Pages

Ads 468x60px

Featured Posts

.

Wednesday, 20 May 2026

ಪಚ್ಚಬಾಳೆಯ ದೋಸೆ

 



ಸಂಜೆ ಡೈರಿಯಿಂದ ಹಾಲು ತರುವಾಗ ಅಗತ್ಯವಿರುವ ಹಣ್ಣು ಹಂಪಲು, ತರಕಾರಿ ತರಿಸುವ ರೂಢಿ.   ಆ ಸಮಯಕ್ಕೆ ನಮ್ಮ ಡ್ರೈವರು ರಾಜಣ್ಣ “ ಹಾಲು ನಾನೇ ತರ್ತೇನೆ. “. ಎಂದು ಹೊರಟ.  ಅವನಿಗೆ ನಮ್ಮ ಕನ್ನಡ, ತುಳು ಬಾರದು,  ಹಿಂದಿಯಲ್ಲಿ ವದರಬೇಕು.   ನನ್ನದು ಹೈಸ್ಕೂಲ್ ಹಿಂದಿ, ಉಳಿದಂತೆ ಹಿಂದಿ ಸಿನಿಮಾ,  ಧಾರಾವಾಹಿಗಳೇ ನಮ್ಮ ಪಠ್ಯ.


ನೇಂದ್ರ ಬಾಳೆ ಹಣ್ಣು ತಾ ಅಂದಿದ್ದಕ್ಕೆ ಪಚ್ಚಬಾಳೆ ಬಂದಿದೆ.  ನನಗೂ ಮೊದಲು ತಿಳಿಯಲಿಲ್ಲ.   ತಿನ್ನಬಹುದಿತ್ತು,  ನನಗೋ ಶೀತಗಾಳಿ ಬಡಿದಿದೆ.  ತಿನ್ನಲು ರುಚಿ ಆದರೂ ಶೀತ ಜಾಸ್ತಿ ಆದೀತು.


ಹೊರಗೆ ಮೊಬೈಲ್ ಹಿಡಿದು ಕೂತಿದ್ದ ರಾಜಣ್ಣ,  ಅವನಿಗೇ ಎರಡು ಹಣ್ಣು ಸಂದಾಯ ಆಯ್ತು.  ನಮ್ಮವರೂ ಒಂದು ಹಣ್ಣು ತಿಂದರು.


ತಿಂಡಿ ತಿನಿಸು ತಯಾರಿಕೆಗೆ ಪಚ್ಚಬಾಳೆ ಉತ್ತಮ,  ಬನ್ಸ್, ಪೂರಿ, ಚಪಾತಿ ಎಲ್ಲ ನೆನಪಾಯ್ತು,  ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಯಾಕಾದರೂ ಮಾಡಬೇಕು, ಮಕ್ಕಳು, ಮೊಮ್ಮಕ್ಕಳು ಬೆಂಗಳೂರಿನ ವಾಸ್ತವ್ಯ.


ದೋಸೆ ಮಾಡಿಯೇ ಸಿದ್ಧ,  ಒಂದೂವರೆ ಲೋಟ ಅಕ್ಕಿ ನೀರಿಗೆ ಬಿತ್ತು,  ತೆಂಗಿನ ಕಾಯಿ ಒಡೆದು ಅರ್ಧ ಕಡಿ ತುರಿದೂ ಆಯ್ತು.  ತುರಿದ ಕಾಯಿಯಲ್ಲಿ ಅರೆವಾಸಿ ನಾಳೆಯ ಚಟ್ಣಿಗೆ ತೆಗೆದಿರಿಸಲಾಯಿತು.  ಒಂದು ಚಮಚ ದಪ್ಪ ಅವಲಕ್ಕಿ ಇರಲಿ,  ಅದನ್ನೂ ನೀರಿನಲ್ಲಿ ಮುಳುಗಿಸಿ ಇಡುವುದು.


ರಾತ್ರಿ ಊಟದ ನಂತರ ಎಲ್ಲವನ್ನೂ ನುಣ್ಣಗೆ ಅರೆಯುವುದು,  ರುಚಿಗೆ ಉಪ್ಪು,  ತುಂಡು ಬೆಲ್ಲ ಕೂಡಿಸಿ ಇಡುವುದು,  ಮುಂಜಾನೆ ದೋಸೆ ಎರೆಯುವುದು.


ಈ ಹಿಟ್ಟಿನಿಂದ ಸೆಟ್ ದೋಸೆಯೂ ಆದೀತು, ತೆಳ್ಳಗೆ ಪೇಪರ್ ದೋಸೆಯೂ ನಡೆದೀತು,  ಗುಳಿಯಪ್ಪವೂ ಭಲೇ ಭಲೇ ಅಂದೀತು.


ಬರೆಯಲು ಮರೆತದ್ದು,  ಅರೆಯುವಾಗ ಮೂರು ಬಾಳೆಹಣ್ಣು ಕೂಡಿ ಅರೆಯಿರಿ.  







Wednesday, 13 May 2026

ಶರಬತ್ ಹಣ್ಣು

 


ಆರೇಳು ವರ್ಷಗಳ ಹಿಂದಿನ ಮಾತು,  ನಾಗಬನ ಜೀರ್ಣೋದ್ಧಾರಗೊಂಡು ಭಕ್ತಮಹನೀಯರು ಪುಳಕಿತರಾದಾಗ, ಇಲ್ಲೊಂದು ಹಸಿರುವನ ನಿರ್ಮಾಣವಾಗಿ ಬಿಟ್ಟಿತು,  ವಿಧ ವಿಧ ಸಸ್ಯಗಳು ಓಡೋಡಿ ಬಂದವು.  ಅವುಗಳಲ್ಲಿ ಈ ಶರಬತ್ ಬಳ್ಳಿಯೂ ಸೇರಿತ್ತು.   ಅದರಲ್ಲಿಯೂ ಎರಡು ಬಣ್ಣ,  ಹಸಿರು ಹಾಗೂ ನಸು ನೇರಳೆ,   ನಾಗದೇವರಿಗೆ ತಂಪು ಇರಬೇಕು,  ಶರಬತ್ ಬಳ್ಳಿಯೂ ಚಪ್ಪರದಂತೆ ಹಬ್ಬಿತು,   ಇಂತಹ ಸುಡುಬೇಸಿಗೆಯಲ್ಲಿ ತೊನೆದಾಡುವ ಹಣ್ಣುಗಳು,  ಹೂವುಗಳ ನೋಟವೇ ಕಣ್ಣು ತಣಿಸುವಂತಹುದು,   ನಮಗೂ ಶರಬತ್ ಹಣ್ಣು ಹೊಸದು, ಹಾಗೇನೇ ಕತ್ತರಿಸಿ, ಸಕ್ಕರೆ ಬೆರೆಸಿ ತಿಂದು ನೋಡಿದ್ದೂ ಆಯ್ತು,  “ಪರಿಮಳವೇನೋ ಮಸ್ತ್ … ಹುಳಿಯೂ ಉಂಟಲ್ಲ..” ನಮ್ಮವರ ಗೊಣಗಾಟ.   “ ಹೆಚ್ಚು ಮಾರ್ಕು ಇರೂದು ಒಳಗಿನ ಬೀಜ ಗೊತ್ತಾ,  ಅದನ್ನೂ ತಿನ್ನಿ.” ನನ್ನ ಒತ್ತಾಯ.


