Pages

Ads 468x60px

Tuesday 22 January 2013

ಧರೆ ಹೊತ್ತಿ ಉರಿದಾಗ.....







ಸಂಜೆಯ ಟೀ ಕುಡಿದು ನಮ್ಮವರು ಎಂದಿನಂತೆ ಕೈಯ್ಯಲೊಂದು ಬೀಸುಗತ್ತಿ ಹಿಡಿದು ಅಡಿಕೆ ತೋಟಕ್ಕೆ ಹೋದರು.  ನಾನು ಯಥಾಪ್ರಕಾರ ನನ್ನ ಬ್ಲಾಗು ಪ್ರಪಂಚದಲ್ಲಿ ವಿಹರಿಸುತ್ತಾ,  ಐ ಪ್ಯಾಡ್ ಧಾರಿಣಿಯಾಗಿ ಹೊತ್ತಿನ ಪರಿವೆಯೇ ಇಲ್ಲದೆ ಕುಳಿತಿದ್ದಂತೆ ಮನೆಯ ಮುಂದೆ ಸ್ಕೂಟರು ನಿಂತ ಸದ್ದಾಯಿತು.   ಈ ಹೊತ್ತಿಗೆ ಬಂದವರ್ಯಾರು ಎಂದು ಕುಳಿತಲ್ಲಿಂದ ಎದ್ದು ವಿಚಾರಿಸುವ ಮೊದಲೇ  ಖಾದರ್ ಒಳ ನುಗ್ಗಿದ.  

" ಅಕ್ಕಾ,  ನೀವು ಒಳಗೆ ಕೂತುಕೊಂಡು ಮಾಡುವುದು ಎಂಥದು ?  ....ಅಲ್ಲಿ ತೋಟಕ್ಕೆ ಬೆಂಕಿ ಬಿದ್ದಿದೆ, ಬನ್ನಿ ಹೊರಗೆ "

ಹ್ಞಾ,  ಏನ್ ಹೇಳ್ತಿದಾನೆ... ನನಗಂತೂ ತಲೆಬಾಲ ಒಂದೂ ಅರ್ಥವಾಗದೆ ಹೋಯಿತು.

" ನಾನು ಪೈವಳಿಕೆಯಲ್ಲಿದ್ದೆ,  ಅಣ್ಣೇರ ಫೋನ್ ಬರುವಾಗ...ಕೂಡ್ಲೇ ಬಂದದ್ದು,  ಅಲ್ಲ ಹೀಗೆ ಮಾಡ್ಬೌದಾ,  ಯಾರೂ ಇಲ್ಲದಿರೂವಾಗ ತೋಟಕ್ಕೆ ಹೋಗೂದಂತೆ,  ಕಿಚ್ಚು ಕೊಡೂದಂತೆ,  ನಾವ್ಯಾರೂ ಇಲ್ವಾ .. ಯಾಕೆ ಒಬ್ರೇ ಹೋಗಿ ಕಾರ್ಬಾರು ಮಾಡೂದು...." 

ಅವನ ವಾಕ್ ಪ್ರವಾಹ ಮುಂದುವರಿಯುತ್ತಿದ್ದಂತೆ ನಾನು ಥಟ್ಟನೆದ್ದು ಸೀದಾ ಅಡುಗೆಮನೆಗೆ ಹೋದೆ.  ಅಗತ್ಯ ಬಿದ್ದರೆ ಇರಲಿ ಎಂದು ಇಟ್ಟಿದ್ದ ಬೆಂಕಿಪೆಟ್ಟಿಗೆ ಜಾಗದಲ್ಲಿ ಇಲ್ಲ !   ಯಾವುದೇ ವಸ್ತು ಬೇಕಾಗಿದ್ದರೂ ನನ್ನ ಬಳಿ ಕೇಳಿ ಇಸ್ಕೊಳ್ಳುತ್ತಿದ್ದವರು ಇವತ್ತು ತಾವೇ ತೆಗೆದುಕೊಂಡು ಹೋಗಿದ್ದಾರೆ.

