Pages

Ads 468x60px

Featured Posts

.

Saturday, 28 February 2026

ನಂಬಿಕೆ ಮತ್ತು ವಿಜ್ಞಾನ




ತಂಬುಳಿ ಬಂದಿದೆ,

ಉರಗೆ (ಒಂದೆಲಗ) ಯನ್ನು ಬೇಯಿಸಿ ತಿನ್ನಬಾರದು, ರಾತ್ರಿ ಹೊತ್ತೂ ಈ ತಂಬುಳಿ ಸೇವಿಸುವಂತಿಲ್ಲ,  ಹಿಂದಿನವರ ಹೇಳಿಕೆ. 

ಇದರ ಒಳಾರ್ಥವೇನು?


ಹಿಂದಿನವರ ಮಾತುಗಳಲ್ಲಿ ಕೇವಲ ನಂಬಿಕೆಗಳಷ್ಟೇ ಅಲ್ಲ, ಅದರ ಹಿಂದೆ ಬಹಳಷ್ಟು ವೈಜ್ಞಾನಿಕ ಹಾಗೂ ಆಯುರ್ವೇದದ ಸತ್ಯಗಳಿರುತ್ತವೆ.


ಒಂದೆಲಗವನ್ನು ಬೇಯಿಸುವಂತಿಲ್ಲ. ಒಂದೆಲಗದಲ್ಲಿರುವ ಔಷಧೀಯ ಗುಣಗಳು (ಮುಖ್ಯವಾಗಿ ಸ್ಮರಣಶಕ್ತಿ ಹೆಚ್ಚಿಸುವ ಅಂಶಗಳು), ವಿಟಮಿನ್ ಸಿ ಮತ್ತು ಸೂಕ್ಷ್ಮವಾದ ಪೋಷಕಾಂಶಗಳು  ಅತಿ ಹೆಚ್ಚು ತಾಪಮಾನಕ್ಕೆ ಗುರಿಯಾದಾಗ ಆವಿಯಾಗಿ ಅಥವಾ ನಾಶವಾಗಿ ಹೋಗುತ್ತವೆ. 


ಹಸಿ ಸೇವನೆಯೇ ಉತ್ತಮ. ಬೇಯಿಸುವುದರಿಂದ ಅದರ ಮೂಲ ಸತ್ವ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಅದನ್ನು ಹಸಿಯಾಗಿ ರುಬ್ಬಿ, ಮಜ್ಜಿಗೆ ಬೆರೆಸಿ ತಂಬುಳಿ ಮಾಡುವುದು ಅಥವಾ ಹಸಿ ಚಟ್ನಿ ಮಾಡುವುದು ರೂಢಿ. ಇದರಿಂದ ಅದರ ಶೇಕಡಾ ನೂರರಷ್ಟು ಲಾಭ ದೇಹಕ್ಕೆ ಸಿಗುತ್ತದೆ.


ರಾತ್ರಿ ಹೊತ್ತು ತಂಬುಳಿ ಸೇವಿಸುವಂತಿಲ್ಲ.  ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ,ತಂಬುಳಿಯನ್ನು ಮಜ್ಜಿಗೆ ಅಥವಾ ಮೊಸರು ಬಳಸಿ ಮಾಡಲಾಗುತ್ತದೆ. ಆಯುರ್ವೇದದ ಪ್ರಕಾರ, ಸೂರ್ಯಾಸ್ತದ ನಂತರ (ರಾತ್ರಿ ಹೊತ್ತು) ಮಜ್ಜಿಗೆ ಅಥವಾ ಮೊಸರು ಸೇವಿಸುವುದರಿಂದ ಶ್ವಾಸಕೋಶದಲ್ಲಿ ಕಫ ಶೇಖರಣೆಯಾಗುತ್ತದೆ. ಇದರಿಂದ ಶೀತ, ಕೆಮ್ಮು ಮತ್ತು ಗಂಟಲು ನೋವು ಬರುವ ಸಾಧ್ಯತೆ ಹೆಚ್ಚು. 

