Pages

Ads 468x60px

Featured Posts

.

Sunday, 22 March 2026

ಹಿತ್ತಲ ಚೆಲುವೆ

 

ಸಂಜೆಯ ಹೊತ್ತು, ಹಿತ್ತಲಲ್ಲಿ ಬೆಳೆಸಿರುವ ಅನನಾಸ್ ಸಸ್ಯಸಂಕುಲಕ್ಕೆ ನೀರು ಹಾಯಿಸಬೇಕಿಲ್ಲ, ಎರಡು ದಿನಗಳ ಹಿಂದೆ ಧಾರಾಕಾರ ಮಳೆ ಸುರಿದಿದೆ.  ಬೇಲಿಯ ಪಕ್ಕ ನೀಲಿ ಹೂಗಳು ಅರಳಿವೆ.  ಪ್ರತಿ ವರ್ಷವೂ ಈ ನೀಲಿ ಹೂ ಅರಳುತ್ತದೆ,  ಒಂದೆರಡು ಬಾರಿ ಫೋಟೋ ತೆಗೆದು ಇನ್ ಸ್ಟಾಗ್ರಾಮ್ ನಲ್ಲಿ ಪ್ರದರ್ಶಿಸಿದ್ದೂ ಇದೆ.  ಈ ಬಾರಿ ಬರಹವೇ ಬಂದಿದೆ.


ಹಿತ್ತಲಲ್ಲಿ ಅರಳಿದ ಹೂವುಗಳು, ನೆಟ್ಟು ಬೆಳೆಸಿದ್ದಲ್ಲ,  ಯಾವ ಸಸ್ಯ? 


ಹಿತ್ತಲಲ್ಲಿ ಅರಳಿರುವ ಈ ಸುಂದರವಾದ ತಿಳಿ ನೀಲಿ ಬಣ್ಣದ ಹೂವುಗಳ ಸಸ್ಯ ಪ್ಲಂಬಾಗೊ ಆರಿಕ್ಯುಲಾಟಾ (Plumbago auriculata).

ಇದನ್ನು ಸಾಮಾನ್ಯವಾಗಿ ಈ ಕೆಳಗಿನ ಹೆಸರುಗಳಿಂದ ಕರೆಯಲಾಗುತ್ತದೆ:

ಕನ್ನಡ ಹೆಸರು: ನೀಲಿ ಚಿತ್ರಮೂಲ (Blue Chitramoola)  ಅಥವಾ ನೀಲಿ ಮುತ್ತುಗ. ಇದು ಸುಲಭವಾಗಿ ಹರಡಿಕೊಳ್ಳುವ ಪೊದೆ ಸಸ್ಯ. ಹಕ್ಕಿಗಳು ಬೀಜಗಳನ್ನು ಹಾಕುವುದರಿಂದ ಅಥವಾ ಬೇರುಗಳಿಂದ ಇದು ತಾನಾಗಿಯೇ ಹರಡಿಕೊಳ್ಳುವ ಸಾಧ್ಯತೆ ಹೆಚ್ಚು, ಹಾಗಾಗಿ ಇದನ್ನು ನೆಡದಿದ್ದರೂ ತಾನಾಗಿಯೇ ಬೆಳೆದಿರಬಹುದು.

 ಇಂಗ್ಲಿಷ್ ಹೆಸರು: Cape Leadwort ಅಥವಾ Blue Plumbago.

ಐದು ದಳಗಳನ್ನು ಹೊಂದಿರುವ ಈ ಹೂವುಗಳು ಗೊಂಚಲು ಗೊಂಚಲಾಗಿ ಅರಳುತ್ತವೆ.

ಒಂದು ಕುತೂಹಲಕಾರಿ ವಿಷಯ: ಈ ಹೂವುಗಳ ಬುಡದಲ್ಲಿ ಸಣ್ಣ ಅಂಟಂಟಾದ ಅಂಶವಿರುತ್ತದೆ. ಸಣ್ಣ ಮಕ್ಕಳು ಇವುಗಳನ್ನು ಕಿವಿಯೋಲೆಗಳಂತೆ ಕಿವಿಗೆ ಅಂಟಿಸಿಕೊಳ್ಳಲು ಇಷ್ಟಪಡುತ್ತಾರೆ.

ಇದು ನೋಡಲು ಬಹಳ ಸುಂದರವಾದರೂ, ಕೆಲವು ವ್ಯಕ್ತಿಗಳಲ್ಲಿ ಇದರ ರಸವು ಚರ್ಮದ ಮೇಲೆ ಕೆರೆತ ಅಥವಾ ಗುಳ್ಳೆಗಳನ್ನು ಉಂಟುಮಾಡಬಹುದು. ಹಾಗಾಗಿ ಗಿಡವನ್ನು ಕತ್ತರಿಸುವಾಗ ಜಾಗರೂಕರಾಗಿರುವುದು ಉತ್ತಮ.


