ಮೇಲುಕೋಟೆಯ ದಾರಿಯಾಗಿ ನಮ್ಮ ವಾಹನ ಚಲಿಸಿತು. ನಮಗೆ ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮಗಳೂ ಲಭ್ಯವಿದ್ದವು. ಹೇಗಿದ್ದರೂ ರಾತ್ರಿಯೊಳಗಾಗಿ ತಂಗಿಯ ಮನೆಯೊಳಗಿರಬೇಕು ಎಂದೇ ನನ್ನ ಉದ್ಧೇಶವಾಗಿತ್ತು. " ಹಕ್ಕಿಗಳನ್ನು ಇನ್ನೊಮ್ಮೆ ನೋಡೋಣ ಗಿರೀ... ಈಗ ಸೀದಾ ಕಾರು ಮುಂದೆ ಹೋಗಲಿ " ಪುಸಲಾಯಿಸದೆ ವಿಧಿಯಿಲ್ಲ. ಸಸ್ಯ ಸಮೃದ್ಧವಾಗಿರುವ ನಮ್ಮ ಅಡಿಕೆ ತೋಟದಲ್ಲಿ ಕಾಗೆ, ಕೋಗಿಲೆಯಾದಿಯಾಗಿ ನವಿಲುಗಳೂ ಸೂಕ್ಷ್ಮ ದೃಷ್ಟಿ ಇರುವವರಿಗೆ ವೀಕ್ಷಣೆಗೆ ಲಭ್ಯವಿರುವಾಗ ಬೇರೆ ಪಕ್ಷಿಧಾಮ ಬೇಕೇ...
ಮೇಲುಕೋಟೆಗೆ ಮಂಡ್ಯ ದಾರಿಯಲ್ಲಿ ಹೋಗಬೇಕು. ದಾರಿಯುದ್ದಕ್ಕೂ ಕಬ್ಬಿನ ಗದ್ದೆಗಳು. ಕಣ್ತುಂಬ ಹಸಿರು, ಆಗಾಗ ತೂಕಡಿಸುತ್ತಾ ನನ್ನ ದೃಶ್ಯವೀಕ್ಷಣೆ. ಎಲ್ಲೋ ಒಂದು ಕಡೆ ಹೋಟಲ್ ಚಹಾ ತಿಂಡಿ ಹೊಟ್ಟೆಗೆ ಬಿತ್ತು. ಡ್ರೈವಿಂಗ್ ಮಾಡುತ್ತಾ ಗಿರೀಶನ ಚಟಾಕಿಗಳು ಉಲ್ಲಾಸವನ್ನೂ ತರುತ್ತಿತ್ತು. ಅವನ ಶಬ್ದ ಭಂಡಾರ ಅಷ್ಟಿದೆ, ತೂಕಡಿಸುತ್ತಿದ್ದವಳಿಗೆ ಅದ್ಯಾವುದೂ ಈಗ ನೆನಪಿಲ್ಲವಾಗಿದೆ. ಮೇಲುಕೋಟೆ ಬಂದೇ ಬಿಟ್ಟಿತು ನೋಡಿ, ಈ ಬೆಟ್ಟವನ್ನು ಗಿರೀಶ್ ಜೊತೆ ನೋಡಿ ಬರೋಣ. ಅತಿ ಎತ್ತರದ ಗಿರಿಧಾಮ ಸೌಂದರ್ಯದ ತಾಣ, ಇಲ್ಲಿ ಎಂತಹ ಅರಸಿಕನೂ ಕಲಾವಿಹಾರಿಯಾಗಬಲ್ಲ.
" ಇಂತಹ ಜಾಗದಲ್ಲಿ ಫೊಟೋ ತೆಗೀವಾಗ ಬೆರ್ಚಪ್ಪನ ಥರ ನಿಲ್ಲೂದಲ್ಲ, ಹೀಗೆ ಅಭಿನಯ, ಹಾವಭಾವ ಕೊಡಲೂ ತಿಳಿದಿರಬೇಕು " ಅಂದರು ಎಚ್.ಟಿ. ಭಟ್.
" ಆಗಲಿ ಗುರುಗಳೇ " ಅಂದ ಗಿರಿ.
