Pages

Ads 468x60px

Featured Posts

.

Saturday, 14 March 2026

ಬಸಳೆ ಸಾರು

 


ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಉರಿ ಬಿಸಿಲಿಗೆ ದೇಹವನ್ನು ತಂಪಾಗಿರಿಸುವ ಹಾಗೂ ಆರೋಗ್ಯವನ್ನು ಕಾಪಾಡುವ ಊಟ ನಮ್ಮದಾಗಿರಬೇಕು. ಅದಕ್ಕಾಗಿಯೇ ಇಂದು ನಮ್ಮದು ಬಸಳೆ ಸೊಪ್ಪಿನ ಸಾರು ಸಿದ್ಧವಾಗಿದೆ.


ಮನೆಯ ಅಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ಒಂದು ಚಿಕ್ಕ ಚಪ್ಪರ ಹಾಕಿ ಬಸಳೆ ಬಳ್ಳಿ ಹಬ್ಬಿಸಿದರೆ, ನೋಡಲೂ ಅಂದ, ಉಣ್ಣಲೂ ಚಂದ. ದಪ್ಪನೆಯ, ರಸಭರಿತವಾದ ಎಲೆಗಳ ಈ ಬಳ್ಳಿ ಕಣ್ಣಿಗೆ ಎಷ್ಟು ತಂಪೋ, ದೇಹಕ್ಕೂ ಅಷ್ಟೇ ತಂಪು.




ಬಸಳೆಯ ವಿಶೇಷತೆಗಳು:

ಬಸಳೆ ಬೆಳೆಯುವುದು ಬಹಳ ಸುಲಭ. ಒಂದೆರಡು ಕಡ್ಡಿ ನೆಟ್ಟರೂ ಸಾಕು, ಹುಲುಸಾಗಿ ಬೆಳೆದು ಚಪ್ಪರವನ್ನು ಆವರಿಸಿಕೊಳ್ಳುತ್ತದೆ.  ಅಡುಗೆಮನೆಯ ಕಸ ಬಸಳೆಗೆ ಉತ್ತಮ ಗೊಬ್ಬರ, ನೀರೂ ಅವಶ್ಯಕ.

ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಯಥೇಚ್ಛವಾಗಿದೆ. 

ಇದರ ದಪ್ಪನೆಯ ಎಲೆಗಳು ಮತ್ತು ನಾರಿನಂಶವುಳ್ಳ ಕಾಂಡಗಳು ಅಡುಗೆಗೆ ಅದ್ಭುತ ರುಚಿ ಕೊಡುತ್ತವೆ.


ಬೇಸಿಗೆಯಲ್ಲಿ ಬಸಳೆಯ ಉಪಯೋಗ:

ದೇಹಕ್ಕೆ ತಂಪು: ಬೇಸಿಗೆಯ ತಾಪಕ್ಕೆ ದೇಹವನ್ನು ನೈಸರ್ಗಿಕವಾಗಿ ತಂಪಾಗಿರಿಸಲು ಬಸಳೆ ಅತ್ಯುತ್ತಮ. ಜೀರ್ಣಕ್ರಿಯೆಗೆ ಸಹಕಾರಿ: ಇದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ.  

ಶಕ್ತಿದಾಯಕ: ಬಸಳೆಯಲ್ಲಿರುವ ಪೋಷಕಾಂಶಗಳು ಬೇಸಿಗೆಯಲ್ಲಿ ಕಾಡುವ ಸುಸ್ತು ಮತ್ತು ಆಯಾಸವನ್ನು ದೂರ ಮಾಡಿ ದೇಹಕ್ಕೆ ಚೈತನ್ಯ ನೀಡುತ್ತವೆ.




ಬೇಗನೇ ಅಡುಗೆ ಆಗಲು ಎಳೆಯ ಕುಡಿ ಕಾಂಡಗಳನ್ನು ಕುಯ್ಯುವುದು,  ಬೇಕಾದಂತೆ ಕತ್ತರಿಸಿ ಇಡುವುದು.

ಮೊದಲಾಗಿ ಹೆಸ್ರುಕಾಳುಗಳನ್ನು ಬೇಯಲಿಡುವುದು. 3 ಚಮಚ ಸಾಕು ಕಣ್ರೀ.  ಅತಿಯಾಗಿ ಕಾಳು ಹಾಕಿದಿರಾದರೆ ಸಾರು ಹೋಗಿ ಗಸಿ ಆದೀತು.

