Pages

Ads 468x60px

Featured Posts

.

Friday 3 May 2024

ಬೆಂಡೆಯ ಲೋಳೆ

 



ಈ ಕಡು ಬೇಸಿಗೆಯಲ್ಲಿ ಬೆಂಡೆ, ಅದೂ ಊರ ಬೆಂಡೆಕಾಯಿ ಬೆಳೆದವರ ಹೊಟ್ಟೆ ತಣ್ಣಗಿರಲಿ ಎಂಬ ಹಾರೈಕೆ ನಮ್ಮದು.  ಬೆಂಡೆಕಾಯಿ ಅಂಗಡಿಯಿಂದ ಬಂದಿತ್ತು.   ಮಗನೂ ಬಂದಿದ್ದ ವೋಟು ಹಾಕಲಿಕ್ಕೆ.  “ ಹೇಗೂ ಬಂದಿದ್ದೀಯ,  ನನಗೆ ತಲೆಗೆ ಮೀಯುವುದಿದೆ.  ಬನ್ಪಿನ ಸೊಪ್ಪು  ತಂದ್ಕೊಡು..”  ನಾನು ಬರುವಾಗ್ಲೇ ನೋಡ್ಕೊಂಡು ಬಂದಿದ್ದೇನೆ,  ಮರದ ಎಲೆಗಳೆಲ್ಲ ಕರಟಿ ಹೋಗಿವೆ,  ಉರಿಬಿಸಿಲಿಗೆ ಹಾಗಾಗಿದೆ,  ಮಳೆ ಬಂದ್ಮೇಲೆ ಸೊಪ್ಪು ಕೇಳು… “


ಯಾವುದಿದು ಬನ್ಪು? ಸೊಪ್ಪು ಯಾಕೆ ಅಂತೆಲ್ಲ ಕೇಳಿಯೇ ಕೇಳ್ತೀರಾ… ನನ್ನದೂ ಉತ್ತರ ತಯಾರಿದೆ.


ಬಾಲ್ಯದಿಂದಲೇ ತಲೆಗೆ ಮೀಯುವುದು ಅಂದರೆ ಸೀಗೇ ಹುಡಿ ಹಾಗೂ ಗೊಂಪು ತಲೆಗೆ ಮೆತ್ತಿ ಸ್ನಾನ ಮಾಡಿ ರೂಢಿ,   ಅದೂ ದಟ್ಟ ನೀಳ ಕೇಶರಾಶಿಯನ್ನು ತೊಳೆಯಲು ಅಮ್ಮ ಹಾಗೂ ಅಜ್ಜಿ ಬಹಳ ಮುತುವರ್ಜಿ ವಹಿಸುತ್ತಿದ್ದರು .  ನನ್ನ ತಲೆ ಸಾಬೂನು ಯಾ ಶಾಂಪೂ ದ್ರಾವಣವನ್ನು ಕಂಡಿದ್ದೇ ಇಲ್ಲ.  ಕಾಸರಗೋಡಿನ ನಮ್ಮ ಮನೆಯಲ್ಲಿ ಯಾವುದೇ ಗೊಂಪು ಸಸ್ಯ ಇರಲಿಲ್ಲ,  ಇದ್ದೀತು ದಾಸವಾಳ,  ಅದೆಲ್ಲ ನನ್ನ ತಲೆಗೂದಲಿಗೆ ಸಾಲದು.  ಹಾಗಾಗಿ ಹಳ್ಳಿಯ  ಮನೆಯ ತೋಟದಿಂದ ದಡಸಿನ ಮರದ ತೊಗಟೆಯನ್ನು ತರಿಸಿ,  ಒಣಗಿಸಿ ಇಟ್ಟುಕೊಳ್ಳುತ್ತಿದ್ದರು.  ದಡಸು ಎಂಬ ಈ ಸಸ್ಯವನ್ನು ತೋಟದ ಬದಿಯಲ್ಲಿ ಬೇಲಿಗಾಗಿ ನೆಡಲಾಗುತ್ತಿತ್ತು. 

ಒಣಗಿದ ತೊಗಟೆಯನ್ನು ಕುದಿಯುವ ನೀರೆರೆದು ಗುಂಡುಕಲ್ಲಿನಿಂದ ಜಜ್ಜಿದರೆ ಸೈ,  ಧಾರಾಳ ಗೊಂಪು…

ಮನೆಮಂದಿಯೆಲ್ಲ ಆ ದಿನ ತಲೆಗೆ ಮಿಂದೇ ಸಿದ್ಧ.


ಮದುವೆಯಾದ ನಂತರ ನನ್ನ ಗೊಂಪು ಸ್ನಾನ ಅತ್ತೆಯವರಿಗೆ ತಿಳಿಯಿತು.  “ ಇದಾ ನೋಡು, ನೀ ಚಿಂತೆ ಮಾಡಡ,  ಇಲ್ಲೇ ಮೇಲೆ ಬನ್ಪಿನ ಮರ ಇದ್ದು,  ಈಗ ಬರೇ ಸಣ್ಣ ಗಿಡ ಅದು.. “  ಎಂದು ತೋರಿಸಿಯೂ ಕೊಟ್ಟರು.  ಈಗ ಅದು ದೊಡ್ಡ ಮರವಾಗಿದೆ,  ಸಾಲದ್ದಕ್ಕೆ ಹೊಸ ಗಿಡಗಳೂ ಸೃಷ್ಟಿಯಾಗುತ್ತಲಿವೆ.  