ಕಾರಿನಲ್ಲಿ ಹಾಯಾಗಿ ಕಾಲು ನೀಡಿ ಮಲಗಿ ನಿದ್ರಿಸುತ್ತಿದ್ದ ನನ್ನನ್ನು ಗಿರೀಶ್ ಎಬ್ಬಿಸಿದ. " ಇಲ್ಲೇ ಹತ್ತಿರ ಇನ್ನೋಂದು ಗುಡಿ ಇದೆ, ಹೆಚ್ಚು ನಡೆಯಲಿಕ್ಕಿಲ್ಲ, ಹತ್ತಲಿಕ್ಕೂ ಇಲ್ಲ " ಕಾರೊಳಗೇ ಕೂತಿದ್ದು ಸಾಕಾಗಿತ್ತು. ಎದ್ದು ಹೊರಟೆ, ಚೆಲುವರಾಯನ ಗುಡಿಗೆ, ಮುಸ್ಸಂಜೆಯಾಗಿತ್ತು, ಗುಡಿಯ ಬಾಗಿಲು ತೆರೆದಿರಲಿಲ್ಲ. ಸುಮಾರು ಏಳೂವರೆ ಗಂಟೆ ಹೊತ್ತಿಗೆ ಬಾಗಿಲು ತೆರೆಯಿತು. ನಗಾರಿ, ವಾದ್ಯಘೋಷ, ದೊಂದಿಯ ಬೆಳಕು ಇತ್ಯಾದಿಗಳ ದೇವರ ಸೇವೆ ಆದ ಮೇಲೆ ಭಕ್ತಾದಿಗಳಿಗೆ ಒಳ ಪ್ರವೇಶ. ಅಷ್ಟು ಚಿಕ್ಕ ಗ್ರಾಮದಲ್ಲೂ ತುಂಬಾನೇ ಜನ ಸಮೂಹ ಇದ್ದಿತು. ಶಿಲಾಮಯ ದೇಗುಲದ ಒಳಗೆ ಆಕರ್ಷಕ ಕೆತ್ತನೆ ಕೆಲಸ, ರಾತ್ರಿಯಾಗಿದ್ದುದರಿಂದ ಹೆಚ್ಚಿನ ರಸಾಸ್ವಾದನೆ ಸಾಧ್ಯವಾಗಲಿಲ್ಲ. ಒಳಾಂಗಣದಲ್ಲಿ ಸ್ವಲ್ಪ ಹೊತ್ತು ಕೂತಿದ್ದು, ದೇವರ ಸೇವಾ ಪ್ರಸಾದವನ್ನೂ ಚೀಲಕ್ಕೇರಿಸಿ ಹೊರಟೆವು.
ಗುಡಿ ಗೋಪುರಗಳಿದ್ದಲ್ಲಿ ಭರ್ಜರಿ ಸಂತೇ ಮಾರಾಟ, ಮೇಲುಕೋಟೆ ಬಿಡುವಾಗ ಗಂಟೆ ಒಂಭತ್ತು ದಾಟಿತ್ತು. ತಳ್ಳುಗಾಡಿಯಲ್ಲಿ ಪುಳಿಯೋಗರೆ ಎದುರಾಯಿತು. ಪುಳಿಯೋಗರೆಗೆ ಮೈಸೂರು ಹೆಸರುವಾಸಿ.
" ಇಲ್ಲಿ ತಿಂದು ನೋಡ್ಬಿಟ್ಟು ಮನೆಗೆ ಹೋದ ಮೇಲೆ ಮಾಡಬಹುದು " ಅಂದೆ.
" ಕರೆಕ್ಟ್, ಬೇಕಿದ್ರೆ ಬ್ಲಾಗ್ ಬರೆಯಬಹುದು " ಇದು ಗಿರೀಶ್ ನುಡಿ.
ಒಂದು ತಟ್ಟೆಯನ್ನು ನಾಲ್ವರೂ ಹಂಚಿ ತಿಂದೆವು. ಖಾರದ ಕೊಳ್ಳಿಯಂತಿದ್ದ ಪುಳಿಯೋಗರೆ ತಿಂದ ನಂತರ ಗಾಡಿಯ ಹುಡುಗನೇ ಕುಡಿಯಲು ನೀರು ಕೊಟ್ಟ. " ನೋಡಪ್ಪಾ ನಿನ್ನ ಪುಳಿಯೋಗರೆಗೆ ಇನ್ನೂ ಹುಳಿ, ಬೆಲ್ಲ ಹಾಕ್ಬೇಕಾಗಿತ್ತು " ಅಂದೆ. ಪುಳಿಯೋಗರೆ ಹುಡಿಯನ್ನೂ ನಾನು ಹಾಗೂ ಶೀಲಾ ಒಂದೊಂದು ಪ್ಯಾಕ್ ಖರೀದಿಸಿದೆವು.
ನಾವೂ ಪುಳಿಯೋಗರೆ ಮಾಡೋಣ,
ಅವಶ್ಯವಿರುವಷ್ಟು ಅನ್ನ, ಉದುರುದುರಾಗಿರಲಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು, ಸಾಸಿವೆ ಸಿಡಿದ ನಂತರ ಉಪ್ಪು, ಹುಳಿ, ಬೆಲ್ಲ ಮಿಶ್ರಣದ ದ್ರಾವಣವನ್ನು ಎರೆದು ಕುದಿಸಿ. ರುಚಿಗೆ ಬೇಕಾದಷ್ಟೇ ಪುಳಿಯೋಗರೆ ಹುಡಿ ಸೇರಿಸಿ, ಅನ್ನವನ್ನೂ ಹಾಕಿ ಮಿಶ್ರ ಮಾಡಿ, ಸ್ವಲ್ಪ ಹೊತ್ತು ಒಲೆಯಲ್ಲಿ ಮುಚ್ಚಿಟ್ಟಿರಿ. ಬಿಸಿ ಬಿಸಿಯಾಗಿ ತೆಗೆದಿಟ್ಟು ತಿನ್ನಿ. ನಾವು ಖರೀದಿಸಿದ ಪುಳಿಯೋಗರೆ ಪ್ಯಾಕ್ ನಲ್ಲಿ ಒಗ್ಗರಣೆ ಕೂಡಾ ಇದ್ದಿತು, ಅನ್ನಕ್ಕೆ ಹಾಗೇ ಕಲಸಿ ತಿಂದರಾಯಿತು.