ಆಕರ್ಷಕ ಬಣ್ಣಕ್ಕಾಗಿ ಬೀಟ್ರೂಟ್ ಹೋಳುಗಳನ್ನು ಹಾಕುವುದು.

ಹುಳಿ ರುಚಿಗಾಗಿ ಟೊಮೇಟೋ ಮಾತ್ರ ಸಾಲದು, ಸ್ವಲ್ಪ ಹುಣಸೆಹಣ್ಣು ಅಥವಾ ಪುನರ್ಪುಳಿ ಇರಲಿ. ನಾನು ಪುನರ್ಪುಳಿಯನ್ನೇ ಹಾಕಿದ್ದು,   ಮೂರು ಒಣಸಿಪ್ಪೆ ಸಾಕು.

ರುಚಿಗೆ ಉಪ್ಪು, ಸಿಹಿಗೆ ಬೆಲ್ಲ.

ಸಾರು ಅಲ್ಲವೇ,  ಚಿಟಿಕೆ ಅರಸಿನ. ಇಂಗು ಇರಲಿ.

ಕರಿಬೇವು, ಸಾಕಷ್ಟು ಬೆಳ್ಳುಳ್ಳಿ ಎಸಳುಗಳ ಒಗ್ಗರಣೆ ಕಡ್ಡಾಯ. ಒಗ್ಗರಣೆಗೆ ಜೀರಿಗೆಯೂ ಇರಲಿ, ಪರಿಮಳ ಜಾಸ್ತಿ.






Thursday, 5 March 2026

ಕಬ್ಬಿನ ಹಾಲಿನ ದೋಸೆ

 


ಕಬ್ಬಿನ ಹಾಲು ತಂದಿದೆ,  ಕುಡಿದಾಯ್ತು.  ಇನ್ನೂ ಇದೆ, ನಾಳೆಗೊಂದು ತಿಂಡಿ ಮಾಡಲು ಸಾಧ್ಯವೇ ಎಂಬ ಗಹನ ಚಿಂತನೆಯಿಂದ ಈ ದೋಸೆ ಮೇಲೆದ್ದಿದೆ.


ಒಂದು ದೊಡ್ಡ ಲೋಟ ಕಬ್ಬಿನ ಹಾಲು ಉಳಿದಿದೆ.

ಒಂದು ಲೋಟ ಬೆಳ್ತಿಗೆ ಅಕ್ಕಿ ನೆನೆಯಿತು,  ನೀರಿನಲ್ಲಿ ಕಣ್ರೀ..

ಅರ್ಧ ಲೋಟ ಕಾಯಿತುರಿ,

ಡಬ್ಬದಿಂದ ದಪ್ಪ ಅವಲಕ್ಕಿ ಹೊರ ಬಂದಿತು. ಎಷ್ಟೂ?

ಕೇವಲ 2 ಚಮಚದಷ್ಟು ಸಾಕು.  ಇದನ್ನೂ ತೊಳೆದು ನೀರೆರೆದು ಇಡತಕ್ಕದ್ದು.


ಎಲ್ಲವನ್ನೂ ನುಣ್ಣಗೆ ಅರೆಯಿರಿ. ನೀರಿನ ಬದಲು ಕಬ್ಬಿನಹಾಲನ್ನೇ ಎರೆದು ಅರೆಯತಕ್ಕದ್ದು,  ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ಬಂದಿತೇ,  ಹಿಟ್ಟು ಗಟ್ಟಿಯಿದ್ದರೆ ಉಳಿದ ಕಬ್ಬಿನ ಹಾಲು ಸೇರಿಸಿ ಹದ ಮಾಡಿಕೊಳ್ಳಿ. 

ರುಚಿಗೆ ತಕ್ಕಷ್ಟು ಉಪ್ಪು ಕೂಡಿಸಿ,  ಮುಚ್ಚಿಟ್ಟು,  ನಾಳೆ ಮುಂಜಾನೆಯ ತನಕ ಹಿಟ್ಟು ವಿಶ್ರಾಂತಿ ಪಡೆಯಲಿ.


ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ದೋಸೆಯಂತೆ ಹುಯ್ಯಿರಿ. ಇದನ್ನು ಪೇಪರ್ ದೋಸೆಯಂತೆ ಅತಿ ತೆಳುವಾಗಿ ಹರಡುವುದು ಬೇಡ, ಸೆಟ್ ದೋಸೆಯಂತೆ ಸ್ವಲ್ಪ ದಪ್ಪಗಿರಲಿ.  ಸುತ್ತಲೂ ಸ್ವಲ್ಪ ತುಪ್ಪ ಬಿಟ್ಟು, ಮುಚ್ಚಳ ಮುಚ್ಚಿ ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಬೇಯಿಸಿ.  ಇದರಲ್ಲಿ ನೈಸರ್ಗಿಕ ಸಿಹಿ ಇರುವುದರಿಂದ ತಳ ಬೇಗ ಸೀದುಹೋಗುವ ಸಾಧ್ಯತೆ ಇರುತ್ತದೆ, ಹಾಗಾಗಿ ಉರಿ ಸಣ್ಣದಿರಲಿ.

ಒಂದು ಬದಿ ಚೆನ್ನಾಗಿ ಬೆಂದ ಮೇಲೆ, ತಿರುವಿ ಹಾಕಿ ಇನ್ನೊಂದು ಬದಿಯನ್ನೂ ಬೇಯಿಸಿ.  ಬಿಸಿ ಬಿಸಿಯಾದ, ಘಮಘಮಿಸುವ ಕಬ್ಬಿನ ಹಾಲಿನ ಸಿಹಿ ದೋಸೆಯನ್ನು ಸ್ವಲ್ಪ ಬೆಣ್ಣೆ ಅಥವಾ ತುಪ್ಪದೊಡನೆ ತಿನ್ನುವ ಆನಂದ ನಮ್ಮದು.


ಒಂದು ಲೋಟ ಕಬ್ಬಿನ ಹಾಲು ದೋಸೆಗೆ ಹಿತವಾದ ಸಿಹಿಯನ್ನು ಮಾತ್ರ ಕೊಟ್ಟಿದೆ,  ದೋಸೆ ಹಿಟ್ಟಿಗೆ ತೆಂಗಿನ ತುರಿ ಮತ್ತು ಅವಲಕ್ಕಿ ಸೇರಿಸುವುದೇ ಒಂದು ಮ್ಯಾಜಿಕ್!  ಇದರಿಂದಲೇ ದೋಸೆ ಮೃದುವಾಗಿ ಮತ್ತು ಅದ್ಭುತ ರುಚಿಯೊಂದಿಗೆ ಬರುವುದು. ಇದಕ್ಕೆ ಕಬ್ಬಿನ ಹಾಲು ಇಲ್ಲದಿದ್ದರೂ, ಬರೀ ನೀರು ಹಾಕಿ ಅರೆದರೆ,  ಅದೇ ನಮ್ಮ ಪ್ರಸಿದ್ಧ 'ಸೆಟ್ ದೋಸೆ' ಆಯಿತು ಅನ್ನಿ.


ಕೊತ್ತಂಬರಿ ಸೊಪ್ಪು,  ಕಾಯಿತುರಿ, ಒಂದು ಹಸಿಮೆಣಸು,  ಉಪ್ಪು,  ಹುಳಿ ಕೂಡಿ ಅರೆಯುವಲ್ಲಿಗೆ   ಚಟ್ಣಿ ಆಯಿತು,  ಒಗ್ಗರಣೆಯ ಅಲಂಕರಣ ಇರಲಿ.


ಈ ಹಿಟ್ಟನ್ನು ಗುಳಿಯಪ್ಪದಲ್ಲಿ ಎರೆದರೆ ಸಿಹಿ ಅಪ್ಪಂ ಆಯ್ತು,  ಉಳಿದ ಹಿಟ್ಟಿನಿಂದ ಸಂಜೆಯ ತಿನಿಸೂ ಆಯ್ತು ಅನ್ನಿ.








Saturday, 28 February 2026

ನಂಬಿಕೆ ಮತ್ತು ವಿಜ್ಞಾನ




ತಂಬುಳಿ ಬಂದಿದೆ,

ಉರಗೆ (ಒಂದೆಲಗ) ಯನ್ನು ಬೇಯಿಸಿ ತಿನ್ನಬಾರದು, ರಾತ್ರಿ ಹೊತ್ತೂ ಈ ತಂಬುಳಿ ಸೇವಿಸುವಂತಿಲ್ಲ,  ಹಿಂದಿನವರ ಹೇಳಿಕೆ. 

ಇದರ ಒಳಾರ್ಥವೇನು?