ಮಳೆಗಾಲ ಆರಂಭದ ನಂತರ, ಜಡಿಮಳೆಗೆ ಅಂಗಳಕ್ಕೂ ಇಳಿಯುವವರು ನಾವಲ್ಲ,  ಒಂದು ಹಂತದ ಮಳೆಯ ಅವತರಣ ಮುಗಿದು,  ಶ್ರಾವಣ ಬಂದ ನಂತರ ತೋಟದ ಕೆಲಸಕ್ಕೆ ಕಾರ್ಮಿಕರ ಪಡೆ ಬಂದಿದೆ.   ಬಂದವರೇ ಅನಗತ್ಯ ಸೊಪ್ಪುಸದೆ, ಕಳೆಗಿಡಗಂಟಿಗಳೆಲ್ಲ ಕತ್ತಿಪ್ರಹಾರಕ್ಕೆ ನೆಲಕಚ್ಚಿವೆ,  ಆ ಸಮಯದಲ್ಲಿ ನಮ್ಮ ಶರಬತ್ ಬಳ್ಳಿಯೂ ಹೋಯ್ತು. ನೆಟ್ಟವರು ಯಾರೋ, ಕಡಿದವರು ಯಾರೋ, ನಮಗೆ ಶರಬತ್ ಕುಡಿಯುವ ಯೋಗ ತಪ್ಪಿತು.


ಶ್ರಾವಣ ಬಂದಾಗ, ಮೊದಲು ಬರುವುದೇ ನಾಗಪಂಚಮಿ,  ನಮ್ಮ ಬಾಯಾರು ಕಂಬಳಗುತ್ತು ಮನೆತನದ ಬಂಟ ಸಮುದಾಯ ಬಾಂಧವರು ಬಂದು ಸೇರಿ ನಾಗಪಂಚಮಿ ಆಚರಣೆ.   ಸಸಿ ನೆಟ್ಟ ಲಿಂಗಪ್ಪ ಶೆಟ್ಟಿ ಪುನಃ ತಂದು ನೆಟ್ಟ ಶರಬತ್ ಬಳ್ಳಿಯನ್ನು ನಾವೂ ಜಾಗರೂಕತೆಯಿಂದ ಪಾಲನೆ, ಪೋಷಣೆ ಮಾಡಿದ ಸಾಹಸದಿಂದ ಈಗ ಶರಬತ್ ಕುಡಿದಾಯಿತು.


ಈಗ ಆ ಹೊಸ ಬಳ್ಳಿ ನಮ್ಮ ಹಿತ್ತಲಿನ ಪೇರಳೆ ಮರವನ್ನು ಅಪ್ಪಿಕೊಂಡು ಬೆಳೆಯುತ್ತಿದೆ. ಮರದ ಆಸರೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಹಬ್ಬಿರುವ ಈ ಬಳ್ಳಿಯಲ್ಲಿ ಕೃಷ್ಣಕಮಲದಂತಹ ಅದ್ಭುತ ಹೂವುಗಳು ಅರಳಿದಾಗ ಪ್ರಕೃತಿಯ ಕಲಾಕೃತಿಗೆ ಬೆರಗಾಗಲೇಬೇಕು. ಕೇವಲ ಕಣ್ಣಿಗಷ್ಟೇ ಅಲ್ಲ, ಈ ಶರಬತ್ ಹಣ್ಣು (ಪ್ಯಾಷನ್ ಫ್ರೂಟ್) ಆರೋಗ್ಯಕ್ಕೂ ದೊಡ್ಡ ಆಸರೆ. ಇದರಲ್ಲಿರುವ ವಿಟಮಿನ್ ಸಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಇದರ ಬೀಜ ಮತ್ತು ತಿರುಳು ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ರಕ್ತದೊತ್ತಡ ನಿಯಂತ್ರಿಸುವ ಮತ್ತು ಆಯಾಸ ನೀಗಿಸುವ ಗುಣವೂ ಇದರಲ್ಲಿದೆ.


ಮೊನ್ನೆ ರಂಗಣ್ಣ ತಂದುಕೊಟ್ಟ ತಾಜಾ ಹಣ್ಣುಗಳನ್ನು ಕತ್ತರಿಸಿ, ಅದರ ರಸ ತೆಗೆದು ಜ್ಯೂಸ್ ಮಾಡಿ ಸವಿದಾಗ, ಅಂದಿನ ಆ 'ಗೊಣಗಾಟ'ದ ನೆನಪಾಗಿ ಮುಖದಲ್ಲಿ ನಗು ಮೂಡಿತು. ಹುಳಿ-ಸಿಹಿ ಬೆರೆತ ಆ ತಂಪು ಪಾನೀಯ ಗಂಟಲೊಳಗೆ ಇಳಿಯುತ್ತಿದ್ದಂತೆ, ಒಮ್ಮೆ ಕಳೆದುಕೊಂಡರೂ ಪ್ರಕೃತಿ ಮತ್ತೆ ಒಲಿದು ನೀಡಿದ ಈ ಉಡುಗೊರೆಗೆ ಮನಸ್ಸು ತುಂಬಿ ಬಂತು.



Wednesday, 6 May 2026

ಗೋಧಿ ಪಾಯಸ

 


ಗೋಧಿಕಡಿ ಇಡ್ಲಿ, ದೋಸೆ ಸವಿದಾಯ್ತು,  ಅದರೂ ಮಧುಕರ ತಂದುಕೊಟ್ಟ ಮಂಗಳೂರಿನ ಬಾಳಿಗಾ ಸ್ಟೋರ್ ನ ಗೋಧಿಕಡಿ ಮುಗಿದಿರಲಿಲ್ಲ.  ಹಿರಣ್ಯ ದೇವಸ್ಥಾನದಲ್ಲಿ ಸವಿದ ಅಕ್ಕಿಪಾಯಸದ ಮಾದರಿಯಲ್ಲೇ ಗೋಧಿ ಪಾಯಸ ಮಾಡಿದರಾದೀತು.  