  " ಇವರೆಲ್ಲಿದ್ದಾರೆ ?"

"  ಅವರು ತೋಟದಲ್ಲಿದ್ದಾರೆ...ನಾನೂ ಅಲ್ಲಿಗೇ ಹೋಗೂದು.  ನೀವು ಮನೆಯಲ್ಲೇ ಕೂತ್ಕೊಳ್ಳೀ...." ಹೇಳುತ್ತಾ ಖಾದರ್ ತೋಟಕ್ಕೆ ದೌಡಾಯಿಸಿದ.

ನನ್ನ ಮನೋಸ್ಥಿತಿಯೇ ಕೆಟ್ಟು ಹೋಗಿರಬೇಕಾದರೆ  ಒಳಗೆ  ಕುಳಿತಿರುವುದೇ,  ಅಂಗಳಕ್ಕಿಳಿದೆ.   ಎದುರುಗಡೆಯ ರಸ್ತೆಯಲ್ಲಿ ಜನ ನರೆದಿದ್ದರು.  ಪಕ್ಕದಮನೆಯ ಗೋಡೆ ಹಾರಿ ಇನ್ನೂ ಹಲವರು ತೋಟದ ಕಡೆ ಓಟ.  ಮನೆಯಂಗಳದಿಂದ ತೋಟದ ಹಿಂದೆ ಇದ್ದ ಎತ್ತರದ ಬೋಳುಗುಡ್ಡದ ರಬ್ಬರು ತೋಟ ಕಾಣಲೊಲ್ಲದು.  ರಸ್ತೆಗೆ ಹೋದರೆ ಕಾಣಬಹುದಿತ್ತು.  

ಆಗಲೇ ಸಂಜೆ ಐದೂವರೆಯಾಗಿತ್ತು.  ಈಗ ಬೆಂಕಿಯ ಕೆನ್ನಾಲಿಗೆ ನನಗೂ ಕಾಣಲಾರಂಭಿಸಿತು.  ಊರಿನ ಜನಸಂದಣಿ ತೋಟದ ಕಡೆ ಹೋಗುತ್ತಿರಬೇಕಾದರೆ ಒಬ್ಬೊಬ್ಬರಾಗಿ ತಮ್ಮ ತಮ್ಮ ಹೆಲ್ಮೆಟ್,  ಕೀ ಇತ್ಯಾದಿಗಳನ್ನು ನನ್ನ ಸುಪರ್ದಿಗೆ ಒಪ್ಪಿಸಿ ಕತ್ತಲಲ್ಲಿ ಮರೆಯಾದರು.  ಅಂತೂ ಏಳೂವರೆ ಗಂಟೆ ಹೊತ್ತಿಗೆ ಬೆಂಕಿ ಆರಿತು,  ಇವರೂ ಮನೆಗೆ ಬಂದರು.

ಅಷ್ಟಕ್ಕೂ ಆಗಿದ್ದೇನು ?  

