Pages

Ads 468x60px

Sunday, 15 December 2024

ಕುಚ್ಚುಲಕ್ಕಿ ಕಡುಬು

 



ಅಗಾರೋ ರೈಸ್ ಕುಕ್ಕರ್  ನಮ್ಮ ಸಾಂಪ್ರದಾಯಿಕ ವಿಧಾನದಲ್ಲಿ ಬೆಳ್ತಿಗೆ ಅನ್ನವನ್ನೂ ಕುಚ್ಚುಲಕ್ಕಿ ಅನ್ನವನ್ನೂ ಮಾಡಿಕೊಟ್ಟಿತು.  ಎರಡೂ ಕ್ರಮದ ಅಡುಗೆಯನ್ನು ಉಂಡಂತಹ ನಮ್ಮವರು  “ಹೇಗಿದ್ದರೂ ರೈಸ್ ಕುಕ್ಕರ್ ಪರಿಣಿತರು ಬೆಳ್ತಿಗೆ ಅನ್ನವನ್ನೇ ದೃಷ್ಟಿಯಲ್ಲಿಟ್ಟು ಇಂತಹ ಕುಕ್ಕರ್ ವಿನ್ಯಾಸಗೊಳಿಸಿದ್ದಾರೆ,  ನಾಳೆಯಿಂದ ಬೆಳ್ತಿಗೆ ಅನ್ನವನ್ನೇ ಮಾಡು…” ಅಂದರು.


ನಾನು ಯಾವುದೂ ಆದೀತು ಅಂತಿದ್ದರೆ ಇವರು ಇದೇ ಆದೀತು ಅಂತಿದ್ದಾರಲ್ಲ.    ತೊಂದರೆಯೇನಿಲ್ಲ,  ಝಟಾಪಟ್ ಅಂತ ಇಪ್ಪತೈದೇ ನಿಮಿಷದಲ್ಲಿ ಅನ್ನ ರೆಡಿ.


ಪೇಚಿಗಿಟ್ಕೊಂಡಿದ್ದು ಏನಪ್ಪಾ ಅಂದ್ರೆ ನಿನ್ನೆ ತಾನೇ ಹತ್ತು ಕಿಲೋ ಕುಚ್ಚಿಲಕ್ಕಿ ತರಿಸಿದ್ದಾಗಿದೆ, ಅದನ್ನು ಅಂಗಡಿಗೆ ವಾಪಸ್ ಮಾಡುವುದೋ,  ಕ್ರಿಸ್ಮಸ್ ರಜೆಯಲ್ಲಿ ಮಕ್ಕಳ ಪರಿವಾರ ಬರುವುದಿದೆ, ಅಲ್ಲೀ ತನಕ ಇಟ್ಟುಕೊಳ್ಳುವುದೋ ಒಂದೂ ತಿಳಿಯದಾಯಿತು.  ಸೊಸೆಯಂತೂ ಒಂದು ದಿನ ಕುಚ್ಚುಲಕ್ಕಿ ತಿಂದ ಶಾಸ್ತ್ರ ಮಾಡಿ, “ನಾನು ಘೀ ರೈಸ್ ಮಾಡ್ತೇನೆ” ಅನ್ನುವವಳು.

“ಅಮ್ಮ, ನಂಗೆ ಕುಚ್ಚುಲಕ್ಕಿ..  ಬೆಂಗ್ಳೂರಲ್ಲಿ ಬಿಳಿ ಅನ್ನ ತಿಂದು ಸಾಕಾಗ್ಬಿಟ್ಟಿದೆ. “ ಇದು ಮಗಳ ದನಿ.


ಅಂತೂ ಅಕ್ಕಿಯ ಚೀಲ ಮನೆಯಲ್ಲಿ ಉಳಿಯಿತು. 

ಕುಚ್ಚುಲಕ್ಕಿ,  ಅನ್ನ ಮಾತ್ರ ಮಾಡೋದಲ್ಲ,  ದೋಸೆ ಇಡ್ಲಿ ರೊಟ್ಟಿ ಬಗೆ ಬಗೆಯ ತಿಂಡಿಗಳು ನೆನಪಾದವು.  ಏನೇ ಆದರೂ ನಮ್ಮ ಮಿಕ್ಸಿಯ ಜಾರ್ ಕುಚ್ಚುಲಕ್ಕಿಯನ್ನು ನುಣ್ಣಗೆ ಅರೆದು ಕೊಡಲಾರದು.  ಹಿಂದಿನ ಕಾಲಕ್ಕೆ ಇನ್ನು ಹೋಗುವಂತಿಲ್ಲ,  ಚಿಂಥನ ಮಂಥನ ಮಾಡುತ್ತಿದ್ದ ಹಾಗೆ ಸೋಲಾರ್ ಬಿಸಿನೀರ ನೆನಪಾಯಿತು. ಮಧ್ಯಾಹ್ನದ ಹೊತ್ತಿಗೆ ಕೊತಕೊತನೆ ಕುದಿಯುತ್ತಿರುವ ನೀರು.  ಆಹ್,  ಇದಪ್ಪ ಬುದ್ಧಿವಂತಿಕೆ,  ಎರಡು ಲೋಟ ಕುಚ್ಚುಲಕ್ಕಿ  ತಪಲೆಗೆ ತುಂಬಿ ಬಿಸಿ ನೀರ ಟ್ಯಾಪ್ ತಿರುಗಿಸಿ ಕುದಿಯುವ ನೀರನ್ನು ಎರೆೆದು ತಪಲೆಯನ್ನು ಮುಚ್ಚಿ ಇರಿಸಲಾಯಿತು.


ಸಂಜೆಯಾಗುತ್ತಲೂ ಅಕ್ಕಿ ನೀರನ್ನು ಹೀರಿ ಉಬ್ಬಿದೆ,  ಇದ್ದ ನೀರನ್ನು ಬಸಿದು, ಜರಡಿ ಬಟ್ಟಲಿಗೆ ವರ್ಗಾಯಿಸಿ ಇಟ್ಟು , ಒಂದು ಲೋಟ ಉದ್ದಿನಬೇಳೆ ನೆನೆ ಹಾಕಲಾಯಿತು.


ಮುಂದಿನ ಚಿಂತನೆ ಏನು?

ಅಕ್ಕಿಯನ್ನು ನೀರು ತಾಕಿಸದೆ ಹುಡಿ ಮಾಡುವುದು.