ನನ್ನ ಮಕ್ಕಳೂ ಬನ್ಪು ಸೊಪ್ಪಿನಿಂದಲೇ ಮೀಯಲು ಕಲಿತಿದ್ದಾರೆ.


“ ದಡಸಿನ ಮರ ನಾವು ಕಾಣೆವಕ್ಕ,  ನಿಮಗೆ ಬೇಕಿದ್ದರೆ ಎರಪ್ಪೆ ಸೊಪ್ಪು ತಂದು ಕೊಟ್ಟೇನು. “  ಎಂದಳು ಕಲ್ಯಾಣಿ.    ಆಂದಿನ ದಿನಗಳಲ್ಲಿ ಬಾಯಾರು ದೇವಸ್ಥಾನದ ಆಸುಪಾಸಿನಲ್ಲಿ ಸಿಗುವ ಎರಪ್ಪೆ ಸೊಪ್ಪು ನನ್ನ ಸ್ನಾನಕ್ಕಾಗಿ ಬರುತ್ತಿತ್ತು.


ಸಮೀಪದಲ್ಲೇ ತಲೆಂಗಳ ಮನೆ, ನನ್ನ ಮಾವನವರ ಅಕ್ಕನ ಮನೆ ಅದು.  ಮಾವನ ಅಕ್ಕ ಅಂದರೆ ಹಿರಣ್ಯದಲ್ಲೇ ಹುಟ್ಟಿ ಬಳೆದವರಾದ್ದರಿಂದ ಇಲ್ಲಿನ ಸೊಪ್ಪು ಸದೆಗಳೆಲ್ಲ ಅವರಿಗೆ ಗೊತ್ತು.  “ ಮುಜ ಅಂತ ಇನ್ನೊಂದು ಮರ ಇದೆ,  ಅದರ ಸೊಪ್ಪು ಬಲೇ ಪರಿಮಳ,  ಒಣಗಿದ ಎಲೆಯೂ ಧಾರಾಳ ಗೊಂಪು ಕೊಡುತ್ತೆ. “ ಎಂಬ ಸಲಹೆ ದೊರೆಯಿತು.


ಹೌದೂ, ಗೊಂಪು ಅಂದ್ರೇನು? ಹ್ಯಾಗಿರುತ್ತೆ?

ಒಂದು ದಾಸವಾಳದ ಹೂವನ್ನು ಕೈಯಲ್ಲಿ ಹಿಸುಕಿ,  ಅಂಗೈ ಒಂಥರ ಜಿಗುಟು ಜಿಗುಟಾಗಿ ಬರುತ್ತೆ, ಅದೇ ಗೊಂಪು ಎಂದು ತಿಳಿಯಿರಿ.


ನನ್ನ ಸಮಾಧಾನ ಏನಪ್ಪಾ ಅಂದ್ರೆ ಗೊಂಪು ಸಿಗದಿದ್ರೂ ಬೆಂಡೆಕಾಯಿ  ಬಂದಿದೆ.   ಇದೂ ಸಾಕಷ್ಟು ಗೊಂಪು ಕೊಡುವಂತಹುದು.   ಅಡುಗೆಗೆ ಬಳಸುವ ಬೆಂಡೆಕಾಯಿಯಲ್ಲಿ ಕೆಲವಾದರೂ ಬಲಿತದ್ದು,  ಮುರುಟಿದ್ದು ಇರುತ್ತವೆ. ಇಂತಹದ ನಾಲ್ಕು ಬೆಂಡೆಕಾಯಿ ಸಿಕ್ಕಿದರೂ ಸಾಕು,  ಚೆನ್ನಾಗಿ ತೊಳೆದು,  ಕಡೆಕೊಡಿ ಕತ್ತರಿಸಿ, ಹೇಗೆ ಬೇಕಿದ್ರೂ ಸೀಳಿ ,   ಮುಳುಗುವಷ್ಟು ನೀರು ಧಾರಾಳ ಎರೆದು ಚೆನ್ನಾಗಿ ಹತ್ತು ನಿಮಿಷ ಕುದಿಸಿ,  ಮರೆತೂ ಉಪ್ಪು ಹುಳಿ ಹಾಕದಿರಿ.  ಈಗ ಏನಾಯ್ತು?  ನೀರು ಲೋಳೆ ಲೋಳೆ ಆಯ್ತು,  ಇದೇ ನಮ್ಮ ಗೊಂಪು.   ಜಾಲರಿಯಲ್ಲಿ ಶೋಧಿಸಿ ಬೆಂಡೆಯ ಕಸ ತೆಗೆದರೆ ಉತ್ತಮ. 


