" ಮಧೂ, ಈಗ ಅಂಬಟೆ ಕೊಯ್ದು ಉಪ್ಪಿನಕಾಯಿ ಹಾಕಬಹುದಿತ್ತು... ಕೆಲಸದವರು ಅಂತ ಹೇಳಿಕೊಳ್ಳಲಿಕ್ಕೆ ಯಾರೂ ಇಲ್ಲ, ಹೇಗೆ ಕೊಯ್ಯುವುದು? " ನನ್ನ ಪೇಚಾಟ.
" ನಾನೇ ಇದೀನಲ್ಲ ಕೊಯ್ಯಲಿಕ್ಕೆ. " ಅಂದವನೇ ಪಕ್ಕದ ದೊಡ್ಡಮ್ಮನ ಮನೆಯಿಂದ ಉದ್ದ ದೋಟಿ ಇಸ್ಕೊಂಡು ಬಂದ. ಕೊಯ್ಯಲಿಕ್ಕೆ ಗೈಡ್ ಆಗಿ ಅವನಪ್ಪನೇ ನಿಂತರು. ಅಂಬಟೆಯ ಮರ ಎಷ್ಟೇ ದೊಡ್ಡದಾಗಿದ್ದರೂ, ಯಾರೂ ಮರ ಹತ್ತುವಂತಿಲ್ಲ, ಮರ ತುಂಬ ಮೆದು. ಈಗ ಮಳೆಯೂ ಬೇರೆ. ಅಪ್ಪ ಹೇಳಿದಂತೆ ಮಧು ದೋಟಿಯಿಂದ ಪುಟ್ಟ ಪುಟ್ಟ ಗೆಲ್ಲುಗಳನ್ನು ಮುರಿದು ಬೀಳಿಸುವಲ್ಲಿಗೆ ಸಾಕಷ್ಟು ಅಂಬಟೆಗಳು ಲಭ್ಯವಾದುವು.
" ಅಮ್ಮ, ಆಯ್ತಲ್ಲ ಅಂಬಟೆ, ಉಪ್ಪಿನಕಾಯಿ ಹಾಕು. ನಾನು ಲಾಕ್ ಡೌನ್ ಅಂತ ಮನೆಗೆ ಬಂದಿದ್ದಕ್ಕಾಯ್ತು, ಪಪ್ಪಾಯಿಯೂ, ಮಾವಿನಕಾಯಿಯೂ, ಅಂಬಟೆಯೂ, ಹಲಸಿನಕಾಯಿಯೂ... ಹ್ಹಹ್ಹ..."
ಉಪ್ಪಿನಕಾಯಿ ಹಾಕೋಣ, ಈಗ ಮೊದಲು ಎರಡು ಅಂಬಟೆ ತಿನ್ನು, ಮೈತ್ರಿಯೂ ಶ್ರೀದೇವಿಯೂ ಇರಬೇಕಾಗಿತ್ತು ತಿನ್ನಲಿಕ್ಕೆ, ಕಟ್ಕಟ್ ಮಾಡಿ ಉಪ್ಪು ಮೆಣಸು ಹಾಕಿ ತಿಂತಿದ್ರು. "
" ಮೈತ್ರಿ ನಾಳೆ ಮಂಜೇಶ್ವರದಿಂದ ಬರ್ತಾಳೆ.. ತಿಂತಾಳೆ ಬಿಡು. "
ಉಪ್ಪಿನಕಾಯಿ ಹಾಕುವ ಮೊದಲು ಏನೋ ಒಂದು ಅಡುಗೆಯೂ ಮಾಡೋಣ. ಚಟ್ಣಿ ಮುಂಜಾನೆಯ ತಿಂಡಿಗೂ, ಊಟಕ್ಕೂ ಆಗುತ್ತೆ. ಮಾಡುವ ಕ್ರಮ ಹಿಂದೆ ಬರೆದಿದ್ದೇನೆ. ಹುಡುಕಿ ಓದಿರಿ.
ಮಾವಿನಕಾಯಿಯಂತೇ ಹುಳಿ ಇರುವುದರಿಂದ ಸಾರು
ಯಾ ಅಪ್ಪೆ ಸಾರು ಮಾಡಿದ್ರಾದೀತು. ಮೊದಲಾಗಿ ಅಂಬಟೆ ಹಾಗೂ ನಮ್ಮ ಆಯ್ಕೆಯ ಮಸಾಲೆಗಳನ್ನು ಬೇಯಿಸಬೇಕಾಗಿದೆ. ನಂತರ ರುಚಿಗೆ ಉಪ್ಪು ಹಾಗೂ ಬೆಲ್ಲ ಹಾಕಿ, ನೀರನ್ನೂ ಎರೆದು ಕುದಿಸಿ ಒಗ್ಗರಣೆ ಕೊಟ್ಟರಾಯಿತು.
ಮೂರು ಯಾ ನಾಲ್ಕು ಅಂಬಟೆ ಮಿಡಿ ಹೋಳುಗಳು
ನಾಲ್ಕಾರು ಕಾಳುಮೆಣಸು, ಸೂಪ್ ಅಂದ್ರೆ ಕಾಳುಮೆಣಸು ಇರಲೇಬೇಕು.
ಶುಂಠಿ ಹಾಗೂ ಬೆಳ್ಳುಳ್ಳಿ,
ಹಸಿಮೆಣಸು,
ಎಲ್ಲವನ್ನೂ ನೀರೆರೆದು ಬೇಯಿಸಿ.
ಆರಿದ ನಂತರ ನೀರು ಬಸಿದು ಅರೆಯಿರಿ.
ನಂತರ ಬೇಯಿಸಿದ ನೀರನ್ನು ಕೂಡಿಸಿ, ಉಪ್ಪು ಹಾಗೂ ಅವಶ್ಯಕತೆಗನುಸಾರ ನೀರೆರೆದು ಕುದಿಸಿ. ಕುದಿದಾಗ ನೆಲ್ಲಿಕಾಯಿ ಗಾತ್ರದ ಬೆಣ್ಣೆ ಹಾಕಿ. ತುಪ್ಪವೂ ಆದೀತು.
ಬಿಸಿ ಬಿಸಿ ಸೂಪ್ ಸವಿಯುತ್ತ ಅನ್ನ ಉಣ್ಣಿರಿ.
0 comments:
Post a Comment