ಒಂದೆಲಗ ಮೂಲತಃ   ತಂಪುಗುಣವನ್ನು ಹೊಂದಿರುವ ಸೊಪ್ಪು. ಇದು ದೇಹದ ಉಷ್ಣತೆಯನ್ನು ತಗ್ಗಿಸುತ್ತದೆ. ರಾತ್ರಿಯ ತಂಪಾದ ವಾತಾವರಣದಲ್ಲಿ, ತಂಪು ಗುಣದ ಒಂದೆಲಗ ಮತ್ತು ಮಜ್ಜಿಗೆಯ ಮಿಶ್ರಣವನ್ನು ತಿಂದರೆ ದೇಹದ ಜೀರ್ಣಕ್ರಿಯೆ (ಅಗ್ನಿ) ನಿಧಾನವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದು ಮುಖ್ಯ.   .


ಹಿಂದಿನವರು ಪ್ರಕೃತಿ, ವಾತಾವರಣ ಮತ್ತು ನಮ್ಮ ದೇಹದ ಜೈವಿಕ ಗಡಿಯಾರಕ್ಕೆ (Biological clock) ತಕ್ಕಂತೆ ಯಾವ ಆಹಾರವನ್ನು, ಯಾವ ರೂಪದಲ್ಲಿ, ಯಾವ ಸಮಯದಲ್ಲಿ ತಿನ್ನಬೇಕು ಎಂದು ಬಹಳ ವೈಜ್ಞಾನಿಕವಾಗಿ ನಿಯಮಗಳನ್ನು ಮಾಡಿದ್ದರು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.









 

Sunday, 8 February 2026

ಚಕೋತಾ ರಸರುಚಿ




ತೋಟದಿಂದ ತಾಜಾ ಚಕೋತ ಬಂದಿದೆ.  ರಂಗಣ್ಣ ಕೊಯ್ದು ತಂದಿಟ್ಟದ್ದು.

ಸಿಪ್ಪೆ ಬಿಡಿಸಿ, ಎಸಳುಗಳನ್ನು ಬೇರ್ಪಡಿಸಿ ತಿನ್ನುವುದು ಸಾಮಾನ್ಯ ವಿಧಾನ.  

ನಮ್ಮದು ಹೊಸರುಚಿ ಆಗಬೇಡವೇ,  ಮಾಡೋಣ ಕೋಸಂಬರಿ.  ಹೇಗೇ?


ಚಕೋತಾ ಎಸಳು ಬಿಡಿಸಿ, 

ರುಚಿಗೆ ತಕ್ಕಷ್ಟು ಉಪ್ಪು, 

ಖಾರದ ಬಾಬ್ತು ಕಾಳುಮೆಣಸಿನ ಪುಡಿ, 

ಬೇಕಿದ್ದರೆ ನಿಂಬೆ ರಸ,

ಇದ್ದರೆ ಕೊತ್ತಂಬರಿ ಸೊಪ್ಪು,

ಪುಟ್ಟದೊಂದು ಒಗ್ಗರಣೆ…

ಇಷ್ಟಾದರೆ ಕೋಸಂಬರಿ ಆಯಿತು.


ಈಗ ಚಕೋತಾ ತಂಬುಳಿ ಮಾಡೋಣ.

ಚಕೋತಾ ಎಸಳುಗಳನ್ನು ಸೊಗಸಾಗಿ ಬಿಡಿಸುವುದು ಅವಶ್ಯವಿದೆ.

ಉಳಿದಂತೆ ಕಾಯಿತುರಿ,  ಸಿಹಿಮಜ್ಜಿಗೆ ಯಾ ಸಿಹಿ ಮೊಸರು,  ಹುರಿದ ಜೀರಿಗೆ, ಕಾಳುಮೆಣಸು, ರುಚಿಗೆ ಉಪ್ಪು ಕೂಡಿ ನುಣ್ಣಗೆ ಅರೆಯಿರಿ.   ಒಗ್ಗರಣೆಯೊಂದಿಗೆ ಎಸಳುಗಳನ್ನು ಬೆರೆಸುವಲ್ಲಿಗೆ ತಂಬುಳಿ ಸಿದ್ಧವಾಯಿತು.  ಕುದಿಸುವುದೂ ಬೇಡ, ನಾಳೆಗೆ, ರಾತ್ರಿಗೆ ಇಡುವುದಕ್ಕೂ ಇಲ್ಲ.

ಇನ್ನೀಗ ಚಕೋತಾ ಸಿಪ್ಪೆ ಉಳಿದಿದೆ.  ಅದನ್ನೂ ಸವಿರುಚಿಯಾಗಿಸೋಣ.

