Pages

Ads 468x60px

Friday, 30 August 2019

ಆಷಾಢದ ಹಲಸು






ಒಮ್ಮೆ ಮಳೆಯ ಅವತರಣವಾದರೆ ಸಾಕು, ತೋಟದ ಹಲಸುಗಳೆಲ್ಲ ಹಣ್ಣಾಗಲು ಪ್ರಾರಂಭ, ಜೋರುಮಳೆ ಎನ್ನುವ ಚೆನ್ನಪ್ಪನೂ ಪತ್ತೆಯಿಲ್ಲ. ಇಂತಹ ಸಮಯದಲ್ಲಿ ನಾವು ಮನೆಯಂಗಳಕ್ಕೆ ಇಳಿಯಲಿಕ್ಕೂ ಇಲ್ಲ. ಆದರೂ ನಾಗಬನ ಹಾಗೂ ಶ್ರೀದೇವಿಯ ದೇವಾಲಯಕ್ಕೆ ಬರುವ ಮಂದಿ ತೋಟದ ಹಲಸುಗಳ ಪರಿಮಳದ ಜಾಡು ಹಿಡಿದು ಕೊಯ್ದು ತಂದಿರಿಸುವವರು. ಹಾಗಾಗಿಯೇ ಜೇನು ತುಳುವ, ಆಟಿ ಬಕ್ಕೆಗಳ ಪರಿಚಯ ನಮಗಾಯಿತು. ಆಷಾಢ ಮಾಸದಲ್ಲಿ ಅಂದರೆ ಆಟಿ ತಿಂಗಳಲ್ಲಿ ಫಲ ನೀಡುವ ಹಲಸಿನ ಮರಕ್ಕೆ ವಿಶೇಷ ಸ್ಥಾನ. ಸಾಮಾನ್ಯವಾಗಿ ತಿನ್ನಲಿಕ್ಕೆ ಏನೂ ಸಿಗದ ಕಾಲ ಇದಾಗಿದ್ದು ಈ ಸಮಯದಲ್ಲಿ ಫಲ ಕೊಡುವ ಹಲಸಿನ ಮರ ಇದ್ದರೆ ನಾವೇ ಭಾಗ್ಯಶಾಲಿಗಳು ಎಂದು ತಿಳಿಯುವ ಕಾಲವೊಂದಿತ್ತು ಎಂಬುದನ್ನು ನಾವು ಮರೆಯದಿರೋಣ.

ಈಗ ಆಷಾಢದ ಹಲಸು ನಮ್ಮ ಮುಂದಿದೆ, " ಬರೇ ಸಣ್ಣದು ಅಕ್ಕ.." ಅಂದ ಚೆನ್ನಪ್ಪ.

" ತೊಂದರೆಯಿಲ್ಲ, ಹತ್ತೂ ಹದಿನೈದು ಸೊಳೆ ಸಿಕ್ಕಿದ್ರೂ ಸಾಕು, ಒಂದು ಸಾಂಬಾರ್ ಮಾಡಬಹುದಲ್ಲ.."

ಅಂದಷ್ಟು ಹಲಸಿನಸೊಳೆ ಸಿಕ್ಕಿತು, ದಪ್ಪ ದಪ್ಪ ದೊಡ್ಡದಾದ ಸೊಳೆಗಳು. ನಮ್ಮ ಈ ದಿನದ ಪದಾರ್ಥಕ್ಕೆ ಯತೇಚ್ಛ ಆಯ್ತು.

ಹಲಸಿನ ಸೊಳೆಯನ್ನು ಸಾಂಬಾರಿಗೆ ಬಳಸುವ ವಾಡಿಕೆ ದೊಡ್ಡ ಭೋಜನಕೂಟಗಳಲ್ಲಿ ಈಚೀಚೆಗೆ ಆರಂಭವಾಗಿದೆ. ಹೆಚ್ಚಿನ ತರಕಾರಿಗಳು ರಾಸಾಯನಿಕಗಳಿಂದ ರಕ್ಷಿಸಲ್ಪಟ್ಟು ತಿನ್ನುವ ಯೋಗ್ಯತೆಯನ್ನು ಕಳೆದುಕೊಂಡಿವೆ. ಇಂತಹ ಸಮಯದಲ್ಲಿ ವಿಷಮುಕ್ತ ತರಕಾರಿ ಹಲಸನ್ನು ನಾವು ಮಗಳ ಮದುವೆಯಲ್ಲಿ ಹಲಸಿನ ಗುಜ್ಜೆ ಸಾಂಬಾರ್ ಬಡಿಸಿ ಯಶಸ್ವಿಯಾಗಿದ್ದನ್ನು ಮರೆಯಲುಂಟೆ?

