Pages

Ads 468x60px

Sunday, 20 October 2019

ಗೌರತ್ತೆಯ ಪುಳಿಂಜಿ







ಅಕ್ಟೋಬರ್, 17ರ ಸಂಕ್ರಾಂತಿ ಬಂದಿದೆ, ವಿಶೇಷತೆ ಏನೆಂದರೆ ಇದು ಕಾವೇರಿ ಸಂಕ್ರಮಣ. ಈ ಬಾರಿಯ ತೀರ್ಥಸ್ನಾನವು ಸರ್ವಪಾಪ ನಾಶಿನಿ ಎಂದೇ ಪ್ರಸಿದ್ಧವಾಗಿದೆ. ನಾವೂ ತೀರ್ಥಸ್ನಾನದಿಂದ ಪುನೀತರಾಗೋಣ.

ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಮಂಗಳಕಾರ್ಯಗಳು ಆರಂಭವಾಗಲಿದ್ದು ಶ್ರೀದೇವಿಯ ಕಲಶಾಭಿಷೇಕದ ನಂತರವೇ, ಅಂದಾಜು 9 ಗಂಟೆಯ ಹೊತ್ತಿಗೆ ಭಕ್ತಜನರ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ..

ಸಂಕ್ರಮಣದ ದಿನ ಎಂದಿನಂತೆ ಹಿರಣ್ಯ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಸಾಯಂಕಾಲ ಭಜನೆ, ದುರ್ಗಾಪೂಜೆ ಇರುತ್ತದೆ. ತದನಂತರ ಅನ್ನಪ್ರಸಾದವನ್ನೂ ಸ್ವಿಕರಿಸಬೇಕಾಗಿ ಭಕ್ತಬಾಂಧವರಲ್ಲಿ ವಿನಂತಿ.

ಇದು ನಮ್ಮ ವಾಟ್ಸಪ್, ಫೇಸ್ ಬುಕ್ ಮಾಧ್ಯಮಗಳಲ್ಲಿ ಹರಿಯಬಿಟ್ಟ ಪ್ರಕಟಣೆ.

ಇದುವರೆಗೆ ಎಲ್ಲಿಗೂ ತೀರ್ಥಸ್ನಾನಕ್ಕೆಂದು ಹೋಗದ ಗೌರತ್ತೆಯೂ ನಾನೂ ಸ್ನಾನ ಮಾಡಿ ಪುನೀತರಾದೆವು.

ಸಾಯಂಕಾಲ ಭಜನೆ ಹಾಗೂ ದುರ್ಗಾಪೂಜೆ, ಅನ್ನಸಂತರ್ಪಣೆಯ ಕಾರುಭಾರು. ಎಲ್ಲರೂ ಉಂಡ ನಂತರ ಸುಧರಿಕೆಯ ಅಣ್ಣಂದಿರೂ ನಾನೂ ಸೇರಿ ಉಳಿದ ಪಾಯಸ, ನೈವೇದ್ಯ ಪ್ರಸಾದಗಳನ್ನು ಪರಸ್ಪರ ಹಂಚಿ ಸಮಾಧಾನ ಪಟ್ಟೆವು.

ಬೆಳಗಾಯ್ತು, ಗೌರತ್ತೆ ಎದ್ದವರೇ ಭೋಜನಶಾಲೆಯ ತಪಾಸಣೆ ನಡೆಸಿ ಗಣಪಣ್ಣ ಅಡುಗೆಗೆ ಬಳಸದೇ ಬಿಟ್ಟಿದ್ದ ಹಸಿಮೆಣಸು, ಶುಂಠಿಗಳನ್ನು ಸಂಗ್ರಹಿಸಿ ತಂದರು.

" ಲಕ್ಷಣವಾಗಿ ಒಂದು ಪುಳಿಂಜಿ ಮಾಡಿ ಇಡು, ಜೀರ್ಣಕ್ಕೆ ಒಳ್ಳೇದು.. "

" ಹುಣಸೆಹುಳಿ ಹಾಕಬೇಡವೇ.. ಇಲ್ಲಿ ಟೊಮ್ಯಾಟೋ ಹಾಳಾಗುತ್ತ ಉಂಟು, ಅದನ್ನೇ ಹಾಕಿ ಮಾಡಿದ್ರಾದೀತಲ್ಲ..."

