Pages

Ads 468x60px

Friday 30 August 2019

ಆಷಾಢದ ಹಲಸು






ಒಮ್ಮೆ ಮಳೆಯ ಅವತರಣವಾದರೆ ಸಾಕು, ತೋಟದ ಹಲಸುಗಳೆಲ್ಲ ಹಣ್ಣಾಗಲು ಪ್ರಾರಂಭ, ಜೋರುಮಳೆ ಎನ್ನುವ ಚೆನ್ನಪ್ಪನೂ ಪತ್ತೆಯಿಲ್ಲ. ಇಂತಹ ಸಮಯದಲ್ಲಿ ನಾವು ಮನೆಯಂಗಳಕ್ಕೆ ಇಳಿಯಲಿಕ್ಕೂ ಇಲ್ಲ. ಆದರೂ ನಾಗಬನ ಹಾಗೂ ಶ್ರೀದೇವಿಯ ದೇವಾಲಯಕ್ಕೆ ಬರುವ ಮಂದಿ ತೋಟದ ಹಲಸುಗಳ ಪರಿಮಳದ ಜಾಡು ಹಿಡಿದು ಕೊಯ್ದು ತಂದಿರಿಸುವವರು. ಹಾಗಾಗಿಯೇ ಜೇನು ತುಳುವ, ಆಟಿ ಬಕ್ಕೆಗಳ ಪರಿಚಯ ನಮಗಾಯಿತು. ಆಷಾಢ ಮಾಸದಲ್ಲಿ ಅಂದರೆ ಆಟಿ ತಿಂಗಳಲ್ಲಿ ಫಲ ನೀಡುವ ಹಲಸಿನ ಮರಕ್ಕೆ ವಿಶೇಷ ಸ್ಥಾನ. ಸಾಮಾನ್ಯವಾಗಿ ತಿನ್ನಲಿಕ್ಕೆ ಏನೂ ಸಿಗದ ಕಾಲ ಇದಾಗಿದ್ದು ಈ ಸಮಯದಲ್ಲಿ ಫಲ ಕೊಡುವ ಹಲಸಿನ ಮರ ಇದ್ದರೆ ನಾವೇ ಭಾಗ್ಯಶಾಲಿಗಳು ಎಂದು ತಿಳಿಯುವ ಕಾಲವೊಂದಿತ್ತು ಎಂಬುದನ್ನು ನಾವು ಮರೆಯದಿರೋಣ.

ಈಗ ಆಷಾಢದ ಹಲಸು ನಮ್ಮ ಮುಂದಿದೆ, " ಬರೇ ಸಣ್ಣದು ಅಕ್ಕ.." ಅಂದ ಚೆನ್ನಪ್ಪ.

" ತೊಂದರೆಯಿಲ್ಲ, ಹತ್ತೂ ಹದಿನೈದು ಸೊಳೆ ಸಿಕ್ಕಿದ್ರೂ ಸಾಕು, ಒಂದು ಸಾಂಬಾರ್ ಮಾಡಬಹುದಲ್ಲ.."

ಅಂದಷ್ಟು ಹಲಸಿನಸೊಳೆ ಸಿಕ್ಕಿತು, ದಪ್ಪ ದಪ್ಪ ದೊಡ್ಡದಾದ ಸೊಳೆಗಳು. ನಮ್ಮ ಈ ದಿನದ ಪದಾರ್ಥಕ್ಕೆ ಯತೇಚ್ಛ ಆಯ್ತು.

ಹಲಸಿನ ಸೊಳೆಯನ್ನು ಸಾಂಬಾರಿಗೆ ಬಳಸುವ ವಾಡಿಕೆ ದೊಡ್ಡ ಭೋಜನಕೂಟಗಳಲ್ಲಿ ಈಚೀಚೆಗೆ ಆರಂಭವಾಗಿದೆ. ಹೆಚ್ಚಿನ ತರಕಾರಿಗಳು ರಾಸಾಯನಿಕಗಳಿಂದ ರಕ್ಷಿಸಲ್ಪಟ್ಟು ತಿನ್ನುವ ಯೋಗ್ಯತೆಯನ್ನು ಕಳೆದುಕೊಂಡಿವೆ. ಇಂತಹ ಸಮಯದಲ್ಲಿ ವಿಷಮುಕ್ತ ತರಕಾರಿ ಹಲಸನ್ನು ನಾವು ಮಗಳ ಮದುವೆಯಲ್ಲಿ ಹಲಸಿನ ಗುಜ್ಜೆ ಸಾಂಬಾರ್ ಬಡಿಸಿ ಯಶಸ್ವಿಯಾಗಿದ್ದನ್ನು ಮರೆಯಲುಂಟೆ?