ಈಗ ಬೆಂಡೆಯ ಗೊಂಪು ನೀರು ಸ್ನಾನಗೃಹಕ್ಕೆ ಹೋಗಲಿ,  ಸೀಗೇಹುಡಿ  ಎರಡು ಚಮಚ ತೆಗೆದಿಟ್ಟಿರಿ.  ಈಗ ಹೆಚ್ಚಿನ ಮಹಿಳೆಯರು ಬಾಬ್ ಕಟ್ಟಿಣಿಯರಾಗಿರುವುದರಿಂದ ಅರ್ಧ ಲೀಟರ್ ಗೊಂಪು ನೀರು ಸಾಕಾದೀತು.   ಸೀಗೇ ಹುಡಿಯನ್ನೂ ಬೆರೆಸಿದ ಗೊಂಪು ನೀರನ್ನು ತಲೆಗೆರೆದು ಐದು ನಿಮಿಷ ಬಿಟ್ಟು ತಲೆಯನ್ನು ಮಸಾಜ್ ಮಾಡಿದಂತೆ ತಿಕ್ಕಿದರಾಯಿತು.   ನಂತರ ತಲೆಗೆ ನೀರೆರೆದು ತೊಳೆಯಿರಿ.  ಕೂದಲಿನ ಆರೈಕೆಗೆ ತಣ್ಣೀರಿನ ಬಳಕೆ ಅತ್ಯುತ್ತಮ.   ತಲೆ ಕ್ಲೀನ್ ಆಯ್ತು ಅನ್ನಿ.




ಟಿಪ್ಪಣಿ:  ಬನ್ಪು ಬಣ್ಪು  ಕರಿಮತ್ತಿ ಇತ್ಯಾದಿ ಹೆಸರುಗಳುಳ್ಳ ಈ ಗೊಂಪಿನ ಬೃಹತ್ ವೃಕ್ಷಗಳ ಜಾತಿಗೆ ಸೇರಿದ ಬಣ್ಪಿನ ಮರ, ನೀರನ್ನು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.  ಹಾಗೇನೇ  ಬಣ್ಪಿನ ಮರ ಇದ್ದಲ್ಲಿ ನೀರಿನ ಸೆಲೆ ಇದೆಯೆಂದು ನಮ್ಮ ಹಿಂದಿನವರು ತಿಳಿದಿದ್ದರು.  ಸಸ್ಯಶಾಸ್ತ್ರೀಯ ಹೆಸರು  terminalia eliptica ಎಂದಾಗಿರುತ್ತದೆ.


ಎರಪ್ಪೆ ಸರಳಿ ಸಳ್ಳೆ ಮರ ಇತ್ಯಾದಿ ಹೆಸರುಗಳುಳ್ಳ  ಇನ್ನೊಂದು ಗೊಂಪಿನ ಸಸ್ಯ, ಆಂಗ್ಲ ಭಾಷೆಯಲ್ಲಿ  Lindley's aporosa ಎಂದಿರುತ್ತದೆ ಹಾಗೂ ಸಸ್ಯಶಾಸ್ತ್ರ ರೀತ್ಯಾ Aporosa cardiosperma.


ದಡಸಲು,  ದಡಸು, ದಡಶಿ ಎಂದೆಲ್ಲ ಕರೆಯಲ್ಪಡುವ ಈ ಸಸ್ಯ ಪ್ರಬೇಧ ಅಳಿವಿನಂಚಿನಲ್ಲಿದೆ.  ಇದರ ನಾರು ಗೊಂಪು ನಿಡುವಂತದ್ದು.   ಮಲಯಾಳದಲ್ಲಿ ಮಾಲ ತೆಂಗು,  ತಮಿಳಿನಲ್ಲಿ ಕಟ್ಟು ತೆಂಗೈ,  ಆಂಗ್ಲ ಭಾಷೆಯಲ್ಲಿ ವೈಲ್ಡ್ ಕೋಕೊನಟ್ ಎಂದೂ ಹೆಸರಿರಿಸಿದ್ದಾರೆ.   ಸಸ್ಯ ವಿಜ್ಞಾನವು  arenga wightii ಎಂದಿದೆ.  



Tuesday 16 April 2024

ಮಾವಿನ ಪುಳಿಂಜಿ

 


ಈ ಬಾರಿ ಕಾಟು ಮಾವಿನ ಅಬ್ಬರ ಇಲ್ಲ.  ಆದರೂ ಹಿರಣ್ಯ ದೇಗುಲದ ವಾರ್ಷಿಕ ಉತ್ಸವ ಹಾಗೂ ರಜಾ ದಿನಗಳ ಸಂಭ್ರಮಾಚರಣೆಗಾಗಿ ಮಗಳು ಬಂದಿದ್ದಾಳೆ,  ಮಾವಿನ ಹಣ್ಣೂಗಳೂ   “ನಾವಿದ್ದೇವೆ “  ಅಂದಿವೆ.