" ಗುಜ್ಜೆ ಸಾಂಬಾರ್ ಾಡಿದ್ದು ಹೇಗೆ ಗಣಪಣ್ಣ? ಎಲ್ಲರಿಂದಲೂ ಹೊಗಳಿಕೆ ಸಿಕ್ಕಿತು ನೋಡು.. " ನಾನು ಕೇಳಿದಾಗ,
" ಅದರಲ್ಲಿ ವಿಶೇಷ ಏನೂ ಇಲ್ಲ, ನಾವು ಮಾಮೂಲಿಯಾಗಿ ಸಾಂಬಾರ್ ಮಾಡುವ ಹಾಗೇ.. ತೊಗರಿಬೇಳೆ ಹಾಕಿ, ಮೆಣಸು ಕೊತ್ತಂಬ್ರಿ ಹುರಿದು.. "
" ಸರಿ ಬಿಡು, ಗೊತ್ತಾಯ್ತು.. "


ಈಗ ಸಾಂಬಾರ್ ಮಾಡೋಣ.

ಹಲಸಿನ ಸೊಳೆಗಳು, ದೊಡ್ಡ ಗಾತ್ರದಲ್ಲಿ ಕತ್ತರಿಸಿ,. ಒಂದು ಸೊಳೆ ಎರಡು ತುಂಡಾದರೆ ಸಾಕು.
ಎರಡು ಹಿಡಿ ತೊಗರಿಬೇಳೆ, ತೊಳೆದು, ಹತ್ತು ನಿಮಿಷ ನೆನೆಸಿಟ್ಟು ಮೆತ್ತಗೆ ಬೇಯಿಸಿ.
ತೊಗರಿಬೇಳೆ ಬೆಂದ ನಂತರ ಹಲಸಿನ ಸೊಳೆಯನ್ನು ಉಪ್ಪು, ಹುಳಿ, ಚಿಟಿಕೆ ಅರಸಿಣ ಸಹಿತವಾಗಿ ಬೇಳೆಯೊಂದಿಗೆ ಬೇಯಿಸಿ. ಕುಕ್ಕರ್ ಬೇಕಿಲ್ಲ, ಒಂದು ಕುದಿ ಬಂದಾಗ ಹಲಸಿನ ಸೊಳೆ ಬೆಂದಿದೆ ಎಂದೇ ತಿಳಿಯಿರಿ. ಹಲಸಿನ ಗುಜ್ಜೆ ಈ ವೇಗದಲ್ಲಿ ಬೇಯಲಾರದು, ಕುಕ್ಕರ್ ಒಂದೆರಡು ಸೀಟಿ ಹಾಕಲೇಬೇಕು.

ಅರ್ಧ ಕಡಿ ತೆಂಗಿನತುರಿ
ನಾಲ್ಕಾರು ಒಣಮೆಣಸು, ಖಾರ ಇಷ್ಟಪಡುವವರು ತರಕಾರಿ ಬೇಯುವಾಗ ಮೆಣಸಿನ ಹುಡಿ ಹಾಕಿಕೊಳ್ಳಬಹುದಾಗಿದೆ.
ಒಂದು ಚಮಚ ಉದ್ದಿನಬೇಳೆ,
ಎರಡು ಚಮಚ ಕೊತ್ತಂಬರಿ,
ಸ್ವಲ್ಪ ಜೀರಿಗೆ, ಮೆಂತೆ,
ಉದ್ದಿನಕಾಳಿನಷ್ಟು ಇಂಗು,
ಒಂದೆಸಳು ಕರಿಬೇವು.
ಇಷ್ಟೂ ಸಾಮಗ್ರಿಗಳನ್ನು ತುಸು ತೆಂಗಿನ ಎಣ್ಣೆಪಸೆಯಲ್ಲಿ ಫರಿಮಳ ಬರುವಂತೆ ಹುರಿಯತಕ್ಕದ್ದು,
ತೆಂಗಿನತುರಿಯೊಂದಿಗೆ ಅರೆಯತಕ್ಕದ್ದು.
ಅರೆಯುವಾಗ ನೀರು ಕಡಿಮೆ ಬಳಸಿದಷ್ಟೂ ಮಸಾಲೆಗೆ ಪರಿಮಳ ಜಾಸ್ತಿ.

