಿನ್ ಎ ಇರುವ ಹಣ್ಣು, ಕಣ್ಣುಗಳ ಕಾಂತಿ ವರ್ಧನೆ.
ನಿಯಮಿತ ಸೇವನೆಯಿಂದ ಕಿಡ್ನಿಯ ಕಲ್ಲುಗಳ ಬಾಧೆ ಇರದು. ಲಿವರ್ ಕೂಡಾ ಸಶಕ್ತ.
ವಿಟಮಿನ್ ಬಿ, ಮೆಟಾಬಾಲಿಸಂ ಕಾಪಾಡುವಲ್ಲಿ ಶಕ್ತ, ನಿಸ್ಸಂದೇಹವಾಗಿಯೂ ಇದು ಒಂದು ಅ್ಯಂಟಿ ಓಕ್ಸಿಡೆಂಟ್ ಆಗಿರುತ್ತದೆ.
ಹಣ್ಣುಗಳನ್ನು ಹಾಗೇನೇ ತಿನ್ನಿ, ಜ್ಯೂಸ್ ಮಾಡಿ ಕುಡಿಯಿರಿ.
ಚಟ್ನಿ, ಸೂಪ್, ಸಲಾಡ್ ಗೊಜ್ಜುಗಳಿಗೆ ಬಳಸಿರಿ.
ಹೇಗೂ ಒಂದು ವಿಧವಾಗಿ ತಿನ್ನಿ.
ಆಸಕ್ತರು ಹೂಸರುಚಿಗಳನ್ನು ತಯಾರಿಸಿ ಸವಿಯಿರಿ, ನಮಗೂ ಹಂಚಿರಿ.

" ನಾಳೆ ಜಾಮ್ ಮಾಡಿ ನೋಡಬಹುದಲ್ಲ.. " ಅಂದರು ಗೌರತ್ತೆ.

" ಹೌದಲ್ಲ, ದೋಸೆ, ಚಪಾತಿಗೆ ಒಳ್ಳೆಯ ಕೂಟು. "

An apple a day, keeps the doctor away ಎಂಬ ಆಂಗ್ಲ ನುಡಿ ಇಂತಹ ಹಣ್ಣುಗಳಿಗೆ ಅನ್ವಯಿಸುವಂತದ್ದು. water rose apple ಎಂಬ ಹೆಸರು ಇದರದ್ದು.
ಬೀಜಗಳಿಂದ ಪುನರುತ್ಪಾದನೆ, ಬೀಜ ಬಿತ್ತಿ ಮೊಳಕೆಯೊಡೆದು. ಸಸಿಯನ್ನು ಚಿನ್ನಾಗಿ ಆರೈಕೆ ಮಾಡಿದಲ್ಲಿ ಮೂರು ವರ್ಷಗಳಲ್ಲಿ ಫಲವೃಷ್ಟಿ.
ತೇವಾಂಶ ಅಧಿಕವಿರುವಲ್ಲಿ ನೆಡುವುದು ಉತ್ತಮ.
ನಮ್ಮ ಆಸುಪಾಸಿನಲ್ಲಿ ಬೆಳೆಯುವ ಹಲವಾರು ಜಾತಿಯ ಹಣ್ಣುಗಳಿವೆ, ದಾರೆಹುಳಿಯೂ ಅವುಗಳಲ್ಲೊಂದು. ಆಂಗ್ಲ ಭಾಷೆಯಲ್ಲಿ ಇದು star apple. ಗೇರು ಹಣ್ಣನ್ನು ಇಂಗ್ಲೀಷ್ ಭಾಷಾಶಾಸ್ತ್ರ cashew apple ಅಂದಿದೆ. ಅನಾನಸ್ ಹಣ್ಣು pine-apple ಎಂದೆನಿಸಿದೆ.



Thursday 16 April 2020

ಬೋಳು ಸಾಂಬಾರ್






ಇವತ್ತು ತರಕಾರಿ ಏನೇನಿವೆ?
ಒಂದು ಹಿಡಿಯಷ್ಟು ಬೀನ್ಸ್ ಉಳಿದಿದೆ,
ನೀರುಳ್ಳಿ ಇದೆ,
ಟೊಮ್ಯಾಟೋ ಇದೆ.. ಸಾಂಬಾರ್ ಮಾಡಬಹುದು.

