Pages

Ads 468x60px

Tuesday 22 November 2016

ಆ್ಯಕ್ಸಿಡೆಂಟು ತಂದ ನೋಟು!




ಸುಮ್ನೇ ಫೇಸ್ ಬುಕ್ ನೋಡ್ತಿದ್ದಾಗ ಗಿರೀಶನ ಮೆಸೆಂಜರ್ ಕಾಲ್ ಬಂದಿತು.   " ಮನೆಯಲ್ಲಿ ಇವ್ರಿಲ್ಲ,  ಹೊರಗೆ ಹೋಗಿದ್ದಾರಲ್ಲ. "


" ಚಿಂತಿಲ್ಲ,  ನಾವೀಗ ಉಪ್ಪಳ ಪೇಟೆಯಲ್ಲಿದ್ದೇವೆ,  ಸೀದಾ ಊರಿಗೆ ಹೋಗೂದು...  ನಾಡಿದ್ದು ಮನೆಯಲ್ಲಿ ಒಂದು ಪೂಜೆ, ಹೋಮ ಇಟ್ಕೊಂಡಿದ್ದೇವೆ,  ಎಲ್ರೂ ಬನ್ನಿ. "


" ಹೌದಾ,  ನಾಡಿದ್ದು ತಾರೀಕು ಎಷ್ಟೂ?  17ಕ್ಕೆ ಎರಡು ಕಡೆ ಜೆಂಬ್ರಕ್ಕೆ ಹೋಗ್ಲಿಕ್ಕಿದೆ. "

" ಇದು 18 ಆಗ್ತದೆ,  ಗುರುವಾರ.   ಬನ್ನಿ ಮರೆಯದೆ.."

" ಹ್ಞೂ,  ಈಗಲೇ ಬರೆದು ಇಡ್ತೇನೆ.. " ಅನ್ನುವಲ್ಲಿಗೆ ನಮ್ಮ ಫೇಸ್ ಬುಕ್ ಟಾಕಿಂಗ್ ಮುಗಿಯಿತು.


17ನೇ ತಾರೀಕು ಅಂದ್ರೆ ನಾಳೆ,  ಗಿರೀಶ್ ಹೇಳಿದ್ದು ಒಳ್ಳೆಯದಾಯ್ತು.   ತಾರೀಕು,  ವಾರ ನೆನಪಿಟ್ಟು ಹೋಗಬೇಕಾದ ಕಡೆ ಹೋಗುವುದೇ ಸಮಸ್ಯೆ ಆಗ್ಬಿಟ್ಟಿದೆ.


ನಮ್ಮವರು ಮನೆಗೆ ಬಂದ ಕೂಡಲೇ,   " ನಿಮ್ಮ ಗಿರೀಶಂದು.... " ಎಂದು ಪುನಃ ವರದಿ ಒಪ್ಪಿಸಲಾಯ್ತು.   " ಹಂಗಿದ್ರೆ ನಾಳೆ ಎರಡು ಮನೆ ಸುಧರಿಕೆ ಆಗಿ,  ನಾಡಿದ್ದು ಪುನಃ  ಹೋಗುವ ತಯ್ಯಾರಿ ಆಗ್ಬೇಕೂ... "


ಮಾರನೇ ದಿನ ನಾನು ಪಕ್ಕದ ಮನೆಯಲ್ಲಿರುವ ನಮ್ಮಕ್ಕ ಹಾಗೂ ಭಾವ ಜೊತೆ ತಿಥಿಯೂಟಕ್ಕೆ ಹೋದ್ರೆ ನಮ್ಮೆಜಮಾನ್ರು ಬೈಕ್ ಹತ್ತಿ  ಇನ್ನೊಂದ್ಕಡೆ ಗಣಹೋಮದ ಪೂಜೆಗೆ ಹೋದರು.


ಹೊರಡುವ ಮೊದಲು ಚೆನ್ನಪ್ಪನ ಆತಿಥ್ಯವೂ ಆಗಬೇಕಿತ್ತಲ್ಲ,  ಅವನ ಚಹಾ - ದೋಸೆ,  ಅನ್ನ ಸಾಂಬಾರು,  ಮಜ್ಜಿಗೆ ಉಪ್ಪಿನಕಾಯಿ ಎಲ್ಲವನ್ನೂ ರೂಢಿಗೆ ಮಾಡಿಟ್ಟು,   " ಅಕ್ಕ,  ಎಲ್ಲ ಕಡೆ ಬೀಗ ಸರಿಯಾಗಿ ಹಾಕ್ಕೊಳ್ಳೀ... "  ಹಿತವಚನಕ್ಕೂ ತಲೆದೂಗಿದ್ದಾಯ್ತು.