ಅಡಿಕೆ ತೋಟದ ಹಿಂಬಾಗದ ಬೋಳುಗುಡ್ಡದಲ್ಲಿ ನಮ್ಮ ಶ್ಯಾಮಸೂರ್ಯಂದು ರಬ್ಬರು ತೋಟ.  ನೆಟ್ಟು 3 - 4 ವರ್ಷಗಳಾಗಿವೆ.   ಗಿಡಗಳ ರಕ್ಷಣೆಗೆಂದು ನೆಟ್ಟ ಒಂದು ಬಳ್ಳಿ ಸಸ್ಯ ರಬ್ಬರ್ ಗಿಡಗಳಿಗೆ ಹಸಿರು ಹೊದಿಕೆ ನೀಡಿದ್ದಷ್ಟೇ ಅಲ್ಲದೆ ನೆರೆಯ ಅಡಿಕೆ ತೋಟಕ್ಕೂ ವ್ಯಾಪಿಸಿ ತೋಟವೇ ಮುಚ್ಚಿಹೋದಂತೆ...   ಇದಕ್ಕಾಗಿಯೇ ನಮ್ಮವರು ಕತ್ತೀ ಪ್ರಯೋಗ ಮಾಡುತ್ತಿದ್ದದ್ದು,   ಕಡಿದ ಬಳ್ಳೀರಾಶಿಗೆ  ಕಿಚ್ಚು ಕೊಡುವ ಹೊತ್ತಿಗೆ  ಬೀಡಾಡಿ ದನಗಳು ತೋಟದೊಳಗೆ ಬಂದಿವೆ,  ದನಗಳನ್ನು ಅಟ್ಟಿ ಈಚೆ ಬಂದಾಗ ಕಿಚ್ಚು ತಾನೇ ತಾನಾಗಿ ಮುಂದುವರಿದಿದೆ,   ' ತನ್ನ ಕೈ ಮೀರಿತು '  ಎಂದಾಕ್ಷಣ ಜೇಬಿನಲ್ಲಿದ್ದ ಮೊಬೈಲು ಹೊರ ಬಂದಿದೆ,  ನೆರೆಯ ಖಾದರನಿಗೆ ಮೊದಲ ಕರೆ ಹೋಗಿದೆ.  ಪೋಲಿಸ್ ವ್ಯಾನ್, ಅಗ್ನಿಶಾಮಕ ದಳವೂ ಬಂದಿದೆ.   ಖಾದರ್ ಹಾಗೂ ಊರ ಮಂದಿ ಶ್ರಮಿಸಿ ಬೆಂಕಿಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.











Mucuna Bracteata ಎಂಬ ಹೆಸರಿನ ಈ ನೆಲ ಮುಚ್ಚಲ ಬಳ್ಳಿಯ ಬೆಳವಣಿಗೆಗೆ ನೀರು ಬೇಕಿಲ್ಲ, ಗೊಬ್ಬರವೂ ಬೇಡ.  ಎಂತಹ ಕಠಿಣ ಬರಗಾಲವನ್ನೂ ಎದುರಿಸುವ ಶಕ್ತಿ ಇದಕ್ಕಿದೆ.  ಜಾನುವಾರುಗಳೂ ಇದನ್ನು ಮೂಸಿ ಕೂಡಾ ನೋಡುವುದಿಲ್ಲ. ರೋಗ ಬಾಧೆಯೂ ಇದಕ್ಕಿಲ್ಲ,  ಕ್ರಿಮಿಕೀಟಗಳ ತೊಂದರೆಯೂ ಇಲ್ಲ.    ನೆಟ್ಟು ಬೆಳೆಸಲು ಯಾವ ಶ್ರಮವೂ ಇಲ್ಲ,  ಕಾರ್ಮಿಕರ ಅವಶ್ಯಕತೆ ಬೇಕಾಗುವುದೇ ಇಲ್ಲ.   ಹಾಗಾಗಿಯೇ ರಬ್ಬರ್ ಕೃಷಿಕರು ಇದನ್ನು ನೆಚ್ಚಿಕೊಂಡಿದ್ದಾರೆ.   ಸುತ್ತಮುತ್ತಲಿನ ಪರಿಸರವನ್ನು ಆಕ್ರಮಿಸಿ,  ಇನ್ನಿತರ ಸಸ್ಯವರ್ಗಗಳ ಬೆಳವಣಿಗೆಗಳನ್ನು ಕುಂಠಿತಗೊಳಿಸಿ ಮೆರೆಯುವ ಈ ಬಳ್ಳಿಯ ಒಣಗಿದ ಎಲೆಗಳು ನೆಲದಲ್ಲಿ ದಪ್ಪ ಪದರವಾಗಿ ಉಳಿದು ಸಣ್ಣಪುಟ್ಟ ಗಿಡಗಂಟಿಗಳನ್ನು ನೆಲದಿಂದ ಮೇಲೇಳಲು ಬಿಡುವುದೇ ಇಲ್ಲ.  

Posted via DraftCraft app

0 comments:

Post a Comment