ಮಿಕ್ಸಿ ಕುಚ್ಚುಲಕ್ಕಿಯ ಹುಡಿ ಮಾಡಿ ಕೊಟ್ಟಿತು.

ಎಷ್ಟಾಯ್ತು ಅಕ್ಕಿ ಹುಡಿ?


ಹಿಂದೆ ಕುಚ್ಚುಲಕ್ಕಿಯಿಂದಲೇ ಕಡುಬು (ಇಡ್ಲಿ ) ಮಾಡುತ್ತಿದ್ದೆವು,  ಬಾಳೆ ಎಲೆಯಲ್ಲಿ ಎರೆದು,  ಮನೆಯ ಸದಸ್ಯರು ಮಾತ್ರವಲ್ಲದೆ,  ತೋಟದ ಕೆಲಸಕಾರ್ಯಗಳ ಖಾಯಂ ಸದಸ್ಯರ ಚಹಾ ಸಮಾರಾಧನೆಗೂ ಸಾಕಾಗುತ್ತಿತ್ತು.


ಒಂದು ಅಳತೆ ಉದ್ದಿನಬೇಳೆಗೆ ನಾಲ್ಕು ಅಳತೆ ಅಕ್ಕಿ,  ನಮ್ಮ ಹಳೇ ಲೆಕ್ಕಾಚಾರ.

ಈಗ ನಾವು ಒಂದು ಲೋಟ ಉದ್ದಿನಬೇಳೆಗೆ ನಾಲ್ಕು ಅಳತೆ ಅಕ್ಕಿ ತರಿ ಹಾಕಬೇಕು.  

ಕೇವಲ ಕುಚ್ಚುಲಕ್ಕಿಯ ತರಿ ಹಾಕಲು ಮನ ಒಪ್ಪಲಿಲ್ಲ,  ಇಡ್ಲಿಗೆಂದೇ ತಂದ ಅಕ್ಕಿ ತರಿ ಇರುವಾಗ?

ಹಾಗಾಗಿ ಮೂರು ಲೋಟ ಕುಚ್ಚುಲಕ್ಕಿ ತರಿ + ಒಂದು ಲೋಟ ಇಡ್ಲಿ ಅಕ್ಕಿ ತರಿ ಅಳೆದು,  ಅರೆದ ಉದ್ದಿನ ಹಿಟ್ಟಿಗೆ ಬೆರೆಸಲಾಯಿತು.  ರುಚಿಗೆ ಉಪ್ಪು ಕೂಡಿತು.  ಕುಚ್ಚುಲಕ್ಕಿಗೆ ನೀರು ಈಗಾಗಲೇ ಸೇರಿಕೊಂಡಿದೆ, ಹಿಟ್ಟು ದಪ್ಪವಾಗಿಯೇ ಇರಲಿ.  ಇನ್ನೇನಿದ್ದರೂ ನಾಳೆ ಮುಂಜಾನೆ ನೋಡಿಕೊಳ್ಳೋಣ.  


ಅಂತೂ ನಮ್ಮ ಸಾಂಪ್ರದಾಯಿಕ ವಿಧಾನದ ತಿಂಡಿಗಳನ್ನು ಈ ಆದುನಿಕ ಯುಗದಲ್ಲಿಯೂ ಮಾಡಬಹುದು.

ಈ ಇಡ್ಲಿ ಹಿಟ್ಟು ಸೋಡ ಹುಡಿಯನ್ನು ಬಯಸದು.

ಹಲಸಿನ ಎಲೆಯ ಕೊಟ್ಟೆ ಕಡುಬು ಕೂಡಾ ಮಾಡಲಡ್ಡಿಯಿಲ್ಲ.


ಬಾಳೆ ಎಲೆಯ ಕಡುಬು, ಅಗಾರೋ ರೈಸ್ ಕುಕ್ಕರಿನಲ್ಲಿ ನಿರಾಯಾಸದಿಂದ ಮಾಡಬಹುದಾಗಿದೆ. 





 

Monday, 25 November 2024

ಜೀರಿಗೆ ಕೂಟು

 


 ಈಗ ಏನಾಗ್ಬಿಟ್ಟಿದೆ ಅಂದ್ರೆ ಅಡುಗೆಗೆ ಹಿತವಾಗುವಂತಹ ಮಜ್ಜಿಗೆ ಲಭಿಸುವುದೇ ಇಲ್ಲ.  ಎರಡು ದಿನಕ್ಕೊಮ್ಮೆ ತರುವ ಹಾಲು,  ಅದು ಚಹಾ ಕಾಫಿ, ಹಾಗೇನೇ ಕುಡಿಯಲುೂ ಆಯ್ತು, ನಂತರ ಮೊಸರು ಆಗಬೇಕು, ಯಾವುದೂ ನಿರರ್ಥಕ ಆಗದ ಹಾಗೆ ಬೆಣ್ಣೆ, ತುಪ್ಪವೂ ಮೇಲೆದ್ದು ಬರಬೇಕು.  ಉಳಿದಂತಹ ಮಜ್ಜಿಗೆಯನ್ನು ಗಟಗಟನೆ ಕುಡಿಯಬೇಕು.


ಮನೆಯಲ್ಲೇ ಎಮ್ಮೆ ದನ ಇದ್ದ ಕಾಲದಲ್ಲಿ, ಮನೆಯ ಹೊರಗೂ ನಮ್ಮ ಮಜ್ಜಿಗೆ ಬಟವಾಡೆ ಆಗುತ್ತಿದ್ದ ಕಾಲ ಅದು.  ನೆರೆಕರೆಯ ಮನೆಗಳಲ್ಲಿ ವಿಶೇಷ ಸಮಾರಂಭಗಳಿದ್ದಲ್ಲಿ ನಮ್ಮ ಮಾವ ಮೊದಲೇ ತಿಳಿಸಿರುತ್ತಿದ್ದರು, ಏನಂತ?    “ ಆ ಮದುವೆ ಮನೆಗೆ ಒಂದು ಕೊಡ ಮಜ್ಜಿಗೆ ಶೇಖರಿಸಿ ಇಡು.. “    ಈಗ ಏನೇ ಇದ್ದರೂ ನಂದಿನಿ ಪ್ಯಾಕೆಟ್ ಹಾಲು, ಮೊಸರು,  ಮಜ್ಜಿಗೆಯೂ ಸಿಗುತ್ತೆ ಪ್ಯಾಕೆಟ್ಟು.