ವರ್ಷದ ನಿರ್ದಿಷ್ಟ ಸಮಯದಲ್ಲಿ (ಸಾಮಾನ್ಯವಾಗಿ ವಸಂತ ಮತ್ತು ಬೇಸಿಗೆಯ ಆರಂಭದಲ್ಲಿ) ಸಮೃದ್ಧವಾಗಿ ಅರಳುವುದರಿಂದ ಹಿತ್ತಲಿಗೆ ಒಂದು ವಿಶೇಷ ಕಳೆ ಬಂದಿದೆ.




ನಮ್ಮ ಹಿತ್ತಲಿನಲ್ಲಿ ನಾವು ನೆಡದಿದ್ದರೂ ತಾನಾಗಿಯೇ ಬೆಳೆದು ನಿಲ್ಲುವ ಕೆಲವು ಗಿಡಗಳು ನಮಗೆ ಆಶ್ಚರ್ಯ ಮೂಡಿಸುತ್ತವೆ. ಅಂತಹವುಗಳಲ್ಲಿ ಪ್ರಮುಖವಾದುದು ಈ ತಿಳಿ ನೀಲಿ ಬಣ್ಣದ ಹೂವುಗಳ 'ನೀಲಿ ಚಿತ್ರಮೂಲ' (Blue Plumbago). ನೋಡುವುದಕ್ಕೆ ಕಣ್ಮನ ಸೆಳೆಯುವ ಈ ಸಸ್ಯವು ಆಯುರ್ವೇದದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.


ಆಯುರ್ವೇದದಲ್ಲಿ ಚಿತ್ರಮೂಲ

ಆಯುರ್ವೇದ ಶಾಸ್ತ್ರದಲ್ಲಿ 'ಚಿತ್ರಮೂಲ' ಎಂದರೆ ಬೆಂಕಿಯಂತೆ ಜೀರ್ಣಶಕ್ತಿಯನ್ನು ಹೆಚ್ಚಿಸುವಂತದ್ದು ಎಂದರ್ಥ. ಇದರಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ:

1. ರಕ್ತ ಚಿತ್ರಮೂಲ (ಕೆಂಪು ಹೂವು)

2. ಶ್ವೇತ ಚಿತ್ರಮೂಲ (ಬಿಳಿ ಹೂವು)

3. ನೀಲಿ ಚಿತ್ರಮೂಲ (ನೀಲಿ ಹೂವು - ನಮ್ಮ ಚಿತ್ರದಲ್ಲಿರುವುದು ಇದೇ!)





ಆಯುರ್ವೇದದ ಪ್ರಕಾರ, ಈ ಗಿಡದ ಬೇರುಗಳು ಅತಿ ಹೆಚ್ಚು ಔಷಧೀಯ ಗುಣವನ್ನು ಹೊಂದಿವೆ.

ಜೀರ್ಣಕ್ರಿಯೆಗೆ ರಾಮಬಾಣ: ಇದು ಹಸಿವನ್ನು ಹೆಚ್ಚಿಸಲು ಮತ್ತು ಅಜೀರ್ಣದ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿ.

ಚರ್ಮದ ಸಮಸ್ಯೆಗಳು: ಇದರ ಬೇರಿನ ಲೇಪನವನ್ನು ಚರ್ಮದ ಕಲೆಗಳು, ಸೋರಿಯಾಸಿಸ್ ಅಥವಾ ಕೆಲವು ರೀತಿಯ ಕುಷ್ಠ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಉರಿಯೂತ ನಿವಾರಕ (Anti-inflammatory): ಕೀಲು ನೋವು ಅಥವಾ ಮೈ ಕೈ ನೋವು ಇದ್ದಾಗ ಇದರ ಬಳಕೆ ಉಪಯುಕ್ತ.

ಕಫ ಹರಕ: ಕೆಮ್ಮು ಅಥವಾ ದೀರ್ಘಕಾಲದ ನೆಗಡಿಯ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ.


⚠️ ಪ್ರಮುಖ ಎಚ್ಚರಿಕೆ:

ಚಿತ್ರಮೂಲವು ಅತ್ಯಂತ ತೀಕ್ಷ್ಣವಾದ (Hot potency) ಸಸ್ಯವಾಗಿದೆ. ಇದನ್ನು ಸರಿಯಾಗಿ 'ಶುದ್ಧೀಕರಣ' ಮಾಡದೆ ಬಳಸಿದರೆ ಅಥವಾ ನೇರವಾಗಿ ಚರ್ಮಕ್ಕೆ ಅಂಟಿಸಿಕೊಂಡರೆ ಗುಳ್ಳೆಗಳು ಏಳಬಹುದು ಅಥವಾ ಸುಟ್ಟ ಗಾಯದಂತೆ ಆಗಬಹುದು. ಆದ್ದರಿಂದ, ಆಯುರ್ವೇದ ತಜ್ಞರ ಸಲಹೆ ಇಲ್ಲದೆ ಇದರ ಉಪಯೋಗ ಸಲ್ಲದು.


ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಪ್ರತಿಯೊಂದು ಗಿಡಕ್ಕೂ ಒಂದು ಅರ್ಥವಿದೆ. ಹಿತ್ತಲಿನಲ್ಲಿ ಅರಳಿರುವ ಈ ನೀಲಿ ಹೂವುಗಳು ಕೇವಲ ಸೌಂದರ್ಯದ ಸಂಕೇತವಲ್ಲ, ಅವು ನಿಸರ್ಗ ನಮಗೆ ನೀಡಿದ ಔಷಧೀಯ ಕೊಡುಗೆಯೂ ಹೌದು.


 

Saturday, 14 March 2026

ಬಸಳೆ ಸಾರು

 


ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಉರಿ ಬಿಸಿಲಿಗೆ ದೇಹವನ್ನು ತಂಪಾಗಿರಿಸುವ ಹಾಗೂ ಆರೋಗ್ಯವನ್ನು ಕಾಪಾಡುವ ಊಟ ನಮ್ಮದಾಗಿರಬೇಕು. ಅದಕ್ಕಾಗಿಯೇ ಇಂದು ನಮ್ಮದು ಬಸಳೆ ಸೊಪ್ಪಿನ ಸಾರು ಸಿದ್ಧವಾಗಿದೆ.


ಮನೆಯ ಅಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ಒಂದು ಚಿಕ್ಕ ಚಪ್ಪರ ಹಾಕಿ ಬಸಳೆ ಬಳ್ಳಿ ಹಬ್ಬಿಸಿದರೆ, ನೋಡಲೂ ಅಂದ, ಉಣ್ಣಲೂ ಚಂದ. ದಪ್ಪನೆಯ, ರಸಭರಿತವಾದ ಎಲೆಗಳ ಈ ಬಳ್ಳಿ ಕಣ್ಣಿಗೆ ಎಷ್ಟು ತಂಪೋ, ದೇಹಕ್ಕೂ ಅಷ್ಟೇ ತಂಪು.




ಬಸಳೆಯ ವಿಶೇಷತೆಗಳು:

ಬಸಳೆ ಬೆಳೆಯುವುದು ಬಹಳ ಸುಲಭ. ಒಂದೆರಡು ಕಡ್ಡಿ ನೆಟ್ಟರೂ ಸಾಕು, ಹುಲುಸಾಗಿ ಬೆಳೆದು ಚಪ್ಪರವನ್ನು ಆವರಿಸಿಕೊಳ್ಳುತ್ತದೆ.  ಅಡುಗೆಮನೆಯ ಕಸ ಬಸಳೆಗೆ ಉತ್ತಮ ಗೊಬ್ಬರ, ನೀರೂ ಅವಶ್ಯಕ.

ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಯಥೇಚ್ಛವಾಗಿದೆ. 

ಇದರ ದಪ್ಪನೆಯ ಎಲೆಗಳು ಮತ್ತು ನಾರಿನಂಶವುಳ್ಳ ಕಾಂಡಗಳು ಅಡುಗೆಗೆ ಅದ್ಭುತ ರುಚಿ ಕೊಡುತ್ತವೆ.


ಬೇಸಿಗೆಯಲ್ಲಿ ಬಸಳೆಯ ಉಪಯೋಗ:

ದೇಹಕ್ಕೆ ತಂಪು: ಬೇಸಿಗೆಯ ತಾಪಕ್ಕೆ ದೇಹವನ್ನು ನೈಸರ್ಗಿಕವಾಗಿ ತಂಪಾಗಿರಿಸಲು ಬಸಳೆ ಅತ್ಯುತ್ತಮ. ಜೀರ್ಣಕ್ರಿಯೆಗೆ ಸಹಕಾರಿ: ಇದರಲ್ಲಿರುವ ನಾರಿನಂಶವು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ.  

ಶಕ್ತಿದಾಯಕ: ಬಸಳೆಯಲ್ಲಿರುವ ಪೋಷಕಾಂಶಗಳು ಬೇಸಿಗೆಯಲ್ಲಿ ಕಾಡುವ ಸುಸ್ತು ಮತ್ತು ಆಯಾಸವನ್ನು ದೂರ ಮಾಡಿ ದೇಹಕ್ಕೆ ಚೈತನ್ಯ ನೀಡುತ್ತವೆ.




ಬೇಗನೇ ಅಡುಗೆ ಆಗಲು ಎಳೆಯ ಕುಡಿ ಕಾಂಡಗಳನ್ನು ಕುಯ್ಯುವುದು,  ಬೇಕಾದಂತೆ ಕತ್ತರಿಸಿ ಇಡುವುದು.

