Pages

Ads 468x60px

Wednesday, 27 May 2026

ನೆಲಕಂಚಿ

 



ಮಳೆ ಆರಂಭವಾದ ಮೇಲೆ ಮುಂಜಾನೆಯ ತಿಂಡಿಯ ನಂತರ, ತುಂಟಿಗೆ ಎರಡು ದೋಸೆಯ ಚೂರುಗಳನ್ನು ಹಾಕಿ,  ಮೊಬೈಲ್ ಹಿಡಿದು ಅಂಗಳಕ್ಕಿಳಿದರೆ,  ಮುಂದಿನ ಅರ್ಥ ಗಂಟೆ ಸಸ್ಯ ಸಾಮ್ರಾಜ್ಯದೊಂದಿಗೆ ನನ್ನ ಮಾತುಕತೆ.  ಕಲ್ಲಿನ ದರೆಯ ಮೇಲೆ ಲಿಲ್ಲಿ ಹೂಗಳು ಅರಳಿವೆ,   ಥಂಡರ್ ಲಿಲ್ಲಿ ವಾರವಾದರೂ ಬಾಡದು,  ನೆನೆದು ಮುದ್ದೆಯೂ ಆಗದು.    ಕೆಳಗೆ ನಾನು ನಿಂತ ನೆಲದಲ್ಲಿ ಸೂಗದೆ ಬಳ್ಳಿ ಹಬ್ಬುತ್ತಲಿದೆ.  ಇದೂ ಒಂದು ಔಷಧೀಯ ಸಸ್ಯ,  ಪ್ರಕೃತಿಯಲ್ಲಿ ಔಷಧೀಯ ಗುಣವಿಲ್ಲದ ಸಸ್ಯವಿಲ್ಲ.    ಲಿಲ್ಲಿ ಕೂಡಾ ಔಷಧೀಯ ಸಸ್ಯವಂತೆ.   ಅಲ್ಲೊಂದು ಬಿಳಿ ಹೂ ಕಾಣಿಸುತ್ತಿದೆಯಲ್ಲ.  ಹೂವೇ ಚಂದ, ಎಲೆಗಳೂ ಆಕರ್ಷಕ.  ಮಳೆಗಾಲದ ವೈಭವ ಎಂದರೆ ಹೀಗೆ ಮನೋಹರ ದೃಶ್ಯಗಳು.  ಬಿಳಿ ಹೂ ಮೊಬೈಲಲ್ಲಿ ಇಳಿಯಿತು.   ಮನೆಗೆ ತೆರಳೋಣ. ಇದೇನೂ ನಾನು ಇದುವರೆಗೂ ಕಾಣದ ಹೂವಲ್ಲ,  ಹಿಂದೆ ಮನೆ ತುಂಬ ಮಹಿಳೆಯರು ಇದ್ದ ಕಾಲ,  ತುರುಬು ಕಟ್ಟಿ ಹೂವಿನ ದಂಡೆಯನ್ನು ಸಿಕ್ಕಿಸುವಲ್ಲಿಗೆ ಕೇಶ ಶೃಂಗಾರ ಮುಗಿಯಿತು.  ಮಲ್ಲಿಗೆ, ಸೇವಂತಿಗೆ, ಅಬ್ಬಲಿಗೆ ಯಾವುದೂ ಆದೀತು. ಮಳೆಯ ಅವತರಣದೊಂದಿಗೆ ನೆಲದಿಂದೇಳುವ ಕಾಡು ಹೂಗಳೂ ನಡಿದೀತು,  ಹಳ್ಳಿಯ ಮನೆಯಲ್ಲಿದ್ದ ನನ್ನ ದೊಡ್ಡಮ್ಮನ ತಲೆಯಲ್ಲಿ ಈ ಹೂವನ್ನು ಕಂಡಿದ್ದೇನೆ.  “ ಈ ಹೂ ಯಾವುದು ದೊಡ್ಡಮ್ಮ? “  ಅವರೇನೋ ಉತ್ತರ ಕೊಟ್ಟಿದ್ದರು.   ಬಾಲ್ಯಸಹಜವಾಗಿ ಹೆಸರು ಮರೆತು ಹೋಗಿತ್ತು.


