ಸಂಜೆ ಡೈರಿಯಿಂದ ಹಾಲು ತರುವಾಗ ಅಗತ್ಯವಿರುವ ಹಣ್ಣು ಹಂಪಲು, ತರಕಾರಿ ತರಿಸುವ ರೂಢಿ. ಆ ಸಮಯಕ್ಕೆ ನಮ್ಮ ಡ್ರೈವರು ರಾಜಣ್ಣ “ ಹಾಲು ನಾನೇ ತರ್ತೇನೆ. “. ಎಂದು ಹೊರಟ. ಅವನಿಗೆ ನಮ್ಮ ಕನ್ನಡ, ತುಳು ಬಾರದು, ಹಿಂದಿಯಲ್ಲಿ ವದರಬೇಕು. ನನ್ನದು ಹೈಸ್ಕೂಲ್ ಹಿಂದಿ, ಉಳಿದಂತೆ ಹಿಂದಿ ಸಿನಿಮಾ, ಧಾರಾವಾಹಿಗಳೇ ನಮ್ಮ ಪಠ್ಯ.
ನೇಂದ್ರ ಬಾಳೆ ಹಣ್ಣು ತಾ ಅಂದಿದ್ದಕ್ಕೆ ಪಚ್ಚಬಾಳೆ ಬಂದಿದೆ. ನನಗೂ ಮೊದಲು ತಿಳಿಯಲಿಲ್ಲ. ತಿನ್ನಬಹುದಿತ್ತು, ನನಗೋ ಶೀತಗಾಳಿ ಬಡಿದಿದೆ. ತಿನ್ನಲು ರುಚಿ ಆದರೂ ಶೀತ ಜಾಸ್ತಿ ಆದೀತು.
ಹೊರಗೆ ಮೊಬೈಲ್ ಹಿಡಿದು ಕೂತಿದ್ದ ರಾಜಣ್ಣ, ಅವನಿಗೇ ಎರಡು ಹಣ್ಣು ಸಂದಾಯ ಆಯ್ತು. ನಮ್ಮವರೂ ಒಂದು ಹಣ್ಣು ತಿಂದರು.
ತಿಂಡಿ ತಿನಿಸು ತಯಾರಿಕೆಗೆ ಪಚ್ಚಬಾಳೆ ಉತ್ತಮ, ಬನ್ಸ್, ಪೂರಿ, ಚಪಾತಿ ಎಲ್ಲ ನೆನಪಾಯ್ತು, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಯಾಕಾದರೂ ಮಾಡಬೇಕು, ಮಕ್ಕಳು, ಮೊಮ್ಮಕ್ಕಳು ಬೆಂಗಳೂರಿನ ವಾಸ್ತವ್ಯ.
ದೋಸೆ ಮಾಡಿಯೇ ಸಿದ್ಧ, ಒಂದೂವರೆ ಲೋಟ ಅಕ್ಕಿ ನೀರಿಗೆ ಬಿತ್ತು, ತೆಂಗಿನ ಕಾಯಿ ಒಡೆದು ಅರ್ಧ ಕಡಿ ತುರಿದೂ ಆಯ್ತು. ತುರಿದ ಕಾಯಿಯಲ್ಲಿ ಅರೆವಾಸಿ ನಾಳೆಯ ಚಟ್ಣಿಗೆ ತೆಗೆದಿರಿಸಲಾಯಿತು. ಒಂದು ಚಮಚ ದಪ್ಪ ಅವಲಕ್ಕಿ ಇರಲಿ, ಅದನ್ನೂ ನೀರಿನಲ್ಲಿ ಮುಳುಗಿಸಿ ಇಡುವುದು.
ರಾತ್ರಿ ಊಟದ ನಂತರ ಎಲ್ಲವನ್ನೂ ನುಣ್ಣಗೆ ಅರೆಯುವುದು, ರುಚಿಗೆ ಉಪ್ಪು, ತುಂಡು ಬೆಲ್ಲ ಕೂಡಿಸಿ ಇಡುವುದು, ಮುಂಜಾನೆ ದೋಸೆ ಎರೆಯುವುದು.
ಈ ಹಿಟ್ಟಿನಿಂದ ಸೆಟ್ ದೋಸೆಯೂ ಆದೀತು, ತೆಳ್ಳಗೆ ಪೇಪರ್ ದೋಸೆಯೂ ನಡೆದೀತು, ಗುಳಿಯಪ್ಪವೂ ಭಲೇ ಭಲೇ ಅಂದೀತು.
ಬರೆಯಲು ಮರೆತದ್ದು, ಅರೆಯುವಾಗ ಮೂರು ಬಾಳೆಹಣ್ಣು ಕೂಡಿ ಅರೆಯಿರಿ.


0 comments:
Post a Comment