Pages

Ads 468x60px

Sunday 22 March 2020

ನೆರುಗಳ ಸೊಪ್ಪಿನ ರಸಂ







ಈಗ ಕೊರೋನಾ ಹಾವಳಿಯ ಗದ್ದಲ. ನಾವು ಅಡುಗೆ ಮನೆಯಿಂದಾನೆ ಶರೀರದ ರೋಗನಿರೋಧಕ ಶಕ್ತಿ ವರ್ಧನೆ ಹೇಗಪ್ಪಾ ಎಂದು ಚಿಂತಿಸುವಂತಾಗಿದೆ.

" ಮಾರುಕಟ್ಟೆಗೆ ಹೋಗಿ ತರಕಾರಿ ತನ್ರೀ " ಎಂದು ಹೇಳುವಂತಿಲ್ಲ.

" ಇರುವುದರಲ್ಲೇ ನಿಭಾಯಿಸು.. "

 ಹಿತ್ತಲ ಗಿಡಬಳ್ಳಿಗಳ ಅವಲೋಕನೆ... ಯಾವುದಾದೀತು?

" ಏನೂ ಇಲ್ವೇ.. ನೆರುಗಳ ಸೊಪ್ಪು ತಾ... ಅದೇ ಸಾಕು, ಆರೋಗ್ಯಕ್ಕೂ ಒಳ್ಳೆಯದು. " ಗೌರತ್ತೆ ಅಂದರು.

" ನೀವೇ ತನ್ನಿ, ನಾನು ತೆಂಗಿನಕಾಯಿ ಸುಲಿದು ಒಡೆದು ತುರಿದು ಇಡ್ತೇನೆ. "

ಗೌರತ್ತೆ ನೆರುಗಳದ ಎರಡು ಕೊಂಬೆ ಮುರಿದು ತಂದರು. " ಒಳ್ಳೆಯ ಸೊಪ್ಪು ನಾನೇ ಆಯ್ದು ಕೊಡ್ತೇನೆ.." ಎಂದು ಕನ್ನಡಕ ಮೂಗಿಗೇರಿಸಿ " ಏನು ಪರೀಮಳ.. ದಶಮುಲಾರಿಷ್ಠಕ್ಕೂ ಇದರ ಬೇರು ಹಾಕಲಿಕ್ಕುಂಟು.." ಬಿಡಿ ಎಲೆಗಳನ್ನು ಒಂದು ಲೋಟದಲ್ಲಿ ತುಂಬಿಸಿ ಇಟ್ಟರು ಗೌರತ್ತೆ.

ತನ್ನದೇ ತಾಜಾ ಪರಿಮಳ ಹೊಂದಿರುವ ನೆರುಗಳ ಸೊಪ್ಪಿನ ಅಡುಗೆಗೆ ಇನ್ಯಾವುದೇ ಮಸಾಲಾ ಸಾಮಗ್ರಿಗಳ ಅವಶ್ಯಕತೆಯಿಲ್ಲ.

ಹೇಗೆ ಮಾಡಿದ್ದು?

ಅರ್ಧ ಕಡಿ ತೆಂಗಿನತುರಿ
ನೆನೆಸಿಟ್ಟ ಒಣಮೆಣಸು
ಹಸಿ ಅರಸಿಣ ಅಥವಾ ಅರಸಿಣ ಹುಡಿ
ಹುಣಸೆಯ ಹುಳಿ
ರುಚಿಗೆ ತಕ್ಕಂತೆ ಉಪ್ಪು
ನುಣ್ಣಗೆ ಅರೆಯಿರಿ.