ಮೊದಲಾಗಿ ಹೆಸ್ರುಕಾಳುಗಳನ್ನು ಬೇಯಲಿಡುವುದು. 3 ಚಮಚ ಸಾಕು ಕಣ್ರೀ.  ಅತಿಯಾಗಿ ಕಾಳು ಹಾಕಿದಿರಾದರೆ ಸಾರು ಹೋಗಿ ಗಸಿ ಆದೀತು.

ಆಕರ್ಷಕ ಬಣ್ಣಕ್ಕಾಗಿ ಬೀಟ್ರೂಟ್ ಹೋಳುಗಳನ್ನು ಹಾಕುವುದು.

ಹುಳಿ ರುಚಿಗಾಗಿ ಟೊಮೇಟೋ ಮಾತ್ರ ಸಾಲದು, ಸ್ವಲ್ಪ ಹುಣಸೆಹಣ್ಣು ಅಥವಾ ಪುನರ್ಪುಳಿ ಇರಲಿ. ನಾನು ಪುನರ್ಪುಳಿಯನ್ನೇ ಹಾಕಿದ್ದು,   ಮೂರು ಒಣಸಿಪ್ಪೆ ಸಾಕು.

ರುಚಿಗೆ ಉಪ್ಪು, ಸಿಹಿಗೆ ಬೆಲ್ಲ.

ಸಾರು ಅಲ್ಲವೇ,  ಚಿಟಿಕೆ ಅರಸಿನ. ಇಂಗು ಇರಲಿ.

ಕರಿಬೇವು, ಸಾಕಷ್ಟು ಬೆಳ್ಳುಳ್ಳಿ ಎಸಳುಗಳ ಒಗ್ಗರಣೆ ಕಡ್ಡಾಯ. ಒಗ್ಗರಣೆಗೆ ಜೀರಿಗೆಯೂ ಇರಲಿ, ಪರಿಮಳ ಜಾಸ್ತಿ.






Thursday, 5 March 2026

ಕಬ್ಬಿನ ಹಾಲಿನ ದೋಸೆ

 


ಕಬ್ಬಿನ ಹಾಲು ತಂದಿದೆ,  ಕುಡಿದಾಯ್ತು.  ಇನ್ನೂ ಇದೆ, ನಾಳೆಗೊಂದು ತಿಂಡಿ ಮಾಡಲು ಸಾಧ್ಯವೇ ಎಂಬ ಗಹನ ಚಿಂತನೆಯಿಂದ ಈ ದೋಸೆ ಮೇಲೆದ್ದಿದೆ.


ಒಂದು ದೊಡ್ಡ ಲೋಟ ಕಬ್ಬಿನ ಹಾಲು ಉಳಿದಿದೆ.

ಒಂದು ಲೋಟ ಬೆಳ್ತಿಗೆ ಅಕ್ಕಿ ನೆನೆಯಿತು,  ನೀರಿನಲ್ಲಿ ಕಣ್ರೀ..

ಅರ್ಧ ಲೋಟ ಕಾಯಿತುರಿ,

ಡಬ್ಬದಿಂದ ದಪ್ಪ ಅವಲಕ್ಕಿ ಹೊರ ಬಂದಿತು. ಎಷ್ಟೂ?

ಕೇವಲ 2 ಚಮಚದಷ್ಟು ಸಾಕು.  ಇದನ್ನೂ ತೊಳೆದು ನೀರೆರೆದು ಇಡತಕ್ಕದ್ದು.


ಎಲ್ಲವನ್ನೂ ನುಣ್ಣಗೆ ಅರೆಯಿರಿ. ನೀರಿನ ಬದಲು ಕಬ್ಬಿನಹಾಲನ್ನೇ ಎರೆದು ಅರೆಯತಕ್ಕದ್ದು,  ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ಬಂದಿತೇ,  ಹಿಟ್ಟು ಗಟ್ಟಿಯಿದ್ದರೆ ಉಳಿದ ಕಬ್ಬಿನ ಹಾಲು ಸೇರಿಸಿ ಹದ ಮಾಡಿಕೊಳ್ಳಿ. 

ರುಚಿಗೆ ತಕ್ಕಷ್ಟು ಉಪ್ಪು ಕೂಡಿಸಿ,  ಮುಚ್ಚಿಟ್ಟು,  ನಾಳೆ ಮುಂಜಾನೆಯ ತನಕ ಹಿಟ್ಟು ವಿಶ್ರಾಂತಿ ಪಡೆಯಲಿ.