ಗೋಧಿ ಪಾಯಸಕ್ಕೆ ಬೆಲ್ಲವೇ ಸೂಕ್ತ,  ಎರಡು ಅಚ್ಚು ಸಾಕಾದೀತು ಎಂದು ಬೆಲ್ಲದ ಡಬ್ಬ ತೆರೆದಾಗ, ಬೆಲ್ಲ ದ್ರವರೂಪಕ್ಕೆ ಹೊರಳುವಂತಿದೆಯಲ್ಲ!  ಬಹುಶಃ ಸೆಕೆಗೆ ಹೀಗಾಗಿದೆ. ಬೆಲ್ಲವನ್ನು ಕೈಗೆತ್ತಿಕೊಂಡಾಗ ಬೆಲ್ಲದ ಕಡು ವರ್ಣವನ್ನು ಕಳೆದುಕೊಂಡಂತೆ, ಸಕ್ಕರೆಯ ಅಚ್ಚಿನಂತೆ ಭಾಸವಾಯಿತು.  ಗಟ್ಟಿಕಲ್ಲಿನಂತೆ ಇದ್ದ ಅಚ್ಚನ್ನು ಕಷ್ಟಪಟ್ಟು ಚೂರಿಯಲ್ಲಿ ತುಂಡರಿಸಿ ಬಾಯಿಗೆ ಹಾಕಿದಾಗ ಇದು ಸಕ್ಕರೆ,  ಬೆಲ್ಲವಲ್ಲ ಎಂದು ತಿಳಿಯಿತು.  ಸಕ್ಕರೆ ಇರುವಾಗ ನಾನೇಕೆ ಈ ಬೆರಕೆ ಸಕ್ಕರೆ ಉಪಯೋಗಿಸಲಿ?  ಇನ್ನೂ ಬೇರೇನನ್ನು ಸೇರಿಸಿರುತ್ತಾರೋ ತಿಳಿಯದು.


ಅಂತೂ ಮನೆಯ ಸದಸ್ಯರೊಂದಿಗೆ ಸಮಾಲೋಚಿಸಿ ಬೆಲ್ಲವನ್ನು ಬಿಸಾಡುವ ತೀರ್ಮಾನಕ್ಕೆ ಬರಲಾಯಿತು.

ನಿನ್ನೆ ರಂಗಣ್ಣ ಬಂದಿದ್ದ,  “ನೋಡೂ ಬೆಲ್ಲ ಹೀಗಾಗಿದೆ,   ಈಗ ಅಂಗಡಿಯಿಂದ ಕೇವಲ ಅರ್ಧ ಕಿಲೋ ಬೆಲ್ಲ ತಂದ್ಕೊಂಡು. “

ರಂಗಣ್ಣ ಕಲಬೆರಕೆ ಬೆಲ್ಲವನ್ನು ತೆಂಗಿನ ಮರದ ಬುಡಕ್ಕೆ ಚೆಲ್ಲಿ ಬಂದ,  ಹೊಸದಾದ ಬೆಲ್ಲವೂ ಬಂದಿತು.  ಇನ್ನೀಗ ಪಾಯಸದ ವ್ಯವಹಾರ ನೋಡಿಕೊಳ್ಳೋಣ.



ನಿಧಾನಗತಿಯಲ್ಲಿ ಬೇಯುವ ಗೋಧಿಗೆ ಕುಕ್ಕರ್ ಅವಶ್ಯವಿದೆ.   ಇಬ್ಬರಿಗೆ ಬೇಕಾಗುವಷ್ಟೇ ಪಾಯಸ ಮಾಡಬೇಕಾಗಿದೆ.  ಐದು ಚಮಚ ಗೋಧಿ ಕಡಿ ಅಳೆಯಿರಿ.  ಕುಕ್ಕರಿಗೆ ಮೂರು ದೊಡ್ಡ ಲೋಟ ನೀರು ಎರೆಯಿರಿ.

ದೊಡ್ಡ ಉರಿಯಲ್ಲಿ ಮೂರು ಸೀಟಿ ಹಾಕಲಿ.  ನಂತರ ಉರಿಯನ್ನು ಕನಿಷ್ಠ ಡಿಗ್ರಿಯಲ್ಲಿರಿಸಿ,  ಹತ್ತು ನಿಮಿಷ ಬಿಟ್ಟು ಉರಿಯನ್ನು ಆರಿಸಿ,  ಇಂತಹ ವ್ಯವಹಾರಗಳಿಗೆ ಇಂಡಕ್ಷನ್ ಸ್ಟವ್ ಸೂಕ್ತ.

ಒಂದೇ ಸ್ಟೀಲ್ ಕುಕರ್ ಇದ್ದುದರಿಂದ ಮೊದಲು ಗೋಧಿಯನ್ನು ಬೇಯಿಸಿ,  ಅದನ್ನು ಇನ್ನೊಂದು ದಪ್ಪ ತಳದ ಸ್ಟೀಲ್ ಪಾತ್ರೆಗೆ ಬದಲಿಸಿದ್ದೂ ಆಯ್ತು, ಎರಡು ಅಚ್ಚು ಬೆಲ್ಲ ಹಾಕಿರಿಸುವುದು, ನಧಾನಗತಿಯಲ್ಲಿ ಕರಗುತ್ತಿರಲಿ.  ಇದೀಗ ಕುಕರ್ ಅನ್ನ ಬೇಯಿಸಲು ಹೊರಟಿದೆ ಅನ್ನಿ.


ಅರ್ಧ ತೆಂಗಿನಕಾಯಿ ತುರಿದು ದಪ್ಪ ಹಾಲು ತೆಗೆಯಿರಿ,  ನೀರುಕಾಯಿಹಾಲನ್ನು ಬೆಲ್ಲ ಕರಗುತ್ತಲಿರುವ ಪಾಯಸದ ತಪಲೆಗೆ ಎರೆಯಿರಿ.

ದ್ರಾಕ್ಷಿ, ಗೋಡಂಬಿ,  ಏಲಕ್ಕಿಗಳನ್ನು ಸಿದ್ಧಪಡಿಸಿ,  ನನ್ನ ಬಳಿ ಪಿಸ್ತಾ ಇದ್ದಿತು,  ಅದನ್ನೇ ನಾಲ್ಕು ಚೂರು ಹಾಕುವುದು.

ಅನ್ನದ ಕೆಲಸ ಆಯ್ತು,  ಇದೀಗ ಇಂಡಕ್ಷನ್ ಸ್ಟವ್ ಪಾಯಸ ಕುದಿಸಲು ತಯಾರ್ ಎಂದಿತು.

