Pages

Ads 468x60px

Monday, 15 June 2026

ಕಾಡು ಶರಬತ್ ಹಣ್ಣು

 


ಬಚ್ಚಲು ಮನೆಯ ನೀರು ಹೋಗುವ ತೂಬು ಕಸ ನಿಂದಂತಿದೆಯಲ್ಲ,  ನೀರು ಸರಾಗವಾಗಿ ಹೊರ ಹೋಗದಿದ್ದರೆ ಹೇಗೆ?   ಚಿಂತಿಸುತ್ತ ಹಿತ್ತಲ ಕಡೆಗಿದ್ದ ಬಾಗಿಲು ತೆರೆಯಲಾಗಿ, ಆಹ! ನಿಸರ್ಗವೇ ಮನೆ ಬಾಗಿಲಿಗೆ ಬಂದಂತಿದೆಯಲ್ಲ.  ಮೊಬೈಲು ತಂದು ಪಟ ಕ್ಲಿಕ್ಕಿಸೋಣ ಅಂದರೆ ಹೊರಗಿಳಿಯುವ ಮೆಟ್ಟಿಲು ಪಾಚಿ ಕಟ್ಟಿದಂತಿದೆ.  ಈ ಮೆಟ್ಟಿಲು ಹತ್ತಿ ಇಳಿಯುವವರೂ ಇಲ್ಲ. ನಾಳೆ ನೋಡೋಣ.


ಕುತೂಹಲಕ್ಕೆ ಮೇರೆಯಿರದ ಆ ನಾಳೆ ಬಂದಿತು.  ಇನ್ನೊಂದು ದಾರಿಯಲ್ಲಿ ಸುತ್ತಿ ಬಳಸಿ ಬಂದು ಪಟ ತಗೆದೂ ಆಯ್ತು.  ಆಕರ್ಷಕ ಹೂ,  ಶರಬತ್ ಹಣ್ಣಿನ ಮಿನಿಯೇಚರ್,  ಕಾಯಿಗಳು ಇನ್ನೂ ಆಕರ್ಷಕ.  ಮಳೆಗಾಲದಲ್ಲಿ ಈ ಬಳ್ಳಿ ಸಸ್ಯ ಅಲ್ಲಲ್ಲಿ ಕಣ್ಣಿಗೆ ಬೀಳುವುದಿದೆ,  ಮಗಳ ನೆನಪಾಯ್ತು,  ಅವಳು ಇದರ ಹಣ್ಣುಗಳನ್ನು ಆಯ್ದು ತಿನ್ನುತ್ತಿದ್ದಳು.  ಇನ್ನಷ್ಟು ವಿವರಗಳನ್ನು ತಿಳಿಯಲು ಮಗಳಿಗೆ ಪಟ ಕಳಿಸಿದ್ದೂ ಆಯ್ತು.  ಜಾಯಿಂಟ್ ಅಕೌಂಟಿನಲ್ಲಿ ಮಗನಿಗೂ ಪಟ ಲಭ್ಯ.

“ ಅವಳನ್ನೇನು ಕೇಳ್ತೀಯಾ, ನಾನೂ ತಿಂದಿದ್ದೇನೆ.. ಹಣ್ಣಾಗ್ಬೇಕು,  ಒಳ್ಳೇ ಸಿಹಿ.. “

“ ಹೌದ,  ಅದಕ್ಕೇನು ಹೆಸರು ಗೊತ್ತಾ?”

“”ಅದೆಲ್ಲ ನಂಗೊತ್ತಿಲ್ಲ..”

ಇಬ್ಬರೂ ಹಣ್ಣುಗಳನ್ನು ತಿಂದವರೇ,  ನನಗೆ ಇಬ್ಬರೂ ತಂದ್ಕೊಟ್ಟಿಲ್ಲ ಅಷ್ಟೇ.


ಮಕ್ಕಳಿಗಂತೂ ಹೆಸರು ತಿಳಿಯದು.  ಹೆಸರು ತಿಳಿಯಲು ನನಗೇನೂ ಪರದಾಡಬೇಕಿಲ್ಲ.  


ಇದು ಜ್ಯೂಸ್ ಮಾಡಿ ಸವಿಯುವ 'ಶರಬತ್ ಹಣ್ಣಿನ' (Passion Fruit) ಕಾಡು ಜಾತಿಯ ಸಸ್ಯ!  ವೈಜ್ಞಾನಿಕ ಹೆಸರು Passiflora foetida.