ತೆಂಗಿನ ಅರಪ್ಪನ್ನು ಬೇಯಿಸಿಟ್ಟ ಹಲಸು ತೊಗರಿಬೇಳೆಯ ಮಿಶ್ರಣಕ್ಕೆ ಕೂಡಿಸಿ.
ಬೇಕಿದ್ದರೆ ಈ ಹಂತದಲ್ಲಿ ಉಪ್ಪು ಹಾಕಬಹುದಾಗಿದೆ.
ಬೆಲ್ಲ ಬೇಕಿಲ್ಲ,
ಕುದಿಸಿ, ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಹಾಕುವಲ್ಲಿಗೆ ಸಾಂಬಾರ್ ಸಿದ್ಧವಾಗಿದೆ, ಅನ್ನದೊಂದಿಗೆ ಸವಿಯಿರಿ.



Sunday, 25 August 2019

ಖರ್ಜೂರದ ಗೊಜ್ಜು





ರಾತ್ರಿ ಮಲಗುವ ಮೊದಲು ಮುಂಜಾನೆಯ ಚಪಾತಿಗಾಗಿ ಹಿಟ್ಟು ಕಲಸುತ್ತಿದ್ದಾಗಲೇ “ ನಾಳೆ ಇದರೊಂದಿಗೆ ಕೂಡಿ ತಿನ್ನಲು ಏನನ್ನು ಮಾಡಲಿ? " ಎಂಬ ಚಿಂತೆ.

 ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದ ಸಂಕ್ರಾಂತಿಯ ಅನ್ನಸಂತರ್ಪಣೆಯ ನಂತರ ಉಳಿಕೆಯಾದ ಮಾಲುಗಳಲ್ಲಿ ಶುಂಠಿ ಹಸಿಮೆಣಸುಗಳು ಬುಟ್ಟಿಯಲ್ಲಿ ಬಿದ್ದಿವೆ. ಏನೋ ಒಂದು ಪುಳಿಂಜಿ ಮಾಡೋಣ.

ಮುಂಜಾನೆ ಶುಂಠಿ ಹಸಿಮೆಣಸುಗಳನ್ನು ಚಿಕ್ಕದಾಗಿ ಹೆಚ್ಚುತ್ತಿದ್ದಾಗ ಜಾಡಿಯಲ್ಲಿ ಖರ್ಜೂರ ಇದೆಯೆಂಬ ನೆನಪಾಯ್ತು. ಪಾಯಸ ಮಾಡೋಣಾಂತ ತೆಗೆದಿರಿಸಿದ್ದು, ಮರೆತೇ ಹೋಗಿತ್ತು ಕಣ್ರೀ..
ಒಂದು ಹಿಡಿ ಖರ್ಜೂರಗಳ ಬೀಜ ಬಿಡಿಸಿ ಇಟ್ಟಾಯ್ತು. ಮಿಕ್ಸಿಯೊಳಗೆ ರೊಂಯ್ ಎಂದು ತಿರುತಿರುಗಿ ಖರ್ಜೂರ ಮುದ್ದೆಯಾಯಿತು.

ಇದೇ ಥರ ಹೆಚ್ಚಿಟ್ಟ 2 ಹಸಿಮೆಣಸು, ಇಂಚು ಉದ್ದದ ಶುಂಠಿಯೂ ಪುಡಿ ಆಗಿ ಬಿಟ್ಟಿತು.

ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ತುಪ್ಪ ಉತ್ತಮ, ಸಾಸಿವೆ ಸಿಡಿಸಿ, ಹಸಿಮೆಣಸು ಶುಂಠಿ ಪೇಸ್ಟ್ ಯಾ ಪುಡಿಯನ್ನು ಹಾಕಿ ಬಾಡಿಸಿ.
ಮೆಣಸಿನ ಖಾರ ಹೂರ ಹೊಮ್ಮಿದಾಗ ಖರ್ಜೂರದ ಮುದ್ದೆ ಬಿದ್ದಿತು.ಮೇಲಿನಿಂದ ಒಂದು ಲೋಟ ನೀರು ಎರೆಯಿರಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ, ನೆಲ್ಲಿಗಾತ್ರದ ಹುಣಸೆಯ ಹುಳಿಸೇರಿಸಿ, ಕುದಿಯಲಿ. ಬೆಲ್ಲದ ಸಿಹಿ ನಿಮ್ಮ ಬಾಯಿರುಚಿಗನುಸಾರ ಹಾಕಿಕೊಳ್ಳತಕ್ಕದ್ದು.

