Pages

Ads 468x60px

Monday 9 March 2020

ಖರ್ಜೂರದ ಬನ್ಸ್




ಹಿರಣ್ಯದ ದೇಗುಲದ ಕಾಮಗಾರಿ ಕೆಲಸದ ಆರಂಭಕ್ಕೆ ಮುಂಚಿತವಾಗಿ ಕಾರ್ಯನಿಮಿತ್ತ ಕೊಲ್ಲೂರಿಗೆ ಹೋಗಬೇಕಾಗಿ ಬಂದಿತ್ತು.

" ಐದು ಗಂಟೆಗೇ ಹೊರಡಬೇಕು, ತಿಂಡಿತೀರ್ಥ ದಾರಿಮಧ್ಯೆ ಹೋಟಲ್ ಸಿಕ್ಕಾಗ, ತಿಳಿಯಿತಲ್ಲ. "

ಪ್ರಶ್ನಿಸುವಂತಿಲ್ಲ, ದೇವರ ಕೆಲಸ ಅಲ್ವೇ, ಕೊಲ್ಲೂರಿಗೆ ಹೋಗಿ ಬಂದು ಅಭ್ಯಾಸ ಆಗ್ಬಿಟ್ಟಿದೆ ಅನ್ನಿ.

ಹೋಗುತ್ತಾ ವಿಟ್ಲದಲ್ಲಿ ಬಾಲಕೃಷ್ಣ ಶೆಟ್ಟಿ ಸೇರಿಕೊಂಡ. ಸಾರಥಿ ಸೀಟು ಅವನದಾಯಿತು. ಮಂಗಳೂರು ಸಮೀಪ ಸತ್ಯನಾರಾಯಣ ಭಟ್ರೂ ಹತ್ತಿದಾಗ ಕಾರು ಹೌಸ್ ಫುಲ್ ಆಯ್ತು.

ಮುಂಜಾನೆಯ ತಿಂಡಿಗಾಗಿ ಪಡುಬಿದ್ರಿಯಲ್ಲಿ ಕಾರು ನಿಂತಿತು, ಆಗಲೇ ಗಂಟೆ ಹತ್ತು ದಾಟಿತ್ತು.

ಹೋಟಲ್ ಒಳಗೆ ಟೇಬಲ್ ಮುಂದೆ ಆಸೀನರಾದಾಗ, " ನಂಗೆ ಮನೇಲಿ ದಿನಾ ಮಾಡುವ ದೋಸೆ ಇಡ್ಲಿ ಬೇಡ..."

ನನಗಾಗಿ ಎರಡು ಪ್ಲೇಟು ಬನ್ಸ್ ಹಾಗೂ ಗರಿಗರಿ ಉದ್ದಿನ ವಡೆ ಬಂದಿತು.

ಮಕ್ಕಳೆಲ್ಲ ಬೆಂಗಳೂರು ಸೇರಿದ ನಂತರ ಎಣ್ಣೆಯಲ್ಲಿ ಕರಿದ ತಿಂಡಿ ಮನೆಯಲ್ಲಿ ಮಾಡುವ ರೂಢಿ ತಪ್ಪಿ ಹೋಗಿದೆ. ಬನ್ಸ್ ತಿನ್ನುವಾಗ ಮನೆಯ ಪುಟ್ಟ ನಾಯಿಮರಿಯ ನೆನಪಾಗಿ, ನಾಯಿಗಾಗಿ ಬನ್ಸ್ ಮಾಡಬೇಕೆಂಬ ವಾಂಛಲ್ಯ ಹುಟ್ಟಿತು. ಅನ್ನ ತಿನ್ನಲೊಲ್ಲದ ನಾಯಿಗಾಗಿ ಮೂರು ಹೊತ್ತೂ ದೋಸೆ ತೆಳ್ಳವು ಎರೆಯಬೇಕಾದ ಪಾಡು ನನ್ನದು. ಒಂದು ಡಬ್ಬ ತುಂಬ ಬನ್ಸ್ ಮಾಡಿಟ್ಟುಕೊಳ್ಳೋಣ.

ಹೋಟಲ್ ಬನ್ಸ್ ಚೆನ್ನಾಗಿತ್ತು, ಬಾಳೆಹಣ್ಣಿನ ಪರಿಮಳ ಬರುತ್ತಲೂ ಇತ್ತು.





ಬಿಡುವು ದೊರೆತಾಗ ಬನ್ಸ್ ನೆನಪಾಯ್ತು, ಆದ್ರೆ ಬಾಳೆಹಣ್ಣು ಇರಲಿಲ್ಲ. ಖರ್ಜೂರ ಇದೆ, ಅದನ್ನೇ ಪ್ರಯೋಗ ಮಾಡೋಣ. ಹೊಸರುಚಿ ಸಿಕ್ಕಿದ ಹಾಗೂ ಆಯ್ತು.

ಖರ್ಜೂರದ ಬನ್ಸ್ ಮಾಡಿದ್ದು ಹೇಗೆ?