ಮಜ್ಜಿಗೆಹುಳಿ ಮಾಡೋಣ ಅಂತ ಆಲೋಚನೆ ಮಾಡುತ್ತ ಇದ್ದ ಹಾಗೆ ಮಜ್ಜಿಗೆ ಮುಗಿಯಿತು.  ತಣ್ಣಗೆ ಅರ್ಧ ಲೋಟ ಮೊಸರು ಉಳಿದಿತ್ತು.  ಮೊಸರೂ ಆದೀತು.   ಸೌತೇ ಕಾಯಿ ಇದೆ.   ಯಾವುದೇ ಅಡುಗೆಗಾದೀತು ಎಂದು ನೆನೆಸಿದ ಕಾಬೂಲಿ ಚನಾ ಇದೆ.  ತೆಂಗಿನಕಾಯಿ ಅರ್ಧ ಕಡಿ ಇದೆಯಷ್ಟೇ,  ಅದೂ ಸಣ್ಣ ಕಡಿ.  ಇನ್ನೊಂದು ಕಾಯಿ ಸುಲಿದು ಕೊಡಲಿಕ್ಕೆ ರಂಗಣ್ಣ ಇವತ್ತು ಬಂದಿಲ್ಲ… ಹೀಗೆಲ್ಲ ಚಿಂತಿಸುತ್ತ ಇದ್ದಂತೆ ವಿದ್ಯುತ್ ಕುಕ್ಕರಲ್ಲಿ ಕಾಬೂಲಿ ಚನಾ ಬೇಯಲಿಕ್ಕೆ ಇಟ್ಟಾಯ್ತು.   ಸೌತೇಕಾಯಿ ಹೋಳಾಯ್ತು.  ಅಗಾರೋ ರೈಸ್ ಕುಕ್ಕರ್ ಅನ್ನ ಬೇಯಿಸುತ್ತ ಇದೆ.  ಬೆಳ್ತಿಗೆ ಅನ್ನ ಕೇವಲ ಇಪ್ಪತೈದು ನಿಮಿಷದಲ್ಲಿ ಆಗುತ್ತೆ,  ಕುಚ್ಚುಲಕ್ಕಿ ಅನ್ನ ಬೇಯಲಿಕ್ಕೆ ಒಂದೂವರೆಯಿಂದ ಎರಡು ಗಂಟೆಗಳ ಅವಧಿ.  ವಿದ್ಯುತ್ ಖರ್ಚು ಕಡಿಮೆ ಎಂದು ನಮ್ಮ ಯಜಮಾನರ ಅಂಬೋಣ.





ಈಗ ಸ್ವಲ್ಪ ಬಿಡುವು,  ದೈನಂದಿನ ಇನ್ನಿತರ ಕೆಲಸ ಕಾರ್ಯಗಳನ್ನು ಮುಗಿಸಿ ಅಡುಗೆ ಮನೆಗೆ ಬಂದಾಗ ಅನ್ನ ಬೆಂದಿದೆ,  ಕಾಬೂಲಿ ಚನಾ ಹದವಾಗಿ ಬೆಂದಿದೆ.  ಆಗ್ಗಿಂದಾಗ್ಗೆ ಮುಚ್ಚಳ ತೆರೆದು ನೋಡಲಡ್ಡಿಯಿಲ್ಲ.


ತೆಂಗಿನತುರಿ ಕಡಿಮೆ ಆದ ಬಾಬ್ತು ಒಂದು ಸೌಟು ಬೆಂದಂತಹ ಕಾಬೂಲಿ ಚನಾ ತೆಗೆದಿರಿಸಲಾಯಿತು.

ಸೌತೆ ಹೋಳುಗಳನ್ನು ಬೇಯಲು ಹಾಕಿ, ರುಚಿಗೆ ಉಪ್ಪು ಕೂಡಿ, ಮುಚ್ಚಿ ಇರಿಸಲಾಯಿತು. ಮರೆತು ಹೋದ ಹಸಿಮೆಣಸನ್ನು ಎರಡಾಗಿ ಸಿಗಿದು ಹಾಕಲಾಯಿತು.

ಬೇಯುತ್ತ ಇರಲಿ,  ಈಗ ಅರೆಯುವ ಸಮಯ.


ತೆಂಗಿನತುರಿ, ಕಾಬೂಲಿ ಚನಾ, ಮೊಸರು ಮಿಕ್ಸಿ ಜಾರೊಳಗೆ ತುಂಬಿ, ಒಂದು ಹಸಿಮೆಣಸು,  ತುಸು ಜೀರಿಗೆ,  ಚಿಟಿಕೆ ಅರಸಿಣ ಕೂಡಿ ಅರೆಯಲಾಯಿತು.  ಅರೆದ ಮಿಶ್ರಣ ಸೇರಿದಾಗ ಒಂದು ಪದಾರ್ಥ ಸಿದ್ಧಗೊಂಡಿದೆ.  ಹುಳಿ ಹಾಕುವುದಕ್ಕಿಲ್ಲ,  ಉಪ್ಪು ಬೆಲ್ಲ, ನೀರು ಹೊಂದಿಸಿದರಾಯಿತು.  ಕುದಿದ ನಂತರ ಕರಿಬೇವು ಕೂಡಿದ ಒಗ್ಗರಣೆಯೊಂದಿಗೆ ವಿದ್ಯುತ್ ರೈಸ್ ಕುಕ್ಕರ್ ಅಡುಗೆ ಮುಗಿಯಿತು.




Tuesday, 19 November 2024

ನುಗ್ಗೆ ಹುರುಳಿ ರಸಂ

 

ದಿನವೂ ಒಂದೇ ಮಾದರಿಯ ಸಾಂಬಾರ್ ಮಾಡುವುದೆಂದರೇನು?  ಹೋಟಲ್ ಆದರೆ ಸರಿ, ಮನೆಯಲ್ಲವೇ?   ನಿನ್ನೆ ಮಂಗಳೂರಿನಲ್ಲಿ ಹೋಟಲ್ ಊಟ,  ಹೇಗಿತ್ತು ಸಾಂಬಾರು ಅಂದರೆ ಧಾರಾಳ ನೀರೂ, ಸೌತೆಕಾಯಿ ಹೋಳೂ ಕೂಡಿದ ಕೆಂಪಗಿನ ಒಂದು ರಸ ಪದಾರ್ಥ ನಮಗೆ ದಕ್ಕಿತು.  ಒಂದು ಚೂರಾದರೂ ತೆಂಗಿನ ತುರಿ ಹಾಕಿದಂತಿಲ್ಲ.  ಹಲಸಿನ ಗುಜ್ಜೆ ಪಲ್ಯವೂ ಇತ್ತು. ಅದಕ್ಕೂ ತೆಂಗಿನ ತುರಿ ಬಿದ್ದಿಲ್ಲ.  ಇನ್ನು ಸಾರು, ತೊವ್ವೆ, ಪಾಯಸ ತೆಂಗಿನಕಾಯಿ ಕೇಳದು.  ಆ ದಿನ ದೀಪಾವಳಿ ಸ್ಪೆಶಲ್ ಅಂತ ಲಡ್ಡು ಬೇರೆ.