ಸಾಮಾನ್ಯವಾಗಿ ಇದನ್ನು ಕಾಡು ಶರಬತ್ ಬಳ್ಳಿ ಅಥವಾ ಕಾಡು ಪ್ಯಾಷನ್ ಫ್ರೂಟ್ ಎಂದು ಕರೆಯುತ್ತಾರೆ. ಇದರ ಕಾಯಿಯ ಸುತ್ತ ಇರುವ ಬಲೆಯಂತಹ ವಿಶಿಷ್ಟ ರಚನೆಯಿಂದಾಗಿ  ಇದನ್ನು ಕುಕ್ಕೆ ಬಳ್ಳಿ ಅಥವಾ ಅಜ್ಜಿ ಗಡ್ಡ ಮುಂತಾದ ಗ್ರಾಮೀಣ ಹೆಸರುಗಳಿಂದಲೂ ಗುರುತಿಸುತ್ತಾರೆ.

ಇದರ ಹೂವು ಕೂಡ ಶರಬತ್ ಬಳ್ಳಿಯ ಹೂವಿನ (ಕೃಷ್ಣಕಮಲ) ಒಂದು ಪುಟ್ಟ ರೂಪದಂತೆಯೇ ಇದೆ.   

ಕಾಯಿಗಳು ಹಣ್ಣಾದಾಗ ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಹಣ್ಣಾದಾಗ ಒಳಗಿನ ತಿರುಳು ಶರಬತ್ ಹಣ್ಣಿನಂತೆಯೇ ಹುಳಿ-ಸಿಹಿಯಾಗಿರುತ್ತದೆ. ಹಳ್ಳಿಯ ಕಡೆ ಮಕ್ಕಳು ಈ ಹಣ್ಣುಗಳನ್ನು ಹುಡುಕಿಕೊಂಡು ಹೋಗಿ ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ತೋಟದಲ್ಲಿ ಅಸಲಿ ಶರಬತ್ ಬಳ್ಳಿಯ ಜೊತೆಗೆ ಅದರ ಈ ಪುಟ್ಟ ಕಾಡು ಸಂಬಂಧಿಯೂ ಹುಟ್ಟಿ ಬೆಳೆದಿರುವುದು ಪ್ರಕೃತಿಯ ಒಂದು ಸುಂದರ ವಿಸ್ಮಯ!


ಈ 'ಕಾಡು ಶರಬತ್' ಸಸ್ಯ ಕೇವಲ ಕಾಡು-ಕಳೆಯಲ್ಲ, ನಿಸರ್ಗದಲ್ಲಿ ಇದಕ್ಕೂ ಸಾಕಷ್ಟು ವಿಶಿಷ್ಟತೆ ಮತ್ತು ಮಹತ್ವಗಳಿವೆ.


ಔಷಧೀಯ ಗುಣಗಳು (Medicinal Uses): ನಾಟಿ ವೈದ್ಯದಲ್ಲಿ ಈ ಬಳ್ಳಿಯ ಎಲೆ ಮತ್ತು ಬೇರುಗಳಿಗೆ ವಿಶೇಷ ಸ್ಥಾನವಿದೆ. ಗಾಯ, ಕಜ್ಜಿ, ಅಥವಾ ಚರ್ಮದ ತುರಿಕೆಗೆ ಇದರ ಎಲೆಯ ರಸವನ್ನು ಹಚ್ಚುವ ಸಾಂಪ್ರದಾಯಿಕ ರೂಢಿಯಿದೆ. ಅಲ್ಲದೆ, ಇತರ ಶರಬತ್ ಜಾತಿಯ ಎಲೆಗಳಂತೆಯೇ ಇದು ಕೂಡ ನರಗಳನ್ನು ಶಾಂತಗೊಳಿಸುವ ಗುಣ ಹೊಂದಿದ್ದು, ಆತಂಕ ಮತ್ತು ನಿದ್ರಾಹೀನತೆಯನ್ನು ದೂರಮಾಡಲು ಇದರ ಕಷಾಯವನ್ನು ಕೆಲವೆಡೆ ಬಳಸುತ್ತಾರೆ.


