Pages

Ads 468x60px

Saturday, 4 April 2026

ದ್ರೌಪದೀ ಅಡುಗೆ



ಒಲೆ ಉರಿಸಿ ಅಡುಗೆ ಮಾಡುವ ಕಾಲ ಮತ್ತೆ ಬಂದ ಹಾಗಿದೆ.  ಎಲ್ಲೋ ಯುದ್ಧ ನಡೆಯುತ್ತಿದೆ,  ನಮ್ಮ ಅಡುಗೆ ಅನಿಲ ಸರಬರಾಜು ಇಲ್ಲ,  ಸ್ಟಾಕಿಲ್ಲ… ಸಪ್ಲೈ ಇಲ್ಲ.. ಇಂತಹ ಉತ್ತರಗಳು.


ಮೊನ್ನೆ ಮಧುಕರನೂ ಅಂದಿದ್ದ,  “ ಇರುವ ಗ್ಯಾಸ್ ಸಿಲಿಂಡರನ್ನು ಕಡಿಮೆ ಉಪಯೋಗಿಸು, ಸಾಧ್ಯವಾದಷ್ಟೂ ಕರೆಂಟಿನಲ್ಲೇ ಅಡುಗೆ ಮಾಡು.  ಇಲ್ಲಿ ಹೋಟಲ್ಗಳಲ್ಲಿ ದೋಸೆ ಇಲ್ಲ,  ಅನ್ನಕ್ಕೆ ಸಾಂಬಾರ್ ಇಲ್ಲ… ಕೇವಲ ಚಟ್ಣಿ ಕೊಡ್ತಾರೆ..”


“ಅದೊಂದು ಅಸ್ಸಾಂ ಅಕ್ಕಿ ಆನ್ ಲೈನಲ್ಲಿ ತರಿಸಿ ಕೊಟ್ಟಿದ್ದರೆ ಮಾಡಿ ನೋಡಬಹುದಿತ್ತು.  ನೀರು ಕುದಿಸದೇ ಅನ್ನ ಆಗುತ್ತಂತೆ.. ". 

“ ತರಿಸೋಣ,  ಈಗ ಕರೆಂಟಿನಲ್ಲೇ ಅನ್ನ ಮಾಡು..”


ನಾನು ಯಾವತ್ತೂ ಗ್ಯಾಸ್ ಒಲೆಯಲ್ಲಿ ಅನ್ನ ಮಾಡಿಯೇ ಇಲ್ಲ,  ಇಂಡಕ್ಷನ್ ಸ್ಟವ್ ನನ್ನ ಅಚ್ಚುಮೆಚ್ಚಿನದು.  ಅದರ ಮೇಲಿಟ್ಟು ಎಲ್ಲವನ್ನೂ ಸೆಟ್ ಮಾಡಿಟ್ಟು ಆಚೆ ಹೋಗಲಡ್ಡಿಯಿಲ್ಲ.  ಹಾಲು, ದೋಸೆ, ಪುಲ್ಕಾ, ಒಗ್ಗರಣೆ… ಗ್ಯಾಸ್ ಒಲೆ.


ಅನ್ನ ಕರೆಂಟಿನಲ್ಲಿ ಬೇಯುತ್ತಲಿದೆ.  ಮನೆಯಲ್ಲಿ ಸೋಲಾರ್ ಇರುವುದರಿಂದ ವಿದ್ಯುತ್ ಉಪಕರಣಗಳ ಉಚಿತ ಕಾರ್ಯ ನಿರ್ವಹಣೆ.

ಇನ್ನೊಂದು ರೈಸ್ ಕುಕರ್ ,  ಸಾಂಬಾರ್ ಇತ್ಯಾದಿ ಮಾಡಲಿಕ್ಕೆ.  ಪ್ಲಗ್ ಹಾಕಿ ಬಿಟ್ಟರಾಯಿತು,  ಬೇಳೆ, ತರಕಾರಿ ಎಲ್ಲವೂ ಹಿತವಾಗಿ ಬೇಯುತ್ತೆ.

ಇವತ್ತು ಸರಳವಾಗಿ ಒಲೆ ರಹಿತ ಅಡುಗೆ ಮಾಡೋಣ.




ಯುದ್ಧಕಾಲವಾದುದರಿಂದ ತರಕಾರಿಗಳ ಬೆಲೆ ಪಾತಾಳಕ್ಕಿಳಿದಿದೆಯಂತೆ. ಪತ್ರಿಕೆಯಲ್ಲಿ ಕಂಡಿದ್ದು.  ಗಲ್ಫ್ ರಾಜ್ಯಗಳಿಗೆ ರವಾನೆಯಾಗುತ್ತಿದ್ದ ತರಕಾರಿಗಳು ಹೋಗುವ ದಾರಿ ಕಾಣದೆ ಇಲ್ಲೇ ನೆಲ ಕಚ್ಚಿವೆ.


ಹೌದೂ ಹಾಗಿದ್ದರೆ ನೇಂದ್ರ, ಬಚ್ಚಂಗಾಯಿ ಜಾಸ್ತಿಯೇ ತರಿಸೋಣ.

