ರಾತ್ರಿಯ ಅಡುಗೆಯ ಸಿದ್ಧತೆ ಆಗಬೇಕಾಗಿತ್ತು. ಎಂದಿನಂತೆ ಕುಕ್ಕರಿನಲ್ಲಿ ನೀರು ತುಂಬಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟು, ರಾತ್ರಿಯ ಸ್ನಾನ ಮಾಡುವ ಮನೆಮಂದಿಗೆ ನೀರು ಕಾಯಿಸಲು ಬಚ್ಚಲೊಲೆಯ ಬಳಿ ಸ್ವಲ್ಪ ಹೊತ್ತು ಗುದ್ದಾಡಿ ಒಳ ಬಂದು, ಒಂದೂವರೆ ಪಾವು ಅಕ್ಕಿ ಅಳೆದು, ತೊಳೆದು ಕುಕ್ಕರಿನಲ್ಲಿ ಕುದಿಯುತ್ತಿದ್ದ ನೀರಿಗೆ ಹಾಕಿದೆ. ಕುಕ್ಕರ್ ಮುಚ್ಚಲು ಅಣಿಯಾಗುತ್ತಿದ್ದಂತೆ ವಿದ್ಯುತ್ ಹೋಯಿತು.
" ಗ್ಯಾಸ್ ಒಲೆಯೇ ಗತಿ " ಕುದಿನೀರಿನೊಳಗಿದ್ದ ಅಕ್ಕಿ ಅಣಕಿಸಿತು.
" ಕರೆಂಟ್ ಹೋಯ್ತಲ್ಲಾ..... ಈ ಕುಚ್ಚುಲಕ್ಕಿ ಹಾಕಿ ದಂಡ ಆಯ್ತು "
" ಬೆಳ್ತಿಗೆ ಅನ್ನ ಮಾಡಮ್ಮಾ "
" ಸರಿ ಹೋಯ್ತು, ನಿಂಗೆ ಅಂತಾನೇ ಕುಚ್ಚುಲಕ್ಕಿ ಹಾಕಿದ್ದು "
" ಕರೆಂಟ್ ಬಂದೀತು ಈಗ "
ಅದೇ ಸರಿ ಅನ್ನಿಸಿ ಕುಕ್ಕರನ್ನು ಕೆಳಗಿಳಿಸಿ, ಆರದ ಹಾಗೆ ತಟ್ಟೆ ಮುಚ್ಚಿ, ಕತ್ತಲಲ್ಲಿ ತಡಕಾಡುತ್ತಾ ಈಚೆ ಬಂದು, ಐ ಪ್ಯಾಡ್ ಕೈಗೆತ್ತಿಕೊಂಡು ನನ್ನ ಬರವಣಿಗೆಯನ್ನು ಮುಂದುವರಿಸಿದೆ. ಕಾಲು ಘಂಟೆ ಕಳೆದ್ರೂ ವಿದ್ಯುತ್ ಸುಳಿವಿಲ್ಲ. ಈಗಲೇ ಘಂಟೆ ಎಂಟೂವರೆ ಆಗಿದೆ, ಇನ್ನು ಬೆಳ್ತಿಗೆ ಅನ್ನ ಮಾಡುವುದೇ ಸರಿ ಅಂದ್ಕೊಂಡು ಪುನಃ ಹೊಸ ಅಡುಗೆ ಸಿದ್ದತೆಗೆ ತೊಡಗಿದೆ.
ಅಯ್ಯೋ ರಾಮಾ, ಈಗಾಗಲೇ ಅಕ್ಕಿ ಹಾಕಿರೋದನ್ನು ಬಿಟ್ಟು ಹೊಸ ಅಡುಗೆಗೆ ಯಾಕೆ ಹೊರಟಿದ್ದು ಅಂತ ಕೇಳಿಯೇ ಕೇಳ್ತೀರಾ, ಅದೇ ವಿಷ್ಯ ಈಗ ಇರೂದು. ಕುಚ್ಚುಲಕ್ಕಿ ಅನ್ನ ಆಗ್ಬೇಕಿದ್ರೆ ಅಕ್ಕಿ ಕುದಿದು ಸಣ್ಣ ಉರಿಯಲ್ಲಿ ಅರ್ಧ ಘಂಟೆ ಇಟ್ರೇನೇ ಅನ್ನ ಬೆಂದಿದೆ ಅನ್ನಬಹುದು. ಪಾತ್ರೆಯಿಂದ ಹೊರ ಚೆಲ್ಲುವಂತೆ ಗಳಗಳ ಕುದಿಯಲೂಬಾರದು. ಅದಕ್ಕಾಗಿ ಇಂಡಕ್ಷನ್ ಸ್ಟವ್ ಮೇಲೆ ಇಟ್ಟರೆ ಆರಾಮವಾಗಿ ಕುದಿಯುವಿಕೆಯನ್ನು ನಿಯಂತ್ರಣದಲ್ಲಿ ಇರಿಸಬಹುದು. ಅದೂ ಅಲ್ಲದೆ ಗ್ಯಾಸ್ ಮುಗಿಯುತ್ತಾ ಬಂದಿತ್ತು. ಗ್ಯಾಸ್ ಏಜೆನ್ಸಿಯವರು ಈ ಕಡೆ ತಲೆ ಹಾಕ್ದೇ ಒಂದೂವರೆ ತಿಂಗಳಾಯ್ತು, ಬರೋ ತನಕ ಸುಧರಿಸ ಬೇಡ್ವೇ, ಹೀಗೆಲ್ಲಾ ದೂರಾಲೋಚನೆ ನನ್ನದು.....
ಹೊಸತಾಗಿ ಬೆಳ್ತಿಗೆ ಅಕ್ಕಿ ಅಳೆದು, ತೊಳೆದು, ನೀರನ್ನೂ ಅಳೆದು, ಕುಕ್ಕರಿನಲ್ಲಿದ್ದ ಕುಚ್ಚುಲಕ್ಕಿಯನ್ನು ಬೇರೆ ಪಾತ್ರೆಗೆ ವರ್ಗಾಯಿಸಿ, ಅನ್ನ ಬೇಯಲು ಗ್ಯಾಸ್ ಒಲೆ ಹೊತ್ತಿಸಿದೆನಾ, ಕರೆಂಟ್ ಬಂದೇ ಬಿಟ್ಟಿತು!
ಮಳೆಗಾಲ ಬೇರೆ, ಕರೆಂಟ್ ಕೈ ಕೊಡುವುದು ಯಾವಾಗಲೂ ಇದ್ದಿದ್ದೇ, ಈಗ ಬಂದ ವಿದ್ಯುತ್ ಹೋಗುವ ಮೊದಲು ಬೆಳ್ತಿಗೆ ಅನ್ನವೇ ಶೀಘ್ರದಲ್ಲಿ ಆಗುವಂತಾದ್ದಾದುರಿಂದ ಬೆಳ್ತಿಗೆ ಅಕ್ಕಿ ಇಂಡಕ್ಷನ್ ಸ್ಟವ್ ಮೇಲೇರಿತು.
" ಕರೆಂಟ್ ಬಂತಲ್ಲಾ, ಏನ್ಮಾಡ್ತಾ ಇದ್ದೀ ಅಮ್ಮಾ ? "
" ನೋಡು ಇಷ್ಟಾಯ್ತು, ಈ ಕುಚ್ಚುಲಕ್ಕಿ ಏನು ಮಾಡೂದು ಅಂತ.....ಹ್ಞಾ...ನಾಳೆ ಕಾಫೀಗೆ ಉಂಡೆ ಮಾಡಿದ್ರಾಯ್ತು "
ಢೆಲ್ಲಿ ಬೆಂಗಳೂರುಗಳಲ್ಲಿ ಪರೋಠಾ, ರೈಸ್ ಬಾತ್ ತಿಂದು ಸಾಕಾಗಿದ್ದ ಮಗನಿಗೂ ಖುಷಿ, " ಉಂಡೆ ತಿನ್ನೋ ಭಾಗ್ಯ ಸಿಕ್ತು " ಅಂದ ತಂಗಿಯ ಬಳಿ.
ಎಲ್ಲರದೂ ಊಟವಾದ ನಂತರ ಕುದಿನೀರಿನಲ್ಲಿ ನೆನೆದ ಕುಚ್ಚುಲಕ್ಕಿ ಹೊರ ಬಂದಿತು. ನೀರು ಬಸಿದು ಮಿಕ್ಸಿಯ ಜಾರೊಳಗೆ ಮಿತವಾಗಿ ಅಕ್ಕಿ ಹಾಕಿ ತಿರುಗಿಸಿ ತೆಗೆದೆ, ಬೇರೆ ನೀರು ಹಾಕಲೇ ಬಾರದು. ಹೀಗೆ ಮೂರು ಬಾರಿ ಹಾಕಿ ತೆಗೆದು ಮಾಡಿದ್ದರಲ್ಲಿ ಮುದ್ದೆಯಾದ ಮಿಶ್ರಣ ದೊರೆಯಿತು. ರುಚಿಗೆ ಬೇಕಾದ ಉಪ್ಪನ್ನೂ ಸೇರಿಸಿದ್ದೆ ಅನ್ನಿ. ಒಂದೇ ಸೈಜಿನ ಉಂಡೆಗಳನ್ನು ತಯಾರಿಸಿ ಮುಚ್ಚಿಟ್ಟು.....
ಬೆಳಗೆದ್ದು ಹಬೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸುವಷ್ಟರಲ್ಲಿ ಮುದ್ದಾದ ಉಂಡೆಗಳು ತಯಾರಾದುವು. ಧೋರೆಂದು ಮಳೆ ಬರುತ್ತಿರುವ ಈ ಸಮಯದಲ್ಲಿ ಒಂದು ಕಾಯಿ ಚಟ್ನಿ ಅರೆದು, ಗಟ್ಟಿ ಮೊಸರಿನೊಂದಿಗೆ ತಿನ್ನುತ್ತಿರಬೇಕಾದರೆ.... ಹಾಯೆನಿಸಿಬಿಟ್ಟಿತು.
ಅಕ್ಕಿ ಹಿಟ್ಟಿಗೆ ಸ್ವಲ್ಪ ಕಾಯಿತುರಿ ಸೇರಿಸಿ, ಉಂಡೆಯ ಸ್ವಾದ ಇನ್ನೂ ಹೆಚ್ಚು.
ಚಟ್ನಿಯೊಂದಿಗೆ ಸಿಹಿ ಕಾಯಿಹಾಲು ಹಾಕಿಯೂ ತಿನ್ನಿ.
ಕಡಲೆ ಗಸಿಯೊಂದಿಗೂ ಚೆನ್ನಾಗಿರುತ್ತದೆ.
ತಿಂದುಳಿದ ಉಂಡೆಗಳನ್ನು ಸಂಜೆ ವೇಳೆ ಉಸುಳಿ ಮಾಡಿ ತಿನ್ನಿ.
ಕುಚ್ಚುಲಕ್ಕಿ:
ಗದ್ದೆಯಲ್ಲಿ ಬೆಳೆದ ಭತ್ತದ ಪೈರಿನಿಂದ ಭತ್ತವನ್ನು ಬೇರ್ಪಡಿಸಿ, ಕಾಳುಗಳ ಜಳ್ಳು ತೆಗೆದು, ಒಣಗಿಸಿ ಶೇಖರಿಸಿದ ಭತ್ತವನ್ನು ಹದವಾಗಿ ಬೇಯಿಸಿ, ಪುನಃ ಒಣಗಿಸಿದ ಈ ಬೆಂದ ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸಿ ತೆಗೆದ ಅಕ್ಕಿಯೇ ಕುಚ್ಚುಲಕ್ಕಿ ಅಥವಾ ಕುಸುಬುಲಕ್ಕಿ. ಇದು ದಕ್ಷಿಣ ಕನ್ನಡಿಗರು ಹಾಗೂ ಕೇರಳೀಯರು ಊಟಕ್ಕೆ ಉಪಯೋಗಿಸುವ ಅಕ್ಕಿ. ಭತ್ತದ ಪೋಷಕಾಂಶಗಳು ನಷ್ಟವಾಗದೇ ಈ ಅಕ್ಕಿಯಲ್ಲಿ ಉಳಿಯುತ್ತವೆ. ಆಂಗ್ಲ ಭಾಷೆಯಲ್ಲಿ boiled rice ಅಂದರೆ ಬೇಗ ಅರ್ಥವಾದೀತು.
Posted via DraftCraft app