ಬೆಲ್ಲ ಕರಗಿ ಸಾಂದ್ರವಾಗಬೇಕಿದೆ.   ಗರಿಷ್ಠ ಉಷ್ಣತೆಯಲ್ಲಿ ಕುದಿಸುತ್ತಾ, ಸೌಟಿನಲ್ಲಿ ಕೆದಕುತ್ತಾ,  ಉಷ್ಣತೆಯನ್ನು ಕಡಿಮೆ ಮಾಡುತ್ತಾ ಇದ್ದಂತೆ, ಮೆತ್ತಗೆ ಬೆಂದಂತಹ ಪಾಯಸದ ದ್ರಾವಣಕ್ಕೆ, ದಪ್ಪ ಕಾಯಿಹಾಲು ಎರೆಯುವ ಸಮಯ ಬಂದಿದೆ.   ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿಗಳಿಂದ ಅಲಂಕರಿಸೋಣ.  ಸಾಲದೂ ಎಂಬಂತೆ ಏಲಕ್ಕಿ, ಪಿಸ್ತಾ…


ಮರೆತೇ ಬಿಟ್ಟಿದ್ದೆ,  ಮಧುಕರ ತಂದುಕೊಟ್ಟಂತಹ ವೆನಿಲಾ ಕೋಡುಗಳು, ಮೊನ್ನೆ ತಾನೇ ತಂದಿದ್ದ,  ನನ್ನ ಬಳಿ ಅಡಿಕೆತೋಟದಲ್ಲಿ ಆದಂತಹ ವೆನಿಲಾ ದಾಸ್ತಾನೂ ಇತ್ತು,  ಹೊಸತು ಬಂದಿರುವಾಗ ಹಳೆಯದರ ಹಂಗೇಕೆ ಅಂದುಕೊಳ್ಳುತ್ತ  ಎರಡು ಇಂಚು ಉದ್ದ ವೆನಿಲಾ ಕತ್ತರಿಸಿ ಗೋಧಿ ಬೇಯುವಾಗಲೇ ಹಾಕಿದ್ದನ್ನು ಬರೆಯದಿದ್ದರೆ ನನ್ನ ಸ್ಪೆಶಲ್ ಪಾಯಸದ ಸವಿ ಓದುಗರಿಗೆ ತಿಳಿಯುವುದಾದರೂ ಹೇಗೆ?  ವೆನಿಲಾ ಸ್ವಾದದ ಪಾಯಸ ಸಿದ್ಧವಾಗಿದೆ.



Wednesday, 15 April 2026

ಪಾಲ್ಪಾಯಸಂ

 

ನಿನ್ನೆ ಹಿರಣ್ಯ ದೇಗುಲದಲ್ಲಿ ಸಂಕ್ರಾಂತಿಯ ಸಡಗರ,  ವಿಷು ಸಂಕ್ರಾಂತಿಯಾದುದರಿಂದ ಭಕ್ತಾದಿಗಳ ದಟ್ಟಣೆ.  ಮುಂಜಾನೆಯಿಂದಲೇ ಪೂಜೆ ಪ್ರಾರಂಭ,  ಪಕ್ಕದಲ್ಲೇ ಕೆಳಗೆ ನಾಗಬನ, ಅಲ್ಲಿಯೂ ಪೂಜಾಕೈಂಕರ್ಯ.   ಅಪರಾಹ್ನ ಕಾಲದ ಪೂಜಾ ನಂತರ ಅನ್ನ ಪ್ರಸಾದ.  ದೇವಸ್ಥಾನದ ಊಟವೆಂದರೆ ಅನ್ನ,ಪಲ್ಯ ಸಾರು ಸಾಂಬಾರು, ಸಿಹಿ, ಮಜ್ಜಿಗೆ, ಉಪ್ಪಿನಕಾಯಿ..

ಗುಜ್ಜೆ ಪಲ್ಯನಿನ್ನೆಯ ವಿಶೇಷ,  ಈಗ ಹಲಸಿನಕಾಯಿಯದೇ ದರ್ಬಾರು,  ಬಿಡುವಂತಿಲ್ಲ ಎಂಬಂತೆ ಮಾವಿನ ಹಣ್ಣಿನ ಮೆಣಸ್ಕಾಯಿ ಇದ್ದಿತು.

ಕ್ಷೀರ,  ಹೆಸ್ರು ಪಾಯಸ, ನೈವೇದ್ಯದ ವಿಶೇಷ ಪಾಲ್ಪಾಯಸಂ ಇದ್ದಿತು.

ಈ ಪಾಲ್ಪಾಯಸ ಮಾಡಿದ ಕ್ರಮ ಹೇಗೆಂದು ತಿಳಿಯಲು ಅಡುಗೆಪಂಡಿತರನ್ನೇ ಕೇಳೋಣಾ ಅಂತಿದ್ರೇ ಯಾರನ್ನೂ ಕಾಣಿಸಲಿಲ್ಲ.   ಚಿಂತೆಯಿಲ್ಲ,  ಮನೆಗೆ ಹೋದ್ಮೇಲೆ ಅಮ್ಮನ ಡೈರಿ ತೆಗೆದು ನೋಡಿದ್ರಾಯ್ತಪ..


ಅಮ್ಮ ಟೀವಿಯಲ್ಲಿ ಬರುತ್ತಿದ್ದಂತಹ ನಳಪಾಕಗಳನ್ನು ನೋಡುತ್ತ ಬರೆದೂ ಇಡ್ತಿದ್ರು. ಅದಕ್ಕೂ ಮೊದಲು ಸುಧಾ ವಾರಪತ್ರಿಕೆಯಲ್ಲಿ ಮಹಿಳೆಯರಿಗೆಂದೇ ಎರಡು ಪುಟಗಳ ಕಾಮಧೇನು ಅಂಕಣದಲ್ಲಿ ಪ್ರಕಟವಾಗುತ್ತಿದ್ದ ಅಡುಗೆ ಪುಟಗಳನ್ನು ಜೋಪಾನವಾಗಿ ಕತ್ತರಿಸಿ, ತೆಗೆದಿರಿಸುತ್ತಿದ್ದರು.  ಸೂಕ್ತ ಸಂದರ್ಭ ದೊರೆತಾಗ ಅಡುಗೆಯ ಪ್ರಯೋಗ, ನನಗೆ ಈಗಲೂ ಚೆನ್ನಾಗಿ ನೆನಪಿದೆ,  ಟೊಮೇಟೋ ಕಾಯಿರಸ ಎಂಬ ವ್ಯಂಜನ ಸುಧಾ,  ಕಾಮಧೇನು ವಿಭಾಗದಲ್ಲಿ ಬಂದದ್ದು, ತುಂಬ ರುಚಿಕರವಾದ ಈ ಪದಾರ್ಥವನ್ನು ನಾನು ಹಿರಣ್ಯದಲ್ಲೂ ಮಾಡಿದ್ದೇನೆ,  ಬ್ಲಾಗ್ ನಲ್ಲೂ ಇದೆ.  ಆಸಕ್ತರು. ಹುಡುಕಿ ಓದಿರಿ.


