" ಅಹ! ಏನು ಟೈಟಲ್ ಇಟ್ಕಂಡಿದೀಯ, ಪೊಸಡಿಗುಂಪೆಯ ಬುಡದಲ್ಲೇ ಇದ್ರೂ.. " ಎಂದ ಮಧು.
" ಇರಲಿ ಬಿಡು, ಎಲ್ಲರಿಗೂ ಎಲ್ಲಿ ಗೊತ್ತಾಗುತ್ತೇ, ನಮ್ಮ ಮುಳಿಗದ್ದೆಯಿಂದ ಪೊಸಡಿಗುಂಪೆಯ ದೂರಾ... "
ಅದು ಒಂದು ರಜಾದಿನ, ಮನೆಯಲ್ಲಿ ಎಲ್ಲರೂ ಇದ್ದೆವು, ನಾವಿಬ್ಬರೇ ಅಲ್ಲ, ಮಕ್ಕಳ ಸೇನೆಯೂ ಬೆಂಗಳೂರಿನಿಂದ ಬಂದಿತ್ತು.
ಸಂಜೆಯಾಗುತ್ತಲೂ, " ಅಮ್ಮ, ಪೊಸಡಿಗುಂಪೆಗೆ ಹೋಗ್ತಾ ಇದೀವಿ, ನಿಂಗೇನು ಕೆಲ್ಸ ಮನೆಯಲ್ಲಿ? ಬಾ... "
" ಸರಿ, ಬಂದೇ.. ಈ ಸೀರೆ ಬದಲಾಯಿಸಿ... " ಅನ್ನುವಷ್ಟರಲ್ಲಿ,
" ಬ್ಯಾಡಾ ಅತ್ತೆ, ಈಗಿರೋದೇ ಚೆನ್ನಾಗಿದೆ. " ಅಂದಳು ಮೈತ್ರಿ.
" ಅಷ್ಟೇ ಈಗ, ಕಾರಿನಲ್ಲಿ ಕೂತಿದ್ದು ತಿರುಗಾ ಕಾರಿನಲ್ಲೇ ಮನೆಗೆ ಬರೂದು... " ಅಂದು ಚಪ್ಪಲಿ ಮೆಟ್ಟಿ ಹೊರಟಿದ್ದಾಯ್ತು.
ಬಾಯಾರುಪದವಿನಲ್ಲಿ ಕಾರು ನಿಂತಿತು. " ಸ್ವಲ್ಪ ಕೆಲ್ಸ ಇದೆ ಬ್ಯಾಂಕಿನಲ್ಲಿ... ಸಾವಿರ ಐನೂರರ ನೋಟು ಬದಲಾಯಿಸಿ.... " ಅನ್ನುತ್ತ ಅಪ್ಪ ಮಗ ಇಳಿದು ಹೋದರು.
ಸುಮ್ಮನೇ ಹೊರಗೆ ನೋಡುತ್ತಿದ್ದಾಗ, ನಮ್ಮ ಎದುರುಗಡೆ ಮೂರು ಜನಾ ನಿಂತ್ಕೊಂಡು ಕೈಲಿದ್ದ ವಸ್ತುವನ್ನು ಬಂಗಾರದ ಒಡವೆಯೋಪಾದಿಯಲ್ಲಿ ನಿರುಕಿಸುತ್ತ ಸಂಭ್ರಮಿಸುತ್ತಿದ್ದುದು ಕಂಡು ಬಂತು.
" ಅತ್ತೇ, ಅವರ ಕೈಲಿ ₹2000 ನೋಟು! "
" ಹ್ಞಾ, " ನಾನೂ ಕಣ್ ಕಣ್ ಬಿಟ್ಟು ಅಂದೆ, " ತೂಕೋ, ಒರ ತೂದು ಕೊರ್ಪೆ... " ( ನೋಡುವಾ, ಒಮ್ಮೆ ನೋಡಿ ಕೊಡುತ್ತೇನೆ )
ನನ್ನ ಕೈಗೆ ಹೊಸ ನೋಟು ಬಂತು. ಅತ್ತ ಇತ್ತ ತಿರುಗಿಸಿ, ಬಣ್ಣ, ಗಾತ್ರಗಳ ಅಧ್ಯಯನ ಮಾಡ್ಬಿಟ್ಟು ಪುನಃ ವಾರಸುದಾರರಿಗೆ ಹಿಂದಿರುಗಿಸಿದೆವು.
ಮಗನ ರುಪಾಯಿ ನೋಟು ವಿನಿಮಯ ಆಯ್ತೋ ಗೊತ್ತಿಲ್ಲ, ನಾವಂತೂ ನೋಟು ಕಂಡಿದ್ದಾಯ್ತು.
ಕೇರಳ ಪ್ರವಾಸೋದ್ಯಮ ಇಲಾಖೆ ಪೊಸಡಿಗುಂಪೆಯನ್ನು ಪ್ರವಾಸೀತಾಣವೆಂದು ಘೋಷಿಸಿ ವರ್ಷಗಳೇ ಕಳೆದಿವೆ. ಪ್ರಶಾಂತ ವಾತಾವರಣವೂ, ಸ್ವಚ್ಛ ಗಾಳಿಯೂ ಕೂಡಿದ " ಸ್ವಚ್ಛ ಭಾರತ " ವನ್ನು ಕಾಣಬೇಕಾದರೆ ಪೊಸಡಿಗುಂಪೆಗೆ ಬನ್ನಿ. ಒಂದು ನಿರ್ದಿಷ್ಟ ಜಾಗದಲ್ಲಿ ಕಾರು ನಿಲ್ಲಿಸಿ ಇಳಿದೆವು.