ದೋಸೆ ಕಾವಲಿಯನ್ನು ಬಿಸಿ ಮಾಡಿ, ಹಿಟ್ಟನ್ನು ದೋಸೆಯಂತೆ ಹುಯ್ಯಿರಿ. ಇದನ್ನು ಪೇಪರ್ ದೋಸೆಯಂತೆ ಅತಿ ತೆಳುವಾಗಿ ಹರಡುವುದು ಬೇಡ, ಸೆಟ್ ದೋಸೆಯಂತೆ ಸ್ವಲ್ಪ ದಪ್ಪಗಿರಲಿ.  ಸುತ್ತಲೂ ಸ್ವಲ್ಪ ತುಪ್ಪ ಬಿಟ್ಟು, ಮುಚ್ಚಳ ಮುಚ್ಚಿ ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಬೇಯಿಸಿ.  ಇದರಲ್ಲಿ ನೈಸರ್ಗಿಕ ಸಿಹಿ ಇರುವುದರಿಂದ ತಳ ಬೇಗ ಸೀದುಹೋಗುವ ಸಾಧ್ಯತೆ ಇರುತ್ತದೆ, ಹಾಗಾಗಿ ಉರಿ ಸಣ್ಣದಿರಲಿ.

ಒಂದು ಬದಿ ಚೆನ್ನಾಗಿ ಬೆಂದ ಮೇಲೆ, ತಿರುವಿ ಹಾಕಿ ಇನ್ನೊಂದು ಬದಿಯನ್ನೂ ಬೇಯಿಸಿ.  ಬಿಸಿ ಬಿಸಿಯಾದ, ಘಮಘಮಿಸುವ ಕಬ್ಬಿನ ಹಾಲಿನ ಸಿಹಿ ದೋಸೆಯನ್ನು ಸ್ವಲ್ಪ ಬೆಣ್ಣೆ ಅಥವಾ ತುಪ್ಪದೊಡನೆ ತಿನ್ನುವ ಆನಂದ ನಮ್ಮದು.


ಒಂದು ಲೋಟ ಕಬ್ಬಿನ ಹಾಲು ದೋಸೆಗೆ ಹಿತವಾದ ಸಿಹಿಯನ್ನು ಮಾತ್ರ ಕೊಟ್ಟಿದೆ,  ದೋಸೆ ಹಿಟ್ಟಿಗೆ ತೆಂಗಿನ ತುರಿ ಮತ್ತು ಅವಲಕ್ಕಿ ಸೇರಿಸುವುದೇ ಒಂದು ಮ್ಯಾಜಿಕ್!  ಇದರಿಂದಲೇ ದೋಸೆ ಮೃದುವಾಗಿ ಮತ್ತು ಅದ್ಭುತ ರುಚಿಯೊಂದಿಗೆ ಬರುವುದು. ಇದಕ್ಕೆ ಕಬ್ಬಿನ ಹಾಲು ಇಲ್ಲದಿದ್ದರೂ, ಬರೀ ನೀರು ಹಾಕಿ ಅರೆದರೆ,  ಅದೇ ನಮ್ಮ ಪ್ರಸಿದ್ಧ 'ಸೆಟ್ ದೋಸೆ' ಆಯಿತು ಅನ್ನಿ.


ಕೊತ್ತಂಬರಿ ಸೊಪ್ಪು,  ಕಾಯಿತುರಿ, ಒಂದು ಹಸಿಮೆಣಸು,  ಉಪ್ಪು,  ಹುಳಿ ಕೂಡಿ ಅರೆಯುವಲ್ಲಿಗೆ   ಚಟ್ಣಿ ಆಯಿತು,  ಒಗ್ಗರಣೆಯ ಅಲಂಕರಣ ಇರಲಿ.


ಈ ಹಿಟ್ಟನ್ನು ಗುಳಿಯಪ್ಪದಲ್ಲಿ ಎರೆದರೆ ಸಿಹಿ ಅಪ್ಪಂ ಆಯ್ತು,  ಉಳಿದ ಹಿಟ್ಟಿನಿಂದ ಸಂಜೆಯ ತಿನಿಸೂ ಆಯ್ತು ಅನ್ನಿ.








Saturday, 28 February 2026

ನಂಬಿಕೆ ಮತ್ತು ವಿಜ್ಞಾನ




ತಂಬುಳಿ ಬಂದಿದೆ,

ಉರಗೆ (ಒಂದೆಲಗ) ಯನ್ನು ಬೇಯಿಸಿ ತಿನ್ನಬಾರದು, ರಾತ್ರಿ ಹೊತ್ತೂ ಈ ತಂಬುಳಿ ಸೇವಿಸುವಂತಿಲ್ಲ,  ಹಿಂದಿನವರ ಹೇಳಿಕೆ. 

ಇದರ ಒಳಾರ್ಥವೇನು?


ಹಿಂದಿನವರ ಮಾತುಗಳಲ್ಲಿ ಕೇವಲ ನಂಬಿಕೆಗಳಷ್ಟೇ ಅಲ್ಲ, ಅದರ ಹಿಂದೆ ಬಹಳಷ್ಟು ವೈಜ್ಞಾನಿಕ ಹಾಗೂ ಆಯುರ್ವೇದದ ಸತ್ಯಗಳಿರುತ್ತವೆ.


