" ಅಮ್ಮ ಮಾಡ್ತಿದ್ದ ಬಟಾಟೆ ಸಾಂಗು ಮಾಡಬಹುದಲ್ಲ." ಎಂದಳು ತಂಗಿ ಗಾಯತ್ರಿ ಕುಂಬ್ಳೆಯಿಂದ.
" ಹೌದಲ್ಲವೇ.. "
ಅಂತೂ ನನ್ನ ಬಟಾಟೆಗೊಂದು ಗತಿ ಸಿಕ್ಕಂತಾಯಿತು.
ಕಾಸರಗೋಡಿನಲ್ಲಿ ನಮ್ಮ ನೆರೆಕರೆಯ ಬಳಗವೆಲ್ಲ ಕೊಂಕಣಿಗರದು. ಅವರು ಮಾಡುತ್ತಿದ್ದ ತಿಂಡಿತಿನಿಸು, ಸಾಂಬಾರು ಪದಾರ್ಥಗಳೆಲ್ಲ ಅಮ್ಮನಿಗೂ ತಿಳಿದಿತ್ತು. ವಿಶೇಷವಾದ ಕೆಸುವಿನ ಪತ್ರಡೆ, ಉದ್ದಿನ ಹಪ್ಪಳ, ಹಲಸಿನ ಹಣ್ಣಿನ ಹಲ್ವಾ, ಬೀಂಬುಳಿ ಉಪ್ಪಿನಕಾಯಿಗಳು ನಮ್ಮ ಅಡುಗೆಮನೆಗೂ ಬರುತ್ತಿದ್ದವು. ಆ ಕಾಲದಲ್ಲಿ ಯಾವುದೇ ಇಂಟರ್ನೆಟ್ ಯಾ ಟೀವಿ ಮಾಧ್ಯಮಗಳ ಹಂಗಿಲ್ಲದೆ ಮಹಿಳೆಯರು ಪರಸ್ಪರ ತಿಳಿದು, ಅರಿತು ನಮ್ಮ ಸಾಂಪ್ರದಾಯಿಕ ಅಡುಗೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದ ರೀತಿಯೇ ಅನನ್ಯ.
ಅಂತಹ ಸಾಂಪ್ರದಾಯಿಕ ವ್ಯಂಜನಗಳಲ್ಲಿ ಒಂದು ಬಟಾಟೆ ಸಾಂಗು. ಉತ್ತರದಿಂದ ದಕ್ಷಿಣಕ್ಕೆ ಆಗಮಿಸುವ ತಿಂಡಿ ತಿನಿಸುಗಳು ನಮ್ಮ ಕರಾವಳಿಯ ಪ್ರಸಿದ್ಧ ತೆಂಗಿನಕಾಯಿಯೆಂಬ ಅಡುಗೆ ಮಸಾಲೆಯನ್ನೂ ಹದವರಿತು ಬೆರೆತುಕೊಂಡಿವೆ. ತೆಂಗಿನಕಾಯಿ ಹಾಕದೇ ತಯಾರಿಸುವ ಬಟಾಟೆಯ ಈ ಪದಾರ್ಥವು ' ವಾಗೂ ' ಎಂದಿನಿಸಿದೆ. ಕಾಯಿತುರಿ ಹಾಕದೇ ಮಾಡುವಂತಹ ಪದಾರ್ಥಗಳಿಗೆ ನಮ್ಮ ಕಡೆ ಏನೂ ಬೆಲೆಯಿಲ್ಲ. " ಊಟದ ಹೊತ್ತಿಗೆ ಏನೋ ಒಂದು ಲಾಯ್ಲೋಟು ಪದಾರ್ಥ ಮಾಡಿ ಇಟ್ಟಿದಾಳೆ. " ಎಂಬ ಮಾತು ಕೇಳಬೇಕಾದೀತು.
ಇರಲಿ, ನಾವು ಬಟಾಟೆ ಸಾಂಗು ತಯಾರಿಯತ್ತ ಹೊರಳೋಣ.
ನಾಲ್ಕು ಬಟಾಟೆಗಳು ಇರಬೇಕು.