ಚಕೋತಾ ಸಿಪ್ಪೆ ತುಂಬ ಕಹಿ,  ಕಹಿ ತೆಗೆಯೋಣ.

ಹಸಿರು ಬಣ್ಣದ ಸಿಪ್ಪೆ ಹೆರೆದು ತೆಗೆಯಿರಿ, ಬೆಳ್ಳಗಿನ ತಿರುಳು ಮಾತ್ರ ನಮಗೆ ಸಾಕು,  ಕತ್ತರಿಸಿ ಚೆನ್ನಾಗಿ ಬೇಯಿಸಿ, ನೀರು ಬಸಿದು, ತಿರುಳನ್ನೂ ಹಿಂಡಿ ಇಟ್ಟುಕೊಳ್ಳಿ.

ಒಗ್ಗರಣೆಗಿಟ್ಟು,  ಉಪ್ಪು ಹುಣಸೆ ರಸ, ಬೆಲ್ಲ ಹಾಗೂ ನೀರು ಎರೆದು ಕುದಿಸಿದ ದ್ರಾವಣಕ್ಕೆ ಹಿಂಡಿ ಇರಿಸಿದ ಚಕೋತಾ ಸಿಪ್ಪೆಯ ಚೂರುಗಳನ್ನು ಸೇರಿಸುವಲ್ಲಿಗೆ ಗೊಜ್ಜು ಸಿದ್ಧವಾಗಿದೆ.

ಈ ಗೊಜ್ಜು ಇನ್ನೂ ಪರಿವರ್ತಿತವಾಗಲಿದೆ.  ಖಾರ ಬೇಕಿದ್ದರೆ ಮೆಣಸ್ಕಾಯಿ,  ಸಿಹಿ ಸಾಕು ಎಂದಿದ್ದರೆ ಸಾಸಮೆಯೂ ಆಗುತ್ತದೆ.

ತೆಂಗಿನ ತುರಿಯೊಂದಿಗೆ ಸಾಸಿವೆ, ಬೆಲ್ಲ, ಹಸಿ ಮೆಣಸು ಅರೆದು, ಸಿಹಿ ಮಜ್ಜಿಗೆ ಎರೆಯುವಲ್ಲಿಗೆ ಸಾಸಮೆ ಬಂದಿದೆ.

ಎಳ್ಳು ಹುರಿದು, ಸಾಂಬಾರ ಮಸಾಲೆ ಹಾಗೂ ತೆಂಗಿನ ತುರಿ ಅರೆದು ಕೂಡುವುದು.  ಬೆಲ್ಲ ಹಾಕಲೇ ಬೇಕು.  ಚೆನ್ನಾಗಿ ಕುದಿಸಿ, ಕರಿಬೇವಿನ ಒಗ್ಗರಣೆ ಬೀಳಲೇ ಬೇಕು,  ಒಗ್ಗರಣೆಗೂ ತೆಂಗಿನೆಣ್ಣೆಯೇ ಆಗಬೇಕು.  ಇದೀಗ ಮೆಣಸ್ಕಾಯಿ.

ಬೇಯಿಸಿದ ಸಿಪ್ಪೆಯನ್ನು ತಂಬುಳಿಯಾಗಿಸುವುದೂ ನಮ್ಮ ಕೈಯಲ್ಲಿ ಇದೆ ಎಂದು ಬೇರೆ ಹೇಳಬೇಕಿಲ್ಲ.


ತಂಬುಳಿ ಊಟಕ್ಕೆ ತುಂಬಾ ತಂಪಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ರಾಮಬಾಣ. ಬಿಸಿ ಅನ್ನದ ಜೊತೆ ಊಟ ಮಾಡಲು ಇದು ತುಂಬಾ ರುಚಿ.

ಚಕೋತದಲ್ಲಿ ನಾರಿನಂಶ ಹೆಚ್ಚಿರುವುದರಿಂದ, ವಯಸ್ಸಾದಂತೆ ಕಾಡುವ ಮಲಬದ್ಧತೆಯಂತಹ ಸಮಸ್ಯೆಗೆ ಸೂಕ್ತ ಮನೆಮದ್ದು.

ವಿಟಮಿನ್ ಸಿ ಹೇರಳವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಾಯಕ.




