Pages

Ads 468x60px

Monday, 25 November 2024

ಜೀರಿಗೆ ಕೂಟು

 


 ಈಗ ಏನಾಗ್ಬಿಟ್ಟಿದೆ ಅಂದ್ರೆ ಅಡುಗೆಗೆ ಹಿತವಾಗುವಂತಹ ಮಜ್ಜಿಗೆ ಲಭಿಸುವುದೇ ಇಲ್ಲ.  ಎರಡು ದಿನಕ್ಕೊಮ್ಮೆ ತರುವ ಹಾಲು,  ಅದು ಚಹಾ ಕಾಫಿ, ಹಾಗೇನೇ ಕುಡಿಯಲುೂ ಆಯ್ತು, ನಂತರ ಮೊಸರು ಆಗಬೇಕು, ಯಾವುದೂ ನಿರರ್ಥಕ ಆಗದ ಹಾಗೆ ಬೆಣ್ಣೆ, ತುಪ್ಪವೂ ಮೇಲೆದ್ದು ಬರಬೇಕು.  ಉಳಿದಂತಹ ಮಜ್ಜಿಗೆಯನ್ನು ಗಟಗಟನೆ ಕುಡಿಯಬೇಕು.


ಮನೆಯಲ್ಲೇ ಎಮ್ಮೆ ದನ ಇದ್ದ ಕಾಲದಲ್ಲಿ, ಮನೆಯ ಹೊರಗೂ ನಮ್ಮ ಮಜ್ಜಿಗೆ ಬಟವಾಡೆ ಆಗುತ್ತಿದ್ದ ಕಾಲ ಅದು.  ನೆರೆಕರೆಯ ಮನೆಗಳಲ್ಲಿ ವಿಶೇಷ ಸಮಾರಂಭಗಳಿದ್ದಲ್ಲಿ ನಮ್ಮ ಮಾವ ಮೊದಲೇ ತಿಳಿಸಿರುತ್ತಿದ್ದರು, ಏನಂತ?    “ ಆ ಮದುವೆ ಮನೆಗೆ ಒಂದು ಕೊಡ ಮಜ್ಜಿಗೆ ಶೇಖರಿಸಿ ಇಡು.. “    ಈಗ ಏನೇ ಇದ್ದರೂ ನಂದಿನಿ ಪ್ಯಾಕೆಟ್ ಹಾಲು, ಮೊಸರು,  ಮಜ್ಜಿಗೆಯೂ ಸಿಗುತ್ತೆ ಪ್ಯಾಕೆಟ್ಟು.


ಮಜ್ಜಿಗೆಹುಳಿ ಮಾಡೋಣ ಅಂತ ಆಲೋಚನೆ ಮಾಡುತ್ತ ಇದ್ದ ಹಾಗೆ ಮಜ್ಜಿಗೆ ಮುಗಿಯಿತು.  ತಣ್ಣಗೆ ಅರ್ಧ ಲೋಟ ಮೊಸರು ಉಳಿದಿತ್ತು.  ಮೊಸರೂ ಆದೀತು.   ಸೌತೇ ಕಾಯಿ ಇದೆ.   ಯಾವುದೇ ಅಡುಗೆಗಾದೀತು ಎಂದು ನೆನೆಸಿದ ಕಾಬೂಲಿ ಚನಾ ಇದೆ.  ತೆಂಗಿನಕಾಯಿ ಅರ್ಧ ಕಡಿ ಇದೆಯಷ್ಟೇ,  ಅದೂ ಸಣ್ಣ ಕಡಿ.  ಇನ್ನೊಂದು ಕಾಯಿ ಸುಲಿದು ಕೊಡಲಿಕ್ಕೆ ರಂಗಣ್ಣ ಇವತ್ತು ಬಂದಿಲ್ಲ… ಹೀಗೆಲ್ಲ ಚಿಂತಿಸುತ್ತ ಇದ್ದಂತೆ ವಿದ್ಯುತ್ ಕುಕ್ಕರಲ್ಲಿ ಕಾಬೂಲಿ ಚನಾ ಬೇಯಲಿಕ್ಕೆ ಇಟ್ಟಾಯ್ತು.   ಸೌತೇಕಾಯಿ ಹೋಳಾಯ್ತು.  ಅಗಾರೋ ರೈಸ್ ಕುಕ್ಕರ್ ಅನ್ನ ಬೇಯಿಸುತ್ತ ಇದೆ.  ಬೆಳ್ತಿಗೆ ಅನ್ನ ಕೇವಲ ಇಪ್ಪತೈದು ನಿಮಿಷದಲ್ಲಿ ಆಗುತ್ತೆ,  ಕುಚ್ಚುಲಕ್ಕಿ ಅನ್ನ ಬೇಯಲಿಕ್ಕೆ ಒಂದೂವರೆಯಿಂದ ಎರಡು ಗಂಟೆಗಳ ಅವಧಿ.  ವಿದ್ಯುತ್ ಖರ್ಚು ಕಡಿಮೆ ಎಂದು ನಮ್ಮ ಯಜಮಾನರ ಅಂಬೋಣ.





ಈಗ ಸ್ವಲ್ಪ ಬಿಡುವು,  ದೈನಂದಿನ ಇನ್ನಿತರ ಕೆಲಸ ಕಾರ್ಯಗಳನ್ನು ಮುಗಿಸಿ ಅಡುಗೆ ಮನೆಗೆ ಬಂದಾಗ ಅನ್ನ ಬೆಂದಿದೆ,  ಕಾಬೂಲಿ ಚನಾ ಹದವಾಗಿ ಬೆಂದಿದೆ.  ಆಗ್ಗಿಂದಾಗ್ಗೆ ಮುಚ್ಚಳ ತೆರೆದು ನೋಡಲಡ್ಡಿಯಿಲ್ಲ.


ತೆಂಗಿನತುರಿ ಕಡಿಮೆ ಆದ ಬಾಬ್ತು ಒಂದು ಸೌಟು ಬೆಂದಂತಹ ಕಾಬೂಲಿ ಚನಾ ತೆಗೆದಿರಿಸಲಾಯಿತು.

ಸೌತೆ ಹೋಳುಗಳನ್ನು ಬೇಯಲು ಹಾಕಿ, ರುಚಿಗೆ ಉಪ್ಪು ಕೂಡಿ, ಮುಚ್ಚಿ ಇರಿಸಲಾಯಿತು. ಮರೆತು ಹೋದ ಹಸಿಮೆಣಸನ್ನು ಎರಡಾಗಿ ಸಿಗಿದು ಹಾಕಲಾಯಿತು.

ಬೇಯುತ್ತ ಇರಲಿ,  ಈಗ ಅರೆಯುವ ಸಮಯ.


ತೆಂಗಿನತುರಿ, ಕಾಬೂಲಿ ಚನಾ, ಮೊಸರು ಮಿಕ್ಸಿ ಜಾರೊಳಗೆ ತುಂಬಿ, ಒಂದು ಹಸಿಮೆಣಸು,  ತುಸು ಜೀರಿಗೆ,  ಚಿಟಿಕೆ ಅರಸಿಣ ಕೂಡಿ ಅರೆಯಲಾಯಿತು.  ಅರೆದ ಮಿಶ್ರಣ ಸೇರಿದಾಗ ಒಂದು ಪದಾರ್ಥ ಸಿದ್ಧಗೊಂಡಿದೆ.  ಹುಳಿ ಹಾಕುವುದಕ್ಕಿಲ್ಲ,  ಉಪ್ಪು ಬೆಲ್ಲ, ನೀರು ಹೊಂದಿಸಿದರಾಯಿತು.  ಕುದಿದ ನಂತರ ಕರಿಬೇವು ಕೂಡಿದ ಒಗ್ಗರಣೆಯೊಂದಿಗೆ ವಿದ್ಯುತ್ ರೈಸ್ ಕುಕ್ಕರ್ ಅಡುಗೆ ಮುಗಿಯಿತು.




Tuesday, 19 November 2024

ನುಗ್ಗೆ ಹುರುಳಿ ರಸಂ

 

ದಿನವೂ ಒಂದೇ ಮಾದರಿಯ ಸಾಂಬಾರ್ ಮಾಡುವುದೆಂದರೇನು?  ಹೋಟಲ್ ಆದರೆ ಸರಿ, ಮನೆಯಲ್ಲವೇ?   ನಿನ್ನೆ ಮಂಗಳೂರಿನಲ್ಲಿ ಹೋಟಲ್ ಊಟ,  ಹೇಗಿತ್ತು ಸಾಂಬಾರು ಅಂದರೆ ಧಾರಾಳ ನೀರೂ, ಸೌತೆಕಾಯಿ ಹೋಳೂ ಕೂಡಿದ ಕೆಂಪಗಿನ ಒಂದು ರಸ ಪದಾರ್ಥ ನಮಗೆ ದಕ್ಕಿತು.  ಒಂದು ಚೂರಾದರೂ ತೆಂಗಿನ ತುರಿ ಹಾಕಿದಂತಿಲ್ಲ.  ಹಲಸಿನ ಗುಜ್ಜೆ ಪಲ್ಯವೂ ಇತ್ತು. ಅದಕ್ಕೂ ತೆಂಗಿನ ತುರಿ ಬಿದ್ದಿಲ್ಲ.  ಇನ್ನು ಸಾರು, ತೊವ್ವೆ, ಪಾಯಸ ತೆಂಗಿನಕಾಯಿ ಕೇಳದು.  ಆ ದಿನ ದೀಪಾವಳಿ ಸ್ಪೆಶಲ್ ಅಂತ ಲಡ್ಡು ಬೇರೆ.


“ ಬಾದಾಮಿ ಹಲ್ವ ತಿನ್ನೋಣ ,“   ಈ ಹೋಟಲಲ್ಲಿ ಅದಿಲ್ಲ.  ಬಾದಾಮಿ ಹಲ್ವ ನನ್ನ ಬಾಲ್ಯದ ಸಿಹಿ ನೆನಪು.  ಮಂಗಳೂರಲ್ಲಿ ಮೋಹಿನಿ ವಿಲಾಸ್ ಎಂಬ ಹೋಟಲ್ ಗೆ ಹೋಗಿ ಮಕ್ಕಳೆಲ್ಲ ಮೊದಲಾಗಿ ಬಾದಾಮಿ ಹಲ್ವ ಸವಿದೇ ಮುಂದಿನ ತಿನಿಸಿನ ಬಟ್ಟಲನ್ನು ಕೈಗೆತ್ತಿ ಕೊಳ್ಳುತ್ತಿದ್ದೆವು.   ಈಗ ಆ ಹೋಟಲ್ ಇಲ್ಲ,  ಅಂದಿನ ಬಾದಾಮ್ ಹಲ್ವ ಇನ್ನು ಸಿಗದು.   “ಕಾಶಿ ಹಲ್ವ ಇದೆಯಂತೆ…”  ಅದನ್ನೇ ಕಟ್ಟಿಸಿಕೊಂಡೆವು.




ದಿನ ಬೆಳಗಾದರೆ ತೆಂಗಿನಕಾಯಿ ತುರಿಯದೆ ನಮ್ಮ ಅಡುಗೆ ಪ್ರಾರಭವಾಗದು,  ರೂಢಿಯಾಗ್ಬಿಟ್ಟಿದೆ,  ಏನು ಮಾಡೋಣ ?


ತೆಂಗಿನಕಾಯಿ ತೋರಿಸದೆ ಒಂದು ಸಾಂಬಾರ್ ಮಾಡೇ ಬಿಡೋಣ.

ನಾಲ್ಕು ಚಮಚ ತೊಗರಿಬೇಳೆ,  ಎರಡು ಚಮಚ ಹೆಸ್ರು ಬೇಳೆ ಬೇಯಲಿಕ್ಕೆ ಇಟ್ಟಾಯಿತು.

ತರಕಾರಿ ಏನೇನಿದೆ?  ಬೀನ್ಸ್ ,  ಕ್ಯಾರೆಟ್ ಹೆಚ್ಚಿಡುವುದು.

ಅತ್ತಲಾಗಿ ಸಾಂಬಾರು,  ಇತ್ತಲಾಗಿ ಸಾರು ಅನ್ನುವಂತಿರಬೇಕು.


ಬೇಯುತ್ತಲಿರುವ ಬೇಳೆಯೊಂದಿಗೆ ಒಂದು ಟೊಮೇಟೊ ಬೇಯಲಿ,  ಕತ್ತರಿಸಿ ಹಾಕುವುದಕ್ಕಿಲ್ಲ.

ಎರಡು ನೀರುಳ್ಳಿ ಹೆಚ್ಚಿಡುವುದು,  ಅಂತೆಯೇ ಬೆಳ್ಳುಳ್ಳಿ ಎಸಳುಗಳೂ ಇರಲಿ,  ಒಗ್ಗರಣೆಗೂ ಆಯಿತು.

ಇನ್ನೀಗ ಮಸಾಲೆ ಹುರಿಯೋಣ.

ಬಾಣಲೆಗೆ ಒಂದು ಚಮಚ ಎಣ್ಣೆ ಎರೆದು,  

ಒಂದೂವರೆ ಚಮಚ ಹುರುಳಿ ಕಾಳು,

ಎರಡರಿಂದ ಮೂರು ಕುಮ್ಟೆ ಮೆಣಸು,

ಮೂರು ಚಮಚ ಕೊತ್ತಂಬರಿ,

ಪುಟ್ಟ ಚಮಚದಲ್ಲಿ ಜೀರಿಗೆ ಹಾಗೂ ಮೆಂತೆ,

ಕಡ್ಲೆ ಗಾತ್ರದ ಇಂಗು,

ಹುರಿದು ಪರಿಮಳ ಬರುತ್ತಿದ್ದ ಹಾಗೆ ಅರ್ಧ ನೀರುಳ್ಳಿ ಹಾಗೂ ಎರಡು ಬೆಳ್ಳುಳ್ಳಿ ಎಸಳು, ಚಿಟಿಕೆ ಅರಸಿಣ ಹುಡಿ ಹಾಗೂ ಕರಿಬೇವು ಹಾಕಿರಿ,  ಆರಿದ ನಂತರ ಮಿಕ್ಸಿಯ ಜಾರ್ ಒಳಗೆ ತುಂಬಿಸಿ, ಒಂದು ಸೌಟು ಬೆಂದಿರುವಂತಹ ಬೇಳೆ ಸೇರಿಸಿ,  ಜೊತೆಗೆ ಬೇಯಿಸಿದ ಇಡೀ ಟೊಮ್ಯಾಟೊ ಕೂಡಿ ನುಣ್ಣಗೆ ಅರೆಯಿರಿ.


ಅರೆದ ಸಾಮಗ್ರಿ,  ಬೇಯಿಸಿದ ತರಕಾರಿ ಹಾಗೂ ಬೇಳೆಯೊಂದಿಗೆ ಬೆರೆಯಲಿ.  ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹುಳಿ ಬೆಲ್ಲ ಹಾಕುವ ಪ್ರಾವೀಣ್ಯತೆ ನಮ್ಮದಾಗಿರಬೇಕು.

ಇದೀಗ ನುಗ್ಗೆ ಸೊಪ್ಪು ಹಾಕುವ ಸಮಯ,  ನಂತರ ನೀರಿನ ಸಾಂದ್ರತೆ ನೋಡಿಕೊಂಡು ಕುದಿಸುವುದು.

ಕೊನೆಯದಾಗಿ ಒಗ್ಗರಣೆ.  ರುಚಿಯಾದ ನುಗ್ಗೆ ಹುರುಳಿ ರಸಂ ನಮ್ಮದಾಗಿದೆ.  ಅನ್ನ ಮಾತ್ರವಲ್ಲದೆ ದೋಸೆ ಇಡ್ಲಿ ಚಪಾತಿಗಳಿಗೂ ಸೂಕ್ತ ಈ ಕೂಟು.