ವರ್ಷಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಮಂಗಳೂರಿಗೆ ಹೋಗಬೇಕಾಗಿ ಬಂದಿತ್ತು. ಆಗ ಕೋವಿಡ್ ಕೊರೋನಾ ಲಾಕ್ಡೌನ್ಕ್ವಾರೆಂಟೈನ್ ಮಾಸ್ಕ್ ಇತ್ಯಾದಿ ಹೊಸ ಪದ ಸಮೂಹಗಳು ಬಂದಿದ್ದಿಲ್ಲ. ಚಿಕ್ಕಪ್ಪ ಮುಳ್ಳಂಕೊಚ್ಚಿ ಗಣಪತಿ ಭಟ್ಟರೇ ಮಂಗಳೂರಿನ ಸೀನಿಯರ್ ವೈದ್ಯರಾಗಿರುವಾಗ ಅವರ ಮನೆಗೇ ಹೋದೆವು.
ನಮಗೆ ಅತಿಥಿ ಸತ್ಕಾರ ನೀಡಿದ್ದು ಡಾಕ್ಟರ ಮಗಳು ಸಂಧ್ಯಾ.
ತಟ್ಟೆಯಲ್ಲಿದ್ದ ಕೆಂಪು ಬಪ್ಪಂಗಾಯಿ ಹೋಳುಗಳು ನನ್ನನ್ನು ಆಕರ್ಷಿಸಿ ಬಿಟ್ಟಿತು. ಮನೆಯಲ್ಲಿದ್ದ ಕೆಂಪು ಜಾತಿಯದು ಅಳಿದೇಹೋಗಿತ್ತು. " ಸಂಧ್ಯಾ, ಇದರ ಬೀಜ ಇದ್ರೆ ಕೊಟ್ಟಿರು, ಗಿಡ ಮಾಡಿಕೊಳ್ತೇನೆ.. "
ಹೊರಡುವಾಗ ಬಪ್ಪಂಗಾಯಿ ಬೀಜಗಳು ನನ್ನ ಕೈಚೀಲ ಸೇರಿದುವು. ಆಗ ಜನವರಿ ಮೊದಲ ವಾರ, ತೋಟಕ್ಕೆ ಇನ್ನೂ ನೀರು ಹಾಯಿಸಲು ಆರಂಭ ಆಗಿಲ್ಲ, " ಈ ಬೀಜಗಳನ್ನು ಹೇಗೆ ಸಸಿ ಮಾಡಿಕೊಳ್ಳಲಿ? " ಮನೆಯ ಸದಸ್ಯರು ಯಾರೂ ಕ್ಯಾರೇ ಅನ್ನಲಿಲ್ಲ. ಕೊನೆಗೆ ಬಚ್ಚಲು ಮನೆಯ ಹಿಂದೆ ನೀರು ಹರಿದು ಹೋಗುತ್ತಿರುವಲ್ಲಿ ಸೂಕ್ತ ಸ್ಥಳದ ಆಯ್ಕೆ ಮಾಡಿ ಬೀಜಗಳನ್ನು ಹಾಕಲಾಯಿತು. ಮೇಲಿನಿಂದ ಅಡಿಕೆ ಸಿಪ್ಪೆ ಹರಡಲಾಯಿತು. ನೀರು ಚಿಮುಕಿಸಿದ್ದೂ ಆಯಿತು. ಎರಡು ದಿನಕ್ಕೊಮ್ಮೆ ವೀಕ್ಷಣೆ. ಒಂದು ದಿನ ಮೊಳಕೆಯೊಡೆದ ಕುಡಿ... ಮುಂದೆ ಹತ್ತಾರು ದಿನಗಳಲ್ಲಿ ಹಲವು ಗಿಡಗಳು ಮೇಲೆದ್ದುವು.