ಹಿಂದಿನವರ ಮಾತುಗಳಲ್ಲಿ ಕೇವಲ ನಂಬಿಕೆಗಳಷ್ಟೇ ಅಲ್ಲ, ಅದರ ಹಿಂದೆ ಬಹಳಷ್ಟು ವೈಜ್ಞಾನಿಕ ಹಾಗೂ ಆಯುರ್ವೇದದ ಸತ್ಯಗಳಿರುತ್ತವೆ.


ಒಂದೆಲಗವನ್ನು ಬೇಯಿಸುವಂತಿಲ್ಲ. ಒಂದೆಲಗದಲ್ಲಿರುವ ಔಷಧೀಯ ಗುಣಗಳು (ಮುಖ್ಯವಾಗಿ ಸ್ಮರಣಶಕ್ತಿ ಹೆಚ್ಚಿಸುವ ಅಂಶಗಳು), ವಿಟಮಿನ್ ಸಿ ಮತ್ತು ಸೂಕ್ಷ್ಮವಾದ ಪೋಷಕಾಂಶಗಳು  ಅತಿ ಹೆಚ್ಚು ತಾಪಮಾನಕ್ಕೆ ಗುರಿಯಾದಾಗ ಆವಿಯಾಗಿ ಅಥವಾ ನಾಶವಾಗಿ ಹೋಗುತ್ತವೆ. 


ಹಸಿ ಸೇವನೆಯೇ ಉತ್ತಮ. ಬೇಯಿಸುವುದರಿಂದ ಅದರ ಮೂಲ ಸತ್ವ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಅದನ್ನು ಹಸಿಯಾಗಿ ರುಬ್ಬಿ, ಮಜ್ಜಿಗೆ ಬೆರೆಸಿ ತಂಬುಳಿ ಮಾಡುವುದು ಅಥವಾ ಹಸಿ ಚಟ್ನಿ ಮಾಡುವುದು ರೂಢಿ. ಇದರಿಂದ ಅದರ ಶೇಕಡಾ ನೂರರಷ್ಟು ಲಾಭ ದೇಹಕ್ಕೆ ಸಿಗುತ್ತದೆ.


ರಾತ್ರಿ ಹೊತ್ತು ತಂಬುಳಿ ಸೇವಿಸುವಂತಿಲ್ಲ.  ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ,ತಂಬುಳಿಯನ್ನು ಮಜ್ಜಿಗೆ ಅಥವಾ ಮೊಸರು ಬಳಸಿ ಮಾಡಲಾಗುತ್ತದೆ. ಆಯುರ್ವೇದದ ಪ್ರಕಾರ, ಸೂರ್ಯಾಸ್ತದ ನಂತರ (ರಾತ್ರಿ ಹೊತ್ತು) ಮಜ್ಜಿಗೆ ಅಥವಾ ಮೊಸರು ಸೇವಿಸುವುದರಿಂದ ಶ್ವಾಸಕೋಶದಲ್ಲಿ ಕಫ ಶೇಖರಣೆಯಾಗುತ್ತದೆ. ಇದರಿಂದ ಶೀತ, ಕೆಮ್ಮು ಮತ್ತು ಗಂಟಲು ನೋವು ಬರುವ ಸಾಧ್ಯತೆ ಹೆಚ್ಚು. 

ಒಂದೆಲಗ ಮೂಲತಃ   ತಂಪುಗುಣವನ್ನು ಹೊಂದಿರುವ ಸೊಪ್ಪು. ಇದು ದೇಹದ ಉಷ್ಣತೆಯನ್ನು ತಗ್ಗಿಸುತ್ತದೆ. ರಾತ್ರಿಯ ತಂಪಾದ ವಾತಾವರಣದಲ್ಲಿ, ತಂಪು ಗುಣದ ಒಂದೆಲಗ ಮತ್ತು ಮಜ್ಜಿಗೆಯ ಮಿಶ್ರಣವನ್ನು ತಿಂದರೆ ದೇಹದ ಜೀರ್ಣಕ್ರಿಯೆ (ಅಗ್ನಿ) ನಿಧಾನವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದು ಮುಖ್ಯ.   .