ಹಿರಣ್ಯದ ನೆಲದೊಡತಿಯಾದ ನಂತರ,  ಇಂಟರ್ನೆಟ್ ಮೊಬೈಲುಗಳ ಒಡನಾಟ, ಸಹಜವಾಗಿಯೇ ಪ್ರಕೃತಿಯತ್ತ ಚಿತ್ತ ಹರಿಸುವಂತಾಗಿದೆ.  ನೆಲಕಂಚಿ ಎಂಬ ಹೆಸರಿನ ಈ ಬಿಳಿ ಮಲ್ಲಿಗೆಯಂತಹ ಹೂವು, ಪ್ರತಿ ವರ್ಷವೂ ನನ್ನ ಮೊಬೈಲ್ ನಲ್ಲಿ ದಾಖಲಿಸಲ್ಪಡುತ್ತಲಿದೆ.  ಸಸ್ಯವಿಜ್ಞಾನದಲ್ಲಿ naregamia alata,  ನೆಲದ ಮೇಲೆಯೇ ಹರಡಿದ ನಕ್ಷತ್ರಗಳಂತೆ ಕಾಣುವ ಇದರ ಹೂವುಗಳು ಪರಿಸರವನ್ನು ಒಂದು ನೈಸರ್ಗಿಕ ಔಷಧೀಯ ವನವನ್ನಾಗಿಸಿದೆ ಎಂದರೂ ತಪ್ಪಾಗಲಾರದು. 

ಆಯುರ್ವೇದ ಮತ್ತು ನಾಟಿ ವೈದ್ಯದಲ್ಲಿ ಇದೊಂದು ಅತ್ಯಂತ ಬೆಲೆಬಾಳುವ ಗಿಡಮೂಲಿಕೆ. ನಮ್ಮ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹೆಚ್ಚಾಗಿ ಕಂಡುಬರುವ ಇದನ್ನು ಉಸಿರಾಟದ ತೊಂದರೆ (ಕಫ, ಶೀತ), ಪಿತ್ತ ನಿವಾರಣೆಗೆ ಹಾಗೂ ಗಾಯಗಳನ್ನು ಗುಣಪಡಿಸಲು ಬಹಳ ಹಿಂದಿನಿಂದಲೂ ಬಳಸುತ್ತಿದ್ದಾರೆ.


ಮಳೆಯ ಮೊದಲ ಸಿಂಚನಕ್ಕೆ ತಾನಾಗಿಯೇ ಹುಟ್ಟಿ ಬಂದಂತಹ  ಈ ಸಸ್ಯಗಳು ತೋಟದ ಮಣ್ಣಿನ ಜೀವಂತಿಕೆಯನ್ನು ತೋರಿಸುತ್ತಿವೆ ಎಂದರೆ ಅತಿಶಯೋಕ್ತಿಯಾಗಲಾರದು.  ಮಳೆಯ ಆಗಮನ ಪ್ರಕೃತಿಗೆ ಒಂಥರಾ ಜಾದೂ ಮಾಡಿದಂತೆ! ತಿಂಗಳುಗಟ್ಟಲೆ ಮಣ್ಣಿನಲ್ಲಿ ಸುಪ್ತವಾಗಿ ಮಲಗಿದ್ದ ಬೀಜಗಳು ಮತ್ತು ಬೇರುಗಳು ಮಳೆಯ ನೀರು ತಾಗಿದ ತಕ್ಷಣವೇ ಜೀವ ಪಡೆದು ಹೀಗೆ ಮೇಲೆದ್ದು ನಳನಳಿಸುತ್ತವೆ.






Wednesday, 20 May 2026

ಪಚ್ಚಬಾಳೆಯ ದೋಸೆ

 



ಸಂಜೆ ಡೈರಿಯಿಂದ ಹಾಲು ತರುವಾಗ ಅಗತ್ಯವಿರುವ ಹಣ್ಣು ಹಂಪಲು, ತರಕಾರಿ ತರಿಸುವ ರೂಢಿ.   ಆ ಸಮಯಕ್ಕೆ ನಮ್ಮ ಡ್ರೈವರು ರಾಜಣ್ಣ “ ಹಾಲು ನಾನೇ ತರ್ತೇನೆ. “. ಎಂದು ಹೊರಟ.  ಅವನಿಗೆ ನಮ್ಮ ಕನ್ನಡ, ತುಳು ಬಾರದು,  ಹಿಂದಿಯಲ್ಲಿ ವದರಬೇಕು.   ನನ್ನದು ಹೈಸ್ಕೂಲ್ ಹಿಂದಿ, ಉಳಿದಂತೆ ಹಿಂದಿ ಸಿನಿಮಾ,  ಧಾರಾವಾಹಿಗಳೇ ನಮ್ಮ ಪಠ್ಯ.


