Pages

Ads 468x60px

Friday 22 February 2019

ಮೊಸರನ್ನ



ತೋಟದ ತೆಂಗಿನಕಾಯಿಗಳನ್ನು ತೆಗೆಸಿಯಾಗಿದೆ, " ಅಕ್ಕ, ನೀರಾಡುವ ಕಾಯೀಲಿ ಬನ್ನಂಗಾಯಿಯೂ ಉಂಟಲ್ಲ..." ಅಂದ ಚೆನ್ನಪ್ಪ.

" ಹೌದ, ಒಣಗಿದ ಕಾಯಿ ಅಟ್ಟಕ್ಕೆ ಹಾಕು, ಬನ್ನಂಗಾಯಿ ಪ್ರತ್ಯೇಕ ತೆಗೆದಿಡು.. ದೋಸೆಗೂ, ಅವಲಕ್ಕಿ ಬೆರೆಸಿ ತಿನ್ನಲಿಕ್ಕೂ, ಮೇಲಾರಕ್ಕೂ (ಮಜ್ಜಿಗೆಹುಳಿ ) ಆದೀತು. "

" ಪಾಯಸಕ್ಕೂ ಆದೀತು. " ಎಂದರು ಗೌರತ್ತೆ.
" ಹೌದು, ದಿನಾ ಪಾಯಸ ಮಾಡೋರು ಯಾರೂ..." ನನ್ನ ರನ್ನಿಂಗ್ ಕಮೆಂಟ್ರಿ ಮುಂದುವರಿಯುತ್ತಿದ್ದಂತೆ ಎರಡು ಬನ್ನಂಗಾಯಿಗಳನ್ನು ಸುಲಿದು ಇಟ್ಟ ಚೆನ್ನಪ್ಪ.

" ಹ್ಞೂ.. ನಾಳೆ ಬನ್ನಂಗಾಯಿ ದೋಸೆ..." ಅನ್ನುತ್ತ ಎರಡು ಲೋಟ ಬೆಳ್ತಿಗೆ ಅಕ್ಕಿ ತೊಳೆದು ನೀರೆರೆದು ಇಟ್ಟಾಯ್ತು.

ಸಂಜೆಯಾಗುತ್ತಲೂ ಬನ್ನಂಗಾಯಿ ಒಡೆದು, ತುರಿದು, ತೊಳೆದಿರಿಸಿದ ಅಕ್ಕಿಯನ್ನು ಮಿಕ್ಸಿಯ ಜಾರೊಳಗೆ ತುಂಬಿಸಿ, ಬನ್ನಂಗಾಯಿ ತುರಿಯನ್ನೂ, ನೀರನ್ನೂ ಎರೆದು "ಟೊರ್ ಟೊರ್... ಅನ್ನಿಸೋಣ ಎಂದಾಗ ಜಾರು ತಿರುಗಲೊಲ್ಲದು, ಒಳಗೆರೆದ ನೀರು ಹೊರ ಹರಿಯಿತು...

" ಥತ್, ಇದೊಂದು ಗೋಳು... " ಜಾರು ಕೆಟ್ಟಿದೆಯೆಂದು ದೂರು ಮನೆಯ ಚಾವಡಿಕಟ್ಟೆಗೆ ಬಂದಿತು.

" ಹಾಳಾದ್ರೆ ತೆಗೆದಿಡು.. ನಾಳೆ ರಿಪೇರಿ ಮಾಡ್ಸೋಣ... " ತಣ್ಣಗಿನ ಉತ್ತರ ಬಂದಿತು.

ಅಕ್ಕಿಯ ಮೇಲಿದ್ದ ಕಾಯಿತುರಿಯನ್ನು ತೆಗೆದಿರಿಸಿ,
ಅಕ್ಕಿಯನ್ನೂ ಬಸಿದು ತೂತಿನ ತಟ್ಟೆಯಲ್ಲಿ ಬಿಡಿಸಿ ಹಾಕಿದ್ದಾಯ್ತು.

