ಇರಲಿ, ಈಗ ಮಾಂಬಳ ಸಾರು ಮಾಡೋಣ.
ನಿನ್ನೆ ಸಂಕ್ರಾಂತಿಯ ಪ್ರಯುಕ್ತ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಂಜೆಯ ಹೊತ್ತು ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ಭಕ್ತಾದಿಗಳಿಂದ ಸಾಮೂಹಿಕ ಭಜನೆ ಸಹಿತವಾಗಿ ಅನ್ನಸಂತರ್ಪಣೆ ಇದ್ದಿತು.
ರಾತ್ರಿಯಲ್ಲವೇ, ಅನ್ನಪ್ರಸಾದದ ಪಾಯಸದೂಟ ಸ್ವೀಕರಿಸಿದ್ದಾಯ್ತು. ಬೆಳಗೂ ಆಯ್ತು ಅನ್ನಿ, ಬೆಂಗಳೂರು ತಲಪಬೇಕಾಗಿದ್ದ ಮಕ್ಕಳ ಸೈನ್ಯ ಮುಂಜಾನೆಯೇ ತೆಳ್ಳವು, ಬೆಲ್ಲಸುಳಿ ತಿಂದು ಕಾಫಿ ಪೇಯ ಉದರಕ್ಕಿಳಿಸಿ ಹೊರಟಿತು.
ಎಂದಿನಂತೆ ನಮ್ಮ ದಿನಚರಿ ಪ್ರಾರಂಭ.
" ಏನಾದ್ರೂ ಸಿಂಪಲ್ಲಾಗಿ ಅಡುಗೆ ಮಾಡು.. " ನಮ್ಮವರ ಹುಕುಂ ಬಂದಿತು.
" ಇಷ್ಟೂ ನಿನ್ನೆಯ ಔತಣದೂಟ ಉಳಿದಿದೆಯಲ್ಲ, ಬಿಸಿ ಮಾಡಿ ಉಣಬಹುದಿತ್ತು.. "
" ಅದನ್ನೆಲ್ಲ ಹೊರಗೆ ಇಡು... ತೆಗೆದುಕೊಂಡು ಹೋಗುವವರು ಇದಾರಲ್ಲ. " ಉಳಿಕೆಯಾದ ಭೋಜನ ಕಾರ್ಮಿಕ ವರ್ಗದವರೊಳಗೆ ಹಂಚಲ್ಪಟ್ಟಿತು.
" ಎಂತದು ಸಿಂಪಲ್ ಅಡುಗೆ ? "
" ಮಾಂಬಳ ಮಾಡಿಟ್ಕೊಂಡಿದೀಯಲ್ಲ, ಅದನ್ನೇ ಸಾರು ಮಾಡಿದ್ರಾಯ್ತು. ಮಳೆ ಬರುವಾಗ ಇಂತಹ ಸಾರು ಚೆನ್ನಾಗಿರುತ್ತೆ. " ಗೌರತ್ತೆ ಸಿಂಪಲ್ ಉತ್ತರ ಕೊಟ್ಟರು.
ಮಾಂಬಳ ತಂಪು ಪೆಟ್ಟಿಗೆಯಿಂದ ಹೊರ ಬಂದಿತು, ನಮ್ಮ ಅಗತ್ಯಕ್ಕನುಸಾರ ಒಂದು ಚಾಕಲೇಟ್ ಗಾತ್ರದಷ್ಟು ಚೂರಿಯಲ್ಲಿ ಕತ್ತರಿಸಿ ಒಂದಷ್ಟು ನೀರೆರೆದು ಇಡುವುದು. ಮಾಂಬಳವು ನೀರಿನಲ್ಲಿ ನೆನೆ ನೆನೆದು ಮಾವಿನ ಗೊಜ್ಜು ಆಯ್ತು.
ತಪಲೆಯಲ್ಲಿ ನೀರು ಎರೆದು, ಮಾವಿನ ಗೊಜ್ಜು ಸೇರಿಸಿ ಸಾರು ಎಂದಾಗಲಿ, ರುಚಿಗೆ ತಕ್ಕಷ್ಟು ಉಪ್ಪು, ಸಿಹಿಗೆ ಬೇಕಿದ್ದಷ್ಟು ಬೆಲ್ಲದೊಂದಿಗೆ ಕುದಿಯಲಿ.
" ಒಂದು ಹಸಿಮೆಣಸು ಸಿಗಿದು ಹಾಕೂ... " ಎಂದರು ಗೌರತ್ತೆ.
" ಒಗ್ಗರಣೆ ಬೇಡವೇ.. "
" ಅದೆಲ್ಲ ಬೇಡ.. ಆಯ್ತಲ್ಲ ಅಡುಗೆಯ ಅಟ್ಟಣೆ.. "
0 comments:
Post a Comment