ಟಿಪ್ಪಣೆ:

ದಿನಾಂಕ 23, ಫೆಬ್ರವರಿ.  ಬರಹ ಮುಂದುರಿದಿದೆ , ಒಂದು ಫೋಟೋ ಕೂಡಾ ಬಂದಿದೆ. 


ಒಂದು ಸಣ್ಣ ಗುಟ್ಟು: ಸಿಪ್ಪೆಯ ಕಹಿ ತೆಗೆಯುವಾಗ, ಮೇಲಿನ ಹಸಿರು ಸಿಪ್ಪೆಯನ್ನು ಪೂರ್ತಿಯಾಗಿ ಹೆರೆಯದೆ, ಅಲ್ಲಲ್ಲಿ ಸ್ವಲ್ಪ ಉಳಿಸಿಕೊಂಡರೆ ಅದರ ರುಚಿಯೇ ಬೇರೆ! ಈ ಹಸಿರು ಸಿಪ್ಪೆಯಲ್ಲಿರುವ ನೈಸರ್ಗಿಕ ತೈಲಾಂಶವು (Essential oils) ತಂಬುಳಿಗೆ ಅದ್ಭುತವಾದ ನಿಂಬೆಯಂತಹ ಸುವಾಸನೆ ನೀಡುತ್ತದೆ. ಊಟದ ನಂತರ ಬಾಯಿ ವಾಸನೆ ತೊಲಗಿಸಲು ಮಾರುಕಟ್ಟೆಯಲ್ಲಿ ಸಿಗುವ ಕೃತಕ ವಸ್ತುಗಳಿಗಿಂತ, ಈ ನೈಸರ್ಗಿಕ ಘಮ ಎಷ್ಟೋ ಪಾಲು ಹಿತ ಮತ್ತು ಆರೋಗ್ಯಕರ. ಇದೊಂದು ರೀತಿ ಊಟದ ಜೊತೆಯೇ ಸವಿಯುವ 'ನೈಸರ್ಗಿಕ ಮೌತ್ ಫ್ರೆಶ್ನರ್'!







Saturday, 24 January 2026

ಚಿತ್ರ ಕವನ




 

ಏನೋ ಕೊರೋನಾ ಅಂತೆ

ಯಾರನ್ನೂ ಮುಟ್ಟಬಾರದಂತೆ

ಶಾಲೆಗೆಂತು ಹೋಗಲಿ

ಗೆಳೆಯರಿಲ್ಲ ಆಟವಿಲ್ಲ

ಪಾಠ ಓದು ಇಲ್ಲ

ಮೊಬೈಲು ಪಾಠಪಟ್ಟಿ ಓದಲೆಂತು

ತಿಳಿಯಲಾರೆ ಹೇಳಲಾರೆ

ಅಕ್ಕಾ, ಕಾಣೆ ನಾನು ಮೊಬೈಲು



Friday, 16 January 2026

ಅಡುಗೆ ~ ಆರೋಗ್ಯ




 

ಅಡುಗೆಯಲ್ಲಿ ಆರೋಗ್ಯಪಾಲನೆ, ಇದು ಗೃಹಿಣಿಯ ಕರ್ತವ್ಯ.  ಗಂಡಿನೊಂದಿಗೆ ಸಮಾನತೆ ಹೊಂದಿರುವ ಮಹಿಳೆ ಹೊರಗೂ ಒಳಗೂ ದುಡಿಯುವವಳಾಗಿದ್ದಾಳೆ.  ಒತ್ತಡದ ಜೀವನಶೈಲಿಯಿಂದಾಗಿ ಶುಚಿರುಚಿಯಾಗಿ ಅಡುಗೆ ಮಾಡಿ ಇಡುವುದರಲ್ಲಿಯೂ ಪ್ರಾವೀಣ್ಯತೆ ಇರಲೇ ಬೇಕು.  ಹೀಗಿರುವಾಗ ಕೆಲವು ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳೋಣ.