" ನಾಳೆಗೇನು ತಿಂಡಿ ಮಾಡ್ತೀಯ? " ಕೇಳಿದ್ದು ಜಪಸರ ಹಿಡಿದು ರಾಮಜಪ ಮಾಡ್ತಿದ್ದ ಗೌರತ್ತೆ.
" ಈ ಅಕ್ಕಿಯಿಂದಾನೇ ಏನೋ ಒಂದು ಮಾಡಿದ್ರಾಯ್ತು ಬಿಡಿ. "
" ಉಪ್ಪಿಟ್ಟು, ಚಿತ್ರಾನ್ನ... " ಹೀಗೆಲ್ಲ ಚಿಂತನೆಗಳೊಂದಿಗೆ ರಾತ್ರಿ ಕಳೆದು ಬೆಳಗಾಯ್ತು.

ದೋಸೆ ಅಕ್ಕಿಯು ಸುಮಾರಾಗಿ ಒಣಗಿದೆ. ಎರಡು ಲೋಟ ಇತ್ತಲ್ಲ, ಐದು ಲೋಟ ನೀರೆರೆದು ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ಎರಡು ಸೀಟಿ ಕೂಗಿಸಿ,
ಎರಡು ಘನಗಾತ್ರದ ನೀರುಳ್ಳಿ ಚಿಕ್ಕದಾಗಿ ಹೆಚ್ಚಿ,
ನಾಲ್ಕು ಹಸಿಮೆಣಸು ಸಿಗಿದು,
ಕರಿಬೇವು ತೋಟದಿಂದ ತಂದು,
ಫ್ರಿಜ್ಜಿನಲ್ಲಿದ್ದ ಬನ್ನಂಗಾಯಿ ತುರಿ ಹೊರ ಬಂದು,
ಅಡುಗೆಯ ಸಿದ್ಧತೆಗಾಗಿ ಇಷ್ಟೆಲ್ಲ ಮಾಡುತ್ತಿರಬೇಕಾದರೆ ಅನ್ನ ಬೆಂದಿದೆ.

ಬಾಣಲೆಗೆ ಒಗ್ಗರಣೆ ಸಾಹಿತ್ಯಗಳನ್ನು ಉದುರಿಸಿ, ತೆಂಗಿನೆಣ್ಣೆ, ಸಾಸಿವೆ, ಕಡ್ಲೇಬೇಳೆ, ಒಣಮೆಣಸಿನ ಚೂರುಗಳು...
ಚಟಪಟನೆ ಸಾಸಿವೆ ಸಿಡಿದಾಗ ಕರಿಬೇವು, ನೀರುಳ್ಳಿ, ಹಸಿಮೆಣಸು ಬೀಳಿಸಿ,
ತಟಪಟನೆ ಸೌಟಾಡಿಸಿ, ಬನ್ನಂಗಾಯಿ ತುರಿ ಹಾಕಿ, ಒಂದು ಸೌಟು ಸಕ್ಕರೆ, ಈಗಾಗಲೇ ಅನ್ನಕ್ಕೆ ಉಪ್ಪು ಬಿದ್ದಿದೆ, ನೋಡಿಕೊಂಡು ಬೇಕಿದ್ದರೆ ಮಾತ್ರ ಉಪ್ಪು ಹಾಕುವುದು.
ಸಾಕಷ್ಟು ಅನ್ನ ಸುರಿದು, ಚೆನ್ನಾಗಿ ಬೆರೆಸುವಲ್ಲಿಗೆ ಒಗ್ಗರಣೆ ಅನ್ನ ಸಿದ್ಧವಾಗಿದೆ.

ಬಾಳೆಹಣ್ಣು ಕೂಡಿಕೊಂಡು ಮುಂಜಾನೆಯ ರಸಗವಳ ತಿನ್ನೋಣ.