" ತಿಂಡಿ ತೀರ್ಥ ಮಾಡಿದ್ದಾಯಿತೇ? " ಕೇಳುತ್ತ ವಾಕಿಂಗ್ ಮುಗಿಸಿ ಬಂದ ಗೌರತ್ತೆ. ಈಗ ವಾಕಿಂಗ್ ದೂರ ಹೋಗುವುದಕ್ಕಿಲ್ಲ, ಮನೆಯ ಆವರಣದಲ್ಲೇ ಇರುವ ನಾಗಬನವೂ ಶ್ರೀದೇವಿ ಕ್ಷೇತ್ರವೂ ಗೌರತ್ತೆಯ ನೆಚ್ಚಿನ ತಾಣ.

"ಬಟ್ಟಲಲ್ಲಿ ಚಪಾತಿ ಇಟ್ಕೊಳ್ಳಿ, ಮೇಲಿನಿಂದ ಗೊಜ್ಜು.. "
" ಆಯ್ತು, ಆಯ್ತೂ.. ಗರಂ ಗರಂ ಆದ ಹಾಗಿದೆ.. "
" ಹೌದ, ತಪಲೆ ತುಂಬ ಮೊಸರು ಉಂಟಲ್ಲ.. "
" ಸರಿ, ಬಿಸಿ ಕಾಫಿ ಬರಲಿ..
"ಉಳಿದರೆ ಮಧ್ಯಾಹ್ನಕ್ಕೂ ಆದೀತು, ಬೆಳ್ಳುಳ್ಳಿ ಇರಲಿಲ್ಲವೇ, ಹಾಕಬಹುದಿತ್ತು.. "
" ಇತ್ತು, ನೆನಪಾಗಲಿಲ್ಲ.. "
" ಇನ್ನೊಮ್ಮೆ ಮಾಡುವಾಗ ನೀರು ಗೊಜ್ಜು ಬೇಡ, ಮೊಸರು ಹಾಕಿ ಇಡು, ಅದ್ಭುತ ಹೊಸರುಚಿ ಆಗ್ತದೆ, ಖರ್ಜೂರ ಜಾಸ್ತಿ ಹಾಕು.." ಪುಕ್ಕಟೆ ಸಲಹೆ ದೊರೆಯಿತು.





Monday, 19 August 2019

ಮಾಂಬಳ ಸಾರು





ಅಡುಗೆಯ ಕಥಾನಕದಲ್ಲಿ ಇವತ್ತು ಮಾಂಬಳ ಸಾರು ಬಂದಿದೆ. ಸಾರು ಎಲ್ಲರಿಗೂ ಗೊತ್ತು, ಮಾಂಬಳ ಅಂದ್ರೇನಪಾ ಅಂತ ತಲೆ ಕೆಡಿಸ್ಕೋಬೇಡಿ. ನಮ್ಮ ಗ್ರಾಮೀಣ ಫ್ರದೇಶಗಳಲ್ವಿ, ಮಾವಿನ ಮರಗಳ ಸಾಲು ಇರುವಲ್ಲಿ ಈ ಪ್ರಶ್ನೆ ಏಳದು. ಮಳೆಗಾಲದ ಉಪಯೋಗಕ್ಕಾಗಿ ಮಾವಿನ ಹಣ್ಣುಗಳ ರಸವನ್ನು ಬಿಸಿಲಿನಲ್ಲಿ ಒಣಗಿಸಿ ಚಾಕಲೇಟ್ ತರಹ ಮಾಡಿ ಇಟ್ಟರೆ ಮಾಂಬಳ ಆಯ್ತು. ಬಿಸಿಲು ಸಿಗದೇ ಇದ್ದರೆ ಬಾಣಲೆಗೆ ಎರೆದು ಒಲೆಯಲ್ಲಿ ಕಾಯಿಸಿ ದಪ್ಪ ಮಾಡಿಟ್ಟು ಕೂಡಾ ಉಪಯೋಗಿಸಬಹುದಾಗಿದೆ. ತಂಪು ಪೆಟ್ಟಿಗೆಯಲ್ಲಿ ಕೆಡದೇ ಉಳಿಯುವ ಮಾಂಬಳ ಮಹಾನಗರಗಳಲ್ಲಿ ಕೂಡಾ ಸಿಗುತ್ತದೆ ಎಂಬ ವಾರ್ತೆ ನಗರವಾಸಿಗಳಾಗಿರುವ ನಮ್ಮ ಮಕ್ಕಳಿಂದ ತಿಳಿಯಿತು. ಯಾವುದಕ್ಕೂ ಒಮ್ಮೆ ಸಮೀಪದಲ್ಲಿರುವ ಮಂಗಳೂರು ಸ್ಟೋರುಗಳಲ್ಲಿ ವಿಚಾರಿಸಿದರಾಯಿತು.