ನಾಳೆ ಗಿರೀಶ್ ಮನೆಗೆ ಹೋಗುವುದಿದೆ,   ಸುಮಾರು ಇಪ್ಪತ್ತು ವರ್ಷಗಳ ಸ್ನೇಹಿತ ಗಿರೀಶ್,   ಅವನ ಮನೆಗೆ ನಾನು ಈ ತನಕ ಹೋಗಿಯೇ ಇಲ್ಲ,   " ಈ ಬಾರಿ ಹೋಗೋಣ. " ನಮ್ಮವರ ಅಪ್ಪಣೆಯೂ ಆಯ್ತು.


ಸರಿಯಾಗಿ ಹನ್ನೊಂದು ಗಂಟೆಗೆ ಹೊರಟು,  ಚೆನ್ನಪ್ಪನನ್ನು ಮನೆ ನೋಡಿಕೊಳ್ಳಲು ಬಿಟ್ಟು ನಾವು ಹೊರಟೆವು.


" ಎರಡು ಬಾಳೆಗೊನೆ ಇತ್ತೂ,  ಕಾರಿನಲ್ಲಿ ಹಾಕ್ಕೊಂಡ್ರೆ ತರಕಾರಿ ಅಂಗಡಿಗೆ ಕೊಡಬಹುದಿತ್ತು... "


" ಅದೆಲ್ಲ ಈಗ ಬೇಡ,  ಅಂಗಡಿ ವ್ಯವಹಾರ ಚೆನ್ನಪ್ಪನೇ ಮಾಡಲಿ,  ಕಾರಿಗೆ ಬಾಳೆಕಾೖ ಕಲೆ ಆಗುತ್ತೆ..."


ಬರಬೇಕಾದ ದಾರಿಯ ನಕ್ಷೆಯನ್ನು  ಗಿರೀಶ್ ಮೊದಲೇ ಹೇಳಿದ್ದ,   " ಪೆರ್ಲ ರೋಡಿನಲ್ಲಿ ಬನ್ನಿ,  ರಸ್ತೆ ಚೆನ್ನಾಗಿದೆ. "  ಅಲ್ಲಲ್ಲಿ ಸಿಗುವ ಒಳದಾರಿಗಳನ್ನೂ ಸ್ಟಡೀ ಮಾಡಿಟ್ಕೊಂಡಿದ್ದೆವು.   ಯಥಾಪ್ರಕಾರ ಪೊಸಡಿಗುಂಪೆಯ ರಸ್ತೆ,   ಹಿಂದುರುಗಿ ಬರುವಾಗ ಸಂಜೆಯಾದೀತು,   ಸೂರ್ಯಾಸ್ತಮಾನದ ರಸಘಳಿಗೆ... ಕಣ್ತುಂಬ ನೋಡುತ್ತ ಬರಬಹುದು.


ಪೆರ್ಮುದೆ ಜಂಕ್ಷನ್ ಬಂದಿತು,  ಒಂದು ಪುಟ್ಟ ಪೇಟೆ...  ನಾಲ್ಕಾರು ಓಬೀರಾಯನ ಕಾಲದ ಅಂಗಡಿಗಳ ಒಂದು ಸರ್ಕಲ್.   ಎದುರುಗಡೆಯಿಂದ ಒಂದು ಸ್ಕೂಟರ್ ಬಂದು ಕಾರಿಗೆ ಡಿಕ್ಕಿ ಹೊಡೆಯಿತು.  ಢಬಾರ್ ಶಬ್ದದೊಂದಿಗೆ ಕಾರಿನ ಮಿರರ್ ಪ್ಲೇಟ್ ಕಳಚಿತು.   ಬಾಗಿಲು ತೆರೆದು ನಮ್ಮವರು ಹೊರಗಿಳಿದರು.


" ಅದ್ಯಾಕೆ ಹೀಗೆ ಗಾಡಿ ಓಡಿಸ್ತೀಯ,   ಜೀವದ ಮೇಲೆ ಆಸೆ ಇಲ್ವಾ... "  ತರಾಟೆ.  ಐದಾರು ಜನ ಸೇರಿದರು.