ಹತ್ತು ಗಂಟೆಯ ಚಹಾ ಸಮಯ, ಒಗ್ಗರಣೆ ಅನ್ನ ತಣಿದಿದೆ. ನಾಲ್ಕು ಸೌಟು ದಪ್ಪ ಮೊಸರು ಹಾಕಿ ಕಲಸಿದಾಗ ಮೊಸರನ್ನವೆಂಬ ತಿನಿಸು ಎದ್ದು ಬಂದಿತು. ಬೇಸಿಗೆಯ ಬೇಗೆಗೆ ಮೊಸರನ್ನವೇ ಹಿತವೆಂದರು ಗೌರತ್ತೆ.






Sunday 17 February 2019

ಪಂಚಾಮೃತ




ಹಿರಣ್ಯದ ಆವರಣದಲ್ಲಿರುವ ಮಹಿಷಂದಾಯ ದೈವಗುಡಿಯಲ್ಲಿ ಸಂಜೆಯ ಹೊತ್ತು ತಂಬಿಲಸೇವೆ, ದೇವಿ ಬಾಲಾಲಯದಲ್ಲಿ ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನಪೂಜೆ, ಭಜನೆ ಕಾರ್ಯಕ್ರಮಗಳ ನಿಮಿತ್ತ ಸಂಬಂಧಿತರಿಗೆ ವಾಟ್ಸಪ್ ಮುಖೇನ ನೆನಪಿನೋಲೆ ಕಳುಹಿಸಿಯೂ ಆಯಿತು.

ಪೂಜೆಯ ಉಸ್ತುವಾರಿ ಹೊತ್ತಿರುವ ಪರಕ್ಕಜೆ ಪುರೋಹಿತರು ಸಂಜೆ ನಾಲ್ಕಕ್ಕೇ ಆಗಮಿಸಿ, ವಿಶ್ರಾಂತಿಗಾಗಿ ಜಮಖಾನ ಹಾಸಿ ತಲೆದಿಂಬಿನೊಂದಿಗೆ ಅಡ್ಡಾದರು.

ನನಗೋ ಎಲ್ಲವನ್ನೂ ಹೊಂದಿಸಿ ಇಡುವ ಆತುರ. ಏನೇನು ಆಗ್ಬೇಕಾಗಿದೆ ಎಂಬ ತಪಾಸಣೆಯೂ,
ತೋಟದಿಂದ ಬಂದ ತೆಂಗಿನಕಾಯಿಗಳನ್ನು ಸುಲಿದು ಇರಿಸಿದೆಯೋ,
ಗುಣಮಟ್ಟದ ಬೆಳ್ತಿಗೆ ಅಕ್ಕಿ - ಪಿಂಡಿ ಪಾಯಸಕ್ಕಾಗಿ,
ಅವಲಕ್ಕಿ, ಹೊದಳು, ಬೆಲ್ಲ - ಪಂಚಕಜ್ಜಾಯಕ್ಕಾಗಿ,
ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ - ಪಂಚಾಮೃತಕ್ಕಾಗಿ...

ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸುತ್ತಿರಬೇಕಾದರೆ ಪರಿಕರ್ಮಗಳ ಉಸ್ತುವಾರಿಗಾಗಿ ಮುಳಿಯಾಲು ಭಟ್ಟರು ಬಂದರು.

ಮಿಂದು ಶುಚಿರ್ಭೂತರಾಗಿ ನೈವೇದ್ಯದ ಪಿಂಡಿ ಪಾಯಸ ಮಾಡಬೇಕಲ್ಲವೇ, ಬಚ್ಚಲುಮನೆಯಲ್ಲಿ ಹಂಡೆನೀರು ಕುದಿಯಿತು.