“ ಬಾದಾಮಿ ಹಲ್ವ ತಿನ್ನೋಣ ,“   ಈ ಹೋಟಲಲ್ಲಿ ಅದಿಲ್ಲ.  ಬಾದಾಮಿ ಹಲ್ವ ನನ್ನ ಬಾಲ್ಯದ ಸಿಹಿ ನೆನಪು.  ಮಂಗಳೂರಲ್ಲಿ ಮೋಹಿನಿ ವಿಲಾಸ್ ಎಂಬ ಹೋಟಲ್ ಗೆ ಹೋಗಿ ಮಕ್ಕಳೆಲ್ಲ ಮೊದಲಾಗಿ ಬಾದಾಮಿ ಹಲ್ವ ಸವಿದೇ ಮುಂದಿನ ತಿನಿಸಿನ ಬಟ್ಟಲನ್ನು ಕೈಗೆತ್ತಿ ಕೊಳ್ಳುತ್ತಿದ್ದೆವು.   ಈಗ ಆ ಹೋಟಲ್ ಇಲ್ಲ,  ಅಂದಿನ ಬಾದಾಮ್ ಹಲ್ವ ಇನ್ನು ಸಿಗದು.   “ಕಾಶಿ ಹಲ್ವ ಇದೆಯಂತೆ…”  ಅದನ್ನೇ ಕಟ್ಟಿಸಿಕೊಂಡೆವು.




ದಿನ ಬೆಳಗಾದರೆ ತೆಂಗಿನಕಾಯಿ ತುರಿಯದೆ ನಮ್ಮ ಅಡುಗೆ ಪ್ರಾರಭವಾಗದು,  ರೂಢಿಯಾಗ್ಬಿಟ್ಟಿದೆ,  ಏನು ಮಾಡೋಣ ?


ತೆಂಗಿನಕಾಯಿ ತೋರಿಸದೆ ಒಂದು ಸಾಂಬಾರ್ ಮಾಡೇ ಬಿಡೋಣ.

ನಾಲ್ಕು ಚಮಚ ತೊಗರಿಬೇಳೆ,  ಎರಡು ಚಮಚ ಹೆಸ್ರು ಬೇಳೆ ಬೇಯಲಿಕ್ಕೆ ಇಟ್ಟಾಯಿತು.

ತರಕಾರಿ ಏನೇನಿದೆ?  ಬೀನ್ಸ್ ,  ಕ್ಯಾರೆಟ್ ಹೆಚ್ಚಿಡುವುದು.

ಅತ್ತಲಾಗಿ ಸಾಂಬಾರು,  ಇತ್ತಲಾಗಿ ಸಾರು ಅನ್ನುವಂತಿರಬೇಕು.


ಬೇಯುತ್ತಲಿರುವ ಬೇಳೆಯೊಂದಿಗೆ ಒಂದು ಟೊಮೇಟೊ ಬೇಯಲಿ,  ಕತ್ತರಿಸಿ ಹಾಕುವುದಕ್ಕಿಲ್ಲ.

ಎರಡು ನೀರುಳ್ಳಿ ಹೆಚ್ಚಿಡುವುದು,  ಅಂತೆಯೇ ಬೆಳ್ಳುಳ್ಳಿ ಎಸಳುಗಳೂ ಇರಲಿ,  ಒಗ್ಗರಣೆಗೂ ಆಯಿತು.

ಇನ್ನೀಗ ಮಸಾಲೆ ಹುರಿಯೋಣ.

ಬಾಣಲೆಗೆ ಒಂದು ಚಮಚ ಎಣ್ಣೆ ಎರೆದು,  

ಒಂದೂವರೆ ಚಮಚ ಹುರುಳಿ ಕಾಳು,

ಎರಡರಿಂದ ಮೂರು ಕುಮ್ಟೆ ಮೆಣಸು,

ಮೂರು ಚಮಚ ಕೊತ್ತಂಬರಿ,

ಪುಟ್ಟ ಚಮಚದಲ್ಲಿ ಜೀರಿಗೆ ಹಾಗೂ ಮೆಂತೆ,

ಕಡ್ಲೆ ಗಾತ್ರದ ಇಂಗು,

ಹುರಿದು ಪರಿಮಳ ಬರುತ್ತಿದ್ದ ಹಾಗೆ ಅರ್ಧ ನೀರುಳ್ಳಿ ಹಾಗೂ ಎರಡು ಬೆಳ್ಳುಳ್ಳಿ ಎಸಳು, ಚಿಟಿಕೆ ಅರಸಿಣ ಹುಡಿ ಹಾಗೂ ಕರಿಬೇವು ಹಾಕಿರಿ,  ಆರಿದ ನಂತರ ಮಿಕ್ಸಿಯ ಜಾರ್ ಒಳಗೆ ತುಂಬಿಸಿ, ಒಂದು ಸೌಟು ಬೆಂದಿರುವಂತಹ ಬೇಳೆ ಸೇರಿಸಿ,  ಜೊತೆಗೆ ಬೇಯಿಸಿದ ಇಡೀ ಟೊಮ್ಯಾಟೊ ಕೂಡಿ ನುಣ್ಣಗೆ ಅರೆಯಿರಿ.


ಅರೆದ ಸಾಮಗ್ರಿ,  ಬೇಯಿಸಿದ ತರಕಾರಿ ಹಾಗೂ ಬೇಳೆಯೊಂದಿಗೆ ಬೆರೆಯಲಿ.  ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹುಳಿ ಬೆಲ್ಲ ಹಾಕುವ ಪ್ರಾವೀಣ್ಯತೆ ನಮ್ಮದಾಗಿರಬೇಕು.

