ಅತ್ತೇ, ಮುಂದಿನ ಆದಿತ್ಯವಾರ, ನೆನಪಿದೆ ತಾನೇ... " ಸುಬ್ರಹ್ಮಣ್ಯದಿಂದ ವೆಂಕಟೇಶ್ ಕರೆ ಬಂದಿತು.
ಸೋದರಳಿಯ " ಬನ್ನೀ... " ಅನ್ನುತ್ತಿರುವಾಗ ಹೊರಡದಿದ್ದರೆ ಹೇಗೆ? ಭಾನುವಾರ ಮುಂಜಾನೆ ಹಲಸಿನಹಣ್ಣಿನ ಕೊಟ್ಟಿಗೆ ತಿಂದು ಸುಬ್ರಹ್ಮಣ್ಯಕ್ಕೆ ಹೊರಟೆವು. ಈಗ ರಸ್ತೆ ಚೆನ್ನಾಗಿದೆಯಾದರೂ ಮುಳಿಗದ್ದೆಯಿಂದ ಸುಬ್ರಹ್ಮಣ್ಯಕ್ಕೆ ಸರಿಸುಮಾರು ಮೂರು ಗಂಟೆಯ ಪ್ರಯಾಣ.
ಜೊತೆಗೆ ಬಂದಿದ್ದ ಉಷಕ್ಕನ ಫ್ಯಾಮಿಲಿ ದೇವಸ್ಥಾನಕ್ಕೆ ಹೋಗ್ಬಿಟ್ಟೇ ಮನೆಗೆ ಹೋಗೋಣ ಅಂದರು. ದೇಗುಲದರ್ಶನ ಮಾಡಿಕೊಂಡು ಮನೆ ತಲಪುವಾಗ ಗಂಟೆ ಹನ್ನೆರಡಾಗಿತ್ತು.
ನೆಂಟರಿಷ್ಟರು ಆಗಲೇ ಜಮಾಯಿಸಿದ್ದರು. ಚಹಾ ಸ್ವೀಕರಿಸಿ, ಗುರುತು ಪರಿಚಯದವರೊಡನೆ ಮಾತನಾಡಿ, ವಾರಪತ್ರಿಕೆಯೊಂದರ ಪುಟ ಬಿಡಿಸಿ, ಮನೆಯ ಸುತ್ತಮುತ್ತಲಿನ ಹೂಗಿಡಗಳ ಅಲಂಕರಣವನ್ನು ನೋಡುತ್ತ, ರಂಬುಟಾನ್ ಹಣ್ಣಿನ ಮರದ ಹಣ್ಣುಗಳೇನಾದುವು ಎಂದು ವಿಚಾರಿಸಿದಾಗ, "ಎಲ್ಲವೂ ಮಂಗಗಳ ಪಾಲಾಯ್ತು. " ಎಂದಳು ಮನೆಯೊಡತಿ ಸ್ವಪ್ನ.
ಊಟದ ವೇಳೆ, ಭೋಜನಕೂಟವೆಂದರೆ ಕೇಳಬೇಕೇ, ಬಾಳೆಲೆಯ ಮೇಲೆ ಖಾದ್ಯಗಳು ಬಂದಿಳಿದುವು. ದಿನವೂ ನಾನೇ ಮಾಡಿದಂತಹ ಅಡುಗೆಯನ್ನು ತಿಂದು ಜಡ್ಡುಗಟ್ಟಿದಂತಹ ನಾಲಿಗೆಗೆ ಇಂತಹ ಭೋಜನಕೂಟಗಳು ಬಾಯಿ ಚಪಲವನ್ನೂ ಎದ್ದೇಳಿಸುವಂತಹವುಗಳು, ಹೊಸರುಚಿಗಳನ್ನು ಸವಿಯುವ ಹಾಗೂ ಕಲಿಯುವ ಸೌಭಾಗ್ಯ.
" ಮೆಣಸ್ಕಾಯೀ... " ಅನ್ನುತ್ತ ಪ್ರಸಾದ್ ಬಂದ, ಕಣ್ಣು ಹಾಯಿಸಿದಾಗಲೇ ತಿಳಿಯಿತು, ಅಂಬಟೆ ಮೆಣಸ್ಕಾಯಿ. ಈಗ ಅಂಬಟೆಯ ಕಾಲ.