" ಹೌದೂ, ಪಂಚಾಮೃತದ ಸಾಹಿತ್ಯ ಅಲ್ಲಿಗೆ ತೆಗೆದುಕೊಂಡು ಹೋಗುವುದೋ, ಇಲ್ಲಿಂದಲೇ ಹೊಂದಿಸಿ ಒಯ್ಯುವುದೋ ಹೇಗೆ? "

" ನೀವು ನಾನು ಹೇಳಿದಷ್ಟು ಕೊಡಿ, ಹಾಲು ಎಲ್ಲಿದೆ? "

" ಹಾಲು ಈಗ ಡೈರಿಯಿಂದ ತಂದದ್ದು.. " ಸ್ಟೀಲು ಕ್ಯಾನು ಬಾಯ್ದೆರೆಯಿತು. ಅಂದಾಜು ಅರ್ಧ ಲೀಟರು ಹಾಲು ಸ್ಟೀಲು ತಂಬಿಗೆಯ ಪಾಲಾಯ್ತು.

" ಮೊಸರು ಎಲ್ಲಿ? "
" ಪ್ರಿಜ್ ಒಳಗಿಂದ ಎರಡು ಸೌಟು ಮೊಸರು ತಂಬಿಗೆ ಸೇರಿತು.

" ಒಂದೊಂದು ಚಮಚ ಜೇನು ಹಾಗೂ ತುಪ್ಪ... "

" ಸಿಹಿಸಿಹಿ ಆಗ್ಬೇಕಲ್ಲ... " ನಾಲ್ಕು ಸೌಟು ಸಕ್ಕರೆ ಹಾಲು ಮೊಸರೊಳಗೆ ಐಕ್ಯವಾಯಿತು.

" ಪಂಚಾಮೃತ ಆಯಿತು... " ಅನ್ನುತ್ತ ತುಂಬಿದ ತಂಬಿಗೆ ಹಾಗೂ ಇನ್ನಿತರ ಪರಿಕರಗಳೊಂದಿಗೆ ಭಟ್ಟರು ದೇವಿ ಸಾನಿಧ್ಯದ ಕಡೆ ನಡೆದರು.

ತಡರಾತ್ರಿ ಹೊತ್ತಿಗೆ ಪೂಜಾ ಕೈಂಕರ್ಯಗಳೆಲ್ಲ ಮುಗಿದು, ಹೂ ಹಣ್ಣು ಕಾಯಿ ಕುಂಕುಮಗಳನ್ನು ಭಕ್ತ ಜನ ಸಮುದಾಯಕ್ಕೆ ವಿತರಿಸಿ, ನೈವೇದ್ಯ ಪ್ರಸಾದಗಳನ್ನು ಹಂಚಿದ್ದೂ ಆದ ನಂತರ ಉಳಿದ ಪಂಚಾಮೃತ ನನ್ನ ಕೈ ಸೇರಿತು.
ಪಂಚಾಮೃತವನ್ನು ಪ್ರಸಾದ ರೂಪದಲ್ಲಿ ವಿತರಿಸುವಾಗ ಅಂಗೈ ಬೊಗಸೆಯಲ್ಲಿ ಹಿಡಿಸುವಷ್ಟೇ ಪುಟ್ಟ ಸಕ್ಕಣದಲ್ಲಿ ಎರೆಯುವ ಪದ್ಧತಿ, ತಂಬಿಗೆ ಪಂಚಾಮೃತ ಮುಗಿಯದೇ ಹೋಯಿತು.

" ಇದನ್ನು ಮನೆಗೊಯ್ದು ಏನು ಮಾಡಲೀ? "
"ಪ್ರಿಜ್ ಒಳಗಿಟ್ಟು ನಾಳೆ ಐಸ್ ಕ್ರೀಂ ಥರ ಚೆನ್ನಾಗಿರುತ್ತೆ... " ಪುಕ್ಕಟೆ ಸಲಹೆಯೂ ಸಿಕ್ಕಿತು!