ಒಂದೆಲಗವನ್ನು ಬೇಯಿಸುವಂತಿಲ್ಲ. ಒಂದೆಲಗದಲ್ಲಿರುವ ಔಷಧೀಯ ಗುಣಗಳು (ಮುಖ್ಯವಾಗಿ ಸ್ಮರಣಶಕ್ತಿ ಹೆಚ್ಚಿಸುವ ಅಂಶಗಳು), ವಿಟಮಿನ್ ಸಿ ಮತ್ತು ಸೂಕ್ಷ್ಮವಾದ ಪೋಷಕಾಂಶಗಳು  ಅತಿ ಹೆಚ್ಚು ತಾಪಮಾನಕ್ಕೆ ಗುರಿಯಾದಾಗ ಆವಿಯಾಗಿ ಅಥವಾ ನಾಶವಾಗಿ ಹೋಗುತ್ತವೆ. 


ಹಸಿ ಸೇವನೆಯೇ ಉತ್ತಮ. ಬೇಯಿಸುವುದರಿಂದ ಅದರ ಮೂಲ ಸತ್ವ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಅದನ್ನು ಹಸಿಯಾಗಿ ರುಬ್ಬಿ, ಮಜ್ಜಿಗೆ ಬೆರೆಸಿ ತಂಬುಳಿ ಮಾಡುವುದು ಅಥವಾ ಹಸಿ ಚಟ್ನಿ ಮಾಡುವುದು ರೂಢಿ. ಇದರಿಂದ ಅದರ ಶೇಕಡಾ ನೂರರಷ್ಟು ಲಾಭ ದೇಹಕ್ಕೆ ಸಿಗುತ್ತದೆ.


ರಾತ್ರಿ ಹೊತ್ತು ತಂಬುಳಿ ಸೇವಿಸುವಂತಿಲ್ಲ.  ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ,ತಂಬುಳಿಯನ್ನು ಮಜ್ಜಿಗೆ ಅಥವಾ ಮೊಸರು ಬಳಸಿ ಮಾಡಲಾಗುತ್ತದೆ. ಆಯುರ್ವೇದದ ಪ್ರಕಾರ, ಸೂರ್ಯಾಸ್ತದ ನಂತರ (ರಾತ್ರಿ ಹೊತ್ತು) ಮಜ್ಜಿಗೆ ಅಥವಾ ಮೊಸರು ಸೇವಿಸುವುದರಿಂದ ಶ್ವಾಸಕೋಶದಲ್ಲಿ ಕಫ ಶೇಖರಣೆಯಾಗುತ್ತದೆ. ಇದರಿಂದ ಶೀತ, ಕೆಮ್ಮು ಮತ್ತು ಗಂಟಲು ನೋವು ಬರುವ ಸಾಧ್ಯತೆ ಹೆಚ್ಚು. 

ಒಂದೆಲಗ ಮೂಲತಃ   ತಂಪುಗುಣವನ್ನು ಹೊಂದಿರುವ ಸೊಪ್ಪು. ಇದು ದೇಹದ ಉಷ್ಣತೆಯನ್ನು ತಗ್ಗಿಸುತ್ತದೆ. ರಾತ್ರಿಯ ತಂಪಾದ ವಾತಾವರಣದಲ್ಲಿ, ತಂಪು ಗುಣದ ಒಂದೆಲಗ ಮತ್ತು ಮಜ್ಜಿಗೆಯ ಮಿಶ್ರಣವನ್ನು ತಿಂದರೆ ದೇಹದ ಜೀರ್ಣಕ್ರಿಯೆ (ಅಗ್ನಿ) ನಿಧಾನವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದು ಮುಖ್ಯ.   .


ಹಿಂದಿನವರು ಪ್ರಕೃತಿ, ವಾತಾವರಣ ಮತ್ತು ನಮ್ಮ ದೇಹದ ಜೈವಿಕ ಗಡಿಯಾರಕ್ಕೆ (Biological clock) ತಕ್ಕಂತೆ ಯಾವ ಆಹಾರವನ್ನು, ಯಾವ ರೂಪದಲ್ಲಿ, ಯಾವ ಸಮಯದಲ್ಲಿ ತಿನ್ನಬೇಕು ಎಂದು ಬಹಳ ವೈಜ್ಞಾನಿಕವಾಗಿ ನಿಯಮಗಳನ್ನು ಮಾಡಿದ್ದರು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.









 

Sunday, 8 February 2026

ಚಕೋತಾ ರಸರುಚಿ




ತೋಟದಿಂದ ತಾಜಾ ಚಕೋತ ಬಂದಿದೆ.  ರಂಗಣ್ಣ ಕೊಯ್ದು ತಂದಿಟ್ಟದ್ದು.

ಸಿಪ್ಪೆ ಬಿಡಿಸಿ, ಎಸಳುಗಳನ್ನು ಬೇರ್ಪಡಿಸಿ ತಿನ್ನುವುದು ಸಾಮಾನ್ಯ ವಿಧಾನ.  