ಹಿಂದಿನವರು ಪ್ರಕೃತಿ, ವಾತಾವರಣ ಮತ್ತು ನಮ್ಮ ದೇಹದ ಜೈವಿಕ ಗಡಿಯಾರಕ್ಕೆ (Biological clock) ತಕ್ಕಂತೆ ಯಾವ ಆಹಾರವನ್ನು, ಯಾವ ರೂಪದಲ್ಲಿ, ಯಾವ ಸಮಯದಲ್ಲಿ ತಿನ್ನಬೇಕು ಎಂದು ಬಹಳ ವೈಜ್ಞಾನಿಕವಾಗಿ ನಿಯಮಗಳನ್ನು ಮಾಡಿದ್ದರು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.









 

Sunday, 8 February 2026

ಚಕೋತಾ ರಸರುಚಿ




ತೋಟದಿಂದ ತಾಜಾ ಚಕೋತ ಬಂದಿದೆ.  ರಂಗಣ್ಣ ಕೊಯ್ದು ತಂದಿಟ್ಟದ್ದು.

ಸಿಪ್ಪೆ ಬಿಡಿಸಿ, ಎಸಳುಗಳನ್ನು ಬೇರ್ಪಡಿಸಿ ತಿನ್ನುವುದು ಸಾಮಾನ್ಯ ವಿಧಾನ.  

ನಮ್ಮದು ಹೊಸರುಚಿ ಆಗಬೇಡವೇ,  ಮಾಡೋಣ ಕೋಸಂಬರಿ.  ಹೇಗೇ?


ಚಕೋತಾ ಎಸಳು ಬಿಡಿಸಿ, 

ರುಚಿಗೆ ತಕ್ಕಷ್ಟು ಉಪ್ಪು, 

ಖಾರದ ಬಾಬ್ತು ಕಾಳುಮೆಣಸಿನ ಪುಡಿ, 

ಬೇಕಿದ್ದರೆ ನಿಂಬೆ ರಸ,

ಇದ್ದರೆ ಕೊತ್ತಂಬರಿ ಸೊಪ್ಪು,

ಪುಟ್ಟದೊಂದು ಒಗ್ಗರಣೆ…

ಇಷ್ಟಾದರೆ ಕೋಸಂಬರಿ ಆಯಿತು.


ಈಗ ಚಕೋತಾ ತಂಬುಳಿ ಮಾಡೋಣ.

ಚಕೋತಾ ಎಸಳುಗಳನ್ನು ಸೊಗಸಾಗಿ ಬಿಡಿಸುವುದು ಅವಶ್ಯವಿದೆ.

ಉಳಿದಂತೆ ಕಾಯಿತುರಿ,  ಸಿಹಿಮಜ್ಜಿಗೆ ಯಾ ಸಿಹಿ ಮೊಸರು,  ಹುರಿದ ಜೀರಿಗೆ, ಕಾಳುಮೆಣಸು, ರುಚಿಗೆ ಉಪ್ಪು ಕೂಡಿ ನುಣ್ಣಗೆ ಅರೆಯಿರಿ.   ಒಗ್ಗರಣೆಯೊಂದಿಗೆ ಎಸಳುಗಳನ್ನು ಬೆರೆಸುವಲ್ಲಿಗೆ ತಂಬುಳಿ ಸಿದ್ಧವಾಯಿತು.  ಕುದಿಸುವುದೂ ಬೇಡ, ನಾಳೆಗೆ, ರಾತ್ರಿಗೆ ಇಡುವುದಕ್ಕೂ ಇಲ್ಲ.

ಇನ್ನೀಗ ಚಕೋತಾ ಸಿಪ್ಪೆ ಉಳಿದಿದೆ.  ಅದನ್ನೂ ಸವಿರುಚಿಯಾಗಿಸೋಣ.

ಚಕೋತಾ ಸಿಪ್ಪೆ ತುಂಬ ಕಹಿ,  ಕಹಿ ತೆಗೆಯೋಣ.

ಹಸಿರು ಬಣ್ಣದ ಸಿಪ್ಪೆ ಹೆರೆದು ತೆಗೆಯಿರಿ, ಬೆಳ್ಳಗಿನ ತಿರುಳು ಮಾತ್ರ ನಮಗೆ ಸಾಕು,  ಕತ್ತರಿಸಿ ಚೆನ್ನಾಗಿ ಬೇಯಿಸಿ, ನೀರು ಬಸಿದು, ತಿರುಳನ್ನೂ ಹಿಂಡಿ ಇಟ್ಟುಕೊಳ್ಳಿ.