ಸಿಪ್ಪೆ ಹೆರೆದು ತೆಗೆಯಿರಿ. ಹಿಂದೆ ಅಮ್ಮನ ಅಡುಗೆಯ ಕಾಲದಲ್ಲಿ ಬಟ್ಟೆ ಒಗೆಯುವ ಕಲ್ಲಿನಲ್ಲಿ ತಿಕ್ಕಿ ಸಿಪ್ಪೆ ತೆಗೆಯತ್ತಿದ್ದದ್ದು ನೆನಪಾಯ್ತು. ಯಂತ್ರಗಳ ಯುಗದಲ್ಲಿ ಬಟ್ಟೆ ತೊಳೆಯುವ ಹಾಸುಗಲ್ಲು ಎಲ್ಲಿಂದ ಬರಬೇಕು?
ಒಮ್ಮೆ ಏನಾಯ್ತೂ ಅಂದರೆ ಹಿರಣ್ಯದ ದೇಗುಲದಲ್ಲಿ ಸಂಕ್ರಾಂತಿಯ ಭೋಜನದ ಅಡುಗೆಯ ಹೊಣೆ ಹೊತ್ತಿದ್ದ ಗಣಪಣ್ಣನಿಗೆ ಬಟಾಟೆಸಾಂಗು ಮಾಡುವ ವಿಧಾನ ತಿಳಿಸಿಕೊಟ್ಟೆ.
ತೊಗರಿ ಬೇಳೆ ಹಾಕುವುದಕ್ಕಿಲ್ಲ.
ಮಸಾಲೆ ಹುರಿಯುವುದಕ್ಕಿಲ್ಲ.
ಸುಲಭದ ಅಡುಗೆಯೆಂದು ಗಣಪಣ್ಣ ದೊಡ್ಡದಾಗಿ ಸಾಂಗು ಮಾಡಿಟ್ಟ.
ಮಾಡಿದ್ದೇನೋ ಆಯ್ತು, ಬಟಾಟೆಯ ಹೋಳುಗಳನ್ನು ಸಿಪ್ಪೆ ಸಹಿತ ಬೇಯಿಸಿಟ್ಟಿದ್ದು ಕಂಡು ನನ್ನ ವ್ಯಥೆ ಹೇಳ ತೀರದು.
" ಗಣಪಣ್ಣ, ಸಿಪ್ಪೆ ತೆಗೆಯಬೇಕಿತ್ತು.."
" ಅಕ್ಕ, ಸಿಪ್ಪೆ ಒಳ್ಳೆಯದು, ಎಲ್ಲರೂ ತಿನ್ನಲಿ.."
ಬಟಾಟೆಯನ್ನು ಬೇಯಿಸಿ ಸಿಪ್ಪೆ ತೆಗೆಯುವ ವಿಧಾನ ಇದಕ್ಕೆ ಸರಿ ಹೋಗದು. ಚೂರಿಯಿಂದ ಸಿಪ್ಪೆ ಹೆರೆದು ತೆಗೆಯಿರಿ. ನಂತರ ಸಮಾನ ಗಾತ್ರದ ಹೋಳುಗಳನ್ನಾಗಿಸಿ.
ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನೀರನ್ನೂ ಎರೆದು ಬೇಯಿಸಿ. ಕುಕ್ಕರಿನಲ್ಲಿ ಬೇಯಿಸಿದರೆ ಒಂದೇ ಸೀಟಿ ಸಾಕು.
ಖಾರ ಪದಾರ್ಥವಾಗಿರುವ ಬಟಾಟೆ ಸಾಂಗೂ ಮಸಾಲೆ ಹೇಗೆ?
ಅರ್ಧ ತೆಂಗಿನಕಾಯಿ ತುರಿ
ಒಣಮೆಣಸಿನಕಾಯಿಗಳು, ನಮ್ಮ ಖಾರದ ಅಂದಾಜಿಗೆ ತಕ್ಕಷ್ಟು. ನಾನು ನಾಲ್ಕೇ ನಾಲ್ಕು ಮೆಣಸು ಹಾಕಿದ್ದು.
ಚಿಟಿಕೆ ಅರಸಿಣ
ಹುಣಸೆಯ ಹುಳಿ, ಎಷ್ಟೂ?