ನಮ್ಮದು ಹೊಸರುಚಿ ಆಗಬೇಡವೇ,  ಮಾಡೋಣ ಕೋಸಂಬರಿ.  ಹೇಗೇ?


ಚಕೋತಾ ಎಸಳು ಬಿಡಿಸಿ, 

ರುಚಿಗೆ ತಕ್ಕಷ್ಟು ಉಪ್ಪು, 

ಖಾರದ ಬಾಬ್ತು ಕಾಳುಮೆಣಸಿನ ಪುಡಿ, 

ಬೇಕಿದ್ದರೆ ನಿಂಬೆ ರಸ,

ಇದ್ದರೆ ಕೊತ್ತಂಬರಿ ಸೊಪ್ಪು,

ಪುಟ್ಟದೊಂದು ಒಗ್ಗರಣೆ…

ಇಷ್ಟಾದರೆ ಕೋಸಂಬರಿ ಆಯಿತು.


ಈಗ ಚಕೋತಾ ತಂಬುಳಿ ಮಾಡೋಣ.

ಚಕೋತಾ ಎಸಳುಗಳನ್ನು ಸೊಗಸಾಗಿ ಬಿಡಿಸುವುದು ಅವಶ್ಯವಿದೆ.

ಉಳಿದಂತೆ ಕಾಯಿತುರಿ,  ಸಿಹಿಮಜ್ಜಿಗೆ ಯಾ ಸಿಹಿ ಮೊಸರು,  ಹುರಿದ ಜೀರಿಗೆ, ಕಾಳುಮೆಣಸು, ರುಚಿಗೆ ಉಪ್ಪು ಕೂಡಿ ನುಣ್ಣಗೆ ಅರೆಯಿರಿ.   ಒಗ್ಗರಣೆಯೊಂದಿಗೆ ಎಸಳುಗಳನ್ನು ಬೆರೆಸುವಲ್ಲಿಗೆ ತಂಬುಳಿ ಸಿದ್ಧವಾಯಿತು.  ಕುದಿಸುವುದೂ ಬೇಡ, ನಾಳೆಗೆ, ರಾತ್ರಿಗೆ ಇಡುವುದಕ್ಕೂ ಇಲ್ಲ.

ಇನ್ನೀಗ ಚಕೋತಾ ಸಿಪ್ಪೆ ಉಳಿದಿದೆ.  ಅದನ್ನೂ ಸವಿರುಚಿಯಾಗಿಸೋಣ.

ಚಕೋತಾ ಸಿಪ್ಪೆ ತುಂಬ ಕಹಿ,  ಕಹಿ ತೆಗೆಯೋಣ.

ಹಸಿರು ಬಣ್ಣದ ಸಿಪ್ಪೆ ಹೆರೆದು ತೆಗೆಯಿರಿ, ಬೆಳ್ಳಗಿನ ತಿರುಳು ಮಾತ್ರ ನಮಗೆ ಸಾಕು,  ಕತ್ತರಿಸಿ ಚೆನ್ನಾಗಿ ಬೇಯಿಸಿ, ನೀರು ಬಸಿದು, ತಿರುಳನ್ನೂ ಹಿಂಡಿ ಇಟ್ಟುಕೊಳ್ಳಿ.

ಒಗ್ಗರಣೆಗಿಟ್ಟು,  ಉಪ್ಪು ಹುಣಸೆ ರಸ, ಬೆಲ್ಲ ಹಾಗೂ ನೀರು ಎರೆದು ಕುದಿಸಿದ ದ್ರಾವಣಕ್ಕೆ ಹಿಂಡಿ ಇರಿಸಿದ ಚಕೋತಾ ಸಿಪ್ಪೆಯ ಚೂರುಗಳನ್ನು ಸೇರಿಸುವಲ್ಲಿಗೆ ಗೊಜ್ಜು ಸಿದ್ಧವಾಗಿದೆ.

ಈ ಗೊಜ್ಜು ಇನ್ನೂ ಪರಿವರ್ತಿತವಾಗಲಿದೆ.  ಖಾರ ಬೇಕಿದ್ದರೆ ಮೆಣಸ್ಕಾಯಿ,  ಸಿಹಿ ಸಾಕು ಎಂದಿದ್ದರೆ ಸಾಸಮೆಯೂ ಆಗುತ್ತದೆ.

ತೆಂಗಿನ ತುರಿಯೊಂದಿಗೆ ಸಾಸಿವೆ, ಬೆಲ್ಲ, ಹಸಿ ಮೆಣಸು ಅರೆದು, ಸಿಹಿ ಮಜ್ಜಿಗೆ ಎರೆಯುವಲ್ಲಿಗೆ ಸಾಸಮೆ ಬಂದಿದೆ.