ನೇಂದ್ರ ಬಾಳೆ ಹಣ್ಣು ತಾ ಅಂದಿದ್ದಕ್ಕೆ ಪಚ್ಚಬಾಳೆ ಬಂದಿದೆ.  ನನಗೂ ಮೊದಲು ತಿಳಿಯಲಿಲ್ಲ.   ತಿನ್ನಬಹುದಿತ್ತು,  ನನಗೋ ಶೀತಗಾಳಿ ಬಡಿದಿದೆ.  ತಿನ್ನಲು ರುಚಿ ಆದರೂ ಶೀತ ಜಾಸ್ತಿ ಆದೀತು.


ಹೊರಗೆ ಮೊಬೈಲ್ ಹಿಡಿದು ಕೂತಿದ್ದ ರಾಜಣ್ಣ,  ಅವನಿಗೇ ಎರಡು ಹಣ್ಣು ಸಂದಾಯ ಆಯ್ತು.  ನಮ್ಮವರೂ ಒಂದು ಹಣ್ಣು ತಿಂದರು.


ತಿಂಡಿ ತಿನಿಸು ತಯಾರಿಕೆಗೆ ಪಚ್ಚಬಾಳೆ ಉತ್ತಮ,  ಬನ್ಸ್, ಪೂರಿ, ಚಪಾತಿ ಎಲ್ಲ ನೆನಪಾಯ್ತು,  ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಯಾಕಾದರೂ ಮಾಡಬೇಕು, ಮಕ್ಕಳು, ಮೊಮ್ಮಕ್ಕಳು ಬೆಂಗಳೂರಿನ ವಾಸ್ತವ್ಯ.


ದೋಸೆ ಮಾಡಿಯೇ ಸಿದ್ಧ,  ಒಂದೂವರೆ ಲೋಟ ಅಕ್ಕಿ ನೀರಿಗೆ ಬಿತ್ತು,  ತೆಂಗಿನ ಕಾಯಿ ಒಡೆದು ಅರ್ಧ ಕಡಿ ತುರಿದೂ ಆಯ್ತು.  ತುರಿದ ಕಾಯಿಯಲ್ಲಿ ಅರೆವಾಸಿ ನಾಳೆಯ ಚಟ್ಣಿಗೆ ತೆಗೆದಿರಿಸಲಾಯಿತು.  ಒಂದು ಚಮಚ ದಪ್ಪ ಅವಲಕ್ಕಿ ಇರಲಿ,  ಅದನ್ನೂ ನೀರಿನಲ್ಲಿ ಮುಳುಗಿಸಿ ಇಡುವುದು.


ರಾತ್ರಿ ಊಟದ ನಂತರ ಎಲ್ಲವನ್ನೂ ನುಣ್ಣಗೆ ಅರೆಯುವುದು,  ರುಚಿಗೆ ಉಪ್ಪು,  ತುಂಡು ಬೆಲ್ಲ ಕೂಡಿಸಿ ಇಡುವುದು,  ಮುಂಜಾನೆ ದೋಸೆ ಎರೆಯುವುದು.


ಈ ಹಿಟ್ಟಿನಿಂದ ಸೆಟ್ ದೋಸೆಯೂ ಆದೀತು, ತೆಳ್ಳಗೆ ಪೇಪರ್ ದೋಸೆಯೂ ನಡೆದೀತು,  ಗುಳಿಯಪ್ಪವೂ ಭಲೇ ಭಲೇ ಅಂದೀತು.


ಬರೆಯಲು ಮರೆತದ್ದು,  ಅರೆಯುವಾಗ ಮೂರು ಬಾಳೆಹಣ್ಣು ಕೂಡಿ ಅರೆಯಿರಿ.  