ಇದೀಗ ನುಗ್ಗೆ ಸೊಪ್ಪು ಹಾಕುವ ಸಮಯ,  ನಂತರ ನೀರಿನ ಸಾಂದ್ರತೆ ನೋಡಿಕೊಂಡು ಕುದಿಸುವುದು.

ಕೊನೆಯದಾಗಿ ಒಗ್ಗರಣೆ.  ರುಚಿಯಾದ ನುಗ್ಗೆ ಹುರುಳಿ ರಸಂ ನಮ್ಮದಾಗಿದೆ.  ಅನ್ನ ಮಾತ್ರವಲ್ಲದೆ ದೋಸೆ ಇಡ್ಲಿ ಚಪಾತಿಗಳಿಗೂ ಸೂಕ್ತ ಈ ಕೂಟು.



Friday, 18 October 2024

ಕೆಸುವಿನೆಲೆ ಗೊಜ್ಜು

 



ಮಳೆಯಂತೂ ಬಿಡುವ ಲಕ್ಷಣ ಕಾಣಿಸುತ್ತಿಲ್ಲ,   ಬಾಳೆ ಎಲೆ, ಕೆಸುವಿನೆಲೆ, ಉರಗೆ ಇತ್ಯಾದಿಗಳನ್ನು ತರಲು ರಂಗಣ್ಣನ ಬಳಿಯೇ ಹೇಳಬೇಕಾಗಿದೆ.   ಪತ್ರೊಡೆ ತಿನ್ನದೆ ಯಾವ ಕಾಲ ಆಯ್ತು,  ಅಂಗಳದ ಸೊಪ್ಪುಸದೆಗಳನ್ನು ಕಟಾವ್ ಮಾಡಿದ ನಂತರ ಕೆಸುವಿನೆಲೆಗೂ ಗತಿಯಿಲ್ಲವಾಗಿದೆ.  ನನ್ನ ಇಂಗಿತವನ್ನು ಅರ್ಥ ಮಾಡಿಕೊಂಡ ರಂಗಣ್ಣ.  ಅವನೇ ತಂದುಕೊಟ್ಟ ಬಾಳೆ ಎಲೆಗಳನ್ನು ಸೂಕ್ತವಾಗಿ ಕತ್ತರಿಸಿ, ಜೋಡಿಸಿಟ್ಟು, ಪ್ಲಾಸ್ಟಿಕ್ ಕವರಿನೊಳಗಿಟ್ಟು ತಂಪು ಪೆಟ್ಟಿಗೆಯ ಒಳಗಿರಿಸಲಾಯಿತು. 


ಕೆಸುವಿನೆಲೆ ಸಿಕ್ಕಾಪಟ್ಟೆ ತಂದಿದ್ದ,  ಬಹುಶಃ ಪತ್ರೊಡೆಗೆ ಎಷ್ಟು ಸೊಪ್ಪು ಬೇಕಾದೀತೆಂಬ ಅಂದಾಜು ಅವನಿಗೆ ತಿಳಿದಿಲ್ಲ.   ಇರಲಿ,  ನನ್ನ ಪತ್ರೊಡೆಗೆ ಬೇಕಾದಂತಹ ದೊಡ್ಡ ಗಾತ್ರದ ಹದಿನೈದು ಎಲೆಗಳನ್ನು ತೆಗೆದಿಟ್ಟು ಮಿಕ್ಕುಳಿದ ಎಲೆಗಳು ತಂಪು ಪೆಟ್ಟಿಗೆ ಸೇರಿದವು.  


ಹೀಗೆ ತಂಪು ಪೆಟ್ಟಿಗೆ ಸೇರಿದ ಕೆಸುವಿನೆಲೆಗಳ ಗತಿಯೇನಾಯ್ತು ತಿಳಿಯುವ ಕುತೂಹಲವೇ?




ಮಜ್ಜಿಗೆ ದೋಸೆ ಮಾಡುವುದಿದೆಯಲ್ಲ,  ನಾಲ್ಕು ಎಲೆಗಳನ್ನು ಅರೆದು ದೋಸೆ ಹಿಟ್ಟಿಗೆ ಸೇರಿಸಲಾಯಿತು.  ಏನು ಹಚ್ಚಹಸಿರು ಬಣ್ಣ ಅಂತೀರಾ,  ಹಸಿರು ಬಣ್ಣದ ಹಿಟ್ಟು ದೋಸೆಯಾದ ನಂತರವೂ ತನ್ನ ಬಣ್ಣ ಕಳೆದು ಕೊಳ್ಳದೇ ಹಸಿರಾಗಿ ಮೆರೆಯಿತು.  ಇದಕ್ಕಾಗಿ ಹೆಚ್ಚಿನ ಹುಳಿಯೇನೂ ನಾನು ಹಾಕಿಲ್ಲ,  ಯಾವುದೇ ಮಾದರಿಯ ದೋಸೆಗೂ ಕೆಸುವಿನೆಲೆ ಹೊಂದಿಕೊಳ್ಳುತ್ತದೆ ಎಂದು ತಿಳಿಯಿತು.


ಮಧ್ಯಾಹ್ನ ಒಂದು ಸಾಂಬಾರ್ ಆಗಲೇ ಬೇಕು ತಾನೇ, ಏಳೆಂಟು ಎಲೆಗಳನ್ನು ತೆಗೆದಿರಿಸಿ,  ತುಸು ಬಾಡಿದ ನಂತರ ಸುರುಳಿಯಾಗಿ ಸುತ್ತಿ ಚೇಟ್ಲ ಎಂದು ಕರೆಯುವ ರೂಪಕ್ಕೆ ತರಲಾಯಿತು.  ನಾನು ಆ ದಿನ ಮಾಡಿದಂತಹ ಸಾಂಬಾರಿಗೆ ಚೇಟ್ಲ ಕೆಸು ಸೇರಿಕೊಂಡಿತು.   ಇನ್ನೊಂದೆರಡು ದಿನ ಬಿಟ್ಟು ಮಜ್ಜಿಗೆ ಹುಳಿಗೂ ಚೇಟ್ಲ ಬೆರೆಯಿಕು.  ಇಷ್ಟಾಗುವಾಗ ನನಗೂ ಕೆಸುವಿನೆಲೆಯ ಅಡುಗೆಯ ಹೊಸ ಸಾಧ್ಯತೆಗಳು ಗೋಚರವಾದುವು.   ಮಳೆ ಇಲ್ಲದ ದಿನ  ಅಂಗಳಕ್ಕಿಳಿದು ಕೆಸುವಿನೆಲೆಗಳ ತಪಾಸಣೆಗೆ ಹೊರಟಿದ್ದಾಯಿತು.