ಕುಡಿಯುವ ನೀರು:

ನೀರನ್ನು ಸ್ವಚ್ವವಾದ ಸ್ಟೀಲ್ ಯಾ ತಾಮ್ರದ ತಂಬಿಗೆಯಲ್ಲಿ ಶೇಖರಿಸಿ ಇಡುವವರಾಗಿ.  ಮಣ್ಣಿನ ಹೂಜಿ ಅತ್ಯುತ್ತಮ.  ಪ್ಲಾಸ್ಟಿಕ್ ಜಾಡಿ ಯಾ ಬಾಟಲ್ ಸರ್ವಥಾ ಕೂಡದು.


ಪಾತ್ರೆಗಳೇ ಪ್ರಮುಖ ಶತ್ರುಗಳು:

ಇಂದು ಪ್ರತಿ ಮನೆಯಲ್ಲೂ ರಾರಾಜಿಸುತ್ತಿರುವ 'ನಾನ್-ಸ್ಟಿಕ್' (Non-stick) ತವಾಗಳು ಮತ್ತು ಅಲ್ಯೂಮಿನಿಯಂ ಕುಕ್ಕರ್‌ಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇವು ಅತಿಯಾಗಿ ಬಿಸಿಯಾದಾಗ ಆಹಾರದೊಂದಿಗೆ ರಾಸಾಯನಿಕಗಳನ್ನು ಬೆರೆಸುತ್ತವೆ, ಇದು ದೀರ್ಘಕಾಲದಲ್ಲಿ ಕ್ಯಾನ್ಸರ್ ಮತ್ತು ಹಾರ್ಮೋನ್ ಸಮಸ್ಯೆಗಳಿಗೆ ದಾರಿಯಾಗಬಹುದು.

ಪರಿಹಾರವೇನು?

ನಮ್ಮ ಬೇರುಗಳತ್ತ ಮರಳುವುದೇ ಇದಕ್ಕೆ ಏಕೈಕ ಪರಿಹಾರ.

• ಮಣ್ಣಿನ ಪಾತ್ರೆ: ಇದು ಪ್ರಕೃತಿಯ ಕೊಡುಗೆ. ಇದರಲ್ಲಿ ಅಡುಗೆ ಮಾಡಿದರೆ ಆಹಾರದ ಪೋಷಕಾಂಶಗಳು ಶೇ.೧೦೦ ರಷ್ಟು ಉಳಿಯುತ್ತವೆ.

• ಕಬ್ಬಿಣದ ಪಾತ್ರೆ (Cast Iron): ಇವುಗಳಲ್ಲಿ ಅಡುಗೆ ಮಾಡುವುದರಿಂದ ದೇಹಕ್ಕೆ ನೈಸರ್ಗಿಕವಾಗಿ ಕಬ್ಬಿಣದ ಅಂಶ ದೊರೆಯುತ್ತದೆ, ಇದು ರಕ್ತಹೀನತೆಯನ್ನು ತಡೆಯಲು ಸಹಕಾರಿ.

• ಹಿತ್ತಾಳೆ ಮತ್ತು ಕಂಚು: ರೋಗನಿರೋಧಕ ಶಕ್ತಿ ಹೆಚ್ಚಿಸಲು ಇವು ಅತ್ಯುತ್ತಮ.


ಪ್ಲಾಸ್ಟಿಕ್ ಮುಕ್ತವಾಗಲಿ:

ಬಿಸಿ ಆಹಾರವನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿಡುವುದು ಅಥವಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದು ವಿಷ ಸೇವನೆಗೆ ಸಮ. ಇದರ ಬದಲಿಗೆ ಸ್ಟೀಲ್, ಗಾಜು ಅಥವಾ ಪಿಂಗಾಣಿ ಪಾತ್ರೆಗಳನ್ನು ಬಳಸುವುದು ಸುರಕ್ಷಿತ. ಹಾಗೆಯೇ, ಅಡುಗೆಗೆ ಬಳಸುವಾಗ ರಿಫೈನ್ಡ್ (Refined) ಎಣ್ಣೆಯ ಬದಲು 'ಗಾಣದ ಎಣ್ಣೆ', ಬಿಳಿ ಸಕ್ಕರೆಯ ಬದಲು 'ಬೆಲ್ಲ' ಮತ್ತು ಪುಡಿ ಉಪ್ಪಿನ ಬದಲು 'ಕಲ್ಲುಪ್ಪು' ಬಳಸಿದರೆ ಅರ್ಧದಷ್ಟು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಮುಕ್ತಾಯ:

ಬದಲಾವಣೆ ರಾತ್ರೋರಾತ್ರಿ ಸಾಧ್ಯವಿಲ್ಲದಿರಬಹುದು. ಆದರೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯವಾಗಬೇಕಾದರೆ, ನಮ್ಮ ಬದಲಾವಣೆ ಅಡುಗೆಮನೆಯಿಂದಲೇ ಆರಂಭವಾಗಲಿ. ಇಂದೇ ಒಂದು ನಾನ್-ಸ್ಟಿಕ್ ಪಾತ್ರೆಯನ್ನು ಅಥವಾ ಪ್ಲಾಸ್ಟಿಕ್ ಡಬ್ಬವನ್ನು ಹೊರಹಾಕಿ, ಆರೋಗ್ಯಕರ ಆಯ್ಕೆಯನ್ನು ಅಳವಡಿಸಿಕೊಳ್ಳೋಣ.



Thursday, 1 January 2026

ಬಾನಂಚಿನ ಭರವಸೆ





ಗೆರೆಗಳು 

ನಿರಾಡಂಬರ ಚೆಲುವು

ಆಹ ಬೆಳ್ಳಿ ಕೂದಲ ನಲಿವು

ಸೀರೆಯಲ್ಲಿದೇ ನಮ್ಮ ಒಲವು

ಮುಡಿಯ ತುಂಬ ಮಲ್ಲಿಗೆ

ಕಣ್ಣಲೊಂದು ಹೂ ನಗೆ






Tuesday, 25 February 2025

ಗುರು ವಂದನೆ

 




ಕಾಸರಗೋಡಿನವರಾದ ನನ್ನ ವಯೋಮಾನದವರು ಕಲಿತದ್ದು ಕನ್ನಡ ಮಾಧ್ಯಮದಲ್ಲಿ.  ನನ್ನ ಹೈಸ್ಕೂಲು ಶಿಕ್ಷಣವೂ ಕನ್ನಡ ಮಾಧ್ಯಮದಲ್ಲಿ ಮುಗಿಯಿತು.  ಪ್ರಥಮ ಶ್ರೇಣಿಯಲ್ಲಿ ಪಾಸೂ ಆಯಿತು.  ಆನಂದಿತರಾದ ನನ್ನ ತಂದೆಯವರು ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ವಿಜ್ಞಾನ ಹಾಗೂ ಗಣಿತದಲ್ಲಿ ಪ್ರೀ ಡಿಗ್ರೀ ತರಗತಿಗೆ ಸೇರಿಸಿಯೇ ಬಿಟ್ಟರು.


ಒಂದನೇ ತರಗತಿಯಿಂದ ಹತ್ತರ ತನಕ ಕನ್ನಡದಲ್ಲೇ ಉಸಿರಾಡುತ್ತಿದ್ದ ವಿದ್ಯಾರ್ಥಿಯಾಗಿದ್ದ ನನಗೆ ಕಾಲೇಜಿನ ಇಂಗ್ಲಿಷ್ ಮಾಧ್ಯಮ ತಲೆಯೊಳಗೆ ಇಳಿಯಲೇ ಇಲ್ಲ.   ಶೂನ್ಯ ಸಂಪಾದನೆಯೇ ಗತಿಯಾಗುವ ಭಯ ಉಂಟಾದಾಗ,  ಅಪ್ಪನೇ ಗುರುವಾಗಿ,  ರಸಾಯನಶಾಸ್ತ್ರ,  ಗಣಿತದ ತ್ರಿಕೋನಮಿತಿ ಪಾಠ ಸುಲಭವೆಂದು ತಿಳಿಸಿಕೊಟ್ಟರು.  ಕನ್ನಡ ವ್ಯಾಕರಣವೆಂದರೆ ಕಬ್ಬಿಣದ ಕಡಲೆಯೆಂದು ತಿಳಿದಿದ್ದೆ,  ಅಲ್ಲಿಯೂ ಸುಲಭ ಸೂತ್ರಗಳನ್ನು ತಂದೆಯವರು ತಿಳಿಸಿ ಕೊಟ್ಟರು.   ಮನೆಯೆ ಮೊದಲ ಪಾಠಶಾಲೆ,  ತಂದೆತಾಯಿ ಮೊದಲ ಗುರುಗಳು.