ಟಿಪ್ಪಣಿ: ಹಿರಣ್ಯ ದೇವಸ್ಥಾನದ ಪಾಲ್ಪಾಯಸದ ಈ ವಿಧಾನ ನನಗೆ ಸಿಕ್ಕಿದ್ದು ಅಮ್ಮನ ಹಳೆಯ ಕೈಬರಹದ ಪುಸ್ತಕದಲ್ಲಿ. ಹಬ್ಬದ ದಿನ ಅಮ್ಮನ ಕೈರುಚಿಯ ನೆನಪು ಈ ಪಾಯಸದ ಸಿಹಿಯನ್ನು ಇನ್ನಷ್ಟು ಹೆಚ್ಚಿಸಿದೆ.





ಹಿರಣ್ಯ ದುರ್ಗಾಪರಮೇಶ್ವರಿ ದೇವಸ್ಥಾನದ ಆ ನೈವೇದ್ಯದ ಪರಿಮಳ ಮತ್ತು ರುಚಿಯನ್ನು ಮನೆಯಲ್ಲೇ ಮರುಸೃಷ್ಟಿಸಲು ಇಲ್ಲಿದೆ ವಿಧಾನ. 


ದೇವಸ್ಥಾನದ ಭಟ್ಟರು ಕಟ್ಟಿಗೆಯ ಒಲೆಯ ಮೇಲೆ ಗಂಟೆಗಟ್ಟಲೆ ಕುದಿಸಿ ಆ ವಿಶೇಷ ರುಚಿಯನ್ನು ತರುತ್ತಾರೆ. ಆದರೆ ನಮ್ಮ ಮನೆಯ ಇಂಡಕ್ಷನ್ ಒಲೆಯ ಮೇಲೆಯೇ, ದಪ್ಪ ತಳದ ಕುಕ್ಕರ್ ಬಳಸಿ ಅದೇ ಹದವನ್ನು ಸುಲಭವಾಗಿ ತರಬಹುದು.

ಬೇಕಾಗುವ ಸಾಮಗ್ರಿಗಳು:

ಪೂರ್ಣ ಕೆನೆಯುಕ್ತ ಹಾಲು - ಒಂದು ಲೀಟರ್

ನೀರು -  ಅರ್ಧ ಲೀಟರ್ (ಹಾಲು ತಳ ಹಿಡಿಯದಿರಲು)

ಬೆಳ್ತಿಗೆ ಅಕ್ಕಿ - ಕೇವಲ 3 ರಿಂದ 4 ಚಮಚ (ಅಕ್ಕಿ ಕಡಿಮೆ ಇದ್ದಷ್ಟೂ ಪಾಯಸದ ಹದ ಚೆನ್ನಾಗಿರುತ್ತದೆ)

ಸಕ್ಕರೆ -  ಅರ್ಧ ಲೋಟ (ಅತಿಯಾದ ಸಿಹಿಯಿಲ್ಲದ, ಹಿತವಾದ ರುಚಿಗೆ ಇದು ಸರಿಯಾದ ಅಳತೆ)

ಏಲಕ್ಕಿ ಪುಡಿ - ಒಂದು ಚಿಕ್ಕ ಚಮಚ

ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಒಣದ್ರಾಕ್ಷಿ

ಪಚ್ಚ ಕರ್ಪೂರ (Edible camphor) - ಒಂದು ಸಣ್ಣ ಚಿಟಿಕೆ (ಇದೇ ದೇವಸ್ಥಾನದ ಪಾಯಸದ ಸುವಾಸನೆಯ ಗುಟ್ಟು!)

ಮಾಡುವ ವಿಧಾನ:

ಅಕ್ಕಿಯ ತಯಾರಿ: ಅಕ್ಕಿಯನ್ನು ಚೆನ್ನಾಗಿ ತೊಳೆದು 10 ನಿಮಿಷ ನೆನೆಯಲು ಬಿಡಿ. ಪಾಯಸದಲ್ಲಿ ಅಕ್ಕಿ ಕರಗಿ ಹೋಗಬಾರದು ಎಂದರೆ, ತೊಳೆದ ಅಕ್ಕಿಯನ್ನು ಸ್ವಲ್ಪ ತುಪ್ಪದಲ್ಲಿ ಲಘುವಾಗಿ ಹುರಿದುಕೊಳ್ಳಬಹುದು.

ಕುದಿಸುವಿಕೆ (ಮುಖ್ಯ ಹಂತ): ದಪ್ಪ ತಳದ ಕುಕ್ಕರ್‌ನಲ್ಲಿ ಹಾಲು ಮತ್ತು ನೀರನ್ನು ಸೇರಿಸಿ ಕುದಿಯಲು ಇಡಿ. ಹಾಲು ಉಕ್ಕಿ ಬರುವಾಗ, ಅಕ್ಕಿಯನ್ನು ಸೇರಿಸಿ.

ಮಂದ ಉರಿಯ ಬೇಯಿಸುವಿಕೆ: ಕುಕ್ಕರ್ ಮುಚ್ಚಳ ಮುಚ್ಚಿ,  ವೆಯಿಟ್ ಹಾಕದಿರಿ.

ಕುದಿಯುವಾಗ ಉರಿಯನ್ನು ಸಂಪೂರ್ಣ ಕಡಿಮೆ ಮಾಡಿ,  30-40 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ನಡುವೆ ಒಂದೆರಡು ಬಾರಿ ಸೌಟಿನಿಂದ ತಿರುಗಿಸಿ. ಹಾಲು ನಿಧಾನವಾಗಿ ಕುದಿದು, ತಿಳಿ ಗುಲಾಬಿ ಅಥವಾ ಕೆನೆ ಬಣ್ಣಕ್ಕೆ ತಿರುಗುತ್ತದೆ.

ಸಕ್ಕರೆ ಸೇರಿಸುವಿಕೆ: ಅಕ್ಕಿ ಸಂಪೂರ್ಣವಾಗಿ ಬೆಂದು, ಹಾಲು ಗಟ್ಟಿಯಾದ ಮೇಲೆ ಮಾತ್ರ ಸಕ್ಕರೆ ಸೇರಿಸಿ. ಮೊದಲೇ ಸಕ್ಕರೆ ಹಾಕಿದರೆ ಅಕ್ಕಿ ಸರಿಯಾಗಿ ಬೇಯುವುದಿಲ್ಲ. ಸಕ್ಕರೆ ಕರಗಿ, ಪಾಯಸ ಮಂದವಾದ ನಂತರ ಮತ್ತೆ 5 ನಿಮಿಷ ಕುದಿಸಿ.

