ನನ್ನ ಅಡುಗೆ ಮನೆಗೆ ಬೆಂಗಳೂರಿನಿಂದಲೂ ಏನೇನೋ ಪ್ಯಾಕೇಟುಗಳು ಬರುತ್ತಿರುತ್ತವೆ. ಅವುಗಳಲ್ಲಿ ಪಂಚರಂಗಿ ಧಾನ್ಯಗಳೂ ಇತ್ತು. ಏನಪ್ಪಾ ಅಂದ್ಪೆ ಐದು ಬಗೆಯ ಧಾನ್ಯಗಳ ಬೆರಕೆ ಅಷ್ಟೇ. ಕಡ್ಲೆಬೇಳೆ, ತೊಗರಿಬೇಳೆ, ಹೆಸ್ರು, ಹುರುಳಿ ಇತ್ಯಾದಿ..
" ಅರ್ಧ ಗಂಟೆ ನೆನೆಸಿಟ್ಟು ನಂತರ ಬೇಯಿಸು, ಮೂರು ನಾಲ್ಕು ವಿಸಿಲ್ ಹಾಕಲಿ... " ಮಗ ಹೇಳಿದಂತೆ ದಾಲ್ ಆಯ್ತು. ರುಚಿಗೆಉಪ್ಪು, ಇಂಗು ಕರಿಬೇವಿನ ಒಗ್ಗರಣೆ, ಪರಿಮಳಕ್ಕೆ ಕೊತ್ತಂಬರಿ ಸೊಪ್ಪು, ಖಾರಕ್ಕೆ ಶುಂಠಿ ಹಸಿಮೆಣಸು..
ಅರ್ಧ ಕಡಿ ನಿಂಬೆ ಹುಳಿ ಹಿಂಡಿ ರಸ ಎರೆದದ್ದು. ಆರೋಗ್ಯಸೂತ್ರದ ಅನ್ವಯ ನಿಂಬೆಯ ಸಿಪ್ಪೆಯೂ ತೊವ್ವೆಯಲ್ಲಿ ತೇಲಿತು. ಎಡವಟ್ಟಾಯ್ತು,
ನನ್ನ ದಾಲ್ ಕಹಿ ರುಚಿ ಕೊಟ್ಟಿತು. ಒಂದೊಂದ್ಸಾರಿ ಹೀಗೂ ಆಗುತ್ತೆ, ಪರವಾಗಿಲ್ಲ ಬಿಡಿ.
ಪಂಚರಂಗಿ ಧಾನ್ಯಗಳನ್ನು ಹಾಕಿ ದೋಸೆ ಎರೆಯುವ ಹುಮ್ಮಸ್ಸು ಬಂದಿತು.
ಒಂದು ಲೋಟದಲ್ಲಿ ಅರ್ಧದಷ್ಟು ಉದ್ದಿನಬೇಳೆ ತುಂಬಿಸಿ, ನಂತರ ಪಂಚರಂಗಿ ಬೇಳೆ, ಮೆಂತೆ, ಪಚ್ಚೆಸ್ರು ತುಂಬಿ ಲೋಟ ಭರ್ತಿಮಾಡುವುದು. ಒಂದು ಬಾರಿ ತೊಳೆದು ನೀರೆರೆದು ಇಡುವುದು. ನಾಲ್ಕು ಗಂಟೆ ಆದರೂ ನೀರಿನಲ್ಲಿ ನೆನೆಯಲಿ.
ಬೆಳ್ತಿಗೆ ಅಕ್ಕಿ ಒಂದೂವರೆ ಲೋಟ ಇರಲಿ, ನೀರೆರೆದು ಇಡುವುದು. ಅರೆಯುವ ಮುನ್ನ ನಾಲ್ಕಾರು ಬಾರಿ ತೊಳೆಯಿರಿ.
ಸಮಯವಾದೊಡನೆ ಬೇಳೆಗಳನ್ನು ನುಣ್ಣಗೆ ಅರೆಯಿರಿ.
ನಂತರ ಅಕ್ಕಿಯನ್ನೂ ನುಣ್ಣಗೆ ಅರೆದು ರುಚಿಗೆ ಉಪ್ಪು ಹಾಕಿ ಕೂಡಿಸಿ, ಬೆರೆಸಿ ಮುಚ್ಚಿ ಇಡುವುದು. ಹುದುಗು ಬರಲಿ.
ಅರ್ಧ ಲೋಟ ಬಾಂಬೇ ಸಜ್ಜಿಗೆಯನ್ನು ಪ್ರತ್ಯೇಕವಾಗಿ ನೀರೆರೆದು ಇರಿಸತಕ್ಕದ್ದು.
ಮಾರನೇ ದಿನ ಕಾವಲಿ ಬಿಸಿಯಾದ ನಂತರ, ತುಪ್ಪ ಯಾ ಅಡುಗೆಯ ಎಣ್ಣೆ ಸವರಿದಿರಾ,
ದೋಸೆ ಹಿಟ್ಟು ಉಬ್ಬಿ ಮೇಲೇರಿದೆ, ಸೌಟಿನಲ್ಲಿ ಚೆನ್ನಾಗಿ ತಿರುಗಿಸಿ, ನೀರಿನಲ್ಲಿ ನೆನೆದ ಬಾಂಬೇ ಸಜ್ಜಿಗೆಯನ್ನೂ ಸೇರಿಸಿ ಕಲಕಿಕೊಳ್ಳಿ.
ಇನ್ನೇಕೆ ತಡ, ದೋಸೆ ಎರೆಯಿರಿ.
ತೆಳ್ಳಗಾಗಿ ಹಚ್ಚಿದ ದೋಸೆ ಗರಿಗರಿಯಾಗಿಯೂ, ಮೃದುವಾಗಿಯೂ ಎದ್ದುಬಂದಿತು.
ಇಂತಹ ದೋಸೆಗೆ ಗಟ್ಟಿಯಾಗಿ ಕೆಂಪು ಚಟ್ನಿ ಅರೆದು ಹಚ್ಚಿ, ಒಳಗೆ ಬಟಾಟೆಯ ಹೂರಣ ಇರಿಸಿದಾಗ ಮಸಾಲೆದೋಸೆ ಆಯ್ತು ಅನ್ನಿ.
0 comments:
Post a Comment