ಅಂತೂ ಪುಳಿಯೋಗರೆ ಮುಂದೆ ತಂಗಿ ಮನೆಯಲ್ಲೂ ಸಿಕ್ಕಿತು. ನಮ್ಮ ಊರಿನ ಔತಣಕೂಟಗಳಲ್ಲೂ ಕೆಲವೊಮ್ಮೆ ಪುಳಿಯೋಗರೆ ಬರುವುದಿದೆ. ತಾಜಾ ಪುಳಿಯೋಗರೆ ಹೇಗಿರುತ್ತದೆ ಎಂದು ಈ ಪ್ರವಾಸ ನಿಮಿತ್ತದಿಂದ ತಿಳಿಯುವಂತಾಯಿತು.
ಮನೆಯಲ್ಲಿ ಪುಳಿಯೋಗರೆ ಹುಡಿ ತಯಾರಿ ಹೇಗೆ ?
ಉಪ್ಪು, ಬೆಲ್ಲ, ಹುಳಿಗಳ ದ್ರಾವಣ ಮಾಡಿಕೊಳ್ಳುವುದು ಮೊದಲನೇ ಸಿದ್ಧತೆ.
ಮಸಾಲೆಗೆ ಬೇಕಾಗಿರುವ ಸಾಮಗ್ರಿ:
ಒಣಮೆಣಸು 3-4
ಕಾಳುಮೆಣಸು 4-6 ಕಾಳು
ಎಳ್ಳು 2 ಚಮಚ
ಕೊತ್ತಂಬ್ರಿ 3 ಚಮಚ
ಕಡ್ಲೇಬೇಳೆ 2 ಚಮಚ
ಒಣಕೊಬ್ಬರಿ ತುರಿ 3 ಚಮಚ
ಈ ಮಸಾಲೆಗಳನ್ನು ಹುರಿದು, ಕೊಬ್ಬರಿತುರಿಯೊಂದಿಗೆ ಹುಡಿ ಮಾಡಿ.
ಒಗ್ಗರಣೆಗೆ ನೆಲಕಡಲೆ ಹಾಗೂ ಬೇವಿನಸೊಪ್ಪು ಅವಶ್ಯ.
ಎಣ್ಣೆಯೂ ಅಷ್ಟೇ, ತೆಂಗಿನೆಣ್ಣೆ ಬೇಡ, ಕಡ್ಲೇಕಾಯಿ ಎಣ್ಣೆ ಬಳಸಿ, ರಿಫೈನ್ಡ್ ಎಣ್ಣೆಯೂ ಆದೀತು.
ಒಗ್ಗರಣೆಗಿಟ್ಟು, ಸಾಸಿವೆ ಸಿಡಿದಾಗ ಬೆಲ್ಲ, ಹುಳಿ, ಉಪ್ಪುಗಳ ದ್ರಾವಣ ಹಾಕಿ ಕುದಿಸಿ. ಮಸಾಲೆ ಹುಡಿಯನ್ನೂ ಸೇರಿಸಿ ಒಂದು ಮುದ್ದೆಗೆ ಬರುವ ತನಕ ಒಲೆಯ ಮೇಲಿಟ್ಟಿರಿ. ಆರಿದ ನಂತರ ಒಣ ಜಾಡಿಯಲ್ಲಿ ತುಂಬಿಸಿ. ಬೇಕಾದಾಗ ತುಪ್ಪ ಬೆರೆಸಿದ ಅನ್ನದೊಂದಿಗೆ, ಒತ್ತುಶಾವಿಗೆಯೊಂದಿಗೆ, ಅವಲಕ್ಕಿಯೊಂದಿಗೆ ಕಲಸಿ ತಿನ್ನಿ.
ಮನೆಯಲ್ಲಿ ಕುಚ್ಚುಲಕ್ಕಿ ಅನ್ನವನ್ನೇ ತಿನ್ನುವ ದಕ್ಷಿಣ ಕನ್ನಡಿಗರು ಹಾಗೂ ಕೇರಳೀಯರು ಅನ್ನದಿಂದ ಮಾಡುವ ತಿನಿಸುಗಳಾದ ಪುಳಿಯೋಗರೆ, ಚಿತ್ರಾನ್ನ, ಪುಲಾವ್ ಇತ್ಯಾದಿಗಳನ್ನು ಇಷ್ಟ ಪಡುವುದೇ ಇಲ್ಲ, ಮಾಡುವುದಿದ್ದರೂ ಔತಣಕೂಟಗಳಲ್ಲಿ ಸಹತಿನಿಸಾಗಿ ಮಾತ್ರ ತಯಾರಿಸುವ ರೂಢಿ.
- ಮುಂದುವರಿಯಲಿದೆ.
Posted via DraftCraft app
0 comments:
Post a Comment