Saturday 2 February 2019

ನೆಲ್ಲಿಕಾಯಿಯ ಸಿಹಿ









ನೆಲ್ಲಿಕಾಯಿ ಬಂದಿತ್ತು. " ನೆಲ್ಲಿಕಾಯಿಯ ಮುರಬ್ಬ ನಂಗೆ ಬೇಡ, ಒಣಗಿಸಿ ಹುಡಿ ಮಾಡಿಟ್ಟರೆ ನೆಲ್ಲಿಕಾಯಿ ಚೂರ್ಣ ಆಯ್ತು, ನಂಗೆ ಅದೇ ಸಾಕು... " ಮೊದಲೆಲ್ಲ ಗೌರತ್ತೆ ತೋಟದ ಗುಡ್ಡದ ಬದಿಯಲ್ಲಿರುವ ಮರದ ನೆಲ್ಲಿಕಾಯಿಗಳನ್ನು ಹೆಕ್ಕಿ ತರುತ್ತಿದ್ದರು. ಚೆನ್ನಾಗಿ ಬೆಳೆದ ನೆಲ್ಲಿಕಾಯಿಗಳು ತಾನಾಗಿಯೇ ಮರದಿಂದ ಉದುರಿ ಬೀಳಬೇಕು, ಬಿದ್ದಲ್ಲಿಯೇ ಒಣಗಿದ ಕಾಯಿಗಳನ್ನು ತಂದು ಡಬ್ಬದಲ್ಲಿ ತುಂಬಿಸಿ ಬೇಕೆನಿಸಿದಾಗ ಕಷಾಯ ಮಾಡಿ ಕುಡಿಯುವ ಪದ್ಧತಿ ಇಟ್ಕೊಂಡಿದ್ದರು ಗೌರತ್ತೆ. ಈಗ ಗುಡ್ಡದಲ್ಲಿ ರಬ್ಬರ್ ಕಾಡು ಬೆಳೆಸಿ ನೆಲ್ಲಿಕಾಯಿಯ ಮರ ನಾಪತ್ತೆಯಾಗಿದೆ.

" ಎಲ್ಲವನ್ನೂ ಒಣಗಿಸಿ ಇಡೂದು ಬೇಡ, ನಾನು ಮುರಬ್ಬ ತಿನ್ಬೇಕು.. " ಮುರಬ್ಬ ಮಾಡುವ ಹೊಸ ವಿಧಾನ ಯೂ ಟ್ಯೂಬ್ ನಲ್ಲಿ ನೋಡಿದ್ದ ನನಗೂ ಮುರಬ್ಬದ ಚಪಲ.

" ಹೌದ, ಈ ಬಾರಿ ಮುರಬ್ಬ ಹೇಗೆ ಮಾಡ್ತೀಯಾ? "
" ನೋಡ್ತಾ ಇರಿ.. "
ಈ ನೆಲ್ಲಿಕಾಯಿಗಳು ಮಾರುಕಟ್ಟೆಯಿಂದ ಬಂದದ್ದು, ಕೊಯ್ದು ದಿನವೆಷ್ಟಾಯ್ತೋ, ಕೊಳೆಕಸ ಹೋಗಲಿಕ್ಕೆ ಮುಳುಗುವಷ್ಟು ನೀರೆರೆದು ಅರ್ಧ ದಿನವಾದರೂ ಇಡಬೇಕು. ನಂತರ ನೀರು ಬಸಿದು ಚೆಲ್ಲುವುದು.

ಕುಕ್ಕರಿನಲ್ಲಿ ನೆಲ್ಲಿಕಾಯಿಗಳನ್ನು ತುಂಬಿ, ಮುಳುಗುವಷ್ಟು ನೀರು ಎರೆಯಬೇಕು. ನೀರನ್ನು ಅಳೆದೇ ಎರೆಯಿರಿ, ನಾಲ್ಕು ಲೋಟ ನೀರು ಬೇಕಾಯಿತು. ರುಚಿಗೆ ತುಸು ಉಪ್ಪು ಹಾಕಬೇಕು.