ಅವನು   " ನನ್ನನ್ನು ಬಿಟ್ಬಿಡಿ,   ತಪ್ಪಾಯ್ತು... "  ಕಿಸೆಯಿಂದ  ₹2,000 ದ ನೋಟು ತೆಗೆದು ಇವರ ಕೈಲಿಟ್ಟ!


ನಾವು ಕಂಡಿರದ ನೋಟು,  ಒಬ್ಬ ಕೂಲಿ ಕಾರ್ಮಿಕನ ಬಳಿ ಇದೆ...  ನಮ್ಮೆಜಮಾನ್ರು ಅವನಿಗೆ ಸ್ವಲ್ಪ ಬುದ್ದಿ ಹೇಳಿ ಗಾಡಿ ಹತ್ತಿದರು.  


ಸರಾ್ಕರ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿತಷ್ಟೆ,  ನಮ್ಮ ತಿಜೋರಿಯಲ್ಲಿ ಐನೂರು ಸಾವಿರದ ನೋಟುಗಳೇ ಇರಲಿಲ್ಲವಾಗಿ ಚಿಂತಾರಹಿತರಾಗಿದ್ದೆವು.   


ಚೆನ್ನಪ್ಪನೂ ಹಿಂದಿನಂತೆ ರುಪಾಯಿ ಐನೂರು ಕೇಳುವುದನ್ನೇ ಬಿಟ್ಟಿದ್ದಾನೆ,   " ಈಗ ನೂರಕ್ಕಿಂತ ಹೆಚ್ಚು ಕೊಡುವ ಹಾಗಿಲ್ಲ. "  ಅವನೂ ಆಯ್ತೆಂದಿದ್ದ.


ಆದರೂ ಖರ್ಚಿಗೆ ದುಡ್ಡು ಬೇಡ್ವೇ,   ಬ್ಯಾಂಕಿಗೆ ಹೋದಾಗ   ₹2,000 ರ ನೋಟನ್ನು ತಿರಸ್ಕರಿಸಿ,  ₹1,900 ಡ್ರಾ ಮಾಡ್ಕೊಂಡು ಬಂದಿದ್ದರು.


ಇಂತಹ ಪರಿಸ್ಥಿತಿ ಇರುವಾಗ ಅಚಾನಕ್ಕಾಗಿ ದಕ್ಕಿದ ರುಪಾಯಿ ನೋಟು,  ಈ ಬರಹಕ್ಕೆ ಪ್ರೇರಣೆ.


ಅಂತೂ ಒಂದು ತಾಸು ವ್ಯರ್ಥವಾದರೂ ಗಿರೀಶ್ ಮನೆಗೆ ಸಕಾಲಕ್ಕೆ ತಲಪಿದೆವು ಅನ್ನಿ.   ಲಾಯರ್ ಗಿರೀಶ,  "  ಕಾರು ಆ್ಯಕ್ಸಿಡೆಂಟಲ್ಲಿ ಡ್ಯಾಮೇಜ್ ಆಗಿದ್ದಕ್ಕೆ ಇನ್ಶೂರೆನ್ಸ್ ಇದೆಯಲ್ಲ. "  ಅಂದು ಮನ ಹಗುರಾಗಿಸಿದ.


ಒಂದುವೇಳೆ ಬೈಕ್ ಸವಾರನಿಗೆ ಏಟಾಗಿ ನಾವೇ ಅವನನ್ನು ಆಸ್ಪತ್ರೆಗೆ ಒಯ್ಯುವ ಸ್ಥಿತಿ ಬಂದಿದ್ರೆ...


" ನನ್ನ ಬಳಿ ಒಂದು ಮುಕ್ಕಾಲೂ ಇರಲಿಲ್ಲ,  ಏನೋ ಅದೃಷ್ಟ ಒಳ್ಳೆಯದಿತ್ತು,  ದುಡ್ಡು ಬಂತು. "