ಅದೇ ಸಮಯದಲ್ಲಿ ಆಧುನಿಕ ಬಾತ್ ರೂಂ ನಿರ್ಮಾಣವಾಗುತ್ತಲಿತ್ತು, ಸೋಲಾರ್ ಬಿಸಿನೀರು ಅಳವಡಿಸಿದ ನಂತರ ಯಾರೊಬ್ಬರೂ ಹಳೆಯ ಬಚ್ಚಲುಮನೆಗೆ ಕಾಲೇ ಇಡದೆ ನನ್ನ ಪಪ್ಪಾಯಿ ಗಿಡಗಳಿಗೆ ನೀರಿಲ್ಲವಾಯಿತು, ಆ ವೇಳೆಗೆ ಕೊರೋನಾ ಲಾಕ್ ಡೌನ್ ಎಂದು ಇದ್ದನೊಬ್ಬ ಚೆನ್ನಪ್ಪನೂ ಮಾಯವಾಗಿದ್ದ. ಚಿಂತಿಲ್ಲ, ಇನ್ನೇನು ಮಳೆಗಾಲ ಬರಲಿದೆ, ಅಲ್ಲದೆ ಆಗೊಮ್ಮೆಈಗೊಮ್ಮೆ ಮಳೆ ಹನಿ ಬೀಳುತ್ತಲಿದೆ.
ಮಳೆಗಾಲ ಶುರುವಾಯಿತು, ಒಮ್ಮೆ ಪಪ್ಪಾಯಿ ಗಿಡದ ಬಳಿ ಬಂದಾಗ ಸುತ್ತಮುತ್ತ ಕಳೆ ಗಿಡಗಳ ಆವರಣ. ಕತ್ತಿ ಹಿಡಿದು ಕಳೆಗಳನ್ನು ಸವರಬೇಕಾಯಿತು. ಏಳೆಂಟು ಪಪ್ಪಾಯಿ ಗಿಡಗಳು ಒಟ್ಟಿಗೆ ಬೆಳೆಯುತ್ತಲಿವೆ. ಬಲಿಷ್ಟವಾಗಿದ್ದ ಒಂದು ಗಿಡವನ್ನು ಬಿಟ್ಟು ಉಳಿದೆಲ್ಲ ಗಿಡಗಳನ್ನು ಕಿತ್ತು ನಮ್ಮೆಜಮಾನ್ರ ಕೈಯಲಿಟ್ಟು " ಕೆಂಪು ಬಪ್ಪಂಗಾಯಿ ಗಿಡ, ನಾಗಬನಕ್ಕೆ ಹೋಗುವ ದಾರಿಯಲ್ಲಿ ಹೊಸ ಕೆಂಪುಮಣ್ಣು ಹಾಕಿರುವಲ್ಲಿ ನೆಡಿಸಿ.. “ ನನ್ನ ಅಪ್ಪಣೆಯಂತೆ ನೆಟ್ಟರೋ ಬಿಟ್ಟರೋ ತಿಳಿಯದು.
ಪಪ್ಪಾಯಿ ಹೂ ಬಿಟ್ಟಿತು, ಹೆಣ್ಣು ಹೂ. ಬಪ್ಪಂಗಾಯಿ ಗಿಡದಲ್ಲಿ ಎರಡು ವಿಧ, ಹೆಣ್ಣು ಮತ್ತು ಗಂಡು. ಒಂದು ವೇಳೆ ಗಂಡು ಗಿಡವಾಗಿದ್ದರೆ ಕಡಿದು ಹಾಕಬೇಕಾಗಿತ್ತು.
ಪಪ್ಪಾಯಿ ಹೂ ಗಂಡೋ ಹೆಣ್ಣೋ ತಿಳಿಯುವುದು ಹೇಗೆ?
ಗಂಡು ಹೂವು ಗೊಂಚಲು ಗೊಂಚಲಾಗಿ ಅರಳುತ್ತದೆ. ಅದರಲ್ಲಿ ಪಪ್ಪಾಯಿ ಆಗುತ್ತದಾದರೂ ಆ ಕಾಯಿಗಳನ್ನು ಕೊಯ್ದವರನ್ನು ನಾನು ಕಂಡಿಲ್ಲ. ಹೆಣ್ಣು ಗಿಡದಲ್ಲಿ ಒಂದೊಂದೇ ಹೂ ಅರಳುತ್ತೆ.