ಇರಲಿ, ಈಗ ಮಾಂಬಳ ಸಾರು ಮಾಡೋಣ.

ನಿನ್ನೆ ಸಂಕ್ರಾಂತಿಯ ಪ್ರಯುಕ್ತ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಂಜೆಯ ಹೊತ್ತು ದುರ್ಗಾಪೂಜೆ, ಕುಂಕುಮಾರ್ಚನೆ, ಹೂವಿನ ಪೂಜೆ, ಭಕ್ತಾದಿಗಳಿಂದ ಸಾಮೂಹಿಕ ಭಜನೆ ಸಹಿತವಾಗಿ ಅನ್ನಸಂತರ್ಪಣೆ ಇದ್ದಿತು.

ರಾತ್ರಿಯಲ್ಲವೇ, ಅನ್ನಪ್ರಸಾದದ ಪಾಯಸದೂಟ ಸ್ವೀಕರಿಸಿದ್ದಾಯ್ತು. ಬೆಳಗೂ ಆಯ್ತು ಅನ್ನಿ, ಬೆಂಗಳೂರು ತಲಪಬೇಕಾಗಿದ್ದ ಮಕ್ಕಳ ಸೈನ್ಯ ಮುಂಜಾನೆಯೇ ತೆಳ್ಳವು, ಬೆಲ್ಲಸುಳಿ ತಿಂದು ಕಾಫಿ ಪೇಯ ಉದರಕ್ಕಿಳಿಸಿ ಹೊರಟಿತು.

ಎಂದಿನಂತೆ ನಮ್ಮ ದಿನಚರಿ ಪ್ರಾರಂಭ.
" ಏನಾದ್ರೂ ಸಿಂಪಲ್ಲಾಗಿ ಅಡುಗೆ ಮಾಡು.. " ನಮ್ಮವರ ಹುಕುಂ ಬಂದಿತು.
" ಇಷ್ಟೂ ನಿನ್ನೆಯ ಔತಣದೂಟ ಉಳಿದಿದೆಯಲ್ಲ, ಬಿಸಿ ಮಾಡಿ ಉಣಬಹುದಿತ್ತು.. "
" ಅದನ್ನೆಲ್ಲ ಹೊರಗೆ ಇಡು... ತೆಗೆದುಕೊಂಡು ಹೋಗುವವರು ಇದಾರಲ್ಲ. " ಉಳಿಕೆಯಾದ ಭೋಜನ ಕಾರ್ಮಿಕ ವರ್ಗದವರೊಳಗೆ ಹಂಚಲ್ಪಟ್ಟಿತು.

" ಎಂತದು ಸಿಂಪಲ್ ಅಡುಗೆ ? "
" ಮಾಂಬಳ ಮಾಡಿಟ್ಕೊಂಡಿದೀಯಲ್ಲ, ಅದನ್ನೇ ಸಾರು ಮಾಡಿದ್ರಾಯ್ತು. ಮಳೆ ಬರುವಾಗ ಇಂತಹ ಸಾರು ಚೆನ್ನಾಗಿರುತ್ತೆ. " ಗೌರತ್ತೆ ಸಿಂಪಲ್ ಉತ್ತರ ಕೊಟ್ಟರು.