ಒಗ್ಗರಣೆಗಿಟ್ಟು,  ಉಪ್ಪು ಹುಣಸೆ ರಸ, ಬೆಲ್ಲ ಹಾಗೂ ನೀರು ಎರೆದು ಕುದಿಸಿದ ದ್ರಾವಣಕ್ಕೆ ಹಿಂಡಿ ಇರಿಸಿದ ಚಕೋತಾ ಸಿಪ್ಪೆಯ ಚೂರುಗಳನ್ನು ಸೇರಿಸುವಲ್ಲಿಗೆ ಗೊಜ್ಜು ಸಿದ್ಧವಾಗಿದೆ.

ಈ ಗೊಜ್ಜು ಇನ್ನೂ ಪರಿವರ್ತಿತವಾಗಲಿದೆ.  ಖಾರ ಬೇಕಿದ್ದರೆ ಮೆಣಸ್ಕಾಯಿ,  ಸಿಹಿ ಸಾಕು ಎಂದಿದ್ದರೆ ಸಾಸಮೆಯೂ ಆಗುತ್ತದೆ.

ತೆಂಗಿನ ತುರಿಯೊಂದಿಗೆ ಸಾಸಿವೆ, ಬೆಲ್ಲ, ಹಸಿ ಮೆಣಸು ಅರೆದು, ಸಿಹಿ ಮಜ್ಜಿಗೆ ಎರೆಯುವಲ್ಲಿಗೆ ಸಾಸಮೆ ಬಂದಿದೆ.

ಎಳ್ಳು ಹುರಿದು, ಸಾಂಬಾರ ಮಸಾಲೆ ಹಾಗೂ ತೆಂಗಿನ ತುರಿ ಅರೆದು ಕೂಡುವುದು.  ಬೆಲ್ಲ ಹಾಕಲೇ ಬೇಕು.  ಚೆನ್ನಾಗಿ ಕುದಿಸಿ, ಕರಿಬೇವಿನ ಒಗ್ಗರಣೆ ಬೀಳಲೇ ಬೇಕು,  ಒಗ್ಗರಣೆಗೂ ತೆಂಗಿನೆಣ್ಣೆಯೇ ಆಗಬೇಕು.  ಇದೀಗ ಮೆಣಸ್ಕಾಯಿ.

ಬೇಯಿಸಿದ ಸಿಪ್ಪೆಯನ್ನು ತಂಬುಳಿಯಾಗಿಸುವುದೂ ನಮ್ಮ ಕೈಯಲ್ಲಿ ಇದೆ ಎಂದು ಬೇರೆ ಹೇಳಬೇಕಿಲ್ಲ.


ತಂಬುಳಿ ಊಟಕ್ಕೆ ತುಂಬಾ ತಂಪಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ರಾಮಬಾಣ. ಬಿಸಿ ಅನ್ನದ ಜೊತೆ ಊಟ ಮಾಡಲು ಇದು ತುಂಬಾ ರುಚಿ.

ಚಕೋತದಲ್ಲಿ ನಾರಿನಂಶ ಹೆಚ್ಚಿರುವುದರಿಂದ, ವಯಸ್ಸಾದಂತೆ ಕಾಡುವ ಮಲಬದ್ಧತೆಯಂತಹ ಸಮಸ್ಯೆಗೆ ಸೂಕ್ತ ಮನೆಮದ್ದು.

ವಿಟಮಿನ್ ಸಿ ಹೇರಳವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಾಯಕ.




ಟಿಪ್ಪಣೆ:

ದಿನಾಂಕ 23, ಫೆಬ್ರವರಿ.  ಬರಹ ಮುಂದುರಿದಿದೆ , ಒಂದು ಫೋಟೋ ಕೂಡಾ ಬಂದಿದೆ. 