ಮಾಡಿಟ್ಟ ಸಾಂಬಾರ್ ಹುಡಿ ಮುಗಿಯುತ್ತ ಬಂದಿದೆ, ಪುನಃ ಮಾಡೋಣಾಂದ್ರೆ ಒಣಮೆಣಸು ಮುಗಿದಿದೆ.
ಟೇಬಲ್ ಮೇಲೆ ಬರೆದಿಟ್ಟ ಜೀನಸು ವಗೈರೆ ಮಾಲುಗಳ ಪಟ್ಟಿ ಇಟ್ಟಲ್ಲೇ ಇದೆ, ಯಾಕೋ ಬಂದಿಲ್ಲ.

" ಯಾಕ್ರೀ ತಂದಿಲ್ಲ..." ಕೇಳುವಂತಿಲ್ಲ, ಕೊರೋನಾ ಕಾಲ.

ತೊಗರಿಬೇಳೆ ಡಬ್ಬವೂ ಈಗ ಸಾಂಬಾರ್ ಮಾಡ್ಬಿಟ್ರೆ ಖಾಲಿ ಆದ ಹಾಗೆ, ಆಗಲಿ.

 ಇದ್ದಂತಹ ತೊಗರಿಬೇಳೆಯು ಕುಕ್ಕರಿನಲ್ಲಿ 3 ಸೀಟಿ ಕೂಗಿಕೊಂಡಿತು.

ಬೀನ್ಸ್, ಟೊಮ್ಯಾಟೋ ನೀರುಳ್ಳಿಗಳು ಕತ್ತರಿಸಲ್ಪಟ್ಟು, ನಾಲ್ಕಾರು ಬೆಳ್ಳುಳ್ಳಿ ಎಸಳುಗಳೂ ಸುಲಿಯಲ್ಪಟ್ಟು,
ಬೆರೆತಿದೆ ಉಪ್ಪು ರುಚಿಗೆ ತಕ್ಕಷ್ಟು,
ಪುನಃ ಕುಕ್ಕರ್ ಒಳಗೆ ತುಂಬಲ್ಪಟ್ಟು,
ಒಂದು ಸೀಟಿ ಕೂಗಲ್ಪಟ್ಟು,

ಕೆಳಗಿಳಿಸಿ, ಮೆಲ್ಲನೆ ಒತ್ತಡ ಇಳಿಸಿ.

ಇದೀಗ ತೆಂಗಿನತುರಿಯ ಸರದಿ,
ನೀರಿನ ಹಂಗಿಲ್ಲದೆ,
ಹಿಡಿಯಷ್ಟು ತುರಿ ತಿರುತಿರುಗಿ
ಬೇಯಿಸಿಟ್ಟ ಸಾಮಗ್ರಿ
ಬಾಯ್ದೆರೆದು ಕೂಡಿದಾಗ
ಇನ್ನೊಂದು ಕುದಿ ಕುದಿಸಿ
ಕೆಳಗಿಳಿಸಿ.

" ಊಟಕ್ಕಾಯ್ತೇ.. "
" ಆಯ್ತು.. "

ಒಗ್ಗರಣೆಗೆ ಸಮಯವಿಲ್ಲ, ಒಂದು ಚಮಚ ತುಪ್ಪ ಎರೆಯುವಲ್ಲಿಗೆ ಒಗ್ಗರಣೆ ಶಾಸ್ತ್ರ ಮುಕ್ತಾಯ.

ಮಸಾಲಾರಹಿತ ಸಾಂಬಾರ್ ಸಿದ್ಧವಾಯಿತು.

"ನಿನ್ನ ಅಂಬೊಡೆಗೂ ಹೀಗೇ ಸಾಂಬಾರ್ ಮಾಡಬೇಕಾಗಿತ್ತು.. " ಅನ್ನೋದೇ ಗೌರತ್ತೆ.



Friday 10 April 2020

ವಡಾ ಸಾಂಬಾರ್




ಎಲ್ಲಿಗೂ ಹೋಗೋ ಹಾಗಿಲ್ಲ, ಮನೆಯೇ ಮಂತ್ರಾಲಯ ಆಗ್ಬಿಟ್ಟಿದೆ.

