ತೋಟದಿಂದ ತಾಜಾ ಚಕೋತ ಬಂದಿದೆ. ರಂಗಣ್ಣ ಕೊಯ್ದು ತಂದಿಟ್ಟದ್ದು.
ಸಿಪ್ಪೆ ಬಿಡಿಸಿ, ಎಸಳುಗಳನ್ನು ಬೇರ್ಪಡಿಸಿ ತಿನ್ನುವುದು ಸಾಮಾನ್ಯ ವಿಧಾನ.
ನಮ್ಮದು ಹೊಸರುಚಿ ಆಗಬೇಡವೇ, ಮಾಡೋಣ ಕೋಸಂಬರಿ. ಹೇಗೇ?
ಚಕೋತಾ ಎಸಳು ಬಿಡಿಸಿ,
ರುಚಿಗೆ ತಕ್ಕಷ್ಟು ಉಪ್ಪು,
ಖಾರದ ಬಾಬ್ತು ಕಾಳುಮೆಣಸಿನ ಪುಡಿ,
ಬೇಕಿದ್ದರೆ ನಿಂಬೆ ರಸ,
ಇದ್ದರೆ ಕೊತ್ತಂಬರಿ ಸೊಪ್ಪು,
ಪುಟ್ಟದೊಂದು ಒಗ್ಗರಣೆ…
ಇಷ್ಟಾದರೆ ಕೋಸಂಬರಿ ಆಯಿತು.
ಈಗ ಚಕೋತಾ ತಂಬುಳಿ ಮಾಡೋಣ.
ಚಕೋತಾ ಎಸಳುಗಳನ್ನು ಸೊಗಸಾಗಿ ಬಿಡಿಸುವುದು ಅವಶ್ಯವಿದೆ.
ಉಳಿದಂತೆ ಕಾಯಿತುರಿ, ಸಿಹಿಮಜ್ಜಿಗೆ ಯಾ ಸಿಹಿ ಮೊಸರು, ಹುರಿದ ಜೀರಿಗೆ, ಕಾಳುಮೆಣಸು, ರುಚಿಗೆ ಉಪ್ಪು ಕೂಡಿ ನುಣ್ಣಗೆ ಅರೆಯಿರಿ. ಒಗ್ಗರಣೆಯೊಂದಿಗೆ ಎಸಳುಗಳನ್ನು ಬೆರೆಸುವಲ್ಲಿಗೆ ತಂಬುಳಿ ಸಿದ್ಧವಾಯಿತು. ಕುದಿಸುವುದೂ ಬೇಡ, ನಾಳೆಗೆ, ರಾತ್ರಿಗೆ ಇಡುವುದಕ್ಕೂ ಇಲ್ಲ.
ಇನ್ನೀಗ ಚಕೋತಾ ಸಿಪ್ಪೆ ಉಳಿದಿದೆ. ಅದನ್ನೂ ಸವಿರುಚಿಯಾಗಿಸೋಣ.
ಚಕೋತಾ ಸಿಪ್ಪೆ ತುಂಬ ಕಹಿ, ಕಹಿ ತೆಗೆಯೋಣ.
ಹಸಿರು ಬಣ್ಣದ ಸಿಪ್ಪೆ ಹೆರೆದು ತೆಗೆಯಿರಿ, ಬೆಳ್ಳಗಿನ ತಿರುಳು ಮಾತ್ರ ನಮಗೆ ಸಾಕು, ಕತ್ತರಿಸಿ ಚೆನ್ನಾಗಿ ಬೇಯಿಸಿ, ನೀರು ಬಸಿದು, ತಿರುಳನ್ನೂ ಹಿಂಡಿ ಇಟ್ಟುಕೊಳ್ಳಿ.
ಒಗ್ಗರಣೆಗಿಟ್ಟು, ಉಪ್ಪು ಹುಣಸೆ ರಸ, ಬೆಲ್ಲ ಹಾಗೂ ನೀರು ಎರೆದು ಕುದಿಸಿದ ದ್ರಾವಣಕ್ಕೆ ಹಿಂಡಿ ಇರಿಸಿದ ಚಕೋತಾ ಸಿಪ್ಪೆಯ ಚೂರುಗಳನ್ನು ಸೇರಿಸುವಲ್ಲಿಗೆ ಗೊಜ್ಜು ಸಿದ್ಧವಾಗಿದೆ.
ಈ ಗೊಜ್ಜು ಇನ್ನೂ ಪರಿವರ್ತಿತವಾಗಲಿದೆ. ಖಾರ ಬೇಕಿದ್ದರೆ ಮೆಣಸ್ಕಾಯಿ, ಸಿಹಿ ಸಾಕು ಎಂದಿದ್ದರೆ ಸಾಸಮೆಯೂ ಆಗುತ್ತದೆ.
ತೆಂಗಿನ ತುರಿಯೊಂದಿಗೆ ಸಾಸಿವೆ, ಬೆಲ್ಲ, ಹಸಿ ಮೆಣಸು ಅರೆದು, ಸಿಹಿ ಮಜ್ಜಿಗೆ ಎರೆಯುವಲ್ಲಿಗೆ ಸಾಸಮೆ ಬಂದಿದೆ.
ಎಳ್ಳು ಹುರಿದು, ಸಾಂಬಾರ ಮಸಾಲೆ ಹಾಗೂ ತೆಂಗಿನ ತುರಿ ಅರೆದು ಕೂಡುವುದು. ಬೆಲ್ಲ ಹಾಕಲೇ ಬೇಕು. ಚೆನ್ನಾಗಿ ಕುದಿಸಿ, ಕರಿಬೇವಿನ ಒಗ್ಗರಣೆ ಬೀಳಲೇ ಬೇಕು, ಒಗ್ಗರಣೆಗೂ ತೆಂಗಿನೆಣ್ಣೆಯೇ ಆಗಬೇಕು. ಇದೀಗ ಮೆಣಸ್ಕಾಯಿ.
ಬೇಯಿಸಿದ ಸಿಪ್ಪೆಯನ್ನು ತಂಬುಳಿಯಾಗಿಸುವುದೂ ನಮ್ಮ ಕೈಯಲ್ಲಿ ಇದೆ ಎಂದು ಬೇರೆ ಹೇಳಬೇಕಿಲ್ಲ.
ತಂಬುಳಿ ಊಟಕ್ಕೆ ತುಂಬಾ ತಂಪಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ರಾಮಬಾಣ. ಬಿಸಿ ಅನ್ನದ ಜೊತೆ ಊಟ ಮಾಡಲು ಇದು ತುಂಬಾ ರುಚಿ.
ಚಕೋತದಲ್ಲಿ ನಾರಿನಂಶ ಹೆಚ್ಚಿರುವುದರಿಂದ, ವಯಸ್ಸಾದಂತೆ ಕಾಡುವ ಮಲಬದ್ಧತೆಯಂತಹ ಸಮಸ್ಯೆಗೆ ಸೂಕ್ತ ಮನೆಮದ್ದು.
ವಿಟಮಿನ್ ಸಿ ಹೇರಳವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಾಯಕ.