ವಾರದ ಹಿಂದೆ ಅಂಗಳದ ಹಸಿರು ಕತ್ತಿ ಪ್ರಹಾರಕ್ಕೆ ಒಳಗಾಗಿತ್ತು.  ಅಂಗೈ ಅಗಲದ ಕೆಸುವಿನ ಹತ್ತಾರು ಚಿಗುರೆಲೆಗಳು ಕೈ ತುಂಬಿದುವು.


ಇದನ್ನೆಲ್ಲ ಹಾಕಿ ಒಂದು ಗೊಜ್ಜು ಮಾಡಿಟ್ಕೊಳೋಣ.

“ ಹೇಗೆ ಮಾಡಿದ್ದೂ? “


ಸ್ವಲ್ಪ  ನೀರಿನಲ್ಲಿ ಕೆಸುವಿನೆಲೆಗಳನ್ನು ಬೇಯಿಸುವುದು.


ಯಾವುದೇ ಕ್ರಮದ ಗೊಜ್ಜು ಮಾಡುವುದಿದ್ದರೂ ಉಪ್ಪು ಹುಳಿ ಬೆಲ್ಲ ಅವಶ್ಯಕ.

ಬಾಣಲೆಯಲ್ಲಿ ಎಣ್ಣೆ ಹಾಕಿ ಮಸಾಲಾ ಸಾಮಗ್ರಿಗಳಾದ ಮೆಣಸು, ಉದ್ದಿನಬೇಳೆ, ಕೊತ್ತಂಬರಿ, ಜೀರಿಗೆ, ಮೆಂತೆ, ಇಂಗು ಇತ್ಯಾದಿಗಳನ್ನು ಸಾಂಬಾರಿಗೆ ಹುರಿಯುವ ಕ್ರಮದಲ್ಲಿೆ ಹುರಿಯಿರಿ. ಬೆಳ್ಳುಳ್ಳಿಯನ್ನೂ ಸೇರಿಸಿ.  ಕರಿಬೇವಿನೆಲೆ ಹಾಕಿ, ತೆಂಗಿನತುರಿ ಅರಸಿಣ ಹುಡಿ ಸೇರಿಸಿ, ಬಾಣಲೆ ಕೆಳಗಿಳಿಸಿ.


ಆರಿದ ನಂತರ  ಬೇಯಿಸಿದ ಕೆಸುವಿನೆಲೆ, ಹುಳಿ ಕೂಡಿ ಅರೆಯಿರಿ.

ಅವಶ್ಯವಿದ್ದ ಹಾಗೆ ನೀರು ಸೇರಿಸಿ. ಉಪ್ಪು ಬೆಲ್ಲ ಮರೆಯದೆ ಹಾಕಿ ಕುದಿಸಿ, ಒಗ್ಗರಣೆ ಕೊಡಿ.

ಈ ಗೊಜ್ಜು ನನ್ನ ಅನ್ನ ಚಪಾತಿಗಳೊಂದಿಗೆ ಬೆರೆಯಿತು.  ಮುಗಿಯುವ ತನಕ ಕುದಿಸಿ ಉಣಲಡ್ಡಿಯಿಲ್ಲ.


ನಾಳೆ ತಗತೇ ಸೊಪ್ಪಿನಿಂದ ಹೀಗೇನೆ ಗೊಜ್ಜು ಮಾಡುವುದಿದೆ. ಹೇಗೂ ಹಿತ್ತಲಲ್ಲಿ ಬೆಳೆದು ನಿಂತ ಸಸಿಗಳಿವೆ.  ಮಳೆಗಾಲದಲ್ಲಿ ಉಚಿತವಾಗಿ ದೊರೆಯುವ ನೈಸರ್ಗಿಕ ಹಸಿರೆಲೆಗಳನ್ನು ನಮ್ಮ ಅಡುಗೆಯಲ್ಲಿ ಹಿತವಾಗಿ ಮಿತವಾಗಿ ಬಳಸೋಣ,  ನಿಸರ್ಗ ಮಾತೆಗೆ ನಮಿಸೋಣ.






Thursday, 3 October 2024

ರಸಂ ರುಚಿ

 




ದಿನವೂ ತೊಗರಿಬೇಳೆ ಬೇಯಿಸುವುದಿದೆ,  ಕುಕ್ಕರ್ ಕೈ ಕೊಟ್ಟಿತು.  ಅದೆಷ್ಟೇ ತಿಣುಕಾಡಿದರೂ ವಿಸಿಲ್ ಹಾಕಲೊಪ್ಪದೇ ದಳದಳನೆ ನೀರು ಸುರಿಸಿತು.   “ ಗ್ಯಾಸ್ಕೆಟ್ ತೆಗೆದು ಫ್ರಿಜ್ ಒಳಗಿಡು, “  ನಮ್ಮವರ ಪುಕ್ಕಟೆ ಸಲಹೆ ಸಿಕ್ಕಿತು.

“ ಈಗ ಬೇಳೆ ಬೇಯಿಸುವುದು ಹೇಗೇ?  “  ನನ್ನ ಪೆದ್ದು ಪ್ರಶ್ನೆ.

“ ಹಾಗೇನೇ ಬೇಯಿಸು..  ಹೇಗೂ ಕರೆಂಟ್ ಉಚಿತ,  ಹೊರಗೆ ಬಿಸಿಲು ಬಂದಿದೆ,  ಎಲ್ಲವನ್ನೂ ನಾನೇ ಹೇಳಿ ಕೊಡ್ಬೇಕು,  ಸ್ವಲ್ಪ ತಲೆ ಖರ್ಚು ಮಾಡಲೂ ಕಲಿ…”


ಹೇಳುವುದನ್ನೇ ಮರೆತಿದ್ದೆ.  ನಮ್ಮ ಮನೆ ಸೋಲಾರ್ ಪವರ್ ಹೌಸ್ ಆಗಿ ಹಲವು ವರ್ಷಗಳಾಗಿವೆ.   ಮನೆ ತುಂಬ ವಿದ್ಯುತ್ ಚಾಲಿತ ಉಪಕರಣಗಳು.


