Pages

Ads 468x60px

Monday 22 July 2019

ಬಣ್ಣದ ತೆಳ್ಳವು





" ಈ ಸಕ್ಕರೆ ಚೀಲಕ್ಕೆ ಈಗಲೇ ಇರುವೆ ಹತ್ತಲು ಶುರು..." ಚೆನ್ನಪ್ಪ ಚೀಲದ ಬಾಯ್ಕಟ್ಟಿ ಒಳಗಿಟ್ಟ. ಅಂದಾಜು ಹತ್ತು ಕಿಲೋ ಇದ್ದೀತು, ದೊಡ್ಡ ಸ್ಟೀಲ್ ಡ್ರಮ್ ಒಳಗೆ ಹೋಯ್ತು ಸಕ್ಕರೆ, ಹೇಗೂ ಮುಂದಿನ ಸಂಕ್ರಾಂತಿಯ ದುರ್ಗಾಪೂಜೆಗೆ ಬೇಕಾಗುತ್ತೆ, ನಾಗರಪಂಚಮಿಯೂ ಬರಲಿದೆ, ತಂಬಿಲಸೇವೆಗೂ ಬೇಕಾದೀತು.

" ಇಲ್ನೋಡು, ಹಸಿಮೆಣಸು ಶುಂಠಿ... ಛೇ, ಕೊತ್ತಂಬರಿ ಸೊಪ್ಪು ಈಗಲೇ ಹಾಳಾಗಲಿಕ್ಕೆ ಹತ್ತಿದೆ, " ಅನ್ನುತ್ತ ಗೌರತ್ತೆ, ಅಡುಗೆಶಾಲೆಯ ತಪಾಸಣೆ ಮಾಡ ಹೊರಟರು.

" ಹಾಳಾದ್ದು ಎಲ್ಲಿ ಹೇಗೆ ಇಟ್ರೂ ಕೊಳೆಯುತ್ತೆ, ಕೇವಲ ಕುಡಿಯುವ ಮಜ್ಜಿಗೆ ನೀರಿಗೆ ಮಾತ್ರ ಕೊತ್ತಂಬರಿ ಸೊಪ್ಪು ಹಾಕಿದ್ದು ಅಡುಗೆಯ ಗಣಪಣ್ಣ.. "

" ಟೊಮೆಟೋ ಸಾರಿಗೂ ಹಾಕಿದ್ಹಾಂಗಿತ್ತು.. ಮಜ್ಜಿಗೆ ನೀರು ಘಮಘಮಾ ಅಂತಿತ್ತು. ಈಗ ಇರೂದನ್ನು ಚಟ್ಣಿ ತಂಬುಳಿ ಮಾಡಬಹುದಲ್ಲ.. " ಗೌರತ್ತೆಯ ಪ್ಲಾನು.

" ಆಯ್ತು, ತಂಬುಳಿ ಮಾಡುವಾ, ನಾಳೆ ತನಕ ಇದು ಫ್ರೆಶ್ ಆಗಿ ಇರಬೇಕಲ್ಲ, ಏನು ಮಾಡೂದು? "

" ನೀರಿನಲ್ಲಿ ಬೇರು ಮಾತ್ರ ತಾಕುವಂತೆ ಇಡು, ನಾಳೆ ಎಲೆಯೆಲ್ಲ ಅರಳಿ ನಿಲ್ತಾವೆ.."
ಕೊತ್ತಂಬರಿ ಸೊಪ್ಪನ್ನು ನೀರ ಪಸೆಯಲ್ಲಿ ಒಂದು ಲೋಟದೊಳಗೆ ಇರಿಸಲಾಯಿತು.

ತಂಬ್ಳಿ, ಚಟ್ಣಿ ಬೇಡ, ನಾಳೆಯ ದೋಸೆಗೆ ಬಣ್ಣವನ್ನೂ ಪರಿಮಳವನ್ನೂ ತರುವಂತಹ ಐಡಿಯಾ ಹೊಳೆಯಿತು. ಈ ಸೂಪರ್ ಐಡಿಯಾ ತಲೆಯೊಳಗೆ ಮೊಳಗಿದ್ದೇ ತಡ, ಒಂದು ಲೋಟ ಬೆಳ್ತಿಗೆ ಅಕ್ಕಿ ನೀರಿನಲ್ಲಿ ಹಾಕಿರಿಸಲಾಯಿತು.