ಕೆಲವೇ ಮಾವಿನಹಣ್ಣುಗಳಿಂದ ಹತ್ತೂ ಮಂದಿ ಸವಿಯಬಹುದಾದ ರಸರುಚಿ ತಯಾರಿಸುವುದು ಹೇಗೆ?


ಮಾವಿನಹಣ್ಣುಗಳನ್ನು ತೊಳೆದು, ತೊಟ್ಟು ಕತ್ತರಿಸಿ ಸಿಪ್ಪೆ ಬೇರ್ಪಡಿಸಿ, ಗೊರಟುಗಳನ್ನು ತಪಲೆಯಲ್ಲಿ ತುಂಬಿಸಿ.

ಹಣ್ಣುಗಳ ಸಿಪ್ಪೆ ಕೈಯಲ್ಲಿ ಗಿವುಚಿದರೆ ಸಾಲದು, ಮಿಕ್ಸಿಯಲ್ಲಿ ರೊಂಯ್ ಎಂದು ತಿರುಗಿಸಿ ರಸ ತೆಗೆಯಿರಿ.  ಸಿಪ್ಪೆಯನ್ನು ಜಾಲರಿಯಲ್ಲಿ ಶೋಧಿಸಿದರೆ ಉತ್ತಮ.  ಈ ಹಂತದಲ್ಲಿ ಸ್ವಲ್ಪ ನೀರು ಬಳಸಬಹುದಾಗಿದೆ.   ರುಚಿಗೆ ಉಪ್ಪು,  ಬೆಲ್ಲ ತುಸು ಜಾಸ್ತಿ ಹಾಕಿದರೆ ಒಳ್ಳೆಯದು.

ಹಸಿಮೆಣಸು,  ಶುಂಠಿ ಮಿತ ಪ್ರಮಾಣದಲ್ಲಿ ಬಳಸಿರಿ.

ಎಲ್ಲವನ್ನೂ ಕೂಡಿಸಿ, ಕುದಿಸಿ,  ಹಣ್ಣಿನರಸ ದಪ್ಪ ದ್ರಾವಣ ಆದ ನಂತರ ಕೆಳಗಿಳಿಸಿ.   ನಿಮಗಿಷ್ಟವಾದಂತೆ ಒಗ್ಗರಣೆ ಕೊಡುವಲ್ಲಿಗೆ ಮಾವಿನ ಹಣ್ಣಿನ ಪುಳಿಂಜಿ ಸಿದ್ಧ.


ಕಾಟು ಮಾವಿನ ಹಣ್ಣುಗಳ ಕಾಲ ಮುಗಿಯುವ ತನಕ ಈ ಪುಳಿಂಜಿ ತಯಾರಿಸಿ,  ತಂಪು ಪೆಟ್ಟಿಗೆಯಲ್ಲಿಟ್ಟು ದಿನವೂ ಸವಿಯಿರಿ.




Tuesday 19 March 2024

ಹನಿ ಇಬ್ಬನಿ

 


ಗುಡ್ಡದ ಅಂಚು ಇಳಿಜಾರು

ಕಲ್ಲು ಮುಳ್ಳು ಕಣ್ಣೆದುರು

ಬದುಕಿನ ದಾರಿ ಬಲು ಕಠಿಣ

ತಿಳಿ  ನನ್ನಕ್ಕ, ನೀ ಬಲು  ಜಾಣೆ ।



Saturday 24 February 2024

ಮಾಡರ್ನ್ ಮೇಲಾರ

ಕಾಲಿಪ್ಲವರ್ ಇನ್ನಿತರ ತರಕಾರಿಗಳೊಂದಿಗೆ ಬಂದಿದೆ,  ಬೋಂಡಾ ಬಜ್ಜಿ ಪೋಡಿ ಮಾಡುವಂತಹ ಕಾಲಿಪ್ಲವರ್ ದಿನ ನಿತ್ಯದ ಉಪಯೋಗಕ್ಕಾಗಿ ತರುವುದು ಕಮ್ಮಿ ಎಂದೇ ಹೇಳಬೇಕು.  ಸೊಪ್ಪು ದಂಟು ಬಿಡಿಸಿ ಕೇವಲ ಹೂವನ್ನು ಮಾತ್ರ ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿಟ್ಟು,  ಅರ್ಧ ಗಂಟೆ ಬಿಟ್ಟು, ಅಡುಗೆಗೆ ಬಳಕೆ ಮಾಡಬೇಕಾಗಿದೆ,  ಇದೆಲ್ಲ ನನಗೆ ಹಿಡಿಸದು.  ಆದರೂ ಮುತುವರ್ಜಿಯಿಂದ ಹುಳುಹುಪ್ಪಟೆಗಳೇನಾದರೂ ಇವೆಯೋ ಎಂದೂ ನೋಡಬೇಕಾಗುತ್ತದೆ.  ಅಂತೂ ಕತ್ತರಿಸಿ ಇಟ್ಟು ಆಯ್ತು.  ಇನ್ನೀಗ ಬಾಣಲೆ ಇಡುವ ಸಮಯ ಬಂತೇ, ಛೆ, ಛೇ.. ಮಧ್ಯಾಹ್ನದ ಊಟಕ್ಕೊಂದು ವ್ಯಂಜನ ಆಗಬೇಕಿದೆ.
ಎಣ್ಣೆಯಲ್ಲಿ ಕರಿದ ತಿಂಡಿತಿನಿಸು ನಾವಿಬ್ಬರೇ ಇರುವಾಗ ಮಾಡಲಿಕ್ಕಿಲ್ಲ,  ಅದೆಲ್ಲ ಮಕ್ಕಳು ಬೆಂಗಳೂರಿನಿಂದ ಬಂದಿರುವಾಗ ಮಾತ್ರ ಮಾಡುವಂತಹುದು. ಕೇವಲ ಕಾಲಿಪ್ಲವರ್ ಸಾಕೇ,  ಸ್ವಲ್ಪ ಬೀನ್ಸ್, ಕ್ಯಾರೆಟ್ ಇರಲಿ.
ಹಸಿರು ಬಟಾಣಿಯೂ ಇರಲಿ. ಬೇಯಲಿಕ್ಕಾಗಿ ಬಟಾಣಿಗೆ ಕುದಿ ನೀರು ಎರೆದು ಮುಚ್ಚಿ ಇರಿಸಲಾಯಿತು.