ಒಂದು ಲೋಟ ನೀರು ಕುದಿಸಿ.
ನೀರು ಕುದಿಯುವಾಗ ನೆರುಗಳ ಸೊಪ್ಪು ಹಾಕಿ.
ಅರೆದಿಟ್ಟ ತೆಂಗಿನ ಅರಪ್ಪು ಬೀಳಲಿ.
ಸಾರಿನಂತೆ ತೆಳುವಾಗಲು ನೀರು ಎರೆಯಿರಿ.
ರುಚಿಕರವಾಗಲು ಬೆಲ್ಲವನ್ನೂ ಹೊಂದಿಕೆಯಾಗುವಂತೆ ಹಾಕಬಹುದಾಗಿದೆ.
ಚಿನ್ನಾಗಿ ಕುದಿಯಲಿ, ನೆರುಗಳ ಸೊಪ್ಪಿನ ಸಾರ ನಮ್ಮ ರಸಂ ಯಾ ಸಾರು ಎನ್ನುವಂತಿರಬೇಕು.
ಒಂದು ಪುಟ್ಟ ಒಗ್ಗರಣೆ ಇರಲಿ.

ಸೊಪ್ಪಿನೂಟದೊಂದಿಗೆ ನಮ್ಮ ಈ ಭಾನುವಾರದೂಟ ಸಂಪನ್ನವಾಯಿತು.

" ತುಪ್ಪದಲ್ಲಿ ಉಂಡಷ್ಟೇ ಶಕ್ತಿ ಕೊಡುತ್ತಂತೆ ಈ ನೆರುಗಳ.." ಗೌರತ್ತೆಯ ರಿಮಾರ್ಕು.

ಹಣ್ಣು ಸೌತೆ ಇದ್ದರೆ ಹಾಕಬಹುದಾಗಿತ್ತು. ಆಗ ಇದು ಸೌತೆಯ ಹುಳಿಮೆಣಸು ಎಂದೆನ್ನಿಸಿಕೊಂಡೀತು.

ಏನೇ ಆಗಲಿ ಕೊರೋನಾ ಗದ್ದಲದಿಂದಾಗಿ ನಾವು ಪ್ರಕೃತಿ ಸಹಜ ಜೀವನದತ್ತ ಮರಳೋಣ.
ಮನೆಯೊಳಗಿನ ಗಂಜಿಯೂಟವೇ ಹಿತವೆಂದು ತಿಳಿಯುವ ಕಾಲ ಬಂದಿದೆ.

ಪುಟ್ಟ ಮರದಂತೆ ಬೆಳೆಯುವ ಈ ಸಸ್ಯ ಸಂಕುಲದ ತವರು ನಮ್ಮ ಭಾರತ, ಆಯುರ್ವೇದ ಔಷಧಿ ಸಸ್ಯವಾದ ಇದು ಅಗ್ನಿಮಂಥ ಎಂಬ ಹೆಸರನ್ನು ಹೊಂದಿದೆ. ಬಾಟನಿ ತಜ್ಞರು ಪ್ರಮ್ನಾ ಇಂಟಗ್ರಿಫೋಲಿಯಾ - premnaintegrifolia ಎಂದಿದ್ದಾರೆ.

ಬೇರು ಕಸಿಯಿಂದ ಹೊಸ ಗಿಡ ಉತ್ಪಾದಿಸಬಹುದು. ನರ್ಸರಿಗಳಲ್ಲಿ ಸಿಗುವ ಸಾಧ್ಯತೆಯಿದೆ. ಕುಂಡಗಳಲ್ಲಿ ನೆಟ್ಟು ಸಲಹಬಹುದು.

" ತುಪ್ಪದಲ್ಲಿ ಹುರಿದು,  ತೆಂಗಿನ ತುರಿಯೊಂದಿಗೆ ಅರೆದು,ಮಜ್ಜಿಗೆ ಎರೆದು ತಂಬುಳಿ ಮಾಡಲಿಕ್ಕೂ ಆಗುತ್ತದೆ. " ಗೌರತ್ತೆ ಅಂದರು.

"ಇನ್ನೇನೇನು ಮಾಡಬಹುದು? ಹೇಳಿರಲ್ಲ.. "

" ಬೇರೆಂತದು, ಕೊತ್ತಂಬರಿ ಸೊಪ್ಪಿನ ಹಾಗೆ ಎಲ್ಲ ಅಡುಗೆಗೂ ಹಾಕಿಕೊಳ್ಳಿ.."




0 comments:

Post a Comment