ಆರೇಳು ವರ್ಷಗಳ ಹಿಂದಿನ ಮಾತು, ನಾಗಬನ ಜೀರ್ಣೋದ್ಧಾರಗೊಂಡು ಭಕ್ತಮಹನೀಯರು ಪುಳಕಿತರಾದಾಗ, ಇಲ್ಲೊಂದು ಹಸಿರುವನ ನಿರ್ಮಾಣವಾಗಿ ಬಿಟ್ಟಿತು, ವಿಧ ವಿಧ ಸಸ್ಯಗಳು ಓಡೋಡಿ ಬಂದವು. ಅವುಗಳಲ್ಲಿ ಈ ಶರಬತ್ ಬಳ್ಳಿಯೂ ಸೇರಿತ್ತು. ಅದರಲ್ಲಿಯೂ ಎರಡು ಬಣ್ಣ, ಹಸಿರು ಹಾಗೂ ನಸು ನೇರಳೆ, ನಾಗದೇವರಿಗೆ ತಂಪು ಇರಬೇಕು, ಶರಬತ್ ಬಳ್ಳಿಯೂ ಚಪ್ಪರದಂತೆ ಹಬ್ಬಿತು, ಇಂತಹ ಸುಡುಬೇಸಿಗೆಯಲ್ಲಿ ತೊನೆದಾಡುವ ಹಣ್ಣುಗಳು, ಹೂವುಗಳ ನೋಟವೇ ಕಣ್ಣು ತಣಿಸುವಂತಹುದು, ನಮಗೂ ಶರಬತ್ ಹಣ್ಣು ಹೊಸದು, ಹಾಗೇನೇ ಕತ್ತರಿಸಿ, ಸಕ್ಕರೆ ಬೆರೆಸಿ ತಿಂದು ನೋಡಿದ್ದೂ ಆಯ್ತು, “ಪರಿಮಳವೇನೋ ಮಸ್ತ್ … ಹುಳಿಯೂ ಉಂಟಲ್ಲ..” ನಮ್ಮವರ ಗೊಣಗಾಟ. “ ಹೆಚ್ಚು ಮಾರ್ಕು ಇರೂದು ಒಳಗಿನ ಬೀಜ ಗೊತ್ತಾ, ಅದನ್ನೂ ತಿನ್ನಿ.” ನನ್ನ ಒತ್ತಾಯ.
ಮಳೆಗಾಲ ಆರಂಭದ ನಂತರ, ಜಡಿಮಳೆಗೆ ಅಂಗಳಕ್ಕೂ ಇಳಿಯುವವರು ನಾವಲ್ಲ, ಒಂದು ಹಂತದ ಮಳೆಯ ಅವತರಣ ಮುಗಿದು, ಶ್ರಾವಣ ಬಂದ ನಂತರ ತೋಟದ ಕೆಲಸಕ್ಕೆ ಕಾರ್ಮಿಕರ ಪಡೆ ಬಂದಿದೆ. ಬಂದವರೇ ಅನಗತ್ಯ ಸೊಪ್ಪುಸದೆ, ಕಳೆಗಿಡಗಂಟಿಗಳೆಲ್ಲ ಕತ್ತಿಪ್ರಹಾರಕ್ಕೆ ನೆಲಕಚ್ಚಿವೆ, ಆ ಸಮಯದಲ್ಲಿ ನಮ್ಮ ಶರಬತ್ ಬಳ್ಳಿಯೂ ಹೋಯ್ತು. ನೆಟ್ಟವರು ಯಾರೋ, ಕಡಿದವರು ಯಾರೋ, ನಮಗೆ ಶರಬತ್ ಕುಡಿಯುವ ಯೋಗ ತಪ್ಪಿತು.
ಶ್ರಾವಣ ಬಂದಾಗ, ಮೊದಲು ಬರುವುದೇ ನಾಗಪಂಚಮಿ, ನಮ್ಮ ಬಾಯಾರು ಕಂಬಳಗುತ್ತು ಮನೆತನದ ಬಂಟ ಸಮುದಾಯ ಬಾಂಧವರು ಬಂದು ಸೇರಿ ನಾಗಪಂಚಮಿ ಆಚರಣೆ. ಸಸಿ ನೆಟ್ಟ ಲಿಂಗಪ್ಪ ಶೆಟ್ಟಿ ಪುನಃ ತಂದು ನೆಟ್ಟ ಶರಬತ್ ಬಳ್ಳಿಯನ್ನು ನಾವೂ ಜಾಗರೂಕತೆಯಿಂದ ಪಾಲನೆ, ಪೋಷಣೆ ಮಾಡಿದ ಸಾಹಸದಿಂದ ಈಗ ಶರಬತ್ ಕುಡಿದಾಯಿತು.
ಈಗ ಆ ಹೊಸ ಬಳ್ಳಿ ನಮ್ಮ ಹಿತ್ತಲಿನ ಪೇರಳೆ ಮರವನ್ನು ಅಪ್ಪಿಕೊಂಡು ಬೆಳೆಯುತ್ತಿದೆ. ಮರದ ಆಸರೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಹಬ್ಬಿರುವ ಈ ಬಳ್ಳಿಯಲ್ಲಿ ಕೃಷ್ಣಕಮಲದಂತಹ ಅದ್ಭುತ ಹೂವುಗಳು ಅರಳಿದಾಗ ಪ್ರಕೃತಿಯ ಕಲಾಕೃತಿಗೆ ಬೆರಗಾಗಲೇಬೇಕು. ಕೇವಲ ಕಣ್ಣಿಗಷ್ಟೇ ಅಲ್ಲ, ಈ ಶರಬತ್ ಹಣ್ಣು (ಪ್ಯಾಷನ್ ಫ್ರೂಟ್) ಆರೋಗ್ಯಕ್ಕೂ ದೊಡ್ಡ ಆಸರೆ. ಇದರಲ್ಲಿರುವ ವಿಟಮಿನ್ ಸಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಇದರ ಬೀಜ ಮತ್ತು ತಿರುಳು ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ರಕ್ತದೊತ್ತಡ ನಿಯಂತ್ರಿಸುವ ಮತ್ತು ಆಯಾಸ ನೀಗಿಸುವ ಗುಣವೂ ಇದರಲ್ಲಿದೆ.
ಮೊನ್ನೆ ರಂಗಣ್ಣ ತಂದುಕೊಟ್ಟ ತಾಜಾ ಹಣ್ಣುಗಳನ್ನು ಕತ್ತರಿಸಿ, ಅದರ ರಸ ತೆಗೆದು ಜ್ಯೂಸ್ ಮಾಡಿ ಸವಿದಾಗ, ಅಂದಿನ ಆ 'ಗೊಣಗಾಟ'ದ ನೆನಪಾಗಿ ಮುಖದಲ್ಲಿ ನಗು ಮೂಡಿತು. ಹುಳಿ-ಸಿಹಿ ಬೆರೆತ ಆ ತಂಪು ಪಾನೀಯ ಗಂಟಲೊಳಗೆ ಇಳಿಯುತ್ತಿದ್ದಂತೆ, ಒಮ್ಮೆ ಕಳೆದುಕೊಂಡರೂ ಪ್ರಕೃತಿ ಮತ್ತೆ ಒಲಿದು ನೀಡಿದ ಈ ಉಡುಗೊರೆಗೆ ಮನಸ್ಸು ತುಂಬಿ ಬಂತು.