ಕುಕರ್ ಒಂದು ಸೀಟಿ ಹಾಕಿದೆ, ಕೊಡಲೇ ಇಳಿಸಿ, ಒತ್ತಡವನ್ನು ನಿಧಾನವಾಗಿ ತೆಗೆದು ಮುಚ್ಚಳ ತೆರೆಯಿರಿ.
ಬೇಯಿಸಲು ಉಪಯೋಗಿಸಿದ ನೀರನ್ನು ಬಸಿಯಿರಿ, ಚೆಲ್ಲುವಂತಿಲ್ಲ, ಆಮ್ಲಾ ವಾಟರ್ ಎಂದು ಕರೆಯಬಹುದಾದ ಈ ನೀರನ್ನು ರೆಫ್ರಿಜರೇಟರ್ ಒಳಗಿಡತಕ್ಕದ್ದು. ಸಾಂದ್ರತೆಯುಳ್ಳ ಈ ದ್ರಾವಣವನ್ನು ಸಾಕಷ್ಟು ನೀರೆರೆದು ತೆಳ್ಳಗಾಗಿಸಿ ಬೇಕೆನಿಸಿದಾಗ ಕುಡಿಯತಕ್ಕದ್ದು.

ಕುಕರ್ ಪಾತ್ರೆಯೊಳಗೆ ಇರುವ ಬಿಸಿಬಿಸಿ ನೆಲ್ಲಿಕಾಯಿಗಳಿಗೆ, ಈ ಮೊದಲು ಎರೆದ ನೀರಿನ ಅಳತೆಯಷ್ಟು, ಅಂದರೆ ನಾಲ್ಕು ಲೋಟ ಸಕ್ಕರೆ ಸುರಿಯಬೇಕು ಹಾಗೂ ಒಲೆಯ ಮೇಲೆ ಇರಿಸಬೇಕು.
ಅತಿ ಕನಿಷ್ಠ ಉರಿಯಲ್ಲಿ ಇರಿಸಿ, ಆಗಾಗ ಸೌಟು ಹಾಕಿ ಕೆದಕುತ್ತಿರಬಾರದು, ನೆಲ್ಲಿಕಾಯಿ ಮುದ್ದೆಯಾದೀತು.
ಇಂಡಕ್ಷನ್ ಸ್ಟವ್ ಉತ್ತಮ, ಅದರ ಲೆಕ್ಕಾಚಾರದ ಕನಿಷ್ಠ ಉಷ್ಣತೆಯಲ್ಲಿರಿಸಿ ಮಿಕ್ಕುಳಿದ ಅಡುಗೆ ಕೆಲಸಗಳನ್ನೆಲ್ಲ ಮಾಡಿಟ್ಟು, ಸ್ನಾನವನ್ನೂ ಮುಗಿಸಿ, ಊಟಕ್ಕೆ ಹೊರಟಾಗ ಸಕ್ಕರೆ ಕರಗಿತ್ತು.

ಸಕ್ಕರೆಯೆಲ್ಲ ಕರಗಿದ ಈ ಹಂತದಲ್ಲಿ ಕುಕ್ಕರ್ ಮುಚ್ಚಿ ಬೇಯಿಸಿ, ಇನ್ನೊಂದು ಸೀಟಿ ಕೂಗಿಸಿ, ಅದರ ಪಾಡಿಗೆ ತಣಿಯಲು ಬಿಡಬೇಕು.

ಸಂಜೆಯ ಚಹಾ ಸಮಯ, ಕುಕ್ಕರ್ ತಣಿದಿದೆ, ಸಕ್ಕರೆಯ ಪಾಕವೂ ಆಗಿದೆ, ಸುವಾಸನೆಗೆ ಏಲಕ್ಕಿಪುಡಿ ಉದುರಿಸಿ.

ನೆಲ್ಲಿಕಾಯಿ ಮುರಬ್ಬವೂ,
ಆಮ್ಲಾ ವಾಟರೂ,
ನೆಲ್ಲಿಕಾಯಿ ಚೂರ್ಣವೂ,
ಒಂದೇ ಏಟಿಗೆ ಆಗಿಬಿಟ್ಟಿತು.