ಒಗ್ಗರಣೆ ಮತ್ತು ಪರಿಮಳ: ಕೊನೆಯಲ್ಲಿ ಏಲಕ್ಕಿ ಪುಡಿ ಮತ್ತು ಆ ಒಂದು ಚಿಟಿಕೆ ಪಚ್ಚ ಕರ್ಪೂರವನ್ನು ಸೇರಿಸಿ ಒಲೆ ಆರಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿದರೆ, ದೇವಸ್ಥಾನದ ಭಟ್ಟರ ಕೈರುಚಿಯ ಪಾಲ್ಪಾಯಸ ಸವಿಯಲು ಸಿದ್ಧ.






Saturday, 4 April 2026

ದ್ರೌಪದೀ ಅಡುಗೆ



ಒಲೆ ಉರಿಸಿ ಅಡುಗೆ ಮಾಡುವ ಕಾಲ ಮತ್ತೆ ಬಂದ ಹಾಗಿದೆ.  ಎಲ್ಲೋ ಯುದ್ಧ ನಡೆಯುತ್ತಿದೆ,  ನಮ್ಮ ಅಡುಗೆ ಅನಿಲ ಸರಬರಾಜು ಇಲ್ಲ,  ಸ್ಟಾಕಿಲ್ಲ… ಸಪ್ಲೈ ಇಲ್ಲ.. ಇಂತಹ ಉತ್ತರಗಳು.


ಮೊನ್ನೆ ಮಧುಕರನೂ ಅಂದಿದ್ದ,  “ ಇರುವ ಗ್ಯಾಸ್ ಸಿಲಿಂಡರನ್ನು ಕಡಿಮೆ ಉಪಯೋಗಿಸು, ಸಾಧ್ಯವಾದಷ್ಟೂ ಕರೆಂಟಿನಲ್ಲೇ ಅಡುಗೆ ಮಾಡು.  ಇಲ್ಲಿ ಹೋಟಲ್ಗಳಲ್ಲಿ ದೋಸೆ ಇಲ್ಲ,  ಅನ್ನಕ್ಕೆ ಸಾಂಬಾರ್ ಇಲ್ಲ… ಕೇವಲ ಚಟ್ಣಿ ಕೊಡ್ತಾರೆ..”


“ಅದೊಂದು ಅಸ್ಸಾಂ ಅಕ್ಕಿ ಆನ್ ಲೈನಲ್ಲಿ ತರಿಸಿ ಕೊಟ್ಟಿದ್ದರೆ ಮಾಡಿ ನೋಡಬಹುದಿತ್ತು.  ನೀರು ಕುದಿಸದೇ ಅನ್ನ ಆಗುತ್ತಂತೆ.. ". 

“ ತರಿಸೋಣ,  ಈಗ ಕರೆಂಟಿನಲ್ಲೇ ಅನ್ನ ಮಾಡು..”


ನಾನು ಯಾವತ್ತೂ ಗ್ಯಾಸ್ ಒಲೆಯಲ್ಲಿ ಅನ್ನ ಮಾಡಿಯೇ ಇಲ್ಲ,  ಇಂಡಕ್ಷನ್ ಸ್ಟವ್ ನನ್ನ ಅಚ್ಚುಮೆಚ್ಚಿನದು.  ಅದರ ಮೇಲಿಟ್ಟು ಎಲ್ಲವನ್ನೂ ಸೆಟ್ ಮಾಡಿಟ್ಟು ಆಚೆ ಹೋಗಲಡ್ಡಿಯಿಲ್ಲ.  ಹಾಲು, ದೋಸೆ, ಪುಲ್ಕಾ, ಒಗ್ಗರಣೆ… ಗ್ಯಾಸ್ ಒಲೆ.


ಅನ್ನ ಕರೆಂಟಿನಲ್ಲಿ ಬೇಯುತ್ತಲಿದೆ.  ಮನೆಯಲ್ಲಿ ಸೋಲಾರ್ ಇರುವುದರಿಂದ ವಿದ್ಯುತ್ ಉಪಕರಣಗಳ ಉಚಿತ ಕಾರ್ಯ ನಿರ್ವಹಣೆ.

ಇನ್ನೊಂದು ರೈಸ್ ಕುಕರ್ ,  ಸಾಂಬಾರ್ ಇತ್ಯಾದಿ ಮಾಡಲಿಕ್ಕೆ.  ಪ್ಲಗ್ ಹಾಕಿ ಬಿಟ್ಟರಾಯಿತು,  ಬೇಳೆ, ತರಕಾರಿ ಎಲ್ಲವೂ ಹಿತವಾಗಿ ಬೇಯುತ್ತೆ.

ಇವತ್ತು ಸರಳವಾಗಿ ಒಲೆ ರಹಿತ ಅಡುಗೆ ಮಾಡೋಣ.




ಯುದ್ಧಕಾಲವಾದುದರಿಂದ ತರಕಾರಿಗಳ ಬೆಲೆ ಪಾತಾಳಕ್ಕಿಳಿದಿದೆಯಂತೆ. ಪತ್ರಿಕೆಯಲ್ಲಿ ಕಂಡಿದ್ದು.  ಗಲ್ಫ್ ರಾಜ್ಯಗಳಿಗೆ ರವಾನೆಯಾಗುತ್ತಿದ್ದ ತರಕಾರಿಗಳು ಹೋಗುವ ದಾರಿ ಕಾಣದೆ ಇಲ್ಲೇ ನೆಲ ಕಚ್ಚಿವೆ.


ಹೌದೂ ಹಾಗಿದ್ದರೆ ನೇಂದ್ರ, ಬಚ್ಚಂಗಾಯಿ ಜಾಸ್ತಿಯೇ ತರಿಸೋಣ.

“ಅಕ್ಕ, ಮೊನ್ನೆಯಿಂದಲೇ ನೇಂದ್ರಕ್ಕೆ ಕ್ರಯ ತುಂಬ ಕಮ್ಮಿಯಿತ್ತು.”  ಎಂದ ರಂಗಣ್ಣ.