ಮುಂಜಾನೆ ಮಾಡಿದ್ದ ಅವಲಕ್ಕಿ ಸಜ್ಜಿಗೆ ಯಾಕೋ ರುಚಿಯಾಗಿಲ್ಲ ಅಂದ್ರು.
ನನಗೇನೋ ರುಚಿಯಾಗಿಯೇ ಇತ್ತು.
" ನೀನು ಅವಲಕ್ಕಿಗೆ ಹಾಕಿದ ಮಸಾಲೆ ಜಾಸ್ತಿ ಆಯ್ತೂಂತ ಕಾಣುತ್ತೆ.. " ಎಂದರು ಗೌರತ್ತೆ.
"ಇರಬಹುದೇನೋ.. "

ಮನೆಯೊಳಗೆ ನಾವೇ, ಹೊರಕೆಲಸಕ್ಕೇಂತ ಯಾರೂ ಇಲ್ಲದ ಕೊರೋನಾ ಕಾಲ, ಮಕ್ಕಳೂ ಅವರ ಪಾಡಿಗೆ ಬೆಂಗಳೂರಿನಲ್ಲಿ ಇದಾರೆ, ದಿನಾ ಮಕ್ಕಳಿಗೆ ಅಡುಗೆ ಹೇಳ್ಕೊಡೋದೇ ಆಯ್ತು.

ತೋಟಕ್ಕೆ ನೀರು ಹಾಕೋದು, ಬಿದ್ದ ಅಡಿಕೆ ತರೂದು ಇತ್ಯಾದಿ ಕೈಕೆಲಸಗಳ ಹೊಣೆ ಇರುವಾಗ ಹಸಿದುಕೊಂಡು ಇರಬಾರದು ಎಂಬ ಘನ ಚಿಂತನೆಯೊಂದಿಗೆ 10 ಗಂಟೆಯ ಚಹಾ ಸಮಯದ ಹೊತ್ತಿಗೆ ಸವಿರುಚಿಯೊಂದು ಸಿದ್ಧವಾಯಿತು.

" ಏನು ಮಾಡಿದ್ರೀ? "
" ಉದ್ದಿನ ವಡೆ ಕಣ್ರೇ... " ಹೇಗೂ ಹೋಟಲ್ ತಿಂಡಿ ಹುಡುಕುತ್ತ ತಿರುಕಾಡುವ ಕಾಲ ಅಲ್ಲ, ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳೋಣ.

ಒಂದು ಲೋಟ ಉದ್ದು ತೊಳೆದು, ಮುಳುಗುವಷ್ಟು ನೀರು ಎರೆಯಿರಿ. ಅರ್ಧ ಗಂಟೆಯಲ್ಲಿ ಉದ್ದು ನೀರನ್ನೆಲ್ಲ ಹೀರಿರುತ್ತದೆ.
ಈಗ ಅರೆಯುವ ಸಮಯ.
ಬೇರೆ ನೀರು ಹಾಕೋ ಹಾಗಿಲ್ಲ.
ಶುಂಠಿ ಹಸಿಮೆಣಸು ಇತ್ಯಾದಿಯಾಗಿ ಯಾವುದೂ ಇರಲಿಲ್ಲ.. " ಅದಿಲ್ಲ ಇದಿಲ್ಲ " ಎಂದು ಗೊಣಗುವ ಹಾಗೂ ಇಲ್ಲ.
ಅರೆಯುವಾಗ ಉದ್ದಿನ ಗಾತ್ರದ ಇಂಗು ಹಾಗೂ ಕರಿಬೇವಿನೆಸಳು ಬಿಟ್ರೆ ಬೇರೇನೂ ಇಲ್ಲ.
ಹಿಟ್ಟು ರುಬ್ಬಿದ ನಂತರ ಒಂದು ಚಮಚ ಅಕ್ಕಿ ಹುಡಿ ಯಾ ಚಿರೋಟಿ ರವೆ ಸೇರಿಸಿ.
ಉಪ್ಪು ಮಿತವಾಗಿ ಹಾಕ್ಬೇಕು, ತುಸು ಜಾಸ್ತಿ ಆದ್ರೂನೂ ವಡೆಯ ರುಚಿ ಹೋಯ್ತು ಅನ್ನಿ.