ಇದೀಗ ಕಾಯಿ ತುರಿಯುವ ಸಮಯ,  ಅರ್ಧ ಕಡಿ ಕಾಯಿತುರಿ ಇರಲಿ.
ಕಾಯಿಯೊಂದಿಗೆ   ಒಂದು ಹಸಿಮೆಣಸು ಕೂಡಿ ನುಣ್ಣಗೆ ಅರೆಯಲಾಯಿತು.
ಬಟಾಣಿಯನ್ನು ಮೊದಲು ಕುಕ್ಕರಿನಲ್ಲಿ ಬೇಯಿಸಿ,  ತದನಂತರ ಕಾಲಿಪ್ಲವರ್ ಹಾಗೂ ಬೀನ್ಸ್ ಬೇಯಿಸತಕ್ಕದ್ದು.  ರುಚಿಯ ಉಪ್ಪು ಬೇಯುವಾಗಲೇ ಹಾಕಬೇಕು.
 ಕಾಯಿ ಅರಪ್ಪನ್ನು ಬೆಂದ ನಂತರ ಹಾಕಿ, ಅರ್ಧ ಲೋಟ ದಪ್ಪ ಮಜ್ಜಿಗೆ ಅಥವಾ ಮೊಸರು ಎರೆದು ಕುದಿಸಿ.
ಸಿಹಿ ಬೇಕಿದ್ದರೆ ಸ್ವಲ್ಪ ಬೆಲ್ಲ ಹಾಕಬಹುದು.
ದಪ್ಪ ಸಾಂದ್ರತೆಯ ಈ ರಸಂ ನಮ್ಮ ಮನ ಗೆದ್ದಿತು.  
ಒಗ್ಗರಣೆ ಇಲ್ಲದಿದ್ದರೂ ನಡೆದೀತು, ಒಂದೆಸಳು ಕರಿಬೇವು ಇರಲಿ.

ಈ ನಳಪಾಕಕ್ಕೆ ಕೇರಳೀಯರ ವೆಜಿಟಬಲ್ ಸ್ಟ್ಯೂ ಸ್ಪೂರ್ತಿ ನೀಡಿದೆ.
ನಾಲ್ಕೈದು ಬಾರಿ ಈ ಅಡುಗೆ ವಿನ್ಯಾಸವನ್ನು ಮಾಡಿ ನೋಡಿದ್ದೇನೆ. ಬಟಾಣಿ ಕಾಳು ಹಾಕದೆಯೂ ಮಾಡಬಹುದು,  ಕೇವಲ ಕಾಲಿಪ್ಲವರ್ ಮಾತ್ರ ಹಾಕಿಯೂ ಚೆನ್ನಾಗಿರುತ್ತದೆ.  ಬೇಗನೆ ಬೇಯುವ ಹೂ ಇದಾಗಿರುವುದರಿಂದ ಅಡುಗೆಯೂ ಜಟ್ ಪಟ್ ಆಗಿ ಬಿಡುತ್ತದೆ.