15 ಖರ್ಜೂರಗಳ ಬೀಜ ಬಿಡಿಸಿ, ಮುಳುಗುವಷ್ಟು ಕುದಿ ನೀರು ಎರೆದು ಮುಚ್ಚಿ ಇರಿಸುವುದು.
ಅರ್ಧ ಗಂಟಿಯ ನಂತರ ಕೈಯಲ್ಲೇ ಹಿಸುಕಿ ಮೆತ್ತಗಾಗಿಸಿ.
2 - 3 ಚಮಚದಷ್ಟು ಹುಡಿ ಮಾಡಿದ ಬೆಲ್ಲ,
ರುಚಿಗೆ ಸೂಕ್ತವಾಗುವಷ್ಟು ಉಪ್ಪು,
ಸುವಾಸನೆಗೆ ಜೀರಿಗೆ,
ಅಲಂಕರಣಕ್ಕಾಗಿ ಎಳ್ಳು,
ಅರ್ಧ ಲೋಟ ಮೊಸರು
ಎಲ್ಲವೂ ಖರ್ಜೂರದೊಂದಿಗೆ ಸೇರಲಿ.

ಈಗ 3 ಲೋಟ ಗೋಧಿಹುಡಿ ಅಳೆಯಿರಿ.
1 ಲೋಟ ತಣ್ಣೀರು ಪಕ್ಕದಲ್ಲಿರಲಿ.

ಖರ್ಜೂರದ ಮಿಶ್ರಣವನ್ನು ಗೋಧಿಹುಡಿಗೆ ಬೆರೆಸಿಕೊಳ್ಳಿ.
ಕಲಸಿ, ನೀರು ತುಸು ತುಸುವೇ ಹಾಕುತ್ತ ಕಲಸಿ ಚಪಾತಿ ಹಿಟ್ಟಿನ ಹದಕ್ಕೆ ತನ್ನಿ. ಚೆನ್ನಾಗಿ ನಾದಿ, ಮುಚ್ಚಿ ಇರಿಸಿ.

ಸಂಜೆಯ ತಿನಿಸು ಆಗಬೇಕಿದ್ದರೆ ಮುಂಜಾನೆ ಕಲಸಿ ಇಟ್ಟರಾಯಿತು. ಮುಂಜಾನೆಗೊಂದು ತಿಂಡಿ ನಿಮ್ಮದಾಗಬೇಕಿದ್ದರೆ ರಾತ್ರಿ ಕಲಸಿ ಇಟ್ಟರೆ ಸರಿ ಹೋದೀತು.
ನಾನು ಸೋಡಾ ಹುಡಿ ಯಾ ಬೇಕಿಗ್ ಪೌಡರ್ ಬಳಸಿಲ್ಲ.

ದೊಡ್ಡ ಲಿಂಬೆಗಾತ್ರದ ಉಂಡೆ ಮಾಡಿ ಇಟ್ಕೊಳ್ಳಿ,
ಗೋಧಿಹುಡಿಯಲ್ಲಿ ಹೊರಳಿಸಿ,
ಲಟ್ಟಣಿಗೆಯಲ್ಲಿ ಮೆತ್ತಗೆ ಆಡಿಸಿ,
ತೆಳ್ಳಗೆ ಮಾಡೇಕಿಲ್ಲ,
ಅಂಗೈಯಲ್ಲಿ ತಟ್ಟಿದರೂ ಸಾಕು.


ಈ ಹೊತ್ತಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿಯಾಗುತ್ತಲಿರಬೇಕು.
ಒಂದೊಂದೇ ಬನ್ಸ್ ಕರಿದು ತೆಗೆಯಿರಿ.

ಸೂಕ್ತವಾಗುವಂತಹ ಚಟ್ಣಯಲ್ಲಿ ಹೊರಳಿಸಿ ತಿನ್ನಿ.
ಮಕ್ಕಳಿಗೆ ಪ್ರಿಯವಾದ ತಿಂಡಿ ಇದು, ತುಸು ಜಾಸ್ತಿ ಮಾಡಿದ್ರೂ ತೊಂದರೆಯಿಲ್ಲ. ನಮ್ಮ ನಾಯಿಮರಿಯಂತೂ ಕುಣಿಕುಣಿದು ತಿಂದಿತು.

ಇನ್ನೂ ನಾಲ್ಕು ಉಂಡೆಗಳ ಹಿಟ್ಟು ಇದೆ, ತೆಳ್ಳಗೆ ಲಟ್ಟಿಸಿ ಚಪಾತಿಯಂತೆ ಬೇಯಿಸೋಣ. ಎಣ್ಣೆಯಲ್ಲಿ ಕರಿದ ತಿಂಡಿ ಬೇಕಿಲ್ಲದವರಿಗೆ ಖರ್ಜೂರದ ಪರೋಟಾ ಎಂದು ತಿನ್ನಲಡ್ಡಿಯಿಲ್ಲ.




0 comments:

Post a Comment