ಮಿಕ್ಸಿಯಲ್ಲಿ ರುಬ್ಬಿದ ಹಿಟ್ಟನ್ನು ಕೈ ಒದ್ದೆ ಮಾಡಿಕೊಂಡು ತೆಗೆಯಿರಿ, ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
ದೋಸೆ ಇಡ್ಲಿಗಳಿಗೆ ರುಬ್ಬುವಂತೆ ನುಣ್ಣಗಾಗುವ ಅಗತ್ಯವಿಲ್ಲ.

" ಎಲ್ಲ ಹಿಟ್ಟನ್ನೂ ಒಂದೇ ಬಾರಿ ವಡೆ ಮಾಡಿ ಇಡ್ಬೇಡ, ಲೆಕ್ಕ ಮಾಡಿ ನಾಲ್ಕು ಸಾಕು.."

ಗೌರತ್ತೆ ಅಂದಿದ್ದು ಸರಿಯೇ, ಉಳಿದ ಹಿಟ್ಟನ್ನು ಫ್ರಿಜ್ ಒಳಗೆ ಕಾದಿರಿಸಲಾಯಿತು.

ಪ್ಲಾಸ್ಟಿಕ್ ಹಾಳೆ ಮೇಲೆ ತುಸು ಎಣ್ಣೆ ಸವರಿ, ಅಂಗೈಯನ್ನು ಒದ್ದೆ ಮಾಡಿಕೊಂಡು ವಡೆಯ ಹಿಟ್ಟನ್ನು ಹಾಳೆ ಮೇಲೆ ಇರಿಸಿ, ಕೈ ಬೆರಳಿನಲ್ಲಿ ಅಗಲವಾಗಿ ತೂತು ಕೊರೆಯಿರಿ.

ಈ ವೇಳೆಗೆ ಬಾಣಲೆಯ ಎಣ್ಣಿ ಬಿಸಿಯಾಗಿದೆ, ಒಂದೇ ಬಾರಿ ನಾಲ್ಕು ವಡೆ ಬೇಯಿಸುವಷ್ಟು ಎಣ್ಣೆ ಇಟ್ಟಿದ್ದೀರಾ,
ಎರಡೂ ಬದಿ ಕೆಂಪಗಾಗುವಂತೆ ಬೇಯಲಿ.

ನಂತರ ತೂತಿನ ತಟ್ಟೆಗೆ ಹಾಕಿ, ಬಿಸಿ ಇರುವಾಗಲೇ ತಣ್ಣೀರಿನಲ್ಲಿ ಮುಳುಗಿಸಿ ತೆಗೆಯಿರಿ.
ಸಾಂಬಾರ್ ಹೇಗೂ ಮಾಡಿರುತ್ತೇವಲ್ಲ, ಒಂದು ಸೌಟು ಸಾಂಬಾರ್ ಸುರಿದು ತಿನ್ನಿ.
ಮೊಸರು ಎರೆದು ತಿನ್ನಲು ಇನ್ನೂ ರುಚಿ. ಈ ಬೇಸಿಗೆಗೆ ಮೊಸರು ಸೂಕ್ತ ಆಹಾರ.







Thursday 2 April 2020

ಸಾಂಬಾರ್ ಹುಡಿ




" ಅಂಗಡಿ ಪಟ್ಟಿ ಮೈಲುದ್ದ ಬರೆಯಬೇಡ, ತಂದ ಹಾಲನ್ನು ಮಜ್ಜಿಗೆ ಮಾಡಿ ಹಾಳು ಮಾಡಬೇಡ..."

" ಆಯಿತು, ಅಗತ್ಯದ ಅಕ್ಕಿ, ಅವಲಕ್ಕಿ ತನ್ನಿ.. ನಾಯಿಗೆ ಹಾಕಲಿಕ್ಕೆ ಸ್ವಲ್ಪ ಜಾಸ್ತಿ ಅವಲಕ್ಕಿ ತನ್ನಿ... "

ಜೀನಸು ಅಂಗಡಿಯಿಂದ ಅವಶ್ಯವಿದ್ದ ಮಾಲುಗಳೆಲ್ಲ ಬಂದವು. ಇನ್ನು ಚಿಂತೆಯಿಲ್ಲ. ತರಕಾರಿ ಮುಗಿದ್ರೆ ತರಲಿಕ್ಕೆ ಹೇಳುವ ಹಾಗೂ ಇಲ್ಲ. ತೆಂಗಿನಕಾಯಿ ಅರೆದು ತಂಬ್ಳಿ ಮಾಡಿಟ್ಟರೂ ನಡೀತದೆ.