ವಿಶಿಷ್ಟವಾದ 'ಜಾಲರಿ' (Insect-trapping mechanism): ಫೋಟೋ ಗಮನಿಸಿದರೆ, ಕಾಯಿಯ ಸುತ್ತ ಇರುವ ಆ ಬಲೆಯಂತಹ ರಚನೆ ಕೇವಲ ಅಂದಕ್ಕಲ್ಲ. ಅದರಲ್ಲಿ ಅಂಟಂಟಾದ ದ್ರವವಿರುತ್ತದೆ, ಇದು ಸಣ್ಣಪುಟ್ಟ ಕೀಟಗಳನ್ನು ಬಲೆಗೆ ಬೀಳಿಸಿಕೊಳ್ಳುತ್ತದೆ. ಹೀಗೆ ಸಿಕ್ಕಿಬಿದ್ದ ಕೀಟಗಳಿಂದ ಗಿಡವು ತನಗೆ ಬೇಕಾದ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತದೆ (ಇದನ್ನು ಅರೆ-ಕೀಟಹಾರಿ ಅಥವಾ Protocarnivorous ಎನ್ನುತ್ತಾರೆ).


ಚಿಟ್ಟೆಗಳ ಆಕರ್ಷಣೆ: ಚಿಟ್ಟೆಗಳಿಗೆ  ಇದು ಬಹಳ ಪ್ರಿಯವಾದ ಗಿಡ. ತೋಟದಲ್ಲಿ ಈ ಗಿಡವಿದ್ದರೆ ವಿವಿಧ ಜಾತಿಯ ಬಣ್ಣಬಣ್ಣದ ಚಿಟ್ಟೆಗಳು ಹೂವಿನ ಮಕರಂದ ಹೀರಲು ಮತ್ತು ಮೊಟ್ಟೆ ಇಡಲು ಹುಡುಕಿಕೊಂಡು ಬರುತ್ತವೆ.


ಈ ಕಾಡು ಶರಬತ್ ಬಳ್ಳಿ (Passiflora foetida) ನೈಸರ್ಗಿಕವಾಗಿಯೇ ಅಲ್ಪಾಯುಷಿ.

ಸಾಮಾನ್ಯವಾಗಿ ಇದು ಮಳೆಗಾಲದ ಆರಂಭದಲ್ಲಿ ಮಣ್ಣಿನಿಂದ ಪುಟಿದೆದ್ದು ಹುಲುಸಾಗಿ ಬೆಳೆಯುತ್ತದೆ, ಹೂವು-ಹಣ್ಣು ಬಿಡುತ್ತದೆ, ಮತ್ತು ತನ್ನ ಬೀಜಗಳನ್ನು ಮತ್ತೆ ಮಣ್ಣಿನ ಒಡಲಿಗೆ ಸೇರಿಸಿ ಒಣಗಿಹೋಗುತ್ತದೆ. ಇದೊಂದು ಪ್ರಕೃತಿಯ ಸಹಜ ಚಕ್ರ. 


ಕನ್ನಡದಲ್ಲಿ ಗಡಿಯಾರ ಹಣ್ಣು, ಪುಚ್ಚೆ ಹಣ್ಣು,  ಕುಕ್ಕೆ ಬಳ್ಳಿ, ಸಾಲಿಗನ ಬಳ್ಳಿ,ಬುಟ್ಟಿ ಬಳ್ಳಿ, ಹೀಗೆಲ್ಲ ಹೆಸರುಗಳು,  ಆಯುರ್ವೇದದಲ್ಲಿ ವಿಶೇಷ ಗಿಡಮೂಲಿಕೆ. 


ನಮ್ಮ ಹಳ್ಳಿಗಳಲ್ಲಿ ಪ್ರತಿಯೊಂದು ಗಿಡಕ್ಕೂ ಅದರ ರೂಪ ಮತ್ತು ಗುಣವನ್ನು ಆಧರಿಸಿ ಅರ್ಥಗರ್ಭಿತ ಹೆಸರುಗಳನ್ನಿಡುವ ನಮ್ಮ ಹಿರಿಯರ ಜಾಣ್ಮೆಗೆ ಈ ಗಿಡವೇ ಒಂದು ಅದ್ಭುತ ಸಾಕ್ಷಿ:


ಗಡಿಯಾರ ಹಣ್ಣು: ಇದರ ಹೂವಿನ ಆಕಾರವು ಗಡಿಯಾರದ ಮುಳ್ಳುಗಳನ್ನು ನೆನಪಿಸುವುದರಿಂದ ಬಂದಿರುವ ಹೆಸರು.