Wednesday, 13 May 2026

ಶರಬತ್ ಹಣ್ಣು

 


ಆರೇಳು ವರ್ಷಗಳ ಹಿಂದಿನ ಮಾತು,  ನಾಗಬನ ಜೀರ್ಣೋದ್ಧಾರಗೊಂಡು ಭಕ್ತಮಹನೀಯರು ಪುಳಕಿತರಾದಾಗ, ಇಲ್ಲೊಂದು ಹಸಿರುವನ ನಿರ್ಮಾಣವಾಗಿ ಬಿಟ್ಟಿತು,  ವಿಧ ವಿಧ ಸಸ್ಯಗಳು ಓಡೋಡಿ ಬಂದವು.  ಅವುಗಳಲ್ಲಿ ಈ ಶರಬತ್ ಬಳ್ಳಿಯೂ ಸೇರಿತ್ತು.   ಅದರಲ್ಲಿಯೂ ಎರಡು ಬಣ್ಣ,  ಹಸಿರು ಹಾಗೂ ನಸು ನೇರಳೆ,   ನಾಗದೇವರಿಗೆ ತಂಪು ಇರಬೇಕು,  ಶರಬತ್ ಬಳ್ಳಿಯೂ ಚಪ್ಪರದಂತೆ ಹಬ್ಬಿತು,   ಇಂತಹ ಸುಡುಬೇಸಿಗೆಯಲ್ಲಿ ತೊನೆದಾಡುವ ಹಣ್ಣುಗಳು,  ಹೂವುಗಳ ನೋಟವೇ ಕಣ್ಣು ತಣಿಸುವಂತಹುದು,   ನಮಗೂ ಶರಬತ್ ಹಣ್ಣು ಹೊಸದು, ಹಾಗೇನೇ ಕತ್ತರಿಸಿ, ಸಕ್ಕರೆ ಬೆರೆಸಿ ತಿಂದು ನೋಡಿದ್ದೂ ಆಯ್ತು,  “ಪರಿಮಳವೇನೋ ಮಸ್ತ್ … ಹುಳಿಯೂ ಉಂಟಲ್ಲ..” ನಮ್ಮವರ ಗೊಣಗಾಟ.   “ ಹೆಚ್ಚು ಮಾರ್ಕು ಇರೂದು ಒಳಗಿನ ಬೀಜ ಗೊತ್ತಾ,  ಅದನ್ನೂ ತಿನ್ನಿ.” ನನ್ನ ಒತ್ತಾಯ.


ಮಳೆಗಾಲ ಆರಂಭದ ನಂತರ, ಜಡಿಮಳೆಗೆ ಅಂಗಳಕ್ಕೂ ಇಳಿಯುವವರು ನಾವಲ್ಲ,  ಒಂದು ಹಂತದ ಮಳೆಯ ಅವತರಣ ಮುಗಿದು,  ಶ್ರಾವಣ ಬಂದ ನಂತರ ತೋಟದ ಕೆಲಸಕ್ಕೆ ಕಾರ್ಮಿಕರ ಪಡೆ ಬಂದಿದೆ.   ಬಂದವರೇ ಅನಗತ್ಯ ಸೊಪ್ಪುಸದೆ, ಕಳೆಗಿಡಗಂಟಿಗಳೆಲ್ಲ ಕತ್ತಿಪ್ರಹಾರಕ್ಕೆ ನೆಲಕಚ್ಚಿವೆ,  ಆ ಸಮಯದಲ್ಲಿ ನಮ್ಮ ಶರಬತ್ ಬಳ್ಳಿಯೂ ಹೋಯ್ತು. ನೆಟ್ಟವರು ಯಾರೋ, ಕಡಿದವರು ಯಾರೋ, ನಮಗೆ ಶರಬತ್ ಕುಡಿಯುವ ಯೋಗ ತಪ್ಪಿತು.


ಶ್ರಾವಣ ಬಂದಾಗ, ಮೊದಲು ಬರುವುದೇ ನಾಗಪಂಚಮಿ,  ನಮ್ಮ ಬಾಯಾರು ಕಂಬಳಗುತ್ತು ಮನೆತನದ ಬಂಟ ಸಮುದಾಯ ಬಾಂಧವರು ಬಂದು ಸೇರಿ ನಾಗಪಂಚಮಿ ಆಚರಣೆ.   ಸಸಿ ನೆಟ್ಟ ಲಿಂಗಪ್ಪ ಶೆಟ್ಟಿ ಪುನಃ ತಂದು ನೆಟ್ಟ ಶರಬತ್ ಬಳ್ಳಿಯನ್ನು ನಾವೂ ಜಾಗರೂಕತೆಯಿಂದ ಪಾಲನೆ, ಪೋಷಣೆ ಮಾಡಿದ ಸಾಹಸದಿಂದ ಈಗ ಶರಬತ್ ಕುಡಿದಾಯಿತು.