ಪೂಜೆಗೆ ಹೋಗ್ತಿರೋದ್ರಿಂದ ಬಿಳಿ ಪಂಚೆ,  ಸಿಲ್ಕು ಶರ್ಟ್ ಹಾಕ್ಕೊಂಡಿದ್ರು,  ದುಡ್ಡು ಇಟ್ಟುಕೊಳ್ಳಬಹುದಾದ ವ್ಯವಸ್ಥೆ ಈ ಉಡುಪಿನಲ್ಲಿ ಇಲ್ಲ.   ಅದೂ ಅಲ್ಲದೆ ಪ್ರಯಾಣಿಸುವ ದಾರಿಯೂ ಅಂತಹುದು,  ದುಡ್ಡು ಖರ್ಚಿನ ಸಬ್ಜೆಕ್ಟು ಇಲ್ಲಿಲ್ಲ,   ಹಸಿರು ಮರಗಳು,  ಮುಳಿಹುಲ್ಲಿನ ಬಯಲುಗಳು,  ಮೇಲೆ ನೀಲ ಆಗಸ,  ಡಾಮರು ರಸ್ತೆ.  ಗಾಡಿಯಲ್ಲಿ ಸಾಕಷ್ಟು ಇಂಧನವೂ ಇರುವಾಗ,  ರುಪಾಯಿರಹಿತ ಪಯಣ ನಮ್ಮದಾಗಿತ್ತು!


ಹಿಂದುರುಗಿ ಬರುವಾಗ ಪೊಸಡಿಗುಂಪೆ ಪುನಃ ಎದುರಾಯಿತು,   ಗಂಟೆ ಐದಾಗಿತ್ತಷ್ಟೇ,   ಹಲವು ಸೂರ್ಯಾಸ್ತದ ದೃಶ್ಯಗಳು ಬ್ಲಾಗ್ ಓದುಗರಿಗಾಗಿ... ಚಲಿಸುತ್ತಿರುವ ಕಾರಿನೊಳಗಿಂದ ಸೆರೆ ಹಿಡಿದ ಚಿತ್ರಗಳು,  ಇನ್ನೂ ಅರ್ಧ ಗಂಟೆ ಕಳೆದಿರುತ್ತಿದ್ದರೆ ಇನ್ನೂ ಸೊಗಸಿನ ಚಿತ್ರಗಳು ಲಭ್ಯವಾಗುತ್ತಿತ್ತು.



                                      
 

Monday 14 November 2016

ಪೊಸಡಿಗುಂಪೆಯ ಪ್ರವಾಸ



" ಅಹ!  ಏನು ಟೈಟಲ್ ಇಟ್ಕಂಡಿದೀಯ,  ಪೊಸಡಿಗುಂಪೆಯ ಬುಡದಲ್ಲೇ ಇದ್ರೂ.. "  ಎಂದ ಮಧು.


" ಇರಲಿ ಬಿಡು,  ಎಲ್ಲರಿಗೂ ಎಲ್ಲಿ ಗೊತ್ತಾಗುತ್ತೇ,  ನಮ್ಮ ಮುಳಿಗದ್ದೆಯಿಂದ ಪೊಸಡಿಗುಂಪೆಯ ದೂರಾ... "


ಅದು ಒಂದು ರಜಾದಿನ,  ಮನೆಯಲ್ಲಿ ಎಲ್ಲರೂ ಇದ್ದೆವು,  ನಾವಿಬ್ಬರೇ ಅಲ್ಲ,  ಮಕ್ಕಳ ಸೇನೆಯೂ ಬೆಂಗಳೂರಿನಿಂದ ಬಂದಿತ್ತು.


ಸಂಜೆಯಾಗುತ್ತಲೂ,  " ಅಮ್ಮ,  ಪೊಸಡಿಗುಂಪೆಗೆ ಹೋಗ್ತಾ ಇದೀವಿ,   ನಿಂಗೇನು ಕೆಲ್ಸ ಮನೆಯಲ್ಲಿ?  ಬಾ... "


" ಸರಿ,  ಬಂದೇ..  ಈ ಸೀರೆ ಬದಲಾಯಿಸಿ... " ಅನ್ನುವಷ್ಟರಲ್ಲಿ,


" ಬ್ಯಾಡಾ ಅತ್ತೆ,  ಈಗಿರೋದೇ ಚೆನ್ನಾಗಿದೆ. "  ಅಂದಳು ಮೈತ್ರಿ.


" ಅಷ್ಟೇ ಈಗ,  ಕಾರಿನಲ್ಲಿ ಕೂತಿದ್ದು ತಿರುಗಾ ಕಾರಿನಲ್ಲೇ ಮನೆಗೆ ಬರೂದು... "  ಅಂದು ಚಪ್ಪಲಿ ಮೆಟ್ಟಿ ಹೊರಟಿದ್ದಾಯ್ತು.