“ಅಕ್ಕ, ಮೊನ್ನೆಯಿಂದಲೇ ನೇಂದ್ರಕ್ಕೆ ಕ್ರಯ ತುಂಬ ಕಮ್ಮಿಯಿತ್ತು.”  ಎಂದ ರಂಗಣ್ಣ.


ಈಗ ನೇಂದ್ರ ಸಿಕ್ಕಾಪಟ್ಟೆ ಬಂದಿದೆ,  ಹಣ್ಣು ತಿಂದು ಮುಗಿಯದು,  ಅಡುಗೆಗೂ ಉಪಯೋಗಿಸೋಣ, ಪಕ್ವವಾದಂತಹ ನೇಂದ್ರದ ಸಿಪ್ಪೆ ಬಿಡಿಸಿ, ಪಲ್ಯಕ್ಕೆ ಹೆಚ್ಚುವ ತರಹ ಕತ್ತರಿಸಿ,  ಉಪ್ಪು ಬೆರೆಸಿ,  ಮೊಸರು ಎರೆದು, ಕಾಯಿತುರಿ ಬೆರೆಸಿ, ಬಜ್ಜಿ ಎಂಬ ನಾಮಕರಣ ನೀಡೋಣ.

ಮುಂಜಾನೆಯ ಚಟ್ಟಣಿ ತಂಪು ಪೆಟ್ಟಿಗೆಯಲ್ಲಿ ಹಾಯಾಗಿದ್ದಿತು. ಹೊರಗೆ ಬಂದು ಟೇಬಲ್ ಅಲಂಕರಿಸಿತು. 

ಮಜ್ಜಿಗೆ ನಮಗೆ ಅನಿವಾರ್ಯ, ಊಟ ಮುಕ್ತಾಯ ಆಗುವುದೆಂತು?

ನಮ್ಮ ಮಿಡಿ ಉಪ್ಪಿನಕಾಯಿ,  ಇದಕ್ಕೆ ಒಲೆಯೇ ಬೇಕಿಲ್ಲ.  ನಿಂಬೆಹುಳಿ ಉಪ್ಪಿನಕಾಯಿಯೂ ಒಲೆಯನ್ನು ಕೇಳದು.  


ಪುರಾಣಗಳ ಪ್ರಕಾರ, ದ್ರೌಪದಿ ಒಲೆ ಹಚ್ಚಿ ಕಷ್ಟಪಡುವ ಬದಲು, ವನವಾಸದ ಸಮಯದಲ್ಲಿ ಸೂರ್ಯದೇವನು ಕರುಣಿಸಿದ "ಅಕ್ಷಯ ಪಾತ್ರೆ" ಅವಳ ಬಳಿಯಿತ್ತು. ಆ ಪಾತ್ರೆಯ ವಿಶೇಷವೆಂದರೆ, ಅದರಲ್ಲಿ ಅಡುಗೆಯನ್ನು 'ಮಾಡುವ' ಅಗತ್ಯವೇ ಇರಲಿಲ್ಲ! ದ್ರೌಪದಿ ತಾನು ಊಟ ಮಾಡುವವರೆಗೆ, ಆ ಪಾತ್ರೆಯಿಂದ ಎಷ್ಟು ಜನರಿಗೆ ಬೇಕಾದರೂ, ಎಂತಹ ರುಚಿಯಾದ ಭೋಜನವಾದರೂ ಸಿದ್ಧವಾಗಿ ಸಿಗುತ್ತಿತ್ತು.


ಆ ಅಡುಗೆ ಹೇಗಿದ್ದೀತು ಎಂದು ಕಲ್ಪಿಸಿಕೊಂಡರೆ,

ಅದು ಸಾಕ್ಷಾತ್ ಸೂರ್ಯದೇವನ ಪ್ರಸಾದವಾದ್ದರಿಂದ, ಅತ್ಯಂತ ಶುದ್ಧ, ಆರೋಗ್ಯಕರ ಮತ್ತು ದಿವ್ಯವಾದ ರುಚಿಯನ್ನು ಹೊಂದಿದ್ದಿರಬೇಕು.

ಈಗಿನ ಹೋಟೆಲ್ ಊಟದಂತೆ ಕೃತಕವಾಗಿರದೆ, ಅತಿಯಾದ ಖಾರ-ಮಸಾಲೆಗಳಿಲ್ಲದೆ, ದೇಹಕ್ಕೂ ಮನಸ್ಸಿಗೂ ಹಿತವಾದ ಸಾತ್ವಿಕ ಮತ್ತು ನೈಸರ್ಗಿಕ ರುಚಿ ಅದರಲ್ಲಿರುತ್ತಿತ್ತು.

ಕಾಡಿನಲ್ಲಿ ಸಿಗುವ ಗೆಡ್ಡೆ-ಗೆಣಸು, ಹಣ್ಣು-ಹಂಪಲುಗಳನ್ನೇ ಷಡ್ರಸಗಳನ್ನಾಗಿ ಪರಿವರ್ತಿಸುವ ಶಕ್ತಿ ಆ ಪಾತ್ರೆಗಿದ್ದಿರಬೇಕು.







0 comments:

Post a Comment