ಬೇಳೆಯನ್ನು ಹಾಗೇ ಸುಮ್ಮನೆ ಇಂಡಕ್ಷನ್ ಒಲೆಯಲ್ಲಿಟ್ಟು ಬೇಯಿಸಿದ್ದೂ ಆಯ್ತು.  ನನ್ನ ತರಕಾರಿಗಳೂ  ಅದೇ ತರಹ ಬೆಂದುವು.


ಸಂಜೆಯಾಗುತ್ತಲೇ ವಿದ್ಯುತ್ ರೈಸ್ ಕುಕ್ಕರ್ ಅಟ್ಟದಿಂದ ಕೆಳಗಿಳಿಯಿತು.  ಧೂಳು ಕೊಡವಿದರೆ ಸಾಲದು,  ಚೆನ್ನಾಗಿ ತೊಳೆದೂ ಇರಿಸಲಾಯಿತು.   ನಾಳೆಯ ಸಾಂಬಾರ್ ಇದರಲ್ಲೇ ಮಾಡೋಣ.


“ ಅನ್ನ ಮಾಡಲಿಕ್ಕೆ ರೈಸ್ ಕುಕ್ಕರ್ ಅಲ್ವ,  ಸಾಂಬಾರ್ ಹೇಗೆ ಮಾಡ್ತದೆ ಅದು? “  ಮಗರಾಯನ ಝಗಮಗ ಪ್ರಶ್ನೆ.


ರೈಸ್ ಕುಕ್ಕರಲ್ಲಿ ಬೇಕಿದ್ದಷ್ಟು ತೊಗರಿಬೇಳೆ, ಅಂದಾಜು ಐದಾರು ಚಮಚದಷ್ಟು ತೊಳೆದು ಹಾಕುವುದು.  ನೀರು ತುಸು ಜಾಸ್ತಿ ಎರೆಯಲೇ ಬೇಕು.  ನಿಧಾನಗತಿಯಲ್ಲಿ ಬೇಯುವ ಈ ಪಾತ್ರೆಯಲ್ಲಿ ನೀರು ಆರದಂತೆ ನೋಡಿಕೊಳ್ಳುವ ಅಗತ್ಯವಿದೆ. 

ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳುವುದು.  ನನ್ನ ಬಳಿ ಟೊಮ್ಯಾಟೋ ಹಾಗೂ ಕ್ಯಾಪ್ಸಿಕಂ ಇತ್ತು.

ಸ್ವಲ್ಪ ಕಾಯಿತುರಿ, ಮಸಾಲೆಗೆ ಎರಡು ಒಣಮೆಣಸು,  ಇಂಗು, ಕೊತ್ತಂಬರಿ ಹಾಗೂ ಜೀರಿಗೆ ಹುರಿಯುವುದು.

ಕಾಯಿತುರಿಯೊಂದಿಗೆ ನೀರು ಹಾಕದೆ ಅರೆಯುವುದು.


ತೊಗರಿಬೇಳೆ ಚೆನ್ನಾಗಿ ಬೆಂದ ನಂತರ ಟೊಮ್ಯಾಟೋ ಹಾಗೂ ಕ್ಯಾಪ್ಸಿಕಂ ಹಾಕುವುದು.


ತರಕಾರಿಗಳನ್ನು ಹಾಕಿದ ನಂತರ ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹುಳಿ ಬೆಲ್ಲ ಹಾಕುವುದು.  ಚಿಟಿಕೆ ಅರಸಿಣವನ್ನೂ ಹಾಕಬೇಕು.


ತರಕಾರಿ ಬೆಂದ ನಂತರ ರುಬ್ಬಿದ ಮಸಾಲೆ ಕೂಡಿ, ಅಗತ್ಯ ಪ್ರಮಾಣದ ನೀರು ಎರೆದು ಕುದಿಸಿ.  ಕರಿಬೇವು ಕೂಡಿದ ಒಗ್ಗರಣೆ ಬೀಳಲಿ.


ಇದೀಗ ಸಾಂಬಾರ್ ಆಯ್ತು.  ಮೂವತ್ತು ನಲ್ವತ್ತು ವರ್ಷಗಳ ಹಿಂದೆ ಕಟ್ಟಿಗೆಯ ಒಲೆಯಲ್ಲಿ ನಮ್ಮ ಅಡುಗೆ  ನಡೆಯುತ್ತಿತ್ತು.  ದೊಡ್ಡ ಒಲೆಯಲ್ಲಿ ಅನ್ನ ಬೇಯುತ್ತಿದ್ದರೆ ಅದಕ್ಕೆ ತಾಗಿದಂತಿದ್ದ ಚಿಕ್ಕ ಒಲೆಯಲ್ಲಿ ಸಾಂಬಾರ್, ತರಕಾರಿಗಳನ್ನು ಬೇಯಿಸಲಾಗುತ್ತಿತ್ತು.  ಎರಡೂ ಒಲೆಯಲ್ಲಿ ಎಸರು ಕುದಿಯಲಾರಂಭಿಸಿದಾಗ,  ಅಡುಗೆಯ ಯಜಮಾಂತಿಯ ಉಳಿದ ನಿತ್ಯಕೆಲಸಗಳಿಗೆ ಆರಾಮ.  ನಾನೂ ಇದೇ ತರಹ ಅಡುಗೆ ನಿಭಾಯಿಸಿದ್ದೇನೆ.

 

ಎರಡು ಒಲೆಗಳು ಕೂಡಿದಂತಹದು ಕೋಡೊಲೆ ಎಂದು ಹೇಳಬಹುದಾಗಿದೆ.  ನನ್ನ ಅಮ್ಮ ಅಂದಿನ ದಿನಗಳಲ್ಲಿ ಕೋಡೊಲೆಯಲ್ಲಿ ಕಬ್ಬಿಣದ ಪುಟ್ಟ ಬಾಣಲೆಯಿಟ್ಟು ಮೆಣಸು ಮಸಾಲೆ ಹುರಿಯುವುದು,  ಒಗ್ಗರಣೆ ಸಟ್ಟುಗಕ್ಕೆ ಕೋಡೊಲೆಯೇ ಗತಿ.  ಕಲಾಯಿ ಹಾಕಿದ ಹಿತ್ತಾಳೆಯ ಪುಟ್ಟ ಪಾತ್ರೆಯಲ್ಲಿ ಬೆಣ್ಣೆ ಕರಕರಗಿ ತುಪ್ಪವಾಗುತಿತ್ತು.   ಕಾಫಿ ತಣ್ಣಗಾಯಿತೇ,  ಕೋಡೊಲೆ ಇದೆ.   ಹೀಗೆಲ್ಲ ನೂರೆಂಟು ನೆನಪುಗಳು…


ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ನಮ್ಮವರು ಯಾವುದೇ ಹೊಸ ಉಪಕರಣ ಮಾರುಕಟ್ಟೆಗೆ ಬರಲಿ,  ಖರೀದಿಸುತ್ತಾರೆ.  ಹಾಗಾಗಿಯೇ ನನ್ನ ಬಳಿ ಮೈಕ್ರೋವೇವ್, ರೈಸ್ ಕುಕ್ಕರ್,  ನಾನ್ ಸ್ಟಿಕ್ ತವಾ ಪಾತ್ರಪರಡಿಗಳು ಹಿಂದಿನಿಂದಲೇ ಇವೆ,  ಯಾವುದನ್ನೂ ಒತ್ತಾಯದಿಂದ ತರಿಸಿದ್ದಲ್ಲ.  “ಉಪಯೋಗಿಸು, ಹಾಳಾದರೆ ಅತ್ತ ಇಡು..  ಅದರ ಗ್ಯಾರಂಟಿ ಒಂದೇ ವರ್ಷ ತಿಳೀತಾ..”  ಇಂತಹ ಪುಕ್ಕಟೆ ಸಲಹೆಗಳು.


ಅಂತೂ ರೈಸ್ ಕುಕ್ಕರ್ ಸಾಂಬಾರ್ ರುಚಿಕಟ್ಟಾಗಿರುತ್ತದೆ ಎಂದು ತೋರಿಸಿ ಕೊಟ್ಟಾಯ್ತು.  ಈ ಮಾದರಿಯ ರೈಸ್ ಕುಕ್ಕರ್ ಇಪ್ಪತೈದು ವರ್ಷಗಳ ಹಿಂದೆಯೇ ನನ್ನ ಬಳಿ ಇತ್ತು,  ವಿದೇಶದಿಂದ ತರಿಸಿದ್ದು.  ಆಗಿನ ಸಂದರ್ಭದಲ್ಲಿ ವಿದ್ಯುತ್ ಉಪಕರಣಗಳನ್ನು ಬೇಕಾಬಿಟ್ಟಿ ಉಪಯೋಗಿಸಲು ಬಾರದು, ವಿದ್ಯುತ್ ಕಡಿತ, ಲೋಡ್ ಶೆಡ್ಡಿಂಗ್,  ಹೀಗೇ ಸಮ್ಮನೆ ಕರೆಂಟ್ ಹೋಗುವ ಸಮಸ್ಯೆಗಳು… 

ಆದರೂ ಐದು ಲೀಟರ್ ಸಾಮರ್ಥ್ಯದ ಆ ಕುಕ್ಕರನ್ನು ಬೆಳ್ತಿಗೆ ಅನ್ನ ಮಾಡಲು ಚೆನ್ನಾಗಿರುತ್ತದೆ ಎಂದು ಮನೆ ಮಂದಿಯೆಲ್ಲ ಒಪ್ಪಿಕೊಂಡಿದ್ದರು.  ಆದರೆ ದಿನವೂ ಕುಚ್ಚುಲಕ್ಕಿಯೇ ನಮ್ಮ ಊಟದ ಅನ್ನವಾಗಿರುವಾಗ,  ತೊಗರಿಬೇಳೆ, ತರಕಾರಿ ಬೇಯಿಸಲಿಕ್ಕೆ ಈ ಕುಕ್ಕರ್ ಸೀಮಿತವಾಗಿತ್ತು.  ಆಗಾಗ ಬರುತ್ತಿದ್ದ ನನ್ನಮ್ಮನೂ ರೈಸ್ ಕುಕ್ಕರನ್ನು ಮೆಚ್ಚಿಕೊಂಡಿದ್ದರು. 

“ ಇದು ಆದೀತು, ಆ ಮೈಕ್ರೋವೇವ್ ಸುಮ್ಮನೆ.. “

“ ಮೈಕ್ರೋವೇವ್ ಹಾಳಾಗಿ ಬಿಟ್ಟಿದೆ. “

“ ಒಳ್ಳೇದಾಯ್ತು ಬಿಡು.. “


ಈ ಬಾರಿ ನಮ್ಮ ಕುಚ್ಚುಲಕ್ಕಿ ಅನ್ನ ಮಾಡಿ ನೋಡೋಣ ಎಂದು ಮುಕ್ಕಾಲು ಪಾವು ಅಕ್ಕಿಯನ್ನು ಬೇಯಿಸಿ ನೋಡಲಾಯಿತು.  ಇದರಲ್ಲಿ ವಿಶೇಷ ಪರಿಣತಿ ಏನೂ ಬೇಡ,  ಹಿಡಿಸುವಷ್ಟು ನೀರೆರೆದು, ನಮ್ಮ ಅಕ್ಕಿಯನ್ನೂ ತೊಳೆದು ಹಾಕಿ, ವಿದ್ಯುತ್ ಸಂಪರ್ಕ ಕೊಟ್ಟು ಸುಮ್ಮನಿದ್ದರಾಯಿತು.  ಬೆಂದಿತೋ, ಕುದಿಯುತ್ತಿದೆಯೋ ಎಂದು ಮುಚ್ಚಳ ತೆಗೆದು ನೋಡಲಡ್ಡಿಯಿಲ್ಲ.

ಊಟದ ಸಮಯಕ್ಕೆ ಅನ್ನ ಬೆಂದಿದೆ  ಎಂದು ಸುವಾಸನೆಯಲ್ಲೇ ತಿಳಿಯಿತು.   ಕಟ್ಟಿಗೆಯ ಒಲೆಯಲ್ಲಿ, ಒಂದೇ ಹದನಾದ ಉರಿಯಲ್ಲಿ ಬೆಂದ ಅನ್ನದ ರುಚಿ ಹೇಗಿರುತ್ತದೆ ಎಂದು ಬಲ್ಲವರೇ ಹೇಳಬಲ್ಲರು.


ವಿದ್ಯುತ್ ಅಡುಗೆಯ ಈ ಸ್ಪೂರ್ತಿಯಿಂದ ಈಗ ನಮ್ಮ ಮನೆಗೆ ಅಗಾರೋ ಇಲೆಕ್ಟ್ರಿಕ್ ಕುಕ್ಕರ್ ಬಂದಿದೆ.

ಅಗಾರೋ ಕುಕ್ಕರ್ ಅಡುಗೆಯ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.