Pages

Ads 468x60px

Sunday 25 August 2019

ಖರ್ಜೂರದ ಗೊಜ್ಜು





ರಾತ್ರಿ ಮಲಗುವ ಮೊದಲು ಮುಂಜಾನೆಯ ಚಪಾತಿಗಾಗಿ ಹಿಟ್ಟು ಕಲಸುತ್ತಿದ್ದಾಗಲೇ “ ನಾಳೆ ಇದರೊಂದಿಗೆ ಕೂಡಿ ತಿನ್ನಲು ಏನನ್ನು ಮಾಡಲಿ? " ಎಂಬ ಚಿಂತೆ.

 ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದ ಸಂಕ್ರಾಂತಿಯ ಅನ್ನಸಂತರ್ಪಣೆಯ ನಂತರ ಉಳಿಕೆಯಾದ ಮಾಲುಗಳಲ್ಲಿ ಶುಂಠಿ ಹಸಿಮೆಣಸುಗಳು ಬುಟ್ಟಿಯಲ್ಲಿ ಬಿದ್ದಿವೆ. ಏನೋ ಒಂದು ಪುಳಿಂಜಿ ಮಾಡೋಣ.

ಮುಂಜಾನೆ ಶುಂಠಿ ಹಸಿಮೆಣಸುಗಳನ್ನು ಚಿಕ್ಕದಾಗಿ ಹೆಚ್ಚುತ್ತಿದ್ದಾಗ ಜಾಡಿಯಲ್ಲಿ ಖರ್ಜೂರ ಇದೆಯೆಂಬ ನೆನಪಾಯ್ತು. ಪಾಯಸ ಮಾಡೋಣಾಂತ ತೆಗೆದಿರಿಸಿದ್ದು, ಮರೆತೇ ಹೋಗಿತ್ತು ಕಣ್ರೀ..
ಒಂದು ಹಿಡಿ ಖರ್ಜೂರಗಳ ಬೀಜ ಬಿಡಿಸಿ ಇಟ್ಟಾಯ್ತು. ಮಿಕ್ಸಿಯೊಳಗೆ ರೊಂಯ್ ಎಂದು ತಿರುತಿರುಗಿ ಖರ್ಜೂರ ಮುದ್ದೆಯಾಯಿತು.

ಇದೇ ಥರ ಹೆಚ್ಚಿಟ್ಟ 2 ಹಸಿಮೆಣಸು, ಇಂಚು ಉದ್ದದ ಶುಂಠಿಯೂ ಪುಡಿ ಆಗಿ ಬಿಟ್ಟಿತು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ತುಪ್ಪ ಉತ್ತಮ, ಸಾಸಿವೆ ಸಿಡಿಸಿ, ಹಸಿಮೆಣಸು ಶುಂಠಿ ಪೇಸ್ಟ್ ಯಾ ಪುಡಿಯನ್ನು ಹಾಕಿ ಬಾಡಿಸಿ.
ಮೆಣಸಿನ ಖಾರ ಹೂರ ಹೊಮ್ಮಿದಾಗ ಖರ್ಜೂರದ ಮುದ್ದೆ ಬಿದ್ದಿತು.ಮೇಲಿನಿಂದ ಒಂದು ಲೋಟ ನೀರು ಎರೆಯಿರಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ನೆಲ್ಲಿಗಾತ್ರದ ಹುಣಸೆಯ ಹುಳಿಸೇರಿಸಿ, ಕುದಿಯಲಿ. ಬೆಲ್ಲದ ಸಿಹಿ ನಿಮ್ಮ ಬಾಯಿರುಚಿಗನುಸಾರ ಹಾಕಿಕೊಳ್ಳತಕ್ಕದ್ದು.

" ತಿಂಡಿ ತೀರ್ಥ ಮಾಡಿದ್ದಾಯಿತೇ? " ಕೇಳುತ್ತ ವಾಕಿಂಗ್ ಮುಗಿಸಿ ಬಂದ ಗೌರತ್ತೆ. ಈಗ ವಾಕಿಂಗ್ ದೂರ ಹೋಗುವುದಕ್ಕಿಲ್ಲ, ಮನೆಯ ಆವರಣದಲ್ಲೇ ಇರುವ ನಾಗಬನವೂ ಶ್ರೀದೇವಿ ಕ್ಷೇತ್ರವೂ ಗೌರತ್ತೆಯ ನೆಚ್ಚಿನ ತಾಣ.

"ಬಟ್ಟಲಲ್ಲಿ ಚಪಾತಿ ಇಟ್ಕೊಳ್ಳಿ, ಮೇಲಿನಿಂದ ಗೊಜ್ಜು.. "
" ಆಯ್ತು, ಆಯ್ತೂ.. ಗರಂ ಗರಂ ಆದ ಹಾಗಿದೆ.. "
" ಹೌದ, ತಪಲೆ ತುಂಬ ಮೊಸರು ಉಂಟಲ್ಲ.. "
" ಸರಿ, ಬಿಸಿ ಕಾಫಿ ಬರಲಿ..
"ಉಳಿದರೆ ಮಧ್ಯಾಹ್ನಕ್ಕೂ ಆದೀತು, ಬೆಳ್ಳುಳ್ಳಿ ಇರಲಿಲ್ಲವೇ, ಹಾಕಬಹುದಿತ್ತು.. "
" ಇತ್ತು, ನೆನಪಾಗಲಿಲ್ಲ.. "
" ಇನ್ನೊಮ್ಮೆ ಮಾಡುವಾಗ ನೀರು ಗೊಜ್ಜು ಬೇಡ, ಮೊಸರು ಹಾಕಿ ಇಡು, ಅದ್ಭುತ ಹೊಸರುಚಿ ಆಗ್ತದೆ, ಖರ್ಜೂರ ಜಾಸ್ತಿ ಹಾಕು.." ಪುಕ್ಕಟೆ ಸಲಹೆ ದೊರೆಯಿತು.





0 comments:

Post a Comment