ಬಾಯಾರುಪದವಿನಲ್ಲಿ ಕಾರು ನಿಂತಿತು.   " ಸ್ವಲ್ಪ ಕೆಲ್ಸ ಇದೆ ಬ್ಯಾಂಕಿನಲ್ಲಿ...  ಸಾವಿರ ಐನೂರರ ನೋಟು ಬದಲಾಯಿಸಿ.... " ಅನ್ನುತ್ತ ಅಪ್ಪ ಮಗ ಇಳಿದು ಹೋದರು.


ಸುಮ್ಮನೇ ಹೊರಗೆ ನೋಡುತ್ತಿದ್ದಾಗ,   ನಮ್ಮ ಎದುರುಗಡೆ ಮೂರು ಜನಾ ನಿಂತ್ಕೊಂಡು ಕೈಲಿದ್ದ ವಸ್ತುವನ್ನು ಬಂಗಾರದ ಒಡವೆಯೋಪಾದಿಯಲ್ಲಿ ನಿರುಕಿಸುತ್ತ ಸಂಭ್ರಮಿಸುತ್ತಿದ್ದುದು ಕಂಡು ಬಂತು.


" ಅತ್ತೇ,  ಅವರ ಕೈಲಿ  ₹2000 ನೋಟು! "


" ಹ್ಞಾ, "   ನಾನೂ ಕಣ್ ಕಣ್ ಬಿಟ್ಟು ಅಂದೆ,  " ತೂಕೋ,  ಒರ ತೂದು ಕೊರ್ಪೆ... "   ( ನೋಡುವಾ,  ಒಮ್ಮೆ ನೋಡಿ ಕೊಡುತ್ತೇನೆ )


ನನ್ನ ಕೈಗೆ ಹೊಸ ನೋಟು ಬಂತು.   ಅತ್ತ ಇತ್ತ ತಿರುಗಿಸಿ,  ಬಣ್ಣ, ಗಾತ್ರಗಳ ಅಧ್ಯಯನ ಮಾಡ್ಬಿಟ್ಟು ಪುನಃ ವಾರಸುದಾರರಿಗೆ ಹಿಂದಿರುಗಿಸಿದೆವು.


ಮಗನ ರುಪಾಯಿ ನೋಟು ವಿನಿಮಯ ಆಯ್ತೋ ಗೊತ್ತಿಲ್ಲ,  ನಾವಂತೂ ನೋಟು ಕಂಡಿದ್ದಾಯ್ತು.




                              


ಕೇರಳ ಪ್ರವಾಸೋದ್ಯಮ ಇಲಾಖೆ ಪೊಸಡಿಗುಂಪೆಯನ್ನು ಪ್ರವಾಸೀತಾಣವೆಂದು ಘೋಷಿಸಿ ವರ್ಷಗಳೇ ಕಳೆದಿವೆ.      ಪ್ರಶಾಂತ ವಾತಾವರಣವೂ, ಸ್ವಚ್ಛ ಗಾಳಿಯೂ ಕೂಡಿದ  " ಸ್ವಚ್ಛ ಭಾರತ " ವನ್ನು ಕಾಣಬೇಕಾದರೆ ಪೊಸಡಿಗುಂಪೆಗೆ ಬನ್ನಿ.  ಒಂದು ನಿರ್ದಿಷ್ಟ ಜಾಗದಲ್ಲಿ ಕಾರು ನಿಲ್ಲಿಸಿ ಇಳಿದೆವು.


ನನಗೇನೂ ತಿರುಗಾಟ ಬೇಕಿಲ್ಲ,  ಅಪ್ಪನ ಮನೆಗೆ ಹೋಗಬೇಕಾದರೂ ಇದೇ ದಾರಿ.   ನನ್ನಪ್ಪನೂ ಕಿಲೋಮೀಟರ್ ಲೆಕ್ಕದಲ್ಲಿ ಡೀಸಲ್ ತುಂಬ ಉಳಿತಾಯ ಆಗುತ್ತೇಂತ ಈ ರಸ್ತೆಯಲ್ಲೇ ಹಿರಣ್ಯಕ್ಕೆ ಬರುತ್ತಿದ್ದರು,  ಅಪ್ಪ ಹಿಂದಿರುಗುವಾಗ ನನ್ನದೂ ಒಂದು ತವರುಮನೆಯ ಪಯಣ ಇದ್ದೇ ಇರುತ್ತಿತ್ತು.