Monday 12 February 2024

ಬಾರೋ ಬೆಳ್ಳಿ ಬಟ್ಟಲೇ


ಚಂದಮಾಮ ಬಾರೋ,

ಕೆಳಗಿಳಿದು ಬಾ ಬಾರೋ,

ನಮ್ಮ ಚಾಮಿ ದೇವರೇ,

ಸುತ್ತಮುತ್ತ ಫಳ ಫಳ,

ಆಗಸದಿ ಹೊಳೆ ಹೊಳೆ,

ಸೂರ್ಯನೇಕೆ ಕಾಣಲೊಲ್ಲ,

ಇದೂ ಒಂದು ಬೆಳಕಿನಾಟ,

ತಿಳಿಯೇ ಅಕ್ಕಾ, ನೀ ಪುಟ್ಟೂ|
ಜಿಗಿ ಜಿಗಿಯುತ ಬಂದಿಹೆನು,

ಪ್ಲಾಸ್ಟಿಕ್ ಕುರ್ಚಿ ಬೇಡವು ಎನಗೆ,

ಅಜ್ಜನ ಮಡಿಲೇ ಸಾಕೆನಗೆ,
ಇದುವೇ ನನ್ನಯ ಆರಾಮ ಕುರ್ಚಿ,

ಅಜ್ಜನ ಕತೆಯಲಿ ನನ್ನಯ ಒಲವು,

ಅಜ್ಜನ ಪದದಲಿ ನನ್ನಯ ನಲಿವು |

Sunday 15 October 2023

ಬಂದಿದೆ ಶ್ರಾವಣಾ

 ಬೇಸಿಗೆಯೆಂದರೆ ಬಿಸಿಲ ಸ್ನಾನ,  ಬೆವರಿನಿಂದಲೇ ಮೈ ತೊಯ್ದು ತೊಪ್ಪೆಯಾಗುವ ಕಾಲ.   ಸಿಹಿ ಸಿಹಿ ಹಣ್ಣುಗಳ ಕಾಲ.  ಗುಡ್ಡದಅಂಚಿನಲ್ಲಿರುವ ಮಾವಿನ ಮರ ಹಿರಿಕರಿಯರ ಆಶ್ರಯ ತಾಣ.  ಮಾವಿನ ಹಣ್ಣುಗಳ ರಸರುಚಿ ಸವಿಯುತ್ತ ಹಾಯಾಗಿರುವ ಸಮಯ.  


 ಸಂತಸ ನಮ್ಮ ಬಾಲ್ಯದ್ದು ಕಾಲ ಉರುಳಿದಂತೆ ಅಂದಿನ ಮಾಮರಗಳಿಲ್ಲವಾಗಿವೆ ರಸ್ತೆ ಪಕ್ಕದಲ್ಲಿ ನೆರಳು ನೀಡುತ್ತಿದ್ದ ಮರಗಳು ಕಾಂಕ್ರೀಟ್ ಕಾಡುಗಳೆಡೆಯಲ್ಲಿ ಮರಳಿ ಬಾರದ ಲೋಕಕ್ಕೆ ತೆರಳಿವೆ ಆಧುನಿಕತೆಯೆಂಬ ರಕ್ಕಸ ನಮಗೆ ಹವಾನಿಯಂತ್ರಿತ ಕೊಠಡಿಗಳನ್ನು ನೀಡಿರುವಾಗ ಗಿಡಮರಗಳು ಅನಗತ್ಯ ಅನ್ನೋಣ ಇಂದಿನ ಮಕ್ಕಳು ಪ್ರಕೃತಿಯ ಒಡನಾಟದಿಂದ ವಂಚಿತರುಎಂದೆನ್ನಲೇ ಬೇಕಾಗಿದೆ.

 

ಬಿಸಿಲಿನ ಝಳದಿಂದ ಬೆವರಿದ ಮೈಗೆ ವರ್ಷಧಾರೆ ತಂಪನ್ನು ನೀಡಿದೆ ಮನೆಯೊಳಗೆ ಗುಬ್ಬಚ್ಚಿಗಳಂತೆ ಇರುವ ಕಾಲಏನೇನೋ ತರೋಣಬೇಕೆನಿಸಿದ್ದನ್ನು ತಿನ್ನೋಣ ಅನ್ನುವ ಹಾಗೇ ಇಲ್ಲ.    ಅಡುಗೆಮನೆಯಲ್ಲಿ ದಾಸ್ತಾನು ಇದೆಯಾ ಉಪ್ಪುಸೊಳೆ ಉಪ್ಪಿನಲ್ಲಿಅದ್ದಿಟ್ಟ ಮಾವಿನಕಾಯಿ….  ಯಾವುದೂ ನಮ್ಮ ಇಂದಿನ ಜೀವನಶೈಲಿಗೆ ಒಗ್ಗದು.    


“ ಅಮ್ಮ ಅದೆಲ್ಲ ಬೇಡ. “   ಭರಣಿಯಿಂದ ಹೊರ ತೆಗೆಯುವುದಕ್ಕಿಲ್ಲ.   ಮತ್ಯಾಕೆ ಇದನ್ನೆಲ್ಲ ಉಪ್ಪು ಹಾಕಿ ಇಟ್ಟಿದ್ದು ದಂಡ ಆಯ್ತಲ್ಲ.”

“ ಅದರ ವಾಸ್ನೆ ನಂಗಾಗಲ್ಲ. “ 

ಬೇಕಿದ್ದವರಿಗೆ ಇಂತಹ ಪರಿಕರಗಳೆಲ್ಲ ಮಾರುಕಟ್ಟೆಯಲ್ಲಿ ಲಭ್ಯವಿದೆ ಅಮೆಝಾನ್ ಕೂಡಾ ಕಳಿಸಿ ಕೊಟ್ಟೀತು ಅನ್ನಿ.