ಒಂದನೇ ತರಗತಿ ಮೊದಲ್ಗೊಂಡು ಡಿಗ್ರಿ ಕೊನೆಯ ಹಂತದವರೆಗೆ ಅಗಣಿತ ತಾರಾಗಣದಂತೆ ಅಧ್ಯಾಪಕರು ಎದುರಾಗುತ್ತಾರೆ.  ಎಲ್ಲರನ್ನೂ ಭಯಭಕ್ತಿಯಿಂದ ಕಾಣುವ ಶ್ರದ್ಧೆ ನಮ್ಮದು.   ಪ್ರೊ. ಶ್ರೀಕೃಷ್ಣ ಭಟ್ಟರು ನಮ್ಮ ಎರಡನೇ ವರ್ಷದ ಡಿಗ್ರಿ ತರಗತಿಗೆ ರಾಘವಾಂಕನ  ಹರಿಶ್ಚಂದ್ರ ಕಾವ್ಯ ಸಂಗ್ರಹ ಎಂಬ ಪುಸ್ತಕವನ್ನು ತಲಸ್ಪರ್ಶಿಯಾಗಿ ಬೋಧಿಸಿದವರಾಗಿದ್ದಾರೆ.  ಹರಿಶ್ಚಂದ್ರ ಕಾವ್ಯ ಈಗಲೂ ನನ್ನ ಬಳಿ ಇದೆ.


ಪದವಿ ಪಡೆದ ನಂತರ  ಪ್ರೊ. ಶ್ರೀಕೃಷ್ಣ ಭಟ್ಟರು  “ ಬಾ, ಕನ್ನಡ ಎಂ. ಎ. ಕ್ಲಾಸಿಗೆ ಸೇರಿಕೋ. “ ಎಂದು ಆಹ್ವಾನಿಸಿದ್ದರು.   ಆದರೆ ನನಗೇಕೋ ಸಾಧ್ಯವಾಗದೇ ಹೋಯಿತು.


ಅವರ ಹಳೆ ವಿದ್ಯಾರ್ಥಿಗಳು ಸೇರಿ ಇಳಿವಯಸ್ಸಿನಲ್ಲಿ ಸನ್ಮಾನಿಸಲು ಹೊರಟಿರುವುದು ಸಂತಸದ ವಿಚಾರ.  ನನ್ನದೂ ಒಂದು ಕಿರುಕಾಣಿಕೆ ಇಲ್ಲಿ ಬಂದಿದೆ.


ರಾಘವಾಂಕನ ಪ್ರಸಿದ್ಧ ಕೃತಿ ನಮಗೆ ಕನ್ನಡ ಪಠ್ಯವಾಗಿ ದೊರೆತಿದ್ದು ನಮ್ಮ ಭಾಗ್ಯ ವಿಶೇಷವೇ ಸರಿ.   ಹರಿಶ್ಚಂದ್ರನ ಕತೆ ತುಂಬ ಹಳೆಯದು.   ಅದರಲ್ಲೂ ವಸಿಷ್ಠ ವಿಶ್ವಾಮಿತ್ರರ ಸಂವಾದವೂ,  ಕೊನೆಯಲ್ಲಿ ಹರಿಶ್ಚಂದ್ರ ಮಾತಿಗೆ ಬದ್ಧನಾಗಿ ರಾಜ್ಯ ಬಿಟ್ಟು ತೊಲಗುವ ಪ್ರಸಂಗದ ವರ್ಣನೆ ಈಗಲೂ ಮನದಲ್ಲಿ ಉಳಿದಿದೆ.  “ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ”   ಈ ಸಾಲುಗಳು ಮರೆಯಲಾಗದು.   ಪ್ರೊ. ಶ್ರೀಕೃಷ್ಣ ಭಟ್ಟರ ಪಾಠದ ಶೈಲಿಯೇ ಅಂತಹುದು.




ಟಿಪ್ಪಣಿ:

ಈ ಕಿರು ಬರಹ, ಬೃಹತ್ ಹೊತ್ತಗೆಯಲ್ಲಿ ಸೇರಿಕೊಂಡಿದೆ, ಬರೆಯಲು ಉತ್ತೇಜಿಸಿದ ಗೆಳತಿ,  ಡಾ. ಮಹೇಶ್ವರಿಗೆ ಕೃತಜ್ಞತೆಗಳು.