ಈಗ ಆ ಹೊಸ ಬಳ್ಳಿ ನಮ್ಮ ಹಿತ್ತಲಿನ ಪೇರಳೆ ಮರವನ್ನು ಅಪ್ಪಿಕೊಂಡು ಬೆಳೆಯುತ್ತಿದೆ. ಮರದ ಆಸರೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಹಬ್ಬಿರುವ ಈ ಬಳ್ಳಿಯಲ್ಲಿ ಕೃಷ್ಣಕಮಲದಂತಹ ಅದ್ಭುತ ಹೂವುಗಳು ಅರಳಿದಾಗ ಪ್ರಕೃತಿಯ ಕಲಾಕೃತಿಗೆ ಬೆರಗಾಗಲೇಬೇಕು. ಕೇವಲ ಕಣ್ಣಿಗಷ್ಟೇ ಅಲ್ಲ, ಈ ಶರಬತ್ ಹಣ್ಣು (ಪ್ಯಾಷನ್ ಫ್ರೂಟ್) ಆರೋಗ್ಯಕ್ಕೂ ದೊಡ್ಡ ಆಸರೆ. ಇದರಲ್ಲಿರುವ ವಿಟಮಿನ್ ಸಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಇದರ ಬೀಜ ಮತ್ತು ತಿರುಳು ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ರಕ್ತದೊತ್ತಡ ನಿಯಂತ್ರಿಸುವ ಮತ್ತು ಆಯಾಸ ನೀಗಿಸುವ ಗುಣವೂ ಇದರಲ್ಲಿದೆ.


ಮೊನ್ನೆ ರಂಗಣ್ಣ ತಂದುಕೊಟ್ಟ ತಾಜಾ ಹಣ್ಣುಗಳನ್ನು ಕತ್ತರಿಸಿ, ಅದರ ರಸ ತೆಗೆದು ಜ್ಯೂಸ್ ಮಾಡಿ ಸವಿದಾಗ, ಅಂದಿನ ಆ 'ಗೊಣಗಾಟ'ದ ನೆನಪಾಗಿ ಮುಖದಲ್ಲಿ ನಗು ಮೂಡಿತು. ಹುಳಿ-ಸಿಹಿ ಬೆರೆತ ಆ ತಂಪು ಪಾನೀಯ ಗಂಟಲೊಳಗೆ ಇಳಿಯುತ್ತಿದ್ದಂತೆ, ಒಮ್ಮೆ ಕಳೆದುಕೊಂಡರೂ ಪ್ರಕೃತಿ ಮತ್ತೆ ಒಲಿದು ನೀಡಿದ ಈ ಉಡುಗೊರೆಗೆ ಮನಸ್ಸು ತುಂಬಿ ಬಂತು.



Wednesday, 6 May 2026

ಗೋಧಿ ಪಾಯಸ

 


ಗೋಧಿಕಡಿ ಇಡ್ಲಿ, ದೋಸೆ ಸವಿದಾಯ್ತು,  ಅದರೂ ಮಧುಕರ ತಂದುಕೊಟ್ಟ ಮಂಗಳೂರಿನ ಬಾಳಿಗಾ ಸ್ಟೋರ್ ನ ಗೋಧಿಕಡಿ ಮುಗಿದಿರಲಿಲ್ಲ.  ಹಿರಣ್ಯ ದೇವಸ್ಥಾನದಲ್ಲಿ ಸವಿದ ಅಕ್ಕಿಪಾಯಸದ ಮಾದರಿಯಲ್ಲೇ ಗೋಧಿ ಪಾಯಸ ಮಾಡಿದರಾದೀತು.  

