ಇವತ್ತು ತರಕಾರಿ ಏನೇನಿವೆ?
ಒಂದು ಹಿಡಿಯಷ್ಟು ಬೀನ್ಸ್ ಉಳಿದಿದೆ,
ನೀರುಳ್ಳಿ ಇದೆ,
ಟೊಮ್ಯಾಟೋ ಇದೆ.. ಸಾಂಬಾರ್ ಮಾಡಬಹುದು.
ಮಾಡಿಟ್ಟ ಸಾಂಬಾರ್ ಹುಡಿ ಮುಗಿಯುತ್ತ ಬಂದಿದೆ, ಪುನಃ ಮಾಡೋಣಾಂದ್ರೆ ಒಣಮೆಣಸು ಮುಗಿದಿದೆ.
ಟೇಬಲ್ ಮೇಲೆ ಬರೆದಿಟ್ಟ ಜೀನಸು ವಗೈರೆ ಮಾಲುಗಳ ಪಟ್ಟಿ ಇಟ್ಟಲ್ಲೇ ಇದೆ, ಯಾಕೋ ಬಂದಿಲ್ಲ.
" ಯಾಕ್ರೀ ತಂದಿಲ್ಲ..." ಕೇಳುವಂತಿಲ್ಲ, ಕೊರೋನಾ ಕಾಲ.
ತೊಗರಿಬೇಳೆ ಡಬ್ಬವೂ ಈಗ ಸಾಂಬಾರ್ ಮಾಡ್ಬಿಟ್ರೆ ಖಾಲಿ ಆದ ಹಾಗೆ, ಆಗಲಿ.
ಇದ್ದಂತಹ ತೊಗರಿಬೇಳೆಯು ಕುಕ್ಕರಿನಲ್ಲಿ 3 ಸೀಟಿ ಕೂಗಿಕೊಂಡಿತು.
ಬೀನ್ಸ್, ಟೊಮ್ಯಾಟೋ ನೀರುಳ್ಳಿಗಳು ಕತ್ತರಿಸಲ್ಪಟ್ಟು, ನಾಲ್ಕಾರು ಬೆಳ್ಳುಳ್ಳಿ ಎಸಳುಗಳೂ ಸುಲಿಯಲ್ಪಟ್ಟು,
ಬೆರೆತಿದೆ ಉಪ್ಪು ರುಚಿಗೆ ತಕ್ಕಷ್ಟು,
ಪುನಃ ಕುಕ್ಕರ್ ಒಳಗೆ ತುಂಬಲ್ಪಟ್ಟು,
ಒಂದು ಸೀಟಿ ಕೂಗಲ್ಪಟ್ಟು,
ಕೆಳಗಿಳಿಸಿ, ಮೆಲ್ಲನೆ ಒತ್ತಡ ಇಳಿಸಿ.
ಇದೀಗ ತೆಂಗಿನತುರಿಯ ಸರದಿ,
ನೀರಿನ ಹಂಗಿಲ್ಲದೆ,
ಹಿಡಿಯಷ್ಟು ತುರಿ ತಿರುತಿರುಗಿ
ಬೇಯಿಸಿಟ್ಟ ಸಾಮಗ್ರಿ
ಬಾಯ್ದೆರೆದು ಕೂಡಿದಾಗ
ಇನ್ನೊಂದು ಕುದಿ ಕುದಿಸಿ
ಕೆಳಗಿಳಿಸಿ.
" ಊಟಕ್ಕಾಯ್ತೇ.. "
" ಆಯ್ತು.. "
ಒಗ್ಗರಣೆಗೆ ಸಮಯವಿಲ್ಲ, ಒಂದು ಚಮಚ ತುಪ್ಪ ಎರೆಯುವಲ್ಲಿಗೆ ಒಗ್ಗರಣೆ ಶಾಸ್ತ್ರ ಮುಕ್ತಾಯ.
ಮಸಾಲಾರಹಿತ ಸಾಂಬಾರ್ ಸಿದ್ಧವಾಯಿತು.
"ನಿನ್ನ ಅಂಬೊಡೆಗೂ ಹೀಗೇ ಸಾಂಬಾರ್ ಮಾಡಬೇಕಾಗಿತ್ತು.. " ಅನ್ನೋದೇ ಗೌರತ್ತೆ.
0 comments:
Post a Comment