Wednesday, 5 February 2025

ಪುಟ್ಟಕ್ಕನ ನವಿಲುಗರಿ

 


ಬೆಂಗಳೂರಿನ ನಮ್ಮ ಪುಟ್ಟಕ್ಕ ರಜೆಯ ದಿನಗಳಲ್ಲಿ ಅಜ್ಜೀ ಮನೆಗೆ ಬಂದಿಳಿದಳು, 

“ ಪಾಪೂಗೆ ಎಂತಹ ರಜೆ ಅಂದಿರಾ? “ 

“ ಈಗ ಪ್ರಿ ನರ್ಸರಿ ಶಾಲೆಗೆ ಹೋಗ್ತಿದಾಳೆ ಕಣ್ರೀ..”


ಬಂದವಳೇ ಅತ್ತ ಇತ್ತ ತಿರುಗಾಡಿ ಬಂದಳು.  “ ಅಜ್ಜೀ.. ಅಂಗಳದಲ್ಲಿ ನವಿಲುಗರಿ ಸಿಕ್ಕಿತು.  “ ಎಂದಳು.

“ ಹೌದಾ,  ಇಟ್ಟುಕೋ.. ಬೆಳಗಾದ್ರೆ ನವಿಲು ಬರುತ್ತೆ ನೋಡು.  ಅಂಗಳಕ್ಕೂ ಬರುತ್ತೆ, ಆದ್ರೆ ತುಂಟಿ ಇದಾಳಲ್ಲ, “ ಬೌ ಬೌ “ ಅಂದು ಹಾರಿ ಹೋಗುವ ಹಾಗೆ ಮಾಡುತ್ತೆ..”


ಸಂಜೆಯಾಗುತ್ತಲೂ ನಾನೂ ಪುಟ್ಟಕ್ಕನೂ ನಾಗಬನದ ವರೇಗೆ ಹೋದೆವು,  ಜಂಬುನೇರಳೆ ಗಿಡದ ಸಮೀಪ ತುಂಬಾ ನವಿಲು ಗರಿಗಳು!  “ ಎಷ್ಟೊಂದು ನವಿಲುಗರಿಗಳು! “  ನವಿಲು ಗರಿ ಯಾಕೆ ಹೀಗೆ ಚಲ್ಲಾಪಿಲ್ಲಿಯಾಗಿ ಬಿದ್ದಿದೆ ಎಂದು ತಿಳಿಯದಾಯಿತು.  ನವಿಲಿನ ಪ್ರಾಣಕ್ಕೇನಾದರೂ ಅಪಾಯವಾಯಿತೇ…


“ಗರಿ ಇಲ್ಲದಿದ್ರೆ ನವಿಲಿಗೆ ಏನಾಗುತ್ತೆ ಅಜ್ಜೀ? “

“ ಏನೂ ಆಗೂದಿಲ್ಲ, ಹೊಸಾ ಗರಿ ಬರುತ್ತೆ ಅಷ್ಟೇ..”

ಮನೆಗೆ ಬಂದಾಗ ಪುಟ್ಟಿಯ ಅಜ್ಜನಿಗೂ ವಿಚಾರ ತಿಳಿಯಿತು.  

“ಎಲ್ಲಿದೆ ನವಿಲು ಗರಿ..  “ ಅನ್ನುತ್ತ  ನವಿಲುಗರಿಗಳನ್ನೆಲ್ಲ ಸಂಗ್ರಹಿಸಿ ತಂದರು.  “ ದಿನವೆಷ್ಟಾಯ್ತೋ ಈ ಗರಿಗಳಿಗೆ?  ತುಂಬ ಮಣ್ಣು ಮೆತ್ತಿ ಕೊಂಡಿದೆ,  ಚೆನ್ನಾಗಿ ತೊಳೆಯಬೇಕು.”

“ ಗರಿಗಳನ್ನು ಇಟ್ಕೊಂಡು ಏನ್ಮಾಡೂದು?”

“ನಿನಗ್ಗೊತ್ತಿಲ್ಲ ಸುಮ್ನಿರು,  ನವಿಲುಗರಿ ಐಶ್ವರ್ಯದ ಸಂಕೇತ ಗೊತ್ತಾ..”


ಅಹ!  ಜಯ್ ಶ್ರೀಕೃಷ್ಣಾ…