ಒಂದು ಸಣ್ಣ ಗುಟ್ಟು: ಸಿಪ್ಪೆಯ ಕಹಿ ತೆಗೆಯುವಾಗ, ಮೇಲಿನ ಹಸಿರು ಸಿಪ್ಪೆಯನ್ನು ಪೂರ್ತಿಯಾಗಿ ಹೆರೆಯದೆ, ಅಲ್ಲಲ್ಲಿ ಸ್ವಲ್ಪ ಉಳಿಸಿಕೊಂಡರೆ ಅದರ ರುಚಿಯೇ ಬೇರೆ! ಈ ಹಸಿರು ಸಿಪ್ಪೆಯಲ್ಲಿರುವ ನೈಸರ್ಗಿಕ ತೈಲಾಂಶವು (Essential oils) ತಂಬುಳಿಗೆ ಅದ್ಭುತವಾದ ನಿಂಬೆಯಂತಹ ಸುವಾಸನೆ ನೀಡುತ್ತದೆ. ಊಟದ ನಂತರ ಬಾಯಿ ವಾಸನೆ ತೊಲಗಿಸಲು ಮಾರುಕಟ್ಟೆಯಲ್ಲಿ ಸಿಗುವ ಕೃತಕ ವಸ್ತುಗಳಿಗಿಂತ, ಈ ನೈಸರ್ಗಿಕ ಘಮ ಎಷ್ಟೋ ಪಾಲು ಹಿತ ಮತ್ತು ಆರೋಗ್ಯಕರ. ಇದೊಂದು ರೀತಿ ಊಟದ ಜೊತೆಯೇ ಸವಿಯುವ 'ನೈಸರ್ಗಿಕ ಮೌತ್ ಫ್ರೆಶ್ನರ್'!







Saturday, 24 January 2026

ಚಿತ್ರ ಕವನ




 

ಏನೋ ಕೊರೋನಾ ಅಂತೆ

ಯಾರನ್ನೂ ಮುಟ್ಟಬಾರದಂತೆ

ಶಾಲೆಗೆಂತು ಹೋಗಲಿ

ಗೆಳೆಯರಿಲ್ಲ ಆಟವಿಲ್ಲ

ಪಾಠ ಓದು ಇಲ್ಲ

ಮೊಬೈಲು ಪಾಠಪಟ್ಟಿ ಓದಲೆಂತು

ತಿಳಿಯಲಾರೆ ಹೇಳಲಾರೆ

ಅಕ್ಕಾ, ಕಾಣೆ ನಾನು ಮೊಬೈಲು



Friday, 16 January 2026

ಅಡುಗೆ ~ ಆರೋಗ್ಯ




 

ಅಡುಗೆಯಲ್ಲಿ ಆರೋಗ್ಯಪಾಲನೆ, ಇದು ಗೃಹಿಣಿಯ ಕರ್ತವ್ಯ.  ಗಂಡಿನೊಂದಿಗೆ ಸಮಾನತೆ ಹೊಂದಿರುವ ಮಹಿಳೆ ಹೊರಗೂ ಒಳಗೂ ದುಡಿಯುವವಳಾಗಿದ್ದಾಳೆ.  ಒತ್ತಡದ ಜೀವನಶೈಲಿಯಿಂದಾಗಿ ಶುಚಿರುಚಿಯಾಗಿ ಅಡುಗೆ ಮಾಡಿ ಇಡುವುದರಲ್ಲಿಯೂ ಪ್ರಾವೀಣ್ಯತೆ ಇರಲೇ ಬೇಕು.  ಹೀಗಿರುವಾಗ ಕೆಲವು ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳೋಣ.


ಕುಡಿಯುವ ನೀರು:

ನೀರನ್ನು ಸ್ವಚ್ವವಾದ ಸ್ಟೀಲ್ ಯಾ ತಾಮ್ರದ ತಂಬಿಗೆಯಲ್ಲಿ ಶೇಖರಿಸಿ ಇಡುವವರಾಗಿ.  ಮಣ್ಣಿನ ಹೂಜಿ ಅತ್ಯುತ್ತಮ.  ಪ್ಲಾಸ್ಟಿಕ್ ಜಾಡಿ ಯಾ ಬಾಟಲ್ ಸರ್ವಥಾ ಕೂಡದು.


ಪಾತ್ರೆಗಳೇ ಪ್ರಮುಖ ಶತ್ರುಗಳು:

ಇಂದು ಪ್ರತಿ ಮನೆಯಲ್ಲೂ ರಾರಾಜಿಸುತ್ತಿರುವ 'ನಾನ್-ಸ್ಟಿಕ್' (Non-stick) ತವಾಗಳು ಮತ್ತು ಅಲ್ಯೂಮಿನಿಯಂ ಕುಕ್ಕರ್‌ಗಳು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇವು ಅತಿಯಾಗಿ ಬಿಸಿಯಾದಾಗ ಆಹಾರದೊಂದಿಗೆ ರಾಸಾಯನಿಕಗಳನ್ನು ಬೆರೆಸುತ್ತವೆ, ಇದು ದೀರ್ಘಕಾಲದಲ್ಲಿ ಕ್ಯಾನ್ಸರ್ ಮತ್ತು ಹಾರ್ಮೋನ್ ಸಮಸ್ಯೆಗಳಿಗೆ ದಾರಿಯಾಗಬಹುದು.