ಈಗ ನೇಂದ್ರ ಸಿಕ್ಕಾಪಟ್ಟೆ ಬಂದಿದೆ,  ಹಣ್ಣು ತಿಂದು ಮುಗಿಯದು,  ಅಡುಗೆಗೂ ಉಪಯೋಗಿಸೋಣ, ಪಕ್ವವಾದಂತಹ ನೇಂದ್ರದ ಸಿಪ್ಪೆ ಬಿಡಿಸಿ, ಪಲ್ಯಕ್ಕೆ ಹೆಚ್ಚುವ ತರಹ ಕತ್ತರಿಸಿ,  ಉಪ್ಪು ಬೆರೆಸಿ,  ಮೊಸರು ಎರೆದು, ಕಾಯಿತುರಿ ಬೆರೆಸಿ, ಬಜ್ಜಿ ಎಂಬ ನಾಮಕರಣ ನೀಡೋಣ.

ಮುಂಜಾನೆಯ ಚಟ್ಟಣಿ ತಂಪು ಪೆಟ್ಟಿಗೆಯಲ್ಲಿ ಹಾಯಾಗಿದ್ದಿತು. ಹೊರಗೆ ಬಂದು ಟೇಬಲ್ ಅಲಂಕರಿಸಿತು. 

ಮಜ್ಜಿಗೆ ನಮಗೆ ಅನಿವಾರ್ಯ, ಊಟ ಮುಕ್ತಾಯ ಆಗುವುದೆಂತು?

ನಮ್ಮ ಮಿಡಿ ಉಪ್ಪಿನಕಾಯಿ,  ಇದಕ್ಕೆ ಒಲೆಯೇ ಬೇಕಿಲ್ಲ.  ನಿಂಬೆಹುಳಿ ಉಪ್ಪಿನಕಾಯಿಯೂ ಒಲೆಯನ್ನು ಕೇಳದು.  


ಪುರಾಣಗಳ ಪ್ರಕಾರ, ದ್ರೌಪದಿ ಒಲೆ ಹಚ್ಚಿ ಕಷ್ಟಪಡುವ ಬದಲು, ವನವಾಸದ ಸಮಯದಲ್ಲಿ ಸೂರ್ಯದೇವನು ಕರುಣಿಸಿದ "ಅಕ್ಷಯ ಪಾತ್ರೆ" ಅವಳ ಬಳಿಯಿತ್ತು. ಆ ಪಾತ್ರೆಯ ವಿಶೇಷವೆಂದರೆ, ಅದರಲ್ಲಿ ಅಡುಗೆಯನ್ನು 'ಮಾಡುವ' ಅಗತ್ಯವೇ ಇರಲಿಲ್ಲ! ದ್ರೌಪದಿ ತಾನು ಊಟ ಮಾಡುವವರೆಗೆ, ಆ ಪಾತ್ರೆಯಿಂದ ಎಷ್ಟು ಜನರಿಗೆ ಬೇಕಾದರೂ, ಎಂತಹ ರುಚಿಯಾದ ಭೋಜನವಾದರೂ ಸಿದ್ಧವಾಗಿ ಸಿಗುತ್ತಿತ್ತು.


ಆ ಅಡುಗೆ ಹೇಗಿದ್ದೀತು ಎಂದು ಕಲ್ಪಿಸಿಕೊಂಡರೆ,

ಅದು ಸಾಕ್ಷಾತ್ ಸೂರ್ಯದೇವನ ಪ್ರಸಾದವಾದ್ದರಿಂದ, ಅತ್ಯಂತ ಶುದ್ಧ, ಆರೋಗ್ಯಕರ ಮತ್ತು ದಿವ್ಯವಾದ ರುಚಿಯನ್ನು ಹೊಂದಿದ್ದಿರಬೇಕು.

ಈಗಿನ ಹೋಟೆಲ್ ಊಟದಂತೆ ಕೃತಕವಾಗಿರದೆ, ಅತಿಯಾದ ಖಾರ-ಮಸಾಲೆಗಳಿಲ್ಲದೆ, ದೇಹಕ್ಕೂ ಮನಸ್ಸಿಗೂ ಹಿತವಾದ ಸಾತ್ವಿಕ ಮತ್ತು ನೈಸರ್ಗಿಕ ರುಚಿ ಅದರಲ್ಲಿರುತ್ತಿತ್ತು.

ಕಾಡಿನಲ್ಲಿ ಸಿಗುವ ಗೆಡ್ಡೆ-ಗೆಣಸು, ಹಣ್ಣು-ಹಂಪಲುಗಳನ್ನೇ ಷಡ್ರಸಗಳನ್ನಾಗಿ ಪರಿವರ್ತಿಸುವ ಶಕ್ತಿ ಆ ಪಾತ್ರೆಗಿದ್ದಿರಬೇಕು.







Saturday, 28 March 2026

ಗೋಧಿ ಕಡಿ ಇಡ್ಲಿ

 



ದಿನವೂ ದೋಸೆ ವಿಧ ವಿಧ ತರಹಾ.. ಅನ್ನುತ್ತ ಮುಂಜಾನೆಯ ರಾಗ ಪ್ರಾರಂಭ.  ಸಂಜೆಯಾಗುತ್ತಲೂ ನಾಳೆಯ ದೋಸೆ ಹೇಗಾದರೆ ಚೆನ್ನ ಎಂಬ ಚಿಂತೆ, ಇರಲಿ ಅಂದ್ಬಿಟ್ಟು ಒಂದು ಲೋಟ ಉದ್ದು ನೀರು ಎರೆದಿಟ್ಟಾಯಿತು.   ನಂತರ ರವಾ ಇಡ್ಲಿಯೋ ಅಕ್ಕಿ ಇಡ್ಲಿಯೋ…