ಮೊದ ಮೊದಲು ಅರಳಿದ ಹೂಗಳೆಲ್ಲ ಬಿದ್ದೇ ಹೋದವು. ಚಿಕ್ಕ ಗಿಡ ಅಲ್ವೇ, ಗೊಬ್ಬರದ ಹಂಗಿಲ್ಲದೆ ಒಂದು ಹೂ ಕಾಯಾಗಿ ನಿಂತಿತು. ಡಿಸೆಂಬರ್ ತನಕ ಮಳೆಗಾಲ ನಮ್ಮದು, ಆ ತರುವಾಯ ತೋಟಕ್ಕೆ ನೀರು ಹಾಯಿಸುವ ಸಮಯ. ಅಂತೂ ಇಂತೂ ಪಪ್ಪಾಯಿ ಗಿಡ ಬೆಳೆದು ಒಂದೇ ಒಂದು ಫಲ ಕೊಟ್ಟಿತು. ಪುಟ್ಟ ಗಿಡ ಅಲ್ವೇ, ಅರಳಿದ ಹೂಗಳೆಲ್ಲ ಕಾಯಿ ಆಗಿ ಬಲಿತಿದ್ರೆ ಗಿಡ ಭಾರ ತಾಳಲಾರದೆ ಬಿದ್ದೇ ಹೋಗುತ್ತಲಿತ್ತು, ಇದು ಪ್ರಕೃತಿಯ ಸಮತೋಲನಕ್ಕೆ ಒಂದು ಉದಾಹರಣೆ ಎಂದು ತಿಳಿಯಿರಿ.
ಲಾಕ್ಡೌನ್ ಎಂದು ಮಗನೂ ಮನೆಗೆ ಬಂದ ಸಮಯಕ್ಕೆ ಕೊಯ್ಯುವಂತಾಯಿತು, ಕೊಕ್ಕೆ ದೋಟಿ ಕತ್ತಿಗಳ ಹಂಗಿಲ್ಲದೆ ಕೈಯಲ್ಲೇ ಕೊಯ್ಯುವ ಭಾಗ್ಯ ನನ್ನದು.
ತೋಟದಲ್ಲಿ ಕೆಂಪು ಹಲಸು, ಕೆಂಪು ಚಕೋತಾ, ಕೆಂಪು ಪೇರಳೆ, ಕೆಂಪು ನಕ್ಷತ್ರ ಹಣ್ಣು ಹಾಗೂ ಕೆಂಪು ಚೆರ್ರಿಗಳೊಂದಿಗೆ ಈಗ ಕೆಂಪು ಪಪ್ಪಾಯಿ ಸೇರಿಕೊಂಡಿತು.
ಪಪ್ಪಾಯಿ ಗಾತ್ರದಲ್ಲಿ ದೊಡ್ಡದಾಗಿದ್ದುದರಿಂದ ತಿಂದುಳಿದ ಹೋಳುಗಳನ್ನು ಫ್ರಿಜ್ ಒಳಗಿಟ್ಟು ಸಂಜೆ ಮಿಲ್ಕ್ ಶೇಕ್ ಮತ್ತು ಜ್ಯೂಸ್ ಎಂದು ಕುಡಿಯಲಾಯಿತು.
ಹೋಳುಗಳನ್ನು ಮಿಕ್ಸಿಯಲ್ಲಿ ತುಂಬಿ, ಸಿಹಿಗೆ ತಕ್ಕಷ್ಟು ಸಕ್ಕರೆ ಹಾಕಿ ರೊಂಯ್ ಎಂದು ತಿರುಗಿಸಿ,
ಸೂಕ್ತ ಪ್ರಮಾಣದಲ್ಲಿ ಹಾಲು ಎರೆಯುವಲ್ಲಿಗೆ ಮಿಲ್ಕ್ ಶೇಕ್ ಆಯ್ತು,
ಹಾಲು ಸೇರದವರು ನೀರು ಹಾಕ್ಕೊಳ್ಳಿ, ಪಪ್ಪಾಯಿ ಜ್ಯೂಸ್ ಕುಡಿಯಿರಿ.
0 comments:
Post a Comment