ಪರಿಹಾರವೇನು?

ನಮ್ಮ ಬೇರುಗಳತ್ತ ಮರಳುವುದೇ ಇದಕ್ಕೆ ಏಕೈಕ ಪರಿಹಾರ.

• ಮಣ್ಣಿನ ಪಾತ್ರೆ: ಇದು ಪ್ರಕೃತಿಯ ಕೊಡುಗೆ. ಇದರಲ್ಲಿ ಅಡುಗೆ ಮಾಡಿದರೆ ಆಹಾರದ ಪೋಷಕಾಂಶಗಳು ಶೇ.೧೦೦ ರಷ್ಟು ಉಳಿಯುತ್ತವೆ.

• ಕಬ್ಬಿಣದ ಪಾತ್ರೆ (Cast Iron): ಇವುಗಳಲ್ಲಿ ಅಡುಗೆ ಮಾಡುವುದರಿಂದ ದೇಹಕ್ಕೆ ನೈಸರ್ಗಿಕವಾಗಿ ಕಬ್ಬಿಣದ ಅಂಶ ದೊರೆಯುತ್ತದೆ, ಇದು ರಕ್ತಹೀನತೆಯನ್ನು ತಡೆಯಲು ಸಹಕಾರಿ.

• ಹಿತ್ತಾಳೆ ಮತ್ತು ಕಂಚು: ರೋಗನಿರೋಧಕ ಶಕ್ತಿ ಹೆಚ್ಚಿಸಲು ಇವು ಅತ್ಯುತ್ತಮ.


ಪ್ಲಾಸ್ಟಿಕ್ ಮುಕ್ತವಾಗಲಿ:

ಬಿಸಿ ಆಹಾರವನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಹಾಕಿಡುವುದು ಅಥವಾ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದು ವಿಷ ಸೇವನೆಗೆ ಸಮ. ಇದರ ಬದಲಿಗೆ ಸ್ಟೀಲ್, ಗಾಜು ಅಥವಾ ಪಿಂಗಾಣಿ ಪಾತ್ರೆಗಳನ್ನು ಬಳಸುವುದು ಸುರಕ್ಷಿತ. ಹಾಗೆಯೇ, ಅಡುಗೆಗೆ ಬಳಸುವಾಗ ರಿಫೈನ್ಡ್ (Refined) ಎಣ್ಣೆಯ ಬದಲು 'ಗಾಣದ ಎಣ್ಣೆ', ಬಿಳಿ ಸಕ್ಕರೆಯ ಬದಲು 'ಬೆಲ್ಲ' ಮತ್ತು ಪುಡಿ ಉಪ್ಪಿನ ಬದಲು 'ಕಲ್ಲುಪ್ಪು' ಬಳಸಿದರೆ ಅರ್ಧದಷ್ಟು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಮುಕ್ತಾಯ:

ಬದಲಾವಣೆ ರಾತ್ರೋರಾತ್ರಿ ಸಾಧ್ಯವಿಲ್ಲದಿರಬಹುದು. ಆದರೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯವಾಗಬೇಕಾದರೆ, ನಮ್ಮ ಬದಲಾವಣೆ ಅಡುಗೆಮನೆಯಿಂದಲೇ ಆರಂಭವಾಗಲಿ. ಇಂದೇ ಒಂದು ನಾನ್-ಸ್ಟಿಕ್ ಪಾತ್ರೆಯನ್ನು ಅಥವಾ ಪ್ಲಾಸ್ಟಿಕ್ ಡಬ್ಬವನ್ನು ಹೊರಹಾಕಿ, ಆರೋಗ್ಯಕರ ಆಯ್ಕೆಯನ್ನು ಅಳವಡಿಸಿಕೊಳ್ಳೋಣ.



Thursday, 1 January 2026

ಬಾನಂಚಿನ ಭರವಸೆ





ಗೆರೆಗಳು 

ನಿರಾಡಂಬರ ಚೆಲುವು

ಆಹ ಬೆಳ್ಳಿ ಕೂದಲ ನಲಿವು

ಸೀರೆಯಲ್ಲಿದೇ ನಮ್ಮ ಒಲವು

ಮುಡಿಯ ತುಂಬ ಮಲ್ಲಿಗೆ

ಕಣ್ಣಲೊಂದು ಹೂ ನಗೆ