ಮಧುಕರ ಊರಿಗೆ ಬಂದಾಗ ಮಂಗಳೂರಿಗೆ ಹೋಗುವುದಿದೆ. ಅಲ್ಲಿಯೂ ಅವನ ಸಂಸ್ಥೆಯ ಶಾಖೆ, ಆಫೀಸ್ ಇದೆ,  ಎದುರುಗಡೆ ಬಾಳಿಗಾ ಸ್ಟೋರ್ಸ್ ಮಳಿಗೆ,  ನಿತ್ಯಬಳಕೆಯ ಸಾಮಗ್ರಿಗಳನ್ನು ಅಲ್ಲಿಂದಾನೇ ತರುವ ರೂಢಿ,  ಕಳೆದ ಬಾರಿ ತಂದಿದ್ದ ಗೋಧಿ ನುಚ್ಚು ಪ್ಯಾಕೆಟ್ ಇನ್ನೂ ಬಿಡಿಸಿಲ್ಲ ಎಂದು ನೆನಪಾಯ್ತು.   ಗೋಧಿ ನುಚ್ಚಿನ ಪಾಯಸ ಗೊತ್ತು,   ಈ ಸುಡು ಬೇಸಿಗೆಯಲ್ಲಿ ಪಾಯಸದ ಉಸಾಬರಿಯೇಕೆ?  ಆದರೂ ಇದನ್ನು ಹೇಗಾದರೂ ಮುಗಿಸೋಣ ಎಂಬ ಹಟದಿಂದ ನಾಳೆ ಗೋಧಿ ಕಡಿ ಇಡ್ಲಿ ಎಂಬ ತೀರ್ಮಾನಕ್ಕೆ ಬರಲಾಯಿತು.  ಈಗಾಗಲೇ ರಾತ್ರಿಯ ಮುಸುಕು ಕವಿದಿದೆ,  ಗೋಧಿನುಚ್ಚು ನೆನೆಯಬೇಡವೇ,  ಉಪಾಯ ಮಾಡದಿದ್ದರಾಗುತ್ಯೇ…,   ಬೇಸಿಗೆಯ ಸೋಲಾರ್ ನೀರು ಕುದಿಯುತ್ತಲಿದೆ,  ಕೂಡಲೇ ಗೋಧಿ ನುಚ್ಚು ಕುದಿನೀರಿನ ಸ್ನಾನ ಮಾಡಿಯೇ ಬಿಟ್ಟಿತು.  ಅರ್ಧ ಗಂಟೆ ನೆನೆಯಲಿ.  ಎಷ್ಟು?  ಕೇವಲ ಎರಡೂವರೆ ಲೋಟ ಕಣ್ರೀ,  ಮೂರು ಲೋಟ ಹಾಕಬಹುದಿತ್ತು,  ಇಬ್ಬರ ರಾಜ್ಯದಲ್ಲಿ ಮುಗಿಯದೇ ಹೋದೀತು,  ಇಡ್ಲಿ ಕಲ್ಲಿನಂತೆ ಆಗಬಾರದಲ್ಲ!


ಮಲಗುವ ಮುನ್ನ ಅರೆಯುವ ಸಿದ್ಧತೆ, ತೊಳೆದ ಉದ್ದನ್ನು ಅರೆಯುವುದು.

ಗೋಧಿನುಚ್ಚು ಬಿಸಿ ಆರಿದೆ, ನೀರನ್ನು ಬಸಿಯುವುದು.

ನುಣ್ಣಗಾದ ಉದ್ದಿನೊಂದಿಗೆ ಮಿಕ್ಸೀಯಲ್ಲಿ ಒಂದೆರಡು ಸುತ್ತು ತಿರುಗಿಸಿದರೆ ಸಾಕು. ತಪಲೆಗೆ ಹಾಕಿಟ್ಟು, ಉಪ್ಪು ಕೂಡಿಸಿ, ಮುಚ್ಚಿ ಇಡುವುದು.  ಮುಂದಿನದು ನಾಳೆಗೆ.


ನನ್ನದೊಂದು ಅಗಾರೋ ರೈಸ್ ಕುಕ್ಕರ್ ಇದ್ದಿತು. ಸಂಪೂರ್ಣ ವಿದ್ಯುತ್ ಚಾಲಿತವಾದಂತಹ ಆ ರೈಸ್ ಕುಕ್ಕರ್ ಬೇಗನೇ ಕೆಟ್ಟು ಹೋಯಿತು. ಅದರೊಳಗೆ ಇಡಲು ಒಂದು ಸ್ಟೀಲ್ ತಪಲೆ,  ಅದರಲ್ಲಿ ಇಡ್ಲಿಪಾತ್ರೆಯಂತೆ ನೂರಾರು ತೂತುಗಳು.  ನನ್ನ ನಿತ್ಯಬಳಕೆಯ ಇಡ್ಲಿ ಪಾತ್ರೆಯ ಒಳಗೂ ಇರಿಸಲು ಸಾಧ್ಯವಿರುವ ಇದರಲ್ಲಿಯೇ ಇಡ್ಲಿ ಎರೆಯುವ ರೂಢಿ. ದೊಡ್ಡ ಬಟ್ಟಲ ಗಾತ್ರದ ಇಡ್ಲಿ ಲಭ್ಯ.   ನನ್ನ ಲೆಕ್ಕಾಚಾರದಲ್ಲಿ ಬೇಯಿಸಲು ಎಂದಿನ ಹತ್ತು ನಿಮಿಷ ಸಾಲದು.  ನೀರು ಕುದಿದ ನಂತರ 20-25 ನಿಮಿಷ. 


ಇಡ್ಲಿಯ ವಿಷಯ ಆಯ್ತು,  ಈ ಮಾದರಿಯ ಅಕ್ಕಿ ಇಡ್ಲಿಯಾಗಿದ್ದರೆ ಬಾಳೆಹಣ್ಣು ರಸಾಯನ ಮಾಡಬಹುದಿತ್ತು,  ಇದು ಗೋಧಿ ಕಡಿಯಲ್ಲವೇ,  ಒಂದು ಚಟ್ಣಿ ಮಾಡೋಣ.





ಗೋಧಿ ಇಡ್ಲಿಗೆ ಅತ್ಯುತ್ತಮ ಕಾಂಬಿನೇಷನ್ ಎಂದರೆ ಪ್ರೋಟೀನ್-ಯುಕ್ತ ಚಟ್ಣಿ.

ಹುರಿದ ನೆಲಕಡಲೆ ಒಂದು ಹಿಡಿ

ಅರ್ಧ ಕಡಿ ಹಸಿ ತೆಂಗಿನತುರಿ

ಸ್ವಲ್ಪ ಕೊತ್ತಂಬರಿ ಸೊಪ್ಪು

ಒಣಮೆಣಸಿನಕಾಯಿ: 2-3 (ನಿಮ್ಮ ಖಾರಕ್ಕೆ ತಕ್ಕಂತೆ) ಹುಣಸೆಹಣ್ಣು: ಒಂದು ಸಣ್ಣ ನೆಲ್ಲಿಕಾಯಿ ಗಾತ್ರ

ರುಚಿಗೆ ತಕ್ಕಷ್ಟು ಉಪ್ಪು

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು

ಅಗತ್ಯವಿದ್ದಷ್ಟು ನೀರು ಸೇರಿಸಿ, ನಯವಾಗಿ ರುಬ್ಬಿಕೊಳ್ಳಿ.

ಕೊನೆಯದಾಗಿ ಸಾಸಿವೆ, ಜೀರಿಗೆ ಮತ್ತು ಕರಿಬೇವನ್ನ ಎಣ್ಣೆಯಲ್ಲಿ ಸಿಡಿಸಿ ಒಗ್ಗರಣೆ ಕೊಡಿ.