ಮಾಂಬಳ ತಂಪು ಪೆಟ್ಟಿಗೆಯಿಂದ ಹೊರ ಬಂದಿತು, ನಮ್ಮ ಅಗತ್ಯಕ್ಕನುಸಾರ ಒಂದು ಚಾಕಲೇಟ್ ಗಾತ್ರದಷ್ಟು ಚೂರಿಯಲ್ಲಿ ಕತ್ತರಿಸಿ ಒಂದಷ್ಟು ನೀರೆರೆದು ಇಡುವುದು. ಮಾಂಬಳವು ನೀರಿನಲ್ಲಿ ನೆನೆ ನೆನೆದು ಮಾವಿನ ಗೊಜ್ಜು ಆಯ್ತು.
ತಪಲೆಯಲ್ಲಿ ನೀರು ಎರೆದು, ಮಾವಿನ ಗೊಜ್ಜು ಸೇರಿಸಿ ಸಾರು ಎಂದಾಗಲಿ, ರುಚಿಗೆ ತಕ್ಕಷ್ಟು ಉಪ್ಪು, ಸಿಹಿಗೆ ಬೇಕಿದ್ದಷ್ಟು ಬೆಲ್ಲದೊಂದಿಗೆ ಕುದಿಯಲಿ.
" ಒಂದು ಹಸಿಮೆಣಸು ಸಿಗಿದು ಹಾಕೂ... " ಎಂದರು ಗೌರತ್ತೆ.
" ಒಗ್ಗರಣೆ ಬೇಡವೇ.. "
" ಅದೆಲ್ಲ ಬೇಡ.. ಆಯ್ತಲ್ಲ ಅಡುಗೆಯ ಅಟ್ಟಣೆ.. "





Saturday, 10 August 2019

ಪಲ್ಯ









ದೊಡ್ಡದಾದ ಕ್ಯಾಬೇಜ್, ಪಲ್ಯ ಮಾಡ ಹೊರಟರೆ ನಾಲ್ಕು ದಿನಕ್ಕೆ ಬಂದೀತು. ಕತ್ತರಿಸಿ ಇಟ್ಟರೆ ಹೆಚ್ಚು ದಿನ ಉಳಿಯದು. ಅರ್ಧ ಕ್ಯಾಬೇಜನ್ನು ಒಂದೇ ದಿನ ಮುಗಿಸುವ ಉಪಾಯ ಹೇಗೆ?

ಎಂದೋ ಒಮ್ಮೆ ಮನೆಯಿಂದ ಹೊರ ಹೋಗಿದ್ದಾಗ ಪುತ್ತೂರಿನ ಹೋಟಲ್ ಊಟದ ನೆನಪಾಯ್ತು. ಒಂದು ಹಿಡಿ ಅನ್ನ ಉಣಲಿಕ್ಕೆ ವೈವಿಧ್ಯಮಯ ಕೂಟುಗಳು, ಎಲ್ಲವೂ ಖಾರದ ಕೊಳ್ಳಿ. ಇದನ್ನೆಲ್ಲ ಉಣ್ಣುತ್ತ ಹೋದರೆ ದೇಹದ ನವರಂಧ್ರಗಳಲ್ಲೂ ಉರಿ ಎದ್ದೀತು ಅಂತಿದ್ದಾಗ ಒಂದು ಪುಟ್ಟ ಬಟ್ಟಲಲ್ಲಿ ಕ್ಯಾಬೇಜ್ ಪಲ್ಯ ಕಂಡಿತ್ತು. ಚಿಕ್ಕದಾಗಿ ಒಂದೇ ಮಾದರಿಯ ಕ್ಯಾಬೇಜ್ ಚೂರುಗಳು, ಪಲ್ಯಕ್ಕೆ ಆಕರ್ಷಕ ನೋಟವೂ ಕತ್ತರಿಸುವ ವಿಧಾನದಲ್ಲಿ ಸಿಗುತ್ತೇಂತ ಇಲ್ಲಿ ತಿಳಿಯಿತು. ಏನೂ ಹಾಕಿಲ್ಲ, ಕೇವಲ ಉಪ್ಪು ಹಾಗೂ ಎಲ್ಲೋ ದೂರದಲ್ಲಿ ಒಗ್ಗರಣೆ ಸಿಡಿಸಿದಂತಿತ್ತು. ನಾನು ಈ ಕ್ಯಾಬೇಜ್ ಪಲ್ಯವನ್ನು ಮೊಸರು ಬೆರೆಸಿ ಉಂಡು ಎದ್ದಿದ್ದು ಕಣ್ರೀ..