ಇದು ಕೂಡಾ ಮೆಣಸಿನ ಪ್ರಮಾಣವನ್ನು ಅವಲಂಬಿಸಿದೆ. ನೆಲ್ಲಿಕಾಯಿ ಗಾತ್ರದಿಂದ ಲಿಂಬೆಗಾತ್ರದ ತನಕ ಹೆಚ್ಚೂಕಮ್ಮಿ ಮಾಡಬಹುದು.
ಎಲ್ಲವನ್ನೂ ತೆಂಗಿನತುರಿಯೊಂದಿಗೆ ಅರೆಯಿರಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ತೆಂಗಿನೆಣ್ಣೆಯನ್ನೇ ಬಳಸಿ.
ಸಾಸಿನೆ ಸಿಡಿದ ನಂತರ ಕರಿಬೇವು ಹಾಕಿರಿ.
ಒಂದು ನೀರುಳ್ಳಿ ಚಿಕ್ಕದಾಗಿ ಹೆಚ್ಚಿ ಹಾಕಿ,
ಬೆಳ್ಳುಳ್ಳಿಯೂ ಇದ್ದರಾದೀತು.
ಘಂ.. ಎಂದು ಸುವಾಸನೆ ಹೊಮ್ಮಿದಾಗ ಬೇಯಿಸಿದ ಬಟಾಟೆ ಹೋಳುಗಳೂ, ತೆಂಗಿನಕಾಯಿ ಅರಪ್ಪೂ ಬೀಳಲಿ. ರಸಭರಿತವಾಗಲು ಸೂಕ್ತ ಪ್ರಮಾಣದಲ್ಲಿ ನೀರು ಎರೆಯತಕ್ಕದ್ದು.
ಕುದಿಯುವಾಗ ಇಂಗಿನ ನೀರು ಎರೆಯಿರಿ. ಇಂಗು ತುಸು ಜಾಸ್ತಿ ಹಾಕಿರಿ.
ರುಚಿಕಟ್ಚಾಗಿದೆಯೋ ಎಂದು ನೋಡಿಕೊಂಡು ಬೇಕಾದ ಅಳತೆಯಲ್ಲಿ ಉಪ್ಪು ಹಾಕಿ, ಬೆಲ್ಲ ಸುತರಾಂ ಹಾಕತಕ್ಕದ್ದಲ್ಲ.
ಇದೀಗ ನಿತ್ಯಕಟ್ಟಳೆಯ ಅಡುಗೆಯ ಕ್ರಮದಲ್ಲಿ ಬಟಾಟೆ ಸಾಂಗು ಸಿದ್ಧವಾಗಿದೆ. ಅನ್ನದೊಂದಿಗೆ ಮಾತ್ರವಲ್ಲ, ಚಪಾತಿ, ದೋಸೆ, ಇಡ್ಲಿಗೂ ಕೂಡಿ ತಿನ್ನಿರಿ.
ವಿಶೇಷವಾದ ಅಡುಗೆಯಲ್ಲಿ ನಾವು ನೀರುಳ್ಳಿ ಬೆಳ್ಳುಳ್ಳಿ ಬಳಸಲಿಕ್ಕಿಲ್ಲ. ಅಂತಹ ಭೋಜನಕೂಟದ ಸಾಂಗು ಕೇವಲ ಕರಿಬೇವಿನ ಒಗ್ಗರಣೆಯೂ, ಇಂಗಿನ ನೀರು ಎರೆಯುವಲ್ಲಿಗೆ ಸಾರ್ಥಕವಾಯ್ತು ಅನ್ನಿ. ಟೊಮ್ಯಾಟೋ ಹೋಳು ಮಾಡಿ ಹಾಕಬಹುದು, ಅತಿಯಾಗಿ ಬೇಯಿಸಬಾರದು ಅಷ್ಟೇ.
ಈ ಚಳಿಯ ಹವೆಯಲ್ಲಿ ಬಟಾಟೆ ಸಾಂಗು ಹಿತವಾದ ವ್ಯಂಜನ.
0 comments:
Post a Comment