" ಹೇಗೆ ಬೇಕೋ ಹಾಗೇ ಮಾಡಿಕೋ, ತಿನ್ನುವ ಹಾಗಿದ್ದರಾಯಿತು.. "

3 ಟೊಮ್ಯಾಟೋ ತೊಳೆದು ಹೆಚ್ಚಿ ಇಡುವುದು
2 ಹಸಿಮೆಣಸು ಮುರಿದು ಇಡುವುದು
1 ಇಂಚು ಉದ್ದದ ಶುಂಠಿಯನ್ನು ಸಿಪ್ಪೆ ಹೆರೆದು ಕತ್ತರಿಸಿ ಇಡುವುದು.
ಎಲ್ಲವನ್ನೂ ಮಿಕ್ಸಿಯಲ್ಲಿ ತಿರುಗಿಸಿ ತೆಗೆದಿರಿಸುವುದು.

ಬಾಣಲೆ ಬಿಸಿಯಾಗಲು ಇಡುವುದು.
2 ಚಮಚ ತುಪ್ಪ ಎರೆಯುವುದು.
ಸಾಸಿವೆ ಸಿಡಿಸಿ ಕರಿಬೇವು ಹಾಕುವುದು.
ಟೊಮ್ಯಾಟೋ ಮಿಶ್ರಣವನ್ನು ಹಾಕಿ ಸೌಟಾಡಿಸುವುದು.
ಬೆಂದ ಪರಿಮಳ ಬಂದಾಗ ರುಚಿಗೆ ಸೂಕ್ತವಾಗುವಷ್ಟು ಕಲ್ಲುಪ್ಪು ಹಾಗೂ ಬೆಲ್ಲ ಹಾಕುವುದು.
ಬೆಲ್ಲ ಕರಗಿ ಪಾಕದ ಹದಕ್ಕೆ ಬಂದಾಗ ಕೆಳಗಿಳಿಸಿ.
ಗೌರತ್ತೆಯ ಬಾಯಿಚಪಲಕ್ಕೆ ಹಿತವಾದ ಪುಳಿಂಜಿ ಎದ್ದು ಬಂದಿತು.




ಅನ್ನದೊಂದಿಗೆ ಬಲು ರುಚಿ, ಉಪ್ಪಿನಕಾಯಿ ಬೇಕೆನಿಸದು.
ಟೊಮ್ಯಾಟೋ ಉಪ್ಪಿನಕಾಯಿ ಎಂದೂ ಹೆಸರಿಸಬಹುದಾದ ಈ ವ್ಯಂಜನ ಒಂದೆರಡು ದಿನ ಹಾಳಾಗದು. ಫ್ರಿಜ್ ಒಳಗೆ ಇಟ್ಟರೂ ಆದೀತು.

ಮುಂಜಾನೆಯ ತಿಂಡಿಗಳಾದ ದೊಸೆ ಇಡ್ಲಿ ಚಪಾತಿಗಳಿಗೂ ಚಟ್ಣಿಯಂತೆ ಕೂಡಿಕೊಳ್ಳಬಹುದು.

ತೊಗರಿಬೇಳೆ ಬೇಯಿಸಿ ಟೊಮ್ಯಾಟೋ ಪುಳಿಂಜಿ ಎರೆದು ಸಾರು ಆಯ್ತು ಅನ್ನಿ.

ನೆಲಕಡಲೆಯ ಒಗ್ಗರಣೆ ಹಾಕಿ ಅನ್ನಕ್ಕೆ ಬೆರೆಸಿ ಚಿತ್ರಾನ್ನವೆನ್ನಿ.

ನಮ್ಮ ಆಯ್ಕೆಗನುಸಾರ ವಿವಿಧ ಅಡುಗೆಗಳಲ್ಲಿ ಬಳಸಬಹುದಾದ ಟೊಮ್ಯಾಟೋ ಪುಳಿಂಜಿ ನನ್ನ ಅಚ್ಚುಮೆಚ್ಚಿನದು. ಏನಂತೀರ?



0 comments:

Post a Comment