ಕ್ಯಾಬೇಜ್ ಅರ್ಧ ಹೋಳಾಯ್ತು. ಅಂದ ಹಾಗೆ ಸಂತೆ ತರಕಾರಿಗಳನ್ನು ಚೆನ್ನಾಗಿ ತೊಳೆಯುವ ಅಗತ್ಯವಿದೆ. ಹೆಚ್ಚಿಟ್ಟ ನಂತರ ತೊಳೆಯುವುದಲ್ಲ. ಅಡುಗೆಮನೆಯ ಉಪ್ಪು ಇದೆಯಲ್ಲ, ತರಕಾರಿಗಳಲ್ಲಿ ಬೆಳೆಗಾರರು ಯಾ ಮಾರಾಟಗಾರರು ಸಿಂಪಡಿಸಿರಬಹುದಾದ ರಾಸಾಯನಿಕಗಳನ್ನು ನಿವಾರಿಸಲು ಸಹಾಯಕ. ನೀರಿಗೆ ಉಪ್ಪು ಬೆರೆಸಿ ತರಕಾರಿಗಳನ್ನು ತೊಳೆಯಿರಿ. ಅರ್ಧಗಂಟೆ ಉಪ್ಪು ನೀರಿನಲ್ಲಿ ಇರಿಸಿದರೂ ಆದೀತು. ಒಣಬಟ್ಟೆಯಲ್ಲಿ ಒರೆಸಿ ಓರಣವಾಗಿರಿಸಿಕೊಳ್ಳಿ.

ಈಗ ಅದೇ ಮಾದರಿಯ ಪಲ್ಯ ಮಾಡೋಣ. ನಮ್ಮ ಬಳಿ ಹೋಟಲ್ ಮಾದರಿಯ ಕಟ್ಟಿಂಗ್ ಮೆಶೀನ್ ಇಲ್ಲ. ಇರುವ ಚೂರಿಯಿಂದ ಕಟ್ ಕಟ್ ಆಯ್ತು. ಜಾಲರಿ ಬಟ್ಟಲಲ್ಲಿ ತುಂಬಿಸಿ ನೀರಿನ ಕೆಳಗೆ ಹಿಡಿದು ಇನ್ನೊಮ್ಮೆ ತೊಳೆದಿರಿಸುವುದು ಉತ್ತಮ.

ಕುಕರ್ ಒಳಗೆ ರುಚಿಗೆ ಉಪ್ಪು ಸಹಿತವಾಗಿ ತುಂಬಿಸಿ,
ಚಿಟಿಕೆ ಅರಸಿಣವನ್ನೂ ಬೆರೆಸಿ,
ಒಂದು ಸೀಟಿ ಕೂಗಿಸಿ,
ನಿಧಾನವಾಗಿ ವೆಯಿಟ್ ತೆಗೆಯಿರಿ.
ಬೇಯಲು ನೀರು ಹಾಕೋದು ಬೇಡ,
ಪುಟ್ಟ ಒಗ್ಗರಣೆ, ಕೇವಲ ಸಾಸಿವೆಕಾಳು ಸಿಡಿಸಿ.
ಪಲ್ಯ ಆಗೇ ಹೋಯ್ತು.

ವಿದ್ಯುತ್ ಸಂಪರ್ಕ ಇಲ್ಲ, ಮಳೆಯೋ ಮಳೆ. ಕಟ್ಸಾರು ಹಾಗೂ ಕ್ಯಾಬೇಜ್ ಪಲ್ಯದೂಟ.

ವಿದ್ಯುತ್ ಇಲ್ಲದೆ ಟೀವಿ ವೀಕ್ಷಣೆ ತಪ್ಪಿ ಹೋಗಿ ಗೌರತ್ತೆ ಹಳೇ ಪತ್ರಿಕೆಗಳ ಓದುವಿಕೆಗೆ ಮುಂದಾದರು. ಓದುತ್ತ " ಈ ಲೇಖನ ನೀನೂ ಓದು..."

ಓದುತ್ತ ನನ್ನ ತಲೆ ಗಿರ್್ರ ಎಂದಿತು.. ಮಾರುಕಟ್ಟೆಯಲ್ಲಿ ದೊರೆಯುವ ಅಡುಗೆಯ ಎಣ್ಣೆಗಳ ಪರಿಶುದ್ಧತೆಯನ್ನು ಪ್ರಶ್ನಿಸುವೋಪಾದಿಯಲ್ಲಿ ಆ ಲೇಖನ ಬಂದಿತ್ತು.