" ಗುಜ್ಜೆ ಸಾಂಬಾರ್ ಾಡಿದ್ದು ಹೇಗೆ ಗಣಪಣ್ಣ? ಎಲ್ಲರಿಂದಲೂ ಹೊಗಳಿಕೆ ಸಿಕ್ಕಿತು ನೋಡು.. " ನಾನು ಕೇಳಿದಾಗ,
" ಅದರಲ್ಲಿ ವಿಶೇಷ ಏನೂ ಇಲ್ಲ, ನಾವು ಮಾಮೂಲಿಯಾಗಿ ಸಾಂಬಾರ್ ಮಾಡುವ ಹಾಗೇ.. ತೊಗರಿಬೇಳೆ ಹಾಕಿ, ಮೆಣಸು ಕೊತ್ತಂಬ್ರಿ ಹುರಿದು.. "
" ಸರಿ ಬಿಡು, ಗೊತ್ತಾಯ್ತು.. "


ಈಗ ಸಾಂಬಾರ್ ಮಾಡೋಣ.

ಹಲಸಿನ ಸೊಳೆಗಳು, ದೊಡ್ಡ ಗಾತ್ರದಲ್ಲಿ ಕತ್ತರಿಸಿ,. ಒಂದು ಸೊಳೆ ಎರಡು ತುಂಡಾದರೆ ಸಾಕು.
ಎರಡು ಹಿಡಿ ತೊಗರಿಬೇಳೆ, ತೊಳೆದು, ಹತ್ತು ನಿಮಿಷ ನೆನೆಸಿಟ್ಟು ಮೆತ್ತಗೆ ಬೇಯಿಸಿ.
ತೊಗರಿಬೇಳೆ ಬೆಂದ ನಂತರ ಹಲಸಿನ ಸೊಳೆಯನ್ನು ಉಪ್ಪು, ಹುಳಿ, ಚಿಟಿಕೆ ಅರಸಿಣ ಸಹಿತವಾಗಿ ಬೇಳೆಯೊಂದಿಗೆ ಬೇಯಿಸಿ. ಕುಕ್ಕರ್ ಬೇಕಿಲ್ಲ, ಒಂದು ಕುದಿ ಬಂದಾಗ ಹಲಸಿನ ಸೊಳೆ ಬೆಂದಿದೆ ಎಂದೇ ತಿಳಿಯಿರಿ. ಹಲಸಿನ ಗುಜ್ಜೆ ಈ ವೇಗದಲ್ಲಿ ಬೇಯಲಾರದು, ಕುಕ್ಕರ್ ಒಂದೆರಡು ಸೀಟಿ ಹಾಕಲೇಬೇಕು.

ಅರ್ಧ ಕಡಿ ತೆಂಗಿನತುರಿ
ನಾಲ್ಕಾರು ಒಣಮೆಣಸು, ಖಾರ ಇಷ್ಟಪಡುವವರು ತರಕಾರಿ ಬೇಯುವಾಗ ಮೆಣಸಿನ ಹುಡಿ ಹಾಕಿಕೊಳ್ಳಬಹುದಾಗಿದೆ.
ಒಂದು ಚಮಚ ಉದ್ದಿನಬೇಳೆ,
ಎರಡು ಚಮಚ ಕೊತ್ತಂಬರಿ,
ಸ್ವಲ್ಪ ಜೀರಿಗೆ, ಮೆಂತೆ,
ಉದ್ದಿನಕಾಳಿನಷ್ಟು ಇಂಗು,
ಒಂದೆಸಳು ಕರಿಬೇವು.
ಇಷ್ಟೂ ಸಾಮಗ್ರಿಗಳನ್ನು ತುಸು ತೆಂಗಿನ ಎಣ್ಣೆಪಸೆಯಲ್ಲಿ ಫರಿಮಳ ಬರುವಂತೆ ಹುರಿಯತಕ್ಕದ್ದು,
ತೆಂಗಿನತುರಿಯೊಂದಿಗೆ ಅರೆಯತಕ್ಕದ್ದು.
ಅರೆಯುವಾಗ ನೀರು ಕಡಿಮೆ ಬಳಸಿದಷ್ಟೂ ಮಸಾಲೆಗೆ ಪರಿಮಳ ಜಾಸ್ತಿ.

ತೆಂಗಿನ ಅರಪ್ಪನ್ನು ಬೇಯಿಸಿಟ್ಟ ಹಲಸು ತೊಗರಿಬೇಳೆಯ ಮಿಶ್ರಣಕ್ಕೆ ಕೂಡಿಸಿ.
ಬೇಕಿದ್ದರೆ ಈ ಹಂತದಲ್ಲಿ ಉಪ್ಪು ಹಾಕಬಹುದಾಗಿದೆ.
ಬೆಲ್ಲ ಬೇಕಿಲ್ಲ,
ಕುದಿಸಿ, ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಹಾಕುವಲ್ಲಿಗೆ ಸಾಂಬಾರ್ ಸಿದ್ಧವಾಗಿದೆ, ಅನ್ನದೊಂದಿಗೆ ಸವಿಯಿರಿ.



0 comments:

Post a Comment