ಗೋಧಿ ಪಾಯಸಕ್ಕೆ ಬೆಲ್ಲವೇ ಸೂಕ್ತ,  ಎರಡು ಅಚ್ಚು ಸಾಕಾದೀತು ಎಂದು ಬೆಲ್ಲದ ಡಬ್ಬ ತೆರೆದಾಗ, ಬೆಲ್ಲ ದ್ರವರೂಪಕ್ಕೆ ಹೊರಳುವಂತಿದೆಯಲ್ಲ!  ಬಹುಶಃ ಸೆಕೆಗೆ ಹೀಗಾಗಿದೆ. ಬೆಲ್ಲವನ್ನು ಕೈಗೆತ್ತಿಕೊಂಡಾಗ ಬೆಲ್ಲದ ಕಡು ವರ್ಣವನ್ನು ಕಳೆದುಕೊಂಡಂತೆ, ಸಕ್ಕರೆಯ ಅಚ್ಚಿನಂತೆ ಭಾಸವಾಯಿತು.  ಗಟ್ಟಿಕಲ್ಲಿನಂತೆ ಇದ್ದ ಅಚ್ಚನ್ನು ಕಷ್ಟಪಟ್ಟು ಚೂರಿಯಲ್ಲಿ ತುಂಡರಿಸಿ ಬಾಯಿಗೆ ಹಾಕಿದಾಗ ಇದು ಸಕ್ಕರೆ,  ಬೆಲ್ಲವಲ್ಲ ಎಂದು ತಿಳಿಯಿತು.  ಸಕ್ಕರೆ ಇರುವಾಗ ನಾನೇಕೆ ಈ ಬೆರಕೆ ಸಕ್ಕರೆ ಉಪಯೋಗಿಸಲಿ?  ಇನ್ನೂ ಬೇರೇನನ್ನು ಸೇರಿಸಿರುತ್ತಾರೋ ತಿಳಿಯದು.


ಅಂತೂ ಮನೆಯ ಸದಸ್ಯರೊಂದಿಗೆ ಸಮಾಲೋಚಿಸಿ ಬೆಲ್ಲವನ್ನು ಬಿಸಾಡುವ ತೀರ್ಮಾನಕ್ಕೆ ಬರಲಾಯಿತು.

ನಿನ್ನೆ ರಂಗಣ್ಣ ಬಂದಿದ್ದ,  “ನೋಡೂ ಬೆಲ್ಲ ಹೀಗಾಗಿದೆ,   ಈಗ ಅಂಗಡಿಯಿಂದ ಕೇವಲ ಅರ್ಧ ಕಿಲೋ ಬೆಲ್ಲ ತಂದ್ಕೊಂಡು. “

ರಂಗಣ್ಣ ಕಲಬೆರಕೆ ಬೆಲ್ಲವನ್ನು ತೆಂಗಿನ ಮರದ ಬುಡಕ್ಕೆ ಚೆಲ್ಲಿ ಬಂದ,  ಹೊಸದಾದ ಬೆಲ್ಲವೂ ಬಂದಿತು.  ಇನ್ನೀಗ ಪಾಯಸದ ವ್ಯವಹಾರ ನೋಡಿಕೊಳ್ಳೋಣ.



ನಿಧಾನಗತಿಯಲ್ಲಿ ಬೇಯುವ ಗೋಧಿಗೆ ಕುಕ್ಕರ್ ಅವಶ್ಯವಿದೆ.   ಇಬ್ಬರಿಗೆ ಬೇಕಾಗುವಷ್ಟೇ ಪಾಯಸ ಮಾಡಬೇಕಾಗಿದೆ.  ಐದು ಚಮಚ ಗೋಧಿ ಕಡಿ ಅಳೆಯಿರಿ.  ಕುಕ್ಕರಿಗೆ ಮೂರು ದೊಡ್ಡ ಲೋಟ ನೀರು ಎರೆಯಿರಿ.

ದೊಡ್ಡ ಉರಿಯಲ್ಲಿ ಮೂರು ಸೀಟಿ ಹಾಕಲಿ.  ನಂತರ ಉರಿಯನ್ನು ಕನಿಷ್ಠ ಡಿಗ್ರಿಯಲ್ಲಿರಿಸಿ,  ಹತ್ತು ನಿಮಿಷ ಬಿಟ್ಟು ಉರಿಯನ್ನು ಆರಿಸಿ,  ಇಂತಹ ವ್ಯವಹಾರಗಳಿಗೆ ಇಂಡಕ್ಷನ್ ಸ್ಟವ್ ಸೂಕ್ತ.