ಎಳ್ಳು ಹುರಿದು, ಸಾಂಬಾರ ಮಸಾಲೆ ಹಾಗೂ ತೆಂಗಿನ ತುರಿ ಅರೆದು ಕೂಡುವುದು.  ಬೆಲ್ಲ ಹಾಕಲೇ ಬೇಕು.  ಚೆನ್ನಾಗಿ ಕುದಿಸಿ, ಕರಿಬೇವಿನ ಒಗ್ಗರಣೆ ಬೀಳಲೇ ಬೇಕು,  ಒಗ್ಗರಣೆಗೂ ತೆಂಗಿನೆಣ್ಣೆಯೇ ಆಗಬೇಕು.  ಇದೀಗ ಮೆಣಸ್ಕಾಯಿ.

ಬೇಯಿಸಿದ ಸಿಪ್ಪೆಯನ್ನು ತಂಬುಳಿಯಾಗಿಸುವುದೂ ನಮ್ಮ ಕೈಯಲ್ಲಿ ಇದೆ ಎಂದು ಬೇರೆ ಹೇಳಬೇಕಿಲ್ಲ.


ತಂಬುಳಿ ಊಟಕ್ಕೆ ತುಂಬಾ ತಂಪಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ರಾಮಬಾಣ. ಬಿಸಿ ಅನ್ನದ ಜೊತೆ ಊಟ ಮಾಡಲು ಇದು ತುಂಬಾ ರುಚಿ.

ಚಕೋತದಲ್ಲಿ ನಾರಿನಂಶ ಹೆಚ್ಚಿರುವುದರಿಂದ, ವಯಸ್ಸಾದಂತೆ ಕಾಡುವ ಮಲಬದ್ಧತೆಯಂತಹ ಸಮಸ್ಯೆಗೆ ಸೂಕ್ತ ಮನೆಮದ್ದು.

ವಿಟಮಿನ್ ಸಿ ಹೇರಳವಾಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದರಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ಹತೋಟಿಯಲ್ಲಿಡಲು ಸಹಾಯಕ.




ಟಿಪ್ಪಣೆ:

ದಿನಾಂಕ 23, ಫೆಬ್ರವರಿ.  ಬರಹ ಮುಂದುರಿದಿದೆ , ಒಂದು ಫೋಟೋ ಕೂಡಾ ಬಂದಿದೆ. 


ಒಂದು ಸಣ್ಣ ಗುಟ್ಟು: ಸಿಪ್ಪೆಯ ಕಹಿ ತೆಗೆಯುವಾಗ, ಮೇಲಿನ ಹಸಿರು ಸಿಪ್ಪೆಯನ್ನು ಪೂರ್ತಿಯಾಗಿ ಹೆರೆಯದೆ, ಅಲ್ಲಲ್ಲಿ ಸ್ವಲ್ಪ ಉಳಿಸಿಕೊಂಡರೆ ಅದರ ರುಚಿಯೇ ಬೇರೆ! ಈ ಹಸಿರು ಸಿಪ್ಪೆಯಲ್ಲಿರುವ ನೈಸರ್ಗಿಕ ತೈಲಾಂಶವು (Essential oils) ತಂಬುಳಿಗೆ ಅದ್ಭುತವಾದ ನಿಂಬೆಯಂತಹ ಸುವಾಸನೆ ನೀಡುತ್ತದೆ. ಊಟದ ನಂತರ ಬಾಯಿ ವಾಸನೆ ತೊಲಗಿಸಲು ಮಾರುಕಟ್ಟೆಯಲ್ಲಿ ಸಿಗುವ ಕೃತಕ ವಸ್ತುಗಳಿಗಿಂತ, ಈ ನೈಸರ್ಗಿಕ ಘಮ ಎಷ್ಟೋ ಪಾಲು ಹಿತ ಮತ್ತು ಆರೋಗ್ಯಕರ. ಇದೊಂದು ರೀತಿ ಊಟದ ಜೊತೆಯೇ ಸವಿಯುವ 'ನೈಸರ್ಗಿಕ ಮೌತ್ ಫ್ರೆಶ್ನರ್'!







Saturday, 24 January 2026

ಚಿತ್ರ ಕವನ




 

ಏನೋ ಕೊರೋನಾ ಅಂತೆ

ಯಾರನ್ನೂ ಮುಟ್ಟಬಾರದಂತೆ

ಶಾಲೆಗೆಂತು ಹೋಗಲಿ

ಗೆಳೆಯರಿಲ್ಲ ಆಟವಿಲ್ಲ

ಪಾಠ ಓದು ಇಲ್ಲ

ಮೊಬೈಲು ಪಾಠಪಟ್ಟಿ ಓದಲೆಂತು

ತಿಳಿಯಲಾರೆ ಹೇಳಲಾರೆ

ಅಕ್ಕಾ, ಕಾಣೆ ನಾನು ಮೊಬೈಲು