ನಿನ್ನೆ ತಾನೇ ಚೆನ್ನಪ್ಪ ಅಂದಿದ್ದ, " ಅಕ್ಕ, ಪೇಟೆಯ ಅಂಬಟೆ ಮಿಡಿ ಕೇಜೀಗೆ ಎಂಭತ್ತು ರುಪಾಯಿ... "
" ಹೌದ, ನಾವೂ ಸ್ವಲ್ಪ ಅಂಬಟೆ ಮಿಡಿ ಕೊಯ್ದು ಉಪ್ಪಿನಲ್ಲಿ ಹಾಕಿಟ್ಟುಕೊಳ್ಳೋಣ. "
ಮೆಣಸ್ಕಾಯಿ ಉಣ್ಣುತ್ತ ಇದೇ ಮಾದರಿಯ ಮೆಣಸ್ಕಾಯಿ ಮನೆಗೆ ಹೋಗ್ಬಿಟ್ಟು ಮಾಡಬೇಕು ಎಂದೂ ಅಂದ್ಕೊಂಡಿದ್ದಾಯ್ತು. ಅದೇ ವೇಳೆಗೆ ವೆಂಕಟೇಶ್ ಬಂದ, " ನೋಡೂ, ಈ ಅಂಬಟೆಯ ಮೆಣಸ್ಕಾಯಿ ಫಸ್ಟಾಗಿದೆ, ಒಂದು ಫೋಟೋ ತೆಗೆದಿಟ್ಟಿರು... ನಾನು ಬ್ಲಾಗಿನಲ್ಲಿ ಹಾಕ್ತೇನೆ. "
" ಸರಿ ಅತ್ತೇ, ವಾಟ್ಸಾಪಿನಲ್ಲಿ ಕಳಿಸ್ತೇನೆ. " ವೆಂಕಟೇಶನ ಐಫೋನ್ ಕೆಮರಾ ಅಡುಗೆಶಾಲೆಗೆ ಹೋಯಿತು.
ಊಟದ ತರುವಾಯ, " ಅತ್ತೇ, ಮೆಣಸ್ಕಾಯಿ ಮಾಡುವ ವಿಧಾನ ಕೇಳಿದ್ರಾ... "
" ಅದನ್ನೇ ಕೇಳಬೇಕೀಗ, ನಾವು ಎಷ್ಟೇ ಚೆನ್ನಾಗಿ ಮಸಾಲೆ ಹುರಿದ್ರೂ ಈ ಪಾಕ ಬರೂದಿಲ್ಲ. "
ಅಡುಗೆ ಗಣಪಣ್ಣ ಖುಷ್ ಖುಷಿಯಿಂದ ಹೇಳಿದ್ದು ಹೀಗೆ,
" ಉದ್ದಿನಬೇಳೆ ಜಾಸ್ತಿ ಹಾಕ್ಬೇಕು... ತೆಂಗಿನಕಾಯಿ ತುಂಬ ಹಾಕಬಾರದು... ಕೊತ್ತಂಬರಿ ಬೇಡ... ಜೀರಿಗೆ ಇರಲಿ... ಎಳ್ಳು ಜಾಸ್ತಿ ಹಾಕಿ... ಉಪ್ಪು ಹುಳಿ ಬೆಲ್ಲ ಸ್ಟ್ರಾಂಗ್ ಆಗಿರಬೇಕು... " ಹೇಳುತ್ತ ಗಣಪಣ್ಣ ನನಗಾಗಿ ಜಾಡಿ ತುಂಬ ಮೆಣಸ್ಕಾಯಿ ತುಂಬಿಸಿಯೂ ಕೊಟ್ಟ!
" ಇಷ್ಟೂ ಮೆಣಸ್ಕಾಯಿ ಯಾಕೆ? ಮನೆಯಲ್ಲಿ ನಾವಿಬ್ಬರೇ ಇರೂದಲ್ವ... "
" ಇರಲಿ, ವಾರವಾದರೂ ಹಾಳಾಗುವುದಿಲ್ಲ. "
ಈಗ ಮಾಡೋಣ.
ಹತ್ತು ಹನ್ನೆರಡು ಅಂಬಟೆಗಳನ್ನು ಬೇಯಿಸಿ, ಉಪ್ಪು ಹಾಗೂ ಬೆಲ್ಲ ಹಾಕಿರಿ. ಬೆಲ್ಲವೂ ಕರಗಿ ಬೆಂದಂತಹ ಅಂಬಟೆಯೊಳಗೆ ಬೆಲ್ಲದ ಸಿಹಿ ಮಿಳಿತವಾಗಬೇಕು ಹಾಗೂ ಅಂಬಟೆಯ ಹುಳಿ ಬೆಲ್ಲದೊಂದಿಗೆ ಸೇರಬೇಕು.
ಮಸಾಲೆ ಏನೇನು?