  ಹಿಂದೆ ಮನೆ ತುಂಬ ಜನ ಕೆಲಸದಾಳುಗಳೂ ಬಂದು ಠಿಕಾಣಿ ಹೂಡುತ್ತಿದ್ದ ನೆಂಟರಿಷ್ಟರೂ ಸೇರಿ ಹದಿನೈದು ಇಪ್ಪತ್ತು ಜನಕ್ಕೆದಿನವೂ ಅಂಗಡಿ ಸಾಮಾನು ತರುವುದಕ್ಕಿಲ್ಲ ಪರಿಸರದಲ್ಲಿ ದೊರೆಯುವ ತಜಂಕ್ಕೆಸುಬಸಳೆಹರಿವೆ ಸೊಪ್ಪುಗಳು ಹಲಸಿನಬೇಳೆ ಇತ್ಯಾದಿ ಮುಖ್ಯ ಆಹಾರ ಪದಾರ್ಥವಾಗಿರುತ್ತಿದ್ದುವು ಹಲಸು ತಿಂದ ಹಾಗೇ ಬೇಳೆಯನ್ನು ಬೇರ್ಪಡಿಸಿ ತೊಳೆದು ಸಂಗ್ರಹಿಸಿ ಮಳೆಗಾಲ ಆರಂಭಕ್ಕೆ ಮೊದಲು ಕೆಂಪು ಮಣ್ಣಿನ ಲೇಪನ ನೀಡಲಾಗುತ್ತಿತ್ತು ಸಪ್ಪಗಿನ ಹಲಸಿನ ಬೇಳೆಗೆ ಸಿಹಿ ರುಚಿ ಬಂದ ನಂತರವೇ ತಿನ್ನುವುದು ಹೇಗೇ ನಿಗಿನಿಗಿ ಕೆಂಡದಲ್ಲಿ ಸುಟ್ಟ ಬೇಳೆಯ ಪರಿಮಳವೂರುಚಿಯೂ ಇಂದಿನ ಮಕ್ಕಳಿಗೆ ಆ ಭಾಗ್ಯ ಹೋಯ್ತು.

ಸೊಪ್ಪು ಹಣ್ಣು ಸೌತೇಕಾಯಿಗಳೊಂದಿಗೆ ಬೆರಕೆ  ಹಲಸಿನ ಬೇಳೆ ಪದಾರ್ಥವೂ ಮಸ್ತ್ ರುಚಿಇವೆಲ್ಲ ಈಗ ನೆನಪುಗಳಾಗಿ ಉಳಿದಿವೆ.  


ಮಳೆಯ ವಾತಾವರಣದಲ್ಲಿ ಸೊಂಪಾಗಿ ಬೆಳೆದಂತಹ ಹಸಿರು ಯಾವುದೇ ಸಸ್ಯವಾಗಿರಲಿ ಕುಡಿ ಎಲೆಗಳನ್ನು ಸಂಗ್ರಹಿಸಿ ಹಲವು ಕುಡಿಗಳಿಂದ ತಂಬುಳಿ ತಯಾರಿಸಿ ಉಣ್ಣದಿದ್ದರೆ ಹೇಗಾದೀತು.    ಮಳೆಗಾಲದ ರೋಗರುಜಿನಗಳಿಂದ ತಪ್ಪಿಸಿಕೊಳ್ಳಲು ಇದೂ ಒಂದು ದಾರಿಯಾಗಿದ್ದಿತು ಈಗ ಹಾದಿಬೀದಿಗೊಂದರಂತೆ ಆಸ್ಪತ್ರೆಗಳಿವೆ.   ಸೊಪ್ಪುಸದೆಗಳ ಉಸಾಬರಿ ನಮಗೆ ಬೇಡವಾಗಿದೆ ಬೇಕೆನಿಸಿದರೂ ಹೈಟೆಕ್ ಮನೆಗಳಲ್ಲಿ ವಾಸಿಸುವ ನಮಗೆ ದುರ್ಲಭ ಮನೆಯಿಂದ ಅಂಗಳಕ್ಕೆ ಇಳಿಯಬೇಕಾದರೆ ಇಂಟರ್ ಲಾಕ್ ಗೃಹಾಲಂಕಾರಕ್ಕೆ ಕುಂಡಗಳಲ್ಲಿ ನೆಟ್ಟಂತಹ ರಂಗುರಂಗಿನ ಎಲೆಗಳ ಗಿಡಗಳು ಪರಿಮಳ ರಹಿತ ಹೂವುಗಳು ಪ್ರಕೃತಿಯ ಅಂಗಣದಲ್ಲಿ ಸ್ವಚ್ಛಂದವಾಗಿ ಬೆಳೆಯುವ ಗಿಡಬಳ್ಳಿಗಳ ಕಾಲ ಮರೆಗೆ ಸರಿದಿದೆ.