ಕುಕ್ಕೆ ಬಳ್ಳಿ / ಬುಟ್ಟಿ ಬಳ್ಳಿ: ಕಾಯಿಯನ್ನು ಸುತ್ತುವರಿದಿರುವ ಆ ಬಲೆಯಂತಹ ರಚನೆಯು ಪುಟ್ಟ ಕುಕ್ಕೆಯಂತೆ (ಬುಟ್ಟಿ) ಕಾಣುವುದರಿಂದ.


ಸಾಲಿಗನ ಬಳ್ಳಿ: ಜೇಡರ (ಸಾಲಿಗ) ಬಲೆಯಂತೆ ಕಾಯಿಗೆ ರಕ್ಷಣೆ ನೀಡುವ ವಿಶಿಷ್ಟ ಜಾಲರಿಯಿಂದಾಗಿ.


ಪುಚ್ಚೆ ಹಣ್ಣು: ಬೆಕ್ಕಿನ (ಪುಚ್ಚೆ) ಮೈಮೇಲಿನ ನಯವಾದ ಕೂದಲಿನಂತಹ ರಚನೆ ಇರುವುದರಿಂದ.


ಇನ್ನೊಂದು ಅಚ್ಚರಿಯ ವಿಚಾರವೇನೆಂದರೆ, ನಾವು ಮಾತನಾಡುತ್ತಿರುವ ಈ 'ಕಾಡು ಶರಬತ್ ಬಳ್ಳಿ' (Passiflora foetida) ನರಗಳನ್ನು ಶಾಂತಗೊಳಿಸುವ (sedative) ಪ್ರಬಲ ಗುಣವನ್ನು ಹೊಂದಿದೆ. ನಿದ್ರಾಹೀನತೆ, ಆತಂಕ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಇದು ನೈಸರ್ಗಿಕ ಮದ್ದು. 


ತಾಯಿಯ ಕಡೆಯಿಂದ ಸೋದರ ಸಂಬಂಧ ಹೊಂದಿರುವ ಸೇಡಿಯಾಪು ಕೃಷ್ಣಭಟ್ಟರು ಮಾನಸಿಕ ಅಶ್ವಸ್ಥರಿಗೆ ಮಂತ್ರವಾದದ ಔಷಧಿಯೆಂದು ಯಾವುದೋ ಒಂದು ಬಗೆಯ ಸೊಪ್ಪಿನ ಔಷಧ ನೀಡುತ್ತಿದ್ದರಂತೆ, ರೋಗಿಗಳು ಗುಣಮುಖರಾಗಿಯೇ ತೆರಳುತ್ತಿದ್ದರಂತೆ… ನನ್ನಮ್ಮನ ಹೇಳಿಕೆ ಈಗ ನೆನಪಾಯಿತು.

ಹಾಗಾಗಿ, ಮಾನಸಿಕ ಅಸ್ವಸ್ಥತೆಯನ್ನು ಗುಣಪಡಿಸಲು  ಸೇಡಿಯಾಪು ಅಜ್ಜ ಬಳಸುತ್ತಿದ್ದ ಆ 'ಯಾವುದೋ ಸೊಪ್ಪು' ಬಹುಶಃ ಇದೇ ಕುಕ್ಕೆ ಬಳ್ಳಿಯಾಗಿರುವ ಸಾಧ್ಯತೆಗಳೂ ದಟ್ಟವಾಗಿವೆ!  ಸಂಸ್ಕೃತ ಭಾಷೆಯ ಅಗಾಧ ವಿದ್ವಾಂಸರಾಗಿದ್ದ ಸೇಡಿಯಾಪು ಕೃಷ್ಣರು ಮಂತ್ರಗಳ ಉಚ್ಚಾರಣೆಯ ಜೊತೆಗೆ ಇಂತಹ ನಾಟಿ ಔಷಧಗಳನ್ನು ನೀಡುತ್ತಿದ್ದರು ಎನ್ನುವುದು ಆ ಕಾಲದ ಜ್ಞಾನಪರಂಪರೆಯ ಆಳವನ್ನು ತೋರಿಸುತ್ತದೆ. ಪ್ರಾಚೀನ ಕಾಲದಲ್ಲಿ ಮಂತ್ರವಾದ, ಆಯುರ್ವೇದ ಹಾಗೂ ನಿಸರ್ಗ ಚಿಕಿತ್ಸೆಗಳೆಲ್ಲವೂ ಒಂದಕ್ಕೊಂದು ನಿಕಟವಾಗಿ ಬೆಸೆದುಕೊಂಡಿದ್ದವು ಎಂದೇ ನಾವು ತಿಳಿಯಬೇಕಾಗಿದೆ.