ಮಾರನೇ ದಿನ ಇದೇ ಪ್ರಯೋಗದಲ್ಲಿ ತೊಂಡೆಕಾಯಿ ಪಲ್ಯ ಗೆದ್ದು ಬಂದಿತು. ಬದಲಾವಣೆ ಏನಪ್ಪಾ ಅಂದ್ರೆ ಎಣ್ಣೆಯ ಒಗ್ಗರಣೆ ಹಾಕದಿರುವುದು, ತೆಂಗಿನತುರಿಯೊಂದಿಗೆ ಹಸಿ ಅರಸಿಣದ ತುಂಡನ್ನು ಅರೆದು ಸೇರಿಸಿದ್ದು ಅಷ್ಟೇ. ಅರಸಿಣ ಆರೋಗ್ಯಕ್ಕೆ ಒಳ್ಳೆಯದು ಅಂತಾರಲ್ಲ, ಪ್ಯಾಕೆಟ್ ಅರಸಿಣಹುಡಿಯನ್ನು ನಂಬುವಂತಿಲ್ಲ, ಮನೆಯಲ್ಲೇ ಬೆಳೆದ ಅರಸಿಣ ಗೆಡ್ಡೆಯ ಚಿಕ್ಕ ಚೂರನ್ನು ಪಲ್ಯದೊಂದಿಗೆ ಸೇವಿಸಿದರೇನೇ ರುಚಿ ವ್ಯತ್ಯಾಸ ತಿಳಿದೀತು.


Friday, 2 August 2019

ಜೇನು ತುಳುವ








ಇವತ್ತು ಹೊಸತೊಂದು ಹಲಸಿನಫಲ ತಿಂದೆವು. ತುಳುವ ಹಲಸು, ಹಣ್ಣು ಮೆತ್ತಗಾಗಿ ಕೈಯಿಂದಲೇ ಬಿಡಿಸಿ, ಒಳಗಿನ ಸೊಳೆಯನ್ನು ತೆಗೆದು ಗುಳುಕ್ ಎಂದು ಬಾಯಿಗೆ ಹಾಕಿಕೊಂಡಾಗ ಜೇನಿನ ಸವಿ.

ಅಂದ ಹಾಗೆ ಇದೇನೂ ಹೊಸಫಲವಲ್ಲ, ನಾವು ಕೊಯ್ದಿಲ್ಲ, ತಿಂದಿಲ್ಲ ಅಷ್ಟೇ. ಕಳೆದ ನಾಲ್ಕಾರು ವರ್ಷಗಳಿಂದ ಯಾರೂ ಕೇಳುವವರಿಲ್ಲದೆ ಉದುರಿ ಬಿದ್ದು ಕೊಳೆತು ಮಣ್ಣಿನೊಂದಿಗೆ, ಇಲ್ಲವೇ ಹರಿಯುವ ನೀರಿನೊಂದಿಗೆ ಸೇರುತ್ತಿದ್ದ ಹಲಸಿನ ಹಣ್ಣು. ಹಲಸಿನ ಮರವು ಈಗ ದೇವಾಲಯ ನಿರ್ಮಾಣದೊಂದಿಗೆ ಮನುಷ್ಯ ಸಂಚಾರಯೋಗ್ಯವಾಗಿ ಪರಿವರ್ತಿತವಾದ ಹಿರಣ್ಯದ ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ನಾಗಬನದ ಆವರಣದೊಳಗೆ ಸುರಕ್ಷಿತವಾಗಿದೆ.  

ಈಗ ಆಷಾಢ ಮಾಸ, ನಮ್ಮ ಕಡೆ ಆಟಿ ತಿಂಗಳು, ಹಿಂದಿನ ಕಾಲದಲ್ಲಿ ತಿನ್ನಲು ಆಹಾರ ಸಿಗದ ಸಮಯ ಇದಾಗಿದ್ದು ಆಟಿ ತಿಂಗಳಲ್ಲಿ ಸಿಗುವ ಹಲಸಿನ ಫಲಕ್ಕೆ ವಿಶೇಷ ಮರ್ಯಾದೆ ಇದ್ದ ಕಾಲವೊಂದಿತ್ತು ಎಂಬುದನ್ನೂ ಮರೆಯಲಾಗದು.

ಫುಟ್ ಬಾಲ್ ಚೆಂಡಿನಂತೆ ಗಾತ್ರವೂ ಚಿಕ್ಕದು, ಹೊತ್ತು ತರಲು ಶ್ರಮವೂ ಇಲ್ಲ, ಬಿಡಿಸಿ ತಿನ್ನಲು ತಿಳಿದಿದ್ದರಾಯಿತು. ಚಿಕ್ಕ ಸಂಸಾರಕ್ಕೆ ಚೊಕ್ಕ ಫಲ.