7 - 8 ಒಣಮೆಣಸಿನಕಾಯಿಗಳು
3 ಚಮಚ ಉದ್ದಿನಬೇಳೆ
ಒಂದು ಚಮಚ ಜೀರಿಗೆ
5 ಚಮಚ ಎಳ್ಳು
ಹುರಿಯಿರಿ, ಕೊನೆಯಲ್ಲಿ ಒಂದು ಹಿಡಿ ಕಾಯಿತುರಿ ಹಾಕಿ ಬಾಡಿಸಿಕೊಳ್ಳಿ.
ಅರೆಯಿರಿ, ಗಂಧದಂತೆ ನಯವಾಗಿ ಬಂದಷ್ಟೂ ಚೆನ್ನ.
ಅರೆದ ಮಿಶ್ರಣವನ್ನು ಅಂಬಟೆಯ ರಸಪಾಕಕ್ಕೆ ಕೂಡಿಸಿ, ಕುದಿಸಿರಿ.
ಸಾಂಪ್ರದಾಯಿಕ ಖಾದ್ಯವಾದ ಮೆಣಸ್ಕಾಯಿಗೆ ಕೊತ್ತಂಬರಿ ಸೊಪ್ಪಿನ ಅಲಂಕರಣವೇನೂ ಬೇಕಿಲ್ಲ, ಕರಿಬೇವಿನ ಒಗ್ಗರಣೆ ನೀಡುವಲ್ಲಿಗೆ ಮೆಣಸ್ಕಾಯಿ ಆಯಿತೆಂದು ತಿಳಿಯಿರಿ.
ಅಂಬಟೆಯ ಪುಳಿಯೋಗರೆ
ಕುದಿಸಿ ಜಾಡಿಯಲ್ಲಿ ತುಂಬಿಸಿಟ್ಟಿದ್ದ ಅಂಬಟೆಯ ಮೆಣಸ್ಕಾಯಿ ದಿನ ಮೂರಾದರೂ ಮುಗಿಯದಿದ್ದಾಗ ಚಿಂತೆಗಿಟ್ಟುಕೊಂಡಿತು. ಇಂದು ಸಂಜೆ ಹೊತ್ತಿಗೆ ಚಹಾ ಜೊತೆ ಅಂಬಟೆಯ ಪುಳಿಯೋಗರೆ ಮಾಡೋಣ.
ಹೇಗೆ?
ಮಧ್ಯಾಹ್ನದೂಟಕ್ಕೆ ಮಾಡಿದಂತಹ ಅನ್ನ 2 ಸೌಟು
ಹತ್ತಾರು ನೆಲಕಡಲೆ ಬೀಜಗಳು
2 ಕರಿಬೇವಿನೆಸಳು
ಅಡುಗೆಯ ಎಣ್ಣೆ ಯಾ ತುಪ್ಪ 2 ಚಮಚ ಹಾಗೂ ಒಗ್ಗರಣೆ ಸಾಹಿತ್ಯ
ಬಾಣಲೆಯಲ್ಲಿ ಎಣ್ಣೆ ಇಟ್ಟು ನೆಲಕಡಲೆ ಹುರಿಯಿರಿ ಹಾಗೂ ಇನ್ನಿತರ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಬೀಳಲಿ. ತೆಗೆದಿಟ್ಟ ಅನ್ನ ಹಾಗೂ ಅಂಬಟೆಯ ಮೆಣಸ್ಕಾಯಿ ರಸ ಎರೆದು ಚೆನ್ನಾಗಿ ಮಿಶ್ರಗೊಳಿಸಿ, ಒಂದರೆಗಳಿಗೆ ಮುಚ್ಚಿ ಇಟ್ಟು ಸ್ಟವ್ ನಂದಿಸಿ.
ಸಂಜೆಯ ಚಹಾದೊಂದಿಗೆ ಪುಳಿಯೋಗರೆ ತಟ್ಟೆಗೆ ಹಾಕಿಕೊಂಡು ತಿನ್ನಿರಿ. ಮೂಲತಃ ಪುಳಿಯೋಗರೆ ಹಾಗೂ ಮೆಣಸ್ಕಾಯಿ ಮಸಾಲೆಗಳು ಒಂದೇ ಆಗಿರುವುದರಿಂದ ಅಂಬಟೆಯ ಈ ರಸಪಾಕವನ್ನು ಜಾಡಿಯಲ್ಲಿ ತುಂಬಿಸಿಟ್ಟು ಹದಿನೈದು ದಿನ ಉಪಯೋಗಿಸುವುದಕ್ಕೂ ಅಡ್ಡಿಯಿಲ್ಲ ಎಂದೂ ತಿಳಿದಿರಲಿ.