ಇದೀಗ ಹಬ್ಬಗಳ ಮಾಸ ಎನಿಸಿದಂತಹ ಶ್ರಾವಣ ಬಂದಿದೆ ಮೊದಲ ಹಬ್ಬವೇ ನಾಗಪಂಚಮಿ ನಾಗನೆಂದರೆ ಪ್ರಕೃತಿಯ ಮಡಿಲು ಗುಡಿಗೋಪುರಗಳು ಬೇಕಿಲ್ಲ ಸುತ್ತಲೂ ಜಲಾವೃತ ಭೂಮಿಕೇದಗೆಯ ವನ ಸಂಪಿಗೆಯ ಮರದ ಸುಗಂಧ ಔಷಧೀಯ ವೃಕ್ಷಗಳಿಂದ ಕೂಡಿದ ಸಸ್ಯಸಂಪತ್ತು.   ಇಂತಹ ಪರಿಸರ ಈಗ ಕಾಣೆವು ಕಾಂಕ್ರೀಟ್ ಕಟ್ಟಡದೊಳಗೆ ದೇವರನ್ನು ಇಟ್ಟು ಪೂಜೆಮಾಡಿದರಾಯಿತುನಾಗಪಂಚಮಿಯ ಸಿಹಿ ಹೇಗೆ ಬೆಲ್ಲತೆಂಗಿನಕಾಯಿಅಕ್ಕಿ ಹಿಟ್ಟು ಸೇರಿದ ಮಿಶ್ರಣವನ್ನು ಅರಸಿಣ ಎಲೆಯಲ್ಲಿಸುತ್ತಿ ಇಟ್ಟು ಮಾಡುವ ಕಡುಬು ನಾಗಪಂಚಮಿಯ ವಿಶೇಷ ಅರಸಿಣ ಎಲೆ ಕೂಡಾ ಈಗ ಮಾರ್ಕೆಟ್ಟಲ್ಲಿ ಸಿಗುತ್ತದೆ.


ಶ್ರಾವಣ ಬಂತೆಂದರೆ ಕರಾವಳಿಯ ಗೌಡ ಸಾರಸ್ವತ ಸಮಾಜದಲ್ಲಿ ಸಂಭ್ರಮದ ಕಾಲ ನನ್ನ ಬಾಲ್ಯದ ದಿನಗಳಲ್ಲಿ ನೆರೆಮನೆಯ ಮಹಿಳೆಯರ ಚೂಡಿ ಪೂಜೆಯ ಆಚರಣೆಯ ನಂತರ ಪ್ರಸಾದವೆಂದು ಸಿಹಿ ತಿನಿಸು ಸಿಗುತ್ತಿತ್ತು ಬೆಲ್ಲ ತೆಂಗಿನಕಾಯಿ ಬಾಳೆಹಣ್ಣುಗಳ ಮಿಶ್ರಣದ ಪ್ರಸಾದ ರುಚಿಕರವಾಗಿರುತ್ತಿತ್ತು ಅದನ್ನೂ ಮನೆಯ ಮಹಿಳೆಯರೇ ತಯಾರಿಸುತ್ತಿದ್ದರು ಜೊತೆಗೆ ಚೂಡಿಯೂ ನೆಲದಲ್ಲಿ ಬೆಳೆಯುವ ಹಲ ಬಗೆಯ ಹುಲ್ಲುಗಳನ್ನು ಆಕರ್ಷಕವಾಗಿ ರತ್ನಗಂಧಿ ಕರವೀರ ಹೂಗಳ ಜೋಡಣೆಯೊಂದಿಗೆ ಬಾಳೆಯನಾರಿನಲ್ಲಿ ಕಟ್ಟಿದ ಅತ್ಯಾಕರ್ಷಕ ಪುಷ್ಪಗುಚ್ಛ ಅದು ಈಗ ಬಾಳೆಯ ನಾರೂ ಕಾಣೆವು ಗರಿಕೆ ಹುಲ್ಲೂ ಸಿಗದು.  


ಇದರೊಂದಿಗೆ ಕೇರಳದ ಓಣಂ ಇಲ್ಲಿಯೂ ನೈಸರ್ಗಿಕವಾಗಿ ಬೆಳೆಯುವ ಹೂಗಳಿಂದಲೇ ಪೂಕಳಂ ರಚಿಸುವ ಸಂಭ್ರಮ ಹಿಂದೆ ಇತ್ತು ಕಳೆ ಸಸ್ಯವಾಗಿರುವ ರಥ ಹೂವನ್ನೇ ಕೊಯ್ದು ತಂದರೆ ಸಾಕಾಗುತಿತ್ತು.   ಈಗ  ಹೂವಿನ ಮಾರ್ಕೆಟ್ ಕಡೆ ಚೀಲ ಕೊಂಡೊಯ್ಯುವ ಕಾಲ ಬಂದಿದೆ.   ಕಾಲಾಯ ತಸ್ಮೈ ನಮಃ ಅನ್ನಬೇಕಷ್ಟೆ.






ಟಿಪ್ಪಣಿ ಸದಭಿರುಚಿಯ ಮಾಸಪತ್ರಿಕೆ ಉತ್ಥಾನದಲ್ಲಿಪ್ರಕಟಿತ ಕಿರು ಬರಹ