ನಿರ್ಜನ ದಾರಿ,   ಸೂರ್ಯಾಸ್ತದ ವೇಳೆ,  ಮಂಜು ಮುಸುಕಿದ ಆಗಸ,  ಪಶ್ಚಿಮದ ಅರಬೀಸಮುದ್ರದಾಳಕ್ಕೆ ಇಳಿಯುತ್ತಿರುವ ಸೂರ್ಯ,  ಕೆಂಪು ಬೆಳಕಿನ ಚೆಂಡಿನಂತೆ,  ಕಿತ್ತಳೆ ಹಣ್ಣಿನಂತೆ... ಛೆಛೇ,  ವರ್ಣಿಸಲು ನಮ್ಮಿಂದಾಗದು.   ಚಂದದ ಸೂರ್ಯನನ್ನು ನೋಡಲು ಆಗುಂಬೆಗೆ ಹೋಗಬೇಕೆಂದೇನೂ ಇಲ್ಲ,  ಪೊಸಡಿಗುಂಪೆಗೆ ಬಂದರಾಯಿತು.   ಒಂದು ಬದಿಯಲ್ಲಿ ಸಮುದ್ರದ ಭೋರ್ಗರೆತ,  ಮತ್ತೊಂದೆಡೆ ಬೆಟ್ಟಗಳ ಸಾಲು.  ನೆಲ ತುಂಬ ಮುಳಿಹುಲ್ಲು.  ಕುಳಿತಿರಲು ಕಪ್ಪನೆಯ ಬಂಡೆಕಲ್ಲುಗಳು.   ಕಲ್ಲ ಮೇಲೆ ಅರಳಿರುವ  ಹೂ!    ಪೊಸಡಿಗುಂಪೆಗೆ ಬಂದ ಲೆಕ್ಕದಲ್ಲಿ ನನ್ನ ಕೈಗೆ ಒಂದು ಹೂ ಗೊಂಚಲು ಬಂದಿತು,  ಕಪ್ಪಗಿನ ಪಾರೆ ಕಲ್ಲುಗಳ ಮೇಲೆ ಅರಳುವ ಇದು ಪಾರೆ ಹೂ ಎಂದೇ ಖ್ಯಾತಿ ಪಡೆದಿದೆ.


ದೀಪಾವಳಿಯ ಸಮಯದಲ್ಲೇ ಈ ಹೂ ಪಾರೆಕಲ್ಲುಗಳ ಮೇಲೆ ಅರಳಿರುತ್ತದೆ,  ಬಣ್ಣವಿಲ್ಲ,  ಸುವಾಸನೆಯೂ ಇಲ್ಲ,  ನೀರೆರೆದು ಸಲಹಿದವರೂ ಇಲ್ಲ.   ದೀಪಾವಳಿಯ ಹಬ್ಬಕ್ಕೆ ಈ ಹೂವು ಪ್ರಕೃತಿಯ ವಿಶೇಷ ಕೊಡುಗೆ.


 



ಟಿಪ್ಪಣಿ 17/9/2020 ರಂದು ಸೇರಿಸಿದ್ದು.


ಇದರ ಸಸ್ಯಶಾಸ್ತ್ರೀಯ ಹೆಸರು Polycarpaea corymbosa ಎಂದಾಗಿದ್ದು ಕಪ್ಪು ಕಲ್ಲು ಬಂಡೆಗಳ ಮೇಲೆ ಅಂಟಿಕೊಂಡಂತೆಇರುವಂತದು ಫೇಸ್ಬುಕ್ ಮಿತ್ರರೂ ಕುಟುಂಬ ಬಂಧುವರ್ಗದವರೂ ಆದ ಡಾಶ್ರೀನಿವಾಸ ಶೇಂತಾರ್ ವೈಜ್ಞಾನಿಕ ಹೆಸರನ್ನುತೋರಿಸಿಕೊಟ್ಟರು.

ಎಲ್ಲ ಭಾರತೀಯ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಶೋಭಿಸುತ್ತಿರುವ  ಸಸ್ಯ ಕನ್ನಡದಲ್ಲಿ ಪಾದೆ ಮುಳ್ಳಿನ ಗಿಡ ದೀಪಾವಳಿಯ ಜನಪದ ಆಚರಣೆಯಲ್ಲಿ ಬಳಸುವ ವಾಡಿಕೆ ಇದೆ ಅಪ್ಟಟ ಭಾರತದ ಸಸ್ಯ ಇದಾಗಿದ್ದು ಆಂಗ್ಲಬಾಷಾಶಾಸ್ತ್ರ oldman’s cap ಅಂದಿದೆ.


  







Thursday 10 November 2016

Friday 4 November 2016

ಬಿಂಕದ ಸಿಂಗಾರೀ...