ನನಗೇನೂ ತಿರುಗಾಟ ಬೇಕಿಲ್ಲ, ಅಪ್ಪನ ಮನೆಗೆ ಹೋಗಬೇಕಾದರೂ ಇದೇ ದಾರಿ. ನನ್ನಪ್ಪನೂ ಕಿಲೋಮೀಟರ್ ಲೆಕ್ಕದಲ್ಲಿ ಡೀಸಲ್ ತುಂಬ ಉಳಿತಾಯ ಆಗುತ್ತೇಂತ ಈ ರಸ್ತೆಯಲ್ಲೇ ಹಿರಣ್ಯಕ್ಕೆ ಬರುತ್ತಿದ್ದರು, ಅಪ್ಪ ಹಿಂದಿರುಗುವಾಗ ನನ್ನದೂ ಒಂದು ತವರುಮನೆಯ ಪಯಣ ಇದ್ದೇ ಇರುತ್ತಿತ್ತು.
ನಿರ್ಜನ ದಾರಿ, ಸೂರ್ಯಾಸ್ತದ ವೇಳೆ, ಮಂಜು ಮುಸುಕಿದ ಆಗಸ, ಪಶ್ಚಿಮದ ಅರಬೀಸಮುದ್ರದಾಳಕ್ಕೆ ಇಳಿಯುತ್ತಿರುವ ಸೂರ್ಯ, ಕೆಂಪು ಬೆಳಕಿನ ಚೆಂಡಿನಂತೆ, ಕಿತ್ತಳೆ ಹಣ್ಣಿನಂತೆ... ಛೆಛೇ, ವರ್ಣಿಸಲು ನಮ್ಮಿಂದಾಗದು. ಚಂದದ ಸೂರ್ಯನನ್ನು ನೋಡಲು ಆಗುಂಬೆಗೆ ಹೋಗಬೇಕೆಂದೇನೂ ಇಲ್ಲ, ಪೊಸಡಿಗುಂಪೆಗೆ ಬಂದರಾಯಿತು. ಒಂದು ಬದಿಯಲ್ಲಿ ಸಮುದ್ರದ ಭೋರ್ಗರೆತ, ಮತ್ತೊಂದೆಡೆ ಬೆಟ್ಟಗಳ ಸಾಲು. ನೆಲ ತುಂಬ ಮುಳಿಹುಲ್ಲು. ಕುಳಿತಿರಲು ಕಪ್ಪನೆಯ ಬಂಡೆಕಲ್ಲುಗಳು. ಕಲ್ಲ ಮೇಲೆ ಅರಳಿರುವ ಹೂ! ಪೊಸಡಿಗುಂಪೆಗೆ ಬಂದ ಲೆಕ್ಕದಲ್ಲಿ ನನ್ನ ಕೈಗೆ ಒಂದು ಹೂ ಗೊಂಚಲು ಬಂದಿತು, ಕಪ್ಪಗಿನ ಪಾರೆ ಕಲ್ಲುಗಳ ಮೇಲೆ ಅರಳುವ ಇದು ಪಾರೆ ಹೂ ಎಂದೇ ಖ್ಯಾತಿ ಪಡೆದಿದೆ.
ಟಿಪ್ಪಣಿ: 17/9/2020 ರಂದು ಸೇರಿಸಿದ್ದು.
ಇದರ ಸಸ್ಯಶಾಸ್ತ್ರೀಯ ಹೆಸರು Polycarpaea corymbosa ಎಂದಾಗಿದ್ದು ಕಪ್ಪು ಕಲ್ಲು ಬಂಡೆಗಳ ಮೇಲೆ ಅಂಟಿಕೊಂಡಂತೆಇರುವಂತದು. ಫೇಸ್ಬುಕ್ ಮಿತ್ರರೂ ಕುಟುಂಬ ಬಂಧುವರ್ಗದವರೂ ಆದ ಡಾ. ಶ್ರೀನಿವಾಸ ಶೇಂತಾರ್ ವೈಜ್ಞಾನಿಕ ಹೆಸರನ್ನುತೋರಿಸಿಕೊಟ್ಟರು.
ಎಲ್ಲ ಭಾರತೀಯ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಶೋಭಿಸುತ್ತಿರುವ ಈ ಸಸ್ಯ ಕನ್ನಡದಲ್ಲಿ ಪಾದೆ ಮುಳ್ಳಿನ ಗಿಡ. ದೀಪಾವಳಿಯ ಜನಪದ ಆಚರಣೆಯಲ್ಲಿ ಬಳಸುವ ವಾಡಿಕೆ ಇದೆ. ಅಪ್ಟಟ ಭಾರತದ ಸಸ್ಯ ಇದಾಗಿದ್ದು ಆಂಗ್ಲಬಾಷಾಶಾಸ್ತ್ರ oldman’s cap ಅಂದಿದೆ.