ಒಂದೇ ಸ್ಟೀಲ್ ಕುಕರ್ ಇದ್ದುದರಿಂದ ಮೊದಲು ಗೋಧಿಯನ್ನು ಬೇಯಿಸಿ,  ಅದನ್ನು ಇನ್ನೊಂದು ದಪ್ಪ ತಳದ ಸ್ಟೀಲ್ ಪಾತ್ರೆಗೆ ಬದಲಿಸಿದ್ದೂ ಆಯ್ತು, ಎರಡು ಅಚ್ಚು ಬೆಲ್ಲ ಹಾಕಿರಿಸುವುದು, ನಧಾನಗತಿಯಲ್ಲಿ ಕರಗುತ್ತಿರಲಿ.  ಇದೀಗ ಕುಕರ್ ಅನ್ನ ಬೇಯಿಸಲು ಹೊರಟಿದೆ ಅನ್ನಿ.


ಅರ್ಧ ತೆಂಗಿನಕಾಯಿ ತುರಿದು ದಪ್ಪ ಹಾಲು ತೆಗೆಯಿರಿ,  ನೀರುಕಾಯಿಹಾಲನ್ನು ಬೆಲ್ಲ ಕರಗುತ್ತಲಿರುವ ಪಾಯಸದ ತಪಲೆಗೆ ಎರೆಯಿರಿ.

ದ್ರಾಕ್ಷಿ, ಗೋಡಂಬಿ,  ಏಲಕ್ಕಿಗಳನ್ನು ಸಿದ್ಧಪಡಿಸಿ,  ನನ್ನ ಬಳಿ ಪಿಸ್ತಾ ಇದ್ದಿತು,  ಅದನ್ನೇ ನಾಲ್ಕು ಚೂರು ಹಾಕುವುದು.

ಅನ್ನದ ಕೆಲಸ ಆಯ್ತು,  ಇದೀಗ ಇಂಡಕ್ಷನ್ ಸ್ಟವ್ ಪಾಯಸ ಕುದಿಸಲು ತಯಾರ್ ಎಂದಿತು.

ಬೆಲ್ಲ ಕರಗಿ ಸಾಂದ್ರವಾಗಬೇಕಿದೆ.   ಗರಿಷ್ಠ ಉಷ್ಣತೆಯಲ್ಲಿ ಕುದಿಸುತ್ತಾ, ಸೌಟಿನಲ್ಲಿ ಕೆದಕುತ್ತಾ,  ಉಷ್ಣತೆಯನ್ನು ಕಡಿಮೆ ಮಾಡುತ್ತಾ ಇದ್ದಂತೆ, ಮೆತ್ತಗೆ ಬೆಂದಂತಹ ಪಾಯಸದ ದ್ರಾವಣಕ್ಕೆ, ದಪ್ಪ ಕಾಯಿಹಾಲು ಎರೆಯುವ ಸಮಯ ಬಂದಿದೆ.   ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿಗಳಿಂದ ಅಲಂಕರಿಸೋಣ.  ಸಾಲದೂ ಎಂಬಂತೆ ಏಲಕ್ಕಿ, ಪಿಸ್ತಾ…


ಮರೆತೇ ಬಿಟ್ಟಿದ್ದೆ,  ಮಧುಕರ ತಂದುಕೊಟ್ಟಂತಹ ವೆನಿಲಾ ಕೋಡುಗಳು, ಮೊನ್ನೆ ತಾನೇ ತಂದಿದ್ದ,  ನನ್ನ ಬಳಿ ಅಡಿಕೆತೋಟದಲ್ಲಿ ಆದಂತಹ ವೆನಿಲಾ ದಾಸ್ತಾನೂ ಇತ್ತು,  ಹೊಸತು ಬಂದಿರುವಾಗ ಹಳೆಯದರ ಹಂಗೇಕೆ ಅಂದುಕೊಳ್ಳುತ್ತ  ಎರಡು ಇಂಚು ಉದ್ದ ವೆನಿಲಾ ಕತ್ತರಿಸಿ ಗೋಧಿ ಬೇಯುವಾಗಲೇ ಹಾಕಿದ್ದನ್ನು ಬರೆಯದಿದ್ದರೆ ನನ್ನ ಸ್ಪೆಶಲ್ ಪಾಯಸದ ಸವಿ ಓದುಗರಿಗೆ ತಿಳಿಯುವುದಾದರೂ ಹೇಗೆ?  ವೆನಿಲಾ ಸ್ವಾದದ ಪಾಯಸ ಸಿದ್ಧವಾಗಿದೆ.