ಅಡುಗೆಯ ಸಮಯ, ಸಾಂಬಾರ್ ಮಾಡಲಿಕ್ಕೆ ಮೆಣಸು ಕೊತ್ತಂಬರಿ ಹುರಿಯಬೇಕಾಗಿದೆ. ತಲೆಯೊಳಗೆ ದೊಡ್ಡ ಲೈಟ್ ಮಿಂಚಿತು, ಎರಡು ದಿನಕ್ಕಾಗುವಷ್ಟು ಹುರಿದು ಪುಡಿ ಮಾಡಿಟ್ಕೊಳ್ಳೋಣ.

ಹೇಗೆ?

2 ಒಣ ಮೆಣಸು ಹಾಕ್ತೀರ, 4 ಮೆಣಸು ಹಾಕ್ಕೊಳ್ಳಿ.
1 ಚಮಚ ಉದ್ದಿನಬೇಳೆ ಬದಲಾಗಿ 2 ಚಮಚ.
ಒಂದೂವರೆ ಚಮಚ ಕೊತ್ತಂಬರಿಯಾಗಿದ್ರೆ 3 ಚಮಚ.
ಇದೇ ಮಾದರಿಯಲ್ಲಿ ಜೀರಿಗೆ, ಮೆಂತೆ, ಇಂಗು..
2 ಎಸಳು ಕರಬೇವು ಹಾಕ್ಕೂಂಡು,
ಎಣ್ಣೆಪಸೆಯಲ್ಲಿ ಘಂ ಎಂಬಂತೆ ಹುರಿಯಿರಿ.
ಚೆನ್ನಾಗಿ ಆರಿದ ನಂತರ ಮಿಕ್ಸಿಯಲ್ಲಿ ಗುದ್ದಿರಿ.

ನಂತರ ಎಷ್ಟು ಚಮಚ ಹುಡಿ ದೊರೆಯಿತು? ಅಳೆಯಿರಿ.
8 ಚಮಚ ಸಾಂಬಾರ್ ಹುಡಿ ಸಿಕ್ತು ಕಣ್ರೀ..

ಸರಿ, ಮುಂದಿನ ಅಡುಗೆಗೆ ನಾಲ್ಕು ಚಮಚ ಹುಡಿ ತೆಗೆದಿರಿಸುವುದು. ಅಂಗಡಿಯಿಂದ ಸಾಂಬಾರಿನ ಹುಡಿ ಇನ್ನು ಮುಂದೆ ತರಬೇಕಾಗಿಯೇ ಇಲ್ಲ ಅನ್ಮಿ.

ನಾನು ನುಣುಪಾದ ಹುಡಿ ಮಾಡಿಲ್ಲ, ಏನೇ ಸಾಂಬಾರು ಮಾಡುವುದಿದ್ದರೂ ತೆಂಗಿನತುರಿ ಅರೆದೇ ಸಿದ್ಧ ಅನ್ನುವ ಮಂದಿ ನಮ್ಮ ಕರಾವಳಿ ರಾಜ್ಯದಲ್ಲಿ ಇರುವಾಗ ನಾನೂ ಅದಕ್ಕೆ ಹೊರತಲ್ಲ. ಹೇಗೂ ಇನ್ನೊಮ್ಮೆ ತೆಂಗಿನೊಂದಿಗೆ ಅರೆಯುವುದಿದೆ. ನಮ್ಮ ಅಡುಗೆ ಗಣಪಣ್ಣನೂ ವಿಶೇಷ ಅಡುಗೆಗೆ ಬಂದಾಗ ಹೀಗೇ ಮಸಾಲೆ ಮಾಡಿ ಇಟ್ಟಿರ್ತಾನೆ.
ತೆಂಗಿನ ತುರಿ ಬಳಸದೇ ಸಾಂಬಾರ್ ತಯಾರಕರು ನುಣ್ಣಗೆ ಪುಡಿ ಮಾಡಿಕೊಳ್ಳತಕ್ಕದ್ದು.

ನಾಳೆ ಮಜ್ಜಿಗೆ ಹುಳಿ ಮಾಡು.. ನಿನ್ನ ಹುಡಿ ಉಳಿತಾಯ... " ಗೌರತ್ತೆಯ ಸಲಹೆ ಸಿಕ್ಕಿತು. " ನಾಡಿದ್ದು ಹುಳಿಮೆಣಸು, ಅದಕ್ಕೂ ಸಾಂಬಾರ್ ಹುಡಿ ಬೇಡ... "
" ಅದರ ನಾಡಿದ್ದು ಸೋರೆಕಾಯಿ ಬೋಳುಹುಳಿ ಮಾಡಿದ್ರಾಯ್ತು ಅನ್ನಿ... "

" ಸಾರಿನ ಹುಡಿ ಮಾಡಿ ಇಟ್ಕೋ..  ದಿನಾ ಒಂದು ಸಾರು ಆಗಲೇ ಬೇಕಲ್ಲ... "

ಸರಿ, ಬಿಡುವಾದಾಗ ಸಾರಿನ ಹುಡಿ ತಯಾರಿ ಆಯ್ತು. ಇದನ್ನು ಒಂದು ವಾರಕ್ಕೆ ಆಗುವಷ್ಟು ಮಾಡಿ ಇಟ್ಕೊಳ್ಳಿ.

2 ಒಣಮೆಣಸು ಹಾಕುವಲ್ಲಿ 12 ಮೆಣಸು
1 ಚಮಚ ಕೊತ್ತಂಬರಿ ಬೇಕಾಗಿದ್ರೆ 6 ಚಮಚ
ಜೀರಿಗೆ ಮೆಂತೆ ಇಂಗು ಇದೇ ಅನುಪಾತದಲ್ಲಿ ಹಾಕಿ
ಸಾರಿನ ಹುಡಿ ಅಲ್ವೇ, ಸಾಸಿವೆ ಕೂಡಾ ಹಾಕ್ಬೇಕು, ಒಟ್ಟಿನಲ್ಲಿ ತುಸು ತುಸು ಹಾಕುವಂತಹ ಸಾಮಗ್ರಿಗಳು, ಒಂದು ಚಮಚ ಸಾಕು.
ಒಂದೆಸಳು ಕರಿಬೇವು ಇರಲಿ
ಎಣ್ಣೆಪಸೆಯಲ್ಲಿ ಹುರಿಯಿರಿ.
ಹುರಿದಾಯ್ತು ಅನ್ನುವ ಹಂತದಲ್ಲಿ ಕರಿಬೇವು ಬೀಳಲಿ.
ಕಾಳುಮೆಣಸು ಇದ್ದರೆ ಒಂದು ಚಮಚದಷ್ಟು ಸೇರಿಸಿ.
ಈಗಿನ ಕೊರೋನಾ ಹವಾಮಾನಕ್ಕೆ ಸೂಕ್ತ.
ಕೊನೆಗೆ ಅರ್ಧ ಚಮಚ ಅರಸಿಣ ಹುಡಿ ಬೆರೆಸಿ ಕೆಳಗಿಳಿಸಿ.
ಆರಿದ ನಂತರ ನುಣ್ಣಗೆ ಹುಡಿ ಮಾಡಿ , 6 ದಿನಕ್ಕೆ ಎಷ್ಟು ಚಮಚ ಹುಡಿ ಬೇಕಾದೀತೆಂದು ಅಳೆದು ಡಬ್ಬದಲ್ಲಿ ಚಮಚ ಲೆಕ್ಕಾಚಾರದೊಂದಿಗೆ ಶೇಖರಿಸಿ.

ತೊಗರಿಬೇಳೆ ಸಾರು ಯಾ ಇನ್ಯಾವುದೇ ತಿಳಿಸಾರು, ನೀರುಳ್ಳಿ ಸಾರು, ಬೆಳ್ಳುಳ್ಳಿ ಸಾರು, ಟೊಮ್ಯಾಟೋ ಸಾರು... ಘಮಘಮಿಸುವಂತಹ ಸಾರಿನ ಹುಡಿ ನಮ್ಮದಾಗಿದೆ.