" ಕೇವಲ ಒಂದು ಲೋಟ ಅಕ್ಕಿ ಸಾಕೇ.. "

ಸಾಲದು, ಒಂದು ಲೋಟ ಅಕ್ಕಿ ಹುಡಿ ಸೇರಿಸೋಣ. ಪ್ಯಾಕೆಟುಗಳಲ್ಲಿ ಬರುವ ಅಕ್ಕಿ ಹುಡಿ ( ಅಕ್ಕಿಹಿಟ್ಟು ) ನುಣುಪಾಗಿರುತ್ತೆ, ಮಿಕ್ಸೀಯಲ್ಲಿ ಅರೆದದ್ದು ನುಣುಪು ಎಂದು ಆಗುವುದೇ ಇಲ್ಲ, ದೋಸೆ ಹಿಟ್ಟು ನುಣುಪಾದಷ್ಟೂ ಒಳ್ಳೆಯದು, ಅವಶ್ಯವೆಂದು ತೋರಿದಾಗ, ಅಕ್ಕಿಹಿಟ್ಟು ತಂದದ್ದು ಇದ್ದಾಗ ಹೀಗೂ ದೋಸೆ ಮಾಡುವ ರೂಢಿ ಆಗಿ ಬಿಟ್ಟಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಅಡುಗೆ ವ್ಯವಸ್ಥೆಯೂ ಇರುವುದರಿಂದ ಪಾಯಸದೂಟಕ್ಕಾಗಿ ಅಕ್ಕಿ ಹುಡಿ ಬೇಕಾಗುವುದೂ, ಅದರಲ್ಲಿ ಅಲ್ಪಾಂಶ ಮಾತ್ರ ಭೂರಿ ಭೋಜನದಲ್ಲಿ ಬಳಸಲ್ಪಟ್ಟು ಉಳಿದದ್ದು ನನ್ನ ಅಡುಗೆ ಉಗ್ರಾಣದೊಳಗೆ ಶೇಖರಣೆಯಾಗುತ್ತ ಇರುತ್ತವೆ. ಇಂತಹ ವಿವಿಧ ಹುಡಿಗಳನ್ನು ಏನೋ ಒಂದು ಅಡುಗೆ ಮಾಡಿ ಮುಗಿಸುವುದೂ ನಮ್ಮ ಕರ್ತವ್ಯ ಅಲ್ವೇ..

ಅಕ್ಕಿಯನ್ನು ತೊಳೆದು ಇರಿಸುವುದು.
ಒಂದು ಕಟ್ಟು ಕೊತ್ತಂಬರಿ ಸೊಪ್ಪನ್ನು ಸ್ವಚ್ಛಗೊಳಿಸಿ, ಹೆಚ್ಚಿಟ್ಟುಕೊಳ್ಳುವುದು.
ಒಂದು ಚಿಕ್ಕ ಶಂಠಿ, ಸಿಪ್ಪೆ ಹೆರೆದು ಇಡುವುದು
2 ಹಸಿಮೆಣಸು, ತೊಟ್ಟು ಮುರಿದು ಇಡುವುದು.

ಅಕ್ಕಿಯನ್ನು ಅರೆಯುವಾಗ ರುಚಿಗೆ ಉಪ್ಪು ಸಹಿತವಾಗಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿಗಳನ್ನು ಕೂಡಿಕೊಂಡು ಅರೆಯಿರಿ.

ಒಂದು ಲೋಟ ಅಕ್ಕಿ ಹುಡಿಗೆ ನೀರೆರೆದು ಗಂಟುಗಳಾಗದಂತೆ ಕಲಸಿ ಅರೆದಿಟ್ಟ ಹಿಟ್ಟಿಗೆ ಕೂಡಿಸಿ, ತೆಳ್ಳವು ಎರೆಯಲು ಬರುವಂತೆ ನೀರು ಕೂಡಿಸಿ.



ದೋಸೆ ಎರೆಯುವ ತವಾ ಅಥವಾ ಕಾವಲಿಗೆ ಅಡುಗೆಯ ಎಣ್ಣೆ ಯಾ ತುಪ್ಪ ಸವರಿ ಒಲೆಯ ಮೇಲಿರಿಸುವುದು.
ಹಿಟ್ಟನ್ನು ಸೌಟಿನಲ್ಲಿ ಕದಡುತ್ತ ಬಿಸಿಯೇರಿದ ನಂತರ ವೃತ್ತಾಕಾರದಲ್ಲಿ ಹಾರಿಸಿ ಎರೆಯುವುದು.
ಹಿಡಿಕೆ ಇರುವ ಕಾವಲಿ ಅತ್ಯುತ್ತಮ, ಎರೆದು ಅತ್ತಿತ್ತ ಆಡಿಸಿದರೂ ಸಾಕು, ಹಿಟ್ಟು ತಾನಾಗಿ ಹರಡಿಕೊಳ್ಳುತ್ತೆ.
ಮುಚ್ಚಿ ಬೇಯಿಸಿ, ಒಂದು ಬದಿ ಬೆಂದರೆ ಸಾಕು, ಸಟ್ಟುಗದಲ್ಲಿ ಎಬ್ಬಿಸಿ ತಟ್ಟೆಗೆ ಹಾಕಿ, ಮಡಚಿ ಇಡುವುದು, ಇಲ್ಲಾಂದ್ರೆ ದೋಸೆಗಳು ಒಂದಕ್ಕೊಂದು ಅಂಟಿಕೊಳ್ಳುತ್ತೆ.
ಹಿಡಿಕೆ ಇರುವ ತವಾ ಆಗಿದ್ರೆ ಸಟ್ಟುಗದ ಅಗತ್ಯವೂ ಇಲ್ಲ, ಕಾವಲಿಯಿಂದಲೇ ತಟ್ಟೆಗೆ ಕವುಚಿ ಹಾಕಿದ್ರಾಯ್ತು.

ತಾಜಾ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ವಿಶಿಷ್ಠವಾದ ಪರಿಮಳದಿಂದ ಬಾಯಿರುಚಿಯನ್ನೂ ಹೆಚ್ಚಿಸುತ್ತದೆ. ಉಸಿರಿನ ದುರ್ವಾಸನೆಯೂ ದೂರ, ಬಾಯಿಹುಣ್ಣು ಆಗಿದ್ದಲ್ಲಿ ನೋವು ನಿವಾರಕವೂ ಹೌದು.

ನಿನ್ನೆ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಚಂಡಿಕಾಹೋಮ ನಡೆದಿತ್ತು, ರಾತ್ರಿ ಎಂದಿನಂತೆ ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನಪೂಜೆ ಇತ್ಯಾದಿ ಕಾರ್ಯಕಲಾಪಗಳ ನಂತರ ಅನ್ನಸಂತರ್ಪಣೆಯೂ ಇದ್ದಿತು.
ನಂತರ ಉಳಿಕೆಯಾದ ಸಾಮಗ್ರಿಗಳಲ್ಲಿ ದೊರೆತ ಕೊತ್ತಂಬರಿ
ಸೊಪ್ಪಿನಿಂದ ಬಣ್ಣದ ತೆಳ್ಳವು ಬಂದಿದೆ, ಇದೇನೂ ಮೊದಲ ಪ್ರಯೋಗವಲ್ಲ, ಅತಿಯಾಗಿ ಕೊತ್ತಂಬರಿ ಸೊಪ್ಪು ತಂದರೆ ನನ್ನದು ದೋಸೆಯ ಅಡುಗೆ.

ಅಂದ ಹಾಗೆ ಕೊತ್ತಂಬರಿ ಸೊಪ್ಪು ಮನೆಯಲ್ಲೇ ಸಾಕಿ ಸಲಹಬಹುದು. ನಾನಂತೂ ಕುಂಡದಲ್ಲಿ ಬೆಳೆಸಿದ್ದೇನೆ. ಅಂಗಡಿಯಿಂದ ತಂದ ಕೊತ್ತಂಬರಿ ಬೀಜಗಳನ್ನು ತುಸು ಜಜ್ಜಿ ಎರಡಾಗಿಸಿ,
ಕಾಂಪೋಸ್ಟ್ ಮಣ್ಣಿನಲ್ಲಿ ಬೆರೆಸಿ,
ಮಣ್ಣಿನಲ್ಲಿ ತೇವಾಂಶ ಇರಬೇಕು
ಹತ್ತು ಹನ್ನೆರಡು ದಿನಗಳಲ್ಲಿ ಮೊಳಕೆ,
ಇರುವೆಗಳ ಕಾಟ ಇರದಂತೆ ಎಚ್ಚರವಹಿಸಿ.
ಮೂವತ್ತು ದಿನಗಳಲ್ಲಿ ತಾಜಾ ಸೊಪ್ಪು ಲಭ್ಯ.
ಅರುವತ್ತು ದಿನಗಳಾದಾಗ ಹುಲುಸು ಬೆಳೆ.
ಬೇರೆ ಬೇರೆ ಪಾತಿ ಯಾ ಕುಂಡಗಳನ್ನು ಹೊಂದಿಸಿ ಇಟ್ಟುಕೊಂಡಲ್ಲಿ ಬೆಳವಣಿಗೆಯ ಲೆಕ್ಕಾಚಾರ ನೋಡಿಕೊಂಡು ವರ್ಷವಿಡೀ ಕೊತ್ತಂಬರಿ ಸೊಪ್ಪು ಕೊಯ್ಯುತ್